Posted by vidyamaana on 2024-07-03 19:28:29 |
ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಶಾಸಕ ಅಶೋಕ್ ರೈ ಕಚೇರಿ ಮೂಲಕ ಉಚಿತ ಕಾರ್ಮಿಕ ಇ ಕಾರ್ಡು ಮಾಡಿಸಿಕೊಂಡ ಕಟ್ಟಡ ಕಾರ್ಮಿಕರಿಗೆ ಕಾರ್ಡು ವಿತರಣಾ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.
ಒಟ್ಟು ೩೪ ಮಂದಿ ಕಾರ್ಮಿಕರಿಗೆ ಕಾರ್ಡು ವಿತರಿಸಲಾಯಿತು. ಕಟ್ಟಡ ಕಾರ್ಮಿಕರು ಶಾಸಕರ ಕಚೇರಿ ಮೂಲಕ ನೋಂದಾವಣೆ ಮಾಡಿಕೊಂಡಿದ್ದರು. ಇ ಕಾರ್ಡು ವಿತರಿಸಿ ಮಾತನಾಡಿದ ಶಾಸಕರು ರಾಜ್ಯ ಸರಕಾರದಿಂದ ಕಾರ್ಮಿಕರಿಗ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.ಆಕಸ್ಮಿಕಮರಣಾವಾದರೆ ರೂ ೧ ಲಕ್ಷ ಮತ್ತು ಅಪಘಾತದಲ್ಲಿ ಮರಣಹೊಂದಿದರೆ ೫ ಲಕ್ಷ ಸರಕಾರದಿಂದ ಪರಿಹಾರ ಸಿಗುತ್ತದೆ. ಕಾರ್ಮಿಕರು ತನ್ನ ಕಚೇರಿ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಒಟ್ಟು ೩೦೦೦ ಮಂದಿಗೆ ಕಾರ್ಡು ವಿತರಣೆ ಮಾಡಲಾಗಿದೆ.
ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸರಕಾರ ನೀಡುತ್ತಿದೆ. ಕಳೆದ ಸಾಲಿನಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ಟ್ಯಾಪ್ ಕೂಡಾ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುವುದರ ಜೊತೆ ಇದುವರೆಗೂ ಕಾರ್ಡು ಮಾಡಿಸದವರು ಶಾಸಕರ ಕಚೇರಿಗೆ ಬಂದು ಉಚಿತವಾಗಿ ಕಾರ್ಡು ಮಾಡಿಸಿಕೊಳ್ಳಬಹುದಾಗಿದೆ ಎಂದು ಶಾಸಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಮಾಧ್ಯಮ ಸಂಚಾಲಕ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ ಉಪಸ್ಥಿತರಿದ್ದರು. ಸಿಬಂದಿ ರಚನಾ ಸ್ವಾಗತಿಸಿ ವಂದಿಸಿದರು.
Posted by Vidyamaana on 2023-11-01 19:52:31 |
ಬೆಂಗಳೂರು : ರಾಜ್ಯದ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರು ಪ್ರಧಾನಮಂತ್ರಿಯವರಲ್ಲಿ ಕೆಲವೊಮ್ಮೆ ಮನವಿ ಮಾಡಿಕೊಳ್ಳುವುದಿರುತ್ತದೆ. ಆದರೆ ಈ ಸಲ ಒಂದು ವಿಶೇಷ ಕಾರಣಕ್ಕಾಗಿ ಪ್ರಧಾನಿ ಮೋದಿಯವರಲ್ಲಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
ಪ್ರಧಾನಿ ಮೋದಿಗೆ ಸಿಎಂ ಸಿದ್ದು ಮಾಡಿದ ಕಳಕಳಿಯ ಮನವಿ ಪತ್ರ
ರಾಜ್ಯದಲ್ಲಿನ 15 ತಿಂಗಳ ಮಗುವೊಂದರ ಚಿಕಿತ್ಸೆಗಾಗಿ ಔಷಧಕ್ಕೆ ಸಂಬಂಧಿಸಿದಂತೆ ಆಮದು ಸುಂಕ ವಿನಾಯಿತಿ ನೀಡುವಂತೆ ಸಿದ್ದರಾಮಯ್ಯ ಅವರು ಪ್ರಧಾನಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲೂ ಮಾಹಿತಿ ಹಂಚಿಕೊಂಡಿದ್ದಾರೆ.ಕರ್ನಾಟಕದ 15 ತಿಂಗಳ ಮೌರ್ಯ ಎಂಬ ಪುಟ್ಟ ಕಂದ ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಈ ಮಗುವಿನ ಖಾಯಿಲೆ ಗುಣಪಡಿಸಬಹುದಾದ ಝೋಲ್ಗೆನ್ಸ್ಮ ಎಂಬ ಚುಚ್ಚುಮದ್ದನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿದ್ದು, ಅದರ ಬೆಲೆ ರೂ. 17.5 ಕೋಟಿ ಇದೆ. ಕೇಂದ್ರ ಸರ್ಕಾರವು ಇದನ್ನು ಮಾನವೀಯ ನೆಲೆಗಟ್ಟಿನಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಆಮದು ಸುಂಕದಿಂದ ವಿನಾಯಿತಿ ನೀಡುವ ಮೂಲಕ ಕರುನಾಡಿನ ಪುಟ್ಟ ಕಂದನ ಪ್ರಾಣ ಉಳಿಸಲು ನೆರವಾಗಬೇಕು ಎಂದು ಮನವಿ ಮಾಡುತ್ತಿದ್ದೇನೆ ಎಂಬುದಾಗಿ ಸಿಎಂ ಮನವಿ ಮಾಡಿಕೊಂಡಿದ್ದಾರೆ.
Posted by Vidyamaana on 2024-06-13 17:25:59 |
ಬೆಂಗಳೂರು : ರಾಜ್ಯ ಸರ್ಕಾರದಿಂದ ವಕೀಲರಿಗೆ ಭದ್ರತೆ ನೀಡುವ ಸಂಬಂಧ ಮಹತ್ವದ ಕ್ರಮ ವಹಿಸಿದೆ. ಇದಕ್ಕಾಗಿ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ-2023 ಜಾರಿಗೊಳಿಸಿದೆ. ಒಂದು ವೇಳೆ ವಕೀಲರ ಮೇಲೆ ಹಲ್ಲೆ ಮಾಡಿದ್ರೆ ಈ ನಿಯಮದಡಿ ಜೈಲು ಶಿಕ್ಷೆ ಫಿಕ್ಸ್ ಆಗಿದೆ.
ರಾಜ್ಯದಲ್ಲಿ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ - 2023 ಜಾರಿ ಮಾಡಲಾಗಿದೆ. ಈ ನಿಯಮವನ್ನು ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಜಾರಿಗೊಳಿಸಿದೆ.
Posted by Vidyamaana on 2024-05-20 16:30:05 |
ಇರಾನ್ : ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾಯುವ ಕೆಲವೇ ಗಂಟೆಗಳ ಮೊದಲು, ಇರಾನ್ ರಾಜ್ಯ ಮಾಧ್ಯಮವು ಭಾನುವಾರ ಹೆಲಿಕಾಪ್ಟರ್ನಲ್ಲಿದ್ದ ನಾಯಕನ ವೀಡಿಯೊಗಳನ್ನು ಹಂಚಿಕೊಂಡಿದೆ.
ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದೊಲ್ಲಾಹಿಯಾನ್ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ತಮ್ಮ ಎದುರು ಕುಳಿತಿರುವುದನ್ನು ಕ್ಯಾಮೆರಾ ನೋಡುತ್ತಿರುವಾಗ ಇರಾನಿನ ನಾಯಕ ವಿಮಾನದ ಕಿಟಕಿಯಿಂದ ಹೊರಗೆ ನೋಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
Posted by Vidyamaana on 2023-06-12 02:48:03 |
ಬೆಂಗಳೂರು: ಮೊದಲ ಯೋಜನೆ ಅನುಷ್ಠಾನಗೊಂಡ ಬೆನ್ನಲ್ಲೇ ಇನ್ನೂ ಮೂರು ಗ್ಯಾರಂಟಿಗಳಿಗೆ ಮುಹೂರ್ತ ನಿಗದಿಯಾಗಿದೆ.
ಜುಲೈ 1ರಂದು 200 ಯೂನಿಟ್ವರೆಗೆ ಉಚಿತ ವಿದ್ಯುತ್ ಪೂರೈಸುವ “ಗೃಹ ಜ್ಯೋತಿ’ ಮತ್ತು ಮಾಸಿಕ ತಲಾ ಹತ್ತು ಕೆಜಿವರೆಗೆ ಅಕ್ಕಿ ವಿತರಿಸುವ “ಅನ್ನಭಾಗ್ಯ” ಜಾರಿಗೊಳಿಸಲಾಗುವುದು. ಇದರ ಬೆನ್ನಲ್ಲೇ ಬಹುತೇಕ ಆಗಸ್ಟ್ 16ರಂದು ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ “ಗೃಹಲಕ್ಷ್ಮೀ” ಗ್ಯಾರಂಟಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ವಿಧಾನಸೌಧ ಆವರಣದಲ್ಲಿ “ಶಕ್ತಿ’ ಯೋಜನೆಗೆ ಚಾಲನೆ ನೀಡಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನ ಭಾಗ್ಯ ಯೋಜನೆಯಿಂದ ವಾರ್ಷಿಕ 10,100 ಕೋಟಿ ರೂ. ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಹಿಂದಿನ ಒಂದು ವರ್ಷದ ಸರಾಸರಿ ಬಳಕೆ ಆಧರಿಸಿ ಗೃಹಬಳಕೆದಾರರ ವಿದ್ಯುತ್ ಸರಾಸರಿ ತೆಗೆಯಲಾಗಿದೆ. ಅದರಂತೆ ಒಂದು ಕುಟುಂಬ 70 ಯೂನಿಟ್ ಉಪಯೋಗಿಸುತ್ತದೆ. ಅದರ ಮೇಲೆ ಶೇ.10ರಷ್ಟು ಹೆಚ್ಚುವರಿ ಉಪಯೋಗಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಪ್ರತಿಪಕ್ಷಗಳು 200 ಯೂನಿಟ್ ಪೂರ್ಣ ನೀಡಿಲ್ಲ ಎಂದು ವಾದಿಸುತ್ತಿವೆ. ಸರ್ಕಾರ ನಡೆಸಿದವರು ಆಡುವ ಮಾತುಗಳೇ ಇವು ಎಂದು ತರಾಟೆಗೆ ತೆಗೆದುಕೊಂಡರು.
ಗೃಹ ಜ್ಯೋತಿ ಯೋಜನೆ ಜುಲೈ 1ರಂದು ಚಾಲನೆ ನೀಡುವುದರಿಂದ ಆಗಸ್ಟ್ 1ರಿಂದ ವಿತರಣೆಯಾಗುವ ಬಿಲ್ ಮೂಲಕ ಗ್ರಾಹಕರಿಗೆ ಇದರ ಲಾಭ ಸಿಗಲಿದೆ. ಇನ್ನು ಯುವನಿಧಿ ಅಡಿ 2022-23ನೇ ಸಾಲಿನ ಪದವೀಧರರು ಹಾಗೂ ವೃತ್ತಿಪರ ಕೋರ್ಸ್ಗಳನ್ನು ಪೂರೈಸಿದವರಿಗೆ ಕ್ರಮವಾಗಿ ಮಾಸಿಕ 3 ಸಾವಿರ ಹಾಗೂ 1,500 ರೂ.ಗಳನ್ನು 24 ತಿಂಗಳು ಮಾತ್ರ ಸಹಾಯಧನ ನೀಡಲಾಗುವುದು ಎಂದರು
Posted by Vidyamaana on 2023-10-18 11:54:37 |
ಬೆಳ್ತಂಗಡಿ: ಅರಣ್ಯ ಭೂಮಿ ಅತಿಕ್ರಮಣ ತೆರವಿಗೆ ಬಂದಿದ್ದ ಅರಣ್ಯಾಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕರ್ತವ್ಯಕ್ಕೆ ಅಡ್ಡಿಪಡಿಸಿ ಸಾರ್ವಜನಿಕರ ಮಧ್ಯೆ ಸರ್ಕಾರಿ ಅಧಿಕಾರಿಯನ್ನು ನಿಂದಿಸಿದ್ದಾಗಿ ಶಾಸಕ ಹರೀಶ್ ಪೂಂಜ ವಿರುದ್ಧ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಅವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು ಅದರಂತೆ ಐಪಿಸಿ ಸೆಕ್ಷನ್ 143, 353, 504, 149 ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದಲ್ಲಿ ಲೋಲಾಕ್ಷ ಯಾನೆ ಅನಂತು ಎಂಬವರು ಅರಣ್ಯ ಇಲಾಖೆಯ ಜಾಗ ಅತಿಕ್ರಮಿಸಿ ಮನೆ ಕಟ್ಟಲು ಮುಂದಾಗಿದ್ದ ಬಗ್ಗೆ ಮಂಗಳೂರು ಅರಣ್ಯ ವಿಭಾಗಕ್ಕೆ ದೂರು ಬಂದಿತ್ತು. ಅದರಂತೆ, ಅ.6 ರಂದು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿದ ಸಿಬಂದಿ ಮನೆಯ ಫೌಂಡೇಶನ್ ತೆರವುಗೊಳಿಸಿದ್ದರು.
ಆದರೆ ಮರುದಿನ ಸ್ಥಳಕ್ಕೆ ಬಂದ ಶಾಸಕ ಹರೀಶ್ ಪೂಂಜ ಹೈಡ್ರಾಮಾ ಮಾಡಿದ್ದು ಪ್ರತಿಭಟನೆ ನಡೆಸಿ ಸಾರ್ವಜನಿಕರ ಗಮನ ಸೆಳೆಯುವ ಯತ್ನ ಮಾಡಿದ್ದರು. ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅವಾಚ್ಯವಾಗಿ ನಿಂದಿಸಿದ್ದ ವಿಡಿಯೋಗಳು ಜಾಲತಾಣದಲ್ಲಿ ಹರುದಾಡಿದ್ದವು. ಈ ವಿಡಿಯೋವನ್ನು ಕರ್ನಾಟಕ ಕಾಂಗ್ರೆಸ್ ತನ್ನ ಜಾಲತಾಣದಲ್ಲಿ ಪ್ರಕಟಿಸಿ, ಬೆಳ್ತಂಗಡಿ ಬಿಜೆಪಿ ಶಾಸಕರ ನಡೆಯನ್ನು ಖಂಡಿಸಿತ್ತು. ಇದೇ ವೇಳೆ, ಅರಣ್ಯ ಇಲಾಖೆ ಭೂಮಿ ಒತ್ತುವರಿ ಮಾಡಿದ ಬಗ್ಗೆ 11 ಜನರ ವಿರುದ್ಧ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಧರ್ಮಸ್ಥಳ ಠಾಣೆಯಲ್ಲಿ ಅ.7ರಂದು ದೂರು ನೀಡಿದ್ದರು. ಇವೆಲ್ಲದರ ನಡುವೆಯೇ ಶಾಸಕ ಪೂಂಜ ಮತ್ತು ಬಿಜೆಪಿ ನಾಯಕರು ಸ್ಥಳದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಅರಣ್ಯ ಇಲಾಖೆಗೆ ಸಡ್ಡು ಹೊಡೆದಿದ್ದರು.
ಅ.9ರಂದು ಮೇಲಧಿಕಾರಿಗಳ ಸೂಚನೆಯಂತೆ ಎಸಿಎಫ್ ಸುಬ್ಬಯ್ಯ ನಾಯ್ಕ್ ಮತ್ತು ಆರ್ ಎಫ್ ಓ ಜಯಪ್ರಕಾಶ್ ಸ್ಥಳಕ್ಕೆ ಪೊಲೀಸರ ಜೊತೆಗೆ ಬಂದು ಮನೆಯ ಶೆಡ್ ತೆರವುಗೊಳಿಸಲು ಮುಂದಾಗಿದ್ದರು. ಬಿಜೆಪಿ ಶಾಸಕ ಪೂಂಜ ಜೊತೆಗೆ ಬಂಟ್ವಾಳ, ಸುಳ್ಯದ ಶಾಸಕರು, ಎಂಎಲ್ಸಿ ಪ್ರತಾಪಸಿಂಹ ನಾಯಕ್ ಸ್ಥಳಕ್ಕೆ ಬಂದು ಹೋರಾಟಕ್ಕೆ ಕೈಜೋಡಿಸಿದ್ದು ಶೆಡ್ ತೆರವು ಮಾಡದಂತೆ ಜಟಾಪಟಿ ನಡೆಸಿದ್ದರು. ಇದೇ ವೇಳೆ, ಶಾಸಕ ಹರೀಶ್ ಪೂಂಜ, ಆರ್ ಎಫ್ ಓ ಜಯಪ್ರಕಾಶ್ ಅವರನ್ನು ಲೋಫರ್ ಎಂದು ಅವಾಚ್ಯವಾಗಿ ನಿಂದಿಸಿದ್ದ ಘಟನೆ ನಡೆದಿತ್ತು. ಈ ಬಗ್ಗೆ ಅ.13ರಂದು ಜಯಪ್ರಕಾಶ್ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು ಶಾಸಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
Posted by Vidyamaana on 2023-05-27 08:55:58 |
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಈ ವರೆಗೆ ನಡೆದಿರುವ ಧರ್ಮಾಧಾರಿತ ಮತ್ತು ರಾಜಕೀಯ ಪ್ರೇರಿತ ಹತ್ಯಾ ಪ್ರಕರಣಗಳ ತನಿಖೆಗೆ ಪೊಲೀಸರ ವಿಶೇಷ ತನಿಖಾ ತಂಡ ರಚಿಸುವಂತೆ ಮಾಜಿ ಸಚಿವ ಬಿ.ರಮಾನಾಥ ರೈ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆದಿರುವ ರಾಜಕೀಯ ಪ್ರೇರಿತ ಹತ್ಯಾ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಮುಂದೆ ಈ ರೀತಿಯ ಘಟನೆಗಳು ನಡೆಯಬಾರದು ಎಂದರು.
ಧರ್ಮಾಧಾರಿತ ರಾಜಕೀಯ ಹತ್ಯೆಗಳು ಜಿಲ್ಲೆಯಲ್ಲಿ ತುಂಬಾ ಆಗಿದೆ. ಹಿಂದೂ ಮತ್ತು ಮುಸ್ಲಿಮ್ ಸಮುದಾಯದ ಆನೇಕ ಮಂದಿ ಅಮಾಯಕರು ಬಲಿಯಾಗಿದ್ದಾರೆ. ಕೇವಲ ವೋಟಿಗಾಗಿ ಅಮಾಯಕ ಹರೀಶ್ ಪೂಜಾರಿಯ ಕೊಲೆಯಾಗಿದೆ. ಶರತ್ ಮಡಿವಾಳ, ಅಶ್ರಫ್, ಜಲೀಲ್, ಪ್ರವೀಣ್ ನೆಟ್ಟಾರು, ಮಸೂದ್, ಫಾಝಿಲ್, ಪ್ರಶಾಂತ್, ಬಾಳಿಗಾ, ಹರೀಶ್ ಪೂಜಾರಿ ಹೀಗೆ ಆನೇಕ ಮಂದಿಯ ಹತ್ಯೆ ಆಗಿದೆ. ಈ ಎಲ್ಲ ಹತ್ಯೆಗಳಲ್ಲಿ ಕಾಂಗ್ರೆಸ್ನ ಯಾವನೇ ಒಬ್ಬ ಕಾರ್ಯಕರ್ತ ಭಾಗಿಯಾಗಿಲ್ಲ. ಆರೋಪ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನ ಹೆಸರಿಲ್ಲ. ಬಿಜೆಪಿ ಮತ್ತು ಎಸ್ಡಿಎಪಿಯ ಕೆಲವು ಮಂದಿ ಹತ್ಯೆಯಲ್ಲಿ ಭಾಗಿಯಾಗಿ ರುವುದು ಬೆಳಕಿಗೆ ಬಂದಿದೆ ಎಂದರು.
ಜಿಲ್ಲೆಯಲ್ಲಿ ನಡೆದಿರುವ ಧರ್ಮಾಧಾರಿತ ರಾಜಕೀಯ ಹತ್ಯಾ ಪ್ರಕರಣಗಳಲ್ಲಿ ಬಲಿಯಾದವರ ಪಟ್ಟಿಯನ್ನು ಸರಕಾರ ತಯಾರಿಸಬೇಕು. ಪ್ರತಿಯೊಂದು ಹತ್ಯಾ ಪ್ರಕರಣದ ನಿಷ್ಪಕ್ಷ ತನಿಖೆಯಾಗಬೇಕು. ಹತ್ಯಾ ಪ್ರಕರಣಗಳಲ್ಲಿ ಯಾರೆಲ್ಲ ಭಾಗಿ ಯಾಗಿದ್ದಾರೆ ಎಂಬ ವಿಚಾರ ಹೊರಬರಬೇಕು ಮತ್ತು ಅವರಿಗೆತಕ್ಕ ಶಿಕ್ಷೆಯಾಗಬೇಕು. ವಿಶೇಷ ತನಿಖಾ ತಂಡದ ನೇತೃತ್ವವನ್ನು ಡಾ.ಎ.ಸುಬ್ರಹ್ಮಣೇಶ್ವರ ರಾವ್ ಅವರಂತಹ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸರಕಾರ ಇದ್ದಾಗ ಯಾವುದೇ ಹತ್ಯೆಗಳು ಆಗಿಲ್ಲ ಎಂದು ಬಿಜೆಪಿ ವಾದ. ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಇಲ್ಲಿ ಹತ್ಯೆ ಮಾಡಿದವರು ಯಾರು ಎನ್ನುವುದು ಮುಖ್ಯ. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಮತೀಯ ಶಕ್ತಿಗಳು ಅಹಿತಕರ ಘಟನೆಯನ್ನು ಸೃಷ್ಟಿಸುವ ಸಾಧ್ಯತೆ ಇದೆ. ಹೀಗಾಗಿ ಸರಕಾರ ದ.ಕ. ಜಿಲ್ಲೆಯಲ್ಲಿ ಹಿಂದೆ ನಡೆದಿರುವ ಧರ್ಮಾಧಾರಿತ ಮತ್ತು ರಾಜಕೀಯ ಪ್ರೇರಿತ ಹತ್ಯಾ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ಜಿಲ್ಲೆಯ ಶಾಂತಿ, ಸಾಮರಸ್ಯಕ್ಕೆ ಧಕ್ಕೆಯಾಗಬಾರದು ಎಂದರು.