Posted by vidyamaana on 2024-06-30 21:58:04 |
ಉಪ್ಪಿನಂಗಡಿ: ಕಡಬ ತಾಲ್ಲೂಕು ಕೊಯಿಲ ಗ್ರಾಮದ ಕೆಮ್ಮಾರ ಎಂಬಲ್ಲಿ ಭಾನುವಾರ ಮನೆಯೊಳಗೆ ಬೆಂಕಿ ಹೊತ್ತಿಕೊಂಡು ಮನೆಯ ಒಳ ಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮನೆ ಭಾಗಶಃ ಹಾನಿಗೊಂಡಿದ್ದು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೆಮ್ಮಾರ ಶಾಲೆ ಬಳಿಯ ನಿವಾಸಿ ದಿ.ಇಬ್ರಾಹಿಂ ಎಂಬುವರ ಪುತ್ರ ಅಬ್ದುಲ್ ರಹಿಮಾನ್ ಅವರ ಮನೆಯಲ್ಲಿ ಅವಘಡ ಸಂಭವಿಸಿದೆ.
ಮನೆಯ ಮಾಸ್ಟರ್ ಬೆಡ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯೊಳಗೆ ಆವರಿಸಿದೆ. ಮನೆಯೊಳಗೆ ಇದ್ದ ಕಪಾಟು, ಮಂಚ, ಕಿಟಕಿ, ಬಾಗಿಲು, ಫ್ರಿಜ್, ವಾಷಿಂಗ್ ಮೆಸಿಷಿನ್, ಬಟ್ಟೆಗಳು, ಗೃಹೋಪಯೋಗಿ ವಸ್ತುಗಳು, ಆಹಾರ ಸಾಮಗ್ರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಬೆಂಕಿಯ ತಾಪಕ್ಕೆ 2 ಕಡೆ ಗೋಡೆ ಬಿರುಕು ಬಿಟ್ಟಿದೆ. ಬೆಂಕಿ ಕಾಣಿಸಿಕೊಂಡ ಕೋಣೆಯಲ್ಲಿ ಗ್ರಾನೈಟ್ ಮತ್ತು ಅಡುಗೆ ಕೋಣೆಯಲ್ಲಿ ನೆಲದ ಟೈಲ್ಸ್ ಸಿಡಿದಿದೆ. ಇದರಿಂದಾಗಿ ಸುಮಾರು ₹ 35 ಲಕ್ಷ ನಷ್ಟ ಉಂಟಾಗಿದೆ ಎಂದು ಅಬ್ದುಲ್ ರಹಿಮಾನ್ ಅವರು ಕಂದಾಯ ಇಲಾಖೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮನೆಯಲ್ಲಿ ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ಮಾತ್ರ ಇದ್ದು, ಮನೆಯೊಳಗೆ ಹೊಗೆ ತುಂಬುವುದನ್ನು ಗಮನಿಸಿ ಮನೆಯಿಂದ ಹೊರ ಬಂದು ಬೊಬ್ಬೆ ಹಾಕಿ ಪಕ್ಕದ ಮನೆಯವರನ್ನು ಕರೆದಿದ್ದಾರೆ. ಪಕ್ಕದ ಮನೆಯವರು ಸ್ಥಳೀಯರಿಗೆ ಕರೆ ಮಾಡಿದ್ದಾರೆ. ಅಬ್ದುಲ್ ರಹಿಮಾನ್, ಪತ್ನಿ, ಮಕ್ಕಳು ಪತ್ನಿಯ ತವರು ಮನೆಗೆ ಹೋಗಿದ್ದರು. ವರ್ಷದ ಹಿಂದೆ ಮನೆ ನಿರ್ಮಿಸಲಾಗಿತ್ತು.
ಬೆಂಕಿ ಅವಘಡದ ಮಾಹಿತಿ ತಿಳಿದ ಸಾಮಾಜಿಕ ಕಾರ್ಯಕರ್ತರಾದ ಸಲೀಕತ್, ಅಬೂಬಕ್ಕರ್, ರಿಯಾಝ್, ಜುನೈದ್ ಮನೆಯೊಳಗೆ ಪ್ರವೇಶಿಸಿ
ವಿದ್ಯುತ್ ಸಂಪರ್ಕ, ಗ್ಯಾಸ್ ಸಂಕರ್ಪ ಕಡಿತಗೊಳಿಸಿದರು. ಪುತ್ತೂರಿನಿಂದ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು.
ಘಟನಾ ಸ್ಥಳಕ್ಕೆ ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್, ಸದಸ್ಯ ನಝೀರ್ ಪೂರಿಂಗ, ಆತೂರು ಬದ್ರಿಯಾ ಮಸೀದಿ ಖತೀಬ್ ಜುನೈದ್ ಜಿಫ್ರಿ ತಂಙಳ್ ಭೇಟಿ ನೀಡಿದರು. ಕೊಯಿಲ ಗ್ರಾಮಕರಣಿಕ ಶೇಷಾದ್ರಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ನಾನು ಕೋಣೆಯೊಂದರಲ್ಲಿ ಕೆಲಸದಲ್ಲಿ ನಿರತಳಾಗಿದ್ದೆ. ತುಂತುರು ಮಳೆಯಾಗುತ್ತಿತ್ತು. ಭಾರಿ ಸಿಡಿಲಿನ ಶಬ್ದ ಕೇಳಿಸಿತ್ತು. ಸ್ವಲ್ಪ ಹೊತ್ತಿನ ಬಳಿಕ ಮನೆಯೊಳಗೆ ಹೊಗೆ ತುಂಬತೊಡಗಿತು. ಮನೆಯಿಂದ ಹೊರ ಬರುವುದಕ್ಕೂ ದಾರಿ ಕಾಣುತ್ತಿರಲಿಲ್ಲ ಎಂದು ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ತಿಳಿಸಿದರು.
ಉಪ್ಪಿನಂಗಡಿ ಸಮೀಪದ ಕೆಮ್ಮಾರದಲ್ಲಿ ಮನೆ ಭಾಗಶಃ ಬೆಂಕಿಗೆ ಆಹುತಿಯಾಗಿದ್ದು ಕಂದಾಯ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು
Posted by Vidyamaana on 2024-03-16 07:16:23 |
ಪುತ್ತೂರು : ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನ್ಯಾಯವಾದಿ, ನೋಟರಿ ಕೆ. ಭಾಸ್ಕರ್ ಕೋಡಿಂಬಾಳ ಮತ್ತು ಸದಸ್ಯರಾಗಿ ಉದ್ಯಮಿ ನಿಹಾಲ್ ಪಿ.ಶೆಟ್ಟಿ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ಹಾಗೂ ನಗರಸಭೆಯ ಮಾಜಿ ಸದಸ್ಯ ಅನ್ವರ್ ಕಾಸಿಂ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.ರಾಜ್ಯದ ನಗರ ಯೋಜನಾ ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನಾಮ ನಿರ್ದೇಶನ ಮಾಡಿ ಸರಕಾರ ಆದೇಶಿಸಿದ್ದು, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನ್ಯಾಯವಾದಿ, ನೋಟರಿ ಕೆ. ಭಾಸ್ಕರ್ ಕೋಡಿಂಬಾಳ ಮತ್ತು ಸದಸ್ಯರಾಗಿ ಉದ್ಯಮಿ, ರೈ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ ನಿಹಾಲ್ ಪಿ.ಶೆಟ್ಟಿ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ಹಾಗೂ ನಗರಸಭೆಯ ಮಾಜಿ ಸದಸ್ಯ ಅನ್ವರ್ ಕಾಸಿಂ ಅವರನ್ನು ನಾಮ ನಿರ್ದೇಶನ ಮಾಡಿ ರಾಜ್ಯ ಸರಕಾರದ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಯೋಜನಾ ಸೇವೆ, ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಲತಾ ಕೆ. ಅವರು ಆದೇಶಿಸಿದ್ದಾರೆ.
ಅಧ್ಯಕ್ಷರ ಪರಿಚಯ: ಕಳೆದ ೩೨ ವರ್ಷಗಳಿಂದ
ಪುತ್ತೂರಿನಲ್ಲಿ ವಕೀಲ ವೃತ್ತಿ ಮಾಡುತ್ತಿರುವ ಕೆ.ಭಾಸ್ಕರ ಕೋಡಿಂಬಾಳ ಅವರು ದಿ.ದಾಸಪ್ಪ ಗೌಡ-ಶ್ರೀಮತಿ ಬಾಲಕಿ ದಂಪತಿಯ ಪುತ್ರ.ಹಿರಿಯ ವಕೀಲರಾಗಿದ್ದ ಅಂಬೆಕಲ್ಲು ರಾಧಾಕೃಷ್ಣ ಗೌಡರ ಕಚೇರಿಯಲ್ಲಿ ಕಿರಿಯ ವಕೀಲನಾಗಿ ವೃತ್ತಿ ಆರಂಭಿಸಿದ್ದರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಕೋಡಿಂಬಾಳ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ,ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು, ಪಂಜದಲ್ಲಿ ಹಾಗೂ ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯ, ಮಂಗಳೂರುನಲ್ಲಿ ಕಾನೂನು ಪದವಿಯನ್ನು ಪೂರ್ಣಗೊಳಿಸಿದ್ದರು.ಭಾರತ ಸರಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ನಲ್ಲಿ ಸಹಾಯಕ ಯೋಜನಾ ಧಿಕಾರಿಯಾಗಿ ಎರಡು ವರ್ಷಗಳ ಸೇವೆ ಸಲ್ಲಿಸಿದ್ದ ಇವರು ಬಳಿಕ ಈ ಹುದ್ದೆಯಿಂದ ಸ್ವಯಂ ನಿವೃತ್ತಿ ಹೊಂದಿ ಪುತ್ತೂರಿನಲ್ಲಿ ಕಳೆದ ೩೨ ವರ್ಷಗಳಿಂದ ವಕೀಲ ವೃತ್ತಿ ನಿರ್ವಹಿಸುತ್ತಿದ್ದು ೧೫ ವರ್ಷಗಳ ಹಿಂದೆ ಜಿಲ್ಲಾ ನೋಟರಿಯಾಗಿ ನೇಮಕಗೊಂಡಿದ್ದರು.ಕಳೆದ ೨೦ ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಂಘಗಳ ಆರ್ಬಿಟ್ರೇಟರ್ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.ರಾಜಕೀಯವಾಗಿ,೮ ವರ್ಷ ಕಡಬ ವಲಯ ಕಾಂಗ್ರೆಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದ ಇವರು ಪಿ.ಪಿ.ವರ್ಗೀಸ್ರವರು ಜಿಲ್ಲಾ ಪಂಚಾಯತ್ ಅಭ್ಯರ್ಥಿಯಾಗಿದ್ದ ಸಂದರ್ಭದಲ್ಲಿ ಅವರ ಚುನಾವಣಾ ಏಜೆಂಟ್ ಆಗಿ ಕರ್ತವ್ಯ ನಿರ್ವಹಣೆ ಮತ್ತು ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.
ಉದ್ಯಮಿ ನಿಹಾಲ್ ಪಿ.ಶೆಟ್ಟಿ: ಸದಸ್ಯನಾಗಿ
ನಾಮನಿರ್ದೇಶನಗೊಂಡಿರುವ ನಿಹಾಲ್ ಪಿ.ಶೆಟ್ಟಿಯವರು ಯಶಸ್ವಿ ಉದ್ಯಮಿಯಾಗಿದ್ದಾರೆ. ಕಲ್ಲಾರೆಯಲ್ಲಿ ಡ್ಯಾಶ್ ಮಾರ್ಕೆಟಿಂಗ್ ಸಂಸ್ಥೆಯ ಪಾಲುದಾರರಾಗಿರುವ ಇವರು ವಿವಿಧ ಸಾಮಾಜಿಕ ಸಂಘಟನೆಗಳಲ್ಲಿಯೂ ಸಕ್ರಿಯರಾಗಿದ್ದಾರೆ. ನಳಿನಿ ಪುಷ್ಪರಾಜ್ ಶೆಟ್ಟಿಯವರ ಮಗನಾಗಿರುವ ಇವರು ಸಾಮೆತ್ತಡ್ಕ ಬಿಜನನಿ ಹೌಸ್ಟಿ ನಿವಾಸಿ.
ಲ್ಯಾನ್ಸಿ ಮಸ್ಕರೇನ್ಹಸ್: ಸದಸ್ಯನಾಗಿ
ನಾಮನಿರ್ದೇಶನಗೊಂಡಿರುವ ಲ್ಯಾನ್ಸಿ ಮಸ್ಕರೇನ್ಹಸ್ ಅವರು ಈ ಹಿಂದೆ ಪುರಸಭೆಯ ಸದಸ್ಯನಾಗಿ,ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದರು. ನಗರ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಇವರು ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ನಲ್ಲಿ ಸಕ್ರಿಯರಾಗಿದ್ದು ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.ಕ್ರೈಸ್ತ ಸಮುದಾಯದ ಸಂಘಟನೆಗಳಲ್ಲಿಯೂ ಇವರು ಸಕ್ರಿಯರಾಗಿದ್ದಾರೆ.ಇವರು ಸಾಮೆತ್ತಡ್ಕ ನಿವಾಸಿ.
ಅನ್ವರ್ ಕಾಸಿಂ: ಅನ್ವರ್ ಕಾಸಿಂ ಅವರು ಈ ಹಿಂದೆ
ಪುರಸಭೆ, ನಗರಸಭೆಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.ಕಾಂಗ್ರೆಸ್ ಪಕ್ಷದಲ್ಲಿಯೂ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಇವರು ವಿವಿಧ ಸಂಘಟನೆಗಳಲ್ಲಿಯೂ ಸಕ್ರಿಯರಾಗಿದ್ದಾರೆ.ಇವರು ಸಾಲ್ಮರ ನಿವಾಸಿ.
Posted by Vidyamaana on 2023-08-11 23:13:55 |
ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 12 ರಂದು
ಬೆಳಿಗ್ಗೆ 10 ಗಂಟೆಗೆ ಪಡ್ನೂರು ಗ್ರಾಮದ ಪರಂಬಾಜೆ ಎಂಬಲ್ಲಿ ತಾಳೆ ಕೃಷಿ ಬಗ್ಗೆ ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಕಾರ್ಯಕ್ರಮ ಇದರ ಉದ್ಘಾಟನೆ
11 ಗಂಟೆಗೆ ಸಾಮೆತ್ತಡ್ಕ ಸರಕಾರಿ ಶಾಲೆಯಲ್ಲಿ ಕೊಠಡಿ ಉದ್ಘಾಟನೆ
11.30 ಕ್ಕೆ ಮೌಂಟನ್ ವ್ಯೂ ಶಾಲೆಯಲ್ಲಿ ಸನ್ಮಾನ ಕಾರ್ಯಕ್ರಮ
12.30 ಕ್ಕೆ ಪಾಪೆಮಜಲು ಸರಕಾರಿ ಪ್ರೌಢ ಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮದ ಲ್ಲಿ ಭಾಗವಹಿಸಲಿದ್ದಾರೆ
Posted by Vidyamaana on 2023-11-17 04:34:41 |
ಹಾಸನ: ಪ್ರೇಮ ವೈಫಲ್ಯದಿಂದ ಪ್ರಿಯಕರ ತನ್ನ ಪ್ರೇಯಸಿಯ ಕತ್ತು ಕುಯ್ದು ಬರ್ಬರವಾಗಿ ಹತ್ಯೆಗೈದ ಘಟನೆ ಹಾಸನ ತಾಲೂಕಿನ ಕುಂತಿಗುಡ್ಡದಲ್ಲಿ ನಡೆದಿದೆ.
ಸುಚಿತ್ರಾ (20) ಕೊಲೆಯಾದ ಯುವತಿ. ತೇಜಸ್ (23) ಕೊಲೆ ಮಾಡಿರುವ ಪ್ರಿಯಕರ.
ಸುಚಿತ್ರಾ ಆಲೂರು ತಾಲೂಕಿನ ಕವಳಗೆರೆ ಗ್ರಾಮದವಳಾಗಿದ್ದು, ಮೊಸಳೆಹೊಸಳ್ಳಿ ಎಂಜಿನಿಯರ್ ಕಾಲೇಜಿನಲ್ಲಿ ಬಿಇ ಮೆಕ್ಯಾನಿಕಲ್ ಪದವಿ ಓದುತ್ತಿದ್ದಳು. ಮೂಲತಃ ಹಾಸನ ತಾಲೂಕಿನ ಶಂಕರನಹಳ್ಳಿ ಗ್ರಾಮದವನಾದ ತೇಜಸ್ ಸುಚಿತ್ರಾಳ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದಿದ್ದಾನೆ.
ಪ್ರೀತಿಸಲು ನಿರಾಕರಿಸಿದ್ದಕ್ಕೆ ತೇಜಸ್ ಸುಚಿತ್ರಾಳನ್ನು ತನ್ನೊಂದಿಗೆ ಕುಂತಿಬೆಟ್ಟಕ್ಕೆ ಕರೆದೊಯ್ದಿದ್ದಾನೆ. ಕರೆದೊಯ್ದು ಬಳಿಕ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ಆರೋಪಿ ತೇಜಸ್ ಎಸ್ಕೇಪ್ ಆಗಿದ್ದ.
ತೇಜಸ್ ಕೂಡಾ ಮೊಸಳೆಹೊಸಳ್ಳಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Posted by Vidyamaana on 2023-09-14 17:50:42 |
ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಆಯೋಜನೆಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಅಕ್ಷಯ ಗುರು ಪುರಸ್ಕಾರ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಡಿ ಮಹೇಶ್ ರೈ,ನಿವೃತ್ತ ಕನ್ನಡ ಪ್ರಾಧ್ಯಾಪಕರು ವಿವೇಕಾನಂದ ಕಾಲೇಜು ಪುತ್ತೂರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ, ಯಾವಾಗ ತಾನೇ ಕಲಿಸಿದ ವಿದ್ಯಾರ್ಥಿ ಶಿಕ್ಷಕನನ್ನು ಮೀರಿ ಬೆಳೆದು ಉನ್ನತಸ್ಥಾನಕ್ಕೇರುತ್ತಾನೋ, ಅಂದು ಶಿಕ್ಷಕನ ಜೀವನ ಸಾರ್ಥಕ ಎಂದರು.
ಅಕ್ಷಯ ಗುರು ಪುರಸ್ಕಾರವನ್ನು ದಯಾನಂದ ರೈ ಕರ್ಮಂಡ, ರಾಜ್ಯ ಪ್ರಶಸ್ತಿ ವಿಜೇತರು,ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು, ಕೋಟಿಯಪ್ಪ ಪೂಜಾರಿ ಸೇರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು, ನಾರಾಯಣ ಕೆ ನಿವೃತ್ತ ಮುಖ್ಯ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಉಪ್ಪಳಿಗೆ, ರವೀಶ್ ಪಡುಮಲೆ ಸಹಪ್ರಾಧ್ಯಾಪಕರು, ಎಸ್ ಡಿ ಎಂ ಎಂಜಿನಿಯರಿಂಗ್ ಕಾಲೇಜು ಉಜಿರೆ, ಶುಭಲತಾ ಹಾರಾಡಿ,ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು,ಮುಖ್ಯಗುರುಗಳು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ, ಸಂಧ್ಯಾ ರವೀಶ್ಚಂದ್ರ, ನಿವೃತ್ತ ಅಂಗನವಾಡಿ ಕರ್ಯರ್ತೆ ಸಂಪ್ಯ, ಉದಯಕುಮಾರ್ ರೈ ಎಸ್, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು, ಸಹ ಶಿಕ್ಷಕರು ವಿದ್ಯಾ ಬೋಧಿನಿ ಪ್ರೌಢಶಾಲೆ ಬಾಳಿಲ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಡಾಕ್ಟರ್ ರವೀಶ್ ಪಡುಮಲೆಯವರು ತಮ್ಮ ಸನ್ಮಾನವನ್ನು ಗುರುಗಳಾದ ರಘುನಾಥ ರೈ ಅವರಿಗೆ ಅರ್ಪಿಸಿದರು.
ಶುಭಲತಾ ಹಾರಾಡಿಯವರು ಶಾಶ್ವತವಾದ ಆನಂದ ನಮ್ಮೊಳಗೆ ಇದೆ ಅದನ್ನು ನಾವು ಕಂಡುಕೊಳ್ಳಬೇಕು ಎಂದು ಹೇಳಿದರು.
ಕೋಟಿಯಪ್ಪ ಪೂಜಾರಿ ಸೇರ ಅವರು ತಮ್ಮ ಒಕ್ಕಣೆಯ ಮೂಲಕ ಕಾಲೇಜಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಅತಿಥಿಗಳಾಗಿ ಆಗಮಿಸಿದ ವಿದ್ಯಾಮಾತಾ ಅಕಾಡೆಮಿ ನಿರ್ದೆಶಕ ಭಾಗ್ಯೇಶ್ ರೈ ಮಾತನಾಡಿ ನಿಮ್ಮ ಬದುಕನ್ನ ಪ್ರೀತಿಸಿ, ಇನ್ನೊಬ್ಬರ ಬದುಕನ್ನ ಗೌರವಿಸಿ ಎಂದು ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳನ್ನು ತಿಳಿಸಿದರು.
ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದ, ಜಯಂತ ನಡುಬೈಲು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಗೌರವಿಸುವುದು ನಮ್ಮ ಭಾಗ್ಯ ಎಂದರು.
ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿ ಸಂಘದ ನಾಯಕ ವಿನೋದ್ ಕೆ ಸಿ ಹಾಗೂ ಕಾರ್ಯದರ್ಶಿ ಶೈಲಾಶ್ರೀ ಉಪಸ್ಥಿತರಿದ್ದರು. ಅಕ್ಷಯ ಗುರುಪುರಸ್ಕಾರದ ಸನ್ಮಾನ ಪತ್ರವನ್ನು ಕುಮಾರಿ ಭವ್ಯಶ್ರೀ ಬಿ, ಓದಿದರು. ರಶ್ಮಿ ಕೆ,ಮತ್ತು ಕಿಶನ್ ರಾವ್, ಪ್ರಕೃತಿ ಮತ್ತು ಬಳಗದಿಂದ ಪ್ರಾರ್ಥನೆ ನಡೆಯಿತು.
ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್ ಸ್ವಾಗತಿಸಿ, ಆಡಳಿತಾಧಿಕಾರಿ ಅರ್ಪಿತ್ ಟಿಎ ವಂದಿಸಿದರು. ಪ್ರಾಂಶುಪಾ ಸಂಪತ್ ಪಕ್ಕಳ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ಆಶಿಕಾ ಕಾರ್ಯಕ್ರಮ ನಿರೂಪಿಸಿದರು
Posted by Vidyamaana on 2024-05-28 07:18:49 |
ಬೆಳ್ತಂಗಡಿ : ನಾಲ್ಕು ವರ್ಷದ ಹಿಂದಿನ ದರೋಡೆ ಪ್ರಕರಣವನ್ನು ಧರ್ಮಸ್ಥಳ ಪೊಲೀಸರು ಭೇದಿಸಿ ಇಬ್ಬರು ಸಹೋದರರು ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಮಿಯಾ ನಿವಾಸಿ ಉಜಿರೆಯ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಎಂಬವರ ಮನೆಗೆ ನುಗ್ಗಿ ಮನೆಯವರನ್ನು ಕಟ್ಟಿಹಾಕಿ ರೂ 8,42,240 ರೂಪಾಯಿ ಚಿನ್ನಾಭರಣ ಹಾಗೂ ಹಣವನ್ನು ದರೋಡೆ ಮಾಡಿದ್ದು ಮೂರು ಮಂದಿ ದರೋಡೆಕೋರರನ್ನು ನಾಲ್ಕು ವರ್ಷದ ಸತತ ಹುಡುಕಾಟದ ನಂತರ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ ಎಂದು ದ.ಕ ಜಿಲ್ಲಾ ಎಸ್.ಪಿ ರಿಷ್ಯಂತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನಲೆ: ದಿನಾಂಕ 26-06-2020 ರಂದು ಬೆಳಿಗ್ಗೆ 8.15 ಗಂಟೆಗೆ ದೂರುದಾರರಾದ ಅಚ್ಯುತ್ ಭಟ್ (56) ತಂದೆ:ದಿ/ ವಾಸುದೇವ ಭಟ್ ವಾಸ: ಮಿಯಾ ಮನೆ ಕಲ್ಮಂಜ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು ಎಂಬವರು ಧರ್ಮಸ್ಥಳ ಪೊಲಸ್ ಠಾಣೆಗೆ ನೀಡಿದ ಲಿಖಿತ ದೂರಿನ ಸಾರಾಂಶವೇನಂದರೆ ನಾನು ಈ ಮೇಲಿನ ವಿಳಾಸದಲ್ಲಿ ವಾಸವಾಗಿದ್ದು, ಅಡಿಕೆ ವ್ಯಾಪಾರ ಹಾಗೂ ಕೃಷಿ ಕೆಲಸ ಮಾಡಿಕೊಂಡಿದ್ದು.26-06-2020 ರ ರಂದು ಬೆಳಗ್ಗಿನ ಜಾವ 02.50 ಗಂಟೆಗೆ ನಾನು ನಾಯಿ ಬೊಗಳುವ ಶಬ್ದ ಕೇಳಿ ಎಚ್ಚರಗೊಂಡು ಮನೆಯ ಬಾಗಿಲು ತೆಗೆದು ಹೊರಗೆ ಬಂದಾಗ ಇಬ್ಬರು ನನ್ನನ್ನು ಸುತ್ತುವರಿದು ನನ್ನನ್ನು ಹಿಡಿದುಕೊಂಡು ಕುತ್ತಿಗೆಯನ್ನು ಅದುಮಿದರು. ಅದೇ ಸಮಯ ನಾನು ಬೊಬ್ಬೆ ಹಾಕಿದಾಗ ನನ್ನ ತಮ್ಮನ ಹೆಂಡ್ತಿ ವಿದ್ಯಾಕುಮಾರಿ ಮನೆಯ ಇನ್ನೊಂದು ಬದಿಯಲ್ಲಿದ್ದ ಬಾಗಿಲು ತೆರೆದಾಗ ಅಲ್ಲಿಂದ ಇಬ್ಬರು ಒಳ ನುಗ್ಗಿದರು. ಆ ಸಮಯ ಮನೆಯಲ್ಲಿದ್ದ ನನ್ನ ತಾಯಿ ಕೂಡಾ ಎಚ್ಚರಗೊಂಡಾಗ ಎಲ್ಲರೂ ಸೇರಿ ನನ್ನನ್ನು ನನ್ನ ತಾಯಿ ಮತ್ತು ತಮ್ಮನ ಹೆಂಡ್ತಿಯನ್ನು ಎಳೆದುಕೊಂಡು ಬಂದು ಎದುರಿನ ಚಾವಡಿಯಲ್ಲಿ ಕೂಡಿ ಹಾಕಿ ದೂಡಿ ಬಟ್ಟೆಯಿಂದ ಕೈಕಾಲು ಕಟ್ಟಿ ಹಾಕಿ ನನಗೆ ಕೈಯಿಂದ ಹಲ್ಲೆ ನಡೆಸಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ನೀಡುವಂತೆ ಗದರಿಸಿ ನಗದು ರೂ 25,000 ರೂಪಾಯಿಯನ್ನು ತೆಗೆದುಕೊಂಡರು ಅಲ್ಲದೇ ಆರೋಪಿಗಳು 30 ರಿಂದ 35 ಪವನ್ ತೂಕದ ಚಿನ್ನದ ಒಡವೆ ಹಾಗೂ ಸುಮಾರು 1 ಕೆ ಜಿ ತೂಕದ ಬೆಳ್ಳಿ ಒಡವೆಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದು ಒಟ್ಟು ಸುಮಾರು ಚಿನ್ನಾಭರಣ ಹಾಗೂ ನಗದು ಹಣ ಸೇರಿ ಸುಮಾರು 12,40,000/- ರೂ ಅಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದರು.
ಸಿ ರಿಪೋರ್ಟ್ ಹಾಕಲಾಗಿದ್ದ ಪ್ರಕರಣ: ಇದೊಂದು ಘೋರಾಅಪರಾಧ ಪ್ರಕರಣವಾಗಿದ್ದರಿಂದ ಮುಂದಿನ ತನಿಖೆಯನ್ನು ಬೆಳ್ತಂಗಡಿ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಸಂದೇಶ್ ಪಿ ಜಿ ರವರು ವಹಿಸಿಕೊಂಡು ತನಿಖೆ ಮುಂದುವರಿಸಿದ್ದು ಬಳಿಕ ಈ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರುಗಳು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸಿದರು ಆರೋಪಿತರುಗಳ ಮತ್ತು ಸೊತ್ತಿನ ಪತ್ತೆ ಆಗದೇ ಇದ್ದುದರಿಂದ ಆರೋಪಿ ಹಾಗೂ ಸೊತ್ತು ಪತ್ತೆಯಾಗದ ಪ್ರಕರಣವೆಂದು ಮಾನ್ಯ ನ್ಯಾಯಾಲಯಕ್ಕೆ ತಾತ್ಕಾಲಿಕವಾಗಿ ಸಿ ರಿಪೋರ್ಟ್ ವರದಿ ಸಲ್ಲಿಸಿರುತ್ತಾರೆ.
ಆರೋಪಿಗಳ ಬಗ್ಗೆ ಗುಪ್ತ ಮಾಹಿತಿ ಮೇ.22 ರಂದು ಸಮಯ ಸುಮಾರು 3 ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕನಾದ ಅನೀಲ್ ಕುಮಾರ್ ರವರಿಗೆ ಪೊಲೀಸ್ ಮಾಹಿತಿದಾರರಿಂದ ಕಲ್ಮಂಜ ದರೋಡೆ ಪ್ರಕರಣದಲ್ಲಿ ಸಂಶಾಸ್ಪದ ವ್ಯಕ್ತಿಯು ಈ ಪ್ರಕರಣದಲ್ಲಿ ದರೋಡೆ ಮಾಡಿ ದೋಚಿಕೊಂಡ ಚಿನ್ನ ಮಾರಾಟ ಮಾಡಲು ತೆರಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಆರೋಪಿತ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕೂಳೂರು ಮನೆಯ ಯು.ಎಸ್.ಇಸ್ಮಾಯಿಲ್ ಅವರ ಮಗ ರಿಯಾಜ್(40) ಎಂಬಾತನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಅವನು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣದಲ್ಲಿ ಆರೋಪಿಯೆಂದು ತಪ್ಪು ಒಪ್ಪಿಕೊಂಡಿರುತ್ತಾನೆ.
ಮೂವರು ದರೋಡೆಕೋರರ ಬಂಧನ: ಈ ಪ್ರಕರಣದಲ್ಲಿ ಮೊದಲು ವಶಕ್ಕೆ ಪಡೆದ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕೂಳೂರು ಮನೆಯ ಯು.ಎಸ್.ಇಸ್ಮಾಯಿಲ್ ಎಂಬವರ ಮಗ 1) ರಿಯಾಜ್(40) ಎಂಬಾತನ ಮಾಹಿತಿ ಮೇರೆಗೆ ಮತ್ತಿಬ್ಬರು ಆರೋಪಿಗಳಾದ 2) ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ಯು.ಎಸ್. ಇಸ್ಮಾಯಿಲ್ ಅವರ ಮಗನಾದ ನವಾಝ್(38) ಮತ್ತು 3) ಕಲ್ಬುರ್ಗಿ ಜಿಲ್ಲೆಯ ದಿ.ಬಸಪ್ಪ ಮಗನಾದ ಕೃಷ್ಣ (37) ಧರ್ಮಸ್ಥಳದಲ್ಲಿ ಇರುವುದಾಗಿ ಆರೋಪಿ ರಿಯಾಜ್ ತಿಳಿಸಿದಂತೆ ಅವರನ್ನು ಕೂಡ ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಅವರ ಜೊತೆ ಮತ್ತಿಬ್ಬರು ಹೊರರಾಜ್ಯದ ಎರಡು ಜನ ಸ್ನೇಹಿತರು ಕೂಡ ಬಾಗಿಯಾಗಿರುವ ಬಗ್ಗೆ ತಿಳಿಸಿರುತ್ತಾರೆ.ಅವರಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳಾದ ರಿಯಾಜ್ ಮತ್ತು ನವಾಝ್ ಸಹೋದರರಾಗಿದ್ದಾರೆ.
ವಶಪಡಿಸಿಕೊಂಡ ವಸ್ತುಗಳು: ಈ ಪ್ರಕರಣದಲ್ಲಿ ಆರೋಪಿಗಳಿಂದ ಒಟ್ಟು 104 ಗ್ರಾಂ ಬಂಗಾರದ ಆಭರಣಗಳ ಅದರ ಅಂದಾಜು ಮೌಲ್ಯ ಸುಮಾರು 7,87,000 ರೂಪಾಯಿ ,288 ಗ್ರಾಂ ಬೆಳ್ಳಿ ಅದರ ಅಂದಾಜು ಮೌಲ್ಯ ಸುಮಾರು 30,240 ರೂಪಾಯಿ ಆಗಬಹುದು , ಟಿವಿಎಸ್ ಕಂಪೆನಿಯ ಅಪಾಚಿ ಮೋಟರ್ ಬೈಕ್ -1 ಅದರ ಅಂದಾಜು ಮೌಲ್ಯ ಸುಮಾರು 25,000/- ಆಗಬಹುದು ಒಟ್ಟು ಮೌಲ್ಯ 8,42,240/- ರೂಪಾಯಿ ಆಗಬಹುದು ಹಾಗೂ ವಶಪಡಿಸಿಕೊಂಡು ಆರೋಪಿತರನ್ನು ಮಾನ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಮೇ.24 ರಂದು ಹಾಜರುಪಡಿಸಿ ಮೂರು ದಿನ ಪೊಲೀಸ್ ಕಸ್ಟಡಿ ಪಡೆದುಕೊಂಡಿದ್ದು.ಮೇ.27 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆಹಾಜರುಪಡಿಸಿದ್ದು.ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
Posted by Vidyamaana on 2024-03-28 08:13:50 |
ಪುತ್ತೂರು: ಉಪ್ಪಿನಂಗಡಿ - ಪುತ್ತೂರು ಚತುಷ್ಪಥ ಮಾರ್ಗ ಕಾಮಗಾರಿ ನಿಮಿತ್ತ 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಎಕ್ಸ್ ಪ್ರೆಸ್, ಕಾಂಚನ ಮತ್ತು ವಾಟರ್ ಸಪ್ಪೆ ಫೀಡರ್ ಮತ್ತು 110/33/11ಕೆವಿ ಕಲ್ಲೇರಿ ವಿದ್ಯುತ್ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಟೌನ್ ಮತ್ತು ಕೆಮ್ಮಾರ ಫೀಡರ್ನಲ್ಲಿ ಮಾ.28 ಮ ರಂದು ಪೂರ್ವಾಹ್ನ ಗಂಟೆ 10:00 ರಿಂದ ಅಪರಾಹ್ನ 5:30 ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಆದುದರಿಂದ, 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಮತ್ತು 110/11 ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್ ಇನ ನಿಂದ ವಿದ್ಯುತ್ ಸರಬರಾಜಾಗುವ ಬಜತ್ತೂರು, ನೆಕ್ಕಿಲಾಡಿ ಮತ್ತು ಉಪ್ಪಿನಂಗಡಿ ಗ್ರಾಮದ -ರೆ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟನೆ ತಿಳಿಸಿದೆ.