Posted by vidyamaana on 2024-07-03 13:36:16 |
ಬೆಂಗಳೂರು (ಜು.3): ಇಲ್ಲಿನ ಹೊರವಲಯದ ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾಲೇಜು ವಿದ್ಯಾರ್ಥಿನಿ ಅಂಜನಾ(20) ಮತ್ತು ಶ್ರೀಕಾಂತ್(25) ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಜುಲೈ 1ರಂದು ಪ್ರೇಮಿಗಳು ನಾಪತ್ತೆಯಾಗಿದ್ದರು.
ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸ್ತಿದ್ದರು. ಆದರೆ ಯುವಜೋಡಿಯ ಪ್ರೀತಿಗೆ ವಿದ್ಯಾರ್ಥಿನಿ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ವಿದ್ಯಾರ್ಥಿನಿ ತಲಘಟ್ಟಪುರ ಸಮೀಪದ ಅಂಜನಾಪುರ ಬಳಿ ವಾಸವಿದ್ದಳು. ಯುವಕ ಶ್ರೀಕಾಂತ್ ಕೋಣನಕುಂಟೆ ನಿವಾಸಿಯಾಗಿದ್ದ. ಇಬ್ಬರೂ ನಾಪತ್ತೆಯಾಗಿದ್ದರು. ನಾಪತ್ತೆ ಹಿನ್ನಲೆ ಎರಡೂ ಕಡೆಯವರ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ.
ಮದುವೆಯಾಗಿದ್ದ ಶ್ರೀಕಾಂತ್!
ಶ್ರೀಕಾಂತ್ ಗೆ ಬೇರೊಬ್ಬರ ಜೊತೆಗೆ ವಿವಾಹವಾಗಿದೆ. ಆದರೂ ಅಂಜನಾಳನ್ನ ಪ್ರೀತಿ ಮಾಡ್ತಿದ್ದ. ಇಬ್ಬರು ಒಟ್ಟಿಗೆ ಬದುಕಲು ಅವಕಾಶ ಇಲ್ಲ ಎಂದು ಸಾಯೋ ನಿರ್ಧಾರ ಮಾಡಿದ್ದಾರೆ. ಮೊದಲು ಶ್ರೀಕಾಂತ್ ಮೃತದೇಹ ಕೆರೆಯಲ್ಲಿ ಕಾಣಿಸಿದೆ. ಆತನನ್ನ ಮೇಲೆತ್ತಿದ್ದ ನಂತರ ಅಂಜನಾ ಮೃತದೇಹ ಕೂಡ ಮೇಲೆ ಬಂದಿದೆ. ಅಂಜನಾ ಮೃತದೇಹದ ಬಗ್ಗೆ ಪೊಲೀಸರಿಗೂ ಮಾಹಿತಿ ಇರುದಿಲ್ಲ. ಇಬ್ಬರು ಕೈಗೆ ಹಗ್ಗ ಕಟ್ಟಿಕೊಂಡಿದ್ದರಿಂದ ಇಬ್ಬರ ಮೃತದೇಹ ಒಟ್ಟಿಗೆ ಸಿಕ್ಕಿದೆ. ಮೊಬೈಲ್ ನಲ್ಲಿ ವೀಡಿಯೊ ಮಾಡಿರುವ ಯುವತಿ ಅಂಜನಾ ಅದನ್ನ ಆಟೋದಲ್ಲಿ ಬಿಟ್ಟು ಶ್ರೀಕಾಂತ್ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮ್ಮ ಸಾವಿಗೆ ಯಾರು ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹಾಗಾಗಿ ಸಾಯ್ತಿದ್ದೇವೆ ಎಂದು ವಿಡಿಯೋ ಮಾಡಿದ್ದಾಳೆ. ಮೊಬೈಲ್ ವಶಕ್ಕೆ ಪಡೆದುಕೊಂಡಿರೊ ತಲಘಟ್ಟಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Posted by Vidyamaana on 2023-03-22 11:06:23 |
ಪುತ್ತೂರು: ಜಿಲ್ಲಾಕೇಂದ್ರದ ಸನ್ನಿಹಿತದಲ್ಲಿರುವ ಪುತ್ತೂರಿಗೆ ಪೂರಕವೆಂಬಂತೆ ಜಿಎಲ್ ಒನ್ ಶಾಪಿಂಗ್ ಮಾಲ್ ತಲೆಎತ್ತಿದ್ದು, ಏಪ್ರಿಲ್ 2ರಂದು ಲೋಕಾರ್ಪಣೆಗೊಳ್ಳಲಿದೆ.
ಪುತ್ತೂರಿನ ಪ್ರಪ್ರಥಮ ಸರ್ವಸುಸಜ್ಜಿತ ಶಾಪಿಂಗ್ ಮಾಲ್ ಇದಾಗಿದ್ದು, ಪಟ್ಟಣವಾಗಿ ಪುತ್ತೂರು ಹೊಸ ಮೈಲಿಗಲ್ಲನ್ನು ಸಾಧಿಸುವುದು ನಿಶ್ಚಿತ.
ಏಪ್ರಿಲ್ 2ರಂದು ಸಂಜೆ 5.30ಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಉದ್ಘಾಟನೆ ಮಾಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಲಾಂಛನ ಅನಾವರಣಗೊಳಿಸಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಪುತ್ತೂರು ಎಸ್.ಜಿ. ಕಾರ್ಪೋರೇಟ್ಸ್ ಚೇರ್ಮೆನ್ ಕೆ. ಸತ್ಯಶಂಕರ್, ಪುತ್ತೂರು ಛೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸಿನ ಅಧ್ಯಕ್ಷ ಜಾನ್ ಕುಟಿನ್ಹಾ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಮಂಗಳೂರು ಭಾರತ್ ಸಮೂಹ ಸಂಸ್ಥೆಗಳ ನಿರ್ದೇಶಕ ಆನಂದ್ ಪೈ, ಪುತ್ತೂರು ಅನ್ಸಾರುದ್ದೀನ್ ಜಮಾತ್ ಸಮಿತಿ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಉಪಸ್ಥಿತರಿರುವರು ಎಂದು ಜಿ.ಎಲ್. ಸಮೂಹ ಸಂಸ್ಥೆಗಳ ಚೇರ್ಮೆನ್ ಜಿ.ಎಲ್ ಬಲರಾಮ್ ಆಚಾರ್ಯ, ನಿರ್ದೇಶಕರಾದ ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Posted by Vidyamaana on 2024-02-08 16:24:36 |
ನವದೆಹಲಿ: ಭಾರತದ ಗಡಿಗಳನ್ನು ಭದ್ರಪಡಿಸುವ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದ ನಂತರ ಮ್ಯಾನ್ಮಾರ್ ನೊಂದಿಗಿನ ಮುಕ್ತ ಸಂಚಾರ ಆಡಳಿತವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವಾಲಯ ಗುರುವಾರ ಪ್ರಕಟಿಸಿದೆ.ದೇಶದ ಆಂತರಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮ್ಯಾನ್ಮಾರ್ ಗಡಿಯಲ್ಲಿರುವ ಭಾರತದ ಈಶಾನ್ಯ ರಾಜ್ಯಗಳ ಜನಸಂಖ್ಯಾ ರಚನೆಯನ್ನು ಕಾಪಾಡಿಕೊಳ್ಳಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ಲಾಟ್ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ನಲ್ಲಿ ಪೋಸ್ಟ್ ಮಾಡಿದ್ದಾರೆ.
Posted by Vidyamaana on 2023-10-21 20:05:45 |
ಮಂಗಳೂರು, ಅ.21: ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ವಿಭಾಗದ ಉಪ ನಿರ್ದೇಶಕಿಯಾಗಿರುವ ಮಹಿಳಾ ಅಧಿಕಾರಿ ಲಾಕ್ ಆಗಿದ್ದಾರೆ. ದಕ್ಷಿಣ ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕಿ ಭಾರತಮ್ಮ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಅಧಿಕಾರಿ.
2023ರ ಆಗಸ್ಟ್ 31ರಂದು ವಲಯ ಅರಣ್ಯ ಅಧಿಕಾರಿಯಾಗಿ ನಿವೃತ್ತರಾಗಿದ್ದ ಪರಮೇಶ್ ಎನ್.ಪಿ ಎಂಬವರು ಈ ಪ್ರಕರಣದಲ್ಲಿ ದೂರುದಾರರು. ಇವರು ನಿವೃತ್ತಿ ಆಗೋದಕ್ಕೂ ಮುನ್ನ ಕೃಷಿ ಇಲಾಖೆ, ಕರ್ನಾಟಕ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ನಿಯೋಜನೆ ಮೇಲೆ ಕೆಲಸ ಮಾಡಿದ್ದರು. ಇವರು ಕೃಷಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ 2022-23 ಮತ್ತು 24ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಬಂಟ್ವಾಳ ತಾಲೂಕಿನ ಸಜಿಪ ನಡು, ಸಜಿಪ ಮುನ್ನೂರು, ಸಜಿಪ ಮೂಡ, ಕುರ್ನಾಡು, ನರಿಂಗಾನ, ಬಾಳೆಪುಣಿ, ಮಂಜನಾಡಿ ಗ್ರಾಮಗಳಲ್ಲಿ ಸರ್ಕಾರದ ವತಿಯಿಂದ 50 ಲಕ್ಷ ಮೌಲ್ಯದ ಸಸಿಗಳನ್ನು ವಿತರಣೆ ಮಾಡಿದ್ದರು.
ಇದಕ್ಕಾಗಿ ತೋಟಗಾರಿಕಾ ಸಸಿಗಳನ್ನು ಕಣ್ಣನ್ ನರ್ಸರಿ ಮಾಲಕರಾದ ಧೋರಿ ಮತ್ತು ಶಬರೀಶ್ ನರ್ಸರಿಯ ಭೈರೇ ಗೌಡ ಎಂಬವರಿಂದ ಖರೀದಿಸಿದ್ದು, ಅವರಿಗೆ 18 ಲಕ್ಷ ಮೊತ್ತ ನೀಡಬೇಕಾಗಿತ್ತು. ಇದಲ್ಲದೆ, ಅರಣ್ಯ ಗುತ್ತಿಗೆದಾರರಿಂದ ನಾಟಿ ಮಾಡಿಸಿದ್ದ ಸಸಿಗಳ ಮೊತ್ತ 32 ಲಕ್ಷ ಬಿಲ್ ಬಾಕಿಯಿತ್ತು. ಮುಂಗಡ ಸಸಿಗಳನ್ನು ಪಡೆದು ನಾಟಿ ಮಾಡಿದ್ದು, ಸರಕಾರದಿಂದ ಹಣ ಬಾರದೆ ಹಣ ಪಾವತಿಯಾಗದೆ ಬಾಕಿ ಉಳಿದಿತ್ತು. ಈ ಹಣವನ್ನು ನೀಡುವರೇ ನರ್ಸರಿ ಮಾಲಕರು ಕೇಳುತ್ತಿದ್ದುದರಿಂದ ನಿವೃತ್ತ ಅಧಿಕಾರಿ ಪರಮೇಶ್ ಬಿಲ್ ಪಾಸ್ ಮಾಡುವಂತೆ ಮಂಗಳೂರು ವಿಭಾಗದ ಕೃಷಿ ನಿರ್ದೇಶಕಿ ಭಾರತಮ್ಮ ಅವರಲ್ಲಿ ಕೇಳಿಕೊಂಡಿದ್ದರು. ಬಿಲ್ ಪಾಸ್ ಮಾಡಿಸಲು ಒಟ್ಟು ಮೊತ್ತದ 15 ಶೇಕಡಾ ಲಂಚ ನೀಡಬೇಕೆಂದು ಭಾರತಮ್ಮ ಬೇಡಿಕೆ ಇರಿಸಿದ್ದರು.
ಈ ಬಗ್ಗೆ ಅ.20ರಂದು ಪರಮೇಶ್, ಕೃಷಿ ನಿರ್ದೇಶಕಿ ಭಾರತಮ್ಮ ಅವರ ಕಚೇರಿಗೆ ತೆರಳಿದಾಗ ಒಂದು ಲಕ್ಷ ರೂ. ಲಂಚ ಮೊದಲು ನೀಡುವಂತೆ ಕೇಳಿಕೊಂಡಿದ್ದರು. ಅಧಿಕಾರಿಯ ಭ್ರಷ್ಟಾಚಾರದ ಬಗ್ಗೆ ಪರಮೇಶ್, ಲೋಕಾಯುಕ್ತ ಗಮನಕ್ಕೆ ತಂದಿದ್ದು ಅವರ ಸೂಚನೆಯಂತೆ ಶನಿವಾರ ಒಂದು ಲಕ್ಷ ರೂ. ಲಂಚ ನೀಡುತ್ತಿದ್ದಾಗಲೇ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿ ಮಹಿಳಾ ಅಧಿಕಾರಿ ಭಾರತಮ್ಮ ಅವರನ್ನು ಲೋಕಾಯುಕ್ತ ಬಂಧಿಸಿದ್ದು, ಹಣವನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್ಪಿ ಸಿ.ಎ. ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಚೆಲುವರಾಜು, ಕಲಾವತಿ, ಇನ್ಸ್ ಪೆಕ್ಟರ್ ಸುರೇಶ್ ಕುಮಾರ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.
Posted by Vidyamaana on 2024-04-24 20:42:30 |
ಹಾಸನ: ಲೋಕಸಭೆ ಚುನಾವಣೆಗೆ ಇನ್ನೆರಡು ದಿನ ಉಳಿದಿರುವಂತೆ, ಜಿಲ್ಲೆಯ ರಾಜಕೀಯ ಯುವ ನಾಯಕರೊಬ್ಬರ ಖಾಸಗಿ ಚಟುವಟಿಕೆಗಳ ಮಾಹಿತಿಯುಳ್ಳ ಪೆನ್ ಡ್ರೈವ್ಗಳು ಪಾರ್ಕ್, ಕ್ರೀಡಾಂಗಣ ಹಾಗೂ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ದೊರೆಯುತ್ತಿವೆ ಎಂಬ ವದಂತಿ ಹರಡಿದ್ದು, ಸಂಚಲನ ಮೂಡಿಸಿದೆ.
ಯುವ ನಾಯಕರೊಬ್ಬರ ಖಾಸಗಿ ಚಟುವಟಿಕೆಗಳಿರುವ ವಿಡಿಯೋಗಳನ್ನು ಪೆನ್ ಡ್ರೈವ್ಗಳಲ್ಲಿ ತುಂಬಿ ಅನಾಮಧೇಯವಾಗಿ ಹರಡಲಾಗುತ್ತಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆದಿದೆ.
Posted by Vidyamaana on 2023-10-15 22:13:34 |
ರಾಯಚೂರು (ಅ.15): ರಾಜ್ಯದ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿಕಾರಿಪುರದಿಂದ ರಾಯಚೂರು ನಗರಕ್ಕೆ ಹೆಲಿಕಾಪ್ಟರ್ನಲ್ಲಿ ಹೋಗುವಾಗ ಕಾಲು ಉಳುಕಿದೆ. ಹೆಲಿಕಾಪ್ಟರ್ ಹತ್ತುವಾಗ ಕಾಲು ಉಳುಕಿದ್ದು, ನಂತರ ಹೆಲಿಕಾಪ್ಟರ್ ಇಳಿಯಲಾಗದೇ ಪರದಾಡಿದ ಪ್ರಸಂಗ ನಡೆದಿದೆ.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಯಸ್ಸಾಗಿರುವ ಹಿನ್ನೆಲೆಯಲ್ಲಿ ಹೆಚ್ಚಾಗಿ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ದೂರದ ಪ್ರಯಾಣವನ್ನೂ ಮಾಡುವುದಿಲ್ಲ. ವಯೋಸಹಜವಾಗಿ ಸ್ನಾಯು ಹಾಗೂ ಕೀಲು- ಮೂಳೆಗಳಲ್ಲಿ ಶಕ್ತಿ ಕುಂದಿದ್ದು ಮೊದಲಿನಂತೆ ಸಕ್ರಿಯವಾಗಿ ರಾಜಕೀಯದಲ್ಲಿ ಭಾಗವಹಿಸುತ್ತಿಲ್ಲ. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಲವೆಡೆ ರಾಜ್ಯ ಸಂಚಾರ ಮಾಡಿ ಪಕ್ಷದ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಅದೇ ರೀತಿ ಇಂದು ಮಧ್ಯಾಹ್ನ ಭದ್ರತಾ ಸಿಬ್ಬಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿಕಾರಿಪುರದಿಂದ ಹೆಲಿಕಾಪ್ಟರ್ನಲ್ಲಿ ರಾಯಚೂರು ಜಿಲ್ಲೆಯ ಲಿಂಗಸಗೂರಿಗೆ ತೆರಳುವಾಗ ಘಟನೆ ನಡೆದಿದೆ. ಶಿಕಾರಿಪುರದಲ್ಲಿ ಹೆಲಿಕಾಪ್ಟರ್ ಹತ್ತುವಾಗ ಯಡಿಯೂರಪ್ಪ ಅವರ ಕಾಲು ಉಳುಕಿದೆ. ಇದಾದ ನಂತರ ಹೆಲಿಕಾಪ್ಟರ್ನಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ವಿಶ್ರಾಂತಿ ಪಡೆದಿದ್ದಾರೆ. ನಂತರ ಲಿಂಗಸಗೂರಿನಲ್ಲಿ ಇಳಿಯುವಾಗ ಕಾಲಿಗೆ ಪೆಟ್ಟು ಆಗಿದೆ ಎಂದು ತಿಳಿಸಿದ್ದಾರೆ. ಆಗ ಸಹಾಯಕರೊಂದಿಗೆ ಇಳಿಯಲು ಪ್ರಯತ್ನಿಸಿದರೂ ತೀವ್ರ ನೋವಿನಿಂದ ಕಾಲೂರಲೂ ಸಾಧ್ಯವಾಗದೇ ಪರದಾಡಿದ್ದಾರೆ.