Posted by vidyamaana on 2024-07-23 07:07:38 |
ಪುತ್ತೂರು: ರಾಜ್ಯದಲ್ಲಿ ತುಳು ಭಾಷೆಯನ್ನು ೨ನೇ ಅಧಿಕೃತ ರಾಜ್ಯಭಾಷೆಯಾಗಿ ಘೋಷಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಶೀಘ್ರದಲ್ಲೇ ಈ ಪ್ರಯತ್ನ ಕೈಗೂಡುವ ವಿಶ್ವಾಸವಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಮತ್ತು ರೋಟರಿ ಕ್ಲಬ್ ಪುತ್ತೂರು ಯುವ ಇವರ ಸಹಯೋಗದಲ್ಲಿ ಪುತ್ತೂರಿನ ರೋಟರಿ ಮನೀಷಾ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ - ಉಪನ್ಯಾಸ- ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಶ್ಚಿಮ ಬಂಗಾಳ ಸೇರಿದ ಅನೇಕ ರಾಜ್ಯಗಳಲ್ಲಿ ೨ನೇ ರಾಜ್ಯಭಾಷೆ ಘೋಷಣೆ ಸಂದರ್ಭ ಯಾವೆಲ್ಲ ಮಾನದಂಡ ಅನುಸರಿಸಲಾಗಿದೆ ಎಂಬುದರ ಅಧ್ಯಯನ ನಡೆಸಿ ವರದಿ ತಯಾರಿಸಲಾಗಿದೆ. ಇದನ್ನು ಸರಕಾರ ಪರಿಶೀಲಿಸಿ ಶೀಘ್ರದಲ್ಲೇ ತುಳು ಭಾಷೆಯನ್ನು ೨ನೇ ಅಧಿಕೃತ ರಾಜ್ಯಭಾಷೆಯನ್ನಾಗಿ ಘೋಷಣೆ ಮಾಡುವ ಸಂಬAಧ ಸಂಪುಟದಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡ ಮೇಲೆ ಗೆಜೆಟ್ ನೋಟಿಫೀಕೇಶನ್ ಹೊರಡಿಸಲಾಗುವುದು. ಅದೇ ರೀತಿ ತುಳು ಭಾಷೆಯನ್ನು ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಸೇರಿಸುವ ವಿಚಾರದಲ್ಲೂ ಕೇಂದ್ರದ ಮೇಲೆ ರಾಜ್ಯದಿಂದ ಒತ್ತಡ ತರುವ ಕೆಲಸ ಮಾಡಲಾಗುತ್ತದೆ. ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದೇನೆ. ಮುಂದಿನ ಬಜೆಟ್ನಲ್ಲಿ ಘೋಷಣೆಯ ಆಶಾವಾದ ಇದೆ ಎಂದವರು ಹೇಳಿದರು.
ಸೋಷಿಯಲ್ ಮೀಡಿಯಾದ ಅಬ್ಬರದ ನಡುವೆಯೇ ಜನ ಪತ್ರಿಕೆ ಓದುವುದು ಕಡಿಮೆ ಮಾಡಿಲ್ಲ. ಪತ್ರಿಕಾ ರಂಗದಲ್ಲಿ ಪ್ರಾಮಾಣಿಕತೆ ಬೇಕು. ಅದಿರುವ ಕಾರಣವೇ ದಕ್ಷಿಣಕನ್ನಡದ ಪತ್ರಕರ್ತರು ಎಲ್ಲಿ ಹೋದರೂ ಛಾಪು ಮೂಡಿಸುತ್ತಾರೆ ಎಂದು ಹೇಳಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ದೇಶದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭ ಅಭಿವ್ಯಕ್ತಿ ಸ್ವಾತಂತ್ರö್ಯ ಮತ್ತು ಪತ್ರಿಕಾ ಸ್ವಾತಂತ್ರö್ಯ ದಮನ ಮಾಡಲಾಗಿತ್ತು. ಆಗ ಧೀಮಂತ ಪತ್ರಿಕೆಗಳು ಭೂಗತರಾಗಿದ್ದುಕೊಂಡೇ ಪತ್ರಿಕೆ ನಡೆಸಿ ಜನಜಾಗೃತಿ ಮೂಡಿಸಿದ್ದರು. ದೇಶ ಕಟ್ಟುವಲ್ಲಿ ಪತ್ರಿಕೆಗಳ ಪಾತ್ರ ಬಹಳಷ್ಟು ದೊಡ್ಡದು. ಸೋಷಿಯಲ್ ಮೀಡಿಯಾದಿಂದ ಉಪಯೋಗವಿದೆಯಾದರೂ ಅಷ್ಟೇ ಕೆಟ್ಟದೂ ಇದೆ ಎಂದರು.
ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ಉಪನ್ಯಾಸ ನೀಡಿದರು. ಮಾಧ್ಯಮ ವರದಿ ಇವತ್ತು ಪ್ರತಿಯೊಬ್ಬರ ಕೈಗೂ ಬಂದಿದೆ. ಜಗತ್ತಿನಲ್ಲಿ ಜೀವರಕ್ಷಕ ಔಷಧಿ ಮೊದಲ ಸ್ಥಾನದಲ್ಲಿದ್ದರೆ, ೨ನೇ ಸ್ಥಾನದಲ್ಲಿ ಮುದ್ರಣ ಮಾಧ್ಯಮಗಳಿವೆ. ಇಷ್ಟಾದರೂ ಮಾಧ್ಯಮಗಳು ಕೆಲವೊಂದು ಅಪವಾದಗಳನ್ನು ಕೂಡ ಎದುರಿಸುತ್ತಿವೆ. ಆರೋಪಿಯೊಬ್ಬನನ್ನು ನ್ಯಾಯಾಲಯ ವಿಚಾರಣೆ ನಡೆಸುವ ಮೊದಲೇ ಮಾಧ್ಯಮಗಳು ವಿಚಾರಣೆ ನಡೆಸಿ ತಪ್ಪಿತಸ್ಥನೆಂದು ಘೋಷಿಸುವುದು ಆತಂಕಕಾರಿ ಬೆಳವಣಿಗೆ. ಅದೇ ರೀತಿ ಪೀತ ಪತ್ರಿಕೋದ್ಯಮದ ಬಗ್ಗೆಯೂ ಜಾಗೃತಿ ಅಗತ್ಯ ಎಂದರು. ಪ್ರತಿಯೊಬ್ಬ ಪತ್ರಕರ್ತರಿಗೂ ವೃತ್ತಿಪರತೆ ಮತ್ತು ನೈತಿಕತೆ ಅಗತ್ಯವಾಗಿ ಬೇಕು ಎಂದವರು ನುಡಿದರು. ಮಾಹಿತಿ ಎಂಬುದು ನೀರಿನ ಥರ. ಕಡಿಮೆಯಾದರೂ ಕಷ್ಟ, ಜಾಸ್ತಿಯಾದರೂ ಕಷ್ಟ. ಇದನ್ನು ಪತ್ರಕರ್ತರು ಅರ್ಥಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಶೇಟ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಕೊಡುಗೆಯಾಗಿ ನೀಡಿದ ಸಿಸಿ ಕ್ಯಾಮೆರಾವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಪತ್ರಕರ್ತರಿಗೆ ಹಸ್ತಾಂತರ ಮಾಡಿದರು.
ಪತ್ರಿಕಾ ವಿತರಕರಾದ ವಿಶ್ವನಾಥ್ ಪುತ್ತೂರು ಅವರನ್ನು ಶಾಸಕರು ಪತ್ರಕರ್ತರ ಸಂಘದ ಪರವಾಗಿ ಸನ್ಮಾನಿಸಿದರು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಾದ ಹಷೇಂದ್ರ ಪ್ರಸಾದ್, ಮಹೇಶ್ ಪ್ರಸಾದ್, ದೀಪ್ತಿ ಭಟ್, ಎ.ಯು. ಅವನೀಶ್ ಕುಮಾರ್, ಸಮ್ಯಕ್, ಸಿಹಾ ಶಮ್ರಾ, ಪುಣ್ಯಶ್ರೀ ಪಿ. ಅವರನ್ನು ಸಂಘದ ಪರವಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಸನ್ಮಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಸಿದ್ಧಿಕ್ ನೀರಾಜೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್,ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ,ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ಅಶ್ವನಿಕೃಷ್ಣ, ಎಸೋಸಿಯೇಶನ್ ಆಫ್ ಸಿವಿಲ್ ಎಂಜಿನಿರ್ಸ್ (ಎಸಿಸಿಇ-ಐ) ಪುತ್ತೂರು ಸೆಂಟರ್ ಅಧ್ಯಕ್ಷರಾದ ಪ್ರಮೋದ್ ಕುಮಾರ್ ಕೆ.ಕೆ.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ ನಾಯಕ್ ಇಂದಾಜೆ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸುಧಾಕರ ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯ ಮೇಘಾ ಪಾಲೆತ್ತಾಡಿ ಮತ್ತು ರೋಟರಿ ಯುವ ಸಂಸ್ಥೆಯ ಕಾರ್ಯದರ್ಶಿ ವಚನಾ ಜಯರಾಂ,ಪ್ರಧಾನ ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ, ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ,ಕಾರ್ಯಕಾರಿ ಸಮಿತಿ ಸದಸ್ಯರಾದ ಐ. ಬಿ. ಸಂದೀಪ್,ಕುಮಾರ್,ಪ್ರಸಾದ್ ಬಲ್ನಾಡ್, ಸಂಘದ ಕಾರ್ಯದರ್ಶಿ ಅಜಿತ್ ಕುಮಾರ್, ಸದಸ್ಯರಾದ ಅನಿಶ್ ಕುಮಾರ್ ಮರೀಲ್,ಶರತ್, ರಾಜೇಶ್ ಪಟ್ಟೆ, ಪಾರೂಕ್ ಶೇಕ್ , ಮತ್ತಿತ್ತರರು ಉಪಸ್ಥಿತರಿದ್ದರು.
Posted by Vidyamaana on 2023-09-12 11:08:54 |
ಪುತ್ತೂರು: ಕಬಕ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರೌಢ ಶಾಲಾ ವಿಭಾಗದ ಬಾಲಕ ಬಾಲಕಿಯರ ಫುಟ್ಬಾಲ್ ಪಂದ್ಯಾಟ ಸೆ. 9ರಂದು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಯ್ಯ ಅವರ ನೇತೃತ್ವದಲ್ಲಿ ನಡೆಯಿತು.
ಕಬಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ.ಪಿ. ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು.
ಕಬಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಸದಸ್ಯರು, ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಸಿ., ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಾಹಂ ಹಾಗೂ ಗಣ್ಯರು ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ಸುರೇಖಾ ಸ್ವಾಗತಿಸಿ, ಸುಮಿತ್ರಾ ವಂದಿಸಿದರು. ಶಿಕ್ಷಕಿ ಶಾಂತ ಕಾರ್ಯಕ್ರಮ ನಿರೂಪಿಸಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಹಕರಿಸಿದರು.
Posted by Vidyamaana on 2024-06-23 06:25:10 |
ನವದೆಹಲಿ : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ಕೋಲಾಹಲದ ಮಧ್ಯೆ ಮತ್ತೊಂದು ಪರೀಕ್ಷೆಯನ್ನ ಮುಂದೂಡಲಾಗಿದೆ. ರಾಷ್ಟ್ರೀಯ ಪರೀಕ್ಷಾ ಮಂಡಳಿ ಇಂದು ನಿಗದಿ ಪಡಿಸಿದ್ದ ನೀಟ್-ಪಿಜಿ ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿದೆ. ಅಂದ್ಹಾಗೆ, ಜೂನ್ 23ರ ಇಂದು ನೀಟ್ ಪಿಜಿ ಪ್ರವೇಶ ಪರೀಕ್ಷೆ ನಡೆಯಬೇಕಿತ್ತು.
ಆದ್ರೆ, ನೀಟ್-ಪಿಜಿ ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿದೆ. ಪ್ರವೇಶ ಪರೀಕ್ಷೆಯ ಹೊಸ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ ಶೀಘ್ರದಲ್ಲೇ ಪ್ರಕಟಿಸಲಿದೆ.
Posted by Vidyamaana on 2023-06-12 22:48:04 |
ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11ಕೆ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಟೌನ್ ಓಲ್ಡ್ ಮತ್ತು ದರ್ಬೆ ಫೀಡರ್ನಲ್ಲಿ ಜೂ.13ರಂದು ಪೂರ್ವಾಹ್ನ 10ರಿಂದ ಅಪರಾಹ್ನ 1ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ, 110/33/11 ಕೆ.ವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್ನಿಂದ ವಿದ್ಯುತ್ ಸರಬರಾಜಾಗುವ ನಗರಸಭಾ ವ್ಯಾಪ್ತಿ (ಪುತ್ತೂರು ಪೇಟೆ)ಯ ವಿದ್ಯುತ್ ಬಳಕೆದಾರರು ಸಹಕರಿಸಬೇಕು.
33ಕೆವಿ ಮಾಡಾವು-ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ ಮತ್ತು 33 ಕೆ.ವಿ ಮಾಡಾವು-ಬೆಳ್ಳಾರೆ ವಿದ್ಯುತ್ ಮಾರ್ಗದ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ.13ರಂದು ಪೂರ್ವಾಹ್ನ 10 ರಿಂದ ಸಾಯಂಕಾಲ 5ರವರೆಗೆ 33 ಕೆ.ವಿ ಮಾಡಾವು-ಬೆಳ್ಳಾರೆ -ಗುತ್ತಿಗಾರು-ಸುಬ್ರಹ್ಮಣ್ಯ ಮತ್ತು 33 ಕೆ.ವಿ ಮಾಡಾವು-ಬೆಳ್ಳಾರೆ ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33/11ಕೆವಿ ಬೆಳ್ಳಾರೆ ಮತ್ತು ಗುತ್ತಿಗಾರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರೂ ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Posted by Vidyamaana on 2023-08-08 15:56:46 |
ಬೆಳ್ತಂಗಡಿ : ಸರಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಇಲ್ಲದ ವೇಳೆ ನರ್ಸ್ ಗಳ ನಿರ್ಲಕ್ಷ್ಯಕ್ಕೆ ಒಂದುವರೆ ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಮಾಜಿ ಶಾಸಕ ವಸಂತ ಬಂಗೇರ ಆಗಮಿಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಸಾವನ್ನಪ್ಪಿದ ತಂದೆಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿಲು ಸಲಹೆ ನೀಡಿದ್ದಾರೆ.
ಧರ್ಮಸ್ಥಳ ಗ್ರಾಮದ ಮುಳಿಕಾರ್ ನಿವಾಸಿ ಬಾಲಕೃಷ್ಣ ಮತ್ತು ಸವಿತಾ ದಂಪತಿಗಳ 1.5 ತಿಂಗಳು ಹೆಣ್ಣು ಮಗು ಅಂಶಿಕಾ ಸಾವನ್ನಪ್ಪಿದ ಮಗು.
ನೆರಿಯ ಅಕ್ಕ ಲೀಲಾವತಿ ಮನೆಯಲ್ಲಿದ್ದಕೊಂಡು ಮಗುವನ್ನು ಆರೈಕೆ ಮಾಡಿಕೊಂಡಿದ್ದ ಸವಿತಾ. ಆಗಸ್ಟ್ 8 ರಂದು(ಇಂದು) ಕಫ ಅಗಿತ್ತು ಎಂದು ಮಧ್ಯಾಹ್ನ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಡಾಕ್ಟರ್ ಇಲ್ಲದ ವೇಳೆ ನರ್ಸ್ ಇಂಜೆಕ್ಷನ್ ನೀಡದ ಬಳಿಕ ಮಗು ಸಾವನ್ನಪ್ಪಿದೆ ಎಂದು ಮನೆಮಂದಿ ಆರೋಪ ಮಾಡುತ್ತಿದ್ದಾರೆ.
Posted by Vidyamaana on 2024-05-11 10:16:42 |
ಮೈಸೂರು:ಮೈಸೂರಿನ ಕೆ.ಆರ್.ನಗರದ ವೃದ್ಧೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮೂರನೇ ಪ್ರಕರಣ ದಾಖಲಾಗಿದೆ.
ಮೈಸೂರಿನ ಹುಣಸೂರು ತಾಲೂಕಿನ ಕಾಳೇನಹಳ್ಳಿಯ ತೋಟದ ಮನೆಯಲ್ಲಿ ಯುವತಿಯ ಅಪಹರಣಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ರೇವಣ್ಣ ಅವರ ತಂದೆ ಹಾಗೂ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರನ್ನು ಈಗಾಗಲೇ ಬಂಧಿಸಲಾಗಿದೆ.
Posted by Vidyamaana on 2023-12-23 04:37:41 |
ಪುತ್ತೂರು: ತಾಲೂಕು ಸಾರ್ವಜನಿಕ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕದಳ ಬೆಂಕಿ ನಂದಿಸವಲ್ಲಿ ಯಶಸ್ಸಿಯಾಗಿದೆ.
ಹವಾನಿಯಂತ್ರಿತ ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ತಗುಲಿದ್ದು, ತಕ್ಷಣ ತೀವ್ರ ನಿಗಾ ಘಟಕದಲ್ಲಿದ್ದ ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ. ಅಗ್ನಿ ಶಾಮಕ ದಳದ ನೆರವಿನಿಂದ ಬೆಂಕಿ ನಂದಿಸುವ ಕೆಲಸ ವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಆಶಾ ಪುತ್ತೂರಾಯ ಅವರು, " ಹವಾನಿಯಂತ್ರಿತ ಘಟಕದ ಚಿಪ್ಪು ಒಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ, ಹವಾನಿಯಂತ್ರಿತ ಯಂತ್ರ ಸಹಿತ ಅದರ ಬಳಿ ಇದ್ದ ಕೆಲವು ಉಪಕರಣಕ್ಕೆ ಹಾನಿಯಾಗಿದೆ. ತಿವ್ರ ನಿಗಾ ಘಟಕದಲ್ಲಿ ಇಬ್ಬರು ರೋಗಿಗಳಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.ಮಾಹಿತಿ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ರೈಯವರು ಧಾವಿಸಿದ್ದಾರೆ. ಪುತ್ತೂರಿನ ವಿಹಿಂಪ ಕಛೇರಿಯಲ್ಲಿ ತಂಗಿದ್ದ ದತ್ತ ಮಾಲಾಧಾರಿಗಳು, ಹಾಗೂ ಸ್ಥಳೀಯ ಯುವಕರು ಬೆಂಕಿ ನಂದಿಸಲು ಅಗ್ನಿ ಶಾಮಕ ದಳಕ್ಕೆ ನೆರವಾಗಿದ್ದಾರೆ ಎಂದು ತಿಳಿದು ಬಂದಿದೆ.ತಡ ರಾತ್ರಿ 12:30 ರಿಂದ 1 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ತಕ್ಷಣವೇ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ದೋಡ್ಡ ಅನಾಹುತ ತಪ್ಪಿತು. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಸ್ಪತ್ರೆ ಅಡಳಿತ ಅಧಿಕಾರಿ ಡಾ.ಅಶಾ ಪುತ್ತೂರಾಯ ಮತ್ತು ಅಸ್ಪತ್ರೆ ಸಿಬಂದಿಗಳು ರೋಗಿಗಳನ್ನು ಬೆಂಕಿ ತಗುಲಿದ ಕೋಠಡಿಯಿಂದ ತೆರವುವಗೊಳಿಸಿದ್ದರು .
ವಿಷಯ ತಿಳಿದ ತಕ್ಷಣವೇ ಪುತ್ತೂರು ವಿಶ್ವಹಿಂದೂ ಪರಿಷದ್ ಕಾರ್ಯಲಾಯದಲ್ಲಿ ಇದ್ದ ಬಜರಂಗದಳದ ದತ್ತ ಮಾಲಾದರಿಗಳು ಸ್ಥಳಕ್ಕೆ ಅಗಮಿಸಿ ಇಡಿ ಅಸ್ಪತ್ರೆಯಲ್ಲಿ ಬೂದಿಗಳಿಂದ ಕೂಡಿದ ಕೊಠಡಿಗಳನ್ನು ನೀರಿನಿಂದ ಸ್ವಚ್ಚಗೊಳಿಸಿದ್ದಾರೆ.ಮಂಗಳೂರಿನಲ್ಲಿದ್ದ ಪುತ್ತೂರಿನ ಶಾಸಕರಿಗೆ ವಿಷಯ ತಿಳಿದ ತಕ್ಷಣವೇ ಮಂಗಳೂರಿನಿಂದ ಪುತ್ತೂರು ಸರಕಾರಿ ಅಸ್ಪತ್ರೆಗೆ ಅಶೋಕ್ ರೈ ದೌಡಯಿಸಿದ್ದಾರೆ