Posted by vidyamaana on 2024-07-03 19:23:39 |
ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್ನಲ್ಲಿ ಸದಸ್ಯರಾಗಿರುತ್ತಾರೆ.
ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.
Posted by Vidyamaana on 2023-09-21 16:26:05 |
ಪುತ್ತೂರು: ಹೆತ್ತ ತಂದೆ ತಾಯಿಯನ್ನು ಆರೈಕೆ ಮಾಡದೆ , ಅವರನ್ನು ಆಶ್ರಮದಲ್ಲಿ ಹಾಕಿ ಅವರ ಸೇವೆ ಮಾಡುವ ಭಾಗ್ಯವಿಲ್ಲದ ಮಂದಿ ಎಷ್ಟೇ ದೊಡ್ಡ ಪುಣ್ಯದ ಕೆಲಸ ಮಾಡಿದರೂ ಆತನಿಗೆ ದೇವರು ಖಂಡಿತವಾಗಿಯೂ ಒಲಿಯವುದಿಲ್ಲ ಮತ್ತು ಆತನಿಗೆ ದೇವರ ಆಶೀರ್ವಾದ ಪಡೆಯಲು ಸಾಧ್ಯವೇ ಇಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಕುಂಬ್ರ ಶ್ರೀರಾಮ ಭಜನಾಮಂದಿರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.
ಹೊಟ್ಟೆಗೆ ತುತ್ತು ಇಲ್ಲದೇ ಇದ್ದರೂ ನಮ್ಮನ್ನು ಹೆತ್ತು ಸಾಕಿದ, ವಿದ್ಯೆ ಕೊಡಿಸಿದ ತಂದೆ ತಾಯಿಯೇ ನಮಗೆ ನಿಜವಾದ ದೇವರು. ಮನೆಯೊಳಗೆ ಜೀವಂತವಾಗಿರುವ ದೇವರ ಆಶೀರ್ವಾದ ಪಡೆಯದೆ ನಾವು ಎಷ್ಟು ಸಮಾಜ ಸೇವೆ ಮಾಡಿದರೂ ಏನೂ ಫಲವಿಲ್ಲ. ವಿದ್ಯೆ ಕಲಿತು ದೊಡ್ಡ ವ್ಯಕ್ತಿಗಳಾದ ನಾವು ಬಳಿಕ ತಂದೆ ತಾಯಿಯನ್ನು ಮರೆತು ಬಿಡುತ್ತೇವೆ, ಅವರು ನಮಗೆ ಮಾಡಿದ ತ್ಯಾಗವನ್ನು ಗ್ರಹಿಸುವ ಶಕ್ತಿಯೂ ನಮಗೆ ಇರುವುದಿಲ್ಲ. ಮುದಿ ಪ್ರಾಯದಲ್ಲಿ ಅವರನ್ನು ನಾವು ಆಶ್ರಮಕ್ಕೆ ಸೇರಿಸಿ ಸುಖ ಜೀವನ ನಡೆಸುತ್ತಿದ್ದೇವೆ ಇದು ಖಂಡಿತವಾಗಿಯೂ ಯಾವ ದೇವರಿಗೂ ಇಷ್ಟವಾಗುವುದಿಲ್ಲ ಎಂಬುದನ್ನು ನಾವು ಪ್ರತೀಯೊಬ್ಬರೂ ತಿಳಿದುಕೊಳ್ಳಬೇಕು. ತಂದೆ ತಾಯಿಯನ್ನು ದೂರ ಮಾಡುವ ಸಂಸ್ಕಾರ ನಮ್ಮದಲ್ಲ, ಅದು ಭಾರತೀಯ ಸಂಸ್ಕೃತಿಯೂ ಅಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಆಶಾ ಬೆಳ್ಳಾರೆ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುಧಾಕರ ರಾವ್ ಆರ್ಯಾಪು, ಕಬಕ ಸರಕಾರಿ ಶಾಲೆಯ ಮುಖ್ಯ ಗುರು ಬಾಬು, ಕುಂಬ್ರ ದುರ್ಗಾ ಪ್ರಸಾದ್ ರೈ, ಗ್ರಾಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ, ಎಂ ಎಸ್ ಕೇಶವ ಶಾಂತಿವನ, ರಾಮಯ್ಯ ಗೌಡ ಬೊಳ್ಳಾಡಿ, ರಾಜೇಶ್ ರೈ ಪರ್ಪುಂಜ , ಮಾಧವ ರೈ ಕುಂಬ್ರ ಮೊದಲಾದವರು ಉಪಸ್ಥಿತರಿದ್ದರು.
Posted by Vidyamaana on 2024-04-07 13:53:08 |
ಬೆಂಗಳೂರು:ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ವತಿಯಿಂದ ಬೆಂಗಳೂರಿನಲ್ಲಿ ನೆಲೆಸಿರುವ ಉಡುಪಿ- ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಮತದಾರರ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಪುಕ್ಕಟೆ ಕಾರ್ಯಕ್ರಮಗಳನ್ನು ಘೋಷಿಸಿ ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಬಹುಶಃ ಇದನ್ನು ಸುಧಾರಿಸಲು ನಮಗೆ 10 ವರ್ಷ ಬೇಕಾಗಬಹುದು ಮತ, ಇರುವವರು ಹಿಂದಿನ ದಿನವೇ ಬಂದು ಮತ ಚಲಾಯಿಸಿ ಎಂದು ವಿನಂತಿಸಿದರು.
Posted by Vidyamaana on 2024-02-16 07:21:51 |
ಚಾಮರಾಜನಗರ, ಫೆ 15: ಪತ್ನಿ ಮಾಡಿದ ರೀಲ್ಸ್ನಿಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನೂರು ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮದಲ್ಲಿ ನಡೆದಿದೆ. ಕುಮಾರ್ (33) ಮೃತ ವ್ಯಕ್ತಿ. ಪತ್ನಿ ರೂಪಾ, ರೂಪಾಳ ಸೋದರಮಾವ ಗೋವಿಂದನ ವಿರುದ್ಧ ಮೃತನ ಸೋದರ ಮಹಾದೇವಸ್ವಾಮಿ ದೂರು ಕೊಟ್ಟಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕಳೆದ 10 ರಂದು ರೂಪಾಳ ತವರು ಮನೆಯಾದ ಗುಂಡಾಪುರಕ್ಕೆ ಕುಮಾರ್ ಮತ್ತು ರೂಪಾ ಇಬ್ಬರು ತೆರಳಿದ್ದರು. ಒಂದು ದಿನ ಇದ್ದು ಕುಮಾರ್ ಮರುದಿನ ಪಿ.ಜಿ. ಪಾಳ್ಯಕ್ಕೆ ವಾಪಸ್ ಆಗಿದ್ದರೆ, ಪತ್ನಿ ರೂಪಾ ಮಾತ್ರ ಅಲ್ಲಿಯೇ ಉಳಿದುಕೊಂಡಿದ್ದರು. ರೂಪಾ ಊರಿನಲ್ಲಿದ್ದ ವೇಳೆ ಸೋದರಮಾವ ಹಾಗೂ ಆತನ ಸಹೋದರಿ ಜೊತೆ ಸೇರಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಇದನ್ನು ಸ್ನೇಹಿತರು ಕುಮಾರನ ಗಮನಕ್ಕೆ ತಂದಿದ್ದರು. ತಕ್ಷಣ ಫೋನ್ ಪತ್ನಿಗೆ ಮಾಡಿದ್ದ ಕುಮಾರ್, ಈ ರೀತಿ ರೀಲ್ಸ್ಗಳನ್ನು ಏಕೆ ಮಾಡುತ್ತಿದ್ದಿ? ಬಿಟ್ಟುಬಿಡು ಎಂದಾಗ ಪತ್ನಿಯು, ನಾನು ಇರುವುದೇ ಹೀಗೆ, ನೀನೇಕೆ ವಯಸ್ಸಾದವರ ರೀತಿ ಇದ್ದೀಯಾ ಎಂದಿದ್ದಾಳೆ. ಇದರಿಂದ ದಂಪತಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಮನನೊಂದ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಹನೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹನೂರು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Posted by Vidyamaana on 2023-11-04 04:48:05 |
ಪುತ್ತೂರು : ನಿರ್ವಹಣೆ ಮತ್ತು ತುರ್ತು ಕಾಮಗಾರಿ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ದರ್ಬೆ ಫೀಡರ್ನಲ್ಲಿ ನ.4ರಂದು ಪೂರ್ವಾಹ್ನ ಗಂಟೆ 10 ರಿಂದ ಅಪರಾಹ್ನ 5 ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್ನಿಂದ ವಿದ್ಯುತ್ ಸರಬರಾಜಾಗುವ ಹಾರಾಡಿ, ಚಿಕ್ಕಪುತ್ತೂರು, ನೆಲ್ಲಿಕಟ್ಟೆ, ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್, ಕಲ್ಲಾರೆ, ದರ್ಬೆ ಮತ್ತು ಏಳ್ಳುಡಿ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ
Posted by Vidyamaana on 2023-11-20 21:41:40 |
ಹೊಸದಿಲ್ಲಿ: ನಿನ್ನೆ (ರವಿವಾರ) ನಡೆದ ಕ್ರಿಕೆಟ್ ವಿಶ್ವಕಪ್ ಫೈನಲ್ ನಲ್ಲಿ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕನನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಲಕ್ಷಿಸಿದ್ದಾರೆ ಎಂದು ಪ್ರತಿಪಾದಿಸುವ ವಿಡಿಯೋವನ್ನು ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದು, ಪ್ರಧಾನಿ ಮೋದಿ ನಡೆಗೆ ಟೀಕೆ ಮಾಡಿದ್ದಾರೆ.
ಎಡಿಟ್ ಮಾಡಿದ ವಿಡಿಯೊ ನೋಡಲು ಕ್ಲಿಕ್ ಮಾಡಿ
ವಿಶ್ವಕಪ್ ನಂತಹ ಒಂದು ಜಾಗತಿಕ ಕ್ರೀಡೆಯಲ್ಲಿ ಭಾರತ ಸೋತರೂ, ಗೆದ್ದ ಇತರೆ ದೇಶದ ತಂಡವನ್ನು ಅಭಿನಂದಿಸುವ ಗಟ್ಟಿತನ ಬೇಕು. ಅದೂ ಕೂಡಾ ಒಂದು ದೇಶದ ಪ್ರಧಾನಿ ಹೀಗೆ ಮಾಡಬಾರದಿತ್ತು ಎಂದು ನೆಟ್ಟಿಗರೊಬ್ಬರು ವಿಡಿಯೋ ಹಂಚಿಕೊಂಡಿದ್ದಾರೆ. ಹಲವಾರು ನೆಟ್ಟಿಗರು ಇದನ್ನು ವೈರಲ್ ಮಾಡಿದ್ದು, ತಮ್ಮ ವಿರೋಧ ವ್ಯಕ್ತಪಡಿಸಿದ್ದರು.
Fact Check:
ವೈರಲ್ ವಿಡಿಯೋದ ಸತ್ಯಾಂಶ ಇಲ್ಲಿದೆ ನೋಡಿ
ಆದರೆ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಅವರು ವಿಶ್ವಕಪ್ ಟ್ರೋಫಿ ಪ್ರದಾನ ಮಾಡಿ ಬೆನ್ನು ತಟ್ಟಿ ಅಭಿನಂದಿಸಿದ್ದರು.
ಆದರೆ, ಕೆಲವರು ಪ್ರಧಾನಿ ಮೋದಿ ಅವರು ಪ್ಯಾಟ್ ಕಮಿನ್ಸ್ ಬೆನ್ನು ತಟ್ಟುವ ಹಾಗೂ ಅಭಿನಂದಿಸುವ ದೃಶ್ಯವನ್ನು ಎಡಿಟ್ ಮಾಡಿ ವೇದಿಕೆಯಿಂದ ಕೆಳಗಿಳಿಯುತ್ತಿರುವ ದೃಶ್ಯವನ್ನು ಮಾತ್ರ ಹಂಚಿಕೊಂಡಿದ್ದಾರೆ.
Posted by Vidyamaana on 2023-02-07 13:48:38 |
ಜಿದ್ದಾ: ಯುವ ಕಾಂಗ್ರೆಸ್ ಕಾರ್ಯಕರ್ತನೋರ್ವ ಸೌದಿ ಅರೇಬಿಯಾದ ಪವಿತ್ರ ಕಅಬಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸುವ ಫಲಕವನ್ನು ಹಿಡಿದಿದ್ದಕ್ಕಾಗಿ ಆತನನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಧ್ಯಪ್ರದೇಶದ ಝಾನ್ಸಿ ಬಳಿಯ ನಿವಾರಿ ಜಿಲ್ಲೆಯ ನಿವಾಸಿ ರಝಾ ಖಾದ್ರಿ (26) ಅವರನ್ನು ಮಕ್ಕಾದಲ್ಲಿನ ಪವಿತ್ರ ಕಾಬಾದಲ್ಲಿ ಫಲಕವನ್ನು ಪ್ರದರ್ಶಿಸಿದ್ದಕ್ಕಾಗಿ ಬಂಧಿಸಲಾಗಿದೆ.ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸುವ ಫಲಕವನ್ನು ಹಿಡಿದಿರುವ ಛಾಯಾಚಿತ್ರವನ್ನೂ ಅವರು ತೆಗೆದುಕೊಂಡಿದ್ದರು. ಎರಡು ದಿನಗಳ ನಂತರ, ಮಧ್ಯಪ್ರದೇಶದ ಇತರ ಯಾತ್ರಾರ್ಥಿಗಳೊಂದಿಗೆ ತಂಗಿದ್ದ ಹೋಟೆಲ್ ನಲ್ಲಿ ಅವರನ್ನು ಸೌದಿ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇಸ್ಲಾಮಿಕ್ ಪವಿತ್ರ ಸ್ಥಳಗಳು ಸೇರಿದಂತೆ ಸೌದಿ ಅರೇಬಿಯಾದಲ್ಲಿ ಯಾವುದೇ ರೀತಿಯ ಧ್ವಜ ಮತ್ತು ಫಲಕವನ್ನು ಪ್ರದರ್ಶಿಸುವುದು ಕಾನೂನುಬಾಹಿರವಾಗಿದೆ.