Posted by vidyamaana on 2024-06-30 21:58:04 |
ಉಪ್ಪಿನಂಗಡಿ: ಕಡಬ ತಾಲ್ಲೂಕು ಕೊಯಿಲ ಗ್ರಾಮದ ಕೆಮ್ಮಾರ ಎಂಬಲ್ಲಿ ಭಾನುವಾರ ಮನೆಯೊಳಗೆ ಬೆಂಕಿ ಹೊತ್ತಿಕೊಂಡು ಮನೆಯ ಒಳ ಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮನೆ ಭಾಗಶಃ ಹಾನಿಗೊಂಡಿದ್ದು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೆಮ್ಮಾರ ಶಾಲೆ ಬಳಿಯ ನಿವಾಸಿ ದಿ.ಇಬ್ರಾಹಿಂ ಎಂಬುವರ ಪುತ್ರ ಅಬ್ದುಲ್ ರಹಿಮಾನ್ ಅವರ ಮನೆಯಲ್ಲಿ ಅವಘಡ ಸಂಭವಿಸಿದೆ.
ಮನೆಯ ಮಾಸ್ಟರ್ ಬೆಡ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯೊಳಗೆ ಆವರಿಸಿದೆ. ಮನೆಯೊಳಗೆ ಇದ್ದ ಕಪಾಟು, ಮಂಚ, ಕಿಟಕಿ, ಬಾಗಿಲು, ಫ್ರಿಜ್, ವಾಷಿಂಗ್ ಮೆಸಿಷಿನ್, ಬಟ್ಟೆಗಳು, ಗೃಹೋಪಯೋಗಿ ವಸ್ತುಗಳು, ಆಹಾರ ಸಾಮಗ್ರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಬೆಂಕಿಯ ತಾಪಕ್ಕೆ 2 ಕಡೆ ಗೋಡೆ ಬಿರುಕು ಬಿಟ್ಟಿದೆ. ಬೆಂಕಿ ಕಾಣಿಸಿಕೊಂಡ ಕೋಣೆಯಲ್ಲಿ ಗ್ರಾನೈಟ್ ಮತ್ತು ಅಡುಗೆ ಕೋಣೆಯಲ್ಲಿ ನೆಲದ ಟೈಲ್ಸ್ ಸಿಡಿದಿದೆ. ಇದರಿಂದಾಗಿ ಸುಮಾರು ₹ 35 ಲಕ್ಷ ನಷ್ಟ ಉಂಟಾಗಿದೆ ಎಂದು ಅಬ್ದುಲ್ ರಹಿಮಾನ್ ಅವರು ಕಂದಾಯ ಇಲಾಖೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮನೆಯಲ್ಲಿ ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ಮಾತ್ರ ಇದ್ದು, ಮನೆಯೊಳಗೆ ಹೊಗೆ ತುಂಬುವುದನ್ನು ಗಮನಿಸಿ ಮನೆಯಿಂದ ಹೊರ ಬಂದು ಬೊಬ್ಬೆ ಹಾಕಿ ಪಕ್ಕದ ಮನೆಯವರನ್ನು ಕರೆದಿದ್ದಾರೆ. ಪಕ್ಕದ ಮನೆಯವರು ಸ್ಥಳೀಯರಿಗೆ ಕರೆ ಮಾಡಿದ್ದಾರೆ. ಅಬ್ದುಲ್ ರಹಿಮಾನ್, ಪತ್ನಿ, ಮಕ್ಕಳು ಪತ್ನಿಯ ತವರು ಮನೆಗೆ ಹೋಗಿದ್ದರು. ವರ್ಷದ ಹಿಂದೆ ಮನೆ ನಿರ್ಮಿಸಲಾಗಿತ್ತು.
ಬೆಂಕಿ ಅವಘಡದ ಮಾಹಿತಿ ತಿಳಿದ ಸಾಮಾಜಿಕ ಕಾರ್ಯಕರ್ತರಾದ ಸಲೀಕತ್, ಅಬೂಬಕ್ಕರ್, ರಿಯಾಝ್, ಜುನೈದ್ ಮನೆಯೊಳಗೆ ಪ್ರವೇಶಿಸಿ
ವಿದ್ಯುತ್ ಸಂಪರ್ಕ, ಗ್ಯಾಸ್ ಸಂಕರ್ಪ ಕಡಿತಗೊಳಿಸಿದರು. ಪುತ್ತೂರಿನಿಂದ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು.
ಘಟನಾ ಸ್ಥಳಕ್ಕೆ ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್, ಸದಸ್ಯ ನಝೀರ್ ಪೂರಿಂಗ, ಆತೂರು ಬದ್ರಿಯಾ ಮಸೀದಿ ಖತೀಬ್ ಜುನೈದ್ ಜಿಫ್ರಿ ತಂಙಳ್ ಭೇಟಿ ನೀಡಿದರು. ಕೊಯಿಲ ಗ್ರಾಮಕರಣಿಕ ಶೇಷಾದ್ರಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ನಾನು ಕೋಣೆಯೊಂದರಲ್ಲಿ ಕೆಲಸದಲ್ಲಿ ನಿರತಳಾಗಿದ್ದೆ. ತುಂತುರು ಮಳೆಯಾಗುತ್ತಿತ್ತು. ಭಾರಿ ಸಿಡಿಲಿನ ಶಬ್ದ ಕೇಳಿಸಿತ್ತು. ಸ್ವಲ್ಪ ಹೊತ್ತಿನ ಬಳಿಕ ಮನೆಯೊಳಗೆ ಹೊಗೆ ತುಂಬತೊಡಗಿತು. ಮನೆಯಿಂದ ಹೊರ ಬರುವುದಕ್ಕೂ ದಾರಿ ಕಾಣುತ್ತಿರಲಿಲ್ಲ ಎಂದು ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ತಿಳಿಸಿದರು.
ಉಪ್ಪಿನಂಗಡಿ ಸಮೀಪದ ಕೆಮ್ಮಾರದಲ್ಲಿ ಮನೆ ಭಾಗಶಃ ಬೆಂಕಿಗೆ ಆಹುತಿಯಾಗಿದ್ದು ಕಂದಾಯ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು
Posted by Vidyamaana on 2024-05-22 15:54:19 |
ಬೆಂಗಳೂರು : ಸಿಟಿ ರೌಂಡ್ಸ್ ಗೆ ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬೆಂಗಳೂರು ನಗರವಾಸಿಗಳು ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಯಶಸ್ವೀ ಜಾರಿ ಬಗ್ಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು.ಸಮಸ್ಯೆಗಳನ್ನು ಆಲಿಸುತ್ತ ಸಿಎಂ ಗೆ ಸಾರ್ವಜನಿಕರು ಮುಗಿಬಿದ್ದು ಗ್ಯಾರಂಟಿ ಯೋಜನೆಗಳಿಂದ ತಮ್ಮ ಕುಟುಂಬಗಳಿಗೆ ಆಗಿರುವ ಅನುಕೂಲಗಳನ್ನು ವಿವರಿಸಿ ಅಭಿನಂದಿಸಿದರು.
Posted by Vidyamaana on 2023-08-06 09:31:21 |
ಬೆಂಗಳೂರು : ಮೊಬೈಲ್ ಫೋನ್ ನಮಗೆ ಬಹಳ ಮುಖ್ಯವಾದ ದೈನಂದಿನ ಅಂಶವಾಗಿದೆ. ನಾವು ಒಂದು ದಿನವೂ ಮೊಬೈಲ್ ಇಲ್ಲದೆ ಇರಲು ಸಾಧ್ಯವಿಲ್ಲ. ಮೊಬೈಲ್ ಇಲ್ಲದೇ ಹೋದರೆ ನಮ್ಮ ಹಲವು ಕೆಲಸಗಳು ಸ್ಥಗಿತಗೊಳ್ಳುತ್ತವೆ. ನಾವು ನಮ್ಮ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಕೆಲಸಕ್ಕೆ ಮೊಬೈಲ್ ಅನ್ನು ಅವಲಂಬಿಸಿರುತ್ತೇವೆ.ಆದರೆ, ಹಲವು ಬಾರಿ ಮೊಬೈಲ್ ಚಾರ್ಜ್ ಆಗದೇ ಇರುವುದರಿಂದ ಸಮಸ್ಯೆ ಹೆಚ್ಚುತ್ತದೆ. ಕೆಲವೊಮ್ಮೆ ಫೋನ್ ಚಾರ್ಜಿಂಗ್ ತುಂಬಾ ನಿಧಾನವಾಗಿರುತ್ತದೆ. ಆದರೆ, ಒಂದು ಉಪಾಯದಿಂದ ನೀವು ನಿಮ್ಮ ಮೊಬೈಲ್ ಅನ್ನು ವೇಗವಾಗಿ ಚಾರ್ಜ್ ಮಾಡಬಹುದು. ನಿಮ್ಮ ಫೋನ್ನ ಸೆಟ್ಟಿಂಗ್ನಲ್ಲಿ ಬದಲಾವಣೆ ಮಾಡುವ ಮೂಲಕ, ಕೆಲವೇ ನಿಮಿಷಗಳಲ್ಲಿ ನಿಮ್ಮ ಫೋನ್ ಅನ್ನು ನೀವು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಅದೇಗೆ ಅಂತಾ ಇಲ್ಲಿ ನೋಡೋಣ ಬನ್ನಿ.
ಫೋನ್ನ ಈ ಸೆಟ್ಟಿಂಗ್ನಿಂದ ವೇಗವಾಗಿ ಹೀಗೆ ಚಾರ್ಜ್ ಮಾಡಿ
1. ಮೊದಲು ಫೋನ್ ಸೆಟ್ಟಿಂಗ್ನಲ್ಲಿ ʻAbout phoneʼಗೆ ಹೋಗಿ.
2. ಇಲ್ಲಿ ಕೆಳಭಾಗದಲ್ಲಿ ನೀವು ʻBuild numberʼಅನ್ನು 7-8 ಬಾರಿ ಟ್ಯಾಪ್ ಮಾಡಬೇಕು.
3. ಇದರ ನಂತರ ʻDeveloper optionsʼ ಬರುತ್ತವೆ. ಈ ಆಯ್ಕೆಯಲ್ಲಿ ಫೋನ್ಗೆ ಸಂಬಂಧಿಸಿದ ಹಲವುರಹಸ್ಯ ಸೆಟ್ಟಿಂಗ್ಗಳಿವೆ.
4. ಈಗ ʻDeveloper optionsʼಅನ್ನು ತೆರೆಯಿರಿ.
5. ʻDeveloper optionsʼನಲ್ಲಿ ಕೆಳಭಾಗದಲ್ಲಿರುವ ʻNetworkingʼ ಆಯ್ಕೆಯಲ್ಲಿ ʻSelect USB configurationʼ ಅನ್ನು ಆಯ್ಕೆಮಾಡಿ ಆಯ್ಕೆಯನ್ನು ತೆರೆಯಿರಿ.
6. ಇದರಲ್ಲಿ MTP ಸ್ವಯಂ ಆಯ್ಕೆಯಾಗಿದೆ, ಅಲ್ಲಿಂದ ನೀವು ʻChargingʼಅನ್ನು ಆಯ್ಕೆ ಮಾಡಬೇಕು.
7. ಚಾರ್ಜಿಂಗ್ ಅನ್ನು ಆಯ್ಕೆ ಮಾಡಿದ ನಂತರ, ಫೋನ್ ಮೊದಲಿಗಿಂತ ವೇಗವಾಗಿ ಚಾರ್ಜ್ ಮಾಡಲು ಪ್ರಾರಂಭಿಸುತ್ತದೆ.
Posted by Vidyamaana on 2024-04-15 07:27:18 |
ಮುಂಬೈ (ಪಿಟಿಐ): ಮಥೀಷ ಪಥಿರಾಣ (4-0-28-4) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ಮುಂದೆ ರೋಹಿತ್ ಶರ್ಮಾ (ಔಟಾಗದೆ 105; 63ಎ, 4x11, 6x5) ಅವರ ಶತಕದ ಆಟ ಮಸುಕಾಯಿತು. ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಋತುರಾಜ್ ಗಾಯಕವಾಡ ಮತ್ತು ಶಿವಂ ದುಬೆ ಅವರ ಅರ್ಧಶತಕಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ರನ್ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತು.
207 ರನ್ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಮುಂಬೈ ತಂಡಕ್ಕೆ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸಿದರು. ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 7 ಓವರ್ಗಳಲ್ಲಿ 70 ರನ್ ಸೇರಿಸಿದ್ದರು. ಈ ಹಂತದಲ್ಲಿ ಪಥಿರಾಣ ಆತಿಥೇಯ ತಂಡಕ್ಕೆ ಮೊದಲ ಆಘಾತ ನೀಡಿದರು. ಹಿಂದಿನ ಪಂದ್ಯದಲ್ಲಿ ಅರ್ಧಶತಕಗಳ ಮೂಲಕ ಮಿಂಚಿದ್ದ ಇಶಾನ್ (23) ಮತ್ತು ಸೂರ್ಯಕುಮಾರ್ ಯಾದವ್ (0) ಅವರ ವಿಕೆಟ್ ಪಡೆದರು.
ಮೂರನೇ ವಿಕೆಟ್ ಜೊತೆಯಾಟದಲ್ಲಿ ರೋಹಿತ್ ಅವರು ತಿಲಕ್ ವರ್ಮಾ (31) ಅವರೊಂದಿಗೆ 60 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿ ಗೆಲುವಿನ ಆಸೆಯನ್ನು ಚಿಗುರಿಸಿದರು. ಆದರೆ, ಮತ್ತೆ ಪಥಿರಾಣ ದಾಳಿಗಿಳಿದು ತಿಲಕ್ ವರ್ಮಾ ಅವರನ್ನು ಔಟ್ ಮಾಡಿದರು. ನಂತರ ಬಂದ ನಾಯಕ ಹಾರ್ದಿಕ್ ಪಾಂಡ್ಯ (2), ಟಿಮ್ ಡೇವಿಡ್ (13), ರೊಮಾರಿಯೋ ಶೆಫರ್ಡ್ (1) ಮತ್ತೆ ವೈಫಲ್ಯ ಅನುಭವಿಸಿದರು. ಒಂದೆಡೆ ರೋಹಿತ್ ಏಕಾಂಗಿಯಾಗಿ ಹೋರಾಟ ನಡೆಸಿದರೂ ಅವರಿಗೆ ಉಳಿದ ಆಟಗಾರರಿಂದ ನಿರೀಕ್ಷಿತ ಬೆಂಬಲ ದೊರೆಯಲಿಲ್ಲ. ಅವರು ಕೊನೆಯ ಓವರ್ನಲ್ಲಿ ಬೌಂಡರಿ ಬಾರಿಸಿ ಶತಕವನ್ನು ಪೂರೈಸಿದರು. ತಂಡವು 20 ಓವರ್ಗಳಲ್ಲಿ 6 ವಿಕೆಟ್ಗೆ 186 ರನ್ ಗಳಿಸಲಷ್ಟೇ ಶಕ್ತವಾಯಿತು. ತುಷಾರ್ ದೇಶಪಾಂಡೆ ಮತ್ತು ಮುಸ್ತಫಿಜುರ್ ರೆಹಮಾನ್ ತಲಾ ಒಂದು ವಿಕೆಟ್ ಪಡೆದರು.
Posted by Vidyamaana on 2024-05-09 11:21:42 |
ಬೆಂಗಳೂರು : ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅವರು ಮಾತನಾಡಿ 2023-24 ನೇ ಸಾಲಿನಲ್ಲಿ ಶೇ 76.91ರ ವಿದ್ಯಾರ್ಥಿಗಳು ಪಾಸಾಗಿದ್ದಾರೆ ಅಂತ ತಿಳಿಸಿದರು.ಇನ್ನೂ ಈ ಬಾರಿ ಮೂರು ಬಾರಿ ಎಕ್ಸಾಂ ಬರೆಯುವುದಕ್ಕೆ ಅವಕಾಶ ನೀಡಲಾಗಿದ್ದು, ಅಂತಿಮವಾಗಿ ಹೆಚ್ಚಿನ ಅಂಕ ತೆಗೆದುಕೊಂಡದನ್ನು ಅಂತಿಮವಾಗಿ ಗಣನೆಗೆ ತೆಗೆದುಕೊಳ್ಳಲಾಗುವುದು ಅಂತ ಹೇಳಿದರು.
Posted by Vidyamaana on 2023-06-11 13:28:40 |
ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈ ಮೂಲದ ನವವಿವಾಹಿತ ಜೋಡಿಯೊಂದು ಹನಿಮೂನ್ ಪ್ರವಾಸದ ವೇಳೆ ದುರಂತ ಸಾವಿಗೀಡಾಗಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.ಮೃತರನ್ನು ಡಾ. ಲೋಕೇಶ್ವರನ್ ಮತ್ತು ಡಾ. ವಿಬುಷ್ನಿಯಾ ಎಂದು ಗುರುತಿಸಲಾಗಿದೆ.ಇಬ್ಬರು ಕೂಡ ವೈದ್ಯರಾಗಿದ್ದರು. ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಹನಿಮೂನ್ಗೆಂದು ಇಂಡೋನೇಷ್ಯಾದ ಬಾಲಿ ದ್ವೀಪಕ್ಕೆ ತೆರಳಿದ್ದರು. ಫೋಟೋಗೆ ಪೋಸ್ ಕೊಡುವ ವೇಳೆ ಇಬ್ಬರು ನೀರುಪಾಲಾಗಿದ್ದಾರೆ.ಜೂನ್ 1ರಂದು ಮದುವೆಯಾದ ಲೋಕೇಶ್ವರನ್ ಮತ್ತು ವಿಬುಷ್ನಿಯಾ ತಮ್ಮ ಹೊಸ ಪ್ರಯಾಣವನ್ನು ಒಟ್ಟಿಗೆ ಆಚರಿಸಲು ಇಂಡೋನೇಷ್ಯಾಕ್ಕೆ ತೆರಳಿದ್ದರು. ಅನೇಕ ಜೋಡಿಗಳಂತೆ, ಅವರು ಕೂಡ ಸುಂದರವಾದ ನೆನಪುಗಳನ್ನು ಸೆರೆಹಿಡಿಯಲು ಉತ್ಸುಕರಾಗಿದ್ದರು. ಸಮುದ್ರದಲ್ಲಿ ಮೋಟಾರ್ ಬೋಟ್ನಲ್ಲಿ ಫೋಟೋಶೂಟ್ ಮಾಡಲು ನಿರ್ಧರಿಸಿದರು. ದುರಂತವೆಂದರೆ ಚಿತ್ರೀಕರಣದ ವೇಳೆ ಇಬ್ಬರೂ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಎರಡೂ ಕುಟುಂಬಗಳು ಆಘಾತಕ್ಕೆ ಒಳಗಾಗಿವೆ. ಮಕ್ಕಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ದಂಪತಿ ಮೃತದೇಹಗಳನ್ನು ಹುಟ್ಟೂರಾದ ಚೆನ್ನೈಗೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ