Posted by vidyamaana on 2024-07-03 07:52:29 |
ಕೋಲಾರ: ನಗರ ಹೊರವಲಯದ ಖಾಸಗಿ ಕಾಲೇಜುವೊಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಬಾಲಕಿಯೊಬ್ಬಳು (17) ಅದೇ ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂಬಂಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಯುವಕನನ್ನು ಬಂಧಿಸಲಾಗಿದೆ.ಮುಳಬಾಗಿಲಿನ ಅನಿಲ್ ಕುಮಾರ್ (21) ಬಂಧಿತ ಯುವಕ.ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿಯು ಶ್ರೀನಿವಾಸಪುರ ತಾಲ್ಲೂಕಿನಿಂದ ಕಾಲೇಜಿಗೆ ಬರುತ್ತಿದ್ದಳು. ಸೋಮವಾರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಆಕೆ ಶೌಚಾಲಯಕ್ಕೆ ಹೋಗಿದ್ದಾಳೆ. ಈ ಸಮಯದಲ್ಲಿ ಮಗು ಜನನವಾಗಿದೆ. ಮಗುವಿನ ಅಳು ಸದ್ದು ಕೇಳಿ ಕಕ್ಕಾಬಿಕ್ಕಿಯಾದ ಕಾಲೇಜಿನ ಉಪನ್ಯಾಸಕಿಯರು, ಸಿಬ್ಬಂದಿ ಸ್ಥಳಕ್ಕೆ ಓಡಿ ಹೋಗಿದ್ದಾರೆ. ತಕ್ಷಣವೇ ಸಮೀಪದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ತಾಯಿ ಹಾಗೂ ಮಗುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಉಪನ್ಯಾಸಕರು ಬಾಲಕಿಯ ಪೋಷಕರಿಗೆ ವಿಚಾರ ಮುಟ್ಟಿಸಿದ್ದು, ಅವರೂ ಆಸ್ಪತ್ರೆಗೆ ಬಂದಿದ್ದಾರೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Posted by Vidyamaana on 2023-10-01 07:48:11 |
ಮಂಗಳೂರು: ‘ಬೆಂಗಳೂರಿನ ಅರಮನೆ ಮೈದಾನದಲ್ಲಿ ಮುಂಬರುವ ನ.25 ಮತ್ತು 26ರಂದು ನಡೆಯಲಿರುವ ಕಂಬಳದಲ್ಲಿ 125 ಜೋಡಿಯಿಂದ 130 ಜೋಡಿ ಕೋಣಗಳು ಭಾಗವಹಿಸಲಿವೆ. ಈ ಕೋಣಗಳನ್ನು ನ. 23ರಂದು ಇಲ್ಲಿಂದ ಬೆಂಗಳೂರಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ’ ಎಂದು ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಅಶೋಕ ಕುಮಾರ್ ರೈ ತಿಳಿಸಿದರು.
ಬೆಂಗಳೂರು ಕಂಬಳಕ್ಕೆ ಕೋಣಗಳನ್ನು ಕೊಂಡೊಯ್ಯುವ ಕುರಿತು ಅವುಗಳನ್ನು ಸಾಕುವ ಯಜಮಾನರ ಜೊತೆ ಇಲ್ಲಿ ಶನಿವಾರ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.ಕಂಬಳ ಕೋಣಗಳನ್ನು ಸಾಕುವ 130 ಯಜಮಾನರು ಬೆಂಗಳೂರು ಕಂಬಳದಲ್ಲಿ ಭಾಗವಹಿಸಲು ಸಮ್ಮತಿಸಿದ್ದಾರೆ. ಕೋಣಗಳನ್ನು ಲಾರಿಗಳಲ್ಲಿ ಕೊಂಡೊಯ್ಯಲಾಗುತ್ತದೆ. ಪಶು ಆಂಬುಲೆನ್ಸ್ಗಳು ಹಾಗೂ ಪಶುವೈದ್ಯರು ಜೊತೆಯಲ್ಲೇ ಇರುತ್ತಾರೆ. ಬೆಂಗಾವಲು ವಾಹನಗಳನ್ನೂ ಒದಗಿಸಲಿದ್ದೇವೆ. ಮೆರವಣಿಗೆ ಮೂಲಕ ಸಾಗುವ ಈ ಕೋಣಗಳಿಗೆ ಹಾಸನದಲ್ಲಿ ಎರಡು ಗಂಟೆ ವಿಶ್ರಾಂತಿ ಒದಗಿಸಲಾಗುತ್ತದೆ. ಅಲ್ಲಿ ತುಳುಕೂಟದವರು ಈ ಕೋಣಗಳನ್ನು ಬರಮಾಡಿಕೊಳ್ಳಲಿದ್ದಾರೆ’ ಎಂದರು.
‘ಕೋಣಗಳಿಗೆ ಕಂಬಳಕ್ಕೆ ಮುನ್ನ ಒಂದು ದಿನದ ವಿಶ್ರಾಂತಿ ಸಿಗಲಿದೆ. ಕೋಣಗಳು ಹಾಗೂ ಅವುಗಳ ಯಜಮಾನರು ಉಳಿದುಕೊಳ್ಳುವುದಕ್ಕೆ ಬೆಂಗಳೂರಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕೋಣಗಳಿಗೆ ಕುಡಿಯುವ ನೀರು ಹಾಗೂ ಮೇವುಗಳನ್ನೂ ಇಲ್ಲಿಂದಲೇ ಕೊಂಡೊಯ್ಯಲಾಗುತ್ತದೆ. ಕಂಬಳಕ್ಕೂ ನಾಲ್ಕೈದು ದಿನ ಮುನ್ನವೇ ತಜ್ಞರು ಕರೆ ಯೋಗ್ಯವಾಗಿದೆಯೇ ಎಂಬುದನ್ನು ಪರಿಕ್ಷಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.
ತಾರಾ ಮೆರುಗು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಬಳವನ್ನು ಉದ್ಘಾಟಿಸಲು ಒಪ್ಪಿದ್ದಾರೆ. ಬೆಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಿತ ಅನೇಕ ಸಚಿವರು, ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಬೆಂಗಳೂರು ಕಂಬಳದಲ್ಲಿ ತಾರಾ ಮೆರುಗು ಇರಲಿದೆ. ನಟಿ ಐಶ್ವರ್ಯ ರೈ ಹಾಗೂ ನಟ ರಜನಿಕಾಂತ್ ಅವರನ್ನು ಸಂಪರ್ಕಿಸಲಾಗಿದ್ದು, ಅವರೂ ಭಾಗವಹಿಸುವ ನಿರೀಕ್ಷೆ ಇದೆ.ಬಾಲಿವುಡ್ ಹಾಗೂ ಸ್ಯಾಂಡರ್ವುಡ್ನ ಖ್ಯಾತ ತಾರೆಯರು ಭಾಗವಹಿಸಲಿದ್ದಾರೆ. ನಟ ರಿಷಬ್ ಶೆಟ್ಟಿ, ಅನುಷ್ಕಾ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ ಭಾಗವಹಿಸಲು ಒಪ್ಪಿದ್ದಾರೆ. ಈ ಕಂಬಳದ ನೇರ ಪ್ರಸಾರಕ್ಕೆ ಸ್ಪೋರ್ಟ್ಸ್ ಚಾನೆಲ್ಗಳು ಸಂಪರ್ಕಿಸಿವೆ’ ಎಂದರು.
‘ತಮ್ಮ ಹೆಸರಿನಲ್ಲಿ ಕಂಬಳ ಕೋಣ ಓಡಿಸುವಂತೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಚಿವ ಡಾ.ಎಂ.ಸಿ.ಸುಧಾಕರ್ ಕೋರಿದ್ದರೆ. ಸಾಮಾನ್ಯವಾಗಿ ಕಂಬಳ ಕೋಣಗಳ ಮಾಲೀಕರು ತಮ್ಮ ಕೋಣಗಳನ್ನು ಬೇರೆಯವರ ಹೆಸರಿನಲ್ಲಿ ಒಡಿಸುವುದನ್ನು ಇಷ್ಟಪಡುವುದಿಲ್ಲ. ಅವರು ಒಪ್ಪಿದರೆ ಅವಕಾಶ ಕಲ್ಪಿಸುತ್ತೇವೆ’ ಎಂದು ತಿಳಿಸಿದರು.
‘ಕಂಬಳವನ್ನು 7 ಲಕ್ಷದಿಂದ 9 ಲಕ್ಷ ಮಂದಿ ವೀಕ್ಷಿಸುವ ನಿರೀಕ್ಷೆ ಇದೆ. ಅದಕ್ಕೆ ಪೂರಕ ಸೌಕರ್ಯಗಳನ್ನು ಕಲ್ಪಿಸುತ್ತಿದ್ದೇವೆ. 2 ಸಾವಿರ ಅತಿಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 145 ಮೀ ಉದ್ದದ ಕಂಬಳದ ಕರೆ ನಿರ್ಮಿಸಲಾಗುತ್ತದೆ. ಸುಮಾರು 15 ಸಾವಿರ ಆಸನಗಳ ಗ್ಯಾಲರಿನಿರ್ಮಾಣವಾಗಲಿದೆ. 6 ಸಾವಿರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕರಾವಳಿಯ ಸೊಗಡನ್ನು ಬಿಂಬಿಸುವ 150ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ಅವುಗಳಲ್ಲಿ ಕರಾವಳಿ ಶೈಲಿಯ ಆಹಾರಗಳು, ಇಲ್ಲಿನ ಕರಕುಶಲ ಪರಿಕರಗಳು, ಇಲ್ಲಿನ ಆಹಾರ ಸಿದ್ಧ ತಿನಿಸುಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದರು.
‘ಕಾನೂನು ಚೌಕಟ್ಟಿನಡಿಯಲ್ಲೇ ಕಂಬಳ ನಡೆಯಲಿದ್ದು, ಈ ಕುರಿತ ಸುಪ್ರೀಂ ಕೋರ್ಟ್ ಆದೇಶ ಪಾಲನೆಗೂ ಆದ್ಯತೆ ನೀಡಲಿದ್ದೇವೆ. ಈ ಕಂಬಳಕ್ಕೆ ₹ 6 ಕೋಟಿ ವೆಚ್ಚವಾಗುವ ನಿರೀಕ್ಷೆ ಇದೆ. ಸರ್ಕಾರದಿಂದಲೂ ನೆರವು ಕೋರುತ್ತೇವೆ. ಕರಾವಳಿಯ ಈ ಕ್ರೀಡೆಗೆ ಜಗದ್ವಿಖ್ಯಾತವಾಗದಬೇಕು ಎಂಬ ಆಶಯ ನಮ್ಮದು. ಬೆಂಗಳೂರಿನಲ್ಲಿ 1 ಎಕರೆ ವಿಶಾಲ ಪ್ರದೇಶದಲ್ಲಿ ತುಳುಭವನ, ಪಿಲಿಕುಳದಲ್ಲಿ ಕಂಬಳ ಭವನ ನಿರ್ಮಿಸುವ ಉದ್ದೇಶವಿದ್ದು, ಈ ಕುರಿತು ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತೇವೆ’ ಎಂದರು.
ತುಳು ಮತ್ತು ಕನ್ನಡ ಭಾಷೆಗಳೆರಡರಲ್ಲೂ ಕಂಬಳದ ಧಾಟಿಯಲ್ಲೇ ವೀಕ್ಷಕ ವಿವರಣೆ ನೀಡಲಾಗುತ್ತದೆ. ಭಾಗವಹಿಸುವ ಎಲ್ಲ ಕೋಣಗಳಿಗೂ ಮೆಡಲ್, ಅವುಗಳನ್ನು ಓಡಿಸಿದವರಿಗೆ ಪ್ರಮಾಣಪತ್ರ ನೀಡಲಿದ್ದೇವೆ. ಮೊದಲ ಬಹುಮಾನ ಗೆದ್ದ ಕೋಣಗಳಿಗೆ ಎರಡು ಪವನ್ (16 ಗ್ರಾಂ) ಚಿನ್ನ, ದ್ವಿತೀಯ ಸ್ಥಾನ ಪಡೆದ ಕೋಣಗಳಿಗೆ ಒಂದು ಪವನ್ (8 ಗ್ರಾಂ) ಚಿನ್ನ ನೀಡಲಿದ್ದೇವೆ’ ಎಂದು ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ‘ಯಜಮಾನರು ಕೋಣಗಳನ್ನು ಬಹಳ ಜತನವಾಗಿ ಸಾಕಿರುತ್ತಾರೆ. ಹಾಗಾಗಿ ಬೆಂಗಳೂರಿಗೆ ಅವುಗಳನ್ನು ಕೊಂಡೊಯ್ಯುವಾಗ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಕೋರಿದ್ದಾರೆ. ಸಮಿತಿ ವ್ಯವಸ್ಥೆ ಕಲ್ಪಿಸಲಿದೆ’ ಎಂದರು.
ದ.ಕ. ಜಿಲ್ಲಾ ಕಂಬಳ ಸಮಿತಿಯ ಗೌರವಾಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಪದಾಧಿಕಾರಿಗಳಾದ ಚಂದ್ರಹಾಸಸಾಧು ಸನಿಲ್, ವಿಜಯ ಕುಮಾರ್ ಜೈನ್, ಮುರಳೀಧರ ರೈ, ರೋಹಿತ್ ಹೆಗ್ಡೆ, ಲೋಕೇಶ್ ಶೆಟ್ಟಿ ಮುಚ್ಚೂರು ಮತ್ತಿತರರು ಇದ್ದರು.
Posted by Vidyamaana on 2023-09-13 12:11:21 |
ನವದೆಹಲಿ :ಆಪಲ್ ಅಧಿಕೃತವಾಗಿ 48 ಎಂಪಿ ಮುಖ್ಯ ಕ್ಯಾಮೆರಾ, 26 ಎಂಎಂ ಫೋಕಲ್ ಉದ್ದ, 2 ಮೈಕ್ರಾನ್ ಕ್ವಾಡ್ ಪಿಕ್ಸೆಲ್ ಸೆನ್ಸಾರ್ ಮತ್ತು 100 ಪ್ರತಿಶತ ಫೋಕಸ್ ಪಿಕ್ಸೆಲ್ಗಳೊಂದಿಗೆ ಬಹುನಿರೀಕ್ಷಿತ ಐಫೋನ್ 15 ಅನ್ನು ಅನಾವರಣಗೊಳಿಸಿದೆ.ಐಫೋನ್ 15 ಹೊಸ ಕ್ಯಾಮೆರಾ ವ್ಯವಸ್ಥೆಯೊಂದಿಗೆ ಬರುತ್ತದೆ ಎಂದು ಆಪಲ್ ಹೇಳಿದೆ.ಐಫೋನ್ 15 ನಲ್ಲಿ ನೈಟ್ ಮೋಡ್ ಕೂಡ ಉತ್ತಮಗೊಳ್ಳುತ್ತಿದೆ. ಐಫೋನ್ 14 ಪ್ರೊಗೆ ಶಕ್ತಿ ನೀಡಿದ ಬಯೋನಿಕ್ ಎ 16 ಚಿಪ್ ಅನ್ನು ಐಫೋನ್ 15 ನಲ್ಲಿ ಅಳವಡಿಸಲಾಗಿದೆ. ಇದು ಎ 15 ಬಯೋನಿಕ್ ಚಿಪ್ ಸೆಟ್ ಗಿಂತ ಕಡಿಮೆ ಶಕ್ತಿಯನ್ನು ಬಳಸುತ್ತದೆ. ಇದರರ್ಥ ಐಫೋನ್ 15 ಪ್ರೊ ಮಾದರಿಗಳು ಹೆಚ್ಚು ಶಕ್ತಿಯುತ ಚಿಪ್ ಅನ್ನು ಹೊಂದಿರುತ್ತವೆ. ಐಫೋನ್ 15 ಬಣ್ಣ-ತುಂಬಿದ ಬ್ಯಾಕ್ ಗ್ಲಾಸ್ ಮತ್ತು ಹೊಸ ಬಾಹ್ಯರೇಖೆಯ ಅಂಚನ್ನು ಹೊಂದಿದೆ. ಡೈನಾಮಿಕ್ ಐಲ್ಯಾಂಡ್ ಅನ್ನು ಈ ವರ್ಷದ ಪ್ರೊ ಅಲ್ಲದ ಐಫೋನ್ ಮಾದರಿಗಳಲ್ಲಿಯೂ ಸೇರಿಸಲಾಗಿದೆ.ಐಫೋನ್ 15 ಸುಧಾರಿತ ಬೊಕೆ ಪರಿಣಾಮಕ್ಕಾಗಿ ಸುಧಾರಿತ ಪೋರ್ಟ್ರೇಟ್ ಮೋಡ್ ನೊಂದಿಗೆ ಬರುತ್ತದೆ, ಇದು ಪ್ರಾಣಿಗಳು ಮತ್ತು ಮಾನವ ವಿಷಯಗಳ ಚಿತ್ರಗಳನ್ನು ಕ್ಲಿಕ್ ಮಾಡುವಾಗ ಸ್ವಯಂಚಾಲಿತವಾಗಿ ಪೋರ್ಟ್ರೇಟ್ ಮೋಡ್ ಗೆ ಬದಲಾಯಿಸಲು ಯಂತ್ರ ಕಲಿಕೆ (ಎಂಎಲ್) ಅನ್ನು ಬಳಸುತ್ತದೆ. ಐಫೋನ್ 15 ಅನ್ನು ಯುಎಸ್ನಲ್ಲಿ 799 ಡಾಲರ್ ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿದೆ.
ಇದು ಕಳೆದ ವರ್ಷದ ಐಫೋನ್ 14 ಮೂಲ ಮಾದರಿಯಂತೆಯೇ ಇದೆ. ಆಪಲ್ ಪ್ರಕಾರ, ಐಫೋನ್ 15 ಪ್ಲಸ್ ಮಾದರಿಯ ಬೆಲೆ 899 ಡಾಲರ್. ಐಫೋನ್ 15 ಯುಎಸ್ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ನೊಂದಿಗೆ ಬಂದ ಮೊದಲ ಐಫೋನ್ ಮಾದರಿಯಾಗಿದೆ. ಐಫೋನ್ ಮಾದರಿಗಳನ್ನು ಚಾರ್ಜ್ ಮಾಡಲು ಆಪಲ್ ಯಾವಾಗಲೂ ಮಿಂಚಿನ ಕೇಬಲ್ ಗಳನ್ನು ಬಳಸುತ್ತಿತ್ತು ಆದರೆ ಐಫೋನ್ 15 ಸರಣಿಯೊಂದಿಗೆ ಅದು ಬದಲಾಗಿದೆ. ಯುಎಸ್ಬಿ-ಸಿ ಚಾರ್ಜಿಂಗ್ "ಸಾರ್ವತ್ರಿಕವಾಗಿದೆ" ಎಂದು ಆಪಲ್ ಹೇಳಿದೆ.ವೀಡಿಯೊಗಳನ್ನು ಸ್ಟ್ರೀಮಿಂಗ್ ಮಾಡುವಾಗ ಮತ್ತು ಆಟಗಳನ್ನು ಆಡುವಾಗ ಸುಗಮ ಗ್ರಾಫಿಕ್ಸ್ಗಾಗಿ 5-ಕೋರ್ ಜಿಪಿಯು ಶೇಕಡಾ 50 ರಷ್ಟು ಹೆಚ್ಚು ಮೆಮೊರಿ ಬ್ಯಾಂಡ್ವಿಡ್ತ್ ಹೊಂದಿದೆ. ಹೊಸ 16-ಕೋರ್ ನ್ಯೂರಲ್ ಎಂಜಿನ್ ಪ್ರತಿ ಸೆಕೆಂಡಿಗೆ ಸುಮಾರು 17 ಟ್ರಿಲಿಯನ್ ಕಾರ್ಯಾಚರಣೆಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಐಒಎಸ್ 17 ನಲ್ಲಿ ಲೈವ್ ವಾಯ್ಸ್ಮೇಲ್ ಟ್ರಾನ್ಸ್ಕ್ರಿಪ್ಷನ್ಗಳು ಮತ್ತು ಥರ್ಡ್-ಪಾರ್ಟಿ ಅಪ್ಲಿಕೇಶನ್ ಅನುಭವಗಳಂತಹ ವೈಶಿಷ್ಟ್ಯಗಳಿಗಾಗಿ ಇನ್ನೂ ವೇಗವಾಗಿ ಯಂತ್ರ ಕಲಿಕೆ ಗಣನೆಗಳನ್ನು ಸಕ್ರಿಯಗೊಳಿಸುತ್ತದೆ - ಇವೆಲ್ಲವೂ ಸುರಕ್ಷಿತ ಎನ್ಕ್ಲೇವ್ ಬಳಸಿ ನಿರ್ಣಾಯಕ ಗೌಪ್ಯತೆ ಮತ್ತು ಭದ್ರತಾ ವೈಶಿಷ್ಟ್ಯಗಳನ್ನು ರಕ್ಷಿಸುತ್ತವೆ.ಭಾರತದಲ್ಲಿ ಐಫೋನ್ 15 ಬೆಲೆ, ಲಭ್ಯತೆ ಮತ್ತು ಬಣ್ಣಗಳು
ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಗುಲಾಬಿ, ಹಳದಿ, ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ 128 ಜಿಬಿ, 256 ಜಿಬಿ ಮತ್ತು 512 ಜಿಬಿ ಕಾನ್ಫಿಗರೇಶನ್ ಗಳಲ್ಲಿ ಕ್ರಮವಾಗಿ 79,900 ಮತ್ತು 89,900 ರೂ.ಗಳಿಂದ ಪ್ರಾರಂಭವಾಗುತ್ತದೆ.
ಆಸ್ಟ್ರೇಲಿಯಾ, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಜಪಾನ್, ಮೆಕ್ಸಿಕೊ, ಯುಎಇ, ಯುಕೆ ಮತ್ತು ಯುಎಸ್ ಸೇರಿದಂತೆ 40 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿನ ಖರೀದಿದಾರರು ಸೆಪ್ಟೆಂಬರ್ 15 ರಿಂದ ಬೆಳಿಗ್ಗೆ 5 ಗಂಟೆಗೆ ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಅನ್ನು ಪೂರ್ವ-ಆರ್ಡರ್ ಮಾಡಲು ಸಾಧ್ಯವಾಗುತ್ತದೆ.ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಸೆಪ್ಟೆಂಬರ್ 29 ರ ಶುಕ್ರವಾರದಿಂದ ಮಕಾವೊ, ಮಲೇಷ್ಯಾ, ಟರ್ಕಿಯೆ, ವಿಯೆಟ್ನಾಂ ಮತ್ತು 17 ಇತರ ದೇಶಗಳು ಮತ್ತು ಪ್ರದೇಶಗಳಲ್ಲಿ ಲಭ್ಯವಿರುತ್ತದೆ.
"ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಸೃಜನಶೀಲತೆಯನ್ನು ಪ್ರೇರೇಪಿಸುವ ಅತ್ಯಾಕರ್ಷಕ ಕ್ಯಾಮೆರಾ ಆವಿಷ್ಕಾರಗಳು, ಅರ್ಥಗರ್ಭಿತ ಡೈನಾಮಿಕ್ ದ್ವೀಪ ಮತ್ತು ಸಾಬೀತುಪಡಿಸಿದ ಶಕ್ತಿಯುತ ಕಾರ್ಯಕ್ಷಮತೆಗಾಗಿ ಎ 16 ಬಯೋನಿಕ್ ಚಿಪ್ನೊಂದಿಗೆ ದೊಡ್ಡ ಮುನ್ನಡೆಯನ್ನು ಪ್ರತಿನಿಧಿಸುತ್ತದೆ" ಎಂದು ಆಪಲ್ನ ವಿಶ್ವವ್ಯಾಪಿ ಐಫೋನ್ ಉತ್ಪನ್ನ ಮಾರ್ಕೆಟಿಂಗ್ ಉಪಾಧ್ಯಕ್ಷ ಕೈಯಾನ್ ಡ್ರಾನ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಸೂಪರ್-ಹೈ-ರೆಸಲ್ಯೂಶನ್ ಫೋಟೋಗಳಿಗಾಗಿ ಹೊಸ 24 ಎಂಪಿ ಡೀಫಾಲ್ಟ್, ಹೊಸ 2 ಎಕ್ಸ್ ಟೆಲಿಫೋಟೋ ಆಯ್ಕೆ ಮತ್ತು ಮುಂದಿನ ಪೀಳಿಗೆಯ ಭಾವಚಿತ್ರಗಳನ್ನು ಒಳಗೊಂಡಿರುವ 48 ಎಂಪಿ ಮುಖ್ಯ ಕ್ಯಾಮೆರಾದೊಂದಿಗೆ ನಾವು ಈ ವರ್ಷ ಕಂಪ್ಯೂಟೇಶನಲ್ ಫೋಟೋಗ್ರಫಿಯ ಶಕ್ತಿಯನ್ನು ಹೊಸ ಫೀಚರ್ ಹೊಂದಿದೆ.
Posted by Vidyamaana on 2023-12-01 15:58:50 |
ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪ್ರವೀಣ್ ನನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ. ಉಡುಪಿ ಸಬ್ ಜೈಲಿನಿಂದ ಆರೋಪಿ ಪ್ರವೀಣ್ ಚೌಗಲೆಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದೆ.
ನ್ಯಾಯಾಂಗ ಬಂಧನದಲ್ಲಿರುವ ಪ್ರವೀಣ್ ನನ್ನು ಉಡುಪಿಯ ಸಬ್ ಜೈಲಿಗೆ ರವಾನಿಸಲಾಗಿತ್ತು. ಆದರೆ ಈ ಜೈಲಿನಲ್ಲಿ ಈತನಿಗೆ ಭದ್ರತೆ ನೀಡುವುದು ಸವಾಲಾಗಿದೆ. ಸಹಕೈದಿಗಳೇ ಈತ ಮಾಡಿದ ಹೀನ ಕೆಲಸಕ್ಕೆ ಆತನಿಗೆ ಹಲ್ಲೆ ಮಾಡುವ ಸಾಧ್ಯತೆ ಇದೆ. ಹಾಗಾಗಿ ಸೀಮಿತ ವ್ಯವಸ್ಥೆಯಲ್ಲಿ ಪ್ರತ್ಯೇಕ ಸೆಲ್ ನಲ್ಲಿ ಇರಿಸುವುದು ಕಷ್ಟಸಾಧ್ಯ. ಈ ಹಿನ್ನೆಲೆ ಸದ್ಯ ಆರೋಪಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಡಿಸೆಂಬರ್ 5ರ ತನಕ ಈತನಿಗೆ ನ್ಯಾಯಾಂಗ ಬಂಧನವಿದ್ದು, ವಿಡಿಯೋ ಕಾನ್ನರೆನ್ಸ್ ಮೂಲಕವೇ ವಿಚಾರಣೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
Posted by Vidyamaana on 2024-04-09 10:55:05 |
ಚೆನ್ನೈ: ಲೋಕಸಭಾ ಚುನಾವಣೆ ನಡೆಯಲಿರುವ ತಮಿಳುನಾಡಿನ ತಿರುನೆಲ್ವೇಲಿಗೆ ರೈಲಿನಲ್ಲಿ ತೆರಳುತ್ತಿದ್ದ ಮೂವರಿಂದ ಫ್ಲೈಯಿಂಗ್ ಸ್ಕ್ವಾಡ್ನ ಅಧಿಕಾರಿಗಳು 4 ಕೋಟಿ ರೊ. ನಗದು ವಶಪಡಿಸಿಕೊಂಡಿದ್ದಾರೆ.
ಈ ಮೂವರು ತಿರುನೆಲ್ವೇಲಿಯ ಬಿಜೆಪಿ ಅಭ್ಯರ್ಥಿ ನೈನಾರ್ ನಾಗೇಂದ್ರನ್ ಅವರ ಬೆಂಬಲಿಗರು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಮೂವರು ಎಗ್ಮೋರ್ನಿಂದ ತಿರುನೆಲ್ವೇಲಿಗೆ ತೆರಳುತ್ತಿದ್ದರು. ತಾಂಬರಂ ರೈಲು ನಿಲ್ದಾಣದಲ್ಲಿ ಅಧಿಕಾರಿಗಳು ಪರಿಶೀಲಿಸಿದಾಗ ದಾಖಲೆಗಳಿಲ್ಲದ ನಗದು ಪತ್ತೆಯಾಗಿದೆ. ಈ ಕುರಿತು ಆದಾಯ ತೆರಿಗೆ ಇಲಾಖೆಯು ತನಿಖೆ ನಡೆಸಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದರು.
Posted by Vidyamaana on 2024-01-10 04:21:37 |
ಬೆಗಳೂರು: ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೇಡ್ನಲ್ಲಿ ಭಾಗವಹಿಸಲು ರಾಜ್ಯಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ಮತ್ತೊಮ್ಮೆ ಕನ್ನಡಿಗರ ಭಾವನೆಗೆ ಘಾಸಿ ಮಾಡಿದೆ.
ಗಣರಾಜ್ಯೋತ್ಸವದ ಪೆರೇಡ್ನಲ್ಲಿ ಪಾಲ್ಗೊಳ್ಳುವುದು ಹೆಮ್ಮೆಯ ವಿಚಾರ. ಈ ಪರೇಡ್ನಲ್ಲಿ ವಿವಿಧ ರಾಜ್ಯಗಳ ಸ್ತಬ್ಧ ಚಿತ್ರಗಳು ಪಾಲ್ಗೊಳ್ಳುತ್ತವೆ. ಈ ಬಾರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದ ಅಣ್ಣಮ್ಮ ದೇವಿಯ ಪ್ರತಿಕೃತಿಗಳ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ರಾಜ್ಯದ ಮನವಿಯನ್ನು ತಳ್ಳಿ ಹಾಕಿದೆ. ಕಳೆದ ವರ್ಷವೂ ಇದೇ ರೀತಿ ಸ್ತಬ್ಧ ಚಿತ್ರ ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿತ್ತು.
ಚುನಾವಣಾ ವರ್ಷವಾಗಿದ್ದರಿಂದಾಗಿ ಅದು ರಾಜಕೀಯ ಸ್ವರೂಪವನ್ನು ಪಡೆದುಕೊಂಡಾಗ ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರದ ಪ್ರಮುಖ ನಾಯಕರು ಕೇಂದ್ರದ ಮೇಲೆ ಒತ್ತಡ ತಂದು ವಿಶೇಷ ಅನುಮತಿ ಪಡೆಯುವ ಮೂಲಕ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ರಾಜ್ಯದ ಪ್ರತಿಕೃತಿ ಭಾಗವಹಿಸಲು ಅವಕಾಶ ಪಡೆದುಕೊಂಡಿದ್ದರು.
ವಸ್ತು ಪ್ರದರ್ಶನ ಮಳಿಗೆಯಲ್ಲಿ ರಾಜ್ಯದ ಸ್ತಬ್ಧ ಚಿತ್ರವನ್ನು ಪ್ರದರ್ಶನ ಮಾಡಿಕೊಳ್ಳಬಹುದು ಎಂದು ಕೇಂದ್ರ ಸರಕಾರ ತಿಳಿಸಿದೆ.
Posted by Vidyamaana on 2023-04-24 23:10:56 |
ಪುತ್ತೂರು: ಆರ್ಯಾಪು ಗ್ರಾಮದ ವಳತ್ತಡ್ಕ ನಿವಾಸಿ ತೌಸೀಫ್ ರವರು ಕಳೆದುಕೊಂಡಿದ್ದ ಸುಮಾರು 1.35 ಲಕ್ಷ ರೂಪಾಯಿ ಬೆಲೆಬಾಳುವ ಮೊಬೈಲ್ ಹಿಂತಿರುಗಿಸುವ ಮೂಲಕ ಪತ್ರಿಕೆ ಸಾಗಾಟ ಮಾಡುವ ಜಯಂತ ವಿಟ್ಟ ರವರು ಪ್ರಾಮಾಣಿಕತೆ ಮೆರೆದಿದ್ದಾರೆ.
ಕಾರಿನಲ್ಲಿ ಮಂಗಳೂರಿನಿಂದ ಸುಳ್ಯಕ್ಕೆ ದಿ, ಹಿಂದು ಇಂಗ್ಲಿಷ್ ಪತ್ರಿಕೆಯ ಸಾಗಾಟ ಮಾಡುತ್ತಿರುವ ಜಯಂತ ವಿಟ್ಲರವರಿಗೆ ಎ.23ರಂದು ರಾತ್ರಿ ಮಂಗಳೂರಿನ ಕಂಕನಾಡಿ ರಾಧಾ ಮೆಡಿಕಲ್ ಬಳಿ ರಸ್ತೆಯಲ್ಲಿ ಐಫೋನ್ ಮೊಬೈಲ್ ಬಿದ್ದು ಸಿಕ್ಕಿತು. ಇದರ ಕುರಿತು ಜಯಂತರವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಎ.24ರಂದು ಮೊಬೈಲ್ ನಲ್ಲಿದ್ದ ನಂಬರ್ ಮೂಲಕ ಸಂಪರ್ಕಿಸಿ ಮೊಬೈಲ್ ವಾರಿಸುದಾರರಾಗಿರುವ ಪುತ್ತೂರಿನ ವಳತ್ತಡ್ಕ ತೌಸೀಫ್ ರವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.