Posted by vidyamaana on 2024-07-24 16:52:02 |
ವದೆಹಲಿ : ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯಿಸಿದರು.
ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟ ಇತ್ತು. ಬ್ರಾಡ್ ಗೇಜ್ ಹಳಿ ಮಾಡುವ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆನಂತರ, ಬ್ರಾಡ್ ಗೇಜ್ ಹಳಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂದು ಓಡುತ್ತಿದ್ದ ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ- ಪುತ್ತೂರು ನಡುವೆ ಓಡಾಟ ನಡೆಸುತ್ತಿದ್ದು, ಅದನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಣೆ ಮಾಡಬೇಕು.
ಮಂಗಳೂರು – ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಉಪಯೋಗವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಓಡಾಟ ಮಾಡುವವರಿದ್ದಾರೆ. ಅವರಿಗೂ ಉಪಯುಕ್ತ ಆಗಲಿದೆ. ಇದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿದ್ದು, ನಮ್ಮ ಜಿಲ್ಲೆಯ ಒಳಗೆ ಸಂಚರಿಸುವ ಏಕೈಕ ಪ್ಯಾಸೆಂಜರ್ ರೈಲಾಗಿದೆ.
ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೈಲನ್ನು ಸುಬ್ರಹ್ಮಣ್ಯದವರೆಗೂ ವಿಸ್ತರಣೆ ಮಾಡಬೇಕು ಎಂದು ರೈಲ್ವೇ ಸಚಿವರನ್ನು ಮನವಿ ಮಾಡಿದ್ದಾರೆ. ಇದಕ್ಕುತ್ತರಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸೇನೆಯಿಂದ ನಿವೃತ್ತಿ ಪಡೆದು ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಗ್ಗೆ ಗೌರವ ಹೊಂದಿದ್ದು, ರೈಲ್ವೇ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ಪರಿಹರಿಸಲು ಮುಕ್ತನಿದ್ದೇನೆ ಎಂದು ಹೇಳಿದರು.
Posted by Vidyamaana on 2024-05-31 05:56:04 |
ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಡಾ.ಧನಂಜಯ ಸರ್ಜಿಯವರ ಮಾನವೀಯ ಕಳಕಳಿಯಲ್ಲಿ ಅತೀ ಪ್ರಮುಖ ಸ್ಥಾನ ಪಡೆಯುವುದು ಸರ್ಜಿ ಫೌಂಡೇಶನ್ ನ ವಿಶೇಷಚೇತನ ಮಕ್ಕಳ ಶಾಲೆ.
ಸಾಮಾಜಿಕ ಕಳಕಳಿ ಹೊಂದಿರುವ ಡಾ.ಧನಂಜಯ ಸರ್ಜಿ ಅವರು 2016 ರಲ್ಲಿಮಕ್ಕಳ ದಿನಾಚರಣೆ ಸಂದರ್ಭ 160 ವಿಶೇಷಚೇತನ ಹಾಗೂ ಅನಾಥ ಮಕ್ಕಳನ್ನು ಆರೋಗ್ಯಕ್ಕೆ ಸಂಬಂಧಿಸಿದಂತೆ ದತ್ತು ಪಡೆದಿದ್ದಾರೆ. ಇತ್ತೀಚೆಗೆ ಸರ್ಜಿ ಫೌಂಡೇಷನ್ ಅಡಿಯಲ್ಲಿ ಆ ಎಲ್ಲಾ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ವಿಶೇಷ ಕಾಳಜಿ ವಹಿಸಿರುವುದು ಸರ್ಜಿ ಅವರ ಮಾನವೀಯ ಮೌಲ್ಯಕ್ಕೆ ನಿದರ್ಶನವಾಗಿದೆ.
ವಿಶೇಷಚೇತನ ಮಕ್ಕಳ ಬಾಳಿಗೆ ಹಾಗೂ ಆ ಕುಟುಂಬದ ಪಾಲಿಗೆ ಬೆಳಕಾಗಿದ್ದು ಸರ್ಜಿ ಇನ್ಸ್ಟಿಟೂಟ್
ಇದು ವಿಶೇಷ ಚೇತನ ಮಕ್ಕಳ ತರಬೇತಿ ಕೇಂದ್ರ. ಡಾ.ಧನಂಜಯ ಸರ್ಜಿಯವರ ಈ ಮಾನವೀಯ ಕಳಕಳಿಯಿಂದ ಅಲ್ಲಿ ಸೇರ್ಪಡೆಗೊಂಡ ಮಕ್ಕಳು ಎಲ್ಲರಂತೆ ತಿರುಗಾಡಬಲ್ಲ, ಓಡಾಡಬಲ್ಲ ಹಾಗೆ ಮಾತೂ ಆಡಬಲ್ಲ ಶಕ್ತಿಯನ್ನು ಪಡೆದಿದ್ದಾರೆ. ಈ ಸಂಸ್ಥೆ ನನ್ನಂತಹ ನೂರಾರು ಕುಟಂಬಗಳ ಬಾಳಿನ ಹೊಸ ಆಶಾಕಿರಣ ಎಂದರೆ ತಪ್ಪಿಲ್ಲ ಎನ್ನುತ್ತಾರೆ ಆ ಮಕ್ಕಳ ಹೆತ್ತವರು.
ಶಿವಮೊಗ್ಗದ ತರಂಗ ವಿಶೇಷಚೇತನ ಮಕ್ಕಳ ಶಾಲೆಗೆ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಯಂತ್ರೋಪಕರಣ ಹಾಗೂ ಕೊಠಡಿಯನ್ನು ಸರ್ಜಿ ಫೌಂಡೇಷನ್ ವತಿಯಿಂದ ನಿರ್ಮಾಣ ಮಾಡಿಕೊಡಲಾಗಿದೆ. ರವಿ ಡಿ. ಚನ್ನಣ್ಣನವರು ಶಿವಮೊಗ್ಗದಲ್ಲಿ ಜಿಲ್ಲಾ ರಕ್ಷಣಾಧಿಕಾರಿಯಾಗಿದ್ದ ಸಂದರ್ಭ ಈ ವಿಶೇಷ ಚೇತನ ಮಕ್ಕಳ ಸಶಕ್ತರನ್ನಾಗಿಸಲು ಅರಿವು ಜಾಥಾ ಹಮ್ಮಿಕೊಳ್ಳಲಾಗಿತ್ತು.
Posted by Vidyamaana on 2024-02-12 07:42:40 |
ವಿಟ್ಲ: ಜಿಲ್ಲೆ ಮಾತ್ರವಲ್ಲ ರಾಜ್ಯದ ಚಿತ್ತವನ್ನೇ ತನ್ನತ್ತ ಸೆಳೆದುಕೊಂಡ ಘಟನೆ ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣ. ವಿರಳಾತೀವಿರಳ ಪ್ರಕರಣದಲ್ಲಷ್ಟೇ ಬ್ಯಾಂಕ್ ದರೋಡೆಯನ್ನು ದರೋಡೆಕೋರರು ಯಶಸ್ವಿಯಾಗಿ ನಡೆಸುತ್ತಾರೆ. ಅಂತಹ ಸಿನಿಮೀಯ ಘಟನೆ ಅಡ್ಯನಡ್ಕದಲ್ಲಿ ನಡೆದಿದ್ದು, ದರೋಡೆಕೋರರು ನಗ ಹಾಗೂ ನಗದಿನೊಂದಿಗೆ ಪರಾರಿಯಾಗಿದ್ದಾರೆ.
ಇದೀಗ ಆರೋಪಿಗಳಿಬ್ಬರ ಪತ್ತೆ ಆಗಿರಬಹುದು. ಪೊಲೀಸರು ತಮ್ಮ ಶ್ರಮದ ಎಲ್ಲೆ ಮೀರಿ ದರೋಡೆಕೋರರ ಹೆಡೆಮುರಿ ಕಟ್ಟಿರಬಹುದು. ಆದರೆ, ಈ ಪ್ರಕರಣ ಗ್ರಾಹಕರ ಜವಾಬ್ದಾರಿಯನ್ನು ನೆನಪಿಸಿದೆ ಎಂದು ಹೇಳಿದರೆ ತಪ್ಪಾಗದು.
ಹೌದು! ಎಚ್ಚರ ಗ್ರಾಹಕ ಎಚ್ಚರ!! ಶ್ಲೋಗನ್ ನೀವು ಎಲ್ಲಾ ಕಡೆಯೂ ಕೇಳಿರಬಹುದು. ಇದು ಬ್ಯಾಂಕಿಂಗ್ ಕ್ಷೇತ್ರಕ್ಕೂ ಅನ್ವಯಿಸುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಬ್ಯಾಂಕಿಂಗ್ ಕ್ಷೇತ್ರ ಅತೀ ಸೇಫ್ ಆಗಿದೆ, ಬ್ಯಾಂಕಿಂಗ್ ಉದ್ಯಮಿಗಳು ಹದ್ದಿನ ಕಣ್ಣಿನಿಂದ ನಮ್ಮ ಆಸ್ತಿಯನ್ನು ಕಾಪಾಡುತ್ತಾರೆ ಎಂಬ ಭ್ರಮೆಯಿಂದ ಈಗಲಾದರೂ ಸ್ವಲ್ಪ ಹೊರಬಂದು ನೋಡಿ. ಅಡ್ಯನಡ್ಕ ಕರ್ಣಾಟಕ ಬ್ಯಾಂಕನ್ನು ದರೋಡೆ ಮಾಡುವ ಹಿಂದೆ ಬ್ಯಾಂಕಿನಿಂದ ನಡೆದಿರಬಹುದಾದ ತಪ್ಪುಗಳನ್ನೇ ಗಮನಿಸಿದರೂ ಸಾಕು!!
1) ದರೋಡೆಕೋರರು ಬ್ಯಾಂಕ್ ಒಳನುಗ್ಗಲು ಬಳಸಿದ ಕಿಟಕಿಯನ್ನು ಇದೀಗ ಮುಚ್ಚಲಾಗಿದೆ. ಪೊಲೀಸ್ ಅಧಿಕಾರಿಗಳ ನಿರ್ದೇಶನದಂತೆ ಕಟ್ಟಡದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗುತ್ತಿದೆ.
2) ಸ್ಟ್ರಾಂಗ್ ರೂಮ್ ಅನ್ನು ಇದೀಗ ಮತ್ತಷ್ಟು ಭದ್ರ ಪಡಿಸಲಾಗುತ್ತಿದೆ. ಅದರ ಬಾಗಿಲುಗಳನ್ನು ಕ್ರೇನ್ ಸಹಾಯದಿಂದ ಅಳವಡಿಸಲಾಗುತ್ತಿದೆ.
ತಾವೇ ನಂಬರ್ ವನ್ ಎಂದು ಬಿಂಬಿಸಿಕೊಳ್ಳುತ್ತಾ, ಗ್ರಾಮ ಗ್ರಾಮದಲ್ಲೂ ತಲೆ ಎತ್ತುತ್ತಿರುವ ಬ್ಯಾಂಕಿಂಗ್ ಉದ್ಯಮ ಬರೀಯ ಉದ್ಯಮವಾಗಿದೆಯಷ್ಟೇ. ಗ್ರಾಹಕರು ಅಡ ಇಡುವ ಆಸ್ತಿಗಳ ಸೇಫ್ ಬಗ್ಗೆ ಗಮನ ಹರಿಸಿಯೇ ಇಲ್ಲ. ಗ್ರಾಹಕರು ತಾವು ಸ್ವತ್ತು ಅಡ ಇಡುವ ಮೊದಲು ಇವುಗಳನ್ನೆಲ್ಲಾ ಗಮನಿಸಿಕೊಳ್ಳುವುದು ಅನಿವಾರ್ಯ.
1) ತಮಗೆ ಸೇವೆ ನೀಡುತ್ತಿರುವ ಬ್ಯಾಂಕ್ ಅದೆಷ್ಟು ಸೇಫ್ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕು.
2) ಸ್ವತ್ತುಗಳಿಗೆ ಅವರೆಷ್ಟು ಭದ್ರತೆ ನೀಡುತ್ತಾರೆ ಎನ್ನುವ ಬಗ್ಗೆಯೂ ಖಾತ್ರಿ ಪಡಿಸಿಕೊಳ್ಳಬೇಕು.
3) ಲೋನ್ ನೀಡುವಾಗ ಬ್ಯಾಂಕುಗಳು ಪಡೆದುಕೊಳ್ಳುವ ದಾಖಲಾತಿ, ಪರಿಶೀಲನೆ ಇವುಗಳನ್ನು ಅಡ ಇಡುವ ಸಂದರ್ಭ ಅನುಸರಿಸುತ್ತಿವೆಯೇ? ಇಲ್ಲಾ ಎಂದಾದರೆ ಗ್ರಾಹಕರು ಇವನ್ನು ಮಾಡಲೇಬೇಕು ತಾನೇ?
ಪೊಲೀಸರ ಜವಾಬ್ದಾರಿ:
ಯಾವುದೇ ಅವಘಡ ನಡೆದಾಗಲೂ ಮೊದಲ ಬೈಗುಳ ಪೊಲೀಸರಿಗೆ. ಯಾಕೆ ಹೀಗೆ? ಕೃತ್ಯ ನಡೆದ ಬಳಿಕವಷ್ಟೇ ಪೊಲೀಸರ ಪ್ರವೇಶ ಆಗುತ್ತದೆ. ಅದಕ್ಕೆ ಮೊದಲು ಕೃತ್ಯವನ್ನು ತಡೆಯುವಲ್ಲಿ ಗ್ರಾಹಕರ ಪಾತ್ರ ಪ್ರಮುಖವಾದದ್ದು. ತನಗೇಕೆ ಬೇಕು? ತನಗೇನು ಪ್ರಯೋಜನ? ಎಂಬಿತ್ಯಾದಿ ಧೋರಣೆ ಬಿಟ್ಟು ಪ್ರತಿಯೊಬ್ಬರು ನಮ್ಮ ಕರ್ತವ್ಯ, ಜವಾಬ್ದಾರಿಯನ್ನು ನೆನಪಿಸಿಕೊಳ್ಳಬೇಕು.
ಬ್ಯಾಂಕ್ ದರೋಡೆ ಪ್ರಕರಣವನ್ನೇ ನೋಡಿದರೂ, ದರೋಡೆಕೋರರು ಎಷ್ಟು ಚಾಲಕಿಗಳು ಎನ್ನುವುದನ್ನು ಅರಿತುಕೊಳ್ಳಬಹುದು. ಆಧುನಿಕ ತಂತ್ರಜ್ಞಾನಗಳನ್ನು ಕಳ್ಳರು ಅಥವಾ ದರೋಡೆಕೋರರು ಬಳಸಿಕೊಳ್ಳುವ ರೀತಿಗೆ ಆಶ್ಚರ್ಯಪಡಲೇಬೇಕು. ಹೀಗಿದ್ದರೂ ಕೃತ್ಯವನ್ನು ಬೇಧಿಸಿದರೆ ಪೊಲೀಸರಿಗೆ ಶಹಬ್ಬಾಶ್, ಬೇಧಿಸದೇ ಇದ್ದರೆ ಮತ್ತದೇ ಬೈಗುಳಗಳ ಸುರಿಮಳೆ. ಇದರಿಂದ ಹೊರಬಂದು ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುವ ಅಗತ್ಯ ತುಂಬಾ ಇದೆ.
Posted by Vidyamaana on 2024-05-20 15:33:02 |
ಬಂಟ್ವಾಳ: ಕಾರೊಂದು ಆ್ಯಕ್ಟೀವಾಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕೋಕಳ ಸಮೀಪದ ನೂಜಿ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಘಟನೆಯಲ್ಲಿ ಆ್ಯಕ್ಟೀವಾ ಸವಾರ, ಪುತ್ತೂರಿನ ನೆಹರುನಗರ ರಕ್ತೇಶ್ವರಿ ಗುಡಿಯ ಹಿಂಬದಿ ನಿವಾಸಿ, ನಿವೃತ್ತ ಸೈನಿಕ ಚಿದಾನಂದ್ ಕಾಮತ್ (55) ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಹೇಳಲಾಗಿದೆ.
Posted by Vidyamaana on 2024-01-11 12:16:23 |
ಬೆಂಗಳೂರು : ಇಡೀ ದೇಶವೇ ಬೆಚ್ಚಿಬಿಳಿಸುವಂತಹ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ರಾಜ್ಯದ್ಯಂತ ಎಲ್ಲಾ ವೈದ್ಯಕೀಯ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ದಾಳಿ ನಡೆಸಿ, ಅನೇಕ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಬೀಗ ಹಾಕಿ ನೋಟಿಸ್ ಜಾರಿ ಮಾಡಿತ್ತು.ಇದೀಗ ಆರೋಗ್ಯ ಅಧಿಕಾರಿಗಳು ರಾಜ್ಯಾದ್ಯಂತ ದಾಳಿ ನಡೆಸಿದ ವೇಳೆ ಮತ್ತೊಂದು ಭಯಾನಕ ವಿಷಯ ಹೊರ ಬಿದ್ದಿದ್ದು, ರಾಜ್ಯಾದ್ಯಂತ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆಯಿಂದ ಬರೋಬ್ಬರಿ 34 ಸ್ಕ್ಯಾನಿಂಗ್ ಸೆಂಟರ್ ಗಳನ್ನು ಅಧಿಕಾರಿಗಳು ಸಿಸ್ ಮಾಡಿದ್ದಾರೆ. 469 ಸ್ಕ್ಯಾನಿಂಗ್ ಸೆಂಟರಗಳಿಗೆ ಆರೋಗ್ಯ ಇಲಾಖೆ ನೋಟಿಸ್ ಜಾರಿಗೊಳಿಸಿದೆ.ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ವೇಳೆ 156 ನಕಲಿ ವೈದ್ಯರು ಪತ್ತೆಯಾಗಿದ್ದಾರೆ.
ಬೆಂಗಳೂರು ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಸ್ಕ್ಯಾನಿಂಗ್ ಸೆಂಟರ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಮೈಸೂರಿನಲ್ಲಿ ನಡೆದಂತಹ ಭ್ರೂಣ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಸ್ಕ್ಯಾನಿಂಗ್ ಸೆಂಟರ್ ಗಳ ಕಳ್ಳಾಟ ಹೊರ ಹಾಕಲು ಇಲಾಖೆ ಮುಂದಾಗಿತ್ತು.ಮೈಸೂರಿನ ಪ್ರಕರಣ ಬಯಲಾಗುತ್ತಿದ್ದಂತೆ ಅಧಿಕಾರಿಗಳು ರಾಜ್ಯಾದ್ಯಂತ ದಾಳಿಗೆ ಮುಂದಾಗಿದ್ದರು. ಡಿಸೆಂಬರ್ 31ರ ಒಳಗೆ ರಾಜ್ಯದ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು.ಅಕ್ರಮ ಸ್ಕ್ಯಾನಿಕ್ ಸೆಂಟರ್ ವಿರುದ್ಧ ಕ್ರಮವಹಿಸಿ ವರದಿ ನೀಡಲು ಎಲ್ಲಾ ಡಿಎಚ್ಓ ಹಾಗೂ ಸಿ ಹೆಚ್ ಓ ಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿತ್ತು. ಎಲ್ಲ ಸ್ಕ್ಯಾನಿಂಗ್ ಸೆಂಟರ್ ಮೇಲ್ ದಾಳಿ ಪರಿಶೀಲನೆ ನಡೆಸಿ ಈಗಾಗಲೇ ಅಧಿಕಾರಿಗಳು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿವೆ.ಜೊತೆಗೆ ಅಧಿಕಾರಿಗಳ ಪರಿಶೀಲನೆ ವೇಳೆ 156 ನಕಲಿ ವೈದ್ಯರು ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.ಒಟ್ಟು 583 ಸ್ಕ್ಯಾನಿಕ್ ಸೆಂಟರ್ ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
Posted by Vidyamaana on 2024-07-08 08:41:02 |
ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗೈಡ್ ಹಾಗೂ ಪುಸ್ತಕಗಳನ್ನಿಟ್ಟುಕೊಂಡು ಸಾಮೂಹಿಕ ನಕಲು ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕೇವಲ ಮಕ್ಕಳಲ್ಲ ಶಿಕ್ಷಕರೂ ಅವರಿಗೆ ನೆರವಾಗುತ್ತಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗೈಡ್ ಇಟ್ಟುಕೊಂಡು ಸಾಮೂಹಿಕ ನಕಲು(Mass Cheating) ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಘಟನೆ ಸಿಸಿಟಿವಿಯಲ್ಲಿ ಬಯಲಾಗಿದೆ. ಜುಲೈ 5 ರಂದು ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು ಎಂದು ಎಸ್ ಡಿಎಂ ವಿಜಯ್ ಸಿಂಗ್ ಮಾಹಿತಿ ನೀಡಿದ್ದಾರೆ. ಅವರು ತನಿಖೆಗಾಗಿ ಸ್ಥಳಕ್ಕೆ ಬಂದರು ಆದರೆ ಅಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು. ಇದಾದ ಬಳಿಕ ವಿಡಿಯೋವೊಂದು ಹೊರಬಿದ್ದಿದ್ದು, ನಂತರ ವಿಷಯ ಬೆಳಕಿಗೆ ಬಂದಿದೆ.
Posted by Vidyamaana on 2023-12-08 11:07:51 |
ವಿಟ್ಲ: ಪುತ್ತಿಲ ಪರಿವಾರ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ವಿಟ್ಲ ಇದರ ವತಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಹಾಗೂ ಬೃಹತ್ ಹಿಂದೂ ಚೈತನ್ಯ ಸಮಾವೇಶ, ಪುತ್ತೂರು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರನ ಸನ್ನಿಧಿಗೆ ಬೃಹತ್ ಪಾದಾಯಾತ್ರೆಯು ಡಿ.೯ರಂದು ನಡೆಯಲಿದೆ ಎಂದು ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಮರುವಾಳರವರು ಹೇಳಿದರು.
ಅವರು ವಿಟ್ಲದಲ್ಲಿ ಡಿ.೭ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಹಿಂದೂ ಸಮಾಜದ ಐಕ್ಯತೆಗೆ ಹಾಗೂ ಲೋಕಕಲ್ಯಾಣಾರ್ಥವಾಗಿ ಡಿ.೯ ರಂದು ಮಧ್ಯಾಹ್ನ ೨ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಗೆ ಪಾದಾಯಾತ್ರೆ ಹೊರಡಲಿದೆ. ಪಾದಾಯಾತ್ರೆಯು ಪುತ್ತೂರಿನಿಂದ ಕಬಕ ಮಾರ್ಗವಾಗಿ ವಿಟ್ಲ ತಲುಪಲಿದೆ. ವಿಟ್ಲ ಜೈನ ಬಸದಿಯ ಬಳಿಯಿಂದ ಸ್ವಾಮೀಜಿಗಳು ಹಾಗೂ ಗಣ್ಯರ ಕೂಡುವಿಕೆಯ ಮೂಲಕ ಪಾದಯಾತ್ರೆ ಮುಂದುವರೆಯಲಿದ್ದು, ನಾಲ್ಕು ಮಾರ್ಗದ ಮೂಲಕ ಕ್ಷೇತ್ರ ತಲುಪಲಿದೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಮಧ್ಯಾಹ್ನ ೩ಗಂಟೆಯಿಂದ ಭಜನೆ ಆರಂಭಗೊಳ್ಳಲಿದೆ. ಸಾಯಂಕಾಲ ೪ಗಂಟೆಯಿಂದ ವೇ|ಮೂ| ಉದಯೇಶ ಕೆದಿಲಾಯ ವಿಟ್ಲ ಇವರ ಪೌರೋಹಿತ್ಯದಲ್ಲಿ ಶ್ರೀ ಶನೈಶ್ಚರ ಪೂಜೆ ಪ್ರಾರಂಭಗೊಳ್ಳಲಿದೆ. ರಾತ್ರಿ ಪೂಜೆಯ ಪೂರ್ಣಾಹುತಿ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಕ್ತಿಭಾವ ಸಂಗಮ ನಡೆಯಲಿದೆ.
ಹಿಂದೂ ಚೈತನ್ಯ ಸಮಾವೇಶ:
ಸಾಯಂಕಾಲ ನಡೆಯುವ ಹಿಂದೂ ಚೈತನ್ಯ ಸಮಾವೇಶವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ವಿಟ್ಲ ಇದರ ಅಧ್ಯಕ್ಷರಾಗಿರುವ ನ್ಯಾಯವಾದಿ ಶ್ರೀಕೃಷ್ಣ ಕೇಪುರವರು ವಹಿಸಲಿದ್ದಾರೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಮಹಾಬಲೇಶ್ವರ ಸ್ವಾಮೀಜಿ, ವಿಟ್ಲ ಯೋಗೀಶ್ವರ ಮಠದ ಶ್ರೀ ರಾಜ್ ಗುರು ಯೋಗು ಶ್ರದ್ಧಾನಾಥಜೀ, ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ ಮೊದಲಾದವರು ಆಶೀರ್ವಚನ ನೀಡಲಿದ್ದಾರೆ. ಉಳಿದಂತೆ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ವಿಟ್ಲ ಇದರ ಅಧ್ಯಕ್ಷರಾದ ನ್ಯಾಯವಾದಿ ಶ್ರೀಕೃಷ್ಣ ಕೇಪು, ಸಂಚಾಲಕರಾದ ಸದಾಶಿವ ಅಳಿಕೆ, ಗೌರವಾಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಸೇರಾಜೆ, ಕೋಶಾಧಿಕಾರಿ ಮೋಹನ್ ಸೇರಾಜೆ ಉಪಸ್ಥಿತರಿದ್ದರು.