Posted by vidyamaana on 2024-07-05 12:01:03 |
ಲಂಡನ್ : ಬ್ರಿಟನ್ನಲ್ಲಿ ಸಾರ್ವತ್ರಿಕ ಚುನಾವಣೆ(UK Election) ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ 14ವರ್ಷಗಳ ಬಳಿಕ ಲೇಬರ್ ಪಕ್ಷ ಜಯಭೇರಿ ಭಾರಿಸಿದೆ. ಲೇಬರ್ ಪಕ್ಷ 360 ಸ್ಥಾನಗಳನ್ನು ಗಳಿಸಿ ಮ್ಯಾಜಿಕ್ ನಂಬರ್ 320 ಅನ್ನು ದಾಟುವ ಮೂಲಕ ಸರ್ಕಾರ ರಚನೆಗೆ ಮುಂದಾಗಿದೆ.
ಹಾಲಿ ಪ್ರಧಾನಿ ರಿಷಿ ಸುನಕ್(Rishi Sunak) ಅವರ ಪಕ್ಷ ಕನ್ಸರ್ವೇಟಿವ್ ಪಕ್ಷ ಭಾರೀ ಹಿನ್ನಡೆ ಅನುಭವಿಸಿದ್ದು, ಲೇಬರ್ ಪಕ್ಷದ ಕೀರ್ ಸ್ಟಾರ್ಮರ್(Keir Starmer) ಅವರಿಗೆ ಪ್ರಧಾನಿ ಗಿಟ್ಟಿದೆ. ಇನ್ನು
ಫಲಿತಾಂಶ ಹೊರ ಬೀಳುತ್ತಿದ್ದಂತೆ ರಿಶಿ ಸುನಕ್ ಪ್ರತಿಕ್ರಿಯಿಸಿದ್ದು, ಈ ಸೋಲಿನ ಜವಾಬ್ದಾರಿಯನ್ನು ತಾವು ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಲೇಬರ್ ಪಕ್ಷದ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಲೇಬರ್ ಪಕ್ಷವು ಈ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದೆ ಮತ್ತು ಅವರ ವಿಜಯಕ್ಕಾಗಿ ಅಭಿನಂದಿಸಲು ನಾನು ಸರ್ ಕೀರ್ ಸ್ಟಾರ್ಮರ್ಗೆ ಕರೆ ಮಾಡಿದ್ದೇನೆ. ಇಂದು, ಅಧಿಕಾರವು ಶಾಂತಿಯುತವಾಗಿ ಮತ್ತು ಕ್ರಮಬದ್ಧವಾಗಿ ಅಧಿಕಾರ ಹಸ್ತಾಂತರಗೊಂಡಿದೆ. ಎಲ್ಲಾ ಕಡೆಯಿಂದಲೂ ಸದ್ಭಾವನೆ ಇರುತ್ತದೆ. ಇದು ನಮ್ಮ ದೇಶದ ಸ್ಥಿರತೆ ಮತ್ತು ಭವಿಷ್ಯದ ಬಗ್ಗೆ ನಮಗೆಲ್ಲರಿಗೂ ವಿಶ್ವಾಸವನ್ನು ನೀಡುವ ವಿಷಯವಾಗಿದೆ ಎಂದು ಹೇಳಿದ್ದಾರೆ.
ಪಕ್ಷಗಳ ಬಲಾಬಲ ಹೇಗಿದೆ?
ಇನ್ನು ಕಣದಲ್ಲಿರುವ ಪಕ್ಷಗಳ ಬಲಾಬಲ ಹೇಗಿದೆ ಎಂದು ನೋಡುವುದಾದರೆ,
ಕನ್ಸರ್ವೇಟಿವ್ ಪಕ್ಷ ಕೇವಲ – 81
ಲೇಬರ್ ಪಾರ್ಟಿ - 360
ಸ್ಕಾಟಿಷ್ ನ್ಯಾಶನಲಿಸ್ಟ್ ಪಾರ್ಟಿ (SNP) - 3
ಲಿಬರಲ್ ಡೆಮೋಕ್ರಾಟ್ಗಳು - 49
ರಿಫಾರ್ಮ್ ಯುಕೆ - 3
ಇತರೆ - 1
ಎಕ್ಸಿಟ್ ಪೋಲ್ ಭವಿಷ್ಯ ಏನು?
ಇನ್ನು ಚುನಾವಣಾ ಪೂರ್ವ ಸಮೀಕ್ಷೆಗಳು ಕನ್ಸರ್ವೇಟಿವ್ ಪಕ್ಷ ಈ ಬಾರಿ ಸೋಲುವುದು ಖಚಿತ ಎಂಬ ಭವಿಷ್ಯ ನುಡಿದಿತ್ತು. ಈ ಬಾರಿ ಕನ್ಸರ್ವೇಟಿಕವ್ ಪಕ್ದ್ ಸ್ಥಾನ 131ಕ್ಕೆ ಇಳಿಯಲಿದ್ದು, ಲೇಬರ್ ಪಕ್ಷ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾಕ್ಕೆ ಬರಲಿದೆ ಎಂದು ಹೇಳಿದೆ. ಹಾಗಿದ್ದರೆ ಎಕ್ಸಿಟ್ ಪೋಲ್ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ದೊರೆಯಲಿದೆ ನೋಡೋಣ.
ಕನ್ಸರ್ವೇಟಿವ್: 131
ಲೇಬರ್ ಪಕ್ಷ: 410
ಲಿಬರಲ್ ಡೆಮೋಕ್ರಾಟ್ಗಳು: 61
ಸ್ಕಾಟಿಷ್ ನ್ಯಾಶನಲಿಸ್ಟ್ ಪಾರ್ಟಿ (SNP): 10
ರಿಫಾರ್ಮ್ ಯುಕೆ: 13
ಪ್ಲೈಡ್ ಸಿಮ್ರು: 4
ಗ್ರೀನ್ಸ್: 2
ರಿಷಿ ಸುನಕ್ಗೆ ಆಡಳಿತ ವಿರೋಧಿ ಅಲೆ
44 ವರ್ಷದ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, 61 ವರ್ಷದ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿಗಿಂತ ಕಳೆದ 6 ವಾರಗಳ ಪ್ರಚಾರದಲ್ಲಿ ಅತ್ಯಂತ ಹಿಂದುಳಿದಿದ್ದಾರೆ. ಇಂಗ್ಲೆಂಡ್, ಸ್ಕಾಟ್ಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್ನಾದ್ಯಂತ 650 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ, ಮೊದಲ ಬಾರಿಗೆ ಪೋಸ್ಟ್ ಸಿಸ್ಟಮ್ನಲ್ಲಿ ಬಹುಮತಕ್ಕೆ 326 ಮತಗಳ ಅಗತ್ಯವಿದೆ.
Posted by Vidyamaana on 2023-09-24 07:16:32 |
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಯೊಬ್ಬರಿಂದ ಕೋಟ್ಯಾಂತರ ರೂ. ವಂಚನೆ ನಡೆಸಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಚೈತ್ರಾ ಹೆಸರಿನ ಜೊತೆಗೆ ‘ಕುಂದಾಪುರ’ ಎಂಬ ಸ್ಥಳನಾಮ ಬಳಸದಂತೆ ಬೆಂಗಳೂರು ನಗರದ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಆರೋಪಿ ಜೊತೆಗಿನ ಕುಂದಾಪುರ ಹೆಸರು ತೆಗೆದುಹಾಕುವಂತೆ ಕೋರಿ ನ್ಯಾಯಾಲಯಕ್ಕೆ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಉದ್ಯಮಿ, ಪ್ರಸ್ತುತ ಬೆಂಗಳೂರು ಹನುಮಂತ ನಗರದ ನಿವಾಸಿ ಗಣೇಶ್ ಶೆಟ್ಟಿ ಅರ್ಜಿ ಸಲ್ಲಿಸಿದ್ದರು.
ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಚೈತ್ರಾ ಅವರ ಸುದ್ದಿ ಪ್ರಸಾರ ಮಾಡುವಾಗ ಹೆಸರಿನ ಜೊತೆಗೆ ಕುಂದಾಪುರ ಹೆಸರನ್ನು ಬಳಸುವುದರಿಂದ ಕುಂದಾಪುರ ಊರಿನ ಹೆಸರಿಗೆ ಘಾಸಿಯಾಗುತ್ತದೆ. ಈ ಒಂದು ಘಟನೆಯಿಂದ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು. ಕುಂದಾಪುರ ದೇವಾಲಯಗಳಿರುವ ಮತ್ತು ಪ್ರಕೃತಿ ಸೊಬಗಿನ ಊರು. ಈ ಊರಿನ ಹೆಸರು ಆರೋಪಿಯೊಬ್ಬರ ಹೆಸರಿನ ಜೊತೆಗೆ ಥಳುಕು ಹಾಕಿದ ಕಾರಣಕ್ಕೆ ಹಾಳಾಗಬಾರದು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಮತ್ತು ತಂಡದ ವಿಚಾರಣೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದು ಈ ನಡುವೆ ಚೈತ್ರಾ ಪ್ರಕರಣದಲ್ಲಿ ಕುಂದಾಪುರ ಹೆಸರನ್ನು ಪದೇ ಪದೇ ಬಳಸುತ್ತಿರುವುದರಿಂದ ಅಲ್ಲಿನ ನಿವಾಸಿಗಳ, ಸ್ಥಳೀಯರ ಭಾವನೆಗೆ ಧಕ್ಕೆಯಾಗುತ್ತಿರುವುದರಿಂದ ಮಾದ್ಯಮಗಳಿಗೆ ಕುಂದಾಪುರ ಹೆಸರನ್ನು ಬಳಸದಂತೆ ನಿರ್ಬಂಧ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದರು. ಅದರಂತೆ ಕೋರ್ಟ್ ತಡೆಯಾಜ್ಞೆ ವಿಧಿಸಿದ್ದು, ಹೆಸರಿನ ಜೊತೆಗೆ ಸ್ಥಳನಾಮ ಬಳಸದಂತೆ ಸಮನ್ಸ್ ನೀಡಿದೆ, ಅಲ್ಲದೆ, ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಕಾಯ್ದಿರಿಸಿದೆ. ಈ ಬಗ್ಗೆ ಹೈಕೋರ್ಟ್ ವಕೀಲರಾದ ಎಚ್. ಪವನಚಂದ್ರ ಶೆಟ್ಟಿ ವಾದಿಸಿದ್ದರು.
Posted by Vidyamaana on 2024-03-28 11:39:02 |
ನೈನ್ ಟು ನೈನ್ – ಜಿ.ಎಲ್.ಒನ್ ಮಾಲ್ ನಲ್ಲಿ ಶುಭಾರಂಭಗೊಳ್ಳುತ್ತಿದೆ ‘ಮಂಗಲ್ ಹೈಪರ್ ಮಾರ್ಕೆಟ್’
ಇದು ನಮ್ಮ ಊರಿನ ನಿಮ್ಮ ಅಂಗಡಿ – ಈ ಸುದ್ದಿ ಓದಿದ್ರೆ ನಿಮ್ಗೆ ಗೊತ್ತಾಗುತ್ತರೆ ಎಲ್ಲಾ ವಿದ್ಯಮಾನ!
ವಿಶ್ವಾಸಾರ್ಹ ಸೇವೆ ಮೂಲಕ ಜನರ ಪ್ರೀತಿಗೆ ಪಾತ್ರವಾಗಿರುವ ಮಂಗಲ್ ಸ್ಟೋರ್ಸ್ ನ ಹೊಸ ಸ್ವರೂಪ ‘ಮಂಗಲ್ ಹೈಪರ್ ಮಾರ್ಕೆಟ್’
ಹೈಪರ್ ಮಾರ್ಕೆಟ್ ಗಳು ಇಂದಿನ ಜನರ ದೈನಂದಿನ ಅವಶ್ಯಕತೆಗಳನ್ನು ಪೂರೈಸುವ ಮಳಿಗೆಗಗಳಾಗಿ ಮಾರ್ಪಟ್ಟಿವೆ. ಮಹಾನಗರಗಳಿಗೆ ಸೀಮಿತವಾಗಿದ್ದ ಹೈಪರ್ ಮಾರ್ಕೆಟ್ ಗಳು ಇವತ್ತು ಸಣ್ಣ ನಗರ –ಪಟ್ಟಣಗಳಲ್ಲು ತಲೆ ಎತ್ತಿ ನಿಂತಿದ್ದು ಆ ಭಾಗದ ಗ್ರಾಹಕರ ಖರೀದಿಗೆ ‘ಬಲ’ ತುಂಬುವ ಕೆಲಸವನ್ನು ಮಾಡುತ್ತಿದೆ.
ಆದರೆ ಹೆಚ್ಚಿನ ಹೈಪರ್ ಮಾರ್ಕೆಟ್ ಗಳಿಗೆ ಆ ಊರಿನ ನಂಟು ಇರುವುದಿಲ್ಲ. ಹೆಚ್ಚೆಂದರೆ ಆ ಊರಿನ ಜನರನ್ನು ಕೆಲಸಕ್ಕೆ ಇಟ್ಟುಕೊಳ್ಳಟಬಹುದಷ್ಟೇ, ಆದರೆ ಇದೀಗ ಪುತ್ತೂರಿನಲ್ಲಿ ಎ.01ರಂದು ಇಲ್ಲಿನ ಜಿ.ಎಲ್.ಒನ್ ಮಾಲ್ ನಲ್ಲಿ ಶುಭಾರಂಭಗೊಳ್ಳುತ್ತಿರುವ ಮಂಗಲ್ ಹೈಪರ್ ಮಾರ್ಕೆಟ್ – ನಮ್ಮ ಊರಿನ ನಿಮ್ಮ ಅಂಗಡಿ ಎಂಬ ವಿಶೇಷ ಟೈಟಲ್ ನೊಂದಿಗೆ ಊರಿನ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿ ಶುಭಾರಂಭಗೊಳ್ಳುತ್ತಿದೆ.
ಎಲ್ಲಾ ದಿನಬಳಕೆ ವಸ್ತುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಒಂದೇ ಕಡೆ ಖರೀದಿ ಮಾಡಕೆಂದು ಬಯಸುವವರಿಗೆ ಅತ್ಯುತ್ತಮ ತಾಣವೊಂದು ಮುತ್ತಿನ ನಗರಿ ಪುತ್ತೂರಿನ ಹೃದಯಭಾಗದಲ್ಲಿ ಆರಂಭಗೊಳ್ಳುತ್ತಿದೆ. ಹೌದು, ಹಲವು ವರ್ಷಗಳ ಗುಣಮಟ್ಟದ, ವಿಶ್ವಾಸಾರ್ಹ ಸೇವೆಯ ಮೂಲಕ ಪುತ್ತೂರಿಗರ ಮನಗೆದ್ದಿರುವ ಮಂಗಲ್ ಸ್ಟೋರ್ಸ್ ಇದೀಗ ಪುತ್ತೂರಿನ ಜಿ.ಎಲ್.ಒನ್ ಮಾಲ್ ನಲ್ಲಿ ಕಾರ್ಯಾರಂಭ ಮಾಡುವುದಕ್ಕೆ ಸಜ್ಜಾಗಿ ನಿಂತಿದೆ.
ಇದೇ ಎ.೧ರಿಂದ ಮಂಗಲ್ ಹೈಪರ್ ಮಾರ್ಕೆಟ್ ಪುತ್ತೂರಿನ ಜಿ.ಎಲ್.ಒನ್ ಮಾಲ್ ನಲ್ಲಿ ತೆರೆದುಕೊಳ್ಳಲಿದೆ. ಮಾಸ್ಟರ್ ಪ್ಲಾನರಿಯ ಎಸ್.ಕೆ. ಆನಂದ್ ರವರ ಮಾರ್ಗದರ್ಶನದೊಂದಿಗೆ ಕಳೆದ 20 ವರ್ಷಗಳಿಂದ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಮಂಗಲ್ ಸ್ಟೋರ್ಸ್ ತನ್ನ ಉತ್ಪನ್ನಗಳ ಗುಣಮಟ್ಟ, ಸ್ಪರ್ಧಾತ್ಮಕ ಬೆಲೆಯ ಮೂಲಕ ಜನಪ್ರಿಯತೆ ಗಳಿಸಿದೆ. ಗ್ರಾಹಕಸ್ನೇಹಿ ಸಿಬ್ಬಂದಿಗಳ ನಗುಮೊಗದ ಸ್ವಾಗತ, ವಿಶ್ವಾಸಾರ್ಹ ಖರೀದಿ, ಸಂತೃಪ್ತಿಯ ಸೇವೆಯಿಂದಾಗಿ ಗ್ರಾಹಕರು ಸಂಸ್ಥೆ ಮೇಲಿಟ್ಟಿರುವ ನಂಬಿಕೆ ಅಚಲವಾಗಿದೆ. ಇದೀಗ ಗ್ರಾಹಕರ ಹೆಚ್ಚಿನ ಅನುಕೂಲಕ್ಕಾಗಿ ಪುತ್ತೂರು ಪೇಟೆಯ ಹೃದಯಭಾಗದಲ್ಲಿ ಮಂಗಲ್ ಹೈಪರ್ ಮಾರ್ಕೆಟ್ ಅನ್ನು ಪ್ರಾರಂಭಿಸಲಾಗುತ್ತಿದ್ದು, ಗ್ರಾಹಕರಿಗೆ ಅತ್ಯಂತ ಕಡಿಮೆ ದರಗಳಲ್ಲಿ ಗುಣಮಟ್ಟದ ವಸ್ತುಗಳು ದೊರಕಲಿದೆ.
ಏನಿದು ‘ಸರ್ವಮಂಗಲ್’..!?
ಯಾವುದೇ ಪೂಜೆ ಇರಲಿ, ಶುಭಸಮಾರಂಭವಿರಲಿ
ದಿನಸಿ ಸಾಮಾಗ್ರಿಗಳು, ತಾಜಾ ತರಕಾರಿಗಳಿಗಾಗಿ ಹಲವು ಕಡೆ ಹೋಗಬೇಕೆಂದಿಲ್ಲ..! ನಿಮ್ಮ ಅಗತ್ಯದ ದಿನಸಿ ಸಾಮಾಗ್ರಿಗಳು, ತಾಜಾ ತರಕಾರಿಗಳ ಪಟ್ಟಿಯಲ್ಲಿ ಮುಂಗಡವಾಗಿ ನೀಡಿ, ನಿಮ್ಮ ಮನೆಬಾಗಿಲಿಗೆ, ಯಾ ಸಭಾಭವನಕ್ಕೆ ತರಿಸಿಕೊಳ್ಳ ಬಹುದಾದಂತಹ ವಿಶೇಷ ಸೇವೆಯಾಗಿದೆ. ಯಾವುದೇ ಜಂಟಾಟವಿಲ್ಲದೇ, ನಿರಾಳವಾಗಿ ಸಂಭ್ರಮಾಚರಣೆಯನ್ನು ಆನಂದಿಸಬಹುದು..
ದಿನನಿತ್ಯದ ಆವಶ್ಯಕತೆಗಳಿಗೆ ಬೇಕಾಗುವ ಎಲ್ಲವೂ ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು, ಉಚಿತ ಪಾರ್ಕಿಂಗ್ನೊಂದಿಗೆ ಆಹ್ಲಾದಕರ ವಾತಾವರಣದಲ್ಲಿ ಆರಾಮವಾಗಿ ಶಾಪಿಂಗ್ ಮಾಡಬಹುದಾಗಿದೆ. ಪ್ರೆಸ್ಟೋ ಕಂಪೆನಿಯ ಪ್ರೀಮಿಯಂ ಸ್ವೀಟ್ಸ್ಗಳ ವಿಶೇಷ ಕೌಂಟರ್ ಕೂಡ ಲಭ್ಯವಿದೆ.
ಮಂಗಲ್ ಹೈಪರ್ ಮಾರ್ಕೆಟ್ ಬೆಳಿಗ್ಗೆ 9ರಿಂದ ರಾತ್ರಿ 9ರ ತನಕ ವಾರದ ಏಳು ದಿನಗಳಲ್ಲೂ ಕಾರ್ಯ ನಿರ್ವಹಿಸಲಿದೆ. ಈ ಮೂಲಕ ಗ್ರಾಹಕರ ನಗುಮೊಗದ ಸೇವೆಗೆ ಸಜ್ಜಾಗಿ ನಿಂತಿದೆ.
Posted by Vidyamaana on 2023-09-27 17:46:44 |
ಪುತ್ತೂರು : ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದ ಅಸ್ವಾಲಿಹಾ ವುಮೆನ್ಸ್ ಶರೀಅತ್, ಪಿ.ಯು.ಕಾಲೇಜ್ ನಲ್ಲಿ ಈದ್ ಮೀಲಾದ್ ಪ್ರಯುಕ್ತ ಕಾಲೇಜ್ ವಿದ್ಯಾರ್ಥಿನಿಯರ ಮೀಲಾದ್ ಆರ್ಟ್ ಫೆಸ್ಟ್ ನ ಗ್ಲೋ-2k 23 ಲೋಗೋವನ್ನು ಕಾಲೇಜ್ ಸಭಾಂಗಣದಲ್ಲಿ ಅನಾವರಣ ಗೊಳಿಸಲಾಯಿತು.
ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೋಡಿಂಬಾಡಿ ಜುಮ್ಮಾ ಮಸೀದಿಯ ಅಧ್ಯಕ್ಷ ಉದ್ಯಮಿ ಯು.ಕೆ.ಉಮರ್ ಹಾಜಿ ಕೋಡಿಂಬಾಡಿ ಮತ್ತು ಕೆಮ್ಮಾಯಿ ಜುಮ್ಮಾ ಮಸೀದಿಯ ಅಧ್ಯಕ್ಷ ಉದ್ಯಮಿ ಬಶೀರ್ ಹಾಜಿ ದಾರಂದಕುಕ್ಕು ಅವರು ಲೋಗೋವನ್ನು ಅನಾವರಣ ಗೊಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯು.ಮುಹಮ್ಮದ್ ಹಾಜಿ ಪಡೀಲ್ ಅವರು ಪ್ರವಾದಿಯವರು ಕಲಿಸಿ ಕೊಟ್ಟ ಮಾದರಿಯಲ್ಲಿ ಬದುಕು ಕಟ್ಟಿ ಬದುಕು ಬೆಳಗಿಸಿ ಕೊಳ್ಳಬೇಕೆಂದು ಕರೆ ನೀಡಿದರು.
ಮೌಂಟನ್ ವ್ಯೂ ಸಂಸ್ಥೆಯ ಸಂಚಾಲಕ ಮುಹಮ್ಮದ್ ಸಾಬ್ ಹಾಜಿ ಮಾತನಾಡಿ ಪ್ರವಾದಿಯವರ ಸಂದೇಶವನ್ನು ಬದುಕಲ್ಲಿ ಅಳವಡಿಸಿ ಕೊಂಡರೆ ಇಹಪರ ಯಶಸ್ಸು ಸಾಧ್ಯ ಎಂದರು.
ದಾರುಲ್ ಫಲಾಹ್ ಮದ್ರಸ ಶಿಕ್ಷಕರಾದ ನಝೀರ್ ಅರ್ಶದಿ, ಮೌಂಟನ್ ವ್ಯೂ ಶಾಲಾ ದೈಹಿಕ ಶಿಕ್ಷಕ ಅಶ್ರಫ್ , ಕಾರ್ಯಾಲಯ ನಿರ್ವಾಹಕರಾದ ಯೂಸುಫ್ ಕೂಟತ್ತಾನ, ಹಮೀದ್ ಮೊದಲಾದವರು ಉಪಸ್ಥಿತರಿದ್ದರು.
ಅಸ್ವಾಲಿಹಾ ವುಮೆನ್ಸ್ ಕಾಲೇಜ್ ನ ಉಸ್ತಾದ್ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಅವರು ಸ್ವಾಗತಿಸಿ ಪ್ರವಾದಿಯವರ ಬದುಕು,ಬೋಧನೆ ಯ ಬಗ್ಗೆ ವಿವರಿಸಿದರು.
ಶಾಲಾ ಶಿಕ್ಷಕ ರವೂಫ್ ವಿವಿಧ ಕಾರ್ಯಕ್ರಮ ನಿರ್ವಹಿಸಿ ಕೊನೆಗೆ ವಂದಿಸಿದರು.
ಮದ್ರಸ ವಿದ್ಯಾರ್ಥಿಗಳಿಂದ ಬುರ್ಧಾ ಮಜ್ಲಿಸ್ ನಡೆಯಿತು.
ಕಾರ್ಯಕ್ರಮದ ಬಳಿಕ ಕಾಲೇಜ್ ಉಪಾನ್ಯಾಸಕಿಯರಾದ ಸಾಜಿದಾ, ಮಿಶ್ರಿಯಾ ಅಸ್ವಾಲಿಹಾ ಮತ್ತು ಫಾರಿಶಾ ಅಸ್ವಾಲಿಹಾ ಅವರ ನೇತೃತ್ವದಲ್ಲಿ ಕಾಲೇಜ್ ನ ಒಳಾಂಗಣದಲ್ಲಿ ವಿದ್ಯಾರ್ಥಿನಿಯರಿಂದ ವಿವಿಧ ಸಾಹಿತ್ಯ ಕಲಾ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
Posted by Vidyamaana on 2023-06-29 06:28:43 |
ಪುತ್ತೂರು : ತಾಲೂಕಿನಲ್ಲಿ ಇಂದು ಮುಂಜಾನೆಯಿಂದಲೇ ಅತ್ಯಂತ ಸಡಗರ, ಸಂಭ್ರಮದಿಂದ ಈದುಲ್ ಅಝಾ (ಬಕ್ರೀದ್ ಹಬ್ಬ) ಆಚರಿಸಲಾಗುತ್ತಿದೆ.
ತಾಲೂಕಿನಲ್ಲಿ ಮುಸ್ಲಿಮರು ಮಸೀದಿ ಗಳಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸಿ, ಈದ್ ಖುತ್ಥಾ ಮತ್ತು ಪ್ರವಚನ ಆಲಿಸಿ, ಈದ್ ಸಂದೇಶ ಸ್ವೀಕರಿಸುವುದು ಮತ್ತು ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುತ್ತಿರುವುದು ಕಂಡು ಬಂತು.
ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಹೊಸ ಬಟ್ಟೆಬರೆ ಧರಿಸಿ, ನಾನಾ ಬಗೆಯ ತಿಂಡಿ- ತಿನಿಸು ತಿಂದು ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಸಂಭ್ರಮಿಸಿದರು.ಪುತ್ತೂರು ತಾಲೂಕಿನ ಬದ್ರಿಯಾ ಮಸ್ಜಿದ್, ಜುಮಾ ಮಸ್ಜಿದ್, ಕೂರ್ನಡ್ಕ ಜುಮಾ ಮಸ್ಜಿದ್, ಬನ್ನೂರು ಹಾನಫಿ ಮಸ್ಜಿದ್, ಸಾಲ್ಮರ ಜುಮಾ ಮಸ್ಜಿದ್,ಪಡೀಲ್ ಜುಮಾ ಮಸ್ಜಿದ್,ಬನ್ನೂರು ಜುಮಾ ಮಸ್ಜಿದ್, ಕಲ್ಲೇಗ ಜುಮಾ ಮಸ್ಜಿದ್, ಬಪ್ಪಲಿಗೆ ಜುಮಾ ಮಸ್ಜಿದ್,ಮುಕ್ವೆ ಜುಮಾ ಮಸ್ಜಿದ್, ಕುಂಬ್ರ ಜುಮಾ ಮಸ್ಜಿದ್, ಕೂರ್ನಡ್ಕ ಹಾನಫಿ ಮಸ್ಜಿದ್ ಗಳಲ್ಲಿ ನಮಾಝ್ ಹಾಗೂ ಖುತ್ವಾ ನೆರವೇರಿಸಲಾಯಿತು.
ಈದ್ ನಮಾಝ್-ಖುತ್ಥಾದ ಬಳಿಕ ದಫನ ಭೂಮಿಗೆ ಅಗಲಿದ ಕುಟುಂಬದ ಸದಸ್ಯರ ಮರತ್ತಾಗಿ ಪ್ರಾರ್ಥಿಸಿದರು. ಬಳಿಕ ಕುಟುಂಬಸ್ಥರು, ಸ್ನೇಹಿತರು, ಸಮೀಪದ ನಿವಾಸಿಗಳ ಮನೆಗೆ ತೆರಳಿ ಇದ್ ಶುಭಾಶಯ ಸಲ್ಲಿಸುತ್ತಿದ್ದಾರೆ.
Posted by Vidyamaana on 2024-01-02 11:22:43 |
ಚಿಕ್ಕಮಗಳೂರು: ಸ್ನೇಹಿತರ ಜತೆ ಪಾರ್ಟಿಗೆ ಹೋಗುವುದಾಗಿ ಮನೆಯಿಂದ ತೆರಳಿದ್ದ ಎಂಟನೇ ತರಗತಿ ವಿದ್ಯಾರ್ಥಿನಿ, ಶಾಲೆಯ ಬಸ್ ಚಾಲಕನ ಜೊತೆ ರೈಲಿನಡಿ ಬಿದ್ದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಂಕನಕಟ್ಟೆಯಲ್ಲಿ ನಡೆದಿದೆ.
ಬಸ್ ಚಾಲಕ ಸಂತೋಷ್ (28) ಮತ್ತು ಎಂಟನೇ ತರಗತಿ ವಿದ್ಯಾರ್ಥಿನಿ ಜಾನವಿ (14) ನಿಗೂಢ ಸ್ಥಿತಿಯಲ್ಲಿ ಸಾವು ಕಂಡವರು. ಜಾನವಿ ಅಜ್ಜಂಪುರ ತಾಲೂಕಿನ ಗಿರಿಯಾಪುರ ಗ್ರಾಮದ ಜ್ಞಾನದೀಪ ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದಳು. ಇದೇ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸಂತೋಷ್ ಶಾಲಾ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ನಡುವೆ, ತನ್ನ ಮಗಳನ್ನು ಪ್ರೀತಿಸುವಂತೆ ಸಂತೋಷ್ ಕಿರುಕುಳ ನೀಡುತ್ತಿದ್ದಾನೆ ಎಂದು ಆಕೆಯ ಪೋಷಕರು ಈ ಹಿಂದೆ ಶಾಲಾ ಮುಖ್ಯಸ್ಥರ ಗಮನಕ್ಕೆ ತಂದಿದ್ದರು.
ನಿನ್ನೆ ಸ್ನೇಹಿತರ ಜೊತೆ ಹೊಸ ವರ್ಷದ ಪಾರ್ಟಿಗೆ ಹೋಗುವುದಾಗಿ ಹೇಳಿದ್ದ ಜಾನವಿಯನ್ನು ಸಂತೋಷ್ ತನ್ನ ಜೊತೆ ಕರೆದೊಯ್ದಿದ್ದ ಎನ್ನಲಾಗಿದೆ. ಆದರೆ, ಮಧ್ಯರಾತ್ರಿ ರೈಲಿನಡಿ ಬಿದ್ದು ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಆಕೆಯನ್ನು ದೂಡಿಹಾಕಿ ಸಾವಿಗೆ ಶರಣಾಗಿದ್ದಾನೆಯೇ ಎಂಬುದು ತನಿಖೆಯಲ್ಲಿ ತಿಳಿದು ಬರಬೇಕು.
Posted by Vidyamaana on 2024-03-23 07:56:34 |
ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀರಾಮಕೃಷ್ಣ ಪ್ರೌಢ ಶಾಲೆ ಕೊಂಬೆಟ್ಟು ಇದರ ಜಂಟಿ ಆಶ್ರಯದಲ್ಲಿ ನಾಳೆ (ಮಾ. ೨೩ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಾಗಾರ ನಡೆಯಲಿದೆ ಎಂದು ಟ್ರಸ್ಟ್ನ ಕಾಯಾಧ್ಯಕ್ಷರಾದ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
ಮಾ. ೨೩ ರಂದು ಬೆಳಿಗ್ಗೆ ೧೧ ಗಂಟೆಗೆ ಸುಂದರ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪಿಯುಸಿ ನಂತರ ವಿದ್ಯಾರ್ಥಿಗಳು ಯಾವ ಕೋರ್ಸು ಕಲಿತರೆ ಏನು ಉದ್ಯೋಗ ಪಡೆದುಕೊಳ್ಳಬಹುದು, ಕೋರ್ಸುಗಳು ಎಲ್ಲೆಲ್ಲಿ ಸಿಗುತ್ತದೆ, ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ವೃತ್ತಿಪರ ಕೋರ್ಸುಗಳು ಹೇಗೆ ಪರಿಣಾಮಕಾರಿ ಎಂಬ ವಿಚಾರದ ಬಗ್ಗೆ ಕಾರ್ಯಾಗಾರ ನಡೆಯಲಿದೆ.
ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಪಾತ್ರ ಕಾರ್ಯಾಗಾರವನ್ನು ಉದ್ಘಾಟನೆ ಮಾಡಲಿದ್ದಾರೆ.ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ಳಾರೆ ಸಪಪೂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪಿ ವಿ ಸೂರ್ಯಾನಾರಾಯಣರವರು ಕಾರ್ಯಾಗಾರ ನಡೆಸಿಕೊಡಲಿದ್ದು, ಕಾರ್ಯಕ್ರಮದಲ್ಲಿ ಶ್ರೀರಾಮಕೃಷ್ಣ ಪ್ರೌಢ ಶಾಲೆ ಕೊಂಬೆಟ್ಟಿ ಇದರ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ, ಕ್ಯಾಡೊಕಾನ್ ವಿದ್ಯಾ ಸಂಸ್ಥೆ ಬೆಂಗಳೂರು ಇದರ ಶ್ರದ್ದಾ ಎಂ ರವರು ಭಾಗವಹಿಸಲಿದ್ದಾರೆ.