Posted by vidyamaana on 2024-03-23 10:38:46 |
ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.
ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.
Posted by Vidyamaana on 2023-08-07 11:50:52 |
ಬೆಂಗಳೂರು; ಇಂದು ನಿಧನರಾದ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥಿವ ಶರೀರ ನಾಳೆ ಮುಂಜಾನೆ ಬೆಂಗಳೂರು ತಲುಪಲಿದೆ.
ಸ್ಪಂದನಾ ಮೃತದೇಹವನ್ನು ಬೆಂಗಳೂರಿಗೆ ತರೋದಕ್ಕಾಗಿ ಕುಟುಂಬಸ್ಥರು ಹಾಗೂ ವಿಜಯ್ ರಾಘವೇಂದ್ರ ಸ್ನೇಹಿತರು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಥೈಲ್ಯಾಂಡ್ ಸರ್ಕಾರದ ರಾಯಭಾರ ಕಚೇರಿಯಲ್ಲಿ ಕಾನೂನು ಪ್ರಕ್ರಿಯೆಯನ್ನು ವಿಜಯ್ ಸ್ನೇಹಿತರು ನಡೆಸುತ್ತಿದ್ದಾರೆ.
ಈಗಾಗಲೇ ವಿಷಯ ತಿಳಿದು ಸ್ಪಂದನಾ ತಂದೆ ಬಿ ಕೆ ಶಿವರಾಂ ಹಾಗೂ ಸಹೋದರ ರಕ್ಷಿತ್ ಶಿವರಾಂ ಬ್ಯಾಂಕಾಕ್ ನತ್ತ ತೆರಳಿದ್ದಾರೆ ಎ. ನಾಳೆ ಬೆಂಗಳೂರಿಗೆ ಸ್ಪಂದನಾ ಪಾರ್ಥೀವ ಶರೀರವನ್ನು ತರಲಿದ್ದು, ಬುಧವಾರ ಅಂತ್ಯಕ್ರಿಯೆ ನಡೆಸುವ ಸಾಧ್ಯತೆಯಿದೆ.
Posted by Vidyamaana on 2024-02-17 21:49:20 |
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನ ಕಾಂಗ್ರೆಸ್ ಸಮಾವೇಶದತ್ತ ಬರುವ ವೇಳೆ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಖ್ಯಮಂತ್ರಿ ವಿಮಾನ ನಿಲ್ದಾಣದಿಂದ ಕಾಂಗ್ರೆಸ್ ಸಮಾವೇಶ ನಡೆಯುವ ಸಹ್ಯಾದ್ರಿ ಮೈದಾನಕ್ಕೆ ಬರುವ ವೇಳೆ ಮುತ್ತಿಗೆ ಹಾಕಲು ಬೊಂದೆಲ್ ಬಳಿ ಕಾರ್ಯಕರ್ತರು ಸೇರಿದ್ದರು. 50ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದ್ದು ರಸ್ತೆಯಲ್ಲಿ ಮುಖ್ಯಮಂತ್ರಿ ಬರುವಾಗ ಕಪ್ಪು ಪಟ್ಟಿ ಹಿಡಿದು ಪ್ರತಿಭಟನೆಗೆ ಯತ್ನಿಸಿದ್ದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ
Posted by Vidyamaana on 2023-11-01 13:31:52 |
ಕೇರಳ : ನಟಿ ರೆಂಜೂಷಾ ಮೆನನ್ ಅವರ ನಿಧನದ ಆಘಾತದಿಂದ ಹೊರಬರುವ ಮುನ್ನವೇ ಮತ್ತೊಂದು ಸಾವಿನ ಸುದ್ದಿ ಮಲಯಾಳಂ ಕಿರುತೆರೆ ಉದ್ಯಮವನ್ನು ಬೆಚ್ಚಿಬೀಳಿಸಿದೆ. ಕರುತಮುತ್ತು ಮುಂತಾದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಡಾ. ಪ್ರಿಯಾ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.ಪ್ರಿಯಾ ಅವರಿಗೆ 35 ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಅವರು ಮಂಗಳವಾರ (ಅಕ್ಟೋಬರ್ 31) ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ನಟ ಕಿಶೋರ್ ಸತ್ಯ ಅಭಿಮಾನಿಗಳೊಂದಿಗೆ ಸುದ್ದಿ ಹಂಚಿಕೊಂಡಿದ್ದಾರೆ.
ಹೃದಯಾಘಾತದಿಂದ ಡಾ. ಪ್ರಿಯಾ ಕೊನೆಯುಸಿರೆಳೆದಿದ್ದಾರೆ. ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದರು. ನವಜಾತ ಶಿಶುವನ್ನು ಐಸಿಯುನಲ್ಲಿ ಇಡಲಾಗಿದೆ. ಪ್ರಿಯಾಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ತಮ್ಮ ದಿನನಿತ್ಯದ ಚೆಕಪ್ ಗಾಗಿ ಆಸ್ಪತ್ರೆಗೆ ಬಂದಿದ್ದ ಅವರಿಗೆ ಹೃದಯ ಸ್ತಂಭನವಾಗಿದೆ. ಕುಟುಂಬಕ್ಕೆ ಹೇಗೆ ಸಾಂತ್ವಾನ ಹೇಳಲಿ ಎಂದು ತಿಳಿಯುತ್ತಿಲ್ಲ ಎಂದು ನಟ ಕಿಶೋರ್ ಸತ್ಯ ದುಃಖ ಹಂಚಿಕೊಂಡಿದ್ದಾರೆ.ಡಾ. ಪ್ರಿಯಾ ಮಲಯಾಳಂ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿದ್ದರು. ಕಿಶೋರ್ ಅವರ ಜೊತೆ ಕರುತಮುತ್ತು ಕಾರ್ಯಕ್ರಮದಲ್ಲಿ ಅಭಿನಯಿಸಿದ್ದರು. ಮದುವೆ ಬಳಿಕ ಕಿರುತೆರೆ ಉದ್ಯಮದಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದರು. ಅಷ್ಟೇ ಅಲ್ಲ ಪ್ರಿಯಾ ಅವರು ವೃತ್ತಿಯಲ್ಲಿ ವೈದ್ಯೆಯಾಗಿದ್ದರು.
Posted by Vidyamaana on 2023-01-19 09:02:36 |
ಭಾರತ ಕಳೆದ ವರ್ಷಕ್ಕಿಂತ 33 ಪಟ್ಟು ಹೆಚ್ಚು ರಶ್ಯನ್ ತೈಲವನ್ನು ಖರೀದಿಸುತ್ತಿದೆ. ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಆಮದುದಾರ ದೇಶವಾಗಿ ಭಾರತ ಕಳೆದ ಡಿಸೆಂಬರ್ನಲ್ಲಿ ರಶ್ಯದಿಂದ ದಿನಕ್ಕೆ ಸರಾಸರಿ 12 ಲಕ್ಷ ಬ್ಯಾರೆಲ್ಗಳನ್ನು ಖರೀದಿಸಿದೆ ಎನ್ನುತ್ತಿವೆ ವರದಿಗಳು. ಇದು ದಾಖಲೆ ಪ್ರಮಾಣದ ತೈಲ ಖರೀದಿಯಾಗಿದೆ. ಹಿಂದಿನ ವರ್ಷಕ್ಕಿಂತ ಭಾರೀ ದೊಡ್ಡ ಮೊತ್ತದ ಆಮದು ಇದಾಗಿದೆ. ಈ ಪ್ರಮಾಣ ನವೆಂಬರ್ನಲ್ಲಿ ಖರೀದಿಸಿದ್ದಕ್ಕಿಂತ ಶೇ.29ರಷ್ಟು ಜಾಸ್ತಿ.
ಹಲವು ತಿಂಗಳುಗಳ ಹಿಂದೆ ಇರಾಕ್ ಮತ್ತು ಸೌದಿ ಅರೇಬಿಯವನ್ನು ಹಿಂದಿಕ್ಕಿದ ನಂತರ ರಶ್ಯವು ಈಗ ಸುಲಭವಾಗಿ ಭಾರತದ ಅತಿದೊಡ್ಡ ತೈಲ ಮೂಲವಾಗಿದೆ. ಉಕ್ರೇನ್ ಆಕ್ರಮಣದಿಂದ ಅನೇಕ ಖರೀದಿದಾರರು ರಶ್ಯದಿಂದ ತೈಲ ಖರೀದಿಸುವುದಕ್ಕೆ ಹಿಂದೇಟು ಹಾಕಿರುವ ಹೊತ್ತಲ್ಲಿ ಭಾರತೀಯ ಸಂಸ್ಕರಣಾಗಾರಗಳು ಅಗ್ಗದ ರಶ್ಯದ ಕಚ್ಚಾ ತೈಲವನ್ನು ದೊಡ್ಡ ಮಟ್ಟದಲ್ಲಿ ಆಮದು ಮಾಡಿಕೊಳ್ಳುತ್ತಿವೆ. ರಶ್ಯ ತನ್ನ ಕಚ್ಚಾ ತೈಲವನ್ನು ಭಾರತೀಯ ಸಂಸ್ಕರಣಾಗಾರಗಳಿಗೆ ಆಕರ್ಷಕ ರಿಯಾಯಿತಿಯಲ್ಲಿ ನೀಡಿದೆ. ಇದರ ಪರಿಣಾಮವಾಗಿ ರಶ್ಯದ ಕಚ್ಚಾ ತೈಲದ ಅತಿದೊಡ್ಡ ಆಮದುದಾರ ದೇಶವಾಗಿ ಭಾರತ ಚೀನಾವನ್ನು ಮೀರಿಸಿದೆ.
ಭಾರತವು ತನ್ನ ತೈಲ ಬೇಡಿಕೆಯ ಶೇ. 85ಕ್ಕಿಂತ ಹೆಚ್ಚಿನ ಪ್ರಮಾಣದ ಆಮದು ಮಾಡಿಕೊಳ್ಳುತ್ತಿದೆ. ಮೇ ತಿಂಗಳಿನಿಂದ ಡೀಸೆಲ್ ಮತ್ತು ಗ್ಯಾಸೋಲಿನ್ನ ಪಂಪ್ ಬೆಲೆಗಳನ್ನು ಹೆಚ್ಚಿಸದಂತೆ ಸರಕಾರದಿಂದ ತಡೆಯಲ್ಪಟ್ಟ ಸರಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳು ಅಗ್ಗದ ರಶ್ಯದ ಆಮದುಗಳಿಗೆ ಹೆಚ್ಚು ಒಲವು ತೋರಿವೆ.
ಭಾರತಕ್ಕೆ ತೈಲ ಪೂರೈಸುವ ಇತರ ಎರಡು ಪ್ರಮುಖ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಕೂಡ ಕಳೆದ ತಿಂಗಳು ಹೆಚ್ಚಾಗಿದೆ. ಇರಾಕ್ನಿಂದ ದಿನಕ್ಕೆ 8,86,000 ಬ್ಯಾರೆಲ್ಗಳು ಅಂದರೆ ಶೇ. 7ರಷ್ಟು ಏರಿಕೆಯಾಗಿದ್ದರೆ, ಸೌದಿ ಅರೇಬಿಯದಿಂದ ದಿನಕ್ಕೆ 7,48,000 ಬ್ಯಾರೆಲ್ಗಳು ಅಂದರೆ ಶೇ. 12ರಷ್ಟು ಹೆಚ್ಚಿದೆ ಎಂದು ವರದಿಗಳು ಹೇಳುತ್ತಿವೆ.
ಉಕ್ರೇನ್ ಮೇಲೆ ರಶ್ಯ ಯುದ್ಧ ಆರಂಭಿಸಿದಾಗಿನಿಂದ ರಶ್ಯ ಮತ್ತು ಭಾರತದ ಮಧ್ಯೆ ತೈಲ ವ್ಯವಹಾರ ಸಾಕಷ್ಟು ಹೆಚ್ಚಿದೆ. ಎಪ್ರಿಲ್ ತಿಂಗಳಿನಿಂದೀಚೆ ರಶ್ಯದಿಂದ ಭಾರತ ಆಮದು ಮಾಡಿಕೊಂಡ ಕಚ್ಚಾ ತೈಲದ ಪ್ರಮಾಣ ಐವತ್ತು ಪಟ್ಟು ಹೆಚ್ಚಾಗಿದೆ. ಉಕ್ರೇನ್ ಯುದ್ಧಕ್ಕೆ ಮುನ್ನ ರಶ್ಯದಿಂದ ಭಾರತ ಆಮದು ಮಾಡಿಕೊಳ್ಳುತ್ತಿದ್ದ ತೈಲದ ಪ್ರಮಾಣ ಶೇ. 0.2 ಮಾತ್ರ. ಈಗ ವಿದೇಶಗಳಿಂದ ಭಾರತ ಆಮದು ಮಾಡಿಕೊಳ್ಳುವ ತೈಲದಲ್ಲಿ ರಶ್ಯದ ಪಾಲು ಶೇ. 10ಕ್ಕೆ ಹೆಚ್ಚಿದೆ.
ಮೇ ತಿಂಗಳಲ್ಲಿ ಭಾರತೀಯ ಕಂಪೆನಿಗಳು ರಶ್ಯನ್ ತೈಲ ಕಂಪೆನಿಗಳಿಂದ 25 ಮಿಲಿಯನ್ ಬ್ಯಾರಲ್ ಕಚ್ಚಾ ತೈಲವನ್ನು ಖರೀದಿ ಮಾಡಿದ್ದವು. ಇದರೊಂದಿಗೆ ಭಾರತಕ್ಕೆ ತೈಲ ಸರಬರಾಜು ಮಾಡುವ ದೇಶಗಳ ಪೈಕಿ ರಶ್ಯ ಸೌದಿ ಅರೇಬಿಯವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿತ್ತು. ಇರಾಕ್ ಭಾರತಕ್ಕೆ ಈಗಲೂ ಅತಿದೊಡ್ಡ ತೈಲ ಸರಬರಾಜುದಾರ ದೇಶವಾಗಿ ಮುಂದುವರಿದಿದೆ.
ಎಲ್ಲವೂ ಉಕ್ರೇನ್ ಯುದ್ಧದ ಪರಿಣಾಮ. ಉಕ್ರೇನ್ ಯುದ್ಧ ಶುರುವಾದಾಗಿನಿಂದ ರಶ್ಯ ಮೇಲೆ ವಿವಿಧ ರೀತಿಯ ಅಂತರ್ರಾಷ್ಟ್ರೀಯ ನಿಷೇಧಗಳನ್ನು ಹೇರಲಾಗಿದೆ. ತತ್ಪರಿಣಾಮವಾಗಿ ರಶ್ಯದಿಂದ ಅತಿ ಕಡಿಮೆ ಬೆಲೆಗೆ ತೈಲ ಬಿಕರಿಯಾಗುತ್ತಿದೆ. ಭಾರತ ಈ ಅವಕಾಶವನ್ನು ಸದುಪಯೋಗಿಸಿಕೊಳ್ಳುತ್ತಿದ್ದು, ಭಾರತೀಯ ತೈಲ ಸಂಸ್ಕರಣ ಸಂಸ್ಥೆಗಳು ಕಡಿಮೆ ಬೆಲೆಗೆ ರಶ್ಯ ತೈಲವನ್ನು ಖರೀದಿ ಮಾಡುತ್ತಿವೆ. ಹೀಗಾಗಿಯೇ ಎಪ್ರಿಲ್ ನಂತರದ ಅವಧಿಯಲ್ಲಿ ರಶ್ಯದಿಂದ ಭಾರತ ಆಮದು ಮಾಡಿಕೊಳ್ಳುವ ತೈಲ ಪ್ರಮಾಣ ಹೆಚ್ಚುತ್ತಿರುವುದು.
ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಶ್ಯ ಮೇಲೆ ಅಮೆರಿಕ ಹಾಗೂ ಅನೇಕ ಯುರೋಪಿಯನ್ ದೇಶಗಳು ನಿರ್ಬಂಧಗಳನ್ನು ಹೇರಿವೆ. ರಶ್ಯ ಜೊತೆ ಯಾವುದೇ ವ್ಯವಹಾರ ಮಾಡದಂತೆ ಇತರ ಹಲವು ದೇಶಗಳಿಗೆ ತಾಕೀತು ಮಾಡುತ್ತಿವೆ. ಹೀಗಿದ್ದರೂ ಭಾರತ ರಶ್ಯ ಜೊತೆ ಮಿಲಿಟರಿ ಶಸ್ತ್ರಾಸ್ತ್ರ ಖರೀದಿ ಮುಂದುವರಿಸುತ್ತಿದೆ, ಈಗ ತೈಲ ಖರೀದಿ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ. ರಶ್ಯದೊಂದಿಗಿನ ತಾನು ಹೊಂದಿರುವ ವ್ಯವಹಾರವನ್ನು ಭಾರತ ಸಮರ್ಥಿಸಿಕೊಳ್ಳುತ್ತಿದೆ. ತನ್ನ ಹಿತಾಸಕ್ತಿಗೆ ತಕ್ಕಂತೆ ನಡೆ ಇಡುವುದಾಗಿ ಭಾರತ ಸ್ಪಷ್ಟಪಡಿಸಿದೆ.
ಈಗ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ಮತ್ತು ಬಳಕೆ ಮಾಡುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ಚೀನಾ ಬಿಟ್ಟರೆ ಭಾರತವೇ ಅತಿಹೆಚ್ಚು ತೈಲ ಆಮದು ಮಾಡಿಕೊಳ್ಳುವುದು. ಭಾರತದಲ್ಲಿ ಬಳಕೆಯಾಗುವ ತೈಲದಲ್ಲಿ ಶೇ. 85ರಷ್ಟು ಪ್ರಮಾಣವು ಬೇರೆ ದೇಶಗಳಿಂದ ಆಮದಾಗಿರುವಂಥವೇ. ಇರಾಕ್ ಮತ್ತು ಸೌದಿ ಅರೇಬಿಯ ಸಾಂಪ್ರದಾಯಿಕವಾಗಿ ಭಾರತಕ್ಕೆ ಅತಿ ಹೆಚ್ಚು ತೈಲ ಸರಬರಾಜು ಮಾಡುತ್ತಿದ್ದ ದೇಶಗಳು. ಈಗ ರಶ್ಯ ಪ್ರವೇಶವಾಗಿದೆ.
ಉಕ್ರೇನ್ ಮತ್ತು ರಶ್ಯ ಯುದ್ಧದ ಪರಿಣಾಮ ಬೇರೆ ತೈಲ ಮಾರುಕಟ್ಟೆಗಳಲ್ಲಿ ಬೆಲೆ ಸಿಕ್ಕಾಪಟ್ಟೆ ಹೆಚ್ಚುತ್ತಿದೆ. ಅಮೆರಿಕ ಮತ್ತಿತರ ದೇಶಗಳ ಒತ್ತಡದಿಂದಾಗಿ ರಶ್ಯದಿಂದ ತೈಲ ಖರೀದಿಸಲು ಹಲವು ದೇಶಗಳು ಹಿಂದೇಟು ಹಾಕಿವೆ. ಹೀಗಾಗಿ, ರಶ್ಯದ ಉರಲ್ನಲ್ಲಿರುವ ಕಚ್ಚಾ ತೈಲವನ್ನು ಖರೀದಿಸಲು ಮುಂದಾಗಿರುವ ದೇಶಗಳು ಕಡಿಮೆಯೇ. ಹೀಗಾಗಿ, ರಶ್ಯದ ತೈಲ ಕಡಿಮೆ ಬೆಲೆಗೆ ಸಿಗುತ್ತಿದೆ. ಭಾರತದ ತೈಲ ಸಂಸ್ಕರಣ ಕಂಪೆನಿಗಳು ರಶ್ಯದಿಂದ ಒಂದು ಬ್ಯಾರಲ್ಗೆ 30 ಡಾಲರ್ ರಿಯಾ ಯಿತಿ ದರದಲ್ಲಿ ಕಚ್ಚಾ ತೈಲ ಖರೀದಿ ಮಾಡುತ್ತಿವೆ.
ರಶ್ಯ ತೈಲ ಖರೀದಿ ಸಮರ್ಥಿಸಿದ ಭಾರತ
ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳು, ಪರಸ್ಪರರ ಹಿತಾಸಕ್ತಿ ಹಾಗೂ ದ್ವಿಪಕ್ಷೀಯ ಸಹಕಾರ ಬಲಪಡಿಸುವ ಸಂಬಂಧ ಭಾರತ ಮತ್ತು ರಷ್ಯಾ ಮಂಗಳವಾರ ಮಾಸ್ಕೊದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದವು.
ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಷ್ಯಾ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್ ಅವರು ಮಾತುಕತೆಯಲ್ಲಿ ಭಾಗಿಯಾಗಿದ್ದರು.
ಫೆಬ್ರುವರಿಯಲ್ಲಿ ರಷ್ಯಾ ಮತ್ತು ಉಕ್ರೇನ್ ಸಂಘರ್ಷ ಶುರುವಾದ ನಂತರ ಉಭಯ ಸಚಿವರು ಈಗಾಗಲೇ ನಾಲ್ಕು ಬಾರಿ ಪರಸ್ಪರ ಭೇಟಿಯಾಗಿ ಪರಸ್ಪರ ಮಾತುಕತೆ ನಡೆಸಿದ್ದರು.
ಭಾರತ ಮತ್ತು ರಷ್ಯಾ ನಡುವಿನ ಹಿತಾಸಕ್ತಿಗಳ ಬಗ್ಗೆ ಸಹಜ ಚರ್ಚೆ ನಡೆಸಿದ್ದೇವೆ. ಅಸ್ಥಿರತೆಯ ಈ ಕಾಲದಲ್ಲಿ, ನಾವು ನಿಜವಾಗಿಯೂ ಜಾಗತಿಕ ಆರ್ಥಿಕತೆಯ ಸ್ಥಿರತೆಗೆ ನೆರವಾಗುವ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ತೈಲ ಮತ್ತು ಅನಿಲ ಖರೀದಿಯಲ್ಲಿ ಮೂರನೇ ಅತಿದೊಡ್ಡ ಗ್ರಾಹಕ ಎನಿಸಿರುವ ನಮ್ಮ ದೇಶದ ಆದಾಯವು ಹೆಚ್ಚಿಲ್ಲದ ಕಾರಣ, ನಾವು ಕೈಗೆಟಕುವ ದರದಲ್ಲಿ ಇಂಧನ ಪಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ಜತೆಗಿನ ಸಂಬಂಧ ಭಾರತಕ್ಕೆ ಪ್ರಯೋಜನಕಾರಿಯಾಗಿದೆ. ರಷ್ಯಾ ಜತೆಗೆ ನಮ್ಮ ಬಾಂಧವ್ಯವನ್ನು ಮುಂದುವರಿಸುತ್ತೇವೆ’ ಎಂದು ಜೈಶಂಕರ್, ರಷ್ಯಾದಿಂದ ತೈಲ ಖರೀದಿ ಸಮರ್ಥಿಸಿಕೊಂಡರು.
ಇದು ಯುದ್ಧ ಕಾಲವಲ್ಲ’ವೆಂದು ಪುಟಿನ್ ಅವರಿಗೆ ಮೋದಿ ಹೇಳಿದ್ದ ಕಿವಿ ಮಾತನ್ನು ನೆನಪಿಸಿದ ಅವರು, ಉಕ್ರೇನ್ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಗಮನಿಸಿಯೇ ಉಭಯ ರಾಷ್ಟ್ರಗಳಿಗೂ ಮಾತುಕತೆಗೆ ಮರಳುವಂತೆ ಭಾರತ ಬಲವಾಗಿ ಒತ್ತಾಯಿಸುತ್ತಲೇ ಇದೆ’ ಎಂದು ಎಸ್. ಜೈಶಂಕರ್ ಹೇಳಿರುವುದಾಗಿ ‘ಎನ್ಡಿಟಿವಿ’ ವರದಿ ಮಾಡಿದೆ.
ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ಭಾರತ ಈವರೆಗೆ ಖಂಡಿಸಿಲ್ಲ. ರಾಜತಾಂತ್ರಿಕತೆ ಮತ್ತು ಮಾತುಕತೆ ಮೂಲಕವೇ ಬಿಕ್ಕಟ್ಟು ಶಮನಕ್ಕೆ ಭಾರತ ಉಭಯತ್ರರನ್ನು ಒತ್ತಾಯಿಸುತ್ತಲೇ ಇದೆ.
ಪುಟಿನ್ ಜತೆ ಮಾತುಕತೆಗೆ ಝೆಲೆನ್ಸ್ಕಿ ಒಲವು
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಲು ನಿರಾಕರಿಸಿದ್ದ ಉಕ್ರೇನ್ ನಿಲುವಿನಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಶಾಂತಿ ಮಾತುಕತೆ ಸಾಧ್ಯತೆಯತ್ತ ಸಾಗುವ ಸುಳಿವು ನೀಡಿದೆ.
ಅಮೆರಿಕದಲ್ಲಿ ನಡೆಯಲಿರುವ ಪ್ರಮುಖ ಚುನಾವಣೆಯ ಹಿನ್ನೆಲೆಯಲ್ಲಿ ಉಕ್ರೇನ್ ನಿಲುವು ಬದಲಿಸಿಕೊಂಡಿದ್ದು, ಪುಟಿನ್ ಜತೆಗೆ ಶಾಂತಿ ಮಾತುಕತೆ ನಡೆಸುವ ಸಾಧ್ಯತೆಯ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸುಳಿವು ನೀಡಿದ್ದಾರೆ.
ಸೋಮವಾರ ತಡವಾಗಿ ವಿಶ್ವ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಝೆಲೆನ್ಸ್ಕಿ ಅವರು ‘ರಷ್ಯಾವನ್ನು ನಿಜವಾದ ಶಾಂತಿ ಮಾತುಕತೆಗಳಿಗೆ ಮರಳುವಂತೆ ಒತ್ತಡ ಹೇರಬೇಕು’ ಎಂದು ಒತ್ತಾಯಿಸಿದರು.
ಉಕ್ರೇನ್ನ ಎಲ್ಲ ಆಕ್ರಮಿತ ಭೂಮಿಯನ್ನು ಹಿಂದಿರುಗಿಸಬೇಕು, ಯುದ್ಧದಿಂದ ಉಂಟಾದ ಹಾನಿ ಮತ್ತು ಯುದ್ಧ ಅಪರಾಧಗಳ ವಿಚಾರಣೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಝೆಲೆನ್ಸ್ಕಿ ಅವರು ಪುಟಿನ್ ಜತೆಗಿನ ಶಾಂತಿ ಮಾತುಕತೆಗೆ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ರಿಪಬ್ಲಿಕನ್ ಪಕ್ಷದ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದರೆ ಬೈಡನ್ ಸರ್ಕಾರ ಉಕ್ರೇನ್ಗೆ ಮಿಲಿಟರಿ ಮತ್ತು ಆರ್ಥಿಕ ನೆರವಿನ ಪ್ಯಾಕೇಜ್ ಮುಂದುವರಿಸುವುದು ಕಷ್ಟವಾಗಬಹುದು ಎನ್ನುವ ಕಾರಣಕ್ಕೆ ಝೆಲೆನ್ಸ್ಕಿ ಅವರು, ಪುಟಿನ್ ಜತೆಗೆ ಮಾತುಕತೆ ಅಸಾಧ್ಯವೆಂದಿದ್ದ ರಾಗವನ್ನು ಈಗ ಬದಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಷ್ಯಾದ ವಿದೇಶಾಂಗ ಉಪ ಸಚಿವ ಆಂಡ್ರೀ ರುದೆನ್ಕೊ ಅವರು, ಮಾತುಕತೆಗೆ ಪುನಾ ಮರಳಲು ರಷ್ಯಾ ಯಾವುದೇ ಷರತ್ತುಗಳನ್ನು ಮುಂದಿಟ್ಟಿಲ್ಲ. ಆದರೆ, ಮಾತುಕತೆ ನಡೆಸಲು ಉಕ್ರೇನ್ಗೆ ಇಚ್ಛಾಶಕ್ತಿಯ ಕೊರತೆ ಇದೆ ಎಂದು ಆರೋಪಿಸಿದರು.
Posted by Vidyamaana on 2024-02-26 21:51:31 |
ಪುತ್ತೂರು: ಇಲ್ಲಿನ ಮೊಟ್ಟೆತ್ತಡ್ಕ - ಪಂಜಳ ರಸ್ತೆಯಲ್ಲಿ ಮೋರಿಯೊಂದು ಕುಸಿದಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.
ಗೇರು ಸಂಶೋಧನಾ ನಿರ್ದೇಶನಾಲಯದ ಸಮೀಪದ ತಿರುವಿನಲ್ಲಿ ಮೋರಿ ಕುಸಿದಿದೆ. ತಿರುವಿನಲ್ಲಿ ಈ ಮೋರಿ ಇರುವ ಕಾರಣ, ವಾಹನ ಸವಾರರ ಗಮನಕ್ಕೆ ಈ ಅಪಾಯ ತಕ್ಷಣಕ್ಕೆ ಬರುತ್ತಿಲ್ಲ. ಇದರಿಂದ ಅಪಘಾತ ಸಂಭವಿಸುವ ಲಕ್ಷಣ ಹೆಚ್ಚಿದೆ.
ಮೋರಿ ಕುಸಿದಿರುವ ಬಗ್ಗೆ ಸೂಚನೆ ನೀಡಲು ಕನಿಷ್ಠ ಒಂದು ಸೂಚನಾ ಫಲಕವನ್ನು ಹಾಕಿಲ್ಲ. ಹಾಗಾಗಿ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ, ಮೋರಿಯನ್ನು ದುರಸ್ತಿ ಮಾಡಬೇಕೆಂದು ಕುರಿಯ ಮುಂಡೂರು ಆಟೋ ಚಾಲಕರು ಮತ್ತು ಸಾರ್ವಜನಿಕರ ಆಗ್ರಹಿಸಿರುತ್ತಾರೆ.
Posted by Vidyamaana on 2024-03-17 07:48:18 |
ಮಂಗಳೂರು: 2022 ಜುಲೈ 28ರಂದು ಸುರತ್ಕಲ್ನಲ್ಲಿ ಮೊಹಮ್ಮದ್ ಫಾಝಿಲ್ ಹತ್ಯೆ ನಡೆಸಿದ ಪ್ರಮುಖ 3 ಆರೋಪಿಗಳಿಗೆ ಜಾಮೀನು ಮಂಜೂರು ಆಗಿದೆ.
ಸುರತ್ಕಲ್ ಮಂಗಳಪೇಟೆಯ ಮೊಹಮ್ಮದ್ ಫಾಝಿಲ್ ಹತ್ಯೆಯ A1 ಆರೋಪಿ ಸುಹಾಸ್ ಶೆಟ್ಟಿ, A2 ಆರೋಪಿ ಅಭಿಷೇಕ್, A3 ಆರೋಪಿ ನೇಪಾಳಿ ಗಣೇಶ್ಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ.
ಫಾಝಿಲ್ ಹತ್ಯೆಯಲ್ಲಿ ಒಟ್ಟು 8 ಪ್ರಮುಖ ಆರೋಪಿಗಳ ಬಂಧನವಾಗಿತ್ತು. ಐವರು ಆರೋಪಿಗಳು ಈಗಾಗಲೇ ಜಾಮೀನಿನಲ್ಲಿ ಹೊರ ಬಂದಿದ್ದಾರೆ. ಇದೀಗ ಮೂವರು ಪ್ರಮುಖ ಆರೋಪಿಗಳಿಗೆ ಜಾಮೀನು ಆಗಿದೆ. ಈ ಮೂಲಕ ಫಾಝಿಲ್ ಹತ್ಯೆಯ ಎಲ್ಲ ಆರೋಪಿಗಳೂ ಬಂಧಮುಕ್ತರಾದಂತಾಗಿದೆ.
2022 ಜುಲೈ 28ರಂದು ರಾತ್ರಿ ಮಂಗಳೂರು ಬಳಿಯ ಸುರತ್ಕಲ್ನಲ್ಲಿ ಕಾರ್ನಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿ ದುಷ್ಕರ್ಮಿಗಳು ಬಟ್ಟೆ ಅಂಗಡಿಗೆ ನುಗ್ಗಿ ಮೊಹಮ್ಮದ್ ಫಾಜಿಲ್ (23)ನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ದಾಳಿ ಮಾಡಿ ಪರಾರಿಯಾಗಿದ್ದರು. ಗ್ಯಾಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಫಾಝಿಲ್ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ಫಾಝಿಲ್ ಕೊನೆಯುಸಿರೆಳೆದಿದ್ದರು.