Posted by vidyamaana on 2024-03-23 10:38:46 |
ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.
ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.
Posted by Vidyamaana on 2024-03-31 11:00:28 |
ಪುತ್ತೂರು :ಭಾರತೀಯ ಜನತಾ ಪಾರ್ಟಿಯ ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ನಗರ ಮಂಡಲದ ಮನೆ ಸಂಪರ್ಕ ಅಭಿಯಾನಕ್ಕೆ ಮಾ 31ರಂದು ನೆಲಪ್ಪಾಲಿನ ಬೂತ್ ಸಂಖ್ಯೆ 63 ರಲ್ಲಿ ಚಾಲನೆ ನೀಡಲಾಯಿತು , ಈ ಸಂಧರ್ಭದಲ್ಲಿ ಎಪ್ರಿಲ್ 2ರಂದು ನಡೆಯುವ ಕಾರ್ಯಕರ್ತರ ಸಮಾವೇಶದ ಮಾಹಿತಿ ನೀಡಲಾಯಿತು .
Posted by Vidyamaana on 2023-10-21 20:05:45 |
ಮಂಗಳೂರು, ಅ.21: ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ವಿಭಾಗದ ಉಪ ನಿರ್ದೇಶಕಿಯಾಗಿರುವ ಮಹಿಳಾ ಅಧಿಕಾರಿ ಲಾಕ್ ಆಗಿದ್ದಾರೆ. ದಕ್ಷಿಣ ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕಿ ಭಾರತಮ್ಮ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಅಧಿಕಾರಿ.
2023ರ ಆಗಸ್ಟ್ 31ರಂದು ವಲಯ ಅರಣ್ಯ ಅಧಿಕಾರಿಯಾಗಿ ನಿವೃತ್ತರಾಗಿದ್ದ ಪರಮೇಶ್ ಎನ್.ಪಿ ಎಂಬವರು ಈ ಪ್ರಕರಣದಲ್ಲಿ ದೂರುದಾರರು. ಇವರು ನಿವೃತ್ತಿ ಆಗೋದಕ್ಕೂ ಮುನ್ನ ಕೃಷಿ ಇಲಾಖೆ, ಕರ್ನಾಟಕ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ನಿಯೋಜನೆ ಮೇಲೆ ಕೆಲಸ ಮಾಡಿದ್ದರು. ಇವರು ಕೃಷಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ 2022-23 ಮತ್ತು 24ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಬಂಟ್ವಾಳ ತಾಲೂಕಿನ ಸಜಿಪ ನಡು, ಸಜಿಪ ಮುನ್ನೂರು, ಸಜಿಪ ಮೂಡ, ಕುರ್ನಾಡು, ನರಿಂಗಾನ, ಬಾಳೆಪುಣಿ, ಮಂಜನಾಡಿ ಗ್ರಾಮಗಳಲ್ಲಿ ಸರ್ಕಾರದ ವತಿಯಿಂದ 50 ಲಕ್ಷ ಮೌಲ್ಯದ ಸಸಿಗಳನ್ನು ವಿತರಣೆ ಮಾಡಿದ್ದರು.
ಇದಕ್ಕಾಗಿ ತೋಟಗಾರಿಕಾ ಸಸಿಗಳನ್ನು ಕಣ್ಣನ್ ನರ್ಸರಿ ಮಾಲಕರಾದ ಧೋರಿ ಮತ್ತು ಶಬರೀಶ್ ನರ್ಸರಿಯ ಭೈರೇ ಗೌಡ ಎಂಬವರಿಂದ ಖರೀದಿಸಿದ್ದು, ಅವರಿಗೆ 18 ಲಕ್ಷ ಮೊತ್ತ ನೀಡಬೇಕಾಗಿತ್ತು. ಇದಲ್ಲದೆ, ಅರಣ್ಯ ಗುತ್ತಿಗೆದಾರರಿಂದ ನಾಟಿ ಮಾಡಿಸಿದ್ದ ಸಸಿಗಳ ಮೊತ್ತ 32 ಲಕ್ಷ ಬಿಲ್ ಬಾಕಿಯಿತ್ತು. ಮುಂಗಡ ಸಸಿಗಳನ್ನು ಪಡೆದು ನಾಟಿ ಮಾಡಿದ್ದು, ಸರಕಾರದಿಂದ ಹಣ ಬಾರದೆ ಹಣ ಪಾವತಿಯಾಗದೆ ಬಾಕಿ ಉಳಿದಿತ್ತು. ಈ ಹಣವನ್ನು ನೀಡುವರೇ ನರ್ಸರಿ ಮಾಲಕರು ಕೇಳುತ್ತಿದ್ದುದರಿಂದ ನಿವೃತ್ತ ಅಧಿಕಾರಿ ಪರಮೇಶ್ ಬಿಲ್ ಪಾಸ್ ಮಾಡುವಂತೆ ಮಂಗಳೂರು ವಿಭಾಗದ ಕೃಷಿ ನಿರ್ದೇಶಕಿ ಭಾರತಮ್ಮ ಅವರಲ್ಲಿ ಕೇಳಿಕೊಂಡಿದ್ದರು. ಬಿಲ್ ಪಾಸ್ ಮಾಡಿಸಲು ಒಟ್ಟು ಮೊತ್ತದ 15 ಶೇಕಡಾ ಲಂಚ ನೀಡಬೇಕೆಂದು ಭಾರತಮ್ಮ ಬೇಡಿಕೆ ಇರಿಸಿದ್ದರು.
ಈ ಬಗ್ಗೆ ಅ.20ರಂದು ಪರಮೇಶ್, ಕೃಷಿ ನಿರ್ದೇಶಕಿ ಭಾರತಮ್ಮ ಅವರ ಕಚೇರಿಗೆ ತೆರಳಿದಾಗ ಒಂದು ಲಕ್ಷ ರೂ. ಲಂಚ ಮೊದಲು ನೀಡುವಂತೆ ಕೇಳಿಕೊಂಡಿದ್ದರು. ಅಧಿಕಾರಿಯ ಭ್ರಷ್ಟಾಚಾರದ ಬಗ್ಗೆ ಪರಮೇಶ್, ಲೋಕಾಯುಕ್ತ ಗಮನಕ್ಕೆ ತಂದಿದ್ದು ಅವರ ಸೂಚನೆಯಂತೆ ಶನಿವಾರ ಒಂದು ಲಕ್ಷ ರೂ. ಲಂಚ ನೀಡುತ್ತಿದ್ದಾಗಲೇ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿ ಮಹಿಳಾ ಅಧಿಕಾರಿ ಭಾರತಮ್ಮ ಅವರನ್ನು ಲೋಕಾಯುಕ್ತ ಬಂಧಿಸಿದ್ದು, ಹಣವನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್ಪಿ ಸಿ.ಎ. ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಚೆಲುವರಾಜು, ಕಲಾವತಿ, ಇನ್ಸ್ ಪೆಕ್ಟರ್ ಸುರೇಶ್ ಕುಮಾರ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.
Posted by Vidyamaana on 2023-12-27 18:23:46 |
ಪುತ್ತೂರು : ನಗರ ಸಭೆಯ ತೆರವಾದ ಎರಡು ಸ್ಥಾನಗಳಿಗೆ ಡಿ.27 ರಂದು ನಡೆದ ಚುನಾವಣೆಯು ಮುಕ್ತಾಯಗೊಂಡಿದ್ದು, ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಯಿತು.ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆಗಳು ಪ್ರಾರಂಭಗೊಂಡ ಮತದಾನ ಸಂಜೆ 5 ಗಂಟೆಯ ತನಕ ನಡೆಯಿತು.
ವಾರ್ಡ್1ರಲ್ಲಿ ಒಟ್ಟು 1304 ಮತದಾರರಲ್ಲಿ 449 ಪುರುಷರು ಹಾಗೂ 509 ಮಹಿಯರು ಸೇರಿದಂತೆ ಒಟ್ಟು 958 ಮತ ಚಲಾವಣೆಯಾಗಿದೆ. ಶೇ.73.45 ಮತ ಚಲಾವಣೆಯಾಗಿದೆ.ವಾರ್ಡ್ 11 ರಲ್ಲಿ ಒಟ್ಟು 1724 ಮತದಾರರಲ್ಲಿ 525 ಪುರುಷರು, 528 ಮಹಿಳೆಯರು ಸೇರಿದಂತೆ 1053 ಮಂದಿ ಮತ ಚಲಾಯಿಸಿದ್ದು ಶೇ.61.07 ಮತದಾನವಾಗಿದೆ.
Posted by Vidyamaana on 2023-10-07 18:04:41 |
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ರಾಜ್ಯ ಪ್ರವಾಸಕ್ಕೆ ಅನುಮತಿ ನಿರಾಕರಿಸಲಾಗಿದೆ. ತಮ್ಮ ರಾಜ್ಯ ಪ್ರವಾಸ ಕುರಿತು ಸೆಪ್ಟೆಂಬರ್ ಆರಂಭದಲ್ಲಿಯೇ ಪಕ್ಷಕ್ಕೆ ಔಪಚಾರಿಕವಾಗಿ ಪ್ರಸ್ತಾಪಿಸಿದ್ದರೂ ಸಹ ಇಲ್ಲಿಯವರೆಗೂ ಪಕ್ಷದ ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿರುವ ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಸಾರ್ವಜನಿಕವಾಗಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅವರು ಎಲ್ಲಾ 30 ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲಾ ಮತ್ತು ತಾಲೂಕು ನಾಯಕರನ್ನು ಭೇಟಿ ಮಾಡಲು ಪ್ರಸ್ತಾಪಿಸಿದ್ದರು. ಆ ಮೂಲಕ ಸುಮಾರು ಏಳು ತಿಂಗಳಲ್ಲಿ ಲೋಕಸಭೆ ಚುನಾವಣೆಗೆ ಅವರನ್ನು ಪ್ರೋತ್ಸಾಹಿಸಲು ಉದ್ದೇಶಿಸಿದರು.
ಯಡಿಯೂರಪ್ಪ ವಿರುದ್ಧ ಬಿಜೆಪಿಯಲ್ಲಿ ಆಂತರಿಕ ಅಘೋಷಿತ ಶೀತಲ ಸಮರ ಇದೆ. ಅದೇ ಕಾರಣದಿಂದ ಪಕ್ಷದ ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎಂದು ಮೂಲಗಳು ಹೇಳುತ್ತವೆ. ಆದಾಗ್ಯೂ, ಬಿಎಸ್ ವೈ ಹೊರಗೆ ಹೋಗಿ ಪ್ರಚಾರ ಮಾಡಿದರೆ ಮಾತ್ರ ಬಿಜೆಪಿ ಉಳಿದು ಹೆಚ್ಚಿನ ಸ್ಥಾನಗಳನ್ನು ಮರುಪಡೆಯುತ್ತದೆ. ವಿಶೇಷವಾಗಿ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಪಕ್ಷ ಅನುಮತಿ ನೀಡದಿದ್ದರೆ ಏನು ಮಾಡಲು ಸಾಧ್ಯ ಎಂದು ಅವರ ಆಪ್ತರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಸತತ ಮೂರನೇ ವರ್ಷ ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪ್ರವಾಸಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾರೆ ಆದರೆ ಪಕ್ಷವು ಅವರನ್ನು ಕಾಯುವಂತೆ ಕೇಳಿದೆ. ಪ್ರವಾಸದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಪಕ್ಷವು ಹಲವು ಕೆಲಸಗಳಲ್ಲಿ ನಿರತವಾಗಿದೆ, ಯಡಿಯೂರಪ್ಪ ಅವರು ಶೀಘ್ರದಲ್ಲೇ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. ಈ ಮಧ್ಯೆ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರ ಹೆಸರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿದ್ದು, ಅದಾದ ನಂತರ ಯಡಿಯೂರಪ್ಪ ತಮ್ಮ ಪ್ರವಾಸವನ್ನು ಪ್ರಾರಂಭಿಸಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಆದರೆ ಕೆಲವು ಭ್ರಷ್ಟ ವ್ಯಕ್ತಿಗಳೊಂದಿಗೆ ವಿಜಯೇಂದ್ರ ಅವರ ಸಂಪರ್ಕದ ವಿಷಯವನ್ನು ಎತ್ತುತ್ತಿರುವ ಯಡಿಯೂರಪ್ಪ ಅವರನ್ನು ವಿರೋಧಿಸುವ ಗುಂಪು ಅದಕ್ಕೆ ಅಡ್ಡಗಾಲು ಹಾಕುತ್ತಿದೆ ಎನ್ನಲಾಗುತ್ತಿದೆ.
ಯಡಿಯೂರಪ್ಪ ಅವರ ಸಹಾಯಕರಲ್ಲಿ ಒಬ್ಬರಾಗಿದ್ದ ಉಮೇಶ್ ಮೇಲೆ ಇಡಿ ದಾಳಿ ನಡೆಸಿದಾಗ ಇದು ಬಹಿರಂಗವಾಗಿದೆ. ಯಡಿಯೂರಪ್ಪನವರ ವಿರೋಧಿ ಗುಂಪು ಕೂಡ ಅವರ ಮತ್ತೊಬ್ಬ ಪುತ್ರ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿಸಲು ಪ್ರಯತ್ನಿಸುತ್ತಿದೆ. ಆದರೆ, ವಿಜಯೇಂದ್ರಗೆ ಉನ್ನತ ಹುದ್ದೆ ಸಿಕ್ಕರೆ ಸಂತಸ ತರಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.ಒಮ್ಮೆ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾದ ನಂತರ 2019 ರಲ್ಲಿ ಮಾಡಿದಂತೆ ರಾಜ್ಯಾದ್ಯಂತ ಪಕ್ಷದ ಪರ ಪ್ರಚಾರ ಕೈಗೊಳ್ಳುವುದು ಯಡಿಯೂರಪ್ಪ ಅವರ ಕರ್ತವ್ಯ ಎಂದು ಪಕ್ಷದ ಮೂಲಗಳು ಸೂಚಿಸಿವೆ.
Posted by Vidyamaana on 2023-08-03 02:16:51 |
ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮುಂಭಾಗದಲ್ಲಿ ಇರಿಸಲಾಗಿರುವ ಬ್ಯಾರಿಕೇಡ್ ಅನ್ನು ತೆರವು ಮಾಡಿ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವಂತೆ ಪುತ್ತೂರು ವರ್ತಕ ಸಂಘದಿಂದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ನೀಡಲಾಯಿತು.
ಪುತ್ತೂರು ಕೆ.ಎಸ್.ಆರ್.ಟಿ.ಸಿ. ಬಸ್ ಟರ್ಮಿನಲಿಗೆ ಕೋಟಿ – ಚೆನ್ನಯರ ಹೆಸರು ನಾಮಕರಣ ಮಾಡುವ ದಿನದಂದು ಬಸ್ ನಿಲ್ದಾಣ ಮುಂಭಾಗದಲ್ಲಿ ಬ್ಯಾರಿಕೇಡ್’ಗಳನ್ನು ಇಡಲಾಯಿತು. ಬಳಿಕ ಬ್ಯಾರಿಕೇಡ್’ಗಳು ತೆರವು ಮಾಡುವ ಕಾರ್ಯವನ್ನು ಮಾಡಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮಾತ್ರವಲ್ಲ, ಬಸ್ ನಿಲ್ದಾಣದ ಮುಂಭಾಗದಲ್ಲಿ ಸಂಚಾರಿ ದಟ್ಟಣೆಯೂ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಸ್ ನಿಲ್ದಾಣಕ್ಕೆ ವಿಶೇಷ ಚೇತನರು ಆಗಮಿಸುತ್ತಾರೆ. ಬ್ಯಾರಿಕೇಡ್ ಅಳವಡಿಸಿದ ಕಾರಣದಿಂದ ವಾಹನಗಳಿಂದ ರಸ್ತೆಯಲ್ಲೇ ಅವರನ್ನು ಇಳಿಸುವ ಪ್ರಸಂಗ ಎದುರಾಗುತ್ತದೆ. ಬ್ಯಾರಿಕೇಡಿನಿಂದ ವ್ಹೀಲ್ ಚೇರಿನಲ್ಲಿ ಆಗಮಿಸುವುದು ಕಷ್ಟ ಸಾಧ್ಯ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬಸ್ ನಿಲ್ದಾಣದ ಮುಂಭಾಗದಲ್ಲಿ ಬ್ಯಾರಿಕೇಡ್ ಹಾಕಿರುವ ಕಾರಣದಿಂದ, ಬಸ್ ನಿಲ್ದಾಣಕ್ಕೆ ಆಗಮಿಸುವ ವಾಹನಗಳು ರಸ್ತೆಯಲ್ಲೇ ಪ್ರಯಾಣಿಕರನ್ನು ಇಳಿಸಬೇಕಾದ ಪ್ರಸಂಗ ಎದುರಾಗಿದೆ. ವಾಹನಗಳು ರಸ್ತೆಯಲ್ಲೇ ನಿಂತಿರುವುದರಿಂದ, ರಸ್ತೆಯಲ್ಲಿ ಆಗಮಿಸುವ ಬಸ್ ಮೊದಲಾದ ವಾಹನಗಳು, ಪ್ರಯಾಣಿಕರು ತೆರಳುವವರೆಗೆ ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತದೆ. ನಿತ್ಯ ಸಂಚಾರಿ ಕಿರಿಕಿರಿ ಎದುರಾಗಿದೆ. ಆದ್ದರಿಂದ ಇದರ ಬಗ್ಗೆ ಗಮನ ಹರಿಸಿ, ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡುವಂತೆ ಒತ್ತಾಯಿಸಲಾಗಿದೆ.ವರ್ತಕ ಸಂಘದ ಅಧ್ಯಕ್ಷ ಜಾನ್ ಕುಟಿನ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ ಕಾರ್ಯದರ್ಶಿ ಮನೋಜ್ ಟಿವಿ ಸದಸ್ಯರಾದ ಶ್ರೀಕಾಂತ್ ಕೊಳತಾಯ ಸದಾನಂದ ನಾಯ್ಕ್ ಸತೀಶ್ ರೈ ಕಟಾವು ಉಪಸ್ಥಿತರಿದ್ದರು
Posted by Vidyamaana on 2023-12-01 08:29:57 |
ಕಡಬ: ಹಾಸನದಲ್ಲಿ ನಡೆದಿದ್ದ ಶಾಲಾ ಶಿಕ್ಷಕಿ ಕಿಟ್ರ್ಯಾಪ್ ಪ್ರಕರಣವನ್ನು ಪೊಲೀಸರು ಭೇಧಿಸಿದ್ದಾರೆ.
ಕಡಬ ತಾಲೂಕಿನ ನೆಲ್ಯಾಡಿ ಬಳಿ ಅಪಹರಣಕಾರರನ್ನು ಪತ್ತೆ ಹಚ್ಚಿರುವ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿವಾಹ ಮಾಡಿ ಕೊಡಲು ಒಪ್ಪದ ಕಾರಣಕ್ಕೆ ಹಾಸನ ನಗರದ ಹೊರ ವಲಯದ ಬಿಟ್ಟಗೌಡನಹಳ್ಳಿ ಬಳಿ ಖಾಸಗಿ ಶಾಲೆ ಶಿಕ್ಷಕಿಯನ್ನು ರಾಮು ಎಂಬಾತ ಅಪಹರಣ ಮಾಡಿದ್ದನು.
ನೆಲ್ಯಾಡಿ ಬಳಿ ಕಿಟ್ರ್ಯಾಪ್ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಿದ ಹಾಸನ ಪೊಲೀಸರು ವಶಕ್ಕೆ ಪಡೆದು, ಅಪಹರಣಕ್ಕೊಳಗಾದ ಶಾಲಾ ಶಿಕ್ಷಕಿಯನ್ನು ಹಾಸನಕ್ಕೆ ಕರೆದೊಯ್ದಿದ್ದಾರೆ.
ಮದುವೆಗೆ ಒಪ್ಪದ ಅತ್ತೆ ಮಗಳನ್ನು ಸಂಬಂಧಿ ರಾಮು ಎಂಬಾತ ತನ್ನ ಗೆಳೆಯರ ಜೊತೆ ಸೇರಿ ಇನ್ನೋವಾ ಕಾರಿನಲ್ಲಿ ಕಿಟ್ರ್ಯಾಪ್ ಮಾಡಿದ್ದನು.
ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.