Posted by vidyamaana on 2024-07-23 21:09:49 |
ಬೆಂಗಳೂರು : ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಸ್ಕೂಲ್ನ ಪರವಾನಗಿ ಹಾಗೂ ಅದೇ ಶಾಲೆಯ ತರಬೇತುದಾರನ ಚಾಲನಾ ಪರವಾನಗಿಯನ್ನು (ಡಿಎಲ್) ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ರದ್ದುಗೊಳಿಸಿದೆ.
ಯುವತಿಗೆ ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪದ ಅಡಿ ಕಾರು ತರಬೇತಿದಾರನ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.
ನಗರದ ಯಾವುದೇ ಡ್ರೈವಿಂಗ್ ಶಾಲೆಯಲ್ಲೂ ಈ ರೀತಿಯ ಘಟನೆಗಳು ನಡೆಯಬಾರದು. ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಹಾಲಕ್ಷ್ಮೀಪುರದ 18 ವರ್ಷದ ಯುವತಿ ನೀಡಿದ್ದ ದೂರು ಆಧರಿಸಿ, ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಸ್ಕೂಲ್ನ ತರಬೇತುದಾರ ಅಣ್ಣಪ್ಪ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?:
ದೂರು ನೀಡಿದ್ದ ಯುವತಿ ಕಾರು ಚಾಲನೆ ಕಲಿಯಲು ಮಾರುತಿ ಡ್ರೈವಿಂಗ್ ಸ್ಕೂಲ್ಗೆ ಸೇರಿದ್ದರು. ಅಣ್ಣಪ್ಪ ಎಂಬಾತ ಕಾರು ಚಾಲನೆ ಬಗ್ಗೆ ತರಬೇತಿ ನೀಡಿದ್ದರು. ಒಂದು ತಿಂಗಳ ಕೋರ್ಸ್ ಮುಕ್ತಾಯವಾದ ಮೇಲೆ ಅಣ್ಣಪ್ಪ, ನಿಮ್ಮ ಮನೆಯ ಕಾರಿನಲ್ಲೇ ಪರಿಪೂರ್ಣವಾಗಿ ಚಾಲನೆ ಬಗ್ಗೆ ಹೇಳಿಕೊಡುತ್ತೇನೆ. ಒಂದು ಗಂಟೆಯ ವಿಶೇಷ ಕ್ಲಾಸ್ಗೆ ₹750 ಕೊಡಬೇಕು ಎಂದು ಯುವತಿಯನ್ನು ಕೇಳಿಕೊಂಡಿದ್ದರು. ಯುವತಿ 15 ದಿನಗಳ ವಿಶೇಷ ಕ್ಲಾಸ್ಗೆ ಅಣ್ಣಪ್ಪ ಅವರಿಗೆ ₹10,500 ಪಾವತಿಸಿದ್ದರು. ಅದರಂತೆ ಅಣ್ಣಪ್ಪ ವಿಶೇಷ ತರಬೇತಿ ಆರಂಭಿಸಿದ್ದರು ಎಂದು ಪೊಲೀಸರು ಹೇಳಿದರು.
ಪ್ರತಿದಿನ ಯುವತಿಯ ಮನೆ ಬಳಿ ಬಂದು ಆಕೆಯ ಕಾರಿನಲ್ಲೇ ಅಣ್ಣಪ್ಪ ಚಾಲನೆ ತರಬೇತಿ ನೀಡುತ್ತಿದ್ದರು. ಜುಲೈ 7ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಯುವತಿ ಮನೆ ಬಳಿ ಬಂದಿದ್ದ ಅಣ್ಣಪ್ಪ, ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಬಗ್ಗೆ ಹೇಳಿಕೊಡಲು ಮುಂದಾಗಿದ್ದರು. ಬಸವೇಶ್ವರ ನಗರದ ನ್ಯಾಷನಲ್ ಶಾಲೆಯ ಮೇಲ್ಸೇತುವೆಯಲ್ಲಿ ತೆರಳುವಾಗ, ಯುವತಿ ಕಾರು ಚಾಲನೆ ಮಾಡುತ್ತಿದ್ದರು. ಆಗ ಅಣ್ಣಪ್ಪ ಅಸಭ್ಯವಾಗಿ ವರ್ತಿಸಿದ್ದರು ಎಂದು ಪೊಲೀಸರು ತಿಳಿಸಿದರು.
ತರಬೇತುದಾರನ ಅಸಭ್ಯ ವರ್ತನೆಯಿಂದ ಗಾಬರಿಗೊಂಡಿದ್ದ ಯುವತಿ ಕಾರನ್ನು ಮನೆಯತ್ತ ತಿರುಗಿಸಿದ್ದರು. ಅದಾದ ಮೇಲೆ ತರಬೇತುದಾರ ಸುಮ್ಮನಾಗಿದ್ದರು. ಅಣ್ಣಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಯುವತಿ ಪೊಲೀಸರಿಗೆ ದೂರು ನೀಡಿದ್ದರು.
Posted by Vidyamaana on 2024-01-31 15:46:15 |
ಚಿತ್ರ ಡಾ. ಮಹೇಶ್ ಡಿ ಕೊಳ್ತಿಗೆ
ಪುತ್ತೂರು: ಕೆಪಿಜೆಪಿ ( ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ) ಸಂಸ್ಥಾಪಕ ಮತ್ತು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಪುತ್ತೂರು ತಾಲೂಕು ಕೊಳ್ತಿಗೆ ನಿವಾಸಿ ಮಹೇಶ್ ಡಿ ಅವರಿಗೆ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿಯಿಂದ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಸ್ವಾಮಿ ವಿವೇಕಾನಂದ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ಅಧ್ಯಕ್ಷರಾಗಿರುವ ಇವರು ಮಲೆನಾಡು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುತ್ತೂರು ಹೋಬಳಿ ಕೊಳ್ತಿಗೆ ಗ್ರಾಮದ ಸಣ್ಣ ರೈತ ಕೃಷಿ ಭೂಮಿಕ ಜಮೀನುದಾರ ತಂದೆ ದುಗ್ಗಪ್ಪ ಗೌಡ ತಾಯಿ ನೀಲಮ್ಮ ದಂಪತಿಗೆ ೯ ಜನ ಮಕ್ಕಳಲ್ಲಿ ೫ ಗಂಡು ಮಕ್ಕಳು ನಾಲ್ಕು ಹೆಣ್ಣು ಮಕ್ಕಳು ಎಂಟನೇಯವರಾಗಿ ೧೯೬೯ರಲ್ಲಿ ಜನಿಸಿದ ಮಹೇಶ್ ಡಿ. ವಿದ್ಯಾಭ್ಯಾಸದಲ್ಲಿ ಹತ್ತನೇ ತರಗತಿ ಓದಿದ್ದು ತಮ್ಮ ಹದಿನಾರನೇ ವಯಸ್ಸಿಗೆ ೧೯೮೬ರಲ್ಲಿ ಬೆಂಗಳೂರಿನ ಹೆಗ್ಗನಹಳ್ಳಿ ಗೆ ಬಂಧು ನೆಲೆಯೂರಿ ಸಣ್ಣ ಕೈಗಾರಿಕೆ ಕಂಪನಿಯಲ್ಲಿ ಕೆಲಸ ಮಾಡುತ್ತಾ ಬೆಳೆಯುತ್ತಾ ತನ್ನದೇ ಆದ ಸಣ್ಣ ಕಂಪನಿ ಫ್ಯಾಬ್ರಿಕೇಷನ್, ಪ್ಲಾಸ್ಟಿಕ್ ಕೋಟಿಂಗ್ ಮತ್ತು ಪೌಡರ್ ಕೋಟರ್ ಫ್ಯಾಕ್ಟರಿ ಮಾಡಿಕೊಂಡು ನೂರಾರು ಕಾರ್ಮಿಕರಿಗೆ ಆಶ್ರಯದಾತರಾಗಿದ್ದು ಜೊತೆಗೆ ಸ್ವಾಮಿ ವಿವೇಕಾನಂದ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ , ಕೆಂಪೇಗೌಡ ಯುವಕರ ಸಂಘ ರಚಿಸಿ, ಜೊತೆಗೆ ೨೦೧೭ರಲ್ಲಿ ರಾಜಕೀಯ ಪಕ್ಷ (ಕೆಪಿಜೆಪಿ ) ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಸ್ಥಾಪನೆ ಮಾಡಿ ೨೦೧೮ ರಾಜ್ಯದಲ್ಲಿ ವಿಧಾನಸಭೆಗೆ ೪೫ ಜನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ದಾವಣಗೆರೆ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಆರ್. ಶಂಕರ್ ವರನ್ನು ಗೆಲ್ಲಿಸಿ, ಕರ್ನಾಟಕ ರಾಜ್ಯದಲ್ಲಿ ಹೊಸ ಪಕ್ಷವು,ಮೊದಲ ಬಾರಿಗೆ ಶಾಸಕರಾಗಿ ಸಚಿವರನ್ನಾಗಿ ಮಾಡಿದ್ದು ಇತಿಹಾಸವೇ ಸರಿ. ಕಾಂಗ್ರೆಸ್ಸಿನ ಹಾಗೂ ಕುಮಾರಸ್ವಾಮಿಯ ಜೆ.ಡಿ ಎಸ್. ಸಮ್ಮಿಶ್ರ ಸರ್ಕಾರದ ಕ್ಯಾಬಿನೆಟ್ ನಲ್ಲಿ ಅರಣ್ಯ ಸಚಿವರನ್ನಾಗಿ ನಂತರ ಬಿಜೆಪಿಯ ಯಡಿಯೂರಪ್ಪ ಕ್ಯಾಬಿನೆಟ್ ನಲ್ಲಿ ಪೌರಾಡಳಿತ ಸಚಿವರಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ . ಹಾಗೆ ೨೦೧೮ ರಲ್ಲಿ ರಾಣಿಬೆನ್ನೂರು ನಗರಸಭೆಯಲ್ಲಿ ಹತ್ತು ಜನ ಕೌನ್ಸಿಲರ್ಗಳಾಗಿ ಆಯ್ಕೆಯಾಗುವಲ್ಲಿ ಮಹೇಶ್ ಡಿ ಅವರ ಪಾತ್ರ ಮಹತ್ತರವಾದದ್ದು.
ನಿರಂತರ ೩೫ ವರ್ಷದಿಂದ ಬಡ ಕಾರ್ಮಿಕರಿಗೆ ಬಡ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಮಾಡುತ್ತಾ ಸೇವೆ ಮಾಡುತ್ತಿರುವದು ಒಂದು ಕಡೆ ಆದರೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಆಧ್ಯಾತ್ಮಿಕವಾಗಿ ಇವರ ಸೇವೆ ಅಪಾರ.
ಇವರ ಸೇವೆಯನ್ನು ಗುರುತಿಸಿ ಬೆಂಗಳೂರಿನ ಹಲವಾರು ಸಂಘ ಸಂಸ್ಥೆಯಿಂದ "ಪುತ್ತೂರಿನ ಮುತ್ತು" ಎಂಬ ಬಿರುದು ನೀಡಿದ್ದಾರೆ. ಜೊತೆಗೆ ಹಲವಾರು ಸಂಘ-ಸಂಸ್ಥೆ ಶಿಕ್ಷಣ ಸಂಸ್ಥೆ ಸಾಮಾಜಿಕವಾಗಿ ರಾಜಕೀಯವಾಗಿ ಬಿರುದುಗಳು ಲಭಿಸಿದೆ.
ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರೂ ಇವರು ಮಾಡಿರುವ ಸಮಾಜ ಸೇವೆಗಳು: ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಧನ ಸಹಾಯ
ಹೆಣ್ಮಕ್ಕಳಿಗೆ ಸೀರೆ ಬಟ್ಟೆ ಬಾಗಿನ ಸೀಮಂತ ಕಾರ್ಯಕ್ರಮಗಳು, ವೃದ್ಧೆ , ವೃದ್ಧರಿಗೆ ಬಟ್ಟೆ ಕಂಬಳಿ ಬೆಡ್ ಶೀಟ್ ಕೈಕೊಲು ಧಾರ್ಮಿಕ ದೇವಸ್ಥಾನದ ಪ್ರವಾಸ, ಸ್ವಚ್ಛ ಭಾರತ ಆಂದೋಲನ ಹಮ್ಮಿಕೊಂಡು ೪೦೦೦ ಜನರ ಮನೆಗಳಿಗೆ ಒಣ ಮತ್ತು ಹಸಿ ಕಸದ ಡಸ್ಟ್ ಪಿನ್ ವಿತರಣೆ,ಹೆಗ್ಗೆನಹಳ್ಳಿಯ ಮಾರಮ್ಮ ದೇವಿ ಗೆ ಉತ್ಸವ ಮೂರ್ತಿ ಕೊಡುಗೆ, ಅಕ್ಕ ಪಕ್ಕದ ೪೦ ಶಾಲೆಗಳಿಗೆ ಪ್ರತಿಭಾ ಪುರಸ್ಕಾರ .
, ಪ್ರತಿವರ್ಷ ಜನವರಿ ೧೨ರಂದು ವಿವೇಕಾನಂದ ಜಯಂತಿಗೆ ಬೆಂಗಳೂರು ನಗರದ ಗೋಲೃರಹಟ್ಟಿಯಲ್ಲಿರುವ ಗಾಂಧಿ ವೃದ್ಧಾಶ್ರಮ ಮತ್ತು ಇತರ ಆಶ್ರಮಗಳಿಗೆ ಹಣ್ಣು ಹಂಪಲ ಅಕ್ಕಿ ವಿತರಣೆ.
, ಟ್ರಸ್ಟಿನಿಂದ ಅಪರಾಧ ತಡೆ ಬಗ್ಗೆ ೨೫೦೦೦ ಜಾಗೃತಿ ಪುಸ್ತಕ ವಿತರಣೆ, ಎಪ್ಪತ್ತು ಜನ ಬಡ ಮಕ್ಕಳಿಗೆ ಉಚಿತ ಬೋಧನಾ ಕೇಂದ್ರ ,ಮುಸಲ್ಮಾನರಿಗೆ ದರ್ಗಾ ಪ್ರವಾಸ ಕ್ರಿಸ್ಟಿ ಯನ್ನರಿಗೆ ಚರ್ಚ್ ಪ್ರವಾಸ ..
,ಸಂಘದ ವಾರ್ಸಿಹೋತ್ಸವಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಬಡ ಜನರಿಗೆ ವಾಕಿಂಗ್ ಸ್ಟಿಕ್ , ಸ್ಪೆಕ್ಸ್, ಆರೋಗ್ಯ ಶಿಬಿರ, ಬಡ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ಡಿಕ್ಷನರಿ ವಿತರಣೆ, ಕೋವಿಡ್ ಸಮಯದಲ್ಲಿ ಹುಟ್ಟು ಊರಾದ ಕೊಳ್ತಿಗೆ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ವಾಸವಿರುವ ಬೆಂಗಳೂರಿನ ಬಡ ಸಂಸಾರಕ್ಕೆ ರೇಷನ್ ಕಿಟ್ , ಔಷಧಿ ಹಾಗೂ ಕೊರೊನದಿಂದ ಬಲಿಯಾದ ಕುಟುಂಬಗಳಿಗೆ ತಲಾ ಇಪ್ಪತ್ತು ಸಾವಿರ ಸಹಾಯಧನ,ಕೊರನಾದಲ್ಲಿ ಪೊಲೀಸ್ ಠಾಣೆ ಸಿಬ್ಬಂದಿಗೆ ಊಟದ ವ್ಯವಸ್ಥೆ ಸೇರಿದಂತೆ ೨೦೦೬ರಲ್ಲಿ ಉತ್ತರ ಕರ್ನಾಟಕದಲ್ಲಿ ಭೀಕರ ಜಲ ಪ್ರವಾಹ ಮತ್ತು ಮಡಿಕೇರಿಯಲ್ಲಿ ನಡೆದ ಭೀಕರ ಭೂಕಂಪದಲ್ಲಿ ನಿರಾಶ್ರಿತರಿಗೆ ಬಟ್ಟೆ ದವಸ ಧಾನ್ಯಗಳನ್ನು ಲಾರಿ ಟ್ರಕ್ ಗಳಿಂದ ಪ್ರವಾಸ ಮಾಡಿ ವಿತರಣೆ ಸೇರಿ ಇವರು ಮಡಿರುವ ಸಮಾಜ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
Posted by Vidyamaana on 2024-04-14 16:27:29 |
ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಕೊಟ್ಟ ಐದು ಗ್ಯಾರಂಟಿ ಭರವಸೆಯನ್ನು ಈಡೇರಿಸಿದ್ದೇವೆ ,ಕೊಟ್ಟ ಮಾತನ್ನು ಉಳಿಸಿಕೊಂಡ ನಾವು ಈ ಬಾರಿ ವೋಟು ಕೇಳುವಾಗ ಜನರ ಮುಂದೆ ಹೇಳುತ್ತಿದ್ದೇವೆ ಆದರೆ ಬಿಜೆಪಿಯವರಿಗೆ ಹೇಳಿಕೊಳ್ಳಲು ಏನಿದೆ ಎಂದು ಶಾಸಕರಾದ ಅಶೋಕ್ ರೈ ಯವರು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಅವರು ಪುಣಚಾ ದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಗ್ಯಾರಂಟಿಯ ಬಗ್ಗೆ ಅಪಹಾಸ್ಯಮಾಡುತ್ತಿದ್ದ ಬಿಜೆಪಿಯವರು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಹೇಳುತ್ತಿದ್ದರು ಆದರೆ ಗ್ಯಾರಂಟಿ ಪಡೆದುಕೊಳ್ಳಲು ಬಿಜೆಪಿಯವರು ಮೊದಲ ಸಾಲಿನಲ್ಲಿದ್ದರು ಎಂದು ವ್ಯಂಗ್ಯವಾಡಿದರು.
ಕಳೆದ ಏಳು ತಿಂಗಳಿಂದ ಕರ್ನಾಟಕ ಪ್ರತೀಮನೆಯಲ್ಲಿ ನೆಮ್ಮದಿಯ ವಾತಾವರಣ ಇದೆ, ಹಸಿವು ಮುಕ್ತ ರಾಜ್ಯವಾಗಿ ನಮ್ಮಕರ್ನಾಟಕ ಮುಂದೆ ಸಾಗುತ್ತಿದೆ. ಕಾಂಗ್ರೆಸ್ ಎಂದಿಗೂ ಬಡವರ ಪರ ಎಂಬುದನ್ನು ಗ್ಯಾರಂಟಿ ಸಾಭೀತು ಮಾಡಿದೆ. ಅಭಿವೃದ್ದಿ ವಿಚಾರದಲ್ಲಿ ಬಿಜೆಪಿ ಯದ್ದು ಶೂನ್ಯ ಸಾಧನೆಯಾಗಿದೆ ಎಂದು ಹೇಳಿದರು.
ಜನರಲ್ಲಿಭಯ ಹುಟ್ಟಿಸುವುದು ಬಿಜೆಪಿ ಹುಟ್ಟು ಗುಣ
ಪ್ರತೀ ಚುನಾವಣೆ ಬಂದಾಗ ಮನೆ ಮನೆಗೆ ತೆರಳಿ ಜನರಲ್ಲಿಭಯ ಹುಟ್ಟಿಸುವ ಕೆಲಸವನ್ನು ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೆಣ್ಣುಮಕ್ಕಳು ಮನೆಯಿಂದ ಹೊರಗೆ ಹೋಗುವಂತಿಲ್ಲ, ಗಂಡುಮಕ್ಕಳನ್ನು ಜೈಲಿಗೆ ಹಾಕುತ್ತಾರೆ ಎಂದು ಅಫ್ರಚಾರ ಮಾಡುತ್ತಾರೆ. ಸಮಾಜದಲ್ಲಿಕೋಮು ವಿಷ ಬೀಜ ಬಿತ್ತಿ ಅಧಿಕಾರ ಪಡೆಯುವುದೇ ಬಿಜೆಪಿ ಅಜೆಂಡವಾಗಿದೆ ಎಂದು ಶಾಸಕರು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಇಂದು ಹೆಣ್ಣುಮಕ್ಕಳು ಸ್ವಾಭಿಮಾನದಿಂದ ಬದಕುವಂತಾಗಿದೆ ಇದನ್ನು ಬಿಜೆಪಿಯವರಿಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕರು ಹೇಳಿದರು.
Posted by Vidyamaana on 2024-08-31 06:12:37 |
ಪುತ್ತೂರು; ಪುತ್ತೂರಿನಲ್ಲಿ ಯಾವುದೇ ಧರ್ಮದ ಹಬ್ಬಗಳ ಸಂದರ್ಭದಲ್ಲಿಯೂ ಯಾವುದೇ ತೊಂದರೆ ಈ ತನಕ ಉಂಟಾಗಿಲ್ಲ. ಈ ಬಾರಿಯೂ ಅಂತಹ ಯಾವುದೇ ಕೆಟ್ಟ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆಗೆ ಜನತೆಯ ಸಹಕಾರ ಬೇಕು ಎಂದು ಇನ್ಸ್ಪೆಕ್ಟರ್ ಸತೀಶ್ಕುಮಾರ್ ಹೇಳಿದರು.
ಗುರುವಾರ ಪುತ್ತೂರು ನಗರಠಾಣೆಯಲ್ಲಿ ಗಣೇಶೋತ್ಸವ ಹಾಗೂ ಈದ್ಮಿಲಾದ್ ಹಬ್ಬದ ಹಿನ್ನಲೆ ನಡೆದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಬ್ಬಗಳ ಆಚರಣೆ ಮತ್ತು ಮೆರವಣಿಗೆ ಸಂದರ್ಭದಲ್ಲಿ ಡಿ.ಜೆಗೆ ಆವಕಾಶ ಇಲ್ಲ. ದೇವಾಲಯ, ಮಸೀದಿಗಳ ಮುಂಭಾಗದಲ್ಲಿ ಮೆರವಣಿಗೆ ಸಂದರ್ಭ ಯಾವುದೇ ಅನಗತ್ಯ ಘೋಷಣೆಗೆ ಅವಕಾಶ ಇಲ್ಲ. ಕಾರ್ಯಕ್ರಮಗಳನ್ನು ರಾತ್ರಿ ೧೦ ಗಂಟೆಯ ಒಳಗೆ ಮುಗಿಸಬೇಕು. ಸಮಯಪಾಲನೆ ಮೊದಲ ಆದ್ಯತೆ ನೀಡಬೇಕು ಎಂದು ಅವರು ಹಾಜರಿದ್ದ ವಿವಿಧ ಸಂಘಟನೆಗಳ ಮುಖಂಡರಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದರು.
Posted by Vidyamaana on 2024-01-31 20:48:07 |
ರಾಂಚಿ : ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರ್ಖಂಡ್ ಸಿಎಂ ಸೊರೇನ್ ಅವರು ಇಡಿ ಬಂಧನದ ಭೀತಿಯಿಂದ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಇಂದು ಇಡಿ ವಿಚಾರಣೆಗೆ ಹಾಜರಾಗಿದ್ದಂತ ಅವರನ್ನು, ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಜಾರಿ ನಿರ್ದೇಶನಾಲಯದ ವಿಚಾರಣೆಯು ಬುಧವಾರ ಮಧ್ಯಾಹ್ನ ಅವರ ರಾಂಚಿ ನಿವಾಸದಲ್ಲಿ ಪ್ರಾರಂಭವಾಯಿತು. ಈ ವಿಚಾರಣೆಯ ಬಳಿಕ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರೋದಾಗಿ ತಿಳಿದು ಬಂದಿದೆ.
ತನಿಖಾ ಸಂಸ್ಥೆಯ ಅಧಿಕಾರಿಗಳು ಏಳು ಗಂಟೆಗಳಿಗೂ ಹೆಚ್ಚು ಕಾಲ ಅವರ ನಿವಾಸದಲ್ಲಿ ಬೀಡುಬಿಟ್ಟಿದ್ದರು. ಅವರ ನಿವಾಸದ ಒಳಗೆ ಮತ್ತು ಹೊರಗೆ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಈಗ ಅಲ್ಲಿಗೆ ಉನ್ನತ ಅಧಿಕಾರಿಗಳಲ್ಲಿ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಲ್ ಖಿಯಾಂಗೇಟ್ ಧಾವಿಸಿದ್ದಾರೆ.
ಸೊರೆನ್ ಅವರ ಮನೆಯ ಹೊರಗಿನ ಇತ್ತೀಚಿನ ದೃಶ್ಯಗಳು ಹೆಚ್ಚಿನ ಸಂಖ್ಯೆಯ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯನ್ನು ಹಾಜರಿದ್ದರು.ಅವರಲ್ಲಿ ಕೆಲವರು ಶಸ್ತ್ರಸಜ್ಜಿತರಾಗಿದ್ದಾರೆ. ಪ್ರವೇಶ ದ್ವಾರವನ್ನು ಕಾಯುತ್ತಿದ್ದಾರೆ. ಪೊಲೀಸ್ ಜೀಪುಗಳು ಮತ್ತು ವಾಹನಗಳು ಬೀದಿಯಲ್ಲಿ ಸಾಲುಗಟ್ಟಿ ನಿಲ್ಲುತ್ತವೆ.
ಸೆಕ್ಷನ್ 144 - ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸುವ ಆದೇಶ - ಈ ಪ್ರದೇಶದಲ್ಲಿ ಜಾರಿಯಲ್ಲಿದೆ. ಇದರ ನಡುವೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರನ್ನು ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿರೋದಾಗಿ ತಿಳಇದು ಬಂದಿದೆ.
Posted by Vidyamaana on 2024-02-26 21:08:26 |
ಬೆಂಗಳೂರು (ಫೆ.26): ಹಣಕ್ಕಾಗಿ ವೃದ್ಧೆಯೊಬ್ಬರ ಕೈ, ಕಾಲು ಕತ್ತರಿಸಿ ಭೀಕರವಾಗಿ ಕೊಂದು ಬಳಿಕ ಡ್ರಮ್ನಲ್ಲಿ ಮೃತದೇಹವನ್ನು ತುಂಬಿ ಬೀದಿಗೆ ಬಿಸಾಡಿ ಮೃತರ ಪರಿಚಿತರೇ ಪರಾರಿ ಆಗಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೆ.ಆರ್.ಪುರ ಸಮೀಪದ ನಿಸರ್ಗ ಲೇಔಟ್ ನಿವಾಸಿ ಸುಶೀಲಮ್ಮ (76) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಪರಿಚಿತ ದಿನೇಶ್ ಹಾಗೂ ಆತನ ಸಹಚರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.ನಿಸರ್ಗ ಲೇಔಟ್ನ ಮನೆಗಳ ಓಣಿಯಲ್ಲಿ ಎರಡು ದಿನಗಳಿಂದ ಅನಾಥವಾಗಿ 10 ಲೀಟರ್ ಸಾಮರ್ಥ್ಯದ ಡ್ರಮ್ ಇಟ್ಟಿರುವುದನ್ನು ಭಾನುವಾರ ಗಮನಿಸಿದ ಸ್ಥಳೀಯರು, ಶಂಕೆ ಮೇರೆಗೆ ಆ ಡ್ರಮ್ ಅನ್ನು ಬಳಿ ತೆರಳಿ ನೋಡಿದಾಗ ಅದರೊಳಗೆ ಸುಶೀಲಮ್ಮ ಅವರ ಮೃತದೇಹ ಕಂಡು ಬಂದಿದೆ. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲಿಸಿದಾಗ ಕೊಲೆ ಹಿಂದೆ ಪರಿಚಿತರ ಕೈವಾಡ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಬಿಜೆಪಿ ಕಾರ್ಯಕರ್ತೆ:
ಚಿಕ್ಕಬಳ್ಳಾಪುರ ಜಿಲ್ಲೆಯ ಮೃತ ಸುಶೀಲಮ್ಮ ಅವರು, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದರು. ಮೃತರಿಗೆ ಓರ್ವ ಗಂಡು ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆಸ್ತಿ ಮಾರಾಟದಲ್ಲಿ ಬಂದ ಹಣದಲ್ಲಿ ಮನೆ ಬೋಗ್ಯಕ್ಕೆ ಪಡೆದು ಮಕ್ಕಳಿಂದ ಪ್ರತ್ಯೇಕವಾಗಿ ಅಜ್ಜಿ ವಾಸವಾಗಿದ್ದರು. ಅದೇ ಕಟ್ಟಡದಲ್ಲಿ ಅವರ ಕಿರಿಯ ಪುತ್ರಿ ಮತ್ತು ಮಗಳು ಹಾಗೂ ಅಜ್ಜಿ ಮನೆ ಸಮೀಪದಲ್ಲೇ ಅವರ ಮಗ ಕೂಡ ವಾಸವಾಗಿದ್ದರು. ಪ್ರತಿ ತಿಂಗಳು ತಾಯಿಗೆ ₹2-3 ಸಾವಿರವನ್ನು ಪುತ್ರ ನೀಡುತ್ತಿದ್ದರು.
ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿದ್ದ ಸುಶೀಲಮ್ಮ ಅವರು, ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದರು. ಆಗ ಅವರಿಗೆ ದಿನೇಶ್ ಎಂಬಾತನ ಪರಿಚಯವಾಗಿದ್ದು, ಆಗಾಗ್ಗೆ ಅಜ್ಜಿಗೆ ಮನೆಗೆ ಬಂದು ಹೋಗುವುದನ್ನು ಆತ ಮಾಡುತ್ತಿದ್ದ ಎಂದು ಮೂಲಗಳು ಹೇಳಿವೆ.ಈ ಹತ್ಯೆಗೆ ನಿಖರವಾಗಿ ಕಾರಣ ಗೊತ್ತಾಗಿಲ್ಲ. ಹಣಕ್ಕಾಗಿ ದಿನೇಶ್ ಕೃತ್ಯ ಎಸಗಿರಬಹುದು ಎಂದು ಶಂಕೆ ಇದೆ. ಮನೆಯಲ್ಲಿ ಅಜ್ಜಿ ಜತೆ ದಿನೇಶ್ ಮಾತನಾಡುತ್ತ ನಿಂತಿರುವುದನ್ನು ಮೃತರ ಮೊಮ್ಮಗಳು ನೋಡಿದ್ದಳು. ಇದಾದ ಬಳಿಕ ಅಜ್ಜಿ ಹತ್ಯೆಯಾಗಿದೆ. ಹೀಗಾಗಿ ದಿನೇಶ್ ಮೇಲೆ ಅನುಮಾನ ಹೆಚ್ಚಿದ್ದು, ಕೃತ್ಯ ಬೆಳಕಿಗೆ ಬಂದ ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮನೆ ಹಿಂಬದಿ ಓಣಿಯಲ್ಲಿ ಶವವಿದ್ದ ಡ್ರಮ್ ಪತ್ತೆಮನೆಯಲ್ಲಿ ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ಮನೆಯಲ್ಲಿದ್ದ ಡ್ರಮ್ನಲ್ಲಿ ತುಂಬಿ ಮನೆ ಹಿಂಬದಿಯ ಓಣಿಯಲ್ಲಿ ಮೃತದೇಹ ತುಂಬಿದ್ದ ಡ್ರಮ್ಮನ್ನು ಇಟ್ಟು ಪರಾರಿಯಾಗಿದ್ದರು. ಈ ಹತ್ಯೆ ಕೃತ್ಯ ಶುಕ್ರವಾರ ರಾತ್ರಿ ನಡೆದಿರಬಹುದು. ಕೆಲವು ಬಾರಿ ಎರಡ್ಮೂರು ದಿನಗಳು ಅಜ್ಜಿ ಯಾರಿಗೂ ತಿಳಿಸದೆ ಹೊರ ಹೋಗುತ್ತಿದ್ದರು. ಹೀಗಾಗಿ ಎರಡು ದಿನಗಳಿಂದ ಮನೆ ಬಳಿ ಕಾಣದೆ ಹೋದಾಗ ಮೃತರ ಮಗಳು ಹಾಗೂ ಮೊಮ್ಮಗಳಿಗೆ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದ್ದರಿಂದ ಹತ್ಯೆಕೃತ್ಯ ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Posted by Vidyamaana on 2024-06-29 20:41:23 |
ಪುತ್ತೂರು;ಧರೆ ಕುಸಿದು ಮನೆಗೆ ಹಾನಿಯದ ಬನ್ನೂರು ಜೈನರ ಗುರಿಗೆ ಶಾಸಕರಾದ ಅಶೋಕ್ ರ್ಯಯವರು ಸನಿವಾರ ಭೇಟಿ ನೀಡಿ ಕುಟುಂಬದ ಜೊತೆ ಮಾತುಕತೆ ನಡೆಸಿದರು.ಈ ಸಂದರ್ಭದಲ್ಲಿ ಮನೆ ಮಾಲಿಕ ಅಬ್ದುಲ್ ಮಜೀದ್ರವರು ನಡೆದ ಘಟನೆಯ ಬಗ್ಗೆ ಶಾಸಕರಲ್ಲಿ ವಿವರಿಸಿದರು. ಮನೆಯ ಗೋಡೆಗೆ ಧರೆ ಜರಿದು ಬಿದ್ದು ಮಕ್ಕಳು ಮಣ್ಣಿನಡಿಯಲ್ಲಿ ಬಿದ್ದರೂ ಪವಾಡ ಸದೃಶಪಾರಾಗಿದ್ದು ಮನೆ ಗೋಡೆ ಮತ್ತು ಮಾಡು ಸಂಪೂರ್ಣ ಜಖಂಗೊಂಡಿದೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ಶಾಸಕರಲ್ಲಿ ತಿಳಿಸಿದರು.