Posted by vidyamaana on 2024-07-03 11:16:18 |
ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.
ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.
Posted by Vidyamaana on 2023-06-17 08:05:29 |
ಬೆಳಗಾವಿ: ಕಾರು ಮತ್ತು ಕಂಟೇನರ್ಗಳ ಮಧ್ಯೆ ಭೀಕರ ಸರಣಿ ಅಪಘಾತದಲ್ಲಿಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗೆ ಗಂಭೀರ ಗಾಯಗಳಾಗಿವೆ. ಮೃತರಿಬ್ಬರೂ ಸ್ವಾಮೀಜಿಗಳ ಸೇವಕರಾಗಿದ್ದಾರೆ.
ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಮೀಜಿಗಳ ಕಾರು, ಕಂಟೇನರ್ ಮತ್ತು ಇತರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ. ಬೆಳಗಾವಿ ತಾಲೂಕಿನ ಶಿವಾಪುರ ಗ್ರಾಮದ ಮುಪ್ಪಿನ ಕಾಡಸಿದ್ದೇಶ್ವರ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ತಮ್ಮ ಸಹಾಯಕರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅಪಘಾತದಿಂದ ಕಾರಿನಲ್ಲಿದ್ದ ಇಬ್ಬರು ತೀವ್ರ ಗಾಯಗಳೊಂದಿಗೆ ಪ್ರಾಣ ಕಳೆದುಕೊಂಡರು.
ಕೂಡಲೇ ಸ್ವಾಮೀಜಿ ಅವರನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಐಸಿಯುದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಕಾಕತಿ ಠಾಣೆ ಪೊಲೀಸರು ಭೇಟಿ ನೀಡಿ ಕಾಡಸಿದ್ಧೇಶ್ವರ ಸ್ವಾಮೀಜಿ ಅವರನ್ನು ಕರೆದೊಯ್ಯುವ ಕೆಲಸವನ್ನು ತ್ವರಿತಗೊಳಿಸಿದರು.
ಸ್ವಾಮೀಜಿಯವರ ಸೇವಕರಿಬ್ಬರ ಮೃತದೇಹಗಳನ್ನು ಬೀಮ್ಸ್ನ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಮೃತ ಸೇವಕರ ಹೆಸರು ಇನ್ನೂ ತಿಳಿದುಬಂದಿಲ್ಲ.
ಪ್ರತಿಭಟನೆಯಲ್ಲಿ ಭಾಗವಹಿಸಲು ಹೋಗುತ್ತಿದ್ದರು
ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಬೆಳಗಾವಿಯಲ್ಲಿ ಆಯೋಜನೆಗೊಂಡಿದ್ದ ಮತಾಂತರ ನಿಷೇಧ ಕಾಯ್ದೆ ರದ್ದು ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದರು. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಶ್ರಯದಲ್ಲಿ ಪ್ರತಿಭಟನೆ ಆಯೋಜನೆಯಾಗಿದೆ.
Posted by Vidyamaana on 2024-01-14 16:09:48 |
ಬೆಂಗಳೂರು :- ತಮ್ಮ ರಾಸಲೀಲೆ ಕಂಡ ಪತಿಯನ್ನು ರುಬ್ಬುವ ಕಲ್ಲು ಎತ್ತಿ ಹಾಕಿ ಹತ್ಯೆಗೈದು, ಬಳಿಕ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎಂದು ಕಥೆ ಸೃಷ್ಟಿಸಿದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರಿಂದ ಬಂಧಿಸಿದ್ದಾರೆ.ಎಚ್ಎಸ್ಆರ್ ಲೇಔಟ್ 2ನೇ ಸೆಕ್ಟರ್ನ ನಂದಿನಿ ಬಾಯಿ (22) ಮತ್ತು ಆಕೆಯ ಪ್ರಿಯಕರ ನಿತೀಶ್ ಕುಮಾರ್ (22) ಬಂಧಿತರು. ಆರೋಪಿಗಳು ಜ.9ರಂದು ರಾತ್ರಿ ವೆಂಕಟರಮಣ ನಾಯಕ್ (30) ಎಂಬಾತನ ಮೇಲೆ ರುಬ್ಬುವ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದರು. ಈ ಸಂಬಂಧ ಮೃತನ ತಂದೆ ಲಕ್ಷ್ಮೀ ನಾಯಕ್ ಎಂಬುವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮದುವೆಯ ಆರಂಭದಲ್ಲಿ ದಂಪತಿ ಅನೋನ್ಯವಾಗಿದ್ದರು. ಆ ಬಳಿಕ ಪತ್ನಿ ನಂದಿನಿ ಸಣ್ಣ-ಪುಟ್ಟ ವಿಚಾರಗಳಿಗೆ ಜಗಳ ತೆಗೆದು ತವರು ಮನೆಗೆ ಹೋಗುತ್ತಿದ್ದಳು. ಅಲ್ಲದೆ, ತನ್ನ ಮೂರು ವರ್ಷದ ಮಗಳನ್ನು ತನ್ನ ತವರು ಮನೆಯಲ್ಲೇ ಬಿಟ್ಟಿದ್ದಳು. ಈ ಮಧ್ಯೆ ತನ್ನ ವಿದ್ಯಾರ್ಥಿ ಜೀವನದ ಗೆಳೆಯನ ಜತೆ ಮೊಬೈಲ್ ನಲ್ಲಿ ಹೆಚ್ಚು ಮಾತನಾಡುತ್ತಿದ್ದಳು. ಈ ವಿಚಾರ ತಿಳಿದ ಪತಿ ವೆಂಕಟರಮಣ ಪತ್ನಿ ಜತೆ ಜಗಳ ಮಾಡಿದ್ದ.ಬಳಿಕ ಇಬ್ಬರ ಕುಟುಂಬದ ಹಿರಿಯರು ರಾಜೀಸಂಧಾನ ಮಾಡಿದ್ದರು ಎಂಬುದು ಗೊತ್ತಾಗಿದೆ.
ಪತಿ ಹಾಗೂ ಹಿರಿಯರು ಎಚ್ಚರಿಕೆ ನೀಡಿದರೂ ನಂದಿನಿ, ಪ್ರಿಯಕರ ಜತೆಗಿನ ಮಾತುಕತೆ ಮುಂದುವರಿಸಿದ್ದಳು. ಅಲ್ಲದೆ, ಬೆಂಗಳೂರಿಗೆ ಕರೆಸಿಕೊಂಡು ದೈಹಿಕ ಸಂಪರ್ಕ ಬೆಳೆಸುತ್ತಿದ್ದಳು. ಜ.9ರಂದು ರಾತ್ರಿ 8ರ ಸುಮಾರಿಗೆ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ರಾಸಲೀಲೆಯಲ್ಲಿ ತೊಡಗಿದ್ದಾಳೆ. ಅದೇ ವೇಳೆ ಪತಿ ವೆಂಕಟರಮಣ ಮನೆಗೆ ಬಂದಿದ್ದು, ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ ಮೂವರ ನಡುವೆ ಜೋರು ಜಗಳವಾಗಿದೆ. ಮದ್ಯ ಸೇವಿಸಿ ಬಂದಿದ್ದ ವೆಂಕಟರಮಣನ ಮೇಲೆ ನಿತೀಶ್ ಕುಮಾರ್ ಹಲ್ಲೆ ನಡೆಸಿ, ಕೆಳಗೆ ಬಿದ್ದಾಗ ಆತನ ತಲೆಗೆ ರುಬ್ಬುವ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಇಬ್ಬರು ಸೆಕ್ಯೂರಿಟಿ ಗಾರ್ಡ್ ಕೊಠಡಿಯ ಬಳಿಯ ಶೌಚಾಲಯಕ್ಕೆ ಎಳೆದೊಯ್ದು ಮಲಗಿಸಿದ್ದಾರೆ.ಆರೋಪಿ ನಿತೀಶ್ ಕುಮಾರ್ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ಆ ನಂತರ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿದ ನಂದಿನಿ, ಪತಿ ಶೌಚಾಲಯದಲ್ಲಿ ಕಾರು ಜಾರಿ ಬಿದ್ದಿದ್ದಾರೆ ಎಂದು ಕರೆ ಮಾಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರಿಗೆ, ವೆಂಕಟರಮಣನ ಮೃತದೇಹ ಗಮನಿಸಿದಾಗ ಬಿದ್ದು ಮೃತಪಟ್ಟಿರಲು ಸಾಧ್ಯವಿಲ್ಲ. ಯಾರೋ ಹಲ್ಲೆ ನಡೆಸಿಯೇ ಮೃತಪಟ್ಟಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು.
Posted by Vidyamaana on 2023-12-04 07:35:24 |
ಪುತ್ತೂರು: ಕಲ್ಲೇಗ ಟೈಗರ್ಸ್ ಮುಖ್ಯಸ್ಥರಾಗಿದ್ದ ಅಕ್ಷಯ್ ಕಲ್ಲೇಗ ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆ ಡಿಸೆಂಬರ್ 4ರಂದು ಅವರ ಕಲ್ಲೇಗ ಮನೆಯಲ್ಲಿ ನಡೆಯಲಿದೆ.
ಕಲ್ಲೇಗದ ಚಂದ್ರಶೇಖರ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರನಾಗಿ 1997ರ ಜುಲೈ 1ರಂದು ಜನಿಸಿದ ಅಕ್ಷಯ್ ಕಲ್ಲೇಗ ಅವರು
2018ರಲ್ಲಿ ಕಲ್ಲೇಗ ಟೈಗರ್ಸ್ ತಂಡ ಸ್ಥಾಪಿಸಿದ್ದರು. ಮೊದಲಿಗೆ 15 ಹುಲಿಗಳನ್ನು ಕುಣಿಸುವ ಮೂಲಕ ಆರಂಭಗೊಂಡ ಕಲ್ಲೇಗ ಟೈಗರ್ಸ್ ತಂಡ 2023ರಲ್ಲಿ 6ನೇ ವರ್ಷದ ಪ್ರದರ್ಶನದ ವೇಳೆ 89 ಹುಲಿಗಳ ಪ್ರದರ್ಶನ ನೀಡಿ ಪುತ್ತೂರಿನಲ್ಲಿ ಹುಲಿವೇಷದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತ್ತು.
ಪುತ್ತೂರಿನ 2ನೇ ಅತೀ ದೊಡ್ಡ ಜಾತ್ರೆ ಎಂದು ಪ್ರಸಿದ್ದಿ ಪಡೆದ ಕಲ್ಲೇಗ ಕಲ್ಕುಡ ದೈವಸ್ಥಾನದ 2022ರ ವಾರ್ಷಿಕ ನೇಮೋತ್ಸವದ ಅಂಗವಾಗಿ ಟೀಮ್ ಕಲ್ಲೇಗ ಟೈಗರ್ಸ್ ಇದರ 4ನೇ ವರ್ಷದ ಪ್ರಯುಕ್ತ ಅಕ್ಷಯ್ ಕಲ್ಲೇಗ ನೇತೃತ್ವದಲ್ಲಿ ಕಲ್ಕುಡ ದೈವಕ್ಕೆ ಸುಮಾರು 2.5 ಲಕ್ಷ ರೂ ಮೌಲ್ಯದ ಬೆಳ್ಳಿಯ ‘ಜಕ್ಕೆಲಣಿ’ ಸಮರ್ಪಣೆ ಮಾಡಲಾಗಿತ್ತು. 2023ರಲ್ಲಿ ಕಲ್ಲೇಗ ಟೈಗರ್ಸ್ ಇದರ 5ನೇ ವರ್ಷದ ಅಂಗವಾಗಿ ಕಲ್ಲುರ್ಟಿ ದೈವಕ್ಕೆ 1.5 ಲಕ್ಷ ರೂ ಮೌಲ್ಯದ ಬೆಳ್ಳಿಯ ‘ಕದ್ರಿಮುಡಿ’ ಸಮರ್ಪಿಸಲಾಗಿತ್ತು.
2023ರಲ್ಲಿ ಟೀಮ್ ಕಲ್ಲೇಗ ಟೈಗರ್ಸ್ ಇದರ 5ನೇ ವರ್ಷದ ಅಂಗವಾಗಿ ಪುತ್ತೂರಿನ ನೆಹರೂನಗರ ಮುಖ್ಯರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಉಪಯೋಗವಾಗಬೇಕು ಎಂಬ ಉದ್ದೇಶದಿಂದ “PURIFIED WATER TANK” ನ್ನು ಕೊಡುಗೆಯಾಗಿ ನೀಡಲಾಗಿತ್ತು. ಇದಲ್ಲದೆ ಹಲವರಿಗೆ ಅಕ್ಷಯ್ ಕಲ್ಲೇಗ ನೇತೃತ್ವದಲ್ಲಿ ರಕ್ತದಾನ, ಅಪಘಾತಗಳಾದಾಗ ಆಸ್ಪತ್ರೆಗೆ ದಾಖಲಿಸುವ ಮಾನವೀಯತೆಯ ಕಾರ್ಯ ಮಾಡಲಾಗಿತ್ತು. 2022 ಹಾಗೂ 2023ರ ದಸರಾ ಸಮಯದಲ್ಲಿ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ನಡೆದ “ಪಿಲಿಪರ್ಬ” ಸ್ಪರ್ಧೆಯಲ್ಲಿ ಭಾಗವಹಿಸಿದ್ದಲ್ಲದೆ ಪುತ್ತೂರಿನಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ನೇತೃತ್ವದಲ್ಲಿ ನಡೆದ “ಪಿಲಿ ರಂಗ್” ಸ್ಪರ್ಧೆಯಲ್ಲಿ 2022ರಲ್ಲಿ ದ್ವಿತೀಯ ಮತ್ತು 2023ರಲ್ಲಿ ಕಲ್ಲೇಗ ಟೈಗರ್ಸ್ ತೃತೀಯ ಸ್ಥಾನ ಪಡೆದಿತ್ತು.
ಈ ವರ್ಷ ಮೊದಲ ಬಾರಿಗೆ ಸಹಜ್ ರೈ ನೇತೃತ್ವದಲ್ಲಿ ಪುತ್ತೂರಿನಲ್ಲಿ ನಡೆದ “ಪುತ್ತೂರ್ದ ಪಿಲಿಗೊಬ್ಬು” ಸ್ಪರ್ಧೆಯಲ್ಲಿ 3ನೇ ಸ್ಥಾನವನ್ನು ಕಲ್ಲೇಗ ಟೈಗರ್ಸ್ ಪಡೆದಿತ್ತು. ಹಲವು ಯುವಕರನ್ನು ಸಂಘಟಿಸಿ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿ ಮನೆ ಮಾತಾಗಿದ್ದ ಅಕ್ಷಯ್ ಕಲ್ಲೇಗ ಅವರ ಚಿಂತನೆಯಂತೆ ಇನ್ನೂ ಹಲವಾರು ಜನಪರ ಕಾರ್ಯಗಳನ್ನು ನಡೆಸಲಾಗುವುದು ಎಂದು ಟೀಮ್ ಕಲ್ಲೇಗ ಟೈಗರ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದು, ಡಿ.4 ರಂದು ಅಕ್ಷಯ್ ಅವರ ಕಲ್ಲೇಗ ಮನೆಯಲ್ಲಿ ನಡೆಯುವ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದೆ.
Posted by Vidyamaana on 2023-05-23 11:53:32 |
ಪುತ್ತೂರು : ಪೊಲೀಸ್ ದೌರ್ಜನ್ಯ ಸಂದರ್ಭ ಕಿವಿಯ ತಮಟೆಗೆ ತೀವ್ರ ಹಾನಿಯಾಗಿದೆ ಎಂಬ ವರದಿ ಹೊರಗಿದ್ದಿದೆ. ಈ ಬಗ್ಗೆ ಸ್ಕ್ಯಾನಿಂಗ್ ಪೋಟೋಗಳು ವೈರಲ್ ಆಗುತ್ತಿವೆ. ವರದಿ ಹೊರ ಬರುತಿದ್ದಂತೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಎಸ್ಪಿಯನ್ನು ಭೇಟಿಯಾಗಿದ್ದಾರೆ.
ಬಿಜೆಪಿ ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಚಪ್ಪಲಿ ಹಾರ ಹಾಕಿ ಶ್ರದ್ಧಾಂಜಲಿ ಬ್ಯಾನರ್ ಹಾಕಿದ್ದಾರೆ ಎಂದು ಒಟ್ಟು 11 ಜನರನ್ನು ಬಂಧಿಸಿ ಪೊಲೀಸರು ದೌರ್ಜನ್ಯ ನಡೆಸಿದರು ಎಂದು ವ್ಯಾಪಕ ಪ್ರಚಾರ ಪಡೆದುಕೊಂಡ ಪ್ರಕರಣ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಲಕ್ಷಣ ಕಾಣುತ್ತಿದೆ.
ಡಿವೈಎಸ್ಪಿ ಗೆ ಒತ್ತಡ ಹಾಕಿಸಿ ಬಿಜೆಪಿಯ ಕಾರ್ಯಕರ್ತರ ಮೇಲೆಯೇ ಡಿವೈಎಸ್ಪಿ ಕಚೇರಿಯಲ್ಲೇ ತೀವ್ರ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತು.
ಮೇ.15 ರ ಮಧ್ಯರಾತ್ರಿ ಅರುಣ್ ಪುತ್ತಿಲ ಡಿವೈಎಸ್ಪಿ ಕಚೇರಿಗೆ ಹೋಗಿ ಹಲ್ಲೆಗೊಳಗಾದವರ ಮುಚ್ಚಲಿಕೆ ಬರೆದು ಬಿಡುಗಡೆಗೊಳಿಸಿಕೊಂಡು ಬಂದಿದ್ದರು. ನಂತರ ಹಲ್ಲೆಗೊಳಗಾದವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಮತ್ತೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಪುತ್ತೂರಿನ ಡಿವೈಎಸ್ಪಿ, ಸಂಪ್ಯ ಎಸ್ಐ , ಪುತ್ತೂರಿನ ಪೊಲೀಸ್ ಕಾನ್ಸ್ಟೆಬಲ್ ರ ಮೇಲೆ ಪ್ರಕರಣ ದಾಖಲು ನಡೆಸಿ, ಎಸ್ಐ ಮತ್ತು ಪಿಸಿಯನ್ನು ಅಮಾನತು ಮಾಡಿ, ಡಿವೈಎಸ್ಪಿಯನ್ನು ರಜೆಯಲ್ಲಿ ಕಳುಹಿಸಲಾಗಿದೆ.
ತೀವ್ರ ಗಾಯಗೊಂಡ ಅವಿನಾಶ್ ರ ಕಿವಿ ನೋವು ಕಡಿಮೆಯಾಗದ ಕಾರಣ ಕಿವಿಯ ಸ್ಕ್ಯಾನಿಂಗ್ ಮಾಡಿದಾಗ ತಮಟೆ ಹರಿದ ಬಗ್ಗೆ ವೈದ್ಯಕೀಯ ವರದಿಯಲ್ಲಿ ಹೊರ ಬಂದಿದೆ. ಕೂಡಲೇ ದಕ್ಷಿಣ ಕನ್ನಡ ಎಸ್ಪಿ ವಿಕ್ರಂ ಅಮಾಟೆಯನ್ನು ಭೇಟಿಯಾದ ಅರುಣ್ ಕುಮಾರ್ ಪುತ್ತಿಲ ಎರಡು ದಿನದಲ್ಲಿ ಡಿವೈಎಸ್ಪಿಯನ್ನು ಅಮಾನತು ಮಾಡಬೇಕು ಮತ್ತು ಸಂತ್ರಸ್ತರಿಗೆ 5 ಲಕ್ಷದಂತೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕ್ರಮ ಆಗದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
Posted by Vidyamaana on 2024-06-03 19:17:55 |
ಮಂಡ್ಯ : (ಜೂ.03): ಪ್ರಸ್ತುತ ದಿನಗಳಲ್ಲಿ ನಾವು ಕಾಣುತ್ತಿರುವುದು ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್. ಯಾರು, ಯಾವಾಗ, ಯಾರ ಜೊತೆ ಹೋಗುತ್ತಾರೆ ಎನ್ನುವುದೇ ಅರ್ಥವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸೂಚ್ಯವಾಗಿ ಹೇಳಿದರು. ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಕರ್ನಾಟಕ ಸಂಘ, ಇಂಡುವಾಳು ಎಚ್.ಹೊನ್ನಯ್ಯ ಕುಟುಂಬ ವರ್ಗದ ಸಹಯೋಗದಲ್ಲಿ ಆಯೋಜಿಸಿದ್ದ ಇಂಡುವಾಳು ಎಚ್.ಹೊನ್ನಪ್ಪ ಅವರನ್ನು ಕುರಿತ ನೆಲದ ಕಣ್ಣು ಕೃತಿ ಬಿಡುಗಡೆ ಹಾಗೂ ಎಚ್.ಹೊನ್ನಪ್ಪ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಹೊಂದಾಣಿಕೆ ರಾಜಕಾರಣ ಒಮ್ಮೊಮ್ಮೆ ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಸುವುದು ಸಹಜ. ಕೆಲವೊಮ್ಮೆ ಅನಿವಾರ್ಯವೂ ಆಗುತ್ತದೆ. ಅದರೊಂದಿಗೆ ಹೊಂದಿಕೊಂಡು ರಾಜಕಾರಣ ಮುನ್ನಡೆಸುವುದು ಸುಲಭವೂ ಅಲ್ಲ ಎಂದು ಹೇಳಿದರು. ರಾಜಕಾರಣಿಗಳಿಗೆ ಪ್ರಶಂಸೆಯನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರಬೇಕು. ಪ್ರಶಂಸೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅಹಂಕಾರ ಹೆಚ್ಚಾಗುತ್ತದೆ. ಇದರಿಂದ ಮುಂದೆ ಯಾವ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಪ್ರಶಂಸೆ, ಟೀಕೆಗಳನ್ನು ಜೀರ್ಣಿಸಿಕೊಂಡಾಗ ಆ ವ್ಯಕ್ತಿ ಸಮಾಜಕ್ಕೆ ಶಕ್ತಿಯಾಗುತ್ತಾನೆ, ಜನರ ಗೌರವಕ್ಕೆ ಪಾತ್ರರಾಗಿ ಆದರ್ಶ ವ್ಯಕ್ತಿಯಾಗಿಯೂ ರೂಪುಗೊಳ್ಳುತ್ತಾನೆ ಎಂದು ಹೇಳಿದರು.
Posted by Vidyamaana on 2024-05-19 12:02:11 |
ಬೆಳಗಾವಿ: ಚಲಿಸುತ್ತಿದ್ದ ರೈಲಿನಲ್ಲಿ ಚಾಕುವಿನಿಂದ ಇರಿದು ಒಬ್ಬ ಸಿಬ್ಬಂದಿಯನ್ನು ಕೊಲೆ ಮಾಡಿ, ನಾಲ್ವರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಪರಾರಿಯಾದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಹಲ್ಲೆಗೊಳಗಾದ ಸಿಬ್ಬಂದಿ ಆರೋಪಿಯನ್ನು ಗುರುತಿಸಿದ್ದು, ಆತನ ಮುಖದ ರೇಖಾಚಿತ್ರ ಕೂಡ ಸಿದ್ಧಪಡಿಸಲಾಗಿದೆ.
ಪುದುಚೇರಿ- ದಾದರ್ ಎಕ್ಸ್ಪ್ರೆಸ್ ರೈಲು ಗುರುವಾರ ಸಂಜೆ 4ರ ಸುಮಾರಿಗೆ ಖಾನಾಪುರ ತಾಲ್ಲೂಕಿನ ಲೋಂಡಾ ಬಳಿ ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರೈಲು ಖಾನಾಪುರ ನಿಲ್ದಾಣಕ್ಕೆ ಬಂದಾಗ ಆರೋಪಿ ಪರಾರಿಯಾದ. ಎಸ್-8 ಬೋಗಿಯಿಂದ ಇಳಿದುಹೋಗಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಖಾನಾಪುರದಿಂದ ಎಲ್ಲಿಗೆ ಪರಾರಿಯಾಗಿದ್ದಾನೆ ಎಂಬುದರ ತನಿಖೆ ನಡೆದಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.