Posted by vidyamaana on 2024-07-24 08:25:31 | Last Updated by Vidyamaana on 2024-07-24 08:25:31
ಪುತ್ತೂರು: ನೆಹರುನಗರ ಮಂಜಲ್ಪಡ್ಪು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು ಲಾರಿ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50ವ) ಎಂಬವರು ಮೃತಪಟ್ಟ ಬಗ್ಗೆ ವರದಿಯಾಗಿದೆ
ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಸವಾರ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.
Posted by Vidyamaana on 2023-11-12 20:32:32 |
ಉಡುಪಿ : ದೀಪಾವಳಿ ವೇಳೆ ಉಡುಪಿ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದ, ಭಾನುವಾರ ನೇಜಾರುವಿನ ತೃಪ್ತಿ ನಗರದಲ್ಲಿ ನಡೆದ ಮುಸ್ಲಿಂ ಕುಟುಂಬದ ನಾಲ್ವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ.ಪ್ರಾಥಮಿಕ ತನಿಖೆಯಲ್ಲಿ ಪ್ರಮುಖ ಸಾಕ್ಷ್ಯಗಳು ಪೊಲೀಸರಿಗೆ ಲಭ್ಯವಾಗಿದೆ.
ಘಟನೆ ಕುರಿತು ಸ್ಥಳ ಪರಿಶೀಲನೆ ನಡೆಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉಡುಪಿ ಎಸ್ಪಿ ಡಾ.ಅರುಣ್, ಒಂದೇ ಕುಟುಂಬದ ನಾಲ್ವರನ್ನು ಇರಿದು ಕೊಲೆ ಮಾಡಲಾಗಿದ್ದು, ಇನ್ನೊಬ್ಬರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಹಸೀನಾ ಮತ್ತವರ ಮೂವರು ಮಕ್ಕಳನ್ನು ಕೊಲೆ ಮಾಡಲಾಗಿದೆ. ನಾವು ತನಿಖೆ ಮಾಡಿ ಶೀಘ್ರ ಇದರ ಹಿಂದಿನ ಕಾರಣ ಪತ್ತೆ ಹಚ್ಚುತ್ತೇವೆ. ಮನೆಯೊಳಗೆ ಯಾವುದೇ ಸೊತ್ತುಗಳು ಕಳವಾದ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ. ಬೆಳಗ್ಗೆ ಹತ್ತು ಗಂಟೆ ಹೊತ್ತಿಗೆ ನಮಗೆ ಮಾಹಿತಿ ಬಂದಿದ್ದು, ಮಾಹಿತಿ ಬಂದ ತತ್ ಕ್ಷಣ ಬಂದು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದೇವೆ. ಕೊಲೆಗೆ ಏನು ಕಾರಣ ಎಂದು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತೇವೆ” ಎಂದು ತಿಳಿಸಿದ್ದಾರೆ.
ರಿಕ್ಷಾದಲ್ಲಿ ಬಂದಿದ್ದ ಆರೋಪಿ
ಸಂತೆಕಟ್ಟೆಯಿಂದ ತೃಪ್ತಿ ನಗರಕ್ಕೆ ಆರೋಪಿ ರಿಕ್ಷಾದಲ್ಲಿ ಬಂದಿರುವುದು ಸ್ಪಷ್ಟವಾಗಿದೆ. ಸಂತೆಕಟ್ಟೆ ಸ್ಟಾಂಡ್ ನ ರಿಕ್ಷಾ ಚಾಲಕ ಶ್ಯಾಮ್ ಹೇಳಿಕೆ ನೀಡಿದ್ದು, ಆರೋಪಿ ಮನೆಯ ವಿಳಾಸವನ್ನು ಸರಿಯಾಗಿಯೇ ತಿಳಿಸಿದ್ದ. ದಾರಿ ತಪ್ಪಿದಾಗ ಆರೋಪಿಯೇ ಮನೆಯ ಗುರುತು ಹೇಳಿದ್ದ. ದೃಢಕಾಯದ ವ್ಯಕ್ತಿ, 45ರ ಆಸುಪಾಸಿನ ವಯಸಿನವನಾಗಿದ್ದಾನೆ. ಬ್ರೌನ್ ಕಲರ್ ಅಂಗಿ ಧರಿಸಿದ್ದು, ಬಿಳಿ ಬಣ್ಣದ ಮಾಸ್ಕ್ ಹಾಕಿಕೊಂಡಿದ್ದ. ಮನೆಯಲ್ಲಿ ಬಿಟ್ಟು ಹೋಗಿ 15 ನಿಮಿಷಕ್ಕೆ ಮತ್ತೆ ಸಂತೆಕಟ್ಟೆ ಸ್ಟ್ಯಾಂಡ್ ಗೆ ಬಂದಿದ್ದ. ಗಡಿಬಿಡಿ ಅಲ್ಲಿ ತನ್ನನ್ನು ಕರೆದುಕೊಂಡು ಹೋಗುವಂತೆ ರಿಕ್ಷಾ ಚಾಲಕರಿಗೆ ಕೇಳಿಕೊಂಡಿದ್ದ. ಘಟನಾ ಸ್ಥಳದಿಂದ ದ್ವಿಚಕ್ರ ವಾಹನದಲ್ಲಿ ಆಟೋ ಸ್ಟಾಂಡ್ ತಲುಪಿದ್ದ ಎನ್ನುವುದು ಸ್ಪಷ್ಟವಾಗಿದೆ.ಆರೋಪಿ ಬೆಂಗಳೂರು ಭಾಗದ ಶೈಲಿಯ ಕನ್ನಡ ಮಾತನಾಡುತ್ತಿದ್ದು, ಮೇಲ್ನೋಟಕ್ಕೆ ಪರಿಚಯದವನೇ ಆಗಿದ್ದು ಆತನಿಂದಲೇ ಕೃತ್ಯ ನಡೆದಿರುವ ಸಾಧ್ಯತೆ ಇದೆ.
ಸ್ಥಳಕ್ಕೆ ಶಾಸಕ ಭೇಟಿ
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸ್ಥಳಕ್ಕೆ ಭೇಟಿ ನೀಡಿದ್ದು, ”ಘಟನೆಯ ಬಗ್ಗೆ ಪೊಲೀಸರ ಜೊತೆ ಮಾತನಾಡಿದ್ದೇನೆ. ಕೌಟುಂಬಿಕ ವಿಚಾರ ಹಿನ್ನೆಲೆಯಲ್ಲಿ ಕೃತ್ಯ ಆಗಿರಬಹುದು ಎಂದು ಅನ್ನಿಸುತ್ತಿದೆ. ಉಡುಪಿ ಎಸ್ಪಿ ಡಾ. ಅರುಣ್ ಈಗಾಗಲೇ ತಂಡವನ್ನು ರಚನೆ ಮಾಡಿದ್ದಾರೆ. ಆರೋಪಿಯನ್ನ ಪತ್ತೆಹಚ್ಚಲು ಈಗಾಗಲೇ ಪೊಲೀಸರು ಬೆನ್ನುಬಿದ್ದಿದ್ದಾರೆ. ಈ ಕೃತ್ಯ ಬಹಳ ಬೇಸರ ತರಿಸುವಂತದ್ದು,ದೀಪಾವಳಿ ಈ ಸಂದರ್ಭದಲ್ಲಿ ಘಟನೆ ಎಲ್ಲರ ದುಃಖಕ್ಕೆ ಕಾರಣವಾಗಿದೆ.ಕುಟುಂಬದ ಬಗ್ಗೆ ಮಾಹಿತಿ ಇದ್ದೇ ಈ ಕೃತ್ಯ ಎಸಗಿರುವ ಬಗ್ಗೆ ಶಂಕೆ ಇದೆ” ಎಂದು ಹೇಳಿದ್ದಾರೆ.
ಹತ್ಯೆಗೀಡಾದ ಯುವತಿ ಅಫ್ನಾನ್(23) ಬೆಂಗಳೂರು ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ರಾತ್ರಿಯಷ್ಟೇ ರಜೆಯಲ್ಲಿ ಉಡುಪಿಗೆ ಬಂದಿದ್ದರು. ಮನೆಯ ಯಜಮಾನ ನೂರ್ ಮಹಮ್ಮದ್ ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿದ್ದಾರೆ. ತಾಯಿ ಹಸೀನಾ(46)ಗೃಹಿಣಿಯಾಗಿದ್ದರು. ಅಯ್ನಾಝ್(21) ಲಾಜಿಸ್ಟಿಕ್ಸ್ ಸಂಸ್ಥೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು, ಆಸಿಂ(12) ಉಡುಪಿಯಲ್ಲಿ 8ನೇ ತರಗತಿ ಓದುತ್ತಿದ್ದ.
ಏಕಾಏಕಿ ಮನೆಗೆ ನುಗ್ಗಿ ಮಾತಿನ ಚಕಮಕಿ ನಡೆಸಿದ ದುಷ್ಕರ್ಮಿ ಹಸೀನಾ, ಅಫ್ನಾನ್,ಅಯ್ನಾಝ್ ಗೆ ಮೊದಲು ಇರಿದಿದ್ದಾನೆ. ಬೊಬ್ಬೆ ಕೇಳಿ ಆಟವಾಡುತ್ತಿದ್ದ ಆಸೀಮ್ ಒಳ ಬರುತ್ತಿದ್ದಂತೆ ಆತನನ್ನೂ ಇರಿದು ಕೊಲ್ಲಲಾಗಿದೆ. ಸ್ಥಳಕ್ಕೆ ಬಂದ ಪಕ್ಕದ ಮನೆ ಯುವತಿಯನ್ನೂ ಬೆದರಿಸಿದ ದುಷ್ಕರ್ಮಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮನೆಯೊಳಗಿದ್ದ ಅತ್ತೆಗೂ ತೀವ್ರ ತರದ ಗಾಯವಾಗಿದೆ. ಒಬ್ಬರ ಮೇಲೆ ದ್ವೇಷದಿಂದ ಸಾಕ್ಷ್ಯ ನಾಶ ಮಾಡಲು ಉಳಿದ ಮೂವರ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಲ್ಪೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದ್ದು, ಪೊಲೀಸರು ನಾಲ್ಕು ತಂಡಗಳು ಸಿಸಿಟಿವಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
Posted by Vidyamaana on 2023-03-17 16:44:03 |
ಪುತ್ತೂರು: ಅಝಾನ್ ಕುರಿತು ಅವಹೇಳನವಾಗಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಹಾಗೂ ಬಿಜೆಪಿ ಪಕ್ಷದ ವಿರುದ್ಧ ಎಸ್ಡಿಪಿಐ ವತಿಯಿಂದ ಪ್ರತಿಭಟನೆ ಶುಕ್ರವಾರ ಸಂಜೆ ತಾಲೂಕು ಆಡಳಿತ ಸೌಧದ ಬಳಿಯ ಅಮರ್ ಜವಾನ್ ಸ್ಮಾರಕದ ಬಳಿ ನಡೆಯಿತು.
ಎಸ್ಡಿಪಿಐ ಜಿಲ್ಲಾ ಉಪಾಧ್ಯಕ್ಷ ವಿಕ್ಟರ್ ಮಾರ್ಟಿನ್ ಮಾತನಾಡಿ, ಎಸ್ಡಿಪಿಐ ಪಕ್ಷದವರಿಗೆ ಹಿಂದೂ, ಮುಸ್ಲಿಂ, ಬೌದ್ಧ, ಕ್ರಿಶ್ಚಿಯನ್ ಎಲ್ಲರೂ ಒಂದೇ. ನಮಗೇ ಬೇಕಾದ್ದು ಮನುಷ್ಯ ಜಾತಿ ಹೊರತು ಧರ್ಮ ಅಲ್ಲ. ಈ ನಿಟ್ಟಿನಲ್ಲಿ ಬಿಜೆಪಿಯವರು ದ್ವೇಷವನ್ನು ಬಿಟ್ಟುಬಿಡಿ ಎಂದು ಹೇಳಿದ ಅವರು, ಸಾರೆ ಜಹಾಂಸೆ ಅಚ್ಚಾ, ಕ್ವಿಟ್ ಇಂಡಿಯಾ ಮುಂತಾದ ನಾಮಾಂಕಿತವನ್ನು ನೀಡಿದ್ದು ಮುಸ್ಲಿಮರು. ಇಂತಹಾ ಮುಸ್ಲಿಮರು ಆರಾಧಿಸುವ ಅಲ್ಲಾಹುವಿನ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿಯ ಈಶ್ವರಪ್ಪ ಅವರ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಅವರ ವಿರುದ್ಧ ಸ್ವಯಂಪ್ರೇರಿತ ಕೇಸು ದಾಖಲಿಸುವಂತೆ ಒತ್ತಾಯಿಸಿದರು.
ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬಯ ಮಾತನಾಡಿ, ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ದೊಂಬಿ ಗಲಭೆಗಳು ಜಾಸ್ತಿಯಾಗಿದೆ. ಇದನ್ನು ಕಂಡು ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತಿದ್ದು, ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಇದೀಗ ಇಸ್ಲಾಂನ ಪವಿತ್ರ ಆರಾಧಕ ಅಲ್ಲಾಹು ಕುರಿತು ಅವಹೇಳನಕಾರಿಯಾಗಿ ಮಾತನಾಡಿದರೂ ಕೆ.ಎಸ್.ಈಶ್ವರಪ್ಪ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದ ಅವರು, ಸಂಘ ಪರಿವಾರವನ್ನು ಓಲೈಸಲು ಅವರ ಪರವಾಗಿ ಮಾತನಾಡಿದ ಯು.ಟಿ.ಖಾದರ್ ಮಾತಿನಲ್ಲಿ ಬಿಗಿ ಹಿಡಿದು ಮಾತಾಡಲಿ ಎಂದು ಎಚ್ಚರಿಕೆ ನೀಡಿದರು.
Posted by Vidyamaana on 2023-11-11 15:02:09 |
ಪುತ್ತೂರು: ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರದ ಕಛೇರಿಯ ಮುಂಭಾಗದಲ್ಲಿ ತಲ್ವಾರ್ನೊಂದಿಗೆ ಕಾರಿನಲ್ಲಿ ಬಂದ ತಂಡ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ.10ರಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ ಶಾಂತಿಗೋಡು ಗ್ರಾಮದ ದಿನೇಶ್ ಪಂಜಿಗ(38ವ), ನರಿಮೊಗರು ಗ್ರಾಮದ ಭವಿತ್(19ವ), ಬೊಳುವಾರು ನಿವಾಸಿ ಮನ್ವಿತ್(18ವ), ಚಿಕ್ಕಮುನ್ನೂರು ಗ್ರಾಮದ ಜಯಪ್ರಕಾಶ್(18ವ), ಚಿಕ್ಕಮುನ್ನೂರು ಗ್ರಾಮದ ಚರಣ್(23ವ), ಬನ್ನೂರು ಗ್ರಾಮದ ಮನೀಶ್(23ವ), ಕಸಬ ಗ್ರಾಮದ ವಿನೀತ್(19ವ) ಸಹಿತ ಇಬ್ಬರು ಅಪ್ರಾಪ್ತ ಪ್ರಾಯದ ಬಾಲಕರನ್ನು ಪೊಲಿಸರು ವಶಕ್ಕೆ ಪಡೆದು ಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು. ನ.11ರಂದು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ಅರೋಪಿಗಳಿಗೆ ನ.15ರ ತನಕ ನ್ಯಾಯಾಂಗ ಕಸ್ಟಡಿಗೆ ನೀಡಿದ್ದಾರೆ
Posted by Vidyamaana on 2024-07-12 16:53:27 |
ಬೆಂಗಳೂರು : ಕರ್ನಾಟಕ ಹೈಕೋರ್ಟ್ ನಿಂದ ಕನ್ನಡದ ಪವರ್ ಟಿವಿ ಪ್ರಸಾರ ಸ್ಥಗಿತಕ್ಕೆ ಆದೇಶಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಪವರ್ ಟಿವಿ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ಕೋರ್ಟ್ ನಿಂದ ಹೈಕೋರ್ಟ್ ನೀಡಿದ್ದಂತ ಪ್ರಸಾರ ಸ್ಥಗಿತದ ಆದೇಶಕ್ಕೆ ತಡೆ ನೀಡಿ, ಬಿಗ್ ರಿಲೀಫ್ ನೀಡಿದೆ
ಹಿಂದೆ ಪವರ್ ಟೀವಿ ಮೇಲೆ ಹೈಕೋರ್ಟ್ ಚಾಟಿ ಬೀಸಿತ್ತು. ಲೈಸೆನ್ಸ್ ರಿನಿವಲ್ ಮಾಡದ ಗಂಭೀರ ಆರೋಪದ ಹಿನ್ನಲೆಯಲ್ಲಿ ಪವರ್ ಟಿ ವಿ ಕಾರ್ಯ ಪ್ರಸಾರ ಚಟುವಟಿಕೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶ ಮಾಡಿತ್ತು.
ಕೇಬಲ್ ಟೆಲಿವಿಷನ್ ನೆಟ್ವರ್ಕ್ಗಳ (ನಿಯಂತ್ರಣ) ಕಾಯಿದೆ ಉಲ್ಲಂಘನೆ ಮಾಡಲಾಗಿದೆ. ತಕ್ಷಣದಿಂದಲೇ ಚಾನೆಲ್ನಲ್ಲಿ ಸುದ್ದಿಗಳು ಸೇರಿ ಯಾವುದೇ ಪ್ರಸಾರ ಮಾಡಬಾರದು ಅಂತ ಹೈಕೋರ್ಟ್ ನ್ಯಾಯಮೂರ್ತಿ. ಎಸ್ ಆರ್ ಕೃಷ್ಣಕುಮಾರ್ ರ ಏಕಸದಸ್ಯ ಪೀಠ ಆದೇಶ ಮಾಡಿದ್ದರು.
ಜೆಡಿಎಸ್ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್ ಎಂ ರಮೇಶ್ ಗೌಡರ ಪತ್ನಿ ಡಾ.ಎ ರಮ್ಯಾ ರಮೇಶ್ ಹಿರಿಯ ಐಪಿಎಸ್ ಅಧಿಕಾರಿ ಬಿ ಆರ್ ರವಿಕಾಂತೇಗೌಡ ಅರ್ಜಿಯನ್ನು ಹೈಕೋರ್ಟ್ ಗೆ ಸಲ್ಲಿಸಿದ್ದರು. ಅರ್ಜಿದಾರರ ಪರ ಪ್ರಭುಲಿಂಗ ನಾವದಗಿ, ಸಂದೇಶ್ ಚೌಟ ವಾದಿಸಿದ್ದರು.
Posted by Vidyamaana on 2023-07-08 12:48:10 |
ಪುತ್ತೂರು: ತುಂಬೆಯ ರಾಮಲ್ ಕಟ್ಟೆಯಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟ ಹನಾ ಅವರ ಮನೆಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಭೇಟಿ ನೀಡಿದರು.
ಕುಟುಂಬ ಸದಸ್ಯರೊಂದಿಗೆ ಮಾತನಾಡಿದ ಅವರು, ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಈ ಸಂದರ್ಭ ಪ್ರಸನ್ನ ರೈ ಸಿಝ್ಲರ್, ಮೃತ ಹನಾ ಅವರ ತಂದೆ ಮಜೀದ್ ಹಾಗೂ ಮನೆಯವರು ಉಪಸ್ಥಿತರಿದ್ದರು.
Posted by Vidyamaana on 2023-03-12 04:27:34 |
ಪುತ್ತೂರು : ತಾಲೂಕಿನ ನರಿಮೊಗರು ಗ್ರಾಮದ ಮುಕ್ವೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು 5 ಲಕ್ಷ ರೂ. ದೇಣಿಗೆ ಚೆಕ್ ನ್ನು ಹಸ್ಥಾಂತರಿಸಿದರು.
ಶನಿವಾರ ಕ್ಷೇತ್ರಕ್ಕೆ ಭೇಟಿ ನೀಡಿದ ಮಜಲುಮಾರು ಮುಕ್ವೆ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ನ ಪದಾಧಿಕಾರಿಗಳಿಗೆ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಉಪಾಧ್ಯಕ್ಷ ಕೆ.ಯಂ.ಬೆಳಿಯಪ್ಪ ಗೌಡ ಕೆದ್ಕಾರ್, ಸದಸ್ಯರುಗಳಾದ ಗಣೇಶ್ ಭಟ್, ಯಂ.ರವಿ ಮಣಿಯ, ಕೆ.ಗಿರೀಶ್ ರೈ ಮಣಿಯ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಕೆಮ್ಮಿಂಜೆ ವಲಯಾಧ್ಯಕ್ಷ ಸುಂದರ ಬಲ್ಯಾಯ ಉಪಸ್ಥಿತರಿದ್ದರು.