Posted by vidyamaana on 2024-03-23 10:38:46 |
ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.
ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.
Posted by Vidyamaana on 2024-01-20 07:27:01 |
ಮಂಗಳೂರು; ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಗಳಾದ ಯುವಕ- ಯುವತಿ ಕದ್ರಿ ಪಾರ್ಕಿಗೆ ಬಂದಿದ್ದಾಗ, ಯುವಕರ ಗುಂಪು ಯುವ ಜೋಡಿಯನ್ನು ಹಿಂದು- ಮುಸ್ಲಿಂ ಅನ್ಕೊಂಡು ಹಲ್ಲೆಗೈದು ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ನಡೆದಿದೆ.
ದೇರಳಕಟ್ಟೆಯ ಯೆನಪೋಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಮತ್ತು ನಂತೂರಿನ ಜಿಎನ್ಎಂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ಜೊತೆಗೆ ಶುಕ್ರವಾರ ಬೆಳಗ್ಗೆ ಕದ್ರಿ ಪಾರ್ಕಿಗೆ ಆಗಮಿಸಿದ್ದರು. ಅವರು ಬಸ್ಸಿನಲ್ಲಿ ಬರುತ್ತಿದ್ದಾಗಲೇ ಹಿಂಬಾಲಿಸಿದ್ದ ಇತರೇ ವಿದ್ಯಾರ್ಥಿಗಳ ತಂಡ ಕದ್ರಿ ಪಾರ್ಕ್ ಬರುತ್ತಲೇ ಅಡ್ಡಗಟ್ಟಿ ಪ್ರಶ್ನೆ ಮಾಡಿದ್ದಾರೆ. ಯುವಕ- ಯುವತಿ ಕೇರಳ ಮೂಲದವರಾಗಿದ್ದು ಮಲೆಯಾಳಂ ಮಾತನಾಡುತ್ತಿದ್ದರು. ಹಿಂದು ಯುವತಿ ಮತ್ತು ಮುಸ್ಲಿಂ ಯುವಕ ಅನ್ಕೊಂಡು ಪ್ರಶ್ನೆ ಮಾಡಿ, ಇಬ್ಬರ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ, ಅವರ ವಿಡಿಯೋ, ಫೋಟೋ ರೆಕಾರ್ಡ್ ಮಾಡಿದ್ದಾರೆ.
ಅಷ್ಟರಲ್ಲಿ ಕದ್ರಿ ಪೊಲೀಸರು ಸ್ಥಳಕ್ಕೆ ಬಂದು ಯುವಕ- ಯುವತಿಯನ್ನು ರಕ್ಷಿಸಿದ್ದು, ಹಲ್ಲೆಗೆ ಮುಂದಾಗಿದ್ದ ಮೂವರು ಯುವಕರನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿತರನ್ನು ನಿತಿನ್(18) ಮತ್ತು ಹರ್ಷ (18) ಎಂದು ಗುರುತಿಸಿದ್ದು, ಇನ್ನೊಬ್ಬ 17 ವರ್ಷದವನು. ಈ ಮೂವರು ಕೂಡ ವಿದ್ಯಾರ್ಥಿಗಳಾಗಿದ್ದು, ಹಲ್ಲೆಗೆ ಯತ್ನಿಸಿ ಪೊಲೀಸ್ ಕೇಸು ಎದುರಿಸುತ್ತಿದ್ದಾರೆ. ಕದ್ರಿ ಠಾಣೆಯಲ್ಲಿ ಇವರ ವಿರುದ್ಧ 341, 504, 509, 354ಬಿ, 354ಡಿ ಸೆಕ್ಷನ್ ಅಡಿ ಕೇಸು ದಾಖಲಾಗಿದೆ.
Posted by Vidyamaana on 2023-11-21 14:39:51 |
ಮಂಗಳೂರು, ನ.21: ಇದೇ ಮೊದಲ ಬಾರಿಗೆ ನಡೆಯಲಿರುವ ಕರಾವಳಿಯ ಪ್ರಸಿದ್ಧ ಕಂಬಳಕ್ಕೆ (Kambala)ರಾಜ್ಯ ರಾಜಧಾನಿ ಬೆಂಗಳೂರು ಸಜ್ಜಾಗುತ್ತಿದೆ. ಆದರೆ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ (Brij Bhushan Sharan Singh) ಅವರನ್ನು ಆಹ್ವಾನಿಸಲಾಗಿದ್ದು ಈ ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕುಸ್ತಿ ಆಟಗಾರರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಅವರನ್ನು ಇಂತಹ ಕಾರ್ಯಕ್ರಮಕ್ಕೆ ಕರೆದಿರುವುದು ಎಷ್ಟು ಸರಿ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳಾಗುತ್ತಿದ್ದವು. ಸದ್ಯ ಈಗ ತಾವು ಕಂಬಳಕ್ಕೆ ಅತಿಥಿಯಾಗಿ ಬರಲ್ಲ ಎಂದು ಬ್ರಿಜ್ ಭೂಷಣ್ ಪತ್ರ ಬರೆದು ತಿಳಿಸಿದ್ದಾರೆ.ನವೆಂಬರ್ 25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾರತದ ಕುಸ್ತಿ ಫೆಡರೇಷನ್ ಮಾಜಿ ಆಧ್ಯಕ್ಷ ಬ್ರಿಜ್ ಭೂಷಣ್ ಅವರನ್ನು ಆಹ್ವಾನಿಸಲಾಗಿತ್ತು. ಅತಿಥಿಯಾಗಿ ಆಹ್ವಾನ ನೀಡಲು ಕುಸ್ತಿ ಅಸೋಸಿಯೇಷನ್ ಹಾಗೂ ಸಿದ್ದಿ ಜನಾಂಗ ಮನವಿ ಮಾಡಿತ್ತು. ಮನವಿ ಮೇರೆಗೆ ಕಂಬಳ ಸಮಿತಿ ಆಹ್ವಾನ ನೀಡಿತ್ತು. ಈ ಸಂಬಂಧ ವಿರೋಧ ಹಿನ್ನಲೆ ಬ್ರಿಜ್ ಭೂಷಣ್ ಅವರಿಗೆ ಕರೆ ಮಾಡಿ ಕಂಬಳ ಸಮಿತಿ ವಿವರ ನೀಡಿದ್ದು ತಾವು ಕಂಬಳಕ್ಕೆ ಅತಿಥಿಯಾಗಿ ಬರಲ್ಲ ಎಂದು ಪತ್ರ ಬರೆದು ಬ್ರಿಜ್ ಭೂಷಣ್ ಶುಭಾಶಯ ತಿಳಿಸಿದ್ದಾರೆ. ಈ ಬಗ್ಗೆ ಕಂಬಳ ಸಮಿತಿ ಮುಖ್ಯಸ್ಥ ಅಶೋಕ್ ರೈ ಮಾಹಿತಿ ನೀಡಿದ್ದಾರೆ. ವಿರೋಧ ವ್ಯಕ್ತವಾದ ಹಿನ್ನಲೆ ಬ್ರಿಜ್ ಅವರ ಆಹ್ವಾನ ರದ್ದುಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.
Posted by Vidyamaana on 2023-07-12 17:06:37 |
ವಾರಾಣಸಿ: ಟೊಮೆಟೋಗಳನ್ನು ರಕ್ಷಿಸಿಕೊಳ್ಳಲು ಬೌನ್ಸರ್ ಗಳನ್ನು ನೇಮಿಸಿದ್ದ ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಮಾಜವಾದಿ ಪಕ್ಷದ ಕಾರ್ಯಕರ್ತ ಅಜಯ್ ಫೌಜಿ ಎಂಬವರು ರವಿವಾರ ವಾರಣಾಸಿಯ ಲಂಕಾ ಪ್ರದೇಶದಲ್ಲಿ ತರಕಾರಿ ಮಾರಾಟಗಾರರ ಅಂಗಡಿಯೊಂದರಲ್ಲಿ ಎರಡು ಬೌನ್ಸರ್ ಗಳನ್ನು ನಿಯೋಜಿಸಿದ್ದರು. ಇದು ಟೊಮೆಟೊ ಬೆಲೆಯ ಬಗ್ಗೆ ಚೌಕಾಶಿ ಮಾಡುವಾಗ ಖರೀದಿದಾರರು ಆಕ್ರಮಣಕಾರಿ ವರ್ತನೆ ತೋರುವುದನ್ನು ತಡೆಯಲು ಕೈಗೊಂಡ ಕ್ರಮ ಎಂದು ಅವರು ಹೇಳಿದ್ದರು.
ಅಂಗಡಿ ಮಾಲೀಕ ರಾಜ್ ನಾರಾಯಣ್ ನನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿದ್ದು, ನಾಟಕೀಯ ಪ್ರತಿಭಟನೆ ನಡೆಸಿದ ಅಜಯ್ ಫೌಜಿ ಹಾಗೂ ಇಬ್ಬರು ಬೌನ್ಸರ್ ಗಳು ಪರಾರಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ನಾರಾಯಣ್ ಮತ್ತು ವಿಕಾಸ್ ನನ್ನು ಐಪಿಸಿ ಸೆಕ್ಷನ್ 153 ಗಲಭೆಗೆ ಪ್ರಚೋದನೆ, 291 (ತಪ್ಪು ಪುನರಾವರ್ತನೆ) ಹಾಗೂ 505 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Posted by Vidyamaana on 2023-09-15 17:18:43 |
ಪುತ್ತೂರು: ಶಾಸಕ ನೂತನ ಕಚೇರಿಗೆ ಪುತ್ತೂರು ನಗರಸಭಾ ನಿಧಿಯ ದುರುಪಯೋಗವಾಗಿದೆ ಮತ್ತು ನಗರಸಭೆಯ ನಗರೋತ್ಥಾನದ ವಿವಿಧ ಕಾಮಗಾರಿ ವಿಳಂಬ ಸಹಿತ ನಗರಸಭೆ ೨ ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಇನ್ನೂ ಆಗಿಲ್ಲ ಎಂದು ನಗರಸಭೆ ಬಿಜೆಪಿ ಸದಸ್ಯರು ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲೈಮುಗಿಲನ್ ಅವರಿಗೆ ಪುತ್ತೂರಿನಲ್ಲಿ ಮನವಿ ಮಾಡಿದ್ದಾರೆ.
ಪುತ್ತೂರು ತಾಲೂಕು ಆಡಳಿತಕ್ಕೆ ಜಿಲ್ಲಾಧಿಕಾರಿಯವರು ಸೆ.೧೫ ರಂದು ಆಗಮಿಸಿದ ವೇಳೆ ಸದಸ್ಯರು ಮನವಿ ಮಾಡಿದ್ದಾರೆ. ಪುತ್ತೂರು ಶಾಸಕರು ನಮ್ಮ ನಗರ ಸಭೆಯ ಕಟ್ಟಡದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ನಗರ ಯೋಜನಾ ಪ್ರಾಧಿಕಾರದ ಕಚೇರಿಯನ್ನು ಅಲ್ಲಿಂದ ತೆರವುಗೊಳಿಸಿ ತಮ್ಮ ಶಾಸಕರ ಕೊಠಡಿಯನ್ನಾಗಿ ತಮ್ಮ ಮೂಲಕ ಪರಿವರ್ತಿಸಿರುತ್ತಾರೆ, ಅಲ್ಲದೆ ಸದ್ರಿ ಕಚೇರಿಯ ನವೀಕರಣಕ್ಕೆ, ಸುಮಾರು 31 ಲಕ್ಷ ರೂಪಾಯಿಗಳನ್ನು ಸಾರ್ವಜನಿಕರ ತೆರಿಗೆ ಹಣವನ್ನು ನಗರಸಭಾ ನಿಧಿಯಿಂದ ನೀಡುವಂತೆ ತಮ್ಮ ಮೂಲಕ ಆದೇಶ ನೀಡಲಾಗಿದೆ. ಈ ರೀತಿ ನಾಗರಿಕರಿಂದ ಸಂಗ್ರಹವಾದ ತೆರಿಗೆ ಹಣವನ್ನು ನಗರಸಭಾ ನಿಧಿಯಿಂದ ಶಾಸಕರ ಐಷಾರಾಮಿ ಕಚೇರಿಯ ಅಭಿವೃದ್ಧಿಗೆ ನೀಡಲು ಚುನಾಯಿತ ಸದಸ್ಯರುಗಳಾದ ನಮ್ಮ ಆಕ್ಷೇಪವಿರುತ್ತದೆ. ಅದಲ್ಲದೇ ಈ ಹಿಂದಿನ ಅವಧಿಯಲ್ಲಿ ಮಂಜೂರಾದ ಅಮೃತ ನಗರೋತ್ಥಾನದ ಕಾಮಗಾರಿಗಳು ಆರಂಭವಾಗಿರುವುದಿಲ್ಲ. ನಗರಸಭೆಯ ಎರಡನೆಯ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ತೊಡಕು ಇನ್ನೂ ನಿವಾರಣೆಯಾಗಿರುವುದಿಲ್ಲ. ಆದ್ದರಿಂದ ತಾವು ಈ ಎಲ್ಲಾ ವಿಚಾರಗಳ ಬಗ್ಗೆ ವರಿಶೀಲಿಸಿ ಚುನಾಯಿತ ಸದಸ್ಯರಾದ ನಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ ಜೀವಂಧರ್ ಜೈನ್, ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿ, ಸದಸ್ಯರಾದ ಪಿ ಜಿ ಜಗನ್ನಿವಾಸ ರಾವ್, ಭಾಮಿ ಅಶೋಕ್ ಶೆಣೈ, ಮನೋಹರ್ ಕಲ್ಲಾರೆ, ನವೀನ್ ಪೆರಿತ್ತೋಡಿ, ಪ್ರೇಮ್, ಸಂತೋಷ್ ಬೊಳುವಾರು, ಸುಂದರ ಪೂಜಾರಿ ಬಡಾವು, ಶೀನಪ್ಪ ನಾಯ್ಕ್, ಪದ್ಮನಾಭ ಪಡೀಲ್ , ವಸಂತ ಕಾರೆಕ್ಕಾಡು, ಬಾಲಚಂದ್ರ, ಶಶಿಕಲಾ ಸಿ.ಎಸ್, ಪ್ರೇಮಲತಾ ನಂದಿಲ, ಮೋಹಿನಿ ವಿಶ್ವನಾಥ್, ಮಮತಾ ರಂಜನ್, ಯಶೋದಾ ಹರೀಶ್, ಗೌರಿ ಬನ್ನೂರು, ಲೀಲಾವತಿ, ದೀಕ್ಷಾ ಪೈ, ಇಂದಿರಾ, ರೋಹಿಣಿ ಈ ಸಂದರ್ಭ ಉಪಸ್ಥಿತರಿದ್ದರು.
Posted by Vidyamaana on 2024-01-12 22:12:47 |
ಪುತ್ತೂರು, ಜ.12: ತಾನು ಪ್ರೀತಿಸಿದ ಯುವತಿ ಬೇರೆ ಮದುವೆಯಾದ ಸಿಟ್ಟಿನಲ್ಲಿ ವರನಿಗೆ ಸೇರಿದ ಬೈಕನ್ನು ರಾತ್ರಿ ವೇಳೆ ಸುಟ್ಟು ಹಾಕಿದ ಕೃತ್ಯ ಉಪ್ಪಿನಂಗಡಿ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾದ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧಿಸಿ ಪೊಲೀಸರು ತನಿಖೆ ನಡೆಸಿದಾಗ, ಈ ವಿಚಾರ ಬಯಲಾಗಿದೆ. ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್ಲು ಪಾದಾಳದ ಸಂದೀಪ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾನು ಪ್ರೀತಿಸಿದ ಯುವತಿ ಬೇರೊಬ್ಬನ ಜೊತೆ ಮದುವೆ ಆಗಿದ್ದಕ್ಕೆ ಈ ರೀತಿ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಯುವಕ ಅದೇ ಗ್ರಾಮದ ಯುವತಿಯೊಬ್ಬಳನ್ನು ಏಕಮುಖವಾಗಿ ಪ್ರೀತಿಸಿದ್ದ ಎನ್ನಲಾಗಿದೆ. ಯುವತಿಗೆ ಜನವರಿ 3ರಂದು ಬೇರೊಬ್ಬ ಯುವಕನೊಂದಿಗೆ ವಿವಾಹವಾಗಿದ್ದು ಆಕೆಯನ್ನು ಮದುವೆಯಾದ ವ್ಯಕ್ತಿಯ ಮೇಲೆ ಆರೋಪಿಗೆ ಸಿಟ್ಟಿತ್ತು. ಯುವತಿ ಜನವರಿ 6ರಂದು ಗಂಡನ ಜೊತೆ ತವರಿಗೆ ಬಂದಿದ್ದಳು. ರಾತ್ರಿ ವೇಳೆ ಮನೆಯ ಸಮೀಪ ಇರಿಸಿದ್ದ ಬೈಕಿಗೆ ಬೆಂಕಿ ಹಚ್ಚಲಾಗಿತ್ತು. ಬೈಕ್ ಹೊತ್ತಿ ಉರಿಯುತ್ತಿದ್ದುದನ್ನು ಸಂಬಂಧಿಕರು ಗಮನಿಸಿದ್ದರು. ಬೈಕನ್ನು ಮನೆಯಿಂದ 100 ಮೀ ದೂರಕ್ಕೆ ಒಯ್ದು ಬೆಂಕಿ ಹಚ್ಚಲಾಗಿತ್ತು. ಈ ಬಗ್ಗೆ ವರ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾದ ವ್ಯಕ್ತಿಯ ಮೇಲಿನ ದ್ವೇಷದಿಂದ ಬೈಕ್ ಸುಟ್ಟುಹಾಕಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Posted by Vidyamaana on 2024-03-02 07:54:44 |
ಪುತ್ತೂರು: ಜವುಳಿ ಮನಗೆದ್ದಿರುವ ಪುತ್ತೂರಿನ ಹೆಸರಾಂತ ಜವುಳಿ ಮಳಿಗೆ ರಾಧಾಸ್ ಹಬ್ಬಗಳ ಹಿನ್ನೆಲೆಯಲ್ಲಿ ವಿಶೇಷ ಆಫರನ್ನು ಗ್ರಾಹಕರ ಮುಂದಿಟ್ಟಿದೆ.
ಪುತ್ತೂರು ಜಾತ್ರೆ, ಯುಗಾದಿ, ವಿಷು, ಗುಡ್ ಫ್ರೈಡೇ, ರಮ್ಜಾನ್ ಹಬ್ಬಗಳು ಒಂದರ ಹಿಂದೊಂದರಂತೆ ಸಾಲುಗಟ್ಟಿ ಬರುತ್ತಿವೆ. ಇದರ ಜೊತೆಗೆ ಮದುವೆ ಹಬ್ಬಗಳ ಸೀಸನ್ ಬೇರೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರಿಗೆ ಅನುಕೂಲವಾಗಲೆಂದೇ ಹೊಚ್ಚಹೊಸ ಸಂಗ್ರಹ ಹಾಗೂ ಗ್ರಾಹಕರಿಗಾಗಿ 15% ರಿಯಾಯಿತಿಯನ್ನು ನೀಡಲಾಗಿದೆ.ಈ ಸ್ಪೆಷಲ್ ಆಫರ್ ಸೇಲ್ ಮಾ.1ರಿಂದ ಪ್ರಾರಂಭವಾಗಿದೆ.
15% ರಿಯಾಯಿತಿ ಜೊತೆ ಹೊಸ ಸಂಗ್ರಹವಿದ್ದು, ಎಲ್ಲರಿಗೂ ಮೆಚ್ಚುಗೆಯಾಗುವಂತಹ ವಸ್ತ್ರಗಳ ಭರಪೂರ ಸಂಗ್ರಹವೇ ಗ್ರಾಹಕರಿಗಾಗಿ ಲಭ್ಯವಿದೆ.
ಗ್ರಾಹಕರಿಗೆ ವಿಶಾಲವಾದ ಪಾರ್ಕಿಂಗ್ ಸೌಲಭ್ಯವಿದ್ದು, ಆದಿತ್ಯವಾರವೂ ಮಳಿಗೆ ರಾತ್ರಿ 8ರ ವರೆಗೆ ತೆರೆದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.