Posted by vidyamaana on 2024-07-24 19:54:18 |
ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಇದೀಗ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಲಾರಿ ಚಾಲಕ ಅರ್ಜುನ ಇನ್ನೂ ಪತ್ತೆ ಆಗಿರದ ಕಾರಣ ಶೋಧ ಕಾರ್ಯ ಮುಂದುವರೆದಿದೆ.
ಕಳೆದ 8 ದಿನಗಳಿಂದ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಎನ್ ಡಿ ಆರ್ ಎಫ್ ಎಚ್ ಡಿ ಆರ್ ಎಫ್ ತಂಡ ಸೇರಿದಂತೆ ಮಿಲ್ಟ್ರಿ ತಂಡ ಕೂಡ ಮಣ್ಣು ತೆರವು ಕಾರ್ಯಾಚರಣೆಗೆ ಆಗಮಿಸಿತ್ತು. ಈ ವೇಳೆ ನಿನ್ನೆಯವರೆಗೆ 8 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಇನ್ನೂ ಹಲವರು ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ. ಟಿಂಬರ್ ಲಾರಿ ನದಿಯಲ್ಲಿ ಪತ್ತೆ ಆಗಿರುವ ಸ್ಥಿತಿಯಲ್ಲಿ ಇದೆ.ಕೇರಳ ಮೂಲದ ಲಾರಿ ನದಿಯಲ್ಲಿ ಇದೀಗ ಪತ್ತೆಯಾಗಿದೆ. ಲಾರಿ ಜೊತೆಗೆ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಲಾರಿ ಪತ್ತೆಯಾದ ಸ್ಥಳಕ್ಕೆ ಡಿಸಿ ಲಕ್ಷ್ಮಿಪ್ರಿಯ ಭೇಟಿ ನೀಡಿದ್ದಾರೆ. ಕಾರವಾರದ ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣದ ಬಗ್ಗೆ ಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ
Posted by Vidyamaana on 2023-03-10 16:52:56 |
ಸುಬ್ರಹ್ಮಣ್ಯ : ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಲಬಾರ್ ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟು, ಮತ್ತೋರ್ವ ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಸುಬ್ರಹ್ಮಣ್ಯದಲ್ಲಿ ನಡೆದಿದೆ.ಮೃತ ವ್ಯಕ್ತಿಯನ್ನು ಸುಬ್ರಹ್ಮಣ್ಯ ನಿವಾಸಿ ಪ್ರಶಾಂತ್ ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯದ ಇಂಜಾಡಿ ಸಮೀಪ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡ ಪ್ರಶಾಂತ್ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಗಾಯಾಳುವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
Posted by Vidyamaana on 2023-08-29 07:34:23 |
ಪುತ್ತೂರು: ತೆಂಗು ಕೃಷಿಯನ್ನು ವೈಜ್ಞಾನಿಕ ಪದ್ಧತಿಯಲ್ಲಿ ನಡೆಸಿದಾಗ ಅಧಿಕ ಇಳುವರಿ ಪಡೆಯಲು ಸಾಧ್ಯ. ಉಪಬೆಳೆ ಎನ್ನುವ ಮನಸ್ಥಿತಿಯಿಂದ ಹೊರಬರಬೇಕು ಎಂದು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ.ರಶ್ಮಿ ಆರ್. ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ತೆಂಗು ಉತ್ಪಾದಕರ ಕಂಪನಿ ಮತ್ತು ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ಜಂಟಿ ಸಹಯೋಗದಲ್ಲಿ ಆ. 28ರಂದು ಜೈನ ಭವನದಲ್ಲಿ ನಡೆದ ಉಚಿತ ಕೃಷಿ ಮಾಹಿತಿ ಕಾರ್ಯಾಗಾರ ಮತ್ತು ಶೇರು ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ತೆಂಗಿಗೆ ವಿಶೇಷ ಆಶಕ್ತಿ ನೀಡದೇ ಇರುವುದರಿಂದ ಇಂದು ಇಳುವರಿ ಕಡಿಮೆಯಾಗಿದೆ. ಜೊತೆಗೆ ಸಮಗ್ರ ಪೋಷಕಾಂಶಗಳ ಕೊರತೆಯಿಂದ ನುಸಿ ರೋಗಗಳಂತ ಕಾಯಿಲೆಗಳು ಬಾಧಿಸುತ್ತಿವೆ. ಆದ್ದರಿಂದ ಕರಾವಳಿಯ ಈ ಭಾಗದಲ್ಲಿ ಮಣ್ಣಿಗೆ ಆವಶ್ಯಕವಾದ ಸಾರಜನಕ, ರಂಜಕ, ಪೊಟ್ಯಾಶ್ಗಳಂತ ಪ್ರಧಾನ ಪೋಷಕಾಂಶ ನೀಡಬೇಕು. ಮಣ್ಣು ಪರೀಕ್ಷೆಯೂ ಅಗತ್ಯವಾಗಿದ್ದು, ಕನಿಷ್ಠ 2 ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡುವ ಸಂಪ್ರದಾಯ ರೂಢಿಸಿಕೊಳ್ಳಬೇಕು. ಹೀಗೆ ಪ್ರತಿ ಹಂತದಲ್ಲೂ ತೆಂಗಿಗೆ ವಿಶೇಷ ಆಸಕ್ತಿ ವಹಿಸಿ ಕೆಲಸ ಮಾಡಿದಾಗ ಪ್ರಧಾನ ಬೆಳೆಯಾಗಿ, ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದರು.
ಬೆಂಬಲ ಬೆಲೆಗೆ ಆಗ್ರಹಿಸಿ ಅ. 2ರಂದು ರಾಜಭವನ ಚಲೋ: ರವಿಕಿರಣ್ ಪುಣಚ
ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ತೆಂಗಿನಕಾಯಿಯ ಮೌಲ್ಯವರ್ಧನೆಯ ಗುಟ್ಟು ಎಲ್ಲರಿಗೂ ತಿಳಿದಿದೆ. ಆದರೆ ಇದರಿಂದ ಎಷ್ಟು ಆದಾಯ ಬರಬಹುದು ಎನ್ನುವ ಆಲೋಚನೆ ಯಾರಿಗೂ ಇಲ್ಲ. ಒಂದು ಮರದಿಂದ 3 ಸಾವಿರ ರೂ.ದಿಂದ 5 ಸಾವಿರ ರೂ.ವರೆಗೆ ಆದಾಯ ಪಡೆಯಬಹುದು. ಆದ್ದರಿಂದ ರೈತರು ಈ ದಿಶೆಯಲ್ಲಿ ಆಲೋಚನೆ ಮಾಡಬೇಕು. ಇಷ್ಟೆಲ್ಲಾ ಇದ್ದರೂ, ರಾಜಕೀಯದ ಇಚ್ಚಾಶಕ್ತಿಯ ಕೊರತೆಯಿಂದಾಗಿ ತೆಂಗಿನಕಾಯಿಯನ್ನು ಖರೀದಿಸಲು ಸರಕಾರಿ ವ್ಯವಸ್ಥೆಗಳು ಇಲ್ಲ ಎನ್ನುವುದು ಬೇಸರದ ಸಂಗತಿ. ಆದ್ದರಿಂದ ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 20 ಸಾವಿರ ರೂ. ಬೆಂಬಲ ಬೆಲೆಯನ್ನು ಕೇಂದ್ರ ಸರಕಾರ ನಿಗದಿಪಡಿಸಬೇಕು ಹಾಗೂ ರಾಜ್ಯ ಸರಕಾರ 5 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು ಎಂಬ ಆಗ್ರಹವನ್ನು ಮುಂದಿಟ್ಟುಕೊಂಡು ಅಕ್ಟೋಬರ್ 2ರಂದು ತಿಪಟೂರಿನಿಂದ ರಾಜಭವನ ಚಲೋ ಪಾದಯಾತ್ರೆ ನಡೆಯಲಿದೆ. ಅಕ್ಟೋಬರ್ 9ರಂದು ಫ್ರೀಡಂ ಪಾರ್ಕಿನಲ್ಲಿ ಬೃಹತ್ ಕಲ್ಮಿನೇಷನ್ ನಡೆಯಲಿದೆ ಎಂದರು.
ರೈತರೇ ವಿಜ್ಞಾನಿಗಳಾಗಬೇಕು: ಕಡಮಜಲು ಸುಭಾಷ್ ರೈ
ವಿಜಯ ಕರ್ನಾಟಕ ಸೂಪರ್ ಸ್ಟಾರ್ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಸ್ ರೈ ಮಾತನಾಡಿ, ಉಪಬೆಳೆಯಾಗಿರುವ ತೆಂಗಿಗೆ ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳಬೇಕು. ಇದರಿಂದ ಅಧಿಕ ಲಾಭ ಗಳಿಸಲು ಸಾಧ್ಯ. ಬದುಕಿಗೆ ಪೂರಕವಾಗಿ ಸಮಗ್ರ ಕೃಷಿ ಮಾಡಿದಾಗ ಆರ್ಥಿಕ ಅಭಿವೃದ್ಧಿ ಸಾಧ್ಯ. ಇದಕ್ಕಾಗಿ ಲ್ಯಾಬಿನಲ್ಲಿ ಆಗುವ ಪ್ರಯೋಗಗಳನ್ನು ಮಣ್ಣಿಗೆ ತರುವ ಕೆಲಸ ಆಗಬೇಕು. ಈ ಕೆಲಸವನ್ನು ಕೃಷಿಕರೇ ಮಾಡಬೇಕಾಗಿದೆ ಎಂದರು.
ಕ್ಷಿಪ್ರಸಾಲಕ್ಕಾಗಿ ಒಡಂಬಡಿಕೆ: ಪೂರ್ಣಿಮಾ ಎನ್.
ಮಾನಸಗಂಗಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಎನ್. ಮಾತನಾಡಿ, ರೈತರಿಗೆ ಅಗತ್ಯವಿರುವ ಕೃಷಿ ಸಲಕರಣೆ, ರಸಗೊಬ್ಬರಗಳನ್ನು ಪೂರೈಸುವ ದೃಷ್ಟಿಯಿಂದ ಕ್ಷಿಪ್ರ ಗತಿಯಲ್ಲಿ ಸಾಲ ಸೌಲಭ್ಯ ನೀಡಲು ನಮ್ಮ ಸಂಘ ಮುಂದೆ ಬಂದಿದೆ. ಈ ನಿಟ್ಟಿನಲ್ಲಿ ತೆಂಗು ಉತ್ಪಾದಕರ ಕಂಪೆನಿ ಹಾಗೂ ಮಾನಸಗಂಗಾಗ ಸಹಕಾರ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿದೆ ಎಂದರು.
ಗಣೇಶ ಚತುರ್ಥಿ ಬಳಿಕ ತೆಂಗು ಖರೀದಿ: ಕುಸುಮಾಧರ ಎಸ್.ಕೆ.
ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ತೆಂಗು ಉತ್ಪಾದಕರ ಕಂಪನಿ ಅಧ್ಯಕ್ಷ ಕುಸುಮಾಧರ ಎಸ್.ಕೆ. ಮಾತನಾಡಿ, ತೆಂಗಿಗೆ ಮೌಲ್ಯವರ್ಧನೆ ಮಾಡಿ, ಉತ್ತಮ ಬೆಲೆ ಒದಗಿಸುವುದೇ ನಮ್ಮ ಉದ್ದೇಶ. ಇದಕ್ಕಾಗಿ ಬೇರೆ ಬೇರೆ ಯೋಜನೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಕಲ್ಪರಸ ಯೋಜನೆಯ ಜಾರಿಗಾಗಿ ದೊಡ್ಡತೋಟದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಗಣೇಶ ಚತುರ್ಥಿ ಬಳಿಕ ಅಲ್ಲಿ ತೆಂಗಿನಕಾಯಿ ಖರೀದಿಸಲಾಗುವುದು. ತೆಂಗಿನಕಾಯಿ ಕೀಳಲು ಜನರ ಸಮಸ್ಯೆ ಇದೆ ಎನ್ನುವ ಕಾರಣಕ್ಕಾಗಿ, ಟೋಲ್ ಫ್ರೀ ಸಹಾಯವಾಣಿಯನ್ನು ನೀಡಲಾಗಿದೆ. ಸದಸ್ಯರ ಉತ್ತಮ ಯೋಜನೆಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ 100 ಕೋಟಿ ರೂ.ವರೆಗೆ ಸಾಲ ಒದಗಿಸುವ ಯೋಜನೆಯೂ ಇದೆ. ಮಾತ್ರವಲ್ಲ, ಕಲ್ಪ ಸಮೃದ್ಧಿ ಯೋಜನೆಯಡಿ ಠೇವಣಿ ಇಟ್ಟರೆ ಶೇ. 12ರವರೆಗೆ ಬಡ್ಡಿ ನೀಡಲಾಗುವುದು ಎಂದು ಮಾಹಿತಿ ನೀಡಿದ ಅವರು, ಸಂಸ್ಥೆ ಪ್ರಾರಂಭಗೊಂಡು 2 ವರ್ಷ ಪೂರೈಸಿದೆ. ಈ 2 ವರ್ಷದಲ್ಲಿ 14 ಸಾವಿರ ರೈತರನ್ನು ಹೊಂದಿದ್ದು, ದೇಶದಲ್ಲೇ ಪ್ರಥಮ ಸಂಸ್ಥೆ ಎನ್ನುವ ಹಿರಿಮೆಗೂ ಪಾತ್ರವಾಗಿದೆ ಎಂದರು.
ನಿರ್ದೇಶಕಿ ಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯ ರೈತರಾದ ಎ. ಜತೀಂದ್ರ ಶೆಟ್ಟಿ, ಜಗನ್ನಾಥ ರೈ ಡಿ, ಐತ್ತಪ್ಪ ನಾಯ್ಕ್, ಆಯಿಷಾ, ದುಗ್ಗಪ್ಪ ಗೌಡ, ಐತ್ತಪ್ಪ ರೈ ಅವರಿಗೆ ಇದೇ ಸಂದರ್ಭ ಶೇರು ಪ್ರಮಾಣ ಪತ್ರ ವಿತರಿಸಲಾಯಿತು.
ನಿಶ್ಮಿತಾ ಪ್ರಾರ್ಥಿಸಿದರು. ನಿರ್ದೇಶಕ ಗಿರಿಧರ್ ಸ್ವಾಗತಿಸಿದರು. ನಿರ್ದೇಶಕಿ ಲತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಳ್ಯ ಕಚೇರಿ ಮೇಲ್ವಿಚಾರಕಿ ಅಪರ್ಣಾ ವಂದಿಸಿದರು. ಡಾ.ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು.
Posted by Vidyamaana on 2024-04-09 17:32:02 |
ಉಡುಪಿ, ಎ.9: ಬಿಜೆಪಿ ಯುವಮೋರ್ಚಾ ಮುಖಂಡನ ಮನೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದು ಲಕ್ಷಾಂತರ ರೂ. ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಮಂಗಳೂರು ಮತ್ತು ಉಡುಪಿ ಅಬಕಾರಿ ವಿಭಾಗದ ಆಯುಕ್ತರ ಸೂಚನೆಯಂತೆ ಪೊಲೀಸ್ ಸಿಬಂದಿ ದಾಳಿ ನಡೆಸಿದ್ದಾರೆ. ನಿನ್ನೆ ರಾತ್ರಿ ಬ್ರಹ್ಮಾವರ ಇಂದಿರಾ ನಗರದಲ್ಲಿರುವ ರಮೇಶ ಪ್ರಭು ಎಂಬವರ ಮನೆಗೆ ದಾಳಿ ನಡೆಸಲಾಗಿದ್ದು ಮನೆಯಲ್ಲಿ ಕೂಡಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.
Posted by Vidyamaana on 2023-09-13 20:30:37 |
ಪುತ್ತೂರು: ರಾಷ್ಟ್ರೀಯ ವಿಚಾರಧಾರೆಗಳಲ್ಲಿ ಬಿಜೆಪಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿರ್ಲಕ್ಷಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಡಾ. ನವೀನ್ ಹೇಳಿದರು.
ಪುತ್ತೂರು ಅಮರ ಜವಾನ್ ಸ್ಮಾರಕದ ಬಳಿ ಬುಧವಾರ ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕೃಷಿ ಹಾಗೂ ಕೃಷಿ ಕ್ಷೇತ್ರಕ್ಕೆ 1.50 ಲಕ್ಷ ಕೋಟಿ ರೂಪಾಯಿಯನ್ನು ಬಿಜೆಪಿ ಸರ್ಕಾರ ನೀಡಿದೆ. ಇಂತಹ ಕೊಡುಗೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿಲ್ಲ. ಎಲ್ಲಾ ರೀತಿಯಲ್ಲೂ ರೈತರನ್ನು ವಿರೋಧಿಸುವ ಕಾರ್ಯವನ್ನೇ ಮಾಡುತ್ತಿದ್ದು, ಬರವನ್ನು ನಿಭಾಯಿಸುವ ಸಾಮಾನ್ಯ ಜ್ಞಾನವೂ ಇಲ್ಲದಂತಾಗಿದೆ ಎಂದು ಕುಟುಕಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು, ರೈತ ವಿರೋಧಿ ನೀತಿಯನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ 312 ತಾಲೂಕುಗಳಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ರಾಜ್ಯದ ಸುಮಾರು 190 ತಾಲೂಕುಗಳು ಬರಪೀಡಿತವಾಗಿದೆ. ಬರ ಪೀಡಿತ ಪ್ರದೇಶಗಳ ಅಧ್ಯಯನವನ್ನು ಮಾಡಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಿಂದ ಹೊರ ಬರುತ್ತಿಲ್ಲ. ತನ್ನ ಹುದ್ದೆಯ ನಾಲ್ಕು ಕಾಲುಗಳು ಯಾವಾಗ ಅಲುಗಾಡುತ್ತದೋ ಎಂದು ತಿಳಿಯದೆ, ಮುಖ್ಯಮಂತ್ರಿಗಳು ಕುರ್ಚಿ ಬಿಟ್ಟು ಏಳುತ್ತಿಲ್ಲ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬಂದ ಬಳಿಕ ಇದುವರೆಗೆ ದಿನಕ್ಕೆ ಇಬ್ಬರಂತೆ 170 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಗಂಭೀರ ವಿಚಾರವನ್ನು ಸರ್ಕಾರ ಗಣನೆಗೇ ತೆಗೆದುಕೊಂಡಿರದೇ ಇರುವುದು ವಿಪರ್ಯಾಸ. ವಿದ್ಯುತ್ ಖರೀದಿಯಿಂದ ರಾಜ್ಯ ಸರ್ಕಾರದ ಭ್ರಷ್ಟಾಚಾರ ಪ್ರಾರಂಭವಾಗಿದೆ. ರೈತರ ಕೃಷಿ ಸಾಲಗಳ ಬಗ್ಗೆ ಮಾಡಿದ ಘೋಷಣೆ ಇನ್ನೂ ಜಾರಿಯಾಗಿಲ್ಲ. ಕರ್ನಾಟಕ ಜನರನ್ನು ಕತ್ತಲೆಯಲ್ಲಿ ಹಾಕಿದ ಕಾಂಗ್ರೆಸ್ ಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಜನರಿಗೂ ಈಗ ಮನವರಿಕೆ ಆಗುತ್ತಿದೆ – ಕಾಂಗ್ರೆಸ್ ಅಂದರೆ ಬರ, ಬಿಜೆಪಿ ಅಂದರೆ ಸಮೃದ್ಧಿ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಮುಖಂಡರಾದ ಆಶಾ ತಿಮ್ಮಪ್ಪ ಗೌಡ, ಪಿ.ಜಿ. ಜಗನ್ನಿವಾಸ ರಾವ್, ಚನಿಲ ತಿಮ್ಮಪ್ಪ ಶೆಟ್ಟಿ, ಆರ್.ಸಿ. ನಾರಾಯಣ, ಮಹೇಶ್ ಮೇನಾಲ ಮೊದಲಾದವರು ಉಪಸ್ಥಿತರಿದ್ದರು.
ಉಷಾ ಮುಳಿಯ ಪ್ರಾರ್ಥಿಸಿದರು. ರೈತ ಮೂರ್ಚಾ ಅಧ್ಯಕ್ಷ ಸುರೇಶ್ ಕಣ್ಣಾರಾಯ ಸ್ವಾಗತಿಸಿದರು. ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.
Posted by Vidyamaana on 2023-10-20 20:47:53 |
ಮಂಗಳೂರು ಮೂಲದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ನಿರ್ಮಾಪಕ ರಾಜ್ ಕುಂದ್ರಾ ಸೋಷಿಯಲ್ ಮೀಡಿಯಾದಲ್ಲಿ ಬ್ರೇಕ್ ಸ್ಟೋರಿ ಹಾಕುವುದರ ಮೂಲಕ ಶಾಕ್ ನೀಡಿದ್ದರು. ‘ನಾವು ಬೇರ್ಪಟ್ಟಿದ್ದೇವೆ. ಕಷ್ಟದ ಈ ಸಮಯದಲ್ಲಿ ನೀವು ನಮಗಷ್ಟು ಸಮಯ ಕೊಡಿ’ ಎಂದು ಬರೆದುಕೊಂಡಿದ್ದರು. ಶಿಲ್ಪಾ ಶೆಟ್ಟಿ ಜೊತೆ ಡಿವೋರ್ಸ್ (Divorce) ಏನಾದರೂ ಆಯಿತಾ ಎಂದು ಅಭಿಮಾನಿಗಳು ಆತಂಕಗೊಂಡಿದ್ದರು. ಕೊನೆಗೂ ಅಸಲಿ ಕಾರಣವನ್ನು ರಾಜ್ ಕುಂದ್ರಾ ಹೊರ ಹಾಕಿದ್ದಾರೆ.ಕಳೆದ ಎರಡು ವರ್ಷಗಳಿಂದ ಅವರು ಮನೆಯಿಂದ ಆಚೆ ಕಾಲಿಡುವಾಗ ಫೇಸ್ ಮಾಸ್ಕ್ ಧರಿಸುತ್ತಿದ್ದರು. ಆ ಮಾಸ್ಕ್ ನಿಂದ ಮುಕ್ತಿ ಪಡೆದುಕೊಂಡಿದ್ದಾರೆ. ಆ ವಿಷಯವನ್ನು ಅವರು ಅನುಮಾನ ಬರುವ ರೀತಿಯಲ್ಲಿ ಬರೆದುಕೊಂಡಿದ್ದರು. ಆ ಬರಹ ಕಂಡು ಬಹಳಷ್ಟು ಜನ ಶಿಲ್ಪಾ ಶೆಟ್ಟಿ ಅವರಿಂದ ರಾಜ್ ಕುಂದ್ರಾ ದೂರವಾಗಿದ್ದಾರೆ ಎಂದೇ ತಿಳಿದುಕೊಂಡಿದ್ದರು. ಇದೀಗ ಎಲ್ಲದಕ್ಕೂ ರಾಜ್ ಕುಂದ್ರಾ ತೆರೆ ಎಳೆದಿದ್ದಾರೆ.
Posted by Vidyamaana on 2024-03-01 12:20:35 |
ಬೆಂಗಳೂರು : ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್ ಲೀಸ್ಗೆ ಪಡೆದಿದ್ದರು. ಮೂರು ತಿಂಗಳು ಕಳೆಯುತ್ತಿದ್ದಂತೆ ಅವ್ರಿಗೆ ಕಾದಿತ್ತು ಮುಂದೆ ಶಾಕ್. ಬಾಗಿಲಿಗೆ ಬಂದ ಬ್ಯಾಂಕಿ ನೋಟಿಸ್ ನೋಡಿ ಶಾಕ್ ಆಗಿದ್ರು.ಏಕಾಏಕಿ ಬ್ಯಾಂಕಿನವರು ಮನೆಗೆ ಬೀಗ ಜಡಿದಿದ್ದು, ಪ್ಲಾಟ್ ಲೀಸ್ಗೆ ಪಡೆದವರು ಅತ್ತ ಇರಲು ಮನೆ ಇಲ್ಲದೆ, ಇತ್ತ ಕೊಟ್ಟ ಹಣವು ಇಲ್ಲದ ಬೀದಿ ಪಾಲಾಗಿದ್ದಾರೆ.. ಅಷ್ಟಕ್ಕೂ ಈ ಘಟನೆ ನಡೆದಿದಾದ್ರು ಎಲ್ಲಿ ಅಂತೀರಾ ನೋಡಿ ಈ ರಿಪೋರ್ಟ್ ನಲ್ಲಿ..
ಹೀಗೆ ಫೋಟೋದಲ್ಲಿ ಪೋಸ್ ಕೋಡುತ್ತಿರುವ ಇವ್ರು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಚಂದಾಪುರ ನಿವಾಸಿಗಳಾದ ಅಜಿತ್ ಕುಮಾರ್ ಮತ್ತು ಸುಜತಾ. ವಂಚನೆಯನ್ನೆ ಕಾಯಕ ಮಾಡಿಕೊಂಡಿರುವ ಇವ್ರು ಆನೇಕಲ್ ಪೊಲೀಸರ ಅತಿಥಿಯಾಗಿದ್ದಾರೆ. ಹೌದು ಚಂದಾಪುರ ರಸ್ತೆಯಲ್ಲಿನ ಯುಬಿಎಚ್ಸಿ ಅಪಾರ್ಟ್ಮೆಂಟ್ನಲ್ಲಿನ ತಮ್ಮ ಎರಡು ಪ್ಲಾಟ್ಗಳ ಮೇಲೆ ಬರೋಬ್ಬರಿ ಐವತ್ತು ಲಕ್ಷ ಲೋನ್ ಪಡೆದ ಅಸಾಮಿಗಳು ಅದೇ ಪ್ಲಾಟ್ ಗಳನ್ನು ಲೀಜ್ಗೆ ನೀಡಿ ಲಕ್ಷ ಲಕ್ಷ ವಸೂಲಿ ಮಾಡಿದ್ದಾರೆ. ಬಳಿಕ ಬ್ಯಾಂಕ್ ಲೋನ್ ಕಟ್ಟದೇ ಎಸ್ಕೇಪ್ ಆಗಿದ್ದಾರೆ. ಮೂರ್ನಾಲ್ಕು ನೋಟಿಸ್ ಕೊಟ್ಟ ಬ್ಯಾಂಕಿನವರು ಪ್ಲಾಟ್ ವಾಸಿಗಳನ್ನು ಉಟ್ಟಬಟ್ಟೆಯಲ್ಲಿ ಹೊರ ಹಾಕಿ ಬೀಗ ಜಡಿದಿದ್ದಾರೆ.ಇನ್ನೂ ರಿಯಲ್ ಎಸ್ಟೇಟ್ ಹೆಸರಲ್ಲಿ ರೀಲ್ ಬಿಟ್ಟು ಯಾಮಾರಿಸುವ ಅಜಿತ್ ಮತ್ತು ಸುಜತಾ ದಂಪತಿ ತಾವು ರಿಯಲ್ ಎಸ್ಟೇಟ್ ನಲ್ಲಿ ಒಳ್ಳೆಯ ಬಿಸಿನೆಸ್ ಮಾಡುತ್ತಿದ್ದೆವೆ. ತಮ್ಮದು ಸಾಕಷ್ಟು ಪ್ಲಾಟ್, ವಿಲ್ಲಾ ಮತ್ತು ನಿವೇಶನಗಳಿದ್ದು, ಕಡಿಮೆ ಬೆಲೆಗೆ ಲೀಜ್ ಮತ್ತು ಮಾರಾಟ ಮಾಡುತ್ತೆವೆ ಎಂದು ಜಾಹಿರಾತು ನೀಡುತ್ತಾರೆ. ಇವರ ಬಿಲ್ಡ್ ಅಪ್ ಕಂಡು ಇಂದು ಪ್ಲಾಟ್ ಲೀಜ್ ಪಡೆದವರು ಅಕ್ಷರಶಃ ಹಣ ಮತ್ತು ಮನೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಇನ್ನೂ ಸಾಕಷ್ಟು ಮಂದಿಗೆ ಅಜಿತ್ ದಂಪತಿ ಮಕ್ಮಲ್ ಟೋಪಿ ಹಾಕಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ವಂಚನೆಗಳೊಗಾದ ಗ್ರಾಹಕರು ಆನೇಕಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇನ್ನೂ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಂಚಕ ದಂಪತಿಯನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದು, ಲಕ್ಷಾಂತರ ರೂಪಾಯಿ ಹಣ ನೀಡಿ ಮನೆ ಲೀಸ್ಗೆ ಪಡೆದಿದ್ದ ಗ್ರಾಹಕರು ಅತ್ತ ನೀಡಿದ ಹಣವೂ ಕೈ ಸೇರದೆ ಇತ್ತ ಇರಲು ಮನೆಯು ಸಹ ಇಲ್ಲದೆ ಬೀದಿಗೆ ಬೀಳುವಂತಾಗಿದ್ದು ಮಾತ್ರ ವಿಪರ್ಯಾಸ ಸಂಗತಿ.