Posted by vidyamaana on 2023-08-17 05:46:19 |
ಮಂಗಳೂರು: ಮಗನ ಸಾವಿನಿಂದ ಮನನೊಂದು ಸಮುದ್ರಕ್ಕೆ ಹಾರಿ ಮೃತಪಟ್ಟ ಕಾಸರಗೋಡು ಜಿಲ್ಲೆಯ ಕುಂಬಳೆ ಬಂಬ್ರಾಣ ನಿವಾಸಿಯ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇವರ ಸಾವಿಗೆ ಪತ್ನಿಯ ಅನೈತಿಕ ಸಂಬಂಧ ಪ್ರಕರಣವೇ ಕಾರಣ ಎನ್ನುವ ಮಾತು ಕೇಳಿಬಂದಿದೆ. ಈ ಬಗ್ಗೆ ಮೃತ ಲೋಕೇಶ್ ಕಾಸರಗೋಡು ಎಸ್ಪಿ ಕಚೇರಿಗೆ ದೂರು ನೀಡಿರುವುದು ಮತ್ತು ಇವರ ಅಣ್ಣ ಸುಧಾಕರ ಉಳ್ಳಾಲ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕುಂಬಳೆಯ ಬಂಬ್ರಾಣ ನಿವಾಸಿಯಾಗಿದ್ದ ಲೋಕೇಶ್ ತನ್ನ ಪತ್ನಿ ಪ್ರಭಾವತಿ ಮತ್ತು ಆಕೆಯ ಪ್ರಿಯಕರ ಎನ್ನಲಾದ ಸಂದೀಪ್ ಆರಿಕ್ಕಾಡಿ ಎಂಬಾತನ ವಿರುದ್ಧ ಕಾಸರಗೋಡು ಎಸ್ಪಿ ಕಚೇರಿಗೆ ಆಗಸ್ಟ್ 11ರಂದು ದೂರು ನೀಡಿದ್ದಾರೆ. ತನ್ನ ಮಗ ರಾಜೇಶ್ ಸಾವಿಗೆ ಇವರ ಅಕ್ರಮ ಸಂಬಂಧ ಮತ್ತು ಅದರ ವಿಚಾರದಲ್ಲಿ ನಡೆದಿದ್ದ ಗಲಾಟೆಯೇ ಕಾರಣ. ತಾಯಿ ಜೊತೆಗೆ ಸಂದೀಪ್ ಅಕ್ರಮ ಸಂಬಂಧ ಹೊಂದಿರುವುದನ್ನು ರಾಜೇಶ್ ಆಕ್ಷೇಪಿಸಿದ್ದು, ಅದಕ್ಕೆ ಪ್ರತಿಯಾಗಿ ಸಂದೀಪ್ ಬೆದರಿಕೆ ಹಾಕಿದ್ದ. ಇದರಿಂದ ನೊಂದು ರಾಜೇಶ್ ಉಳ್ಳಾಲಕ್ಕೆ ಬಂದು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈದಿದ್ದ. ಈ ಬಗ್ಗೆ ಪ್ರಭಾವತಿ ಮತ್ತು ಆಕೆಯ ತಂಗಿ ಬೇಬಿ ಹಾಗೂ ಪ್ರಿಯಕರ ಸಂದೀಪ್ ಆರಿಕ್ಕಾಡಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಲೋಕೇಶ್ ಕಾಸರಗೋಡು ಎಸ್ಪಿ ಕಚೇರಿಗೆ ನೀಡಿದ್ದ ದೂರಿನಲ್ಲಿ ಒತ್ತಾಯಿಸಿದ್ದರು.
ಜುಲೈ 10ರಂದು ಲೋಕೇಶ್(51) ಅವರ ಮಗ ರಾಜೇಶ್(26) ಉಳ್ಳಾಲ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಶವದ ಮರಣೋತ್ತರ ಪರೀಕ್ಷೆ, ಅಂತ್ಯಕ್ರಿಯೆ ಬಳಿಕ ಪ್ರಭಾವತಿ ಗಂಡನ ಮನೆ ತೊರೆದು ತನ್ನ ತಂಗಿಯ ಮನೆಯಲ್ಲಿ ಸೇರಿದ್ದರೆ, ಇತ್ತ ಲೋಕೇಶ್ ತನ್ನ ಸೋದರ ಸುಧಾಕರ್ ಅವರ ತೊಕ್ಕೊಟ್ಟಿನ ಮನೆಯಲ್ಲಿ ವಾಸ ಮಾಡಲಾರಂಭಿಸಿದ್ದರು. ತನ್ನ ಮಗನ ಸಾವಿನಿಂದ ತೀವ್ರ ನೊಂದುಕೊಂಡಿದ್ದ ಲೋಕೇಶ್, ತನ್ನ ಗೆಳೆಯರಿಗೆ ಪತ್ನಿಯ ಕಿರುಕುಳ, ಕೆಟ್ಟ ನಡತೆಯ ಬಗ್ಗೆ ಹೇಳಿಕೊಂಡಿದ್ದರು. ಮೊನ್ನೆ ಆಗಸ್ಟ್ 14ರಂದು ಇಷ್ಟೆಲ್ಲ ಆದಮೇಲೆ ಅಂತಹ ಪತ್ನಿಯೊಂದಿಗೆ ವಾಸ ಮಾಡಲು ಸಾಧ್ಯವಾಗದು. ಆಕೆಯ ಮುಖವನ್ನೂ ನೋಡುವುದಿಲ್ಲ. ನನ್ನ ಮೃತದೇಹ ಸೋಮೇಶ್ವರ ಸಮುದ್ರದಲ್ಲಿ ಸಿಗಬಹುದು ಎಂದು ತನ್ನ ಗೆಳೆಯರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದು ಫೋನನ್ನು ಸೋದರನ ತೊಕ್ಕೊಟ್ಟಿನ ಮನೆಯಲ್ಲಿಟ್ಟು ತೆರಳಿದ್ದರು. ವಾಯ್ಸ್ ಕೇಳಿದ ಗೆಳೆಯರು ಕೂಡಲೇ ಫೋನ್ ಮಾಡಿದ್ದು, ಫೋನನ್ನು ಮನೆಯಲ್ಲಿ ಬಿಟ್ಟು ಲೋಕೇಶ್ ತೆರಳಿರುವುದು ಗೊತ್ತಾಗಿತ್ತು.
ಇತ್ತ ಗೆಳೆಯರು ಮತ್ತು ಸೋದರ ಉಳ್ಳಾಲದಲ್ಲಿ ಹುಡುಕಾಡುತ್ತಿದ್ದಂತೆ, ಅದೇ ದಿನವೇ ಲೋಕೇಶ್ ಮೃತದೇಹ ಉಳ್ಳಾಲ ಸಮುದ್ರದಲ್ಲಿ ಪತ್ತೆಯಾಗಿತ್ತು. ಮೃತರ ಸೋದರ ಸುಧಾಕರ ಮತ್ತು ಲೋಕೇಶ್ ಅವರ ಇನ್ನೊಬ್ಬ ಮಗ ಶುಭಂ ತಂದೆಯದ್ದೇ ಶವ ಎಂದು ಗುರುತಿಸಿದ್ದಾರೆ. ಸುಧಾಕರ ಅವರು ಉಳ್ಳಾಲ ಠಾಣೆಗೆ ನೀಡಿರುವ ದೂರಿನಲ್ಲಿ ಪ್ರಭಾವತಿ, ಸಂದೀಪ್ ಆರಿಕ್ಕಾಡಿ, ಶುಭಂ, ಬೇಬಿ ಎಂಬವರ ಹೆಸರನ್ನು ಉಲ್ಲೇಖಿಸಿದ್ದು ಇವರ ಚಿತಾವಣೆಯಿಂದಲೇ ನನ್ನ ತಮ್ಮ ಲೋಕೇಶ್ ಸಾವಿಗೆ ಶರಣಾಗಿದ್ದಾರೆಂದು ತಿಳಿಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಇವರ ವಿರುದ್ಧ ಎಫ್ಐಆರ್ ದಾಖಲಾಗಿದೆ
Posted by Vidyamaana on 2024-02-27 15:54:22 |
ಪುತ್ತೂರು: ಪುರುಷರಕಟ್ಟೆ ಟೈ ಬ್ರೇಕರ್ಸ್ ನೇತೃತ್ವದಲ್ಲಿ ಮತ್ತು ಪ್ರಕಾಶ್ ಪುರುಷರಕಟ್ಟೆ ಸಾರಥ್ಯದಲ್ಲಿ ನರಿಮೊಗರು ಶಾಲಾ ಮೈದಾನದಲ್ಲಿ ಫೆ. 24, 25ರಂದು ನಡೆದ 25ನೇ ವರ್ಷದ ಹೊನಲು ಬೆಳಕಿನ ಟಿಪಿಎಲ್ ಟೈ ಬ್ರೇಕರ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಫ್ರೆಂಡ್ಸ್ ಸರ್ಕಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
2 ದಿನಗಳ ಪಂದ್ಯ ಅದ್ಭುತವಾಗಿ ಮೂಡಿಬಂದಿದ್ದು, ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಿತ್ತು. ತುಳುನಾಡ ಚಕ್ರವರ್ತಿ ತಂಡ ರನ್ನರ್ಸ್ ಆಗಿ ಮೂಡಿಬಂತು. ಪ್ರಥಮ ಬಹುಮಾನವಾಗಿ 50 ಸಾವಿರ ರೂ. ಹಾಗೂ ದ್ವಿತೀಯ ಬಹುಮಾನವಾಗಿ 25 ಸಾವಿರ ರೂ.ವನ್ನು ನೀಡಲಾಯಿತು. ಗೆದ್ದ ತಂಡದ ಮಾಲಕ ಅನ್ಸರ್ ಪುರುಷರಕಟ್ಟೆ ಅವರಿಗೆ ಫ್ರಿಡ್ಜ್ ಅನ್ನು ಕೊಡುಗೆಯಾಗಿ ನೀಡಿ ಗೌರವಿಸಲಾಯಿತು.
ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಮಸೂದ್ ಮುಕ್ವೆ ಪಂದ್ಯದುದ್ದಕ್ಕೂ ಪ್ರೇಕ್ಷಕರ ಗಮನ ಸೆಳೆದರು. ಬೆಸ್ಟ್ ಕ್ಯಾಪ್ಟನ್, ಬೆಸ್ಟ್ ಬ್ಯಾಟ್ಸ್ ಮನ್, ಬೆಸ್ಟ್ ಬೌಲರ್, ಬೆಸ್ಟ್ ಕೀಪರ್ ಹೀಗೆ ತಂಡವನ್ನು ಮುನ್ನಡೆಸುವಲ್ಲಿ ಆಲ್ ರೌಂಡರ್ ಆಗಿ ಕಾರ್ಯನಿರ್ವಹಿಸಿದರು. ಸಮಯ ಹಾಗೂ ಸಂದರ್ಭಕ್ಕೆ ತಕ್ಕಂತೆ ಎಲ್ಲಾ ವಲಯಗಳಲ್ಲೂ ತನ್ನ ಛಾಪು ಮೂಡಿಸಿ, ಸರಣಿ ಶ್ರೇಷ್ಠ ಎನಿಸಿಕೊಂಡರು.
ಆಬೀದ್ ರೆಂಜಲಾಡಿ ಅಂಡರ್ ಗ್ರೌಂಡ್ ನಲ್ಲಿ ಬೆಸ್ಟ್ ಬೌಲರ್, ಇಸ್ಮಾಯಿಲ್ ರೆಂಜಲಾಡಿ ಅಂಡರ್ ಗ್ರೌಂಡ್ ನಲ್ಲಿ ಬೆಸ್ಟ್ ಬ್ಯಾಟ್ಸ್ ಮನ್, ಬಾತಿ ಐ.ಬಿ. ಉತ್ತಮ ಫೀಲ್ಡರ್, ಸಾಸ್ಸಾ ಉತ್ತಮ ಕೀಪರ್, ಜಂಜಿರ್ ಕೊಡ್ನೀರ್ ಉತ್ತಮ ಹಿಡಿತಗಾರ, ಸಂದೀಪ್ ಎನರ್ಜಿಕ್ ಪ್ಲೇಯರ್ ಪ್ರಶಸ್ತಿಯನ್ನು ಪಡೆದುಕೊಂಡರು.
Posted by Vidyamaana on 2023-09-10 18:31:35 |
ತಿರುವನಂತಪುರಂ: ಪ್ರಸಿದ್ಧ ಧಾರ್ಮಿಕ ಕೇಂದ್ರ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಅನುಸರಿಸಿದ 41 ದಿನಗಳ ವ್ರತವನ್ನು ಕೈಗೊಂಡುದಕ್ಕೆ ಕೇರಳದ ಕ್ರಿಶ್ಚಿಯನ್ ಪಾದ್ರಿಯೊಬ್ಬರು ಧಾರ್ಮಿಕ ಸೇವೆಗಳನ್ನು ನಿರ್ವಹಿಸುವುದಕ್ಕಾಗಿ ಚರ್ಚ್ ನೀಡಿದ್ದ ಪರವಾನಗಿಯನ್ನೇ ಹಿಂದಿರುಗಿಸಿ ಸುದ್ದಿಯಾಗಿದ್ದಾರೆ.
ಆಂಗ್ಲಿಕನ್ ಚರ್ಚ್ ಆಫ್ ಇಂಡಿಯಾದಲ್ಲಿ ಪಾದ್ರಿಯಾಗಿರುವ ರೆವ್ ಮನೋಜ್ ಕೆ.ಜಿ. ಅವರು ಈ ತಿಂಗಳ ಕೊನೆಯಲ್ಲಿ ದೇವಾಲಯಕ್ಕೆ ತೀರ್ಥಯಾತ್ರೆಗೆ ಹೋಗುವ ಸಲುವಾಗಿ 41 ದಿನಗಳ ಸಾಂಪ್ರದಾಯಿಕ ವ್ರತವನ್ನು ಆಚರಿಸುತ್ತಿದ್ದಾರೆ. ಚರ್ಚ್ಗೆ ಈ ಬಗ್ಗೆ ತಿಳಿದಾಗ, ಇಂತಹ ನಡವಳಿಕೆಯು ಸ್ವೀಕಾರಾರ್ಹವಲ್ಲ ಎಂದು ಆಕ್ಷೇಪಿಸಿದೆ.
ನಾನು ಕ್ರಿಶ್ಚಿಯನ್ ಸಿದ್ಧಾಂತಗಳು ಮತ್ತು ನಿಯಮಗಳನ್ನು ಉಲ್ಲಂಘಿಸಿದ್ದೇನೆ ಎಂದು ನನ್ನಿಂದ ವಿವರಣೆಯನ್ನು ಕೇಳಿದರು. ವಿವರಣೆಯನ್ನು ನೀಡುವ ಬದಲು, ನಾನು ಪಾದ್ರಿಯಾದಾಗ ಸ್ವೀಕರಿಸಿದ, ಚರ್ಚ್ ನನಗೆ ನೀಡಿದ ಗುರುತಿನ ಚೀಟಿ ಮತ್ತು ಪರವಾನಗಿಯನ್ನು ಹಿಂದಿರುಗಿಸಿದೆ” ಎಂದು ಮನೋಜ್ ಕೆ.ಜಿ. ಪಿಟಿಐಗೆ ತಿಳಿಸಿದ್ದಾರೆ.
ತಾನು ಮಾಡಿದ್ದು ಆಂಗ್ಲಿಕನ್ ಚರ್ಚ್ ಆಫ್ ಇಂಡಿಯಾದ ನಿಯಮಗಳು ಮತ್ತು ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ನನ್ನ ಕೆಲಸವು ಚರ್ಚ್ನ ಸಿದ್ಧಾಂತಗಳನ್ನು ಆಧರಿಸಿಲ್ಲ, ಬದಲಿಗೆ ಅದು “ಲಾರ್ಡ್ಸ್” ಸಿದ್ಧಾಂತಗಳನ್ನು ಆಧರಿಸಿದೆ ಎಂದು ಮನೋಜ್ ಹೇಳಿದ್ದಾರೆ.
“ದೇವರು ಪ್ರತಿಯೊಬ್ಬರನ್ನು ಅವರ ಜಾತಿ, ಮತ, ಧರ್ಮ ಅಥವಾ ನಂಬಿಕೆಗಳನ್ನು ಲೆಕ್ಕಿಸದೆ ಪ್ರೀತಿಸುವಂತೆ ಕೇಳಿಕೊಂಡಿದ್ದಾನೆ. ಇತರರನ್ನು ಪ್ರೀತಿಸುವುದು ಅವರ ಚಟುವಟಿಕೆಗಳಲ್ಲಿ ಸೇರುವುದನ್ನು ಒಳಗೊಂಡಿರುತ್ತದೆ. ಆದ್ದರಿಂದ ನೀವು ಚರ್ಚ್ ಸಿದ್ಧಾಂತ ಅಥವಾ ದೇವರ ಸಿದ್ಧಾಂತವನ್ನು ಅನುಸರಿಸಲು ಬಯಸುತ್ತೀರಾ ಎಂದು ನಿರ್ಧರಿಸಬಹುದು.ನೀವು ದೇವರನ್ನು ಪ್ರೀತಿಸುತ್ತೀರಾ ಅಥವಾ ಚರ್ಚ್ ಅನ್ನು ಪ್ರೀತಿಸುತ್ತೀರಾ, ನೀವು ನಿರ್ಧರಿಸಬಹುದು. ‘ಚರ್ಚ್’ ಎಂದರೆ ಸಾಂಪ್ರದಾಯಿಕ, ನಿರ್ಮಿತ ಪದ್ಧತಿಗಳು” ಎಂದು 41 ದಿನಗಳ ವ್ರತ ಕೈಗೊಳ್ಳುವ ನಿರ್ಧಾರವನ್ನು ಟೀಕಿಸಿದವರಿಗೆ ಫೇಸ್ಬುಕ್ನಲ್ಲಿ ಸ್ಪಷ್ಟವಾದ ವಿಡಿಯೋ ಪ್ರತಿಕ್ರಿಯೆ ನೀಡಿದ್ದಾರೆ.
ಮನೋಜ್ ಪಾದ್ರಿಯಾಗುವ ಮೊದಲು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರು.ಆಧ್ಯಾತ್ಮಿಕ ಬೋಧನೆಗಳಿಗೆ ಅಧಿಕೃತತೆಯನ್ನು ನೀಡುವ ಸಲುವಾಗಿ ಅವರು ಪಾದ್ರಿಯಾದೆ ಎಂದು ಹೇಳಿದರು
Posted by Vidyamaana on 2023-07-22 02:33:54 |
ಪುತ್ತೂರು: ನಗರಸಭೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರದ (PUDA) ಕಚೇರಿ ಶಿಫ್ಟ್ ಆಗಿದೆ. ಹಿಂದಿನ ಸಹಾಯಕ ಆಯುಕ್ತರ ಕಚೇರಿಯಿದ್ದ ಜಾಗದಿಂದ ಕುಂಬಾರರ ಗುಡಿ ಕೈಗಾರಿಕೆಯ ಕಟ್ಟಡಕ್ಕೆ ಪುಡಾ ಕಚೇರಿಯನ್ನು ಸ್ಥಳಾಂತರಿಸಲಾಗಿದೆ. ಕಚೇರಿ ಸ್ಥಳಾಂತರವಾಗಲು ಕಾರಣ ಏನು ಗೊತ್ತೇ?
ನೂತನ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್ ಕುಮಾರ್ ರೈ ಅವರಿಗೆ ನೂತನ ಕಚೇರಿಯ ತಲಾಶ್ ವಿಚಾರ ಸುದ್ದಿಯಾಗಿತ್ತು. ಇದೀಗ ನೂತನ ಕಚೇರಿ ದೊರಕಿದೆ. ಅದರ ಕಾಮಗಾರಿಯೂ ನಡೆಯುತ್ತಿದೆ. ಪ್ರಶಸ್ತವಾದ, ಸಾಕಷ್ಟು ಸ್ಥಳಾವಕಾಶ ಹೊಂದಿರುವ ಈ ಕಟ್ಟಡ ಶಾಸಕರ ಕಚೇರಿಗೆ ಸೂಕ್ತ ಜಾಗ. ಈ ಹಿನ್ನೆಲೆಯಲ್ಲಿ ಇಲ್ಲಿದ್ದ ಪುಡಾ ಕಚೇರಿಯನ್ನು ಮುಂಭಾಗದಲ್ಲೇ ಇರುವ ಕುಂಬಾರರ ಗುಡಿ ಕೈಗಾರಿಕಾ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಕುಂಬಾರರ ಗುಡಿ ಕೈಗಾರಿಕಾ ಕಟ್ಟಡದ ಏರಡನೇ ಮಹಡಿಯಲ್ಲಿ ಪುಡಾ ಕಚೇರಿ ಸದ್ಯ ಕಾರ್ಯನಿರ್ವಹಿಸುತ್ತಿದೆ. ತಿಂಗಳುಗಳ ಹಿಂದೆಯೇ ಪುಡಾ ಕಚೇರಿ ಶಿಫ್ಟ್ ಆಗಿದ್ದು, ಹಿಂದಿನ ಕಚೇರಿ ಮುಂಭಾಗ ಶಿಫ್ಟ್ ಆದ ಬಗ್ಗೆ ಬೋರ್ಡ್ ಹಾಕಲಾಗಿದೆ.
Posted by Vidyamaana on 2023-11-03 22:30:47 |
ಸುಳ್ಯ : ಕೆಲ ಸಮಯದ ಹಿಂದೆ ಸುರಿದ ಭಾರೀ ಮಳೆಗೆ ಏಕಾಏಕಿ ಭೂಮಿ ಕುಸಿದು ಬೃಹತ್ ಹೊಂಡ ನಿರ್ಮಾಣವಾದ ಘಟನೆ ಪರಿವಾರಕಾನ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗ ನಡೆದಿದ್ದು, ಸಮೀಪವಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ ಧರೆಗುರುಳಿದೆ.
ಕುಸಿದ ಭೂಮಿ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ಫಾರ್ಮರ್ ಧರಾಶಾಹಿ - ಇಲ್ಲಿದೆ ನೋಡಿ ವೀಡಿಯೋ
ಸುಮಾರು ಹತ್ತು ಅಡಿಯಷ್ಟು ಉದ್ದಕ್ಕೆ ಗುಂಡಿ ನಿರ್ಮಾಣವಾಗಿದ್ದು, ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ ಬೀಳುವ ಹಂತಕ್ಕೆ ತಲುಪಿತ್ತು. ಹೊಂಡ ನಿರ್ಮಾಣವಾದ ಸ್ವಲ್ಪ ಸಮಯದ ಬಳಿಕ ವಿದ್ಯುತ್ ಟ್ರಾನ್ಸ್ಫಾರ್ಮರ್ ನೆಲಕ್ಕುರುಳಿದೆ.
ಘಟನೆಯಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
Posted by Vidyamaana on 2023-03-26 04:30:14 |
ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿರುವ ಆಯುಷ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಪ್ರಕೃತಿ ಚಿಕಿತ್ಸಾ ವಿಭಾಗ ಆರಂಭಿಸಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಹೇಳಿದ್ದಾರೆ.
ಮಾರ್ಚ್ 25ರ ಶನಿವಾರ ನಗರದ ವೆನ್ಲಾಕ್ ಆಯುಷ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 20 ಲಕ್ಷ ರೂ. ವೆಚ್ಚದ ಅತ್ಯಾಧುನಿಕ ನ್ಯಾಚುರೋಪತಿ ಉಪಕರಣಗಳ ಹಸ್ತಾಂತರ ಮತ್ತು ನೂತನ ಪ್ರಕೃತಿ ಚಿಕಿತ್ಸಾ ವಿಭಾಗಕ್ಕೆ ಚಾಲನೆ ನೀಡಿ ಅವರು ಶನಿವಾರ ಮಾತನಾಡಿದರು.
ಮುಂಬರುವ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಪ್ರದೇಶಗಳಾದ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಆಸ್ಪತ್ರೆಗಳಲ್ಲೂ ಪ್ರಕೃತಿ ಚಿಕಿತ್ಸೆ ಆರಂಭಿಸಲು ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ಹಾಗೂ ನೆರವು ನೀಡಲಾಗುವುದು ಎಂದವರು ಹೇಳಿದರು.ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಪ್ರಕೃತಿ ಚಿಕಿತ್ಸೆಗೆ ಅನುಕೂಲವಾಗಬೇಕಾದ ಭೂಮಿ ಮತ್ತು ಮೂಲ ಸೌಲಭ್ಯಕ್ಕೆ ಜಿಲ್ಲಾಡಳಿತ ಸಹಕಾರ ನೀಡಲಿದೆ ಎಂದ ಅವರು, ಇತ್ರೀಚೆಗೆ ಆಯುರ್ವೇದ, ನ್ಯಾಚುರೋಪತಿ, ಯುನಾನಿ ಚಿಕಿತ್ಸೆಗೆ ಹೆಚ್ಚಿನ ಬೇಡಿಕೆ ಇದೆ. ಸರ್ಕಾರಿ ಆಯುಷ್ ಆಸ್ಪತ್ರೆಯೊಂದರಲ್ಲಿ ಸುಸಜ್ಜಿತವಾದ ಪ್ರಕೃತಿ ಚಿಕಿತ್ಸಾ ವಿಭಾಗ ಆರಂಭಿಸಿರುವುದು ನಗರದ ಬಡ ರೋಗಿಗಳಿಗೆ ವರವಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರಿಗೂ ಈ ಸೌಲಭ್ಯ ದೊರೆಯಬೇಕು. ಇದಕ್ಕಾಗಿ ತಾಲೂಕು ಮಟ್ಟದಲ್ಲಿ ಕಟ್ಟಡ, ಮೂಲ ಸೌಲಭ್ಯ ಒದಗಿಸಲಾಗುವುದು ಎಂದರು.
ಆಯುಷ್ ಆಸ್ಪತ್ರೆಗೆ ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ (ಎಂಸಿಎಫ್) ಸುಮಾರು 20 ಲಕ್ಷ ರೂ. ಮೌಲ್ಯದ ಅತ್ಯಾಧುನಿಕ ಪ್ರಕೃತಿ ಚಿಕಿತ್ಸೆ ಸಂಬಂಧಿತ ಉಪಕರಣಗಳನ್ನು ಒದಗಿಸಿದೆ. ಈ ಮೂಲಕ ಎಂಸಿಎಫ್ ಸಿಎಸ್ಆರ್ ನಿಧಿ ಉತ್ತಮ ಕಾರ್ಯಕ್ಕೆ ವಿನಿಯೋಗವಾಗಿದೆ ಎಂದು ಜಿಲ್ಲಾಧಿಕಾರಿಯವರು ಅಭಿಪ್ರಾಯಪಟ್ಟರು.
Posted by Vidyamaana on 2024-05-11 10:16:42 |
ಮೈಸೂರು:ಮೈಸೂರಿನ ಕೆ.ಆರ್.ನಗರದ ವೃದ್ಧೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮೂರನೇ ಪ್ರಕರಣ ದಾಖಲಾಗಿದೆ.
ಮೈಸೂರಿನ ಹುಣಸೂರು ತಾಲೂಕಿನ ಕಾಳೇನಹಳ್ಳಿಯ ತೋಟದ ಮನೆಯಲ್ಲಿ ಯುವತಿಯ ಅಪಹರಣಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ರೇವಣ್ಣ ಅವರ ತಂದೆ ಹಾಗೂ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರನ್ನು ಈಗಾಗಲೇ ಬಂಧಿಸಲಾಗಿದೆ.