Posted by vidyamaana on 2024-06-30 19:51:42 |
ಬಂಟ್ವಾಳ : ತಾಲೂಕಿನ ವಿವಿಧ ಕಡೆಗಳಿಗೆ ತೆರಳಿ ಮಳೆಹಾನಿ ಬಗ್ಗೆ ವೀಕ್ಷಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಜಿಲ್ಲೆಯಲ್ಲಿಯೇ ಖ್ಯಾತಿ ಪಡೆದಿರುವ ಕಲ್ಲಡ್ಕದ ಯಾಸೀರ್ ಅವರ ಅಪರೂಪದ ವಸ್ತುಗಳ ಸಂಗ್ರಹವಿರುವ ಕಲ್ಲಡ್ಕ ಮ್ಯೂಸಿಯಂಗೆ ಭೇಟಿ ನೀಡಿದರು.ಹಿಂದಿನ ಕಾಲದ ವಸ್ತುಗಳು, ನಾಣ್ಯ, ಪತ್ರಿಕೆಗಳ ಸಂಗ್ರಹವನ್ನು ವೀಕ್ಷಿಸಿ ರೋಮಾಂಚನಗೊಂಡ ಅವರು ಯಾಸೀರ್ ಅವರ ವಸ್ತುಗಳ ಸಂಗ್ರಹಣ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅತ್ಯಂತ ಸಾವಕಾಶವಾಗಿ ಪ್ರತಿಯೊಂದು ವಸ್ತುಗಳನ್ನು ಕುತೂಹಲದಿಂದ ವೀಕ್ಷಿಸಿ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮೊಡಂಕಾಪುವಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು. ಇಲ್ಲಿನ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಎಲ್ಲರಿಗೂ ಕೈಕುಲುಕಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಮಕ್ಕಳಿಂದ ಅಂಬೇಡ್ಕರ್ ಬಗ್ಗೆ ಹಾಡು ಹಾಡಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಗಮನ ಸೆಳೆದರು. ತಹಸೀಲ್ದಾರ್ ಅರ್ಚನಾ ಭಟ್, ವಿದ್ಯಾರ್ಥಿ ನಿಲಯ ಮೇಲ್ವಿಚಾರಕರು ಜೊತೆಗಿದ್ದರು.
Posted by Vidyamaana on 2024-02-20 12:56:38 |
ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಪ್ರತಿಷ್ಠಿತ ಜವಳಿ ಮಳಿಗೆಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ.
ರಾಧಾಸ್ ಸಿಲ್ಕ್ಸ್, ಟೆಕ್ಸ್ ಟೈಲ್, ರೆಡಿಮೇಡ್ ಸಂಸ್ಥೆಗೆ ಬಿಲ್ಲಿಂಗ್, ಸೇಲ್ಸ್ ಹಾಗೂ ಟೈಲರ್ ಬೇಕಾಗಿದ್ದಾರೆ. ಅನುಭವಸ್ಥ ಹಾಗೂ ಸ್ಥಳೀಯರಿಗೆ ಆದ್ಯತೆ. ಉತ್ತಮ ವೇತನ ನೀಡಲಾಗುವುದು. ಆಸಕ್ತರು ಸಂಸ್ಥೆಯ ಕಚೇರಿಗೆ ಭೇಟಿ ನೀಡುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Posted by Vidyamaana on 2023-11-24 14:53:47 |
ಉಡುಪಿ: ಉಡುಪಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು (Four of Family murdered) ಅತ್ಯಂತ ಬರ್ಬರವಾಗಿ ಚೂರಿಯಿಂದ ಇರಿದು ಕೊಲೆ (Udupi Murder) ಮಾಡಿದ ಘಟನೆಯ ಹಿಂದಿನ ನಿಗೂಢತೆ ಈಗ ಬಯಲಾಗಿದೆ. ಗಗನಸಖಿಯಾಗಿ ಜತೆಗೆ ಕೆಲಸ ಮಾಡುತ್ತಿದ್ದ ಅಯ್ನಾಜ್ ಬಗ್ಗೆ ವಿಪರೀತ ಪೊಸೆಸಿವ್ನೆಸ್ (Possessiveneness) ಹೊಂದಿದ್ದ ಪ್ರವೀಣ್ ಅರುಣ್ ಚೌಗುಲೆ (Praveen Arun Chougule) ಆಕೆ ಯಾವುದೋ ಕಾರಣಕ್ಕೆ ಮಾತು ಬಿಟ್ಟಿದ್ದನ್ನು ಸಹಿಸಲಾಗದೆ ಪ್ರಾಣವನ್ನೇ ತೆಗೆದಿದ್ದಾನೆ.ಈ ವಿಚಾರವನ್ನು ಉಡುಪಿ ಜಿಲ್ಲಾ ಎಸ್ಪಿ ಡಾ. ಅರುಣ್ ಕೆ. (Udupi SP Arun K) ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ನವೆಂಬರ್ 12ರಂದು ಭಾನುವಾರ ಮುಂಜಾನೆ ಪ್ರವೀಣ್ ಅರುಣ್ ಚೌಗುಲೆ ನೇಜಾರಿನ ತೃಪ್ತಿ ನಗರದಲ್ಲಿರುವ ನೂರ್ ಮಹಮ್ಮದ್ ಅವರ ಮನೆಗೆ ನುಗ್ಗಿ ನೂರ್ ಮಹಮದ್ ಅವರ ಪತ್ನಿ ಹಸೀನಾ (45), ಪುತ್ರಿಯರಾದ ಅಫ್ನಾನ್ (23), ಅಯ್ನಾಜ್ (21) ಮತ್ತು ಮಗ ಅಸೀಮ್ (14)ನನ್ನು ಕೊಂದು ಹಾಕಿದ್ದ. ಕೊಲೆಯಾದವರ ಪೈಕಿ ಅಫ್ನಾನ್ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದರೆ, ಅಯ್ನಾಜ್ ಏರ್ ಹೋಸ್ಟೆಸ್ ಆಗಿ ಕೆಲಸ ಮಾಡುತ್ತಿದ್ದಳು. ಅಸೀಂ ಏಳನೇ ತರಗತಿಯಲ್ಲಿ ಓದುತ್ತಿದ್ದ. ಹಂತಕ ಪ್ರವೀಣ್ ಅರುಣ ಚೌಗುಲೆಯನ್ನು ಮೂರು ದಿನಗಳ ಬಳಿಕ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಬಂಧಿಸಿ ಕರೆತರಲಾಗಿತ್ತು. ಕೋರ್ಟ್ ಚೌಗುಲೆಯನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಆತನ ಪೊಲೀಸ್ ಕಸ್ಟಡಿಗೆ ನವೆಂಬರ್ 25ಕ್ಕೆ ಮುಕ್ತಾಯವಾಗಲಿದೆ. ಈ ನಡುವೆ, ಪೊಲೀಸ್ ವಿಚಾರಣೆ ಬೇಗನೆ ಸಂಪೂರ್ಣವಾದ ಹಿನ್ನೆಲೆಯಲ್ಲಿ ಮತ್ತೆ ಕೋರ್ಟ್ಗೆ ಹಾಜರುಪಡಿಸಲಾಗಿದೆ ಎಂದು ಎಸ್ಪಿ ಡಾ. ಅರುಣ್ ಕೆ. ಹೇಳಿದ್ದಾರೆ. ಜತೆಗೆ ವಿಚಾರಣೆ ವೇಳೆ ಪ್ರವೀಣ್ ಅರುಣ್ ಚೌಗುಲೆ ಮಾಡಿದ್ದಕ್ಕೆ ಕಾರಣವನ್ನು ಬಾಯಿ ಬಿಟ್ಟಿದ್ದಾನೆ.ವಿಪರೀತ ಪೊಸೆಸಿವ್ನೆಸ್ ಕೊಲೆಗೆ ಕಾರಣ
ಪ್ರವೀಣ್ ಚೌಗುಲೆಗೆ ಕೊಲೆ ಮಾಡುವ ಉದ್ದೇಶ ಇದ್ದಿದ್ದು ಗಗನಸಖಿಯಾಗಿದ್ದ ಅಯ್ನಾಝ್ಳನ್ನು. ಆದರೆ, ಮನೆಗೇ ಹೋಗಿ ಕೊಲೆ ಮಾಡಿದ್ದರಿಂದ ಉಳಿದ ಮೂವರು ಕೂಡಾ ಪ್ರಾಣ ಕಳೆದುಕೊಳ್ಳುವಂತಾಯಿತು. ಅಯ್ನಾಜ್ ಮೇಲಿನ ವಿಪರೀತ ಪೊಸೆಸಿವ್ನೆಸ್ ಈ ಕೊಲೆಗೆ ಪ್ರಮುಖ ಕಾರಣ ಎಂದು ಎಸ್ಪಿ ತಿಳಿಸಿದ್ದಾರೆ.
ಕೊಲೆಗಾರ ಪ್ರವೀಣ್ ಚೌಗುಲೆ ಮತ್ತು ಅಯ್ನಾಜ್ ಪರಸ್ಪರ ಪರಿಚಯ ಆಗಿದ್ದು ಕೇವಲ ಎಂಟು ತಿಂಗಳ ಹಿಂದೆ ಅಷ್ಟೆ. ಪ್ರವೀಣ್ ಮತ್ತು ಅಯ್ನಾಸ್ ಒಂದೇ ಟೀಮ್ನಲ್ಲಿ ಇದ್ದರು. ಅಯ್ನಾಜ್ ಗಗನಸಖಿಯಾಗಿದ್ದರೆ ಈತ ವಿಮಾನದಲ್ಲಿ ಸಹಾಯಕನಾಗಿದ್ದ. ಸೀಟು ಬೆಲ್ಟ್ಗಳನ್ನು ಹಾಕಿಕೊಳ್ಳುವುದು ಮೊದಲಾದ ಸೂಚನೆ ನೀಡುವ ಕೆಲಸ ಇವನದಾಗಿತ್ತು.
ಅಯ್ನಾಜ್ ಕೆಲಸಕ್ಕೆ ಸೇರಿದ ದಿನದಿಂದಲೂ ಪ್ರವೀಣ್ ಆಕೆಗೆ ಸಹಾಯ ಮಾಡುತ್ತಿದ್ದ. ಒಂದು ಕಚೇರಿಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದಾಗ ಸೀನಿಯರ್ಸ್ ಹೇಗೆ ಸಹಾಯ ಮಾಡುತ್ತಾರೋ ಹಾಗೆ ನಡೆದುಕೊಂಡಿದ್ದ. ಆಕೆಗೆ ಮಂಗಳೂರಲ್ಲಿ ಬಾಡಿಗೆ ಮನೆ ಹುಡುಕಲು ಸಹಾಯ ಮಾಡಿದ್ದ. ಕೆಲವೊಂದು ಸಂದರ್ಭದಲ್ಲಿ ಆಕೆ ಅವನ ವಾಹನವನ್ನೂ ಬಳಸುತ್ತಿದ್ದಳು.
ಈ ನಡುವೆ ಆತ ಸ್ವಲ್ಪ ಅತಿಯಾಗಿ ಆಡುತ್ತಿದ್ದ ಎಂಬ ಕಾರಣಕ್ಕಾಗಿಯೋ ಏನೋ ಅಯ್ನಾಜ್ ಆತನ ಜತೆಗೆ ಮಾತು ಬಿಟ್ಟಿದ್ದಳು. ವಿಪರೀತವಾಗಿ ಹತ್ತಿರವಾದರೆ ನೋಡುವವರಿಗೆ ಚೆನ್ನಾಗಿರುವುದಿಲ್ಲ ಎನ್ನುವುದು ಅವಳ ಅಭಿಪ್ರಾಯವಾಗಿರುವ ಸಾಧ್ಯತೆ ಇದೆ. ಆತ ಅವಳು ನನ್ನವಳು ಎನ್ನುವ ರೀತಿಯಲ್ಲಿ ವರ್ತನೆ ಮಾಡುತ್ತಿದ್ದುದು ಕೂಡಾ ಅವಳಿಗೆ ಅಷ್ಟಾಗಿ ಹಿಡಿಸಿರಲಿಲ್ಲ.
ಹೀಗಾಗಿ ಆತನಿಂದ ಅಂತರ ಕಾಯ್ದುಕೊಂಡಿದ್ದಳು. ಕಳೆದ ಒಂದು ತಿಂಗಳಿನಿಂದ ಮಾತುಕತೆ ನಿಲ್ಲಿಸಿದ್ದಳು. ಆದರೆ, ಕೆಲವು ಸಮಯದಿಂದ ಅಷ್ಟು ಹತ್ತಿರವಾಗಿದ್ದಳು ಈಗ ಏಕಾಏಕಿ ದೂರವಾಗಿದ್ದು, ಮಾತು ಬಿಟ್ಟಿದ್ದು ಅವನಿಗೆ ಸಹಿಸಲು ಆಗಿರಲಿಲ್ಲ. ಹೀಗಾಗಿ ಅತಿಯಾದ ಪೊಸೆಸಿವ್ನೆಸ್ನಿಂದ ಕೊಲೆ ಮಾಡಲು ನಿರ್ಧರಿಸಿದ್ದ!ಹೆಜಮಾಡಿಯಲ್ಲಿ ವಾಹನ ಪಾರ್ಕ್ ಮಾಡಿ ಬಂದಿದ್ದ
ನವೆಂಬರ್ 12ರಂದು ಕೊಲೆ ಮಾಡಿದ ಆತ ಅದಕ್ಕಿಂತ ಮೊದಲು ಹಲವಾರು ತಂತ್ರಗಳನ್ನು ಬಳಸಿದ್ದ. ಕೊಲೆ ಮಾಡಿದ ಬಳಿಕ ಸಿಕ್ಕಿ ಹಾಕಿಕೊಳ್ಳಬಾರದು ಎನ್ನುವ ಜಾಣ್ಮೆ ಪ್ರಯೋಗ ಮಾಡಿದ್ದ. ಅಂದರೆ ಆತ ಮಂಗಳೂರಿನಿಂದ ಹೊರಟು ಹೆಜಮಾಡಿ ಟೋಲ್ ಗೇಟ್ ವರೆಗೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ.
ಟೋಲ್ ಗೇಟ್ನ ಸಿಸಿ ಕ್ಯಾಮೆರಾಕ್ಕೆ ಗೊತ್ತಾಗದಂತೆ ದೂರದಲ್ಲಿ ಎಲ್ಲೋ ವಾಹನ ಪಾರ್ಕ್ ಮಾಡಿ ಬೇರೆ ದಾರಿಯಲ್ಲಿ ಗೇಟ್ ದಾಟಿದ್ದ. ಅಲ್ಲಿಂದ ಉಡುಪಿಗೆ ಬಂದು ತೃಪ್ತಿ ನಗರಕ್ಕೆ ಬಂದಿದ್ದ.
ತೃಪ್ತಿ ನಗರದ ಮನೆಗೆ ಬಂದವನೇ ಮೊದಲು ಅಯ್ನಾಜ್ಗೆ ಚಾಕುವಿನಿಂದ ಇರಿದಿದ್ದಾನೆ. ಅಯ್ನಾಜ್ ಕೂಗು ಕೇಳಿ ಬಂದ ತಾಯಿಗೆ ಮತ್ತು ಅಕ್ಕ, ಅಫ್ನಾನ್ಗೆ ಚೂರಿಯಿಂದ ಇರಿದಿದ್ದ. ಬಳಿಕ ಮನೆಗೆ ಬಂದ ಅಸೀಮ್ಗೆ ಚೂರಿ ಹಾಕಿದ್ದಾನೆ. ಅಲ್ಲಿಂದ ಬೇರೆ ಬೇರೆ ಮಾರ್ಗವಾಗಿ ಮರಳಿ ಮನೆಗೆ ಹೋಗಿದ್ದ.
ಕೊಲೆಯ ಸಂದರ್ಭ ಧರಿಸಿದ್ದ ಬಟ್ಟೆಯನ್ನು ದಾರಿ ಮಧ್ಯೆ ಎಲ್ಲೋ ಸುಟ್ಟು ಹಾಕಿದ್ದ ಆತ ಕೃತ್ಯಕ್ಕೆ ಬಳಸಿದ್ದ ಮನೆಯ ಕಿಚನ್ ಚೂರಿಯನ್ನು ಮರಳಿ ಅಲ್ಲಿಯೇ ತಂದು ಇಟ್ಟಿದ್ದ! ಕೊಲೆಯ ಸಂದರ್ಭದಲ್ಲಿ ಅವನಿಗೂ ಗಾಯವಾಗಿತ್ತು. ಗಾಯದ ಕುರಿತು ಪತ್ನಿ ವಿಚಾರಿಸಿದಾಗ ಬೇರೆ ಸಬೂಬು ಹೇಳಿದ್ದ. ಮನೆಯಿಂದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಊರಿಗೆ ತೆರಳಿದ್ದ. ಪೊಲೀಸರಿಗೆ ಆರಂಭದಲ್ಲೇ ಆತನ ಮೇಲೆ ಸಂಶಯ ಬಂದಿತ್ತು. ಹೀಗಾಗಿ ಆತನ ಮೊಬೈಲ್ ಲೊಕೇಶನ್ ಬೆನ್ನು ಹತ್ತಿ ಬೆಳಗಾವಿಯಲ್ಲಿ ಬಂಧಿಸಿದರು.
ನಿಜವೆಂದರೆ ಪ್ರವೀಣ್ ಚೌಗುಲೆಗೆ ಕೊಲೆಗೆ ಮೊದಲು ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. ಪೂನಾ ಸಿಟಿ ಪೊಲೀಸ್ ನಲ್ಲಿ 3 ತಿಂಗಳು ಟ್ರೈನಿಂಗ್ ಪಡೆದಿದ್ದ ಅವನಿಗೆ ಅದರ ಆಧಾರದಲ್ಲಿ ವಿಮಾನದ ಕ್ರೂ ಆಗಿ ಕೆಲಸ ಸಿಕ್ಕಿದೆ ಎಂದು ಎಸ್ಪಿ ತಿಳಿಸಿದರು.
ಕುಡಚಿಯಲ್ಲಿ ಆರೋಪಿಗೆ ಆಶ್ರಯ ನೀಡಿದ ವ್ಯಕ್ತಿಯ ವಿಚಾರಣೆಯನ್ನೂ ಮಾಡಲಾಗಿದೆ. ಹೆಚ್ಚುವರಿ ಮಾಹಿತಿ ಬೇಕಾಗಿದ್ದರೆ ಅವರಿಂದ ಮಾಹಿತಿ ಪಡೆಯಲು ಅವಕಾಶವಿದೆ. ಗಂಭೀರ ಪ್ರಕರಣ ಆಗಿರುವ ಕಾರಣ ಎಲ್ಲಾ ಮಾಹಿತಿ ಮಾಧ್ಯಮಕ್ಕೆ ಕೊಡಲು ಸಾಧ್ಯವಿಲ್ಲ ಎಂದು ಡಾ. ಅರುಣ್ ಹೇಳಿದರು. ಜೈಲಿನಲ್ಲಿ ಆರೋಪಿಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಪೊಲೀಸರ ಬಂದೋಬಸ್ತ್ ನಿಯೋಜನೆ ಆಗಿದೆ ಎಂದರು.
ಫಾಸ್ಟ್ ಟ್ರ್ಯಾಕ್ ವಿಚಾರಣೆಗೆ ಅಯ್ನಾಜ್ ಕುಟುಂಬ ಮನವಿ
ಪ್ರಕರಣದ ತನಿಖೆಯಲ್ಲಿ ನೂರ್ ಮಹಮದ್ ಅವರ ಕುಟುಂಬ ಎಲ್ಲ ರೀತಿಯಲ್ಲೂ ಸಹಕರಿಸಿದೆ. ಕುಟುಂಬ ನೋವಲ್ಲಿದ್ದರೂ ಎಲ್ಲ ಮಾಹಿತಿಯನ್ನು ಕೊಟ್ಟಿದ್ದಾರೆ. ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ತ್ವರಿತ ನ್ಯಾಯದಾನಕ್ಕೆ ಅಯ್ನಾಜ್ ಮನೆಯವರು ಮನವಿ ಮಾಡಿದ್ದಾರೆ. ವಿಶೇಷ ಪಿ.ಪಿ ನೇಮಕಕ್ಕೆ ನಾವು ಸಹಕಾರ ನೀಡುತ್ತೇವೆ ಎಂದು ಜಿಲ್ಲಾ ಎಸ್ಪಿ ಅರುಣ್ ಕೆ ಹೇಳಿದರು.
11 ತಂಡ, 50ಕ್ಕೂ ಅಧಿಕ ಪೊಲೀಸರು
ಈ ಪ್ರಕರಣವನ್ನು ಬೇಧಿಸುವುದು ತುಂಬ ಸವಾಲಿನ ಕೆಲಸವಾಗಿತ್ತು. ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಎಲ್ಲರೂ ಕುತೂಹಲ ಹೊಂದಿದ್ದರು. ಹೀಗಾಗಿ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕಾಗಿತ್ತು ಎಂದು ಹೇಳಿದ ಎಸ್ಪಿ ಅರುಣ್, ತನಿಖೆಗೆ ಒಟ್ಟು 11 ತಂಡ ರಚನೆ ಮಾಡಿದ್ದೆವು. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಸುಮಾರು 50 ಪೊಲೀಸರು ತನಿಖೆಯಲ್ಲಿ ಭಾಗಿಯಾಗಿದ್ದಾರೆ. ಎಲ್ಲಾ ಕಡೆಯಿಂದ ಮಾಹಿತಿ ಬಂದ ಕಾರಣ ಎಲ್ಲವನ್ನು ತನಿಖೆ ಮಾಡಿದ್ದೇವೆ. ನೂರ್ ಮಹಮದ್ ಅವರ ಹಸೀನಾಗೆ ಆರ್ಥಿಕ ಮೋಸವಾದ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದನ್ನೂ ಪರಿಶೀಲನೆ ಮಾಡಿದ್ದೇವೆ ಎಂದರು ಅರುಣ್.
ಚಾರ್ಜ್ ಶೀಟ್ ಸಲ್ಲಿಕೆಗೆ ಇನ್ನೂ 70-80 ದಿನ ಇದೆ. ಎಲ್ಲಾ ಸಾಕ್ಷಿಗಳನ್ನು ಸಂಗ್ರಹ ಮಾಡುತ್ತಿದ್ದೇವೆ. ಆರೋಪಿ ಪತ್ತೆ ಮಾಡಿದ ಪೊಲೀಸರಿಗೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಇಲಾಖೆಗೆ 1.50 ಲಕ್ಷ ಬಹುಮಾನ ಕೊಡುವ ಬಗ್ಗೆ ಶಿಫಾರಸು ಮಾಡಿರುವುದಾಗಿ ಉಡುಪಿ ಎಸ್ ಪಿ ಡಾ. ಅರುಣ್ ಕೆ ಮಾಹಿತಿ ನೀಡಿದರು.
Posted by Vidyamaana on 2023-09-05 02:56:06 |
ಪುತ್ತೂರು: ಇಲ್ಲಿನ ಕುಂಬ್ರದಲ್ಲಿ ಸರಕಾರಿ ಕಚೇರಿಗಳನ್ನೇ ಟಾರ್ಗೆಟ್ ಮಾಡಿ ಸರಣಿ ಕಳ್ಳತನ ನಡೆಸಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಕುಂಬ್ರದಲ್ಲಿರುವ ಒಳಮೊಗ್ರು ಗ್ರಾಮ ಪಂಚಾಯತ್ ಕಚೇರಿ, ಗ್ರಾಮ ಕರಣಿಕರ ಕಚೇರಿ, ಕೆ.ಪಿ.ಎಸ್. ಸ್ಕೂಲಿಗೆ ಕಳ್ಳರು ನುಗ್ಗಿದ್ದಾರೆ. ಕಚೇರಿಗಳ ಬಾಗಿಲು ಮುರಿದು ಒಳ ನುಗ್ಗಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
Posted by Vidyamaana on 2024-04-10 22:03:09 |
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಗಳ ಮತ ಬೇಡ, ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಹೇಳಿದ್ದಾರೆಂದು ಸುದ್ದಿಪತ್ರಿಕೆಯ ವರದಿ ರೀತಿಯಲ್ಲಿ ಸುಳ್ಳು ಸುದ್ದಿ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ 7 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹಿಂದುಗಳ ಅಗತ್ಯ ನಮಗೆ ಬೇಡ. ಮುಸ್ಲಿಮರ ಓಟು ಸಾಕು. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಲು ಬಯಸುತ್ತೇನೆ. ಮುಸ್ಲಿಂರ ಓಲೈಕೆ ಕುರಿತು ಬಿಜೆಪಿಗರ ಟೀಕೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂಬ ರೀತಿಯಲ್ಲಿ ಸುಳ್ಳು ಸುದ್ದಿಯನ್ನು ಬಗ್ಗೆ ಹರೀಶ್ ನಾಗರಾಜು ಎಂಬವರು ಪೊಲೀಸರಿಗೆ ದೂರು ನೀಡಿದ್ದರು.
ಅವರ ದೂರಿನ ಆಧಾರದ ಮೇಲೆ ಬೆಂಗಳೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66, 66ಸಿ ಮತ್ತು 66ಡಿ ಹಾಗೂ ಐಪಿಸಿ ಸೆಕ್ಷನ್ 153ಎ, 120ಬಿ, 419, 469, 471, 505(2) ಮತ್ತು 468ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
Posted by Vidyamaana on 2024-01-10 10:28:41 |
ಬೆಂಗಳೂರು : ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ ಕಳ್ಳತವಾದ ಘಟನೆ ಬೆಳಕಿಗೆ ಬಂದಿದ್ದು, ಖದೀಮರು 2.50 ಲಕ್ಷ ಹಣ ಕದ್ದೊಯ್ದಿದ್ದಾರೆ.ಬೆಂಗಳೂರಿನ ಗುರುಕಿರಣ್ ನಿವಾಸದಲ್ಲಿ ಅವರ ಅತ್ತೆ ಇಟ್ಟಿದ್ದ 2.50 ಲಕ್ಷ ಹಣವನ್ನು ಜ.5 ರಂದು ಖದೀಮರು ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಜನವರಿ 7 ರಂದು ಚಂದ್ರಲೇಔಟ್ ಪೊಲೀಸ್ ಠಾಣೆಗೆ ಗುರುಕಿರಣ್ ಅತ್ತೆ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅವರ ಮನೆಕೆಲದಾಕೆ ಯ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Posted by Vidyamaana on 2023-12-29 21:51:48 |
ಕಾಣಿಯೂರು: ಕಾಣಿಯೂರಿನ ಎಲುವೆ ಎಂಬಲ್ಲಿ ರಿಕ್ಷಾ ಚಾಲಕರೋರ್ವರ ಶವ ನೇಣು ಬಿಗಿದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು, ಇದೀಗ ಸಾವಿನಲ್ಲಿ ಸಂಶಯ ವ್ಯಕ್ತಗೊಂಡು ದೂರು ದಾಖಲಾಗಿದೆ.
ಕಾಣಿಯೂರಿನ ಬೆದ್ರಾಜೆ ಮನೆ ವಸಂತ (42) ಅವರ ರಿಕ್ಷಾ ಕಾಣಿಯೂರು ರಸ್ತೆಯ ಎಲುವೆ ಎಂಬಲ್ಲಿ ನಿಲ್ಲಿಸಿತ್ತು. ಅಲ್ಲೇ ಸಮೀಪದ ಕಾಡಿನಲ್ಲಿ ವಸಂತ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವಸಂತ ಅವರು ಕಾಣಿಯೂರು ಪೇಟೆಯಲ್ಲಿ ಆಟೋರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಡಿ. 27ರಂದು ಬೆಳಗ್ಗೆ 6 ಗಂಟೆಗೆ ಅವರ ಆಟೋರಿಕ್ಷಾದಲ್ಲಿ ಬಾಡಿಗೆಗೆಂದು ಮನೆಯಿಂದ ಹೋಗಿ ವಾಪಸು ಮನೆಗೆ ಬಂದವರು ಮನೆಯಲ್ಲಿನ ತೋಟದಲ್ಲಿ ಅಡಿಕೆ ಹೆಕ್ಕುವ ಕೆಲಸವನ್ನು ಮಾಡಿಕೊಂಡಿದ್ದರು.
ಮಧ್ಯಾಹ್ನ ವಸಂತ ಅವರು ಊಟ ಮಾಡಿ ಆಟೋರಿಕ್ಷಾದಲ್ಲಿ ಮನೆಯಿಂದ ಹೋದವರು ಏಲುವೆ ಎಂಬಲ್ಲಿಗೆ ಬಾಡಿಗೆಗೆ ಹೋಗುತ್ತಿರುವುದಾಗಿ ಅವರ ಅಣ್ಣ ಗಣೇಶ್ ಅವರಿಗೆ ತಿಳಿಸಿದ್ದರು. ಅಲ್ಲಿಂದ ಮತ್ತೆ ಕಾಲ್ ಮಾಡಿ ಪದ್ಮಯ ಗೌಡರ ಅಳಿಯ ಮೊಬೈಲನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ಗಣೇಶರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಮತ್ತೆ ಎರಡೂ ಪೋನ್ ಸ್ವಿಚ್ ಆಫ್ ಆಗಿತ್ತು.
ಎಲುವೆ ಎಂಬಲ್ಲಿಯ ಕಾಡಿನ ಬಳಿ ಆಟೋ ರಿಕ್ಷಾ ರಸ್ತೆಯ ಬಳಿ ನಿಂತಿರುವುದು ಕಂಡುಬಂದಿದ್ದು, ಸ್ವಲ್ಪ ದೂರದಲ್ಲಿ ಮರವೊಂದಕ್ಕೆ ನೈಲಾನ್ ಹಗ್ಗದಿಂದ ವಸಂತ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಂಡುಬಂದಿದ್ದರು. ಈ ಕುರಿತು ವಸಂತ ಅವರ ಸಹೋದರ ಗಣೇಶ್ ಅವರು ಮರಣದಲ್ಲಿ ಸಂಶಯವಿದ್ದು, ತನಿಖೆ ನಡೆಸುವಂತೆ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೃತದೇಹದ ಕಾಲುಗಳಲ್ಲಿ ಮಣ್ಣು ಮೆತ್ತಿಕೊಂಡಿದೆ. ಚಪ್ಪಲಿ ನಾಪತ್ತೆಯಾಗಿದ್ದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿದೆ.
ಪ್ರಕರಣಕ್ಕೆ ವೈರಲ್ ವಿಡಿಯೋ ಕಾರಣವೇ..?
ಕೆಲ ದಿನಗಳ ಹಿಂದೆ
ವಿಡಿಯೋ ವೈರಲ್ ಆಗಿತ್ತು. ಆ ವೀಡಿಯೋವನ್ನು ಆತ್ಮಹತ್ಯೆ ಮಾಡಿಕೊಂಡ ವಸಂತರು ಯಾರಿಗೋ ತೋರಿಸಿದ್ದರು ಎನ್ನಲಾಗಿದೆ.
ನಂತರ ಅದೇ ವಿಷಯದಲ್ಲಿ ವಸಂತರಿಗೆ ಹಲ್ಲೆ ನಡೆದಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅದೇ ವಿಡಿಯೋ ಇದ್ದ ಮೊಬೈಲನ್ನು ಎಳೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.