Posted by vidyamaana on 2024-07-24 22:11:50 |
ಮಂಗಳೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಮಾನವೀಯತೆ ನೆಲೆಯಲ್ಲಿ ನೆರವು ನೀಡಿದ್ದ ಮಂಗಳೂರಿನ ಪತ್ರಕರ್ತರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಮ್ಮ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದರು.ಶಿರೂರು ಗುಡ್ಡ ದುರಂತದಲ್ಲಿ ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯ ಮೃತದೇಹ 8 ದಿನಗಳ ಬಳಿಕ ಮಂಗಳವಾರ ಸಿಕ್ಕಿದ್ದು ಪೋಸ್ಟ್ ಮಾರ್ಟಂ ಬಳಿಕ ಮೃತದೇಹವನ್ನು ಮನೆಯಿದ್ದ ಜಾಗಕ್ಕೆ ಸಾಗಿಸಿ ಅಂತಿಮ ಸಂಸ್ಕಾರ ನಡೆಸಲು ಪತ್ರಕರ್ತರಾದ ಶಶಿ ಬೆಳ್ಳಾಯರು, ಮೋಹನ್ ಕುತ್ತಾರ್, ಆರಿಫ್ ಯು.ಆರ್. ಗಿರೀಶ್ ಮಳಲಿ ಹಾಗೂ ಶಿವಶಂಕರ್ ನೆರವಾಗಿದ್ದರು
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಂದ ಪತ್ರಕರ್ತರ ಮಾಹಿತಿ ಪಡೆದು ಕಚೇರಿಯಲ್ಲಿ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅವರು ಜಿಲ್ಲಾಧಿಕಾರಿಯವರಿಗೆ ಪತ್ರಕರ್ತರ ಪರಿಚಯ ಮಾಡಿಕೊಟ್ಟರು.
ಬಳಿಕ ಮಾತಾಡಿದ ಜಿಲ್ಲಾಧಿಕಾರಿ ಅವರು, ನಿಮ್ಮ ಈ ಕಾರ್ಯ ಶ್ಲಾಘನೀಯವಾಗಿದೆ. ಇದೊಂದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತರುವಂತಹ ಕಾರ್ಯ. ಮುಂದೆಯೂ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ಏನಾದರೂ ಅಗತ್ಯ ನೆರವು ಬೇಕಾದಲ್ಲಿ ಜಿಲ್ಲಾಡಳಿತ ನಿಮ್ಮ ಜೊತೆಗಿದೆ. ನಿಮ್ಮಂತಹ ಉತ್ಸಾಹಿ ತರುಣರ ಅವಶ್ಯಕತೆ ಸಮಾಜಕ್ಕೆ ಇದೆ ಎಂದು ಬೆನ್ನುತಟ್ಟಿದರು. ಅಲ್ಲದೇ ಶಿರೂರು ಮತ್ತು ಉಳುವರೆ ಗ್ರಾಮದ ಸದ್ಯದ ಸ್ಥಿತಿಗತಿಯ ಬಗ್ಗೆ ಪತ್ರಕರ್ತರಿಂದ ಮಾಹಿತಿ ಪಡೆದರು
Posted by Vidyamaana on 2023-12-21 15:49:28 |
ಬೆಂಗಳೂರು; ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕುವ ಪರಿಸ್ಥಿತಿ ಬಂದಿಲ್ಲ. ಕಡ್ಡಾಯವಾಗಿ ಮಾಸ್ಕ್ ಹಾಕಿ ಎಂದು ಹೇಳುತ್ತಿಲ್ಲ. ಸಲಹೆ ಅಷ್ಟೇ. ಇನ್ನು ಸೂಕ್ತ ಕೋವಿಡ್ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದಲ್ಲಿ ಕೋವಿಡ್ ಕುರಿತು ಗೃಹ ಕಚೇರಿ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಈಗಾಗಲೇ ಆರೋಗ್ಯ ಸಚಿವರು ಸಭೆ ಮಾಡಿದ್ದಾರೆ. Tac ಜೊತೆ ಚರ್ಚೆ ಮಾಡಿ ಅವರ ಸಲಹೆ ತೆಗೆದುಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ಹಿಂದೆ ಮಾಡಿದ ತಪ್ಪುಗಳು ಮರುಕಳಿಸಬಾರದು ಎಂದು ಅಧಿಕಾರಿಗೆ ಸೂಚನೆ ನೀಡಿದ್ದೇನೆ. ಆಕ್ಸಿಜನ್, ಬೆಡ್ ಸಮಸ್ಯೆ ಬರಬಾರದು ಎಂದು ಹೇಳಿದ್ದೇನೆ. ಬೇರೆ ಖಾಯಿಲೆಗಳನ್ನ ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆಗೆ ಸೂಚಿಸಿದ್ದೇನೆ ಎಂದರು.
ಇನ್ನು ಇದೇ ವೇಳೆ ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ಹಾಗೇ ಇನ್ನುಳಿದವರೂ ಸಹ ಜನಸಂದಣಿ ಇರುವ ಕಡೆ ಎಲ್ಲರೂ ಮಾಸ್ಕ್ ಹಾಕಿಕೊಳ್ಳಬೇಕು. RTPCR 3,500 ಸೇರಿ ಒಟ್ಟು 5 ಸಾವಿರ ಟೆಸ್ಟ್ ನಿತ್ಯ ಆಗಲಿದ್ದು, ಗಡಿ ಭಾಗದಲ್ಲಿ ಹೆಚ್ಚು ಟೆಸ್ಟಿಂಗ್ ಗೆ ಸೂಚಿಸಲಾಗಿದೆ. ಈ ಖಾಯಿಲೆಗೆ ಯಾರೂ ಭಯ, ಆತಂಕ ಪಡುವ ಅಗತ್ಯವಿಲ್ಲ. ಆದ್ರೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು
Posted by Vidyamaana on 2023-12-04 18:01:47 |
ಬೆಳಗಾವಿ, ಡಿ 04: ನನ್ ಪತ್ನಿ ಭವಾನಿ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.
ತಾವಿದ್ದ ಕಾರಿಗೆ ಗುದ್ದಿದ ಬೈಕ್ ಸವಾರನಿಗೆ ಭವಾನಿ ರೇವಣ್ಣ ಬೈದಿರುವ ಬಗ್ಗೆ ಪ್ರತಿಕ್ರಿಯಿಸಿ, ಬೈಕ್ ಸವಾರನೇ ಒಂದು ಬದಿಯಿಂದ ಬಂದು ಗುದ್ದಿದ್ದಾನೆ. ಹೆಚ್ಚು ಕಡಿಮೆ ಆಗಿದ್ದರೆ ಏನಾಗುತ್ತಿತ್ತು?. ಅವರು ಏನೂ ಅಹಂಕಾರದಿಂದ ಮಾತಾಡಿಲ್ಲ. ಭವಾನಿ ಅವರು ಯಾರದ್ದೋ ಸ್ನೇಹಿತನ ಕಾರಿನಲ್ಲಿ ಹೋಗಿದ್ದರು. ಹೀಗಾಗಿ ಅವರು ಸಿಟ್ಟಲ್ಲಿ ಮಾತನಾಡಿದ್ದಾರೆ. ನಮ್ಮ ಕುಟುಂಬದವರಿಂದ ಯಾರಿಗೂ ನೋವು ಮಾಡುವ ಕೆಲಸ ಆಗಿಲ್ಲ ಎಂದು ಹೇಳಿದ್ದಾರೆ.
ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಏನಾಗುವುದು?.
ಅಪಘಾತದ ವಿಡಿಯೋವನ್ನು ಬೇಕಂತಲೇ ಯಾರೋ ವೈರಲ್ ಮಾಡಿದ್ದಾರೆ. ಅವರು ಬೈಕ್ ಸವಾರನ ಪ್ರಾಣದ ಬಗ್ಗೆ ಮಾತನಾಡಿಲ್ಲ. ಇವರದ್ದೇ ಪ್ರಾಣ ಹೋಗಿದ್ದರೆ ಏನು ಮಾಡುವುದು?. ಆದ್ದರಿಂದ ಭವಾನಿ ಅವರ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಭವಾನಿ ಯಾವತ್ತೂ ಯಾರಿಗೂ ನೋವು ಮಾಡಿಲ್ಲ.
ಅಪಘಾತದ ಕುರಿತು ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ವಾಹನ ಅಪಘಾತ ಆದ ಮೇಲೆ ದೂರು ಕೊಡದಿದ್ದರೆ ತಪ್ಪಾಗಲ್ಲವಾ?. ಘಟನೆ ನಡೆದ ಬಳಿಕ ಠಾಣೆಗೆ ತಿಳಿಸಬೇಕಲ್ಲವಾ?. ಇನ್ಷುರೆನ್ಸ್ ಗಾಗಿ ದೂರು ನೀಡಿದ್ದಾರೆ ಅಷ್ಟೇ. ಬೈಕ್ ಸವಾರನಿಂದ ಕಾರಿನ ಹಾನಿಯ ಮೊತ್ತ ಕೇಳುವುದಿಲ್ಲ. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದರು.
ಬೈಕ್ ಸವಾರ ಕುಡಿದಿದ್ದ. ಕುಡಿದು ಬಂದು ಕಾರಿಗೆ ಮುಂದಿನಿಂದ ಗುದ್ದಿದ್ದಾನೆ. ಈತನಿಂದ ಕಾರಿನಲ್ಲಿದ್ದವರ ಪ್ರಾಣಕ್ಕೆ ತೊಂದರೆ ಆಗಿದ್ದರೆ?. ಎಷ್ಟೇ ನಿಧಾನವಾಗಿ ಹೋಗಿದ್ದರೂ ಬಂದು ಮಧ್ಯದಲ್ಲಿ ಗುದ್ದಿದ್ದಾನೆ. ಅದನ್ನು ದೊಡ್ಡ ವಿಷಯ ಮಾಡುವುದು ಬೇಡ ಎಂದು ಹೇಳಿದರು.
ಯಾರನ್ನೂ ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶ ಹೊಂದಿರಲಿಲ್ಲ. ಅವರ ಹೇಳಿಕೆಯಿಂದ ನೋವಾಗಿದ್ದರೆ ರಾಜ್ಯದ ಜನತೆಯ ಕ್ಷಮೆ ಕೋರುತ್ತೇನೆ. ಬೈಕ್ ಸವಾರ ಮದ್ಯ ಕುಡಿದಿದ್ದ ಕಾರಣ ಅಪಘಾತ ಸಂಭವಿಸಿದೆ. ಆತನ ವಿರುದ್ಧ ದೂರು, ಕ್ರಮ ಕೈಗೊಳ್ಳಲ್ಲ. ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ಭವಾನಿ ರೇವಣ್ಣ ಇದ್ದ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರ :
ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಸಂಚರಿಸುತ್ತಿದ್ದ ಕಾರಿಗೆ ಬೈಕ್ ಸವಾರನೋರ್ವ ಡಿಕ್ಕಿ ಹೊಡೆದ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ರಾಂಪುರ ಜಂಕ್ಷನ್ ಬಳಿ ಭಾನುವಾರ ನಡೆದಿತ್ತು. ಈ ವೇಳೆ ಭವಾನಿ ರೇವಣ್ಣ ಬೈಕ್ ಸವಾರರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
Posted by Vidyamaana on 2023-11-05 21:58:35 |
ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾ ತಂಡವು ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ದಾಳಿಯ ಎದುರು ಮಂಕಾಗಿ ಹೀನಾಯ ಸೋಲು ಕಂಡಿತು. ಗೆಲುವಿನೊಂದಿಗೆ ಭಾರತ ಅಗ್ರ ಸ್ಥಾನಿಯಾಗಿ ಸೆಮಿ ಫೈನಲ್ ಪ್ರವೇಶಿಸಲಿದೆ.
327 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ಘಟಾನುಘಟಿ ಬ್ಯಾಟ್ಸ್ ಮ್ಯಾನ್ ಗಳು ಇಂದು ಭಾರತದ ಬೌಲಿಂಗ್ ದಾಳಿಗೆ ಸಿಲುಗಿ ಪತರು ಗುಟ್ಟಿ ಹೋದರು. 27.1 ಓವರ್ ಗಳಲ್ಲಿ ಕೇವಲ 83 ರನ್ ಗಳಿಗೆ ಆಲೌಟಾಗುವ ಮೂಲಕ ಭಾರತ 243 ರನ್ಗಳ ಅತ್ಯಮೋಘ ಸ್ಮರಣೀಯ ಜಯ ಸಾಧಿಸಿತು.
ಭಾರತದ ಪರ ವೇಗಿ ಸಿರಾಜ್ ಅವರು ಅದ್ಬುತ ಫಾರ್ಮ್ ನಲ್ಲಿದ್ದ ಡಿ’ಕಾಕ್ ಅವರನ್ನು ಬೌಲ್ಡ್ ಮಾಡುವ ಮೂಲಕ ಮೊದಲ ಆಘಾತ ನೀಡಿದರು. ಆಬಳಿಕ ದಕ್ಷಿಣ ಆಫ್ರಿಕಾ ಆಟಗಾರರು ತಲೆ ಎತ್ತಲು ಸಾಧ್ಯವಾಗಲಿಲ್ಲ.
ಭಾರತದ ಪರ ಬಿಗಿ ದಾಳಿ ನಡೆಸಿದ ರವೀಂದ್ರ ಜಡೇಜಾ 5 ವಿಕೆಟ್ ಕಬಳಿಸಿದರು. ಶಮಿ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಕಿತ್ತರು ವಿರಾಟ್ ಕೊಹ್ಲಿ ಅವರು ಜನ್ಮದಿನದ ಸಂಭ್ರಮದಲ್ಲಿ ಅಮೋಘ ಶತಕ ಸಿಡಿಸಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಸರಿಗಟ್ಟಿದರು. ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿ ಭರ್ಜರಿ ಮೊತ್ತವನ್ನು ದಕ್ಷಿಣ ಆಫ್ರಿಕಾ ತಂಡದ ಎದುರಿಗಿಟ್ಟಿದೆ. ನಾಯಕ ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ 62 ರನ್ ಜತೆಯಾಟವಾಡಿ ವೇಗದ ಆರಂಭ ಒದಗಿಸಿಕೊಟ್ಟರು. ಶರ್ಮ 24 ಎಸೆತಗಳಲ್ಲಿ 40 ರನ್ ಗಳಿಸಿ ಔಟಾದರು. ಗಿಲ್ 23 ರನ್ ಗಳಿಸಿದ್ದ ವೇಳೆ ನಿರ್ಗಮಿಸಿದರು.
ಆ ಬಳಿಕ ತಾಳ್ಮೆಯ ಆಟವಾಡಿದ ಕೊಹ್ಲಿ119 ಎಸೆತಗಳಲ್ಲಿ 100 ರನ್ ಗಳಿಸಿ ಸಂಭ್ರಮಿಸಿದರು. ಕೊಹ್ಲಿ ಅವರಿಗೆ ಉತ್ತಮ ಜತೆಯಾಟದ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 87 ಎಸೆತಗಳಲ್ಲಿ 77 ರನ್ ಗಳಿಸಿ ಔಟಾದರು. ಕೆಎಲ್ ರಾಹುಲ್ 8 ರನ್, ಸೂರ್ಯಕುಮಾರ್ ಯಾದವ್ 22 ಗಳಿಸಿದ್ದ ವೇಳೆ ಔಟಾದರು.
ಕೊಹ್ಲಿ121 ಎಸೆತಗಳಲ್ಲಿ 101 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊಹ್ಲಿ ಆಕರ್ಷಕ 10 ಬೌಂಡರಿಗಳನ್ನು ಬಾರಿಸಿದ್ದರು. ರವೀಂದ್ರ ಜಡೇಜಾ 15 ಎಸೆತಗಳಲ್ಲಿ 29 ರನ್ ಗಳಿಸಿ ಔಟಾಗದೆ ಉಳಿದರು.
ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್ ಗಳಲ್ಲಿ 49 ಶತಕ ಬಾರಿಸಿದ್ದು,ವಿರಾಟ್ ಕೊಹ್ಲಿ ಅವರು 277 ಇನ್ನಿಂಗ್ಸ್ ಗಳಲ್ಲಿ 49 ನೇ ಶತಕ ದಾಖಲಿಸಿ ಹೊಸ ದಾಖಲೆಯತ್ತ ಮುನ್ನುಗ್ಗುತ್ತಿದ್ದಾರೆ.
8 ರಲ್ಲಿ 8 ಪಂದ್ಯಗಳನ್ನು ಗೆದ್ದಿರುವ ರೋಹಿತ್ ಶರ್ಮ ಬಳಗ ಸೆಮಿ ಫೈನಲ್ ಗೂ ಮುನ್ನ ನೆದರ್ ಲ್ಯಾಂಡ್ಸ್ ವಿರುದ್ಧ ಪಂದ್ಯವನ್ನು ಆಡಲಿದೆ. ದಕ್ಷಿಣ ಆಫ್ರಿಕಾ ತಂಡ ಅಫ್ಘಾನ್ ಎದುರು ಪಂದ್ಯ ಆಡಲಿದೆ
Posted by Vidyamaana on 2023-10-27 09:20:11 |
ಪುತ್ತೂರು: ಚಿನ್ನಾಭರಣ ಮಾರಾಟ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿರುವ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ನಲ್ಲಿ ಪುರುಷರಿಗಾಗಿ ಪಾರ್ಥ ಹೆಸರಿನಲ್ಲಿ ವಿಶೇಷ ಕಲೆಕ್ಷನ್ಗಳ ಪ್ರದರ್ಶನ ಮತ್ತು ಮಾರಾಟ ಶುಭಾರಂಭಗೊಂಡಿದೆ.
ಪುರುಷರ ಆಭರಣಗಳ ಅತೀ ದೊಡ್ಡ ಹಾಗೂ ವಿಶೇಷ ಸ೦ಗ್ರಹ
ಪಾರ್ಥವನ್ನು ಅ.25ರಂದು ನಾಯರ್ ಕನ್ ಸ್ಟಕ್ಷನ್ ಮಾಲಕರಾದ ಸೂರಜ್ ನಾಯರ್ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಅತ್ಯುತ್ತಮ ಸೇವೆ ಮತ್ತು ವಿಫುಲವಾದ ಸಂಗ್ರಹವಿದೆ. ನಾನು ಇಲ್ಲಿನ ಸಂತೃಪ್ತ ಗ್ರಾಹಕನಾಗಿದ್ದು, ಈ ಪಾರ್ಥ ಸಂಗ್ರಹದಿಂದ ಸಂಸ್ಥೆಯ ಖ್ಯಾತಿ ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಶುಭ ಹಾರೈಸಿದರು.
ಪಾರ್ಥ ಪುರುಷರಿಗಾಗಿನ ಅಪೂರ್ವ ಸಂಗ್ರಹದಲ್ಲಿ ಕರ್ಟಿಯರ್ ಕಡ, ಲೇಸರ್ ಕಟ್ಟಿಂಗ್ ಕಡ, ಹೊಸ ವಿನ್ಯಾಸದ ಕ್ಯೂಬನ್ ಚೈನ್ಸ್, ಇಂಡೋ ಇಟಲಿಯನ್ ಚೈನ್ಸ್, ನವರತ್ನ ಉಂಗುರ, ವಿವಿಧ ವಿನ್ಯಾಸದ ಆಂಟಿಕ್ ಫಿಶ್ ಪದಕ, ಕಾಸ್ಟಿಂಗ್ ಪದಕ, ಹೊಸ ವಿನ್ಯಾಸದ ವಾಚ್ ಚೈನ್ಸ್ ಸೇರಿದಂತೆ ಇನ್ನಷ್ಟು ವಿನೂತನ ವಿನ್ಯಾಸದ ವಿಶಿಷ್ಟ ಚಿನ್ನಾಭರಣಗಳ ಸಂಗ್ರಹ ಇಲ್ಲಿ ಅನಾವರಣಗೊಂಡಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಬಲರಾಮ ಆಚಾರ್ಯ, ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯ, ಮ್ಯಾನೇಜರ್ ಶಂಕರ್ ಮೋಹನ್, ಸ್ಟೋರ್ ಮ್ಯಾನೇಜರ್ ಶೇಖರ್ ಗೌಡ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Posted by Vidyamaana on 2023-05-10 06:48:15 |
ಸುಳ್ಯದ ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ಕೆರೆಗೆ ಬಿದ್ದು ಮೇಲೆ ಬಂದ ತಾಯಾನೆಯಿಂದ ಬೇರ್ಪಟ್ಟಿದ್ದ ಮರಿಯಾನೆಯನ್ನು ದುಬಾರೆಯ ಆನೆ ಶಿಬಿರಕ್ಕೆ ಕಳುಹಿಸಲಾಗಿತ್ತು. ಇದೀಗ ಮರಿಯಾನೆ ದುಬಾರೆಯ ಆನೆ ಶಿಬಿರದಲ್ಲಿ ಸಾವನ್ನಪ್ಪಿದೆ.
ಏಪ್ರಿಲ್ 13 ರಂದು ನಾಲ್ಕು ಆನೆಗಳು ಅಜ್ಜಾವರ ತುದಿಯಡ್ಕದ ಸಂಪತ್ ರೈ ಯವರ ತೋಟದ ಕೆರೆಗೆ ಬಿದ್ದಿದ್ದವು. ಬಳಿಕ ಮೂರು ಆನೆಗಳನ್ನು ಮೇಲಕ್ಕೆ ಎತ್ತಲಾಗಿತ್ತು. ಆದ್ರೆ ಒಂದು ಮರಿಯಾನೆ ಮಾತ್ರ ಮೇಲೆ ಬರಲಾಗದೆ ಜಾರಿ ಬಿದ್ದುದರಿಂದ ಸ್ಥಳೀಯರು ಮತ್ತು ಅರಣ್ಯ ಇಲಾಖೆಯವರು ಅದನ್ನು ದೂಡಿ ಮೇಲಕ್ಕೆ ಹತ್ತಿಸಿದ್ದರು. ಆ ವೇಳೆಗೆ ಆನೆಗಳ ಹಿಂಡು ಮುಂದಕ್ಕೆ ಹೋಗಿದ್ದುದರಿಂದ ಈ ಮರಿಯಾನೆಗೆ ಗುಂಪು ಸೇರಲಾಗಿರಲಿಲ್ಲ.ಮರುದಿನ ಗುಂಪಿಗೆ ಸೇರಿಸಲು ಯತ್ನಿಸಿದರೂ ಮರಿಯಾನೆ ವಾಪಸ್ ಬಂದಿತ್ತು . ಬಳಿಕ ಆನೆ ತಜ್ಞರ ಅಭಿಪ್ರಾಯದ ಮೇರೆಗೆ ದುಬಾರೆ ಆನೆ ಶಿಬಿರದಿಂದ ತಜ್ಞರು ಬಂದು ಎ.16 ರಂದು ದುಬಾರೆ ಆನೆ ಶಿಬಿರಕ್ಕೆ ಅದನ್ನು ಕೊಂಡುಯೊಯ್ಯಲಾಗಿತ್ತು. ಶಿಬಿರದಲ್ಲಿ ಈ ಮರಿಯಾನೆಯು ಚುರುಕಾಗಿದ್ದು ಹಾಲು ಸೇವಿಸುತ್ತಿತ್ತು. ಇತರ ಆನೆ ಮರಿಗಳೊಂದಿಗೆ ಬೆರೆಯುತ್ತಿತ್ತು. ಆದರೆ ವಾರದ ಹಿಂದೆ ದಿಢೀರನೆ ಆನೆ ಮರಿ ಸಾವನ್ನಪ್ಪಿದೆ. ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ.
Posted by Vidyamaana on 2023-02-28 10:45:53 |
ಪುತ್ತೂರು: ಯಶಸ್ವಿನಿ ಯೋಜನೆಯಲ್ಲಿ ಚಿಕಿತ್ಸಾ ದರ ಪರಿಷ್ಕರಿಸುವ ಸಹಿತ ವಿವಿಧ ಬೇಡಿಕೆಗಳನ್ನು ಸರಕಾರದ ಗಮನ ಸೆಳೆಯಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ನಿರ್ಧಾರವನ್ನು ಮೆಡಿಕಲ್ ಅಸೋಸಿಯೇಶನ್ ಕೈಗೊಂಡಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಡಾ.ಶ್ರೀಪತಿ ರಾವ್ ತಿಳಿಸಿದ್ದಾರೆ..
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಎಲ್ಲಾ ಹಣವನ್ನು ಕೂಡಲೇ ಸಂದಾಯ ಮಾಡಬೇಕು, ರೋಗಿಗಳು ಆಸ್ಪತ್ರೆಗೆ ಸೇರುವಾಗ ಇರುವ ನಿಬಂಧನೆಗಳನ್ನು ಸಡಿಲಿಕರಣಗೊಳಿಸಬೇಕು ಎಂಬ ವಿವಿಧ ಬೇಡಿಕೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದರು.
ಪುತ್ತೂರಿನ ಆಸ್ಪತ್ರೆಗಳಲ್ಲಿ ಸರಕಾರಿ ಯೋಜನೆಗಳಾದ ಇಎಸ್ಐ, ಯಶಸ್ವಿನಿ ಸಹಿತ ಹಲವಾರು ಯೋಜನೆಗಳನ್ನು ಉತ್ತಮವಾಗಿ ನಿಭಾಯಿಸುತ್ತಿವೆ. ಆದರೆ ಇದೀಗ ಸ್ಥಗಿತಗೊಳಿಸಿದ ಯಶಸ್ವಿ ಯೋಜನೆ ಮರು ಪ್ರಾಂಭಿಸುವಾಗ ಹಲವಾರು ನಿಬಂಧನೆ ಮತ್ತು ರೋಗಿಗಳ ಚಿಕಿತ್ಸಾ ದರವನ್ನು ಕಡಿಮೆ ಗೊಳಿಸಿದ್ದರಿಂದ ನ್ಯಾಯುತವಾಗಿ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ. ಕೇಂದ್ರ ಸಿ.ಜಿ.ಎಸ್.ಹೆಚ್.ಎಸ್ ನಂತೆ 2014ರ ಇಸವಿಯ ಚಿಕಿತ್ಸಾ ದರವೇ ಈಗಲೂ ಚಾಲ್ತಿಯಲ್ಲಿದೆ. 2014ರ ಚಿಕಿತ್ಸಾ ದರ 2017 ಮತ್ತು 2020ರಲ್ಲಿ ಹಾಗೂ 2023ರಲ್ಲಾದರೂ ಪರಿಷ್ಕರಣೆ ಆಗಬೇಕಾಗಿತ್ತು. ಆದರೆ ಅದನ್ನು ಮಾಡಿಲ್ಲ. ಈ ಹಿಂದೆ ಇದ್ದ ಯಶಸ್ವಿನಿ ಯೋಜನೆ ಉತ್ತಮವಾಗಿತ್ತು. ಆದರೆ ಅದರಲ್ಲೂ ಹಲವು ಆಸ್ಪತ್ರೆಗಳಿಗೆ ಹಣ ಸಂದಾಯ ಬಾಕಿ ಇದೆ. ಈ ನಿಟ್ಟಿನಲ್ಲಿ ಯಸ್ವಿನಿ ಯೋಜನೆಗೆ ಬಹುತೇಕ ಆಸ್ಪತ್ರೆಗೆಳು ಸೇರ್ಪಡೆಗೊಂಡಿಲ್ಲ.ಇತ್ತೀಚೆಗೆ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದ ಸಂದರ್ಭ ಬಂದಿರುವ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ನಮಗೆ ನೋಟೀಸ್ ನೀಡಿದ್ದಾರೆ. ಈ ನೋಟೀಸ್ಗೆ ಸಂಬಂಧಿಸಿ ನಾವು ಯಶಸ್ವಿನಿ ಆರೋಗ್ಯ ರಕ್ಷಾ ಯೋಜನೆಯಲ್ಲಿ ಸೇರಬೇಕಾದರೆ ನಮ್ಮ ಕೆಲವೊಂದು ಬೇಡಿಕೆಗಳಿವೆ. ಅದನ್ನು ಈಡೇರಿಸವಂತೆ ಮನವಿ ಮಾಡಲಿದ್ದೇವೆ. ಖಾಸಗಿ ಕೊಠಡಿಗಳಿಗೂ ರೋಗಿಗಳಿಗೆ ಅನುಮತಿ ನೀಡಬೇಕೆಂದು ಮನವಿ ನೀಡಲಿದ್ದೇವೆ ಎಂದು ತಿಳಿಸಿದ ಅವರು, ಒಟ್ಟಿನಲ್ಲಿ ಉಳುವ ರೈತರ ಹೈನುಗಾರರ ಆರೋಗ್ಯದ ಮೇಲೆ ಕಾಳಜಿ ವಹಿಸಿ ಅವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಸಿಗುವಂತೆ ಮಾಡುವ ಜವಾಬ್ದಾರಿ ಸರಕಾರಕ್ಕೂ ಮತ್ತು ಖಾಸಗಿ ಆಸ್ಪತ್ರೆಗಳ ಮೇಲೆ ಇದೆಯೆಂದು ತಿಳಿದು ಸರಕಾರ ಉತ್ತಮ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇವೆ ಎಂದರು.
ಯಶಸ್ವಿನಿ ಆರೋಗ್ಯ ರಕ್ಷಾ ಯೋಜನೆಯಡಿ ಪುತ್ತೂರಿನ ನಾಲ್ಕು ಆಸ್ಪತ್ರೆಗಳಿಗೆ ಹಣ ಸಂದಾಯ ಬಾಕಿ ಇದೆ. ಹಿಂದೆ ಸರಕಾರದಿಂದ ಯೋಜನೆ ಚಾಲ್ತಿಯಲ್ಲಿತ್ತು. ಬಳಿಕ ಅದನ್ನು ಇನ್ಶ್ಯುರೆನ್ಸ್ ಕಂಪೆನಿಗೆ ವರ್ಗಾಯಿಸಲಾಯಿತು. ಈ ಸಂದರ್ಭ ಆಸ್ಪತ್ರೆಗಳಿಗೆ ಚಿಕಿತ್ಸಾ ದರ ಪಾವತಿ ಬಾಕಿಯಾಗುತ್ತಿತ್ತು. ಈ ಕುರಿತು ಹಲವು ಬಾರಿ ಪತ್ರ ಬರೆಯಲಾಗಿದೆ. ಯಾವುದೇ ಸ್ಪಂದನೆ ಸಿಕ್ಕಿಲ್ಲ. ಒಟ್ಟು ನಾಲ್ಕು ಆಸ್ಪತ್ರೆಗೆಳಿಗೆ ಸುಮಾರು ರೂ. 22ಲಕ್ಷ ಬಾಕಿ ಇದೆ. ಎಂದು ಅಸೋಸಿಯೇಶನ್ ಉಪಾಧ್ಯಕ್ಷ ಡಾ.ಭಾಸ್ಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಶನ್ನ ಕಾರ್ಯದರ್ಶಿ ಡಾ. ಎಸ್.ಎಸ್ ಜೋಶಿ, ಕೋಶಾಧಿಕಾರಿ ಡಾ. ಅಶೋಕ್ ಪಡಿವಾಳ್, ಸದಸ್ಯರಾದ ಡಾ. ಜೆ.ಸಿ.ಅಡಿಗ, ಡಾ. ರವೀಂದ್ರ ಉಪಸ್ಥಿತರಿದ್ದರು.