Posted by vidyamaana on 2024-07-03 13:36:16 |
ಬೆಂಗಳೂರು (ಜು.3): ಇಲ್ಲಿನ ಹೊರವಲಯದ ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾಲೇಜು ವಿದ್ಯಾರ್ಥಿನಿ ಅಂಜನಾ(20) ಮತ್ತು ಶ್ರೀಕಾಂತ್(25) ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಜುಲೈ 1ರಂದು ಪ್ರೇಮಿಗಳು ನಾಪತ್ತೆಯಾಗಿದ್ದರು.
ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸ್ತಿದ್ದರು. ಆದರೆ ಯುವಜೋಡಿಯ ಪ್ರೀತಿಗೆ ವಿದ್ಯಾರ್ಥಿನಿ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ವಿದ್ಯಾರ್ಥಿನಿ ತಲಘಟ್ಟಪುರ ಸಮೀಪದ ಅಂಜನಾಪುರ ಬಳಿ ವಾಸವಿದ್ದಳು. ಯುವಕ ಶ್ರೀಕಾಂತ್ ಕೋಣನಕುಂಟೆ ನಿವಾಸಿಯಾಗಿದ್ದ. ಇಬ್ಬರೂ ನಾಪತ್ತೆಯಾಗಿದ್ದರು. ನಾಪತ್ತೆ ಹಿನ್ನಲೆ ಎರಡೂ ಕಡೆಯವರ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ.
ಮದುವೆಯಾಗಿದ್ದ ಶ್ರೀಕಾಂತ್!
ಶ್ರೀಕಾಂತ್ ಗೆ ಬೇರೊಬ್ಬರ ಜೊತೆಗೆ ವಿವಾಹವಾಗಿದೆ. ಆದರೂ ಅಂಜನಾಳನ್ನ ಪ್ರೀತಿ ಮಾಡ್ತಿದ್ದ. ಇಬ್ಬರು ಒಟ್ಟಿಗೆ ಬದುಕಲು ಅವಕಾಶ ಇಲ್ಲ ಎಂದು ಸಾಯೋ ನಿರ್ಧಾರ ಮಾಡಿದ್ದಾರೆ. ಮೊದಲು ಶ್ರೀಕಾಂತ್ ಮೃತದೇಹ ಕೆರೆಯಲ್ಲಿ ಕಾಣಿಸಿದೆ. ಆತನನ್ನ ಮೇಲೆತ್ತಿದ್ದ ನಂತರ ಅಂಜನಾ ಮೃತದೇಹ ಕೂಡ ಮೇಲೆ ಬಂದಿದೆ. ಅಂಜನಾ ಮೃತದೇಹದ ಬಗ್ಗೆ ಪೊಲೀಸರಿಗೂ ಮಾಹಿತಿ ಇರುದಿಲ್ಲ. ಇಬ್ಬರು ಕೈಗೆ ಹಗ್ಗ ಕಟ್ಟಿಕೊಂಡಿದ್ದರಿಂದ ಇಬ್ಬರ ಮೃತದೇಹ ಒಟ್ಟಿಗೆ ಸಿಕ್ಕಿದೆ. ಮೊಬೈಲ್ ನಲ್ಲಿ ವೀಡಿಯೊ ಮಾಡಿರುವ ಯುವತಿ ಅಂಜನಾ ಅದನ್ನ ಆಟೋದಲ್ಲಿ ಬಿಟ್ಟು ಶ್ರೀಕಾಂತ್ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮ್ಮ ಸಾವಿಗೆ ಯಾರು ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹಾಗಾಗಿ ಸಾಯ್ತಿದ್ದೇವೆ ಎಂದು ವಿಡಿಯೋ ಮಾಡಿದ್ದಾಳೆ. ಮೊಬೈಲ್ ವಶಕ್ಕೆ ಪಡೆದುಕೊಂಡಿರೊ ತಲಘಟ್ಟಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Posted by Vidyamaana on 2023-06-23 13:56:31 |
ಕಾರವಾರ: ದಿಶಾ ಸಭೆಗೆ ಬಂದಿದ್ದ ಸಂಸದ ಅನಂತ ಕುಮಾರ ಹೆಗಡೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಬಿಗಿದಪ್ಪಿ ಅಭಿನಂದಿಸಿದ ಘಟನೆ ಶುಕ್ರವಾರ ನಡೆಯಿತು.ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ದಿಶಾ ಸಭೆ ನಡೆದಿತ್ತು. ಸಭೆಯ ನಂತರ ಶಾಸಕ ಸೈಲ್ , ಸಂಸದ ಹೆಗಡೆ ಮುಖಾಮುಖಿ ಆದರು. ತತ್ ಕ್ಷಣ ಸಂಸದರು ತಮ್ಮ ಸ್ನೇಹಿತ ಸೈಲ್ ಬಳಿ ತೆರಳಿ ಬಿಗಿದಪ್ಪಿ ಅಭಿನಂದಿಸಿದರು. ವಿಧಾನಸಭೆ ಚುನಾವಣೆ ಗೆಲುವಿನ ನಂತರ ಇಬ್ಬರ ಭೇಟಿ ಇಂದೇ ಮೊದಲಾಗಿತ್ತು. ಈ ಅಪ್ಪುಗೆಯನ್ನು ಕೃಷ್ಣಾರ್ಜುನರ ಅಪ್ಪುಗೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬಣ್ಣಿಸಲಾಗಿದೆ. ಹಾಗೂ ಇದು ಹೊಸ ಮನ್ವಂತರ ಎಂದೂ, ಆಂಜನೇಯನನ್ನು ಅಭಿನಂದಿಸಿದ ರಾಮ ಎಂದು ಅನಂತ ಕುಮಾರ್ ಅವರನ್ನು ಹೊಗಳಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಸಂಸದ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಂದಿರಲಿಲ್ಲ. ಪ್ರಧಾನಿ ಮೋದಿ ಕಾರವಾರ ಸಮೀಪದ ಸಭೆಗೆ ಬಂದರೂ ,ಸಂಸದ ಅನಂತ ಹೆಗಡೆ ಗೈರಾಗಿದ್ದರು. ಸಂಸದರು ಹೇಳಿದ ಅಭ್ಯರ್ಥಿ ಗಳಿಗೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಕೊಡದೇ ಹೋದುದು ಸಂಸದರ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗಿತ್ತು. ಈಗ ಕಾಂಗ್ರೆಸ್ ನಲ್ಲಿನ ಸ್ನೇಹಿತ ಶಾಸಕ ಸೈಲ್ ರನ್ನು ಅಭಿನಂದಿಸುವ ಮೂಲಕ ಹೆಗಡೆ ಸುದ್ದಿ ಮಾಡಿದ್ದಾರೆ. ಶಾಸಕ ಸೈಲ್ ರನ್ನು ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಅಪ್ಪುಗೆಯನ್ನು ” ಟುಡೇ ಬಿಗ್ ಪೋಟೋ” ಎಂದು ಬ್ಲಾಕ್ ಕಾಂಗ್ರೆಸ್ ಬಣ್ಣಿಸಿದೆ.
Posted by Vidyamaana on 2024-01-31 08:13:29 |
ಬೆಂಗಳೂರು: ಇತ್ತೀಚಿಗೆ ನಗರದಲ್ಲಿ ನಕಲಿ ಅಧಿಕಾರಿಗಳ ಹಾವಳಿ ಹೆಚ್ಚಾಗಿದೆ. ಜನವರಿ 27 ರಂದು ಕೆಆರ್ಪುರಂನಲ್ಲಿರುವ (KR Puram) ಚಿನ್ನದ ಅಂಗಡಿ (Gold Shop) ಮೇಲೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅಧಿಕಾರಿಗಳು ದಾಳಿ ಮಾಡಿದ್ದರು. ಆದರೆ ದಾಳಿ ಮಾಡಿದವರು ಅಸಲಿ ಅಧಿಕಾರಿಗಳಲ್ಲ, ಬದಲಿಗೆ ನಕಲಿ ಅಧಿಕಾರಿಗಳು. 45 ನಿಮಿಷದ ಕಾರ್ಯಾಚರಣೆ ಥೇಟ್ ಸಿನಿಮಾ ಕಥೆಯನ್ನೇ ಹೊಲುವ ರೀತಿ ಇದೆ. ಯಾವಾಗ ಇವರು ನಕಲಿ ಅಧಿಕಾರಿಗಳು ಎಂದು ತಿಳಿಯಿತು, ಆಗ 30 ನಿಮಿಷದ ಪೊಲೀಸರ ಕಾರ್ಯಾಚರಣೆ ನಡೆದಿದ್ದು, ಇದು ಪ್ರಕರಣದ ಮೇಜರ್ ಟ್ವಿಸ್ಟ್ ಆಗಿದೆ.
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅಧಿಕಾರಿಗಳು ಅಂತ ಹೇಳಿ ಇದೇ ತಿಂಗಳು 27 ರಂದು ಇನೋವ್ ಕಾರ್ನಲ್ಲಿ ಎಂಟ್ರಿ ಕೊಟ್ಟಿದ್ದ ನಾಲ್ವರು ಕೆಆರ್ಪುರಂನಲ್ಲಿರುವ ಮಹಾಲಕ್ಷ್ಮಿ ಜ್ಯುವೆಲರ್ಸ್ ಮೇಲೆ ದಾಳಿ ಮಾಡಿದ್ದರು. ಬೆಂಗಳೂರಿನ ಹಲವು ಬಂಗಾರದ ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ ಅದರಲ್ಲಿ ನಿಮ್ಮದೂ ಒಂದು. ಹಾಲ್ ಮಾರ್ಕ್ ಇಲ್ಲದೆ ಅಕ್ರಮವಾಗಿ ನೀವು ಚಿನ್ನ ಮಾರಾಟ ಮಾಡುತ್ತಿದ್ದೀರಿ ಎಂಬ ಮಾಹಿತಿ ನಮಗೆ ದೊರೆತಿದೆ ಹೀಗಾಗಿ ದಾಳಿ ಮಾಡಿದ್ದೇವೆ ಎಂದು ನಕಲಿ ಅಧಿಕಾರಿಗಳು ಹೇಳಿದ್ದಾರೆ. ಬಳಿಕ 45 ನಿಮಿಷ ಕಾರ್ಯಾಚರಣೆ ನಡೆಸಿದ ನಕಲಿ ಅಧಿಕಾರಿಗಳು, ಅಂಗಡಿಯಲ್ಲಿದ್ದ 80 ಲಕ್ಷ ರೂ. ಮೌಲ್ಯದ 1 ಕೆಜಿಗೂ ಅಧಿಕ ಚಿನ್ನ ತೆಗೆದುಕೊಂಡರು.
ಇವೆಲ್ಲವನ್ನೂ ಸೀಜ್ ಮಾಡುವುದಾಗಿ ನಕಲಿ ಅಧಿಕಾರಿಗಳು ಹೇಳಿದ್ದರು. ಬಳಿಕ ಅಂಗಡಿ ಮಾಲಿಕನ ಕೈಗೆ ನಕಲಿ ನೋಟಿಸ್ ನೀಡಿ, ಮುಂದಿನ ವಾರ ತಮಿಳುನಾಡಿನ ಕಚೇರಿಗೆ ಬರುವಂತೆ ಹೇಳಿ ಹೋದರು. ಹೀಗೆ ಹೋಗುವಾಗ ನಕಲಿ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದಾರೆ.ಊರು ಬಿಡುವ ಮುನ್ನವೇ ನಕಲಿ ಅಧಿಕಾರಿಗಳು ಲಾಕ್ ಆಗಿದ್ದೇಗೆ ?
ನಕಲಿ ಅಧಿಕಾರಿಗಳು ಚಿನ್ನದ ಅಂಗಡಿಯಿಂದ ಹೊರಡುವಾಗ ಸಿಸಿಟಿವಿ ಡಿವಿಆರ್ ತೆಗೆದುಕೊಂಡು ಹೋಗಿದ್ದಾರೆ. ಇದನ್ನು ಕಂಡು ಅನುಮಾನಗೊಂಡ ಚಿನ್ನದ ಅಂಗಡಿ ಕೆಲ ಸಿಬ್ಬಂದಿಗಳು, ನಕಲಿ ಅಧಿಕಾರಿಗಳನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಇದನ್ನು ತಿಳಿದ ನಕಲಿ ಅಧಿಕಾರಿಗಳು, ತಪ್ಪಿಸಿಕೊಳ್ಳುವ ಬರದಲ್ಲಿ ಟಿಸಿ ಪಾಳ್ಯದಲ್ಲಿ ಬೈಕ್ಗಳಿಗೆ ಗುದ್ದಿದ್ದಾರೆ.
ಇತ್ತ ಅಂಗಡಿ ಮಾಲಿಕರಿಗೂ ಅನುಮಾನ ಬಂದು ಕೆಆರ್ಪುರಂ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಾಗುತಿದ್ದಂತೆ, ಪೊಲೀಸರಿಗೆ ಸರಣಿ ಅಪಘಾತದ ಮಾಹಿತಿ ದೊರೆತಿದೆ. ಕೂಡಲೇ ಅಲರ್ಟ್ ಆದ ಪೊಲೀಸರು ಟಿಸಿ ಪಾಳ್ಯದ ಕಡೆಗೆ ಹೋಗಿದ್ದಾರೆ. ಪೊಲೀಸರು ಬರುವುದನ್ನು ಕಂಡ ನಕಲಿ ಅಧಿಕಾರಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಪೊಲೀಸರು ಚೇಸ್ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.ಸಂಪತ್ ಕುಮಾರ್, ಜೊಶಿ ಥಾಮಸ್, ಅವಿನಾಶ್, ಸಂದೀಪ್ ಬಂಧಿತಕ ನಕಲಿ ಅಧಿಕಾರಿಗಳು. ಸಂಪತ್ ಈ ಹಿಂದೆ ಮಂಡ್ಯದಲ್ಲಿ ಸಹ ಕಳ್ಳತನ ಕೃತ್ಯ ಎಸಗಿದ್ದನು. ಈ ಪ್ರಕರಣ ಸಂಬಂಧ ಜೈಲು ವಾಸ ಅನುಭವಿಸಿ ಬಿಡುಗಡೆಯಾಗಿದ್ದನು. ಅದಾದ ಬಳಿಕ ತಮಿಳುನಾಡು ಮೂಲದ ಓರ್ವ ವ್ಯಕ್ತಿಯ ಸಂರ್ಪಕಕ್ಕೆ ಬಂದಿದ್ದಾನೆ. ಆತನ ನಿರ್ದೇಶನದಂತೆ ಈ ಕೃತ್ಯಕ್ಕೆ ಕೈ ಹಾಕಿದ್ದಾನೆ.
ಆರೋಪಿಗಳು ಅರೆಸ್ಟ್ ಆಗುತ್ತಿದ್ದಂತೆ ತಮಿಳುನಾಡು ಮೂಲದ ಮಾಸ್ಟರ್ ಮೈಂಡ್ ನಾಪತ್ತೆಯಾಗಿದ್ದಾನೆ. ಕೆಆರ್ಪುರಂ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಕಳ್ಳತನವಾಗಿದ್ದ ಸಂಪೂರ್ಣ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Posted by Vidyamaana on 2023-07-16 16:04:02 |
ಶಿವಮೊಗ್ಗ: ಆಗುಂಬೆ ಘಾಟ್ನಲ್ಲಿ ಟೋಯಿಂಗ್ ವಾಹನದ ಬ್ರೇಕ್ ಫೇಲ್ ಆಗಿ ಅಪಘಾತ ಸಂಭವಿಸಿದೆ. ಘಾಟಿಯಿಂದ ವ್ಯಕ್ತಿಯೊಬ್ಬರು ಸುಮಾರು 25-30 ಅಡಿ ಕೆಳಗೆ ಉರುಳಿ ಬಿದ್ದಿದ್ದಾರೆ. ಅವರ ಸೊಂಟ ಮತ್ತು ತಲೆಗೆ ಏಟಾಗಿದೆ.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್ನಲ್ಲಿ ಈ ಘಟನೆ ನಡೆದಿದೆ. ಮೊಹಮ್ಮದ್ ಪಾಷಾ ಎಂಬ ವ್ಯಕ್ತಿ ಉರುಳಿ ಬಿದ್ದವರು. ಅಪಘಾತದ ಹಿನ್ನೆಲೆಯಲ್ಲಿ ಆಗುಂಬೆ ಘಾಟ್ನಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಟ್ರ್ಯಾಕ್ಟರ್ ಟೋಯಿಂಗ್ ಮಾಡಿಕೊಂಡು ಬರುತ್ತಿದ್ದ 207 ವಾಹನವನ್ನು ಹೇರ್ ಪಿನ್ ತಿರುವಿನಲ್ಲಿ ತಿರುಗಿಸಲು ಆಗಲಿಲ್ಲ. ಈ ಹಿನ್ನೆಲೆಯಲ್ಲಿ ರಿವರ್ಸ್ ಬರಲು ಟೋಯಿಂಗ್ ವಾಹನ ಚಾಲಕ ಮುಂದಾಗಿದ್ದಾರೆ. ಆಗ ಟೋಯಿಂಗ್ ವಾಹನದ ಬ್ರೇಕ್ ಫೇಲ್ ಆಗಿ ಅವಘಡ ಸಂಭವಿಸಿದೆ.ಈ ವೇಳೆ ಟೋಯಿಂಗ್ ವಾಹನಕ್ಕೆ ರಿವರ್ಸ್ ತೆಗೆದುಕೊಳ್ಳುವಾಗ ಮೊಹಮ್ಮದ್ ಪಾಷ ಹಿಂದೆ ಇದ್ದರು. ಅದು ವಾಹನ ಚಾಲಕನಿಗೆ ಗೊತ್ತಿರಲಿಲ್ಲ. ಅಲ್ಲದೆ, ಈ ವೇಳೆ ಆದರೆ, ಇದ್ದಕ್ಕಿದ್ದಂತೆ ಬ್ರೇಕ್ ಫೇಲ್ ಆಗಿ ವಾಹನ ಹಿಂದಕ್ಕೆ ಬಂದಿದ್ದರಿಂದ ಟೋಯಿಂಗ್ ವಾಹನವು ಅಲ್ಲಿದ್ದ ಇವರಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಮೊಹಮ್ಮದ್ ಸೀದಾ ಪ್ರಪಾತಕ್ಕೆ ಬಿದ್ದಿದ್ದಾರೆ.
ಘಾಟಿಯ ಕೆಳಗೆ ಸುಮಾರು 25-30 ಅಡಿ ಆಳಕ್ಕೆ ಮೊಹಮ್ಮದ್ ಬಿದ್ದಿದ್ದಾರೆ. ಅವರು ಕೆಳಗೆ ಬೀಳುವುದನ್ನು ಈ ವೇಳೆ ದಾರಿಯಲ್ಲಿ ಬರುತ್ತಿದ್ದ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಗಮನಿಸಿದ್ದಾರೆ. ಕೂಡಲೇ ಅವರು ತಮ್ಮ ವಾಹನವನ್ನು ನಿಲ್ಲಿಸಿ ಆತನ ರಕ್ಷಣೆಗೆ ದಾವಿಸಿದ್ದಾರೆ. ಪಾಷ ಅವರ ಸೊಂಟ ಮತ್ತು ತಲೆಗೆ ಪೆಟ್ಟು ಬಿದ್ದಿತ್ತು. ಹೀಗಾಗಿ ಪ್ರಯಾಣಿಕರೊಬ್ಬರಿಂದ ಬೆಡ್ಶೀಟ್ ಪಡೆದಿದ್ದಾರೆ. ಬಳಿಕ ಹಗ್ಗದ ಸಹಾಯದಿಂದ ಮೇಲಕ್ಕೆ ಕಷ್ಟಪಟ್ಟು ಬಂದಿದ್ದಾರೆ. ಹಿಂಜಾವೇ ಕಾರ್ಯಕರ್ತ ನಿತ್ಯಾನಂದ ಮತ್ತಿತರರ ಕಾರ್ಯಕ್ಕೆ ಸ್ಥಳೀಯರಿಂದ ಶ್ಲಾಘನೆ ವ್ಯಕ್ತವಾಗಿದೆ.
Posted by Vidyamaana on 2024-06-07 16:03:32 |
ಪುತ್ತೂರು : ವಿವೇಕಾನಂದ ಕಾಲೇಜಿನ ಮಾಸ್ ಕಮ್ಯೂನಿಕೇಷನ್ ಮತ್ತು ಜರ್ನಲಿಸಂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ದಿವ್ಯಶ್ರೀ ವಿ. ರೈ ಮೊದಲ ರ್ಯಾಂಕ್ ಪಡೆದಿದ್ದಾರೆ.
ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ವಿದ್ಯಾರ್ಥಿನಿಯಾಗಿದ್ದ ದಿವ್ಯಶ್ರೀ ಕಳೆದ 2022-23ನೇ ಸಾಲಿನ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
Posted by Vidyamaana on 2023-10-18 21:02:43 |
ಮಂಗಳೂರು, ಅ.18: ಕುದ್ರೋಳಿ ದೇವಸ್ಥಾನಕ್ಕೆ ಬಂದು ನಡೆದುಕೊಂಡು ಹಿಂತೆರಳುತ್ತಿದ್ದ ಹುಡುಗಿಯರ ಮೇಲೆ ಕಾರು ಡಿಕ್ಕಿಯಾಗಿದ್ದು ಯುವತಿಯೊಬ್ಬಳು ಮೃತಪಟ್ಟ ಘಟನೆ ನಗರದ ಮಣ್ಣಗುಡ್ಡದಲ್ಲಿ ನಡೆದಿದೆ.
ಬುಧವಾರ ಸಂಜೆ 5.30ರ ವೇಳೆಗೆ ಘಟನೆ ನಡೆದಿದ್ದು ಸುರತ್ಕಲ್ ಕಾನ ಬಾಳ ನಿವಾಸಿ ರೂಪಶ್ರೀ (23) ಮೃತಪಟ್ಟವರು. ಇವರು ಇತರ ನಾಲ್ಕು ಹುಡುಗಿಯರ ಜೊತೆಗೆ ಕುದ್ರೋಳಿ ದೇವಸ್ಥಾನಕ್ಕೆ ಬಂದಿದ್ದರು. ಸಂಜೆ ದೇವಸ್ಥಾನ ಕಡೆಯಿಂದ ಲೇಡಿಹಿಲ್ ಕಡೆಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ನುಗ್ಗಿ ಬಂದ ಕಾರು ಡಿಕ್ಕಿಯಾಗಿದೆ. ಕಾರು ನೇರವಾಗಿ ರಸ್ತೆಯಿಂದ ಹೊರಗೆ ಬಂದಿದ್ದು ಫುಟ್ ಪಾತ್ ಮೇಲೆ ನಡೆದು ಹೋಗುತ್ತಿದ್ದ ಯುವತಿಯರ ಮೇಲೆರಗಿದೆ. ಒಬ್ಬಳು ಯುವತಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದರೆ, ಇತರ ನಾಲ್ಕು ಮಂದಿಯೂ ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ.
ಕಾರು ಸಂಪೂರ್ಣ ಚಾಲಕನ ನಿಯಂತ್ರಣ ಇಲ್ಲದ ರೀತಿ ಹುಡುಗಿಯರ ಮೇಲೆ ಹರಿದಿದ್ದು ಅಪಘಾತದ ದೃಶ್ಯ ಸ್ಥಳೀಯ ಕಟ್ಟಡದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರು ನಾಲ್ಕು ಹುಡುಗಿಯರಿಗೆ ಡಿಕ್ಕಿಯಾದ ಬಳಿಕ ರಸ್ತೆ ದಾಟುತ್ತಿದ್ದ ಇನ್ನೊಬ್ಬ ಮಹಿಳೆಗೂ ಡಿಕ್ಕಿಯಾಗಿದೆ.
ಕಾರು ಚಾಲಕ ಕಮಲೇಶ್ ಬಲದೇವ್ ಎಂಬಾತ ಅಪಘಾತದ ಬಳಿಕ ಕಾರನ್ನು ನಿಲ್ಲಿಸದೆ, ಮಣ್ಣಗುಡ್ಡದ ಮನೆಗೆ ತೆರಳಿದ್ದ. ಮನೆಗೆ ಹೋಗಿ ತಂದೆಯ ಜೊತೆಗೆ ಪಾಂಡೇಶ್ವರ ಠಾಣೆಗೆ ಆಗಮಿಸಿದ್ದ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಂಭೀರ ಗಾಯಗೊಂಡಿದ್ದ ಯುವತಿಯನ್ನು ಕೂಡಲೇ ಸ್ಥಳೀಯರು ಎಜೆ ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಸಾವು ಕಂಡಿದ್ದಾರೆ. ಪಾಂಡೇಶ್ವರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಾತಿ(26), ಹಿತ್ನವಿ (16), ಕೃತಿಕಾ (16), ಯತಿಕಾ(12) ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.