Posted by vidyamaana on 2024-07-24 17:11:55 |
ಶಿವಮೊಗ್ಗ : ಕೆಎಸ್ಆರ್ಟಿಸಿ ಬಸ್ ಮತ್ತು ಕಾರು ಡಿಕ್ಕಿಯಾದ ಪರಿಣಾಮ ಕ್ರೈಸ್ತ ಧರ್ಮಗುರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಸಮೀಪ ಸವಳಂಗ ಚಿನ್ನಿಕಟ್ಟೆ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.ಕೆಎಸ್ಆರ್ಟಿಸಿ ಬಸ್ಸು ಹಾನಗಲ್ನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿತ್ತುಎನ್ನಲಾಗಿದೆ.
ಕ್ರೈಸ್ತ ಧರ್ಮಗುರು ಇದ್ದ ಕಾರು ಶಿವಮೊಗ್ಗ ಕಡೆಯಿಂದ ತೆರಳುತ್ತಿತ್ತು. ಚಿನ್ನಿಕಟ್ಟೆ ಬಳಿ ಕಾರು, ಬಸ್ಸು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಕಾರು ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶಿಕಾರಿಪುರ ಧರ್ಮಕೇಂದ್ರದ ಧರ್ಮಗುರು ಆಂಥೋಣಿ ಪೀಟರ್ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು ನ್ಯಾಮತಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.
Posted by Vidyamaana on 2024-01-31 15:19:04 |
ಅಮೆರಿಕ: ಅಂಗಡಿಯಲ್ಲಿ ಪಾರ್ಟ್ ಟೈಂ ಕೆಲಸ ಮಾಡಿ, ಶಿಕ್ಷಣ ಪಡೆಯುತ್ತಿದ್ದ ಭಾರತದ ವಿದ್ಯಾರ್ಥಿಯನ್ನ, ಅಮೆರಿಕದ ನಿವಾಸಿ ಕೊಂದಿರುವ ಘಟನೆ ನಡೆದಿದೆ.ಮೃತ ವಿದ್ಯಾರ್ಥಿ ವಿವೇಕ್ ಸೈನಿ(25) ಎಂದು ಗುರುತಿಸಲಾಗಿದ್ದು, ಈತ ಹರ್ಯಾಣಾದ ಪಂಚಕುಲದ ನಿವಾಸಿಯಾಗಿದ್ದ.ಅಮೆರಿಕದ ಜಾರ್ಜಿಯಾದಲ್ಲಿ, ಶಿಕ್ಷಣ ಪಡೆಯುತ್ತ, ಅಂಗಡಿಯೊಂದರಲ್ಲಿ ಪಾಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ. ಈತನನ್ನು ಕೊಂದ ವ್ಯಕ್ತಿ ಜೂಲಿಯನ್ ಫಾಕ್ನರ್ ಎಂದು ಗುರುತಿಸಲಾಗಿದ್ದು, ಈತ ಮಾದಕ ವ್ಯಸನಿಯಾಗಿದ್ದ.
ಕೆಲ ದಿನಗಳಿಂದ ವಿವೇಕ್ ಕೆಲಸ ಮಾಡುತ್ತಿದ್ದ ಅಂಗಡಿಗೆ ಬಂದು, ವಿವೇಕ್ ಜೊತೆ ಫ್ರೆಂಡ್ಲಿಯಾಗಿದ್ದ. ಅಲ್ಲದೇ, ಪ್ರತಿದಿನ ಫ್ರೀಯಾಗಿ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ಆದರೆ ಕೆಲ ದಿನಗಳ ಹಿಂದೆ ವಿವೇಕ್, ತಾನು ಇನ್ನು ಫ್ರೀಯಾಗಿ ಇದನ್ನೆಲ್ಲ ಕೊಡಲಾಗುವುದಿಲ್ಲ. ಇದುವರೆಗೆ ತೆಗೆದುಕೊಂಡು ಹೋದ ವಸ್ತುಗಳ ದುಡ್ಡನ್ನು ಹಿಂದಿರುಗಿಸು ಎಂದಿದ್ದಾನೆ.
ಈ ಕಾರಣಕ್ಕೆ ಕೋಪಗೊಂಡಿದ್ದ ಜೂಲಿಯನ್, ಸುತ್ತಿಗೆ ತಂದು, ವಿವೇಕ್ ಮೇಲೆ ಏಕಾಏಕಿ ದಾಳಿ ಮಾಡಿದ್ದಾನೆ. ಅಲ್ಲದೇ, 50 ಬಾರಿ ತಲೆಗೆ ಹೊಡೆದಿದ್ದಾನೆ. ಹೊಡೆದ ಪೆಟ್ಟಿಗೆ ವಿವೇಕ್ ಸಾವನ್ನಪ್ಪಿದ್ದಾನೆ.ಇನ್ನು ಆರೋಪಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮೃತನ ಕುಟುಂಬಸ್ಥರು, ಮೃತದೇಹವನ್ನು ಭಾರತಕ್ಕೆ ತರಿಸಿಕೊಡಿ ಎಂದು ಮನವಿ ಮಾಡಿದ್ದಾರೆ.
Posted by Vidyamaana on 2023-09-29 20:51:37 |
ಉಳ್ಳಾಲ: ಉಳ್ಳಾಲದ ಸೀಗ್ರೌಂಡ್ ಸಮುದ್ರ ತೀರದಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ಮಾರಾಟ ನಡೆಸಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನ ಉಳ್ಳಾಲ ಠಾಣಾಧಿಕಾರಿ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಮಾಸ್ತಿಕಟ್ಟೆ ಆಝಾದ್ ನಗರದ ಫಝಲ್ ಮತ್ತು ಮುಕ್ಕಚ್ಚೇರಿ ಕಡಪ್ಪರದ ಸಮೀರ್ ಬಂಧಿತರು. ಇಬ್ಬರು ಆರೋಪಿಗಳು ಉಳ್ಳಾಲ ಸೀಗ್ರೌಂಡ್ ಸಮುದ್ರ ತೀರದಲ್ಲಿ ನಿಷೇಧಿತ 14 ಗ್ರಾಂ ತೂಕದ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ದೇರಳಕಟ್ಟೆ ಯೆನಪೋಯ ಆಸ್ಪತ್ರೆ ಬಳಿಯಿಂದ ಓರ್ವ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದರು.
ಬಂಧಿತರಿಂದ 14 ಗ್ರಾಂ ಎಂಡಿಎಂಎ ,ಮೊಬೈಲ್ ಫೋನ್ ಗಳು ಸೇರಿದಂತೆ ಒಟ್ಟು ಒಂದು ಲಕ್ಷ ಹದಿನೆಂಟುವರೆ ಸಾವಿರ ಮೌಲ್ಯದ ಸೊತ್ತುಗಳನ್ನ ವಶಪಡಿಸಿ ಕೊಳ್ಳಲಾಗಿದೆ. ಉಳ್ಳಾಲ ಠಾಣಾಧಿಕಾರಿ ಹೆಚ್.ಎನ್ ಬಾಲಕೃಷ್ಣ, ಪಿಎಸ್ ಐ ಶೀತಲ್ ಹಾಗೂ ಸಿಬ್ಬಂದಿಗಳಾದ ಅಕ್ಬರ್, ಅಶೋಕ್, ಮಂಜು, ವೆಂಕಟೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Posted by Vidyamaana on 2024-02-07 10:43:01 |
ಪುತ್ತೂರು : ಅರುಣ್ ಕುಮಾರ್ ಪುತ್ತಿಲರಿಗೆ ಪಕ್ಷದ ಹುದ್ದೆ, ಜವಾಬ್ದಾರಿ ನೀಡುವ ನಿರ್ಧಾರ ಜಿಲ್ಲೆ ಮತ್ತು ರಾಜ್ಯಕ್ಕೆ ಬಿಟ್ಟಿದ್ದು, ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಯವರು ಈಗಾಗಲೇ ನಮ್ಮಲ್ಲಿ ಅಭಿಪ್ರಾಯ ಸಂಗ್ರಹಿಸಿ ಹೋಗಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ತಿಳಿಸಿದ್ದಾರೆ.
ಪುತ್ತಿಲ ಪರಿವಾರದಿಂದ ಫೆ.5 ರಂದು ನಡೆದ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ, ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸ್ಥಾನ ಕೊಡುವುದು ಸೇರಿದಂತೆ ಮೂರು ಮಹತ್ವದ ನಿರ್ಣಯ ಕೈಗೊಳ್ಳಲಾಗಿತ್ತು.
ಈ ಕುರಿತು ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಪ್ರತಿಕ್ರಿಯೆ ನೀಡಿದ್ದು, ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷಕ್ಕೆ ಸೇರ್ಪಡೆಯಾಗುವುದು ಮತ್ತು ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ಸೇರಿದಂತೆ ಯಾವುದೇ ಹುದ್ದೆ, ಜವಾಬ್ದಾರಿ ನೀಡುವ ವಿಚಾರ ನಮ್ಮ ತೀರ್ಮಾನವಲ್ಲ, ಅದು ಜಿಲ್ಲೆ ಮತ್ತು ರಾಜ್ಯದ ಪ್ರಮುಖರ ನಿರ್ಧಾರಕ್ಕೆ ಬಿಟ್ಟ ವಿಚಾರ. ಇತ್ತೀಚೆಗೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅವರು ಪುತ್ತೂರಿನಲ್ಲಿ ಬಿಜೆಪಿಯ ಕಾರ್ಯನಿರ್ವಹಣಾ ತಂಡದ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಸಂಗ್ರಹಿತ ಅಭಿಪ್ರಾಯವನ್ನು ರಾಜ್ಯಕ್ಕೆ ತಿಳಿಸಿದ್ದಾರೆ.
ಮುಂದಿನ ತೀರ್ಮಾನ ಎನಿದ್ದರೂ ಜಿಲ್ಲೆ ಮತ್ತು ರಾಜ್ಯದ ಪ್ರಮುಖರಿಗೆ ಬಿಟ್ಟ ವಿಚಾರ ಎಂದು ಅವರು ತಿಳಿಸಿದ್ದಾರೆ.
Posted by Vidyamaana on 2024-01-08 21:57:45 |
ನವದೆಹಲಿ ಜ.8: ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳನ್ನು ಅವಧಿಗೆ ಮೊದಲೇ ಬಿಡುಗಡೆಗೊಳಿಸಿದ್ದ ಗುಜರಾತ್ ಸರ್ಕಾರದ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಚುನಾವಣೆ ಹೊತ್ತಲ್ಲಿ ಕೋರ್ಟ್ ನೀಡಿರುವ ಆದೇಶ ಗುಜರಾತ್ ಸರ್ಕಾರಕ್ಕೆ ಹಿನ್ನಡೆ ಆದಂತಾಗಿದೆ.
ಗುಜರಾತ್ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಂತ್ರಸ್ತ ಮಹಿಳೆ ಬಿಲ್ಕಿಸ್ ಬಾನು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಮನವಿಯನ್ನು ಜಸ್ಟೀಸ್ ಬಿ.ವಿ.ನಾಗರತ್ನ ಮತ್ತು ಜಸ್ಟೀಸ್ ಉಜ್ಜಾಲ್ ಭುವನ್ ಅವರನ್ನೊಳಗೊಂಡ ಪೀಠ ತೀರ್ಪು ನೀಡಿದೆ. 2002ರಲ್ಲಿ ಗುಜರಾತ್ ನ ಗೋಧ್ರಾದಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿ, ಆಕೆಯ 7 ಮಂದಿ ಕುಟುಂಬ ಸದಸ್ಯರನ್ನು ಕೊಲೆಗೈದ ಪ್ರಕರಣದಲ್ಲಿ 11 ಮಂದಿ ದೋಷಿಗಳಾಗಿದ್ದು ಜೀವಾವಧಿ ಶಿಕ್ಷೆಗೆ ಒಳಗಾಗಿದ್ದರು. ಆದರೆ ಗುಜರಾತ್ ಸರ್ಕಾರ 2022ರಲ್ಲಿ 11 ಅಪರಾಧಿಗಳನ್ನು ಅವಧಿ ಪೂರ್ವ ಬಿಡುಗಡೆಗೊಳಿಸಲು ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ.
ಆ ರೀತಿಯ ಆದೇಶವನ್ನು ಜಾರಿಗೊಳಿಸುವ ಅಧಿಕಾರ ಗುಜರಾತ್ ಸರ್ಕಾರಕ್ಕಿಲ್ಲ. ಇದೊಂದು ವಂಚನೆ ಕೃತ್ಯ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಲ್ಲದೆ, 11 ಅಪರಾಧಿಗಳು ಎರಡು ವಾರದೊಳಗೆ ಶರಣಾಗಿ, ಜೈಲಿಗೆ ಮರಳಬೇಕು ಎಂದು ತೀರ್ಪಿನಲ್ಲಿ ಸೂಚಿಸಿದೆ. ಅಪರಾಧಿಗಳ ಶೀಘ್ರ ಬಿಡುಗಡೆಯ ಅಧಿಕಾರ ಗುಜರಾತ್ ಸರ್ಕಾರಕ್ಕಿಲ್ಲ. ಬದಲಿಗೆ ಅಪರಾಧಿಗಳ ಅವಧಿ ಪೂರ್ವ ಬಿಡುಗಡೆಗೆ ಮಹಾರಾಷ್ಟ್ರ ಸರ್ಕಾರ ಪರಿಶೀಲನೆ ನಡೆಸಬಹುದು, ಯಾಕೆಂದರೆ ಆರೋಪಿಗಳ ವಿಚಾರಣೆ ನಡೆದಿರುವುದು ಮಹಾರಾಷ್ಟ್ರದಲ್ಲಿ. ಗುಜರಾತ್ ನಲ್ಲಿ ಅಲ್ಲ ಎಂದು ಸ್ಪಷ್ಟಪಡಿಸಿದೆ.
ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದಲ್ಲಿ ಎಲ್ಲ 11 ಅಪರಾಧಿಗಳನ್ನು ಜೀವಾವಧಿ ಶಿಕ್ಷೆಯ 14 ವರ್ಷ ಪೂರ್ತಿಗೊಳಿಸಿದ್ದಾರೆಂದು ಹೇಳಿ ಗುಜರಾತ್ ಸರ್ಕಾರ, 2022ರ ಆಗಸ್ಟ್ 15ರಂದು ಅವರನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು.
Posted by Vidyamaana on 2024-03-22 14:55:11 |
ಪುತ್ತೂರು : ಮಹಾನಗರಗಳ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳಲ್ಲಿ ನಡೆಯುವಂತಹ ಗಂಭೀರ ಕಾಯಿಲೆಗಳ ಶಸ್ತ್ರಚಿಕಿತ್ಸೆ ಬೊಳುವಾರು ಪ್ರಗತಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದಿದ್ದು ಪುತ್ತೂರಿನಲ್ಲೂ ಕೂಡ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಸಾಧ್ಯವಿದೆಯೆಂಬುದನ್ನು ನುರಿತ ವೈದ್ಯರ ತಂಡ ಸಾಬೀತು ಮಾಡಿದೆ.
ಕೆಲ ದಿನಗಳ ಹಿಂದೆ ಹಳದಿ ಖಾಯಿಲೆಯಿಂದ ಅನಾರೋಗ್ಯಕ್ಕೀಡಾದ ಸ್ಥಳೀಯ ಮಹಿಳೆಯೊಬ್ಬರು ಇಲ್ಲಿನ ವೈದ್ಯರನ್ನು ಸಂಪರ್ಕಿಸಿದಾಗ, ವೈದ್ಯರ ಸೂಚನೆಯಂತೆ ಅವರನ್ನು ಸಿ. ಟಿ ಸ್ಕ್ಯಾನ್, ಪೆಟ್ ಸ್ಕ್ಯಾನಿಂಗ್ಗೆ ಒಳಪಡಿಸಿದ್ದರು. ಅವರ ಪ್ಯಾಂಕ್ರಿಯಾಸ್ನ ತಲೆಭಾಗದಲ್ಲಿ ಗೆಡ್ಡೆಯೊಂದು ಕಂಡುಬಂದಿತ್ತು.
ಮಹಿಳೆಯು ಸುಮಾರು 70ರ ಅಸುಪಾಸಿನವರಾಗಿದ್ದರಿಂದ ಅವರಿಗೆ ಶಸ್ತ್ರಚಿಕಿತ್ಸೆ ನೆರವೇರಿಸುವುದು ವೈದ್ಯರಿಗೆ ಅತೀ ಸವಾಲೆನಿಸಿದ್ದು, ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದ್ದರು. ಆರ್ಥಿಕ ಸಮಸ್ಯೆ ಕಾರಣ ರೋಗಿ ಕುಟುಂಬದವರು ಇಲ್ಲೇ ಕಡಿಮೆ ಖರ್ಚಿಯಲ್ಲಿ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಮನವಿ ಮಾಡಿದ್ದರು. ಪರಿಣಾಮ ವೈದ್ಯರ ತಂಡ ಸುಮಾರು 7-8 (ವಿಪ್ಪಲ್ ಪ್ರೊಸಿಜರ್) ತಾಸು ಮಹಿಳೆಗೆ ಶಸ್ತ್ರಚಿಕಿತ್ಸೆ ನೆರವೇರಿಸಿ, ಕೃತಕ ಉಸಿರಾಟ ವ್ಯವಸ್ಥೆ ಮಾಡಿ ಎರಡು ದಿನಗಳ ಕಾಲ ಐಸಿಯು ಮೂಲಕ ಆ ಬಳಿಕ ಆಸ್ಪತ್ರೆಯಲ್ಲೇ ಎರಡು ವಾರಗಳ ಚಿಕಿತ್ಸೆ ನೀಡಿ ಮಹಿಳೆಯು ಗುಣಮುಖರಾಗಿ ಮನೆ ಸೇರುವಲ್ಲಿ ವೈದ್ಯರ ತಂಡ ಯಶಸ್ಸನ್ನು ಕಂಡಿದೆ.
ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿಗ್ಯಾಸ್ಟೋ ಸರ್ಜನ್ ಆಗಿರುವ ಡಾ. ಅಶ್ವಿನ್ ಆಳ್ವರವರ ನೇತೃತ್ವದಲ್ಲಿ ಅರಿವಳಿಕೆ ತಜ್ಞ " ಡಾ. ಅನೀಶ್ ಶರ್ಮಾ, ಸಹ ಸರ್ಜನ್ ಡಾ. ಶ್ರೀ ವರ್ಷಾ ಮತ್ತು ದಾದಿ ಉಷಾ ಮತ್ತು ಚಂದ್ರಿಕಾ ಪ್ರಕ್ಷಿತ್ ಸಿದ್ದೀಕ್ ದೀಪಿಕಾ ಇವರುಗಳ ತಂಡ ಈ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದು, ಆಡಳಿತ ಮಂಡಳಿಯೂ ವೈದ್ಯರ ತಂಡದ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದೆ.
Posted by Vidyamaana on 2023-10-17 07:44:31 |
ಪುತ್ತೂರು: ಮಾಣಿಲ ಗ್ರಾಮದ ಕಾಮಜಾಲು ಎಂಬಲ್ಲಿ ನದಿಗೆ ಕಿಂಡಿ ಅಣೆಕಟ್ಟು ಮತ್ತು ಸೇತುವೆ ನಿರ್ಮಾಣಕ್ಕೆ ಈಗಾಗಲೇ ೧೦೦ ಕೋಟಿ ರೂ ಪ್ರಸ್ತಾವನೆ ಸಲ್ಲಿಸಲಾಗಿದ್ದು ಕೇರಳ ಮತ್ತು ಕರ್ನಾಟಕದ ಗಡಿ ಪ್ರದೇಶವಾದ ಕಾರಣ ಕೇರಳ ಮತ್ತು ಕರ್ನಾಟಕ ಸರಕಾರದ ಒಪ್ಪಿಗೆಯೊಂದಿಗೆ ಇಲ್ಲಿ ಕಾಮಗಾರಿ ನಡೆಸಬೇಕಾಗಿದ್ದು ಕೇರಳದಿಂದ ಒಪ್ಪಿಗೆಗಾಗಿ ಸರಕಾರದ ಜೊತೆ ಮಾತುಕತೆ ನಡೆಸುವುದಾಗಿ ಮಂಜೇಶ್ವರ ಶಾಸಕರಾದ ಎನ್ ಕೆ ಎಂ ಅಶ್ರಫ್ರವರು ಒಪ್ಪಿಕೊಂಡಿದ್ದು ಶೀಘ್ರದಲ್ಲೇ ಕಾಮಗಾರಿಗೆ ಸಂಬಂದಿಸಿದ ಪ್ರಸ್ತಾವನೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಯವರು ತಿಳಿಸಿದ್ದಾರೆ.
ನದಿಯ ಒಂದು ತಟ ಕರ್ನಾಟಕ್ಕೆ ಸೇರಿದರೆ ಇನ್ನೊಂದು ತಟ ಕೇರಳಕ್ಕೆ ಸೇರಿದ್ದಾಗಿದೆ. ಇಲ್ಲಿ ಸೇತುವೆ ನಿರ್ಮಾಣವಾಗಬೇಕಾದರೆ ಎರಡೂ ಸರಕಾರದ ಒಪ್ಪಿಗೆ ಅಗತ್ಯವಾಗಿದೆ. ಇದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪೆರ್ಲಕ್ಕೆ ಸಂಪರ್ಕ ಕಲ್ಪಿಸುತ್ತದೆ. ಮಾಣಿಲಂದಿದ ಕಾಸರಗೋಡಿಗೆ ತೆರಳಬೇಕಾದರೆ ಸುತ್ತು ಬಳಸಿ ಹೋಗಬೇಕಾಗಿದ್ದು ಸೇತುವೆ ನಿರ್ಮಾಣವಾದಲ್ಲಿ ಕೇವಲ ಬೆರಳೆಣಿಕೆಯ ಕಿ ಮಿ ದೂರ ಕ್ರಯಿಸಿದರೆ ಪೆರ್ಲವನ್ನು ತಲುಪಬಹುದಾಗಿದೆ. ಇಲ್ಲಿ ಸೇತುವೆ ನಿರ್ಮಾಣವಾಗಬೇಕೆಂದು ಕಳೆದ ೩೦ ವರ್ಷಗಳಿಂದ ಜನರು ಬೇಡಿಕೆಯನ್ನು ಸಲ್ಲಿಸುತ್ತಿದ್ದಾರೆ. ಒಂದು ಬಾರಿ ಸ್ಥಳದಲ್ಲಿ ಸರ್ವೆ ಕಾರ್ಯ ನಡೆದಿದ್ದು ಆ ಬಳಿಕ ಅದು ಸ್ಥಗಿತಗೊಂಡಿತ್ತು. ನದಿಯ ಒಂದು ಬದಿ ಎಣ್ಮಕಜೆ ಗ್ರಾಪಂ ಸೇರಿದ್ದು ಈಚೆ ಬದಿ ಕಾಮಜಾಲು ಹೆಸರಿನಿಂದ ಕರೆದರೆ ಆಚೆ ಬದಿ ಪೂವನಡ್ಕಂ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.
ಮಂಜೇಶ್ವರ ಶಾಸಕರ ಜೊತೆ ಅಶೋಕ್ ರೈ ಮಾತುಕತೆ
ಕೇರಳ ಮತ್ತು ಕರ್ನಾಟಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿರುವ ಕಾರಣ ಕೇರಳ ಸರಕಾರದಿಂದ ಎನ್ ಒ ಸಿ ಪಡೆಯಬೇಕಾಗಿದೆ. ಕರ್ನಾಕಟದಿಂದ ಎನ್ ಒ ಸಿ ವ್ಯವಸ್ಥೆಯನ್ನು ಸಾಸಕ ಅಶೋಕ್ ರೈ ಮಾಡಲಿದ್ದು ಕೇರಳ ಸರಕಾರದಿಂದ ಮಂಜೇಶ್ವರ ಶಾಸಕರಾದ ಅಶ್ರಫ್ ರವರು ಎನ್ ಒ ಸಿ ವ್ಯವಸ್ಥೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಈ ನದಿ ತಡದಲ್ಲಿ ಸುಮಾರು ೫೦೦ ಎಕ್ರೆ ಕೃಷಿ ಭೂಮಿಯೂ ಇದೆ. ನದಿಯ ನೀರನ್ನು ಕರ್ನಾಟಕ ಮತ್ತು ಕೇರಳದ ಕೃಷಿಕರು ಬಳಸುವ ಕಾರಣ ಮುಂದಕ್ಕೆ ತಕರಾರು ಬಾರದಂತೆ ವ್ಯವಸ್ಥೆಯನ್ನೂ ಮಾಡಬೇಕಿದೆ. ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ಶಾಸಕದ್ವಯರು ಮಾತುಕತೆ ನಡೆಸಿದ್ದಾರೆ.
ಪೆರ್ಲಕ್ಕೆ ೭ ಕಿ ಮೀ
ಸೇತುವೆಯ ಜೊತೆಗೆ ಅಣೆಕಟ್ಟು ಕೂಡಾ ನಿರ್ಮಾಣವಾಗಲಿದೆ. ಸೇತುವೆ ನಿರ್ಮಾಣವಾದರೆ ಮಾಣಿಲದಿಂದ ಪೆರ್ಲಕ್ಕೆ ಕೇವಲ ೭ ಕಿ ಮೀ ದೂರ ಕ್ರಯಿಸಿದರೆ ಸಾಕಾಗುತ್ತದೆ. ಮಾಣಿಲದಿಂದ ಪೆರ್ಲಕ್ಕೆ ತೆರಳಬೇಕದರೆ ಸುತ್ತು ಬಳಸಿ ೩೫ ಕಿ ಮೀ ಪ್ರಯಾಣ ಮಾಡಬೇಕಾಗುತ್ತದೆ. ಸೇತುವೆಯ ಎರಡು ರಾಜ್ಯಗಳ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಲಿದೆ. ಉಪ್ಪಳಕ್ಕೆ ತೆರಳುವುದು ಅತ್ಯಂತ ಹತ್ತಿರವಾಗಲಿದೆ.
೧೦೦ ಕೋಟಿ ರೂ ಪ್ರಸ್ತಾವನೆ
ಹೊಸ ಸೇತುವೆಯ ನಿರ್ಮಾಣಕ್ಕೆ ೧೦೦ ಕೋಟಿ ರೂ ಬೇಕಾಗಿದ್ದು ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜನತೆಯ ಹಲವು ವರ್ಷಗಳ ಬೇಡಿಕೆಯ ಬಗ್ಗೆ ಚುನಾವಣಾ ಸಮಯದಲ್ಲಿ ಗ್ರಾಮಸ್ಥರು ಶಾಸಕರ ಮುಂದಿಟ್ಟಿದ್ದರು. ಇದೀಗ ಶಾಸಕರು ಪ್ರಸ್ತಾವನೆಯನ್ನು ಸರಕಾರದ ಮುಂದಿಟ್ಟಿದ್ದಾರೆ.
ಮಾಣಿಲ ಗ್ರಾಮದ ಕಾಮಜಾಲಿನಲ್ಲಿ ಕೇರಳ ಸಂಪರ್ಕ ಸೇತುವೆಯ ನಿರ್ಮಾಣದ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಒಂದು ಬದಿ ಕೇರಳಕ್ಕೆ ಸೇರಿದ ಕಾರಣ ಕೇರಳ ಸರಕಾರದಿಂದ ಎನ್ ಒ ಸಿ ಪೊಡೆಯಬೇಕಾಗುತ್ತದೆ ಇದಕ್ಕಾಗಿ ಈಗಾಗಲೇ ಮಂಜೇಶ್ವರ ಶಾಸಕರು ಎನ್ ಒ ಸಿ ಗಾಗಿ ಕೇರಳ ಸರಕಾರದ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ. ಕೇರಳ ಮತ್ತು ಕರ್ನಾಟಕ ಸರಕಾರಗಳ ಜಂಟಿ ಯೋಜನೆಯಲ್ಲಿ ಇಲ್ಲಿ ಸೇತುವೆಯ ನಿರ್ಮಾಣವಾಗಲೂ ಬಹುದು. ಏನೇ ಆಗಲಿ ಜನರ ಬೇಡಿಕೆಯನ್ನು ಪರಿಗಣಿಸಲಾಗಿದೆ.
ಅಶೋಕ್ ಕುಮಾರ್ ರೈ ಶಾಸಕರು, ಪುತ್ತೂರು