Posted by vidyamaana on 2024-07-23 21:09:49 |
ಬೆಂಗಳೂರು : ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಸ್ಕೂಲ್ನ ಪರವಾನಗಿ ಹಾಗೂ ಅದೇ ಶಾಲೆಯ ತರಬೇತುದಾರನ ಚಾಲನಾ ಪರವಾನಗಿಯನ್ನು (ಡಿಎಲ್) ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ರದ್ದುಗೊಳಿಸಿದೆ.
ಯುವತಿಗೆ ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪದ ಅಡಿ ಕಾರು ತರಬೇತಿದಾರನ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.
ನಗರದ ಯಾವುದೇ ಡ್ರೈವಿಂಗ್ ಶಾಲೆಯಲ್ಲೂ ಈ ರೀತಿಯ ಘಟನೆಗಳು ನಡೆಯಬಾರದು. ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಹಾಲಕ್ಷ್ಮೀಪುರದ 18 ವರ್ಷದ ಯುವತಿ ನೀಡಿದ್ದ ದೂರು ಆಧರಿಸಿ, ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಸ್ಕೂಲ್ನ ತರಬೇತುದಾರ ಅಣ್ಣಪ್ಪ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?:
ದೂರು ನೀಡಿದ್ದ ಯುವತಿ ಕಾರು ಚಾಲನೆ ಕಲಿಯಲು ಮಾರುತಿ ಡ್ರೈವಿಂಗ್ ಸ್ಕೂಲ್ಗೆ ಸೇರಿದ್ದರು. ಅಣ್ಣಪ್ಪ ಎಂಬಾತ ಕಾರು ಚಾಲನೆ ಬಗ್ಗೆ ತರಬೇತಿ ನೀಡಿದ್ದರು. ಒಂದು ತಿಂಗಳ ಕೋರ್ಸ್ ಮುಕ್ತಾಯವಾದ ಮೇಲೆ ಅಣ್ಣಪ್ಪ, ನಿಮ್ಮ ಮನೆಯ ಕಾರಿನಲ್ಲೇ ಪರಿಪೂರ್ಣವಾಗಿ ಚಾಲನೆ ಬಗ್ಗೆ ಹೇಳಿಕೊಡುತ್ತೇನೆ. ಒಂದು ಗಂಟೆಯ ವಿಶೇಷ ಕ್ಲಾಸ್ಗೆ ₹750 ಕೊಡಬೇಕು ಎಂದು ಯುವತಿಯನ್ನು ಕೇಳಿಕೊಂಡಿದ್ದರು. ಯುವತಿ 15 ದಿನಗಳ ವಿಶೇಷ ಕ್ಲಾಸ್ಗೆ ಅಣ್ಣಪ್ಪ ಅವರಿಗೆ ₹10,500 ಪಾವತಿಸಿದ್ದರು. ಅದರಂತೆ ಅಣ್ಣಪ್ಪ ವಿಶೇಷ ತರಬೇತಿ ಆರಂಭಿಸಿದ್ದರು ಎಂದು ಪೊಲೀಸರು ಹೇಳಿದರು.
ಪ್ರತಿದಿನ ಯುವತಿಯ ಮನೆ ಬಳಿ ಬಂದು ಆಕೆಯ ಕಾರಿನಲ್ಲೇ ಅಣ್ಣಪ್ಪ ಚಾಲನೆ ತರಬೇತಿ ನೀಡುತ್ತಿದ್ದರು. ಜುಲೈ 7ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಯುವತಿ ಮನೆ ಬಳಿ ಬಂದಿದ್ದ ಅಣ್ಣಪ್ಪ, ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಬಗ್ಗೆ ಹೇಳಿಕೊಡಲು ಮುಂದಾಗಿದ್ದರು. ಬಸವೇಶ್ವರ ನಗರದ ನ್ಯಾಷನಲ್ ಶಾಲೆಯ ಮೇಲ್ಸೇತುವೆಯಲ್ಲಿ ತೆರಳುವಾಗ, ಯುವತಿ ಕಾರು ಚಾಲನೆ ಮಾಡುತ್ತಿದ್ದರು. ಆಗ ಅಣ್ಣಪ್ಪ ಅಸಭ್ಯವಾಗಿ ವರ್ತಿಸಿದ್ದರು ಎಂದು ಪೊಲೀಸರು ತಿಳಿಸಿದರು.
ತರಬೇತುದಾರನ ಅಸಭ್ಯ ವರ್ತನೆಯಿಂದ ಗಾಬರಿಗೊಂಡಿದ್ದ ಯುವತಿ ಕಾರನ್ನು ಮನೆಯತ್ತ ತಿರುಗಿಸಿದ್ದರು. ಅದಾದ ಮೇಲೆ ತರಬೇತುದಾರ ಸುಮ್ಮನಾಗಿದ್ದರು. ಅಣ್ಣಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಯುವತಿ ಪೊಲೀಸರಿಗೆ ದೂರು ನೀಡಿದ್ದರು.
Posted by Vidyamaana on 2023-06-05 03:00:41 |
ಪುತ್ತೂರು: ಬೃಹತ್ ಬಟ್ಟೆಗಳ ಮೇಳ “ನ್ಯೂ ಚೆನ್ನೈ ಶಾಪಿಂಗ್” ಜೂ.5 ಸೋಮವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶುಭಾರಂಭಗೊಳ್ಳಲಿದೆ.
ಈ ಮೇಳದಲ್ಲಿ ಕ್ಯಾಶುವಲ್ ಶರ್ಟ್ & ಫಾರ್ಮಲ್ ಶರ್ಟ್, ಲಾಂಗ್ ಫ್ರಾಕ್ & ಲಾಂಗ್ ಚೂಡಿದಾರ್, ಸೀರೆಗಳು ಹಾಗೂ ರೆಡಿಮೆಡ್ ಬಟ್ಟೆಗಳು ಲಭ್ಯವಿದ್ದು, ಮಕ್ಕಳಿಂದ ತೊಡಗಿ ದೊಡ್ಡವರ ವರೆಗೆ ಯಾವುದೇ ವಸ್ತುಗಳನ್ನು ತೆಗೆದುಕೊಂಡರೂ ಕೇವಲ 199 ರೂಪಾಯಿ ಮಾತ್ರ ಆಗಿರುತ್ತದೆ.
ದಿ ಫ್ಯಾಮಿಲಿ ಶಾಪ್ ಧ್ಯೇಯ ವಾಕ್ಯದೊಂದಿಗೆ ಆರಂಭಗೊಳ್ಳುವ ಈ ಮೇಳದ ಸದುಪಯೋಗವನ್ನು ಗ್ರಾಹಕರ ಪಡೆದುಕೊಳ್ಳಬಹುದು ಎಂದು ಶಾಪಿಂಗ್ ಮೇಳದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Posted by Vidyamaana on 2024-02-25 22:08:15 |
ಪುತ್ತೂರು:ಕಬಕ ಸಮೀಪದ ಪೋಳ್ಯದಲ್ಲಿ ಎವಿಯೇಟರ್ ಸ್ಕೂಟರ್ ಮತ್ತು ಮಿನಿ ಟೂರಿಸ್ಟ್ ಬಸ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಫೆ.25ರಂದು ನಡೆದಿದೆ.
ಮಾಸ್ಟರ್ ಪ್ಲಾನರಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಅಳಕೆಮಜಲು ನಿವಾಸಿ ಕ್ಲಿಫರ್ಡ್ ಮೊರಾಸ್ ರಾಜ(45ವ. )ಮೃತಪಟ್ಟವರು.ಸ್ಕೂಟರ್ ಸಹಸವಾರರಾಗಿದ್ದ, ಬಿಹಾರ ಮೂಲದವರಾಗಿದ್ದು ಮುರದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯ ಹೊಂದಿರುವ ಸುರೇಂದರ್ (29ವ) ಮತ್ತು ಸನ್ನೀಫ್ (28ವ)ಗಾಯಗೊಂಡಿದ್ದಾರೆ.ಕ್ಲಿಫರ್ಡ್ ಮೊರಾಸ್ ಅವರು ಆದಿತ್ಯವಾರ ಮಾಸ್ಟರ್ ಪ್ಲಾನರಿ ಸಂಸ್ಥೆಗೆ ರಜೆಯಾದ್ದರಿಂದ, ಅಳಕೆಮಜಲಿನಲ್ಲಿ ಖಾಸಗಿ ಕೆಲಸ ನಿರ್ವಹಿಸಲೆಂದು ಬಿಹಾರ ಮೂಲದ ಕಾರ್ಮಿಕರಾದ ಸುರೇಂದರ್ ಮತ್ತು ಸನ್ನೀಫ್ರನ್ನು ಕರೆಸಿಕೊಂಡಿದ್ದರು. ರಾತ್ರಿ ವೇಳೆ ಅವರನ್ನು ಮುರ ರೂಮ್ ಗೆ ಬಿಡಲೆಂದು ಸ್ಕೂಟರ್ನಲ್ಲಿ ಪುತ್ತೂರು ಕಡೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ರಾಜ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಹಾಗೂ ಮಡಿಕೇರಿಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಮಿನಿ ಬಸ್ ನಡುವೆ ಪೋಳ್ಯ ತಿರುವಿನಲ್ಲಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ರಾಜ ಅವರ ತೊಡೆಯ ಮೇಲೆಯೇ ಬಸ್ ಹರಿದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಕೂಟರ್ ಸಹ ಸವಾರರಾಗಿದ್ದ ಸುರೇಂದರ್ ಅವರ ಎಡ ಕಾಲು ಮುರಿತಕ್ಕೊಳಗಾಗಿದ್ದು, ಸನ್ನೀಫ್ ಅವರ ಮುಖಕ್ಕೆ ಗಾಯವಾಗಿದೆ. ಗಾಯಾಳುಗಳಿಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮೃತ ರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ತೆರಳಿ ಮಾಹಿತಿ ಪಡೆದು ಕೊಂಡಿದ್ದಾರೆ.
ಸಂಜೀವ ಮಠಂದೂರು ಘಟನಾ ಸ್ಥಳಕ್ಕೆ ಭೇಟಿ: ಮಾಜಿ ಶಾಸಕ ಸಂಜೀವ ಮಠಂದೂರು ಅನ್ಯ ಕಾರ್ಯನಿಮಿತ್ತ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ, ಅಪಘಾತ ನಡೆದ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದು ಗಾಯಾಳುವನ್ನು ವಿಚಾರಿಸಿದ್ದಾರೆಂದು ತಿಳಿದು ಬಂದಿದೆ.
Posted by Vidyamaana on 2023-09-28 04:36:11 |
ಮಂಗಳೂರು: ಖಾಸಗಿ ಬಸ್ಸುಗಳ ಅತಿ ವೇಗ ಮತ್ತು ಅಜಾಗರೂಕ ಚಾಲನೆಯಿಂದಾಗಿ ಅಪಘಾತ, ಪ್ರಯಾಣಿಕರ ಜೊತೆ ಸಿಬಂದಿ ಜಗಳ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಬಸ್ ಮಾಲಕರ ಜೊತೆ ತುರ್ತು ಸಭೆ ನಡೆಸಿದ್ದು, ಅಜಾಗರೂಕ ಚಾಲನೆಯಿಂದಾಗಿ ಅಪಘಾತವುಂಟಾಗಿ ಸಾವು ಸಂಭವಿಸಿದಲ್ಲಿ ಚಾಲಕ ಮತ್ತು ಬಸ್ ಮಾಲಕರಿಬ್ಬರ ವಿರುದ್ಧವೂ ಎಫ್ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬಸ್ ಮಾಲಕರ ಜೊತೆಗೆ ಪೊಲೀಸ್ ಕಮಿಷನರ್, ಆರ್ ಟಿ ಓ ಅಧಿಕಾರಿಗಳು ಸಭೆ ನಡೆಸಿದ್ದು ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಟ್ರಾಫಿಕ್ ಪೊಲೀಸ್ ಮತ್ತು ಬಸ್ ಮಾಲಕರ ಮಾತುಗಳನ್ನು ಆಲಿಸಿದ ಬಳಿಕ ಪ್ರತಿಕ್ರಿಯಿಸಿದ ಕಮಿಷನರ್ ಅನುಪಮ್ ಅಗರ್ವಾಲ್, ಬಸ್ ಗಳ ನಡುವಿನ ಪೈಪೋಟಿ ಹಾಗೂ ಇದರಿಂದ ಸಿಬಂದಿ ಮೇಲಿನ ಒತ್ತಡದಿಂದಲೇ ಸಮಸ್ಯೆ ಆಗಿದೆ. ಬಸ್ ಮಾಲೀಕರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಮಾಲೋಚನೆ ನಡೆಸಿ ಕ್ರಮಬದ್ಧ ವೇಳಾಪಟ್ಟಿ ರೂಪಿಸಬೇಕು. ತಿಂಗಳ ಒಳಗೆ ಹೊಸ ನಿಯಮ ಕಾರ್ಯರೂಪಕ್ಕೆ ಬರಬೇಕು. ಅಪಘಾತದಲ್ಲಿ ಪ್ರಾಣ ಹಾನಿ ಸಂಭವಿಸಿದಲ್ಲಿ ಚಾಲಕ ಮತ್ತು ಬಸ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಏಕಕಾಲದಲ್ಲಿ ಮೂರ್ನಾಲ್ಕು ಬಸ್ ಗಳು ಸಂಚಾರ ಮಾಡುತ್ತಿರುವುದರಿಂದ ಪೈಪೋಟಿ ಏರ್ಪಟ್ಟು ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸಂಚಾರಿ ಪೊಲೀಸರು ಸಭೆಯ ಗಮನಕ್ಕೆ ತಂದಿದ್ದಾರೆ. ಕದ್ರಿ ಸಂಚಾರ ಠಾಣೆಯ ಇನ್ಸ್ ಪೆಕ್ಟರ್ ಗೋಪಾಲಕೃಷ್ಣ ಭಟ್ ಮಾತನಾಡಿ, ಕೆಲವು ರೂಟಿನಲ್ಲಿ ಬಸ್ ಮಾಲಕರಿಗೆ ತಮ್ಮ ಬಸ್ಸಿನಲ್ಲಿ ಯಾರು ಸಿಬಂದಿ ಇದ್ದಾರೆಂಬುದೇ ತಿಳಿದಿರುವುದಿಲ್ಲ. ಬಸ್ಸನ್ನು ಲೀಸಿಗೆ ನೀಡುತ್ತಿರುವುದರಿಂದ ಸಿಬಂದಿಗೆ ಕಲೆಕ್ಷನ್ ಮುಖ್ಯವಾಗುವುದೇ ಹೊರತು ಜನರ ಪ್ರಾಣದ ಬಗ್ಗೆ ಕಾಳಜಿ ಇರುವುದಿಲ್ಲ. ಕಲೆಕ್ಷನ್ ಆಗಬೇಕೆಂಬ ಒತ್ತಡಕ್ಕೆ ಬಿದ್ದು ಬಸ್ ಓಡಿಸುತ್ತಾರೆ. ಇದರಿಂದ ಅಪಘಾತಕ್ಕೆ ಕಾರಣ ಆಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪ್ಪಾಡಿ ಮಾತನಾಡಿ, ಅಪಘಾತ, ಪ್ರಾಣ ಹಾನಿ ಆಗದಂತೆ ಕ್ರಮ ವಹಿಸಲು ಸಿಬಂದಿಗೆ ಕಾರ್ಯಾಗಾರ ನಡೆಸಿದ್ದೇವೆ. ಬಸ್ಸಿನ ಮೆಟ್ಟಿಲುಗಳಲ್ಲಿ ನಿರ್ವಾಹಕರು, ಪ್ರಯಾಣಿಕರು ಸಂಚರಿಸದಂತೆ ಸೂಚನೆ ನೀಡಿದ್ದೇವೆ ಎಂದರು. ಆದರೆ ಪರಿಣಾಮ ಆಗಿಲ್ಲ ಯಾಕೆ ಎಂದು ಕಮಿಷನರ್ ಪ್ರಶ್ನೆ ಮಾಡಿದರು. ಆರ್ ಟಿಓ ರವಿಶಂಕರ್ ಮಾತನಾಡಿ, ಸಿಟಿ ಬಸ್ ಗಳಿಗೆ ವೇಳಾಪಟ್ಟಿ ನಿಗದಿ ಪಡಿಸುವುದಕ್ಕೆ ಹೈಕೋರ್ಟ್ ವಿಧಿಸಿದ್ದ ತಡೆಯಾಜ್ಞೆ ತೆರವಾಗಿದೆ. ಹೊಸತಾಗಿ ವೇಳಾಪಟ್ಟಿ ನಿಗದಿಪಡಿಸಲು ಅಡ್ಡಿ ಇಲ್ಲ. ಆ ಕೆಲಸ ಶೀಘ್ರದಲ್ಲಿ ಮಾಡಿಕೊಡುತ್ತೇವೆ ಎಂದು ಹೇಳಿದರು.
ರಸ್ತೆ ಗುಂಡಿಗಳ ಬಗ್ಗೆಯೂ ಬಸ್ ಮಾಲಕರು ಕಮಿಷನರ್ ಗಮನಕ್ಕೆ ತಂದಿದ್ದಾರೆ. ಮಳೆಗಾಲದಲ್ಲಿ ಪೂರ್ತಿಯಾಗಿ ರಸ್ತೆ ಗುಂಡಿ ಬಿದ್ದಿದ್ದು, ಹೆದ್ದಾರಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಹೆದ್ದಾರಿ ಗುಂಡಿ ಬಿದ್ದಲ್ಲಿ, ಅದನ್ನು ಸರಿಪಡಿಸದೇ ಇದ್ದಲ್ಲಿ ಇಂಜಿನಿಯರ್ ಗಳ ವಿರುದ್ಧವೂ ಕ್ರಮ ಕೈಗೊಳ್ಳುವುದಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ರಸ್ತೆಯ ದೋಷದ ಕಾರಣಕ್ಕೆ ಅಪಘಾತ ಸಂಭವಿಸಿದಲ್ಲಿ ಎಫ್ಐಆರ್ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಕಮಿಷನರ್ ಸೂಚನೆ ನೀಡಿದರು.
ನಿಲ್ದಾಣಗಳಲ್ಲಿ ಬಸ್ ಬೇ ಇರದಿರುವುದು, ಅದರಿಂದಾಗಿ ಜನರು ಎಲ್ಲೆಲ್ಲಿ ನಿಲ್ಲುವಂತಾಗಿರುವುದು, ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ಬೇ ಇಲ್ಲದೆ ಪರದಾಡುವುದು ಇತ್ಯಾದಿ ವಿಚಾರಗಳೂ ಚರ್ಚೆಗೆ ಬಂದವು. ಈ ವೇಳೆ, ಎರಡು ತಿಂಗಳ ಹಿಂದೆಯೇ ಬಸ್ ಬೇ ಇರದಿರುವ ಬಗ್ಗೆ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಸ್ಪಂದನೆ ನೀಡದಿರುವ ಬಗ್ಗೆಯೂ ಡಿಸಿಪಿ ದಿನೇಶ್ ಕುಮಾರ್, ಕಮಿಷನರ್ ಗಮನಕ್ಕೆ ತಂದಿದ್ದಾರೆ. ಸಭೆಯಲ್ಲಿ ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿಪಿಗಳಾದ ಮಹೇಶ್ ಕುಮಾರ್, ಗೀತಾ ಕುಲಕರ್ಣಿ, ಮನೋಜ್ ಕುಮಾರ್ ನಾಯ್ಕ್ ಮತ್ತಿತರ ಅಧಿಕಾರಿಗಳಿದ್ದರು.
Posted by Vidyamaana on 2023-12-21 12:24:54 |
ಪುತ್ತೂರು: ಜಾತಿ-ಜಾತಿ ಮಧ್ಯೆ ಸೌಹಾರ್ದತೆಯ ಸಾಮರಸ್ಯ ಮೂಡಿಸುವ ಅಮರ್ ಅಕ್ಟರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ-2023 ಡಿ.19 ರಿಂದ 24ರ ತನಕ ಆರು ದಿನಗಳ ಕಾಲ ಕಿಲ್ಲೆ ಮೈದಾನದಲ್ಲಿ ಜರಗಲಿದ್ದು, ಈ ಕ್ರೀಡಾಕೂಟದ ಉದ್ಘಾಟನೆಯು ಡಿ.19 ರಂದು ಸಂಜೆ ನೆರವೇರಿತು.
ಸಿಟಿ ಫ್ರೆಂಡ್ಸ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು, ಟೆನ್ ಗೈಯ್ಸ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಅಬುಧಾಬಿ, ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು, ಸೌದಿ ಅರೇಬಿಯಾ, ತುಳುನಾಡು ಫ್ರೆಂಡ್ಸ್ ಸೌದಿ ಅರೇಬಿಯಾ ಇವುಗಳ ಜಂಟಿ ಆಶ್ರಯದಲ್ಲಿ ಜರಗಲಿರುವ 11 ಜನರ ಅಂಡರ್ ಆರ್ಮ್ ಈ ಕ್ರಿಕೆಟ್ ಪಂದ್ಯಾಟಕ್ಕೆ ಪ್ರಸ್ತುತ 13ನೇ ವರ್ಷವಾಗಿದ್ದು ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಆಂಜನೇಯ ರೆಡ್ಡಿರವರು ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್, ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಮುಖ್ಯಸ್ಥ ಚೇತನ್ ಕಜೆ, ಬಾಂಧವ್ಯ ಟ್ರೋಫಿಯ ಸಂಯೋಜಕರಾದ ಸ್ಕರಿಯ ಯಂ ಎ - ಫಾರೂಕ್ ಶೇಖ್ , ಭರತ್ ಪ್ರಿಂಟರ್ಸ್ ನ ಭರತ್ ಕುಮಾರ್, ಪಿಪಿಎಲ್ ಆಯೋಜಕರಾದ ಭಾನುಪ್ರಕಾಶ್, ಸಾದಿಕ್ ಬಪ್ಪಳಿಗೆ, ಇಸ್ಮಾಯಿಲ್ ಎಂ.ಬಿ ಬಲ್ನಾಡು, ಜನತಾ ಸ್ಟೇಲ್ ಬಜಾರ್ ಆಶಿಕ್, ಶಾಫಿ ಮುಹಾದ್, ಅಬ್ಬಾಸ್ ಮದರ್ ಇಂಡಿಯ, ಇಬ್ರಾಹಿಂ ಇಬ್ಬ ಸಂಘಟಕ ಅರುಣ್ ಬಪ್ಪಳಿಗೆ ಸಾದಿಕ್ ಸಹಿತ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್.ಐ ಆಂಜನೇಯ ರೆಡ್ಡಿ, ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್, ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಮುಖ್ಯಸ್ಥ ಚೇತನ್ ಕಜೆ, ಬಾಂಧವ್ಯ ಟ್ರೋಫಿಯ ಸಂಯೋಜಕರಾದ ಸ್ಕರಿಯ ಯಂ ಎ ಹಾಗೂ ಫಾರೂಕ್ ಶೇಖ್ , ಭರತ್ ಪ್ರಿಂಟರ್ಸ್ ನ ಭರತ್ ಗೌಡ, ಕೇಬಲ್ ಆಪರೇಟರ್ ಪ್ರವೀಣ್ ಪ್ರಭು, ಇತ್ತೀಚೆಗೆ ಕಥೋಲಿಕ್ ಸಭಾ ಮಂಗಳೂರು ಇವರಿಂದ ಮಂಗಳೂರಿನ ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ.ವಂ.ಡಾ.ಪೀಟರ್ ಪಾವ್ ಸಲ್ದಾನ್ಹಾರವರಿಂದ ಸನ್ಮಾನಿತರಾದ ಪತ್ರಕರ್ತ ಸುದ್ದಿ ಬಿಡುಗಡೆಯ ವರದಿಗಾರ ಸಂತೋಷ್ ಮೊಟ್ಟೆತ್ತಡ್ಕರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಪಂದ್ಯಾಕೂಟದಲ್ಲಿ ಹಳ್ಳಿ ಹುಡುಗ್ರು ಪೇಟೆ ಕಪ್ ಹೆಸರಿನಲ್ಲಿ 60 ತಂಡಗಳು, ಅಮರ್ ಅಕ್ಟರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿಗೆ 24 ತಂಡಗಳು, ಸ್ನೇಹ ಸೌಹಾರ್ದ ಟ್ರೋಫಿ ಹೆಸರಿನಲ್ಲಿ ವಿವಿಧ ಇಲಾಖೆಗಳ 12 ಕ್ರಿಕೆಟ್ ತಂಡಗಳು, ಕಿಲ್ಲೆ ಕಪ್ನಲ್ಲಿ 4 ತಂಡಗಳು ತೀವ್ರ ಹಣಾಹಣಿ ನಡೆಸಲಿದೆ.
ರಝಾಕ್ ಬಿ.ಎಚ್ ನೇತೃತ್ವದಲ್ಲಿ ನಡೆಯುವ ಈ ಕ್ರೀಡಾಕೂಟದಲ್ಲಿ ಪುತ್ತೂರಿನ ವೈದ್ಯರುಗಳು, ಪೊಲೀಸ್ ಇಲಾಖೆ,ಸುದ್ದಿ ಪುತ್ತೂರು ವಕೀಲರು, ಮೆಸ್ಕಾಂ ಉದ್ಯೋಗಿಗಳು, ಬ್ಯಾಂಕ್ ಉದ್ಯೋಗಿಗಳು, ದೈಹಿಕ ಶಿಕ್ಷಣ ಶಿಕ್ಷಕರು, ಭಾಗವಹಿಸುತ್ತಿದ್ದಾರೆ.
Posted by Vidyamaana on 2024-01-14 21:12:12 |
ಹೈದರಾಬಾದ್ : ಪತಿಯ ಕಿರುಕುಳದಿಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ನಾಗರ್ ಕರ್ನೂಲ್ ಜಿಲ್ಲೆಯ ಅಚ್ಚಂಪೇಟೆಯಲ್ಲಿ ಜಿಲ್ಲೆಯಲ್ಲಿ ನಡೆದಿದೆ. ಇದಕ್ಕೆ ಮೃತಳ ಪತಿಯೇ ಕಾರಣ ಎಂದು ಮೃತಳ ಕುಟುಂಬಸ್ಥರು, ಸಂಬಂಧಿಕರು ಪತಿಯನ್ನು ಹೊಡೆದು ಸಾಯಿಸಿದ್ದಾರೆ.ಪ್ರೀತಿಸಿ ಮದುವೆಯಾಗಿರುವ ಸಿಂಧು ಮತ್ತು ನಾಗಾರ್ಜುನ ನಡುವೆ ಕೆಲವು ದಿನಗಳಿಂದ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಸಿಂಧು ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಿತಿ ಹದಗೆಟ್ಟಿದ್ದರಿಂದ ಕುಟುಂಬಸ್ಥರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಾಗರ್ ಕರ್ನೂಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೈದರಾಬಾದ್ಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರಿಂದ ಹಾಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಿಂಧು ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಸಿಂಧು ಸಾವಿನ ವಿಷಯ ತಿಳಿದ ಕುಟುಂಬಸ್ಥರು ಹಾಗೂ ಸಂಬಂಧಿಕರಿಗೆ ಸಿಂಧು ಪತಿ ನಾಗಾರ್ಜುನನನ್ನು ಸ್ವಲ್ಪ ದೂರ ಹೋದ ನಂತರ ನಾಗಾರ್ಜುನ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ. ಸಿಂಧು ನಿನ್ನಿಂದಲೇ ಸತ್ತಿದ್ದಾಳೆ ಎಂದು ಆಕ್ರೋಶಗೊಂಡ ಕುಟುಂಬಸ್ಥರು ನಾಗಾರ್ಜುನನನ್ನು ಆಮನಗಲ್ನಲ್ಲಿ ಕಬ್ಬಿಣದ ಸರಳು ಮತ್ತು ದೊಣ್ಣೆಗಳಿಂದ ಮಧ್ಯರಾತ್ರಿ ವೇಳೆ ಥಳಿಸಿದ್ದಾರೆ. ನಾಗಾರ್ಜುನ ಮೃತಪಟ್ಟಿದ್ದು, ಆತನ ದೇಹ ಕಲ್ವಕುರ್ತಿ ಆಸ್ಪತ್ರೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.ನಾಗಾರ್ಜುನ್ ವರದಕ್ಷಿಣೆಗಾಗಿ ಪತ್ನಿ ಸಿಂಧುಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಿಂಧು ಕುಟುಂಬಸ್ಥರು ಆರೋಪಿಸಿದ್ದಾರೆ. ಮದುವೆಯಾದಾಗಿನಿಂದಲೂ ತನ್ನ ಮಗಳು ಹಲವಾರು ನಿರ್ಬಂಧಗಳು ಮತ್ತು ಚಿತ್ರಹಿಂಸೆಗೆ ಒಳಗಾಗಿದ್ದಳು. ತನ್ನ ಮಗುವಿನ ಸಾವಿಗೆ ಪತಿಯ ಸಂಬಂಧಿಕ ಡಾ. ಕೃಷ್ಣ ಹಾಗೂ ಆತನ ಪತ್ನಿಯೇ ಕಾರಣ ಎಂದು ಸಿಂಧು ತಾಯಿ ಆರೋಪ ಮಾಡಿದ್ದಾರೆ.
Posted by Vidyamaana on 2023-04-27 08:26:28 |
ಪುತ್ತೂರು: ತಾಲೂಕು ಕಚೇರಿಯಲ್ಲಿ ವಿಲೇವಾರಿಯಾಗದೆ ಬಾಕಿಯಾದ ಅಕ್ರಮಸಕ್ರಮ ಫೈಲುಗಳು, ೯೪ ಸಿ, ೯೪ ಸಿಸಿ ಫೈಲುಗಳು ಸೇರಿದಂತೆ ಲಂಚ ಕೊಡದ ಕಾರಣಕ್ಕೆ ಪೆಂಡಿಂಗ್ ಇಟ್ಟಿರುವ ಫೈಲುಗಳು ಇನ್ನು ಕೆಲವೇ ದಿನಗಳಲ್ಲಿ ಮೈ ಕೊಡವಿ ಎದ್ದೇಳಲಿದ್ದು ಇದಕ್ಕೆ ಕಾರ್ಯಕರ್ತರ ಜೈಕಾರ ಅತೀ ಮುಖ್ಯ. ನಿಮ್ಮ ಜೈಕಾರ ಗ್ರಾಮದ ಮನೆ ಮನೆಗಳಿಗೂ ತಲುಪಬೇಕು ಈ ಕಾರಣಕ್ಕೆ ತಾಲೂಕು ಕಚೇರಿಯ ಫೈಲುಗಳ ಅಲುಗಡಬೇಕು ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು.
ಬಡಗನ್ನೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ರವರ ಮನೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.ಬಡವರು ನಯಾ ಪೈಸೆ ಕೊಡದೆ ತಾಲೂಕು ಕಚೇರಿಯಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮಾಡುವ ಕಾಲ ಬರಲಿದೆ. ಯಾರ ಕೈಯ್ಯನ್ನೂ ಬಿಸಿ ಮಾಡದೆ ನಿಮ್ಮ ಕೆಲಸಗಳು ನಡೆಯಲಿದೆ. ಯಾರದೇ ಫೈಲುಗಳಾಗಿರಲಿ, ಕಾಂಗ್ರೆಸ್ ಕಾರ್ಯಕರ್ತನೇ ಆಗಲಿ, ಬಿಜೆಪಿ ಕಾರ್ಯಕರ್ತನೇ ಆಗಲಿ ಜಾತಿ, ಧರ್ಮ, ಪಕ್ಷ ನೋಡದೇ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸವನ್ನು ಖಂಡಿತವಾಗಿಯೂ ಮಾಡುತ್ತೇನೆ. ನೀವು ಆಶೀರ್ವಾದ ಮಾಡಿದ್ದಲ್ಲಿ ನಾನು ಈಗ ಮಾಡುತ್ತಿರುವ ಟ್ರಸ್ಟ್ನ ಸಮಾಜ ಸೇವೆಯನ್ನು ಇನ್ನಷ್ಟು ವಿಸ್ತಾರ ಮಾಡಲಿದ್ದು ಇದಕ್ಕೆ ನನ್ನ ಸ್ವಂತ ಉದ್ದಿಮೆಯ ಹಣವನ್ನು ಬಳಸುತ್ತೇನೆ, ಸರಕಾರದ ಅನುದಾನ ಅದು ಪೂರ್ತಿಯಾಗಿ ಜನರಿಗೆ ತಲುಪುವಂತೆ ಮಾಡುತ್ತೇನೆ ಎಂದು ರೈಗಳು ಹೇಳಿದರು. ಈ ವೇಳೆ ಕಾರ್ಯಕರ್ತರ ಜೈಕಾರ ಘೋಷಣೆ ಮುಗಿಲುಮುಟ್ಟಿತ್ತು.