Posted by vidyamaana on 2024-05-27 18:41:30 |
ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ.
ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.
ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.
Posted by Vidyamaana on 2023-11-19 04:39:01 |
ಪುತ್ತೂರು : ಮೂವರು ಅಪ್ರಾಪ್ತೆಯರಿಗೆ ಇನ್ಸ್ಟ್ರಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ದೂರಿಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಮಂಗಳೂರಿನಲ್ಲಿ ಬಂಧಿಸಿದ್ದಾರೆ.
ಮಂಗಳೂರು ಅಡ್ಯಾರುಪದವು ನಾರಾಯಣ ಪೂಜಾರಿ ಎಂಬವರ ಪುತ್ರ ಸಂತೋಷ್ ಯಾನೆ ರಿತಿಕ್ಷ್ ಬಂಧಿತ ಯುವಕ.
ಆರೋಪಿ ಪುತ್ತೂರಿನ ಮೂವರು ಅಪ್ರಾಪ್ತೆಯರನ್ನು ಇನ್ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡು ಮೆಸೇಜ್ ಮತ್ತು ಕರೆ ಮಾಡಿ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ತನಿಖೆ ನಡೆಸಿದರು.
ಆರೋಪಿಯನ್ನು ಮಂಗಳೂರಿನಿಂದ ಬಂಧಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಭಾರ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು ಇವರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
Posted by Vidyamaana on 2023-08-03 12:40:38 |
ಉಡುಪಿ: ಮಣಿಪಾಲ ಡಿಸಿ ಕಚೇರಿ ರಸ್ತೆಯಲ್ಲಿ ರೀಲ್ಸ್ ಶೋಕಿಗಾಗಿ ಯದ್ವಾ ತದ್ವಾ ಸ್ಕೂಟರ್ ಚಲಾಯಿಸಿ ಇತರೆ ವಾಹನ ಸವಾರರಿಗೆ ತೊಂದರೆ ನೀಡಿದ್ದ ಯುವಕ ನನ್ನು ಮತ್ತು ಸ್ಕೂಟರ್ ವಶಕ್ಕೆ ಪಡೆದು ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಪರ್ಕಳ ನಿವಾಸಿ ಆಶಿಕ್(19) ದ್ವಿಚಕ್ರ ವಾಹನದಲ್ಲಿ ಅಪಾಯಕಾರಿ ರೀಲ್ಸ್ ಮಾಡುತ್ತಿದ್ದ ಯುವಕ.
ಆಶಿಕ್ ಯದ್ವಾ ತದ್ವಾ ಸ್ಕೂಟಿ ಓಡಿಸಿ ಹುಚ್ಚಾಟ ಮೆರೆದಿರುವ ವಿಡಿಯೋವೊಂದು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸ್ಕೂಟಿ ಉಡುಪಿಯ ನೋಂದಣಿ ಸಂಖ್ಯೆ ಹೊಂದಿದ್ದು ವಿಡಿಯೋದಲ್ಲಿ ಮಣಿಪಾಲದ ಡಿಸಿ ಆಫೀಸ್ ರಸ್ತೆ ಹಾಗೂ ಉಡುಪಿಯ ಭಾಗದ ರಸ್ತೆಯಲ್ಲಿ ಯದ್ವಾ ತದ್ವಾವಾಗಿ ಸಂಚರಿಸಿರುವುದು ಕಂಡು ಬಂದಿದೆ. ಒಂದು ಕಡೆ ಹೋಗುವ ಭರದಲ್ಲಿ ಕಾರಿಗೆ ಡಿಕ್ಕಿ ಹೊಡೆಯುವ ಸಂದರ್ಭವೂ ಎದುರಾಗಿರುವುದು ವಿಡಿಯೋದಲ್ಲಿ ಕಾಣಬಹುದು.
Posted by Vidyamaana on 2024-05-16 07:23:16 |
ಉಳ್ಳಾಲ: ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದೇರಳಕಟ್ಟೆ ಪರಿಸರದಲ್ಲಿ ಕಾರನ್ನು ಪತ್ತೆ ಹಚ್ಚಿದ್ದು, ಕಾರಿನಲ್ಲಿದ್ದ ಬಿಜೈ ನ್ಯೂರೋಡ್ನ ಮೊಹಮ್ಮದ್ ಅಮೀನ್ ರಾಫಿ (23), ಅಡ್ಡೂರಿನ ಮೊಹಮ್ಮದ್ ಸಿನಾನ್ ಅಬ್ದುಲ್ಲಾ (23), ಬಂದರಿನ ಮೊಹಮ್ಮದ್ ನೌಮಾನ್ (22) ಮತ್ತು ಬೋಳಿಯಾರ್ನ ಮೊಹಮ್ಮದ್ ಸಫೀಲ್ (23)ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅವರಿಂದ 6,50,000 ರೂ ಮೌಲ್ಯದ 270 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, 4 ಮೊಬೈಲ್, ಕಾರು, ಡಿಜಿಟಲ್ ತೂಕ ಮಾಪಕವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ಅಂದಾಜು 14,85,500 ರೂ. ಎಂದು ಅಂದಾಜಿಸಲಾಗಿದೆ.
Posted by Vidyamaana on 2024-02-29 04:26:07 |
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಧಾನಸಭಾ ಕಲಾಪದಲ್ಲೂ ಭಾಗವಹಿಸಲು ಸಾಧ್ಯವಾಗದೆ ಅವರು ಇಂದು ಜಯನಗರದ ಅಫೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.ವಿಧಾನಸಭಾ ಕಲಾಪದಲ್ಲಿ ಪಾಲ್ಗೊಳ್ಳಲು ಅವರು ಇಂದು ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ್ದರು ಈ ವೇಳೆ ಅವರಿಗೆ ಗಂಟಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ತಕ್ಷಣ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ರಾಜ್ಯಸಭಾ ಚುನಾವಣೆ ಮುಕ್ತಾಯದ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡಲಾಗಿದ್ದ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಗಂಟಲು ನೋವು ಕಾಣಿಸಿಕೊಂಡಿದೆ. ಇದಕ್ಕೂ ಮುನ್ನ ಕಳೆದೊಂದು ವಾರದಿಂದ ಕುಮಾರಸ್ವಾಮಿ ಅವರು ಗಂಟಲು ಇನ್ಫೆಕ್ಷನ್ನಿಂದ ಬಳಲುತ್ತಿದ್ದರು. ಇನ್ನು ವಿಧಾನಸಭಾ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜಯನಗರ ಆಸ್ಪತ್ರೆಗೆ ದಾಖಲಾಗಿದ್ದಾರೆ.
Posted by Vidyamaana on 2023-08-08 15:56:46 |
ಬೆಳ್ತಂಗಡಿ : ಸರಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಇಲ್ಲದ ವೇಳೆ ನರ್ಸ್ ಗಳ ನಿರ್ಲಕ್ಷ್ಯಕ್ಕೆ ಒಂದುವರೆ ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಮಾಜಿ ಶಾಸಕ ವಸಂತ ಬಂಗೇರ ಆಗಮಿಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಸಾವನ್ನಪ್ಪಿದ ತಂದೆಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿಲು ಸಲಹೆ ನೀಡಿದ್ದಾರೆ.
ಧರ್ಮಸ್ಥಳ ಗ್ರಾಮದ ಮುಳಿಕಾರ್ ನಿವಾಸಿ ಬಾಲಕೃಷ್ಣ ಮತ್ತು ಸವಿತಾ ದಂಪತಿಗಳ 1.5 ತಿಂಗಳು ಹೆಣ್ಣು ಮಗು ಅಂಶಿಕಾ ಸಾವನ್ನಪ್ಪಿದ ಮಗು.
ನೆರಿಯ ಅಕ್ಕ ಲೀಲಾವತಿ ಮನೆಯಲ್ಲಿದ್ದಕೊಂಡು ಮಗುವನ್ನು ಆರೈಕೆ ಮಾಡಿಕೊಂಡಿದ್ದ ಸವಿತಾ. ಆಗಸ್ಟ್ 8 ರಂದು(ಇಂದು) ಕಫ ಅಗಿತ್ತು ಎಂದು ಮಧ್ಯಾಹ್ನ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಡಾಕ್ಟರ್ ಇಲ್ಲದ ವೇಳೆ ನರ್ಸ್ ಇಂಜೆಕ್ಷನ್ ನೀಡದ ಬಳಿಕ ಮಗು ಸಾವನ್ನಪ್ಪಿದೆ ಎಂದು ಮನೆಮಂದಿ ಆರೋಪ ಮಾಡುತ್ತಿದ್ದಾರೆ.
Posted by Vidyamaana on 2023-09-22 12:39:54 |
ಮಂಗಳೂರು: ಯುವ ಪೀಳಿಗೆಯಲ್ಲಿ ರಾಷ್ಟ್ರ ಜಾಗೃತಿ, ಪೂರ್ವಜರ ಬಲಿದಾನಗಳನ್ನು ನೆನಪಿಸಿ ದೇಶ, ಧರ್ಮಕ್ಕಾಗಿ ಜಾಗೃತ ಬದುಕಿನತ್ತ ಸಂಕಲ್ಪ ಮಾಡಿಸುವ ಉದ್ದೇಶದಿಂದ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ರಾಜ್ಯದಾದ್ಯಂತ ಶೌರ್ಯ ಜಾಗರಣ ರಥಯಾತ್ರೆ ಹಮ್ಮಿಕೊಂಡಿದೆ. ಸೆ.25ರಂದು ವೀರ ಮದಕರಿ ನಾಯಕನ ಊರು ಚಿತ್ರದುರ್ಗದಲ್ಲಿ ರಥಯಾತ್ರೆಗೆ ಚಾಲನೆ ಸಿಗಲಿದ್ದು, ಅಕ್ಟೋಬರ್ 10ರ ವರೆಗೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಸಂಚರಿಸಲಿದೆ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಶರಣ್ ಪಂಪ್ವೆಲ್, ಈಗಾಗಲೇ ರಾಜ್ಯದಲ್ಲಿ ಎರಡು ಸಾವಿರ ಬಜರಂಗದಳ ಘಟಕಗಳನ್ನು ಹೊಂದಿದ್ದೇವೆ. ಮುಂದಿನ ಒಂದು ವರ್ಷದಲ್ಲಿ ಐದು ಸಾವಿರ ಘಟಕಗಳನ್ನು ಸ್ಥಾಪಿಸುವ ಗುರಿಯಿದೆಯ ಉತ್ತರ ಕರ್ನಾಟಕ ಭಾಗದಲ್ಲಿ ಬಜರಂಗದಳ ವಿಸ್ತರಣೆಯಾಗಲಿದೆ. 1964ರಲ್ಲಿ ಸ್ಥಾಪನೆಯಾದ ವಿಶ್ವ ಹಿಂದು ಪರಿಷತ್ 2024ರಲ್ಲಿ 60 ವರ್ಷ ಪೂರೈಸಲಿದ್ದು, ಈ ವೇಳೆ ದೇಶಾದ್ಯಂತ ಜಾಗೃತ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಪ್ರತಿ ಜಿಲ್ಲೆಯಲ್ಲಿ ಬೃಹತ್ ಸಮಾವೇಶದ ಬಳಿಕ ಕೊನೆಗೆ ಅ.10ರಂದು ಉಡುಪಿಯಲ್ಲಿ ಸಮಾರೋಪ ಆಗಲಿದೆ. ದಿಕ್ಸೂಚಿ ಭಾಷಣಕ್ಕೆ ಚಕ್ರವರ್ತಿ ಸೂಲಿಬೆಲೆ ಬರಲಿದ್ದಾರೆ ಎಂದರು.
ರಾಜ್ಯದ ಕಾಂಗ್ರೆಸ್ ಸರಕಾರ ಬಜರಂಗದಳ ನಿಷೇಧ ಪ್ರಸ್ತಾಪ ಇಟ್ಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಯಾವುದೇ ಕಾರಣಕ್ಕೂ ಬಜರಂಗದಳ ನಿಷೇಧ ಸಾಧ್ಯವಿಲ್ಲ. ಬಜರಂಗದಳ ದೇಶ ವಿರೋಧಿ ಕೃತ್ಯ ಮಾಡಿಲ್ಲ. ದೇಶದ ಭವ್ಯ ಪರಂಪರೆ ಮುಂದಿಟ್ಟು ರಾಷ್ಟ್ರ ಜಾಗೃತಿಗಾಗಿ ಹೋರಾಟ ನಡೆಸುತ್ತಿರುವ ಸಂಘಟನೆ ಎಂದು ಹೇಳಿದರು. ನಿಮ್ಮ ರಥಯಾತ್ರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಮಾಡುವ ಉದ್ದೇಶವೇ ಎಂದು ಕೇಳಿದ ಪ್ರಶ್ನೆಗೆ, ನಾವು ಯಾರ ಲಾಭದ ಬಗ್ಗೆಯೂ ಯೋಚನೆ ಮಾಡಿಲ್ಲ. ಬಿಜೆಪಿ ರಾಜಕೀಯ ಪಕ್ಷ. ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದರು. ಬಿಜೆಪಿ ಸರಕಾರ ಇದ್ದಾಗಲೇ ಗೋಹತ್ಯೆ ಅಥವಾ ಇನ್ನಾವುದೇ ವಿಚಾರ ಕಟ್ಟುನಿಟ್ಟಾಗಿ ಪಾಲನೆ ಆಗಿಲ್ಲ ಎಂದು ಕೇಳಿದ್ದಕ್ಕೆ, ಬಿಜೆಪಿ ನಮ್ಮದೇ ರೀತಿಯ ಚಿಂತನೆ ಇರುವ ಪಕ್ಷ ಅಷ್ಟೇ. ಹಾಗಂತ, ಅವರಿಗೂ ನಮಗೂ ಸಂಬಂಧ ಇಲ್ಲ ಎಂದರು.
ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ :
ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಚೈತ್ರಾ ಕುಂದಾಪುರ ನಿಮ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಇದರಿಂದ ನಿಮಗೆ ತೊಂದರೆ ಆಗಲ್ಲವೇ ಎಂದು ಕೇಳಿದ ಪ್ರಶ್ನೆಗೆ, ಚೈತ್ರಾಗೂ ನಮಗೂ ಯಾವುದೇ ಸಂಬಂಧ ಇಲ್ಲ. ನಮ್ಮ ಸಂಘಟನೆಯಲ್ಲಿ ಯಾವುದೇ ಪದಾಧಿಕಾರ ಹೊಂದಿಲ್ಲ. ಆಕೆ ಉತ್ತಮ ಭಾಷಣಕಾರ್ತಿ ಎಂಬ ಕಾರಣಕ್ಕೆ ಕಾರ್ಯಕ್ರಮಗಳಿಗೆ ಕರೆಸಿಕೊಳ್ಳುವುದು ಬಿಟ್ಟರೆ, ಬೇರಾವುದೇ ಸಂಬಂಧ ಇಲ್ಲ. ಗುರುಪುರ ಸ್ವಾಮೀಜಿಯವರು ಹೇಳಿದಂತೆ, ಎರಡು ತಿಂಗಳ ಹಿಂದೆಯೇ ಈ ಬಗ್ಗೆ ತಿಳಿದಿತ್ತು. ನಾವೇನೂ ಅದರಲ್ಲಿ ಪಾತ್ರ ಇಲ್ಲ ಎಂದ ಮೇಲೆ ಚಿಂತೆ ಯಾಕೆ. ಯಾರು ತಪ್ಪು ಮಾಡಿದ್ದಾರೋ ಶಿಕ್ಷೆಯಾಗಲಿ. ಈಗ ತನಿಖೆ ನಡೆಯುತ್ತಿದೆ ಎಂದು ಹೇಳಿದರು.