Posted by vidyamaana on 2024-07-26 15:01:18 |
ಪುತ್ತೂರು: 33 ವರ್ಷಗಳ ಹಿಂದೆಯೇ ನಾಡಿನ ಶೈಕ್ಷಣಿಕ ಕ್ರಾಂತಿಗೆ ನಾಂದಿಯನ್ನು ಹಾಡಿದ ಬಾಸೆಲ್ ಮಿಷನ್ ಸಂಸ್ಥೆಯ ಮೂಲದಿಂದ ಸುದಾನ ವಿದ್ಯಾಸಂಸ್ಥೆಗಳ ಉದಯವಾಗಿದ್ದು ಇದೀಗ ವಿಸ್ತರಿತ ಶೈಕ್ಷಣಿಕ ಸೇವೆಯಲ್ಲೊಂದು ಹೊಸ ಹೆಜ್ಜೆಯನ್ನಿರಿಸಿದ ಸುದಾನ ಸಮೂಹ ಶಿಕ್ಷಣ ಸಂಸ್ಥೆಯು ಸುದಾನ ಕ್ಯಾಂಪಸ್ಸಿನಲ್ಲಿ ಸುಧಾನ ಪದವಿ ಪೂರ್ವ ಕಾಲೇಜ್ ಅನ್ನು ಪ್ರಾರಂಭಿಸಿದೆ. ಇದರ ಉದ್ಘಾಟನಾ ಕಾರ್ಯಕ್ರಮವು ಜು.27 ರಂದು ಸಂಸ್ಥೆಯ ಸುದಾನ ಎಡ್ವರ್ಡ್ ಸಭಾಂಗಣದಲ್ಲಿ ಜರಗಲಿದೆ.
ನೂತನ ಸುದಾನ ಪದವಿ ಪೂರ್ವ ಕಾಲೇಜ್ ಅನ್ನು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ರವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಮಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಯಣ್ಣರವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸುದಾನ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಕೇಂದ್ರದ ಅಧ್ಯಕ್ಷ ರೆ.ವಿಜಯ ಹಾರ್ವಿನ್ರವರು ವಹಿಸಿಕೊಳ್ಳಲಿದ್ದಾರೆ.
ಗೌರವ ಅತಿಥಿಗಳಾಗಿ ಪ್ರತ್ತೂರಿನ ಮಾಜಿ ಶಾಸಕರಾದ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ, ಸಂಜೀವ ಮಠಂದೂರು, ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್, ಸವಣೂರು ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ಸುದಾನ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಕೋಶಾಧಿಕಾರಿ ಆಸ್ಕರ್ ಆನಂದ್, ಸುದಾನ ಪದವಿ ಪೂರ್ವ ಕಾಲೇಜಿನ ಪ್ರಾಯಪಾಲ ಸುಪ್ರೀತ್ ಕೆ.ಸಿರವರು ಉಪಸ್ಥಿತರಿರಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಗೌರವ ಅತಿಥಿಗಳಾಗಿ ಪ್ರತ್ತೂರಿನ ಮಾಜಿ ಶಾಸಕರಾದ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ, ಸಂಜೀವ ಮಠಂದೂರು, ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್, ಸವಣೂರು ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ಸುದಾನ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಕೋಶಾಧಿಕಾರಿ ಆಸ್ಕರ್ ಆನಂದ್, ಸುದಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಪ್ರೀತ್ ಕೆ.ಸಿರವರು ಉಪಸ್ಥಿತರಿರಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
Posted by Vidyamaana on 2023-12-29 21:33:56 |
ಪುತ್ತೂರು :ಅಕ್ರಮವಾಗಿ ತಿಮಿಂಗಿಲದ ವಾಂತಿಯನ್ನು (ಅಂಬರ್ ಗ್ರೀಸ್) ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಎಂಬ ಪ್ರಕರಣದ ಆರೋಪಿ ಎನ್ನಲಾಗಿದ್ದ ಅಬೂಬಕ್ಕರ್ ಸಿದ್ದೀಕ್ ರವರಿಗೆ ಪುತ್ತೂರು ಹಿರಿಯ ವ್ಯವಹಾರಿಕ ನ್ಯಾಯಾಧೀಶರಾದ ಗೌಡ ಆರ್. ಪಿ ಅವರು ಜಾಮೀನು ಮಂಜೂರು ಮಾಡಿದ್ದಾರೆ.
ಪೋಲೀಸ್ ಸಿ.ಐ ಡಿ ಅರಣ್ಯ ಸಂಚಾರಿ ದಳ ಮಂಗಳೂರು ರವರು ತಮಗೆ ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ ದಿನಾಂಕ 19 /12/2023 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುತ್ತೂರು ನಗರದ ಕೋರ್ಟ್ ರಸ್ತೆ ಬಳಿ ಅಂದರೆ ಪುತ್ತೂರು ಕೋರ್ಟ್ ನಿಂದ ಪುತ್ತೂರು ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣದ ಕಡೆಗೆ ಹೋಗುವ ಸಾರ್ವಜನಿಕರ ರಸ್ತೆಯಲ್ಲಿ ಸರ್ಕಾರದ ಪರವಾನಿಗೆ ಇಲ್ಲದೆ ಅಕ್ರಮವಾಗಿ K A.21 Z 3733 ನೇ ಮಾರುತಿ ಸುಜುಕಿ ಕಾರಿನಲ್ಲಿ ಅಕ್ರಮವಾಗಿ ಸುಮಾರು 3.5 ಕಿಲೋ ತೂಕದ ಕೋಟ್ಯಾಂತರ ಮೌಲ್ಯದ ಅಂಬರ್ ಗ್ರೀಸ್ (ತಿಮಿಂಗಿಲ ವಾಂತಿ) ಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಿ ಹಾಗೂ ಕಾರನ್ನು ಮತ್ತು ಸೊತ್ತುಗಳನ್ನು ಪಂಚರ ಸಮಕ್ಷಮ ಮಹಜಾರು ಮೂಲಕ ವಶಪಡಿಸಿಕೊಂಡಿದ್ದು, ಆರೋಪಿಯ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ತದನಂತರ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿದಿಸಿತ್ತು. ಆರೋಪಿ ಅಬೂಬಕ್ಕರ್ ಸಿದ್ದೀಕ್ ತನ್ನ ಪರ ವಕೀಲರಾದ ಶ್ರೀ ಮಹೇಶ್ ಕಜೆಯವರ ಮುಖಾಂತರ ಮಾನ್ಯ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರು ಆರೋಪಿ ಪರ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಅಕ್ಷೇಪವನ್ನು ಸಲ್ಲಿಸಿದ್ದರು. ವಾದ ವಿವಾದವನ್ನು ಆಲಿಸಿದ ಪುತ್ತೂರಿನ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯವು ಆರೋಪಿಗೆ ಶರ್ತಬದ್ಧ ಜಾಮೀನು ಮಂಜೂರು ಮಾಡಿದೆ.
Posted by Vidyamaana on 2023-05-31 03:52:36 |
ಮಂಗಳೂರು : ಬಿಹಾರದಲ್ಲಿ ಪ್ರಧಾನಿ ಮೋದಿ ಮೇಲೆ ದಾಳಿಗೆ ಸಂಚು ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್ ಐಎ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಉಪ್ಪಿಂನಗಡಿ, ವೇಣೂರು ಸೇರಿದಂತೆ 16 ಕಡೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಲವರ ಮನೆ, ಕಚೇರಿ, ಆಸ್ಪತ್ರೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿರುವ ಎನ್ ಐಎ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.
Posted by Vidyamaana on 2024-03-15 19:56:14 |
ಹಾವೇರಿ: ಮಾಜಿ ಸಿಎಂ, ಶಾಸಕ, ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿದಂತೆ ಗದ್ದಲ ಗಲಾಟೆ ನಡೆದ ಘಟನೆ ಶುಕ್ರವಾರ ನಡೆದಿದೆ.
ಕಚೇರಿಗೆ ಬೊಮ್ಮಾಯಿ ಅವರು ಆಗಮಿಸುತ್ತಿದ್ದಂತೆ ಕಾರ್ಯಕರ್ತರ ಹೈ ಡ್ರಾಮಾ ನಡೆಸಿದ್ದಾರೆ.ಹಾವೇರಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಅವರನ್ನು ಎಳೆದಾಡಿ ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿ ಗ್ರಾಮೀಣ ಭಾಗದ ಅಧ್ಯಕ್ಷರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ನಗರ ಕಾರ್ಯಕರ್ತರನ್ನ ಗ್ರಾಮೀಣ ಭಾಗದ ಅಧ್ಯಕ್ಷರಾಗಿ ಮಾಡಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ.
ಈ ವೇಳೆ ಬೊಮ್ಮಾಯಿ ಅವರು ಎಲ್ಲ ಸರಿ ಮಾಡುತ್ತೇನೆ, ಕಾರ್ಯಕರ್ತರು ಒಗಟ್ಟು ಪ್ರದರ್ಶಿಸಿ. ಚುನಾವಣೆ ಹತ್ತಿರ ಇದೆ ಗಲಾಟೆ ಸರಿಯಲ್ಲ ಎಂದು ಕಾರ್ಯಕರ್ತರಿಗೆ ಮನವಿ ಮಾಡಿ ಕಾರ್ಯಕ್ರಮ ಮೊಟಕುಗೊಳಿಸಿ ಕಚೇರಿಯಿಂದ ಹೊರನಡೆದಿದ್ದಾರೆ.
Posted by Vidyamaana on 2024-01-10 07:29:51 |
ಉಡುಪಿ: ಮಂಗಳೂರಿನ ಹೆಸರಾಂತ ಹೋಟೆಲ್ ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮ್ಯಾನೇಜರ್ ಸೋಮವಾರ ರಾತ್ರಿ ನಿಧನ ಹೊಂದಿದ್ದಾರೆ.
ಆತ್ರಾಡಿ ಪರೀಕ ನಿವಾಸಿ ಮಹೇಶ ಶೆಟ್ಟಿ(28) ಜ.8ರಂದು ನಿಧನ ಹೊಂದಿದ್ದು, ಮೃತರು ತಂದೆ, ತಾಯಿ, ಸಹೋದರ, ಸಹೋದರಿಯನ್ನುಅಗಲಿದ್ದಾರೆ.
ಇತ್ತೀಚೆಗಷ್ಟೇ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿದ್ದ ಅವರು ಬಳಿಕ ಉಡುಪಿ, ಮಂಗಳೂರಿನಲ್ಲಿ ಹೋಟೆಲ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇವರು ಈ ಹಿಂದೆ ಆತ್ರಾಡಿಯಲ್ಲಿ ಡ್ಯಾನ್ಸ್ ಕ್ರಿವ್ ನೃತ್ಯ ತರಬೇತಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದರು. ಮತ್ತೆ ಸಂಸ್ಥೆಯನ್ನು ಮುಂದುವರಿಸಬೇಕೆಂಬ ಇಚ್ಚೆಯನ್ನೂ ಹೊಂದಿದ್ದರು ಎನ್ನಲಾಗಿದೆ.
Posted by Vidyamaana on 2024-07-18 15:09:09 |
ಕಣ್ಣೂರು: ಕಾಂಪೌಂಡ್ ಗೋಡೆ ರಸ್ತೆಗೆ ಕುಸಿದ ಪರಿಣಾಮ ಪಾದಚಾರಿ ವಿದ್ಯಾರ್ಥಿನಿಯೊಬ್ಬಳು ಅಪಾಯದಿಂದ ಪಾರಾಗಿರುವ ಘಟನೆ ಕೇರಳ ಕಣ್ಣೂರಿನ ಅಂಜರಕಂಡಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Posted by Vidyamaana on 2023-05-24 08:40:50 |
ಪುತ್ತೂರು: ಗುಜುರಿ ಹೆಕ್ಕಿ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರು ಮಲಗಿದ ಸ್ಥಿತಿಯಲ್ಲೇ ಮೃತಪಟ್ಟಿರುವ ಘಟನೆ ಕಲ್ಲಾರೆಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಉಪ್ಪಿನಂಗಡಿ ಮೂಲದ ಮಂಜುನಾಥ್ ಎಂದು ಗುರುತಿಸಲಾಗಿದ್ದು ಇಲ್ಲಿನ ನವಾಜ್ ಕಾಂಪ್ಲೆಕ್ಸ್ ಹಿಂಭಾಗ ಮಂಜುನಾಥ್ ಮೃತದೇಹ ಪತ್ತೆಯಾಗಿದೆ.
ಪ್ರತೀನಿತ್ಯ ನಗರದ ವಿವಿಧ ಕಡೆಗಳಲ್ಲಿ ಗುಜುರಿ ಹೆಕ್ಕಿ ಜೀವನ ಸಾಗಿಸುತ್ತಿದ್ದ ಮಂಜುನಾಥ್ ಬಳಿಕ ಪ್ರತೀದಿನ ಈ ಕಟ್ಟಡದ ಬಳಿಯಲ್ಲೇ ಮಲಗುತ್ತಿದ್ದರು. ನಿರುಪದ್ರವಿಯಾಗಿ ತಮ್ಮ ಪಾಡಿಗೆ ತಾವು ಗುಜುರಿ ಹೆಕ್ಕಿಕೊಂಡು ಜೀವನ ಸಾಗಿಸುತ್ತಿದ್ದ ಮಂಜುನಾಥ್ ಇದೀಗ ಯಾರಿಗೂ ತೊಂದರೆ ಕೊಡದ ಸ್ಥಿತಿಯಲ್ಲಿ ಮಲಗಿದಲ್ಲೇ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದಿದರು.