Posted by vidyamaana on 2024-07-23 19:43:42 |
ಪುಣೆ: ಅತಿ ವೇಗ ಅಪಘಾತಕ್ಕೆ ಕಾರಣವೆಂದು ತಿಳಿದರೂ ಕೂಡ ಕೆಲವು ಚಾಲಕರು ಅವಸರದಲ್ಲಿ ವೇಗವಾಗಿ ವಾಹನ ಚಲಾಯಿಸಿ ಜನರ ಜೀವಕ್ಕೆ ಆಪತ್ತು ತರುತ್ತಿದ್ದಾರೆ. ಎಲ್ಲೆಂದರಲ್ಲಿ ನಿಂತ ಜನರ ಮೇಲೂ ವಾಹನವನ್ನು ಹಾರಿಸಿಕೊಂಡು ಹೋಗುತ್ತಾರೆ. ಇದೀಗ ಅಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Hit and Run Case)ಆಗಿದೆ.ಪ್ರಿ-ಚಿಂಚ್ವಾಡ್ನಲ್ಲಿ ಅತಿವೇಗವಾಗಿ ಚಲಿಸುತ್ತಿದ್ದ ಟ್ಯಾಕ್ಸಿ ಮಹಿಳೆಗೆ ಡಿಕ್ಕಿ ಹೊಡೆದು ನಂತರ ಚಾಲಕ ಅಪಘಾತದ ಸ್ಥಳದಿಂದ ಓಡಿಹೋದ ಹೊಸ ಹಿಟ್ ಅಂಡ್ ರನ್ ಪ್ರಕರಣ ವರದಿಯಾಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪುಣೆಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಪಿಂಪ್ರಿ-ಚಿಂಚ್ವಾಡ್ನಲ್ಲಿ ಈ ಘಟನೆ ನಡೆದಿದೆ. ಈ ಹಿಟ್ ಅಂಡ್ ರನ್ ಪ್ರಕರಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊದಲ್ಲಿ ಭಾನುವಾರ ಮಧ್ಯಾಹ್ನ 1:30ರ ಸುಮಾರಿಗೆ ರಸ್ತೆಯಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ ಎದುರಿಗೆ ವೇಗವಾಗಿ ಬಂದ ಟ್ಯಾಕ್ಸಿ ಮಹಿಳಾ ಪಾದಚಾರಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ರಸ್ತೆಯಲ್ಲಿದ್ದ ಇತರ ಜನರು ಆಕೆಯ ಸಹಾಯಕ್ಕಾಗಿ ಓಡಿ ಬರುತ್ತಿರುವುದು ಕಂಡುಬಂದಿದೆ. ಟ್ಯಾಕ್ಸಿಗೆ ಡಿಕ್ಕಿ ಹೊಡೆದ ಮಹಿಳೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಪಿಂಪ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಈ ಪ್ರಕರಣದ ಬಗ್ಗೆ ಪಿಂಪ್ರಿ-ಚಿಂಚ್ವಾಡ್ ಡಿಸಿಪಿ ಶಿವಾಜಿ ಪವಾರ್ ಮಾತನಾಡಿ, ಈ ಅಪಘಾತದಲ್ಲಿ ಸಂತ್ರಸ್ತೆ ರೇಖಾ ಗಾಯಗೊಂಡಿದ್ದಾರೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. 24 ವರ್ಷದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನ ಚಾಲಕ ಕುಡಿದಿರಲಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮೇಲ್ನೋಟಕ್ಕೆ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಮಹಾರಾಷ್ಟ್ರದಲ್ಲಿ ವರದಿಯಾದ ಮೊದಲ ಹಿಟ್ ಅಂಡ್ ರನ್ ಪ್ರಕರಣವಲ್ಲ. ಈಗಾಗಲೇ ಹಿಟ್ ಅಂಡ್ ರನ್ ಪ್ರಕರಣ ಮತ್ತೊಂದು ಸುದ್ದಿಯಲ್ಲಿ, ವೇಗವಾಗಿ ಬಂದ ಆಡಿ ಕಾರು ಎರಡು ಆಟೋರಿಕ್ಷಾಗಳಿಗೆ ಡಿಕ್ಕಿ ಹೊಡೆದಿದೆ. ಒಂದು ಆಟೋರಿಕ್ಷಾ ಚಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮುಲುಂಡ್ ಪೊಲೀಸರು ಆಡಿ ಕಾರನ್ನು ವಶಪಡಿಸಿಕೊಂಡಿದ್ದಾರೆ, ಆದರೆ ಅಪಘಾತದ ನಂತರ ಅದರ ಚಾಲಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
Posted by Vidyamaana on 2024-02-14 09:52:14 |
ಯುಎಇ: ಅರಬ್ ಎಮಿರೇಟ್ಸ್ನಲ್ಲಿ ನಿರ್ಮಿಸಿರುವ ಮೊಟ್ಟಮೊದಲ ಹಿಂದೂ ದೇವಾಲಯವನ್ನು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.ಈ ದೇವಸ್ಥಾನವು 27 ಎಕರೆ ಭೂಮಿಯಲ್ಲಿ ಹರಡಿಕೊಂಡಿದೆ ಎನ್ನಲಾಗಿದ್ದು, ಅಬುಧಾಬಿಯ ಅಬು ಮುರೇಖಾ ಜಿಲ್ಲೆಯಲ್ಲಿದೆಎರಡು ದಿನಗಳ ಯುಎಇ ಮತ್ತು ಖತರ್ ದೇಶಗಳ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ಮೋದಿ ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಜೊತೆಗೆ ನಿನ್ನೆ ದ್ವಿಪಕ್ಷೀಯ ಕಾರ್ಯತಂತ್ರದ ಸಹಭಾಗಿತ್ವದ ಕುರಿತು ವ್ಯಾಪಕ ಮಾತುಕತೆ ನಡೆಸಿದ್ದಾರೆ. ಬಳಿಕ ಉಭಯ ಮುಖಂಡರಿಂದ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.ಈ ಎರಡು ದಿನಗಳ ಭೇಟಿಯು 2015 ರಿಂದ ಯುಎಇಗೆ ಪ್ರಧಾನಿ ನರೇಂದ್ರ ಮೋದಿಯವರ ಏಳನೇ ಭೇಟಿ ಮತ್ತು ಕಳೆದ ಎಂಟು ತಿಂಗಳಲ್ಲಿ ಮೂರನೇ ಭೇಟಿಯಾಗಿದೆ.
Posted by Vidyamaana on 2024-02-01 10:57:16 |
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೊನೆಯ ಬಜೆಟ್ ಗುರುವಾರ (ಫೆ.01) ಮಂಡನೆಯಾಗಲಿದ್ದು, ಕ್ಷಣಗಣನೆ ಆರಂಭಗೊಂಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿತ್ತ ಸಚಿವಾಲಯಕ್ಕೆ ಆಗಮಿಸಿದ್ದು, ಬೆಳಗ್ಗೆ 11ಗಂಟೆಗೆ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್ ಆಗಿದೆ. ಲೋಕಸಭೆ ಚುನಾವಣೆಗೂ ಮುನ್ನ ಮಂಡನೆಯಾಗುತ್ತಿರುವ ಮಧ್ಯಂತರ ಬಜೆಟ್ ನಲ್ಲಿ ಬಂಪರ್ ಘೋಷಣೆಗಳ ನಿರೀಕ್ಷೆ ಹೆಚ್ಚಾಗಿದೆ.
ಮಧ್ಯಂತರ ಬಜೆಟ್ ಈಗ ಮಂಡನೆಯಾಗಲಿದ್ದು, ಲೋಕಸಭೆ ಚುನಾವಣೆ ಬಳಿಕ ನೂತನ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ. ಈ ಹಿನ್ನೆಲೆಯಲ್ಲಿ ಮಧ್ಯಂತರ ಬಜೆಟ್ ನಲ್ಲಿ ಬೃಹತ್ ಯೋಜನೆಗಳ ಘೋಷಣೆ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ.ನಿರ್ಮಲಾ ಸೀತಾರಾಮನ್ ಅವರು ಇಂದು 6ನೇ ಬಜೆಟ್ ಮಂಡಿಸುತ್ತಿದ್ದಾರೆ. 2023ನೇ ಸಾಲಿನ ಬಜೆಟ್ ನಲ್ಲಿ 45,03,097 ಕೋಟಿ ರೂಪಾಯಿ ಗಾತ್ರದ ಬೃಹತ್ ಮೊತ್ತದ ಬಜೆಟ್ ಮಂಡಿಸಿದ್ದರು
Posted by Vidyamaana on 2024-09-04 13:26:52 |
ಚಿಕ್ಕೋಡಿ,ಸೆ.4- ಒಟ್ಟಿಗೆ ಸೇರಿದ ಬಂಧು ಬಳಗ, ಎಲ್ಲೆಡೆ ಸಂಭ್ರಮ, ಹರಟೆ, ಯಾಕೋ ಆ ಭಗವಂತನಿಗೆ ಇವರ ಖುಷಿ ನೋಡಿ ಸಹಿಸಲಾಗಲಿಲ್ಲವೇನೋ? ನಾಳೆ ಹಸೆಮಣೆ ಏರಬೇಕಾಗಿದ್ದ ವರನನ್ನೇ ತನ್ನ ಬಳಿ ಕರೆದುಕೊಂಡು ಮದುವೆ ಮನೆಯನ್ನು ಸೂತಕ ಮನೆಯನ್ನಾಗಿಸಿಬಿಟ್ಟಿದ್ದಾನೆ.
ಮದುವೆಗೆ ಒಂದು ದಿನ ಮುನ್ನ ವರ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಝಂಜರವಾಡ ಆರ್ಸಿ ಗ್ರಾಮದಲ್ಲಿ ನಡೆದಿದೆ. ಸದಾಶಿವ ರಾಮಪ್ಪ ಹೋಸಲ್ಕಾರ (31) ಮೃತಪಟ್ಟ ವರ.
Posted by Vidyamaana on 2024-05-16 07:12:58 |
ಹುಬ್ಬಳ್ಳಿ: ಪ್ರೀತಿ ವಿಚಾರಕ್ಕೆ ಇಂದು ಮುಂಜಾನೆ ನಡೆದ ಅಂಜಲಿ(20) ಹತ್ಯೆ ಪ್ರಕರಣದ ಆರೋಪಿ ವಿಶ್ವನಿಗೆ ಕ್ರಿಮಿನಲ್ ಹಿನ್ನೆಲೆ ಇದೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಈತನ ಸ್ನೇಹಿತ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಇದೀಗ ವಿಶ್ವ ಕೂಡ ಕೊಲೆ ಮಾಡಿದ್ದಾನೆ.ಈತ ಕೊಲೆ ಮಾಡಲು ಸ್ನೇಹಿತನಿಂದ ಪ್ರೇರಣೆ ಪಡೆದಿದ್ನಾ ಎನ್ನುವ ಸಂಶಯ ಮೂಡಿದೆ.
ಹಂತಕ ವಿಶ್ವನ ಸ್ನೇಹಿತ ಶೇಷ್ಯಾ ಹುಬ್ಬಳ್ಳಿ ತಾಲೂಕಿನ ಹಳ್ಳ್ಯಾಳದ ಸದ್ದಾಂ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ. ಶೇಷ್ಯಾ ಕೊಲೆ ಮಾಡಿದ ಬಳಿಕ ಅಂಜಲಿಯನ್ನ ಮುಗಿಸಲು ವಿಶ್ವ ಪ್ಲಾನ್ ಮಾಡಿರಬಹುದು ಎನ್ನಲಾಗುತ್ತಿದೆ.
Posted by Vidyamaana on 2023-05-03 07:04:05 |
ಪುತ್ತೂರು ಮೂಲದ ಯುವತಿಯೋರ್ವರು ಬೆಂಗಳೂರಿನಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕೆಯ್ಯೂರು ಗ್ರಾಮದ ಮಾಡಾವು ಸ್ಥಾನತ್ತಾರು ಚಂದ್ರಶೇಖರ ರೈ ಮತ್ತು ಸೋಮಾವತಿ ರೈ ದಂಪತಿಯ ಪುತ್ರಿ ಶ್ರುತಿ ಸಿ.ರೈ (22) ಮೃತ ಯುವತಿ.ಶ್ರುತಿ ಕಳೆದೆರಡು ವರುಷಗಳಿಂದ ಬೆಂಗಳೂರಿನಲ್ಲಿ ಆನಿಮೇಷನ್ ಶಿಕ್ಷಣ ಪಡೆಯುತ್ತಿದ್ದು, ಅಲ್ಲಿಯೇ ವಾಸ್ತವ್ಯ ಹೊಂದಿದ್ದರು. ಕೋರ್ಸ್ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದರು.
ಬಾಡಿಗೆ ರೂಂ ನಲ್ಲಿ ಕೆಲ ದಿನಗಳ ಹಿಂದೆ ಅವರು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಎ.30 ರಂದು ಮೃತಪಟ್ಟಿದ್ದು, ಮೇ.1 ರಂದು ಮೃತದೇಹವನ್ನು ಊರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಿರುವುದಾಗಿ ತಿಳಿದು ಬಂದಿದೆ..
Posted by Vidyamaana on 2024-08-20 12:23:11 |
ಮಂಗಳೂರು: ಫುಟ್ ಬಾಲ್ ಪಂದ್ಯಾದ ವೇಳೆ ಎರಡು ಕಾಲೇಜು ವಿದ್ಯಾರ್ಥಿಗಳ ನಡುವೆ ಕಿರಿಕ್ ಉಂಟಾಗಿ, ತಂಡವೊಂದು ವಿದ್ಯಾರ್ಥಿಗಳನ್ನು ಅಪಹರಿಸಿ ಹಲ್ಲೆಗೈದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಏನಿದು ಘಟನೆ?: ನಗರದ ನೆಹರೂ ಮೈದಾನದಲ್ಲಿ ಆ.14ರಂದು ಎರಡು ಪ್ರತಿಷ್ಠಿತ ಕಾಲೇಜಿನ ನಡುವೆ ಫುಟ್ ಬಾಲ್ ಪಂದ್ಯವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಕೆಲ ವಿದ್ಯಾರ್ಥಿಗಳು ಎದುರಾಳಿ ತಂಡವನ್ನು ಬೆಂಬಲಿಸಿದ ಕಾರಣದಿಂದಾಗಿ ಎರಡು ತಂಡಗಳ ನಡುವೆ ಜಗಳ ಉಂಟಾಗಿತ್ತು.
ಇದೇ ವಿಚಾರವನ್ನಿಟ್ಟುಕೊಂಡು ಸೋಮವಾರ(ಆ.19ರಂದು) ಸಂಜೆ 6:15ರ ಹೊತ್ತಿಗೆ ಪಾಂಡೇಶ್ವರ ಫೋರಂ ಮಾಲ್ ಬಳಿ ಖಾಸಗಿ ಕಾಲೇಜಿನ 17 ವರ್ಷದ ಅಪ್ರಾಪ್ತ ಹುಡುಗನ ಮೇಲೆ ದಿಯಾನ್, ತಸ್ಲಿಮ್, ಸಲ್ಮಾನ್ ಮತ್ತು ಇತರ ಇಬ್ಬರು 17 ವರ್ಷದ ಅಪ್ರಾಪ್ತ ಹುಡುಗರು ಹಲ್ಲೆ ಮಾಡಿದ್ದರು.
17 ವರ್ಷದ ಅಪ್ರಾಪ್ತ ಹುಡುಗ ಹಾಗೂ ಆತನ ಸ್ನೇಹಿತರನ್ನು ಅಪಹರಿಸಿ ಕಾರಿನಲ್ಲಿ ಹಾಕಿಕೊಂಡು ಕೈ ಕಾಲಿನಿಂದ ಹಲ್ಲೆಗೈದಿದ್ದಾರೆ. ಮಹಾಕಾಳಿ ಪಡ್ಪು, ಕಣ್ಣೂರು ಮಸೀದಿ ಬಳಿ ಸೇರಿದಂತೆ ವಿವಿಧ ಸ್ಥಳಗಳಿಗೆ ಕರೆದೊಯ್ದು ಮತ್ತಷ್ಟು ಹಲ್ಲೆ ನಡೆಸಿದ್ದಾರೆ.