Posted by vidyamaana on 2024-07-23 18:35:28 |
ಕಾರವಾರ: ಶಿರೂರು ಭೂಕುಸಿತ ಸ್ಥಳದಲ್ಲಿ 8 ದಿವಸದ ಬಳಿಕ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಈ ಮೂಲಕ 8ನೇ ಮೃತದೇಹ ಸಿಕ್ಕಂತಾಗಿದೆ. ಈ ನಡುವೆ ಕೇರಳದ ಲಾರಿ ಚಾಲಕ ಅರ್ಜುನ್ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಮಂಗಳವಾರ ಬೆಳಗ್ಗೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆ ಸಣ್ಣಿ ಹನ್ಮಂತ ಗೌಡ (57) ಸಾವನ್ನಪ್ಪಿದ್ದು, ಮೃತದೇಹ ದೊರೆತಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಅವರ ಶವ ಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಮನೆ ಕುಸಿತವಾಗಿ ಸಣ್ಣಿ ಹನ್ಮಂತ ಗೌಡ ಅವರು ಕಣ್ಮರೆಯಾಗಿದ್ದರು. ಇನ್ನೂ ಅರ್ಜುನ್ ಸಹಿತ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ NDRF, SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ಮುಂದುವರೆದಿದೆ.
ಕೇರಳ ಮಾಧ್ಯಮಗಳ ಕವರೇಜ್
ಸದ್ಯ ಕರ್ನಾಟಕದ ಉತ್ತರ ಕನ್ನಡದಲ್ಲಾದ ಭೂಕುಸಿತ ವರದಿಯನ್ನ ಕನ್ನಡಿಗರು ಕೂಡಾ ಮಲಯಾಳಂ ಸುದ್ದಿವಾಹಿನಿಗಳಲ್ಲಿ ವೀಕ್ಷಿಸುವಂತಾಗಿದೆ. ಕೇರಳದ ಪ್ರಮುಖ ರಾಜ್ಯ ಮಟ್ಟದ ವಾಹಿನಿಗಳು ಕಳೆದ 4 ದಿನಗಳಿಂದಲೂ ಉತ್ತರ ಕನ್ನಡದಲ್ಲಿ ಬೀಡುಬಿಟ್ಟಿವೆ. ಅರ್ಜುನ್ ಶೋಧ ಕಾರ್ಯಾಚರಣೆಗೆ ಹೆಚ್ಚಿನ ಒತ್ತಡ ಏರುತ್ತಿದೆ. ಜೊತೆಗೆ ಕೇರಳದ ನಾಗರಿಕ ಸುರಕ್ಷತಾ ತಂಡಗಳು ಕೂಡಾ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕೇರಳದಿಂದ ಶಿರೂರಿಗೆ ತಂಡವಾಗಿ ಆಗಮಿಸಿವೆ
Posted by Vidyamaana on 2024-03-24 21:28:06 |
ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ 5ನೇ ಪಟ್ಟಿ ಬಿಡುಗಡೆ ಮಾಡಿದ್ದು ರಾಜ್ಯದ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.ಕಾಂಗ್ರೆಸ್ ಸರ್ಕಾರದ ವಿರುದ್ಧ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರವಾಗಿ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅನಂತ್ ಕುಮಾರ್ ಹೆಗಡೆ ಬದಲು ಇದೀಗ ಹೈಕಮಾಂಡ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ನೀಡಿದೆ.ಅಲ್ಲದೆ ಇದೇ ವೇಳೆ ಇತ್ತೀಚಿಗೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ ಜಗದೀಶ್ ಶೆಟ್ಟರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಬದಲು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ. ಅಲ್ಲದೆ ಹೈಕಮಾಂಡ್ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿಯ ಮಾಜಿ ಸಚಿವ ಸುಧಾಕರ್ ಅವರಿಗೆ ಕೂಡ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ.ಬಿಜೆಪಿ 5ನೇ ಪಟ್ಟೆ ಬಿಡುಗಡೆಯಾಗಿದ್ದು, ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದು, ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
1)ಉತ್ತರ ಕನ್ನಡ ಲೋಕಸಭಾ ಕ್ಷೇತ್ರ - ವಿಶ್ವೇಶ್ವರ ಹೆಗಡೆ ಕಾಗೇರಿ
2)ಚಿಕ್ಕಬಳ್ಳಾಪುರ ಕ್ಷೇತ್ರ -ಡಾ. ಕೆ ಸುಧಾಕರ್
3) ಬೆಳಗಾವಿ ಲೋಕಸಭಾ ಕ್ಷೇತ್ರ- ಜಗದೀಶ್ ಶೆಟ್ಟರ್
4). ರಾಯಚೂರು ಲೋಕಸಭಾ ಕ್ಷೇತ್ರ-ರಾಜಾಅಮರೇಶ್ವರ ನಾಯಕಗೆ ಬಿಜೆಪಿ ಟಿಕೇಟ್ ನೀಡಿದೆ.
Posted by Vidyamaana on 2022-12-15 13:42:18 |
ಪುತ್ತೂರು: ೧೯ ಕರ್ನಾಟಕ ಬೆಟಾಲಿಯನ್ ಎನ್ಸಿಸಿ ಮಡಿಕೇರಿ ಹಾಗೂ ಸಂತ ಫಿಲೋಮಿನಾ ಕಾಲೇಜಿನ ಎನ್ಸಿಸಿ ಘಟಕದ ಆಶ್ರಯದಲ್ಲಿ ಶತ್ ಶತ್ ನಮನ ವಿಶೇಷ ಕಾರ್ಯಕ್ರಮ ಹವಾಲ್ದಾರ್ ದಿ. ಪರಮೇಶ್ವರ ಕೆ. ಅವರ ದೋಲ್ಪಾಡಿ ಮನೆಯಲ್ಲಿ ನಡೆಯಿತು.
ಸೈನಿಕರ ಪರಾಕ್ರಮ, ತ್ಯಾಗ, ಬಲಿದಾನಗಳನ್ನು ಸ್ಮರಿಸಿ, ಅವರಿಗೆ ಗೌರವ ಅರ್ಪಿಸಲು ಹಾಗೂ ಅವರ ಕುಟುಂಬಕ್ಕೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ಶತ್ ಶತ್ ನಮನ ಕಾರ್ಯಕ್ರಮ ಆಯೋಜಿಸಲಾಗುತ್ತದೆ.
೧೯ ವರ್ಷಗಳ ಹಿಂದೆ ಭೂಸೇನೆಗೆ ಸೇರ್ಪಡೆಗೊಂಡ ಯೋಧ ಪರಮೇಶ್ವರ ಗೌಡ ಅವರು ಬೆಂಗಳೂರಿನಲ್ಲಿ ತರಬೇತಿ ಪಡೆದ ಬಳಿಕ ಲೇಹ್, ಲಡಾಕ್, ಅಸ್ಸಾಂ, ರಾಜಸ್ಥಾನ, ಸೂರತ್ ಮೊದಲಾದೆಡೆ ಸೇವೆ ಸಲ್ಲಿಸಿ, ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡರು. ಹುದ್ದೆಯಲ್ಲಿ ಭಡ್ತಿ ಹೊಂದಿ ಜಮ್ಮುವಿನಲ್ಲಿ ಹವಾಲ್ದಾರ್ ಆಗಿನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಕಾರ್ಗಿಲ್ ಕದನದಲ್ಲಿ ಭಾಗವಹಿಸಿದ ಅವರು, ಕಾಶ್ಮೀರದ ಉಧಂಪುರ ಸಮೀಪದ ಕೆಹರಿ ಎಂಬಲ್ಲಿ ೨೦೦೨ರ ಜೂನ್ ೯ರಂದು ಪಾಕ್ ಸೈನಿಕರ ಶೆಲ್ ದಾಳಿಗೆ ಗುರಿಯಾಗಿ ಹುತಾತ್ಮರಾದರು.
ಈ ಪರಾಕ್ರಮವನ್ನು ಸ್ಮರಿಸುವ ಸಲುವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಭಾರತೀಯ ಸೇನೆಯ ಉನ್ನತ ಅಧಿಕಾರಿಗಳ ಪರವಾಗಿ ಶತಶತನಮನಗಳನ್ನೊಳಗೊಂಡ ವಿಶೇಷ ಸ್ಮರಣಿಕೆಯನ್ನು ದಿ| ಪರಮೇಶ್ವರ ಗೌಡ ಕೆ. ಇವರ ಪತ್ನಿ ಕೆ.ಪಿ. ಪುಷ್ಪಾವತಿ ಹಸ್ತಾಂತರಿಸಲಾಯಿತು. ೧೯ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಮಡಿಕೇರಿ ಇದರ ಸುಬೇದಾರ್ ಮೇಜರ್ ಮಲ್ಲಿಕಾರ್ಜುನ, ಸುಬೇದಾರ್ ರಾಜುಗುರುಂಗು, ಸಂತ ಫಿಲೋಮಿನಾ ಕಾಲೇಜಿನ ಎನ್. ಸಿ. ಸಿ. ಅಧಿಕಾರಿ ಲೆಫ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾ ಮತ್ತುಎನ್. ಸಿ. ಸಿ. ಕೆಡೆಟ್ಗಳಾದ ಸೀನಿಯರ್ ಅಂಡರ್ ಆಫೀಸರ್ ಸಾತ್ವಿಕ್ ಡಿ.ಎಸ್., ಜೂನಿಯರ್ ಅಂಡರ್ ಆಫೀಸರ್ಸ್ ಸ್ವಸ್ತಿಕ ಕೆ, ಕೃತಿಕೆ ಎನ್., ಕ್ಯಾಡೆಟ್ ರಿಯಾ, ಸಂಜನಾ ಅವರು ಹಸ್ತಾಂತರಿಸಿದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ಪೊನ್ನಪ್ಪ ಉಪಸ್ಥಿತರಿದ್ದರು.
ಹುತಾತ್ಮ ಸೈನಿಕ ದಿ. ಪರಮೇರ್ಶವರ ಕೆ. ಅವರ ಪತ್ನಿ ಪುಷ್ಪಾವತಿ ಅವರಿಗೆ ಸ್ಮರಣಿಕೆಯನ್ನು ಹಸ್ತಾಂತರಿಸಲಾಯಿತು.
Posted by Vidyamaana on 2024-08-13 05:30:13 |
ಮಂಗಳೂರು, ಆಗಸ್ಟ್.13: ಆರೋಗ್ಯ ಕ್ಷೇತ್ರದಲ್ಲಿ ಉನ್ನತ ಮಟ್ಟದ ಛಾಪನ್ನು ಮೂಡಿಸಿದ ಮಂಗಳೂರಿನ ಫಳ್ನೀರಿನ ಇಂದಿರಾ ಆಸ್ಪತ್ರೆ 25ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದು ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಕಾರ್ಯಕ್ರಮ ಹಮ್ಮಿಕೊಂಡಿದೆ. 25 ವರ್ಷಗಳಲ್ಲಿ ಆಸ್ಪತ್ರೆ ಜೊತೆಗೆ ನರ್ಸಿಂಗ್ ಕಾಲೇಜು ಬೃಹತ್ತಾಗಿ ಮತ್ತು ಅತ್ಯಾಧುನಿಕ ವೈದ್ಯಕೀಯ ಕೇಂದ್ರವಾಗಿ ಬೆಳೆದು ನಿಂತಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಸಯ್ಯದ್ ನಿಜಾಮುದ್ದೀನ್ ಹೇಳಿದರು.
1999ರಲ್ಲಿ ಸ್ಥಾಪನೆಯಾದಾಗಿನಿಂದ ಆಸ್ಪತ್ರೆ ಸಾರ್ವಜನಿಕರಿಗೆ ಅತ್ಯುತ್ತಮ ವೈದ್ಯಕೀಯ ಆರೈಕೆಯನ್ನು ನೀಡುತ್ತ ಬಂದಿದೆ. ತುರ್ತು ಆರೈಕೆ, ಶಸ್ತ್ರಚಿಕಿತ್ಸೆ, ಡಯಾಲಿಸಿಸ್, ಮೆಟರ್ನಿಟಿ, ಮೆಡಿಸಿನ್, ಫಿಸಿಯೋಥೆರಪಿ ಸೇರಿದಂತೆ ವಿಶಾಲವಾದ ಸೇವೆಗಳನ್ನು ಒದಗಿಸುತ್ತಿದೆ. ಇದರ ಜೊತೆಗೆ, ಇಂದಿರಾ ಎಜ್ಯುಕೇಶನಲ್
ಟ್ರಸ್ಟ್ ಆರಂಭಿಸಿದ್ದು ನರ್ಸಿಂಗ್, ಅಲೈಡ್ ಸೈನ್ಸ್ ಮತ್ತು ಫಿಸಿಯೋಥೆರಪಿ ಕೋರ್ಸ್ಗಳನ್ನು ನೀಡುತ್ತಿದ್ದೇವೆ. 60 ವಿದ್ಯಾರ್ಥಿಗಳಿಂದ ಆರಂಭಗೊಂಡ ನಮ್ಮ ಕಾಲೇಜಿನಲ್ಲಿ ಈಗ ವಿವಿಧ 12 ವಿಭಾಗದಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ನೀಡುತ್ತಿದ್ದು 1200 ವಿದ್ಯಾರ್ಥಿಗಳಿದ್ದಾರೆ ಎಂದವರು ಹೇಳಿದರು.
Posted by Vidyamaana on 2024-08-15 22:34:14 |
ಪುತ್ತೂರು :ಮೆಸ್ಕಾಂ ಕಾರ್ಯ ಮತ್ತು ಪಾಲನಾ ಶಾಖೆ, ಪುತ್ತೂರು ನಗರ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಶಾಖೆಯ ಸಹಾಯಕ ಇಂಜಿನಿಯರ್ ರಾಜೇಶ್ ಅವರು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.
Posted by Vidyamaana on 2023-08-24 01:44:18 |
ಬೆಂಗಳೂರು: ಚರ್ಚ್ ಪಾದ್ರಿ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಮ್ಮನಹಳ್ಳಿಯ ಸೆಂಟ್ ಪಿಯೂಸ್ ಚರ್ಚ್ ಪಾದ್ರಿ ಜಯಕರನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಲೈಂಗಿಕ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆಂದು ಮಹಿಳೆ ದೂರು ದಾಖಲಿಸಿದ್ದಾರೆ. ಪಾದ್ರಿ ಜಯಕರನ್ ಅನುಯಾಯಿಗಳಿಂದಲೂ ತನಗೆ ಬೆದರಿಕೆ ಕರೆಗಳು ಬರುತ್ತಿದೆ ಎಂದು ಸಂತ್ರಸ್ತ ಮಹಿಳೆ ಆರೋಪ ಮಾಡಿದ್ದಾರೆ. ಘಟನೆ ಬಗ್ಗೆ ಚರ್ಚ್ನ ಆಂತರಿಕ ಸಮಿತಿಗೂ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.
ಮಹಿಳೆ ವಿರುದ್ಧ ಚರ್ಚ್ ಪಾದ್ರಿ ಕೂಡ ಪ್ರತಿ ದೂರು ದಾಖಲಿಸಿದ್ದು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಚರ್ಚ್ ಹಣಕಾಸಿನ ವಿಚಾರಕ್ಕೆ ಸುಳ್ಳು ಆರೋಪ ಮಾಡಿದ್ದಾರೆಂದು ಮಹಿಳೆ ಸೇರಿದಂತೆ 9 ಮಂದಿ ವಿರುದ್ಧ ಪಾದ್ರಿ ಜಯಕರನ್ ದೂರು ಸಲ್ಲಿಸಿದ್ದಾರೆ. ತಾನು ಚರ್ಚ್ ಪಾದ್ರಿ ಆಗಿ ಅಧಿಕಾರ ವಹಿಸಿಕೊಳ್ಳದಂತೆ ಕಿರುಕುಳ ನೀಡಿದರು. ಆರೋಪಿಗಳು ಚರ್ಚ್ ಹಣ ದುರುಪಯೋಗ ಮಾಡಿಕೊಂಡಿದ್ದಾರೆ.
ಹಣದ ಲೆಕ್ಕ ಕೇಳಿದ್ದಕ್ಕೆ ಈ ರೀತಿ ಸುಳ್ಳು ಆರೋಪ ಮಾಡಿ ನನ್ನ ವಿರುದ್ಧ ದೂರು ನೀಡಿದ್ದಾರೆಂದು ಪಾದ್ರಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Posted by Vidyamaana on 2023-07-27 05:52:10 |
ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ ಬಸ್ ಹಾಗೂ ಆಮ್ನಿ ಕಾರು ನಡುವೆ ಅಪಘಾತ ಸಂಭವಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಅಪಘಾತದಿಂದ ಕಾರಿಗೆ ಹಾನಿಯಾಗಿದ್ದು, ಘಟನೆಗೆ ಕೆ.ಎಸ್.ಆರ್.ಟಿ.ಸಿ.ಯ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ.
ಪುತ್ತೂರು ಕೆ.ಎಸ್.ಆರ್.ಟಿ.ಸಿ. ಮುಂಭಾಗ ತೀರಾ ಇಕ್ಕಟ್ಟಿನ ರಸ್ತೆ. ಹಾಗಿದ್ದು, ಕೆ.ಎಸ್.ಆರ್.ಟಿ.ಸಿ. ಮುಂಭಾಗ ಅಧಿಕಾರಿಗಳು ಬ್ಯಾರಿಕೇಡ್ ಹಾಕಿ, ಇನ್ನಷ್ಟು ಸಮಸ್ಯೆಗೆ ಕಾರಣರಾಗಿದ್ದಾರೆ. ಇದರ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ, ಸ್ಪಂದಿಸದೇ ಇರುವುದು ಘಟನೆಗೆ ಕಾರಣ.
ಕೆ.ಎಸ್.ಆರ್.ಟಿ.ಸಿ. ಮುಂಭಾಗ ನಾಲ್ಕು ರಸ್ತೆ ಸಂಧಿಸುವ ಪ್ರಮುಖ ಸ್ಥಳ. ಇದರಲ್ಲಿ ಎರಡು ರಸ್ತೆ ವನ್ ವೇ ಆಗಿರುವುದು ಸಮಾಧಾನದ ಸಂಗತಿ. ಹಾಗೆಂದು ವಾಹನಗಳ ಸಂಖ್ಯೆಯೇನೂ ಕಡಿಮೆ ಇಲ್ಲ. ಹಳೆ ಪೋಸ್ಟ್ ಕಚೇರಿ ಸಂಪರ್ಕಿಸುವ ರಸ್ತೆ, ಮುಖ್ಯರಸ್ತೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ, ನೆಲ್ಲಿಕಟ್ಟೆಯಿಂದ ಬರುವ ರಸ್ತೆ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಬರುವ ರಸ್ತೆ. ಈ ನಾಲ್ಕು ರಸ್ತೆಗಳ ವಾಹನಗಳು ಬಂದು ಸೇರುವ ಜಂಕ್ಷನ್ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ.
ಇಷ್ಟು ಒತ್ತಡವಿದ್ದರೂ, ಕೆ.ಎಸ್.ಆರ್.ಟಿ.ಸಿ.ಗೆ ಬರುವ ಖಾಸಗಿ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶವಿಲ್ಲ. ಇದ್ದ ಸ್ಥಳವನ್ನು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಬ್ಯಾರಿಕೇಡ್ ಹಾಕಿ, ಬಂದ್ ಮಾಡಿದ್ದಾರೆ. ಹಾಗೆಂದು ಬಸ್ ಟರ್ಮಿನಲ್ ಒಳಗಡೆಗೆ ಖಾಸಗಿ ವಾಹನಗಳ ಪ್ರವೇಶ ನಿಷಿದ್ಧ. ಹಾಗಾದರೆ ಸಾರ್ವಜನಿಕರು ಬಂದಿಳಿಯಲು ವಾಹನ ನಿಲ್ಲಿಸುವುದು ಎಲ್ಲಿ? ಬಸ್ ಟರ್ಮಿನಲಿನ ಮುಂಭಾಗದ ರಸ್ತೆಯಲ್ಲೇ ನಿಲ್ಲಿಸಬೇಕಷ್ಟೇ. ಹೆಚ್ಚಲ್ಲ, ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಲು ರಸ್ತೆಯಲ್ಲೇ ನಿಲ್ಲಿಸುವುದು ಇಲ್ಲಿ ಸಾಮಾನ್ಯವಾಗಿ ಕಂಡುಬರುವ ದೃಶ್ಯ.
ಹೀಗಿರುವಾಗ ಮುಂಭಾಗದ ಅಗಲ ಕಿರಿದಾದ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳು ಓಡಾಡುವುದಾದರೂ ಹೇಗೆ? ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಕೇಳಿಯೂ ಕೇಳದಂತೆ, ನೋಡಿಯೂ ನೋಡದಂತೆ ಇರುವುದಾದರೂ ಯಾಕೆ? ಕೆ.ಎಸ್.ಆರ್.ಟಿ.ಸಿ.ಯ ತಪ್ಪು ನಿರ್ಧಾರಕ್ಕೆ ಗುರುವಾರ ಬೆಳಿಗ್ಗೆ ಅಪಘಾತ ನಡೆದಿದ್ದು, ಅಮಾಯಕರು ಕಷ್ಟ ಅನುಭವಿಸುವಂತಾಯಿತು.
ಬ್ಯಾರಿಕೇಡ್ ಹಾಕಿದ್ದಾದರೂ ಯಾಕೆ?
ಕೆ.ಎಸ್.ಆರ್.ಟಿ.ಸಿ. ಮುಂಭಾಗ ಬ್ಯಾರಿಕೇಡ್ ಹಾಕಲು ಒಂದು ಕಾರಣವಿತ್ತು. ಅಂದು ಅವಳಿ ವೀರರಾದ ಕೋಟಿ – ಚೆನ್ನಯರ ಹೆಸರನ್ನು ಟಸ್ ಟರ್ಮಿನಲಿಗೆ ನಾಮಕಾರಣ ಮಾಡುವ ದಿನ. ಸಚಿವರು, ಶಾಸಕರು ಆಗಮಿಸಬೇಕಾಗಿತ್ತು. ಹಾಗೇ ಬರುವಾಗ ನಿಲ್ದಾಣದ ಮುಂಭಾಗ ಒತ್ತಡ ನಿರ್ಮಾಣವಾಯಿತು. ಈ ಒಂದೇ ಕಾರಣಕ್ಕೆ, ಬಸ್ ಟರ್ಮಿನಲ್ ಮುಂಭಾಗ ಬ್ಯಾರಿಕೇಡ್ ಹಾಕಲಾಯಿತು. ಅದನ್ನು ಒಂದು ದಿನಕ್ಕೆ ಸೀಮಿತ ಮಾಡಬಹುದಿತ್ತು. ಆದರೆ ಹಾಗೇ ಮಾಡಲಿಲ್ಲ. ಅದನ್ನೇ ಶಾಶ್ವತವಾಗಿಸುವ ಯೋಜನೆ ಅಧಿಕಾರಿಗಳದ್ದು.
ಕಾನೂನನ್ನು ಬಡವರ ಮೇಲೆ ಹೇರುವ ಅಧಿಕಾರಿಗಳು, ತಮ್ಮ ವ್ಯಾಪ್ತಿಗೆ ಬಂದಾಗ ಕಣ್ಣುಮುಚ್ಚಿ ಕುಳಿತುಕೊಳ್ಳುವುದು ಮಾತ್ರ ವಿಪರ್ಯಾಸ. ವಾಣಿಜ್ಯ ಸಂಕೀರ್ಣದ ಮುಂಭಾಗದ ಪಾರ್ಕಿಂಗ್ ಜಾಗವನ್ನು ಮುಚ್ಚುವಂತೆಯೇ ಇಲ್ಲ. ಅಥವಾ ತನ್ನ ಗ್ರಾಹಕರಿಗೆ ಮಾತ್ರ ಎಂದು ಬೋರ್ಡ್ ಹಾಕುವಂತೆ ಇಲ್ಲ ಎಂದು ಇತ್ತೀಚೆಗೆ ನ್ಯಾಯಾಲಯ ಸೂಚನೆ ನೀಡಿರುವುದೂ ಕೂಡ ಇಲ್ಲಿ ಉಲ್ಲೇಖನೀಯ.