Posted by vidyamaana on 2024-07-25 16:34:52 |
ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲಾಗುತ್ತದೆ. ಹೀಗಾಗಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ವಿದ್ಯುತ್ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ಬುಧವಾರ ಮುನ್ನೆಚ್ಚರಿಕೆ ನೀಡಿದ್ದಾರೆ
ಕಾರ್ಗಲ್ ನ ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಸದ್ಯ 60 ಸಾವಿರ ಕ್ಯುಸೆಕ್ ಒಳಹರಿವು ಇದೆ.
ಜಲಾಶಯದ ಗರಿಷ್ಠ ಮಟ್ಟ 1819 ಅಡಿಗಳು ಇದ್ದು, ಜಲಾಶಯದಲ್ಲಿ ಈಗ 1801. 20 ಅಡಿ ನೀರಿನ ಸಂಗ್ರಹ ಇದೆ. ಮಳೆ ಹೆಚ್ಚಿರುವುದರಿಂದ ಜಲಾಶಯದ ಮಟ್ಟ ಶೀಘ್ರವೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.
ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಬಹುದು ಎಂದು ಕೆಪಿಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
Posted by Vidyamaana on 2023-05-15 13:48:30 |
ಪುತ್ತೂರು : ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡರ ವಿರುದ್ಧ ಅವಹೇಳನಕಾರಿ ಬರಹದೊಂದಿಗೆ ಭಾವಚಿತ್ರ ಲಗತ್ತಿಸಿ ಬ್ಯಾನರ್ ಅಳವಡಿಸಿದ ಪುತ್ತೂರು ಬಸ್ಸು ನಿಲ್ದಾಣದ ಬಳಿ ಪ್ರಕರಣದಲ್ಲಿ ಇಬ್ಬರನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನರಿಮೊಗರು ಗ್ರಾಮದ ಸಹೋದರರಾದ ವಿಶ್ವನಾಥ್ ಹಾಗೂ ಮಾಧವ ಪೊಲೀಸ್ ವಶದಲ್ಲಿರುವವರು. ಪುತ್ತೂರು ಕೆ.ಎಸ್ಆರ್.ಟಿಸಿ ಬಸ್ಸು ನಿಲ್ದಾಣದ ಎದುರು ಅರಣ್ಯ ಇಲಾಖೆಯ ಆವರಣ ಗೋಡೆ ಬಳಿ ಅವಹೇಳನಕಾರಿ ಬ್ಯಾನರ್ ಅಳವಡಿಸಲಾಗಿತ್ತು.
ಪುತ್ತೂರು ನಗರಸಭಾ ಆಯುಕ್ತ ಮಧು ಎಸ್ ಮನೋಹರ್ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದರಲ್ಲಿ “ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರಧ್ಧಾಂಜಲಿ “ ಎಂದು ನಳಿನ್ ಕುಮಾರ್ ಕಟೀಲು ಹಾಗೂ ಡಿ.ವಿ ಸದಾನಂದ ಗೌಡ ಎಂದು ಬರೆಯಲಾಗಿತ್ತು. ಆ ಬ್ಯಾನರ್ ಗೆ ಚಪ್ಪಲಿ ಹಾರವನ್ನು ಹಾಕಿರುವ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಲಾಗಿತ್ತು.
Posted by Vidyamaana on 2024-01-09 04:59:00 |
HATSAPP ವಿಶ್ವದ ಅತ್ಯಂತ ಜನಪ್ರಿಯ ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಆದರೆ ನೀವು ಏನು ಹೇಳುತ್ತಿದ್ದೀರಿ ಎಂಬುದರ ಕುರಿತು ಇತರ ಜನರು ಸ್ನೂಪ್ ಮಾಡಲು ಸಾಧ್ಯವಾಗದಿದ್ದರೂ, ಇತರ WhatsApp ಡೇಟಾವನ್ನು ಪ್ರಕ್ರಿಯೆಗೊಳಿಸಲಾಗುತ್ತಿಲ್ಲ ಎಂದರ್ಥವಲ್ಲನಿಮ್ಮ ಸ್ಮಾರ್ಟ್ಫೋನ್ನಲ್ಲಿ ಸೇವ್ ಆಗುತ್ತದೆ. ಇದರಿಂದ ಅವರ ಫೋನಿನ ಮೆಮೋರಿ ಕೂಡ ಬೇಗನೆ ಫುಲ್ ಆಗಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ. ಈರೀತಿ ಸ್ಟೋರೇಜ್ ಫುಲ್ ಆಗದಂತೆ ತಡೆಯಲು ಒಂದು ಟ್ರಿಕ್ ಇದೆ.
ವಾಟ್ಸ್ಆಯಪ್ನಲ್ಲಿ ನಿಮಗೆ ಯಾವುದೇ ಮಿಡಿಯಾ ಬಂದರೆ ಅದು ಅಟೋಮೆಟಿಕ್ ಡೌನ್ಲೋಡ್ ಆಗಿ ಫೋನ್ ಗ್ಯಾಲರಿಯಲ್ಲಿ ಸೇವ್ ಆಗುತ್ತದೆ. ಇದನ್ನು ತಡೆಯಲು ವಾಟ್ಸ್ಆಯಪ್ ಸೆಟ್ಟಿಂಗ್ಸ್ನಲ್ಲಿರುವ ಸ್ಟೋರೇಜ್-ಡೇಟಾ ಆಯ್ಕೆಗೆ ತೆರಳಿ ಮಿಡಿಯಾ ಅಟೋ-ಡೌನ್ಲೋಡ್ ಆಯ್ಕೆಯನ್ನು ಆಫ್ ಮಾಡಬೇಕು. ಹೀಗೆ ಮಾಡಿದರೆ ಫೋಟೋ, ವಿಡಿಯೋ ಅಥವಾ ಯಾವುದೇ ಫೈಲ್ಗಳು ನೀವು ಡೌನ್ಲೋಡ್ ಕೊಟ್ಟರೆ ಮಾತ್ರ ಆಗುತ್ತದೆ.
ಇಂದು 16GB, 32GB, 128GB ಮೆಮೊರಿ ಹೊಂದಿರುವ ಸ್ಮಾರ್ಟ್ಫೋನುಗಳು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB, 128GB ಮೆಮೊರಿ ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೋರೇಜ್ ನಿಂದಾಗಿ ಫೋನುಗಳು ನಿಧಾನವಾಗುತ್ತವೆ. ಅಂತೆಯೆ ಫೋನ್ನಲ್ಲಿರುವ ಅಪ್ಲಿಕೇಷನ್ಗಳನ್ನು ತೆರೆದಂತೆ ಮೊಬೈಲ್ನಲ್ಲಿ ಅದು ಸ್ಟೋರ್ ಆಗುತ್ತಾ ಹೋಗುತ್ತದೆ.
ಮೊಬೈಲ್ನಲ್ಲಿ ಹೆಚ್ಚಿನ ಸ್ಥಳ ತಿನ್ನುವುದು ಫೋಟೋ ಮತ್ತು ವಿಡಿಯೋಗಳು. ಈ ತೊಂದರೆಯಿಂದ ದೂರವಾಗಲು ಫೋಟೋ ಮತ್ತು ವಿಡಿಯೋವನ್ನು ಮೊಬೈಲ್ನಲ್ಲಿ ಸೇವ್ ಮಾಡುವ ಬದಲು ಕ್ಲೌಡ್ ಸ್ಟೊರೇಜ್ನಲ್ಲಿ ಸೇವ್ ಮಾಡಬಹುದು.
WhatsApp ಡೌನ್ಲೋಡ್ ಸೆಟ್ಟಿಂಗ್ಗಳಿಗಾಗಿ ಕೆಲವು ಆಯ್ಕೆಗಳನ್ನು ಹೊಂದಿದೆ-ಅವು ಡೇಟಾ ಮತ್ತು ಸಂಗ್ರಹಣೆಯ ಬಳಕೆಯ ಮೆನುವಿನಲ್ಲಿ ಕಂಡುಬರುತ್ತವೆ. Android ಮತ್ತು iOS ಎರಡರಲ್ಲೂ ಆಯ್ಕೆಗಳು ಒಂದೇ ಆಗಿರುತ್ತವೆ. ನೀವು ಮೊಬೈಲ್ ಡೇಟಾವನ್ನು ಅವಲಂಬಿಸಿದ್ದರೆ, ವೈ-ಫೈ ನೆಟ್ವರ್ಕ್ಗೆ ಸಂಪರ್ಕಗೊಂಡಿದ್ದರೆ ಅಥವಾ ಎಂದಿಗೂ ಮಾಧ್ಯಮವು ಸ್ವಯಂಚಾಲಿತವಾಗಿ ಡೌನ್ಲೋಡ್ ಆಗುತ್ತದೆಯೇ ಎಂಬುದನ್ನು ನೀವು ಆಯ್ಕೆ ಮಾಡಬಹುದು. ನೀವು ರೋಮಿಂಗ್ನಲ್ಲಿರುವಾಗ ಸ್ವಯಂಚಾಲಿತ ಡೌನ್ಲೋಡ್ಗಳನ್ನು ಮಿತಿಗೊಳಿಸುವ ಆಯ್ಕೆಯನ್ನು ಆಂಡ್ರಾಯ್ಡ್ ಹೊಂದಿದೆ.
ಡೀಫಾಲ್ಟ್ ಆಗಿ, ನೀವು ಮೊಬೈಲ್ ಡೇಟಾ ಸಂಪರ್ಕವನ್ನು ಹೊಂದಿರುವಾಗ WhatsApp ಚಿತ್ರಗಳನ್ನು ಮತ್ತು ನೀವು Wi-Fi ನೆಟ್ವರ್ಕ್ಗೆ ಸಂಪರ್ಕಗೊಂಡಾಗ ವೀಡಿಯೊವನ್ನು ಡೌನ್ಲೋಡ್ ಮಾಡುತ್ತದೆ. ಈ ಆಯ್ಕೆಗಳನ್ನು ಎಂದಿಗೂ ಅಥವಾ Wi-Fi ನಲ್ಲಿ ಎಲ್ಲವನ್ನೂ ಡೌನ್ಲೋಡ್ ಮಾಡಲು ಮಾತ್ರ ಬದಲಾಯಿಸುವುದು ಕೆಲವು ಮೊಬೈಲ್ ಡೇಟಾವನ್ನು ಉಳಿಸಲು ಸಹಾಯ ಮಾಡುತ್ತದೆ ಆದರೆ ನೀವು ಅದನ್ನು ಡೌನ್ಲೋಡ್ ಮಾಡಲು ಬಯಸಿದಾಗ ಪ್ರತಿ ಚಿತ್ರ ಅಥವಾ ವೀಡಿಯೊವನ್ನು ಟ್ಯಾಪ್ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯೊಂದಿಗೆ ಬರುತ್ತದೆ.
Posted by Vidyamaana on 2023-06-08 03:01:05 |
ಬೆಂಗಳೂರು, ಜೂ.7: ರಾಜ್ಯ ಸರಕಾರವು ಅಲೋಕ್ ಕುಮಾರ್ ಸೇರಿ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಬುಧವಾರ ಆದೇಶ ಹೊರಡಿಸಿದೆ.
ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಅಲೋಕ್ ಕುಮಾರ್ ಅವರನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.
ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಉಮೇಶ್ ಕುಮಾರ್ ಅವರನ್ನು ಅಪರಾಧಗಳು ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.
ಅಪರಾಧಗಳು ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಆರ್. ಹಿತೇಂದ್ರ ಅವರನ್ನು ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನಾಗಿ ನಿಯೋಜಿಸಲಾಗಿದೆ.
ಪೊಲೀಸ್ ಕಂಪ್ಯೂಟರ್ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಸೌಮೇಂದು ಮುಖರ್ಜಿ ಅವರನ್ನು ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ. ಇವರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶದಲ್ಲಿ ತಿಳಿಸಲಾಗಿದೆ.
Posted by Vidyamaana on 2024-02-28 19:43:09 |
ಬೆಂಗಳೂರು : ರಾಜ್ಯಸಭೆ ಚುನಾವಣೆಯ ಫಲಿತಾಂಶದ ನಂತರ ಸಂಭ್ರಮಾಚರಣೆ ನಡೆಸುತ್ತಿದ್ದ ವೇಳೆ ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿವರೆಗೂ ಠಾಣೆಯಲ್ಲೇ ಉಳಿದುಕೊಂಡಿದ್ದ ಅವರು ಪೊಲೀಸ್ ಸಿಬ್ಬಂದಿಯ ಜೊತೆ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಿದ್ದರು. ಪ್ರಕರಣದ ಮುಂದಿನ ಆಯಾಮ ಹಾಗೂ ತನಿಖೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿದ್ದರು.
ವಿಜೇತ ಅಭ್ಯರ್ಥಿ ನಾಸಿರ್ ಹುಸೇನ್ ಜೊತೆ ಬಂದವರ ಪಟ್ಟಿ ಸಂಗ್ರಹಿಸಲಾಗಿದ್ದು, ಟೆಕ್ನಿಕಲ್ ಅನಾಲಿಸಿಸ್ ಹಾಗೂ ವೀಡಿಯೋಗಳನ್ನು ಪರಿಗಣಿಸುವ ಕಾರ್ಯ ಮಾಡಲಾಗುತ್ತಿದೆ. ಸದ್ಯ ವಿಧಾನಸೌಧ ಪೊಲೀಸರು ಘೋಷಣೆ ಕೂಗಿದಾತನ ಶೋಧ ನಡೆಸುತ್ತಿದ್ದಾರೆ.
ಘೋಷಣೆ ಕೂಗಿದ ಸಂದರ್ಭದಲ್ಲಿ ನಾಸೀರ್ ಹುಸೇನ್ ಬಳಿ ಇದ್ದ ವ್ಯಕ್ತಿಗಳನ್ನು ಕರೆಸಿ ಇಂದು (ಬುಧವಾರ) ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವ ಪರಮೇಶ್ವರ್ ಅವರಿಗೆ ಮಾಹಿತಿ ನೀಡಲು ಕಾನೂನು, ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಮುಂದಾಗಿದ್ದಾರೆ. ಬುಧವಾರ ಬೆಳಗ್ಗೆ ಅವರು ಗೃಹ ಸಚಿವರ ನಿವಾಸಕ್ಕೆ ತೆರಳಿದ್ದಾರೆ. ಸದಾಶಿವನಗರದಲ್ಲಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಿವಾಸಕ್ಕೆ ತೆರಳಿರುವ ಹಿತೇಂದ್ರ, ಮಂಗಳವಾರದ ಘಟನೆ, ಪ್ರಕರಣದ ಬೆಳವಣಿಗೆ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರಿಂದ ವೀಡಿಯೋ ಸಂಗ್ರಹ
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿನ ವಿಡಿಯೋ ತುಣುಕುಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ವಾಸ್ತವಾಂಶ ತಿಳಿಯುವುದಕ್ಕಾಗಿ ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ತಯಾರಿ ಮಾಡಲಾಗುತ್ತಿದೆ.
ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ
ಪಾಕಿಸ್ತಾನ ಪರ ಘೋಷಣೆ ಖಂಡಿಸಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಮಂಗಳವಾರ ರಾತ್ರಿ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಮತ್ತೊಂದೆಡೆ, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸಿರ್ ಹುಸೇನ್ ಸ್ಪಷ್ಟನೆ ನೀಡಿದ್ದಾರೆ. ವಿಜಯೋತ್ಸವದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ನನಗೆ ಕೇಳಿಸಿಲ್ಲ. ಒಂದು ವೇಳೆ ಯಾರಾದರೂ ಆ ರೀತಿ ಘೋಷಣೆ ಕೂಗಿದ್ದರೆ ಅಂಥವರ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಹೇಳಿದ್ದಾರೆ.
Posted by Vidyamaana on 2023-04-17 19:03:28 |
ಮೈಸೂರು: ಕೆ.ಆರ್. ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿರುವ ಕಾರಣ ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಆಕ್ರೋಶಗೊಂಡಿದ್ದು ಸೋಮವಾರ ರಾತ್ರಿ ಮನೆಗೆ ಭೇಟಿ ನೀಡಿದ ಸಂಸದ ಪ್ರತಾಪ್ ಸಿಂಹ ಮತ್ತು ಅಭ್ಯರ್ಥಿ ಶ್ರೀವತ್ಸ ಅವರ ಭೇಟಿ ನಿರಾಕರಿಸಿ ಆಕ್ರೋಶ ಹೊರ ಹಾಕಿದ್ದಾರೆ.ಟಿಕೆಟ್ ಕೈ ತಪ್ಪಿದ ಬಳಿಕ ಮನೆಯ ಒಂದು ಹಾಲ್ ನಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದ ರಾಮದಾಸ್ ಅವರು ಇಬ್ಬರನ್ನು ಭೇಟಿಯಾಗಲು ನಿರಾಕರಿಸಿದ್ದಾರೆ. ಮನೆಯ ಮತ್ತೊಂದು ಬಾಗಿಲಿನಿಂದ ಹೊರನಡೆದಿದ್ದಾರೆ.ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾಮದಾಸ್, 30 ವರ್ಷಗಳಿಂದ ಇದ್ದ ತಾಯಿ ಮನೆಯಿಂದ ಓಡಿಸಿದ್ದಾರೆ. ಈಗ ಆ ಮನೆಯಲ್ಲಿ ಇರಬೇಕೋ ಬೇಡವೋ ಎಂಬುದುನ್ನು ನಾಳೆ ಸಂಜೆ ತಿಳಿಸುತ್ತೇನೆ.ಯಾವ ನಿರ್ಧಾರ ಮಾಡಬೇಕು ಅಂತ ನಾಳೆ ಹೇಳುತ್ತೇನೆ.ನಾನು ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಆಶೀರ್ವಾದ ಪಡೆಯಲು ಮನೆಗೆ ಬಂದಿದ್ದೇವು. ಟಿಕೆಟ್ ತಪ್ಪಿರುವ ಕಾರಣ ರಾಮದಾಸ್ ಅವರಿಗೆ ನೋವಾಗಿದೆ.30 ವರ್ಷಗಳಿಂದ ಇದ್ದ ಅವಕಾಶ ಕೈ ತಪ್ಪಿದ ಕಾರಣ ರಾಮದಾಸ್ ಅವರಿಗೆ ಬೇಸರ ಆಗಿರೋದು ಸಹಜ. ನಾಳೆ ನಿಮ್ಮನ್ನು ಭೇಟಿ ಮಾಡುತ್ತೇನೆ. ಪಕ್ಷದ ಜೊತೆ ಇರುತ್ತೇನೆ ಎಂದು ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ ಎಂದಿದ್ದಾರೆ.ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಮಾತನಾಡಿ, ಪಕ್ಷವನ್ನು ತಾಯಿ ಎಂದು ಭಾವಿಸಿರುವವರು ತಾಯಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. 30 ವರ್ಷದಿಂದ ಜತೆ ಇದ್ದೇವು. ಅವರು ನನ್ನ ವಿರುದ್ದ ಕೆಲಸ ಮಾಡಲ್ಲ.ಆ ವಿಶ್ವಾಸ ನನಗೆ ಇದೆ ಎಂದರು.
Posted by Vidyamaana on 2023-12-14 09:45:19 |
ಉಳ್ಳಾಲ, ಡಿ.14: ನಡುರಾತ್ರಿ ಶಾಲೆ ಎದುರು ಬಿಯರ್ ಕುಡಿದು ಬಾಟಲಿಯನ್ನ ರಸ್ತೆಗೆ ಎಸೆದವರನ್ನ ಪ್ರಶ್ನಿಸಿದ ಯುವಕನನ್ನ ಇರಿದು ಕೊಲೆ ಮಾಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿಯ ಜಾಯ್ ಲ್ಯಾಂಡ್ ಶಾಲೆ ಬಳಿ ಬುಧವಾರ ರಾತ್ರಿ ನಡೆದಿದೆ.
ಕೊಲ್ಯ ಸಾರಸ್ವತ ಕಾಲನಿ ಜಾಯ್ ಲ್ಯಾಂಡ್ ಶಾಲಾ ಬಳಿ ನಿವಾಸಿ ವರುಣ್ ಗಟ್ಟಿ(28)ಕೊಲೆಯಾದ ಯುವಕ. ಬುಧವಾರ ರಾತ್ರಿ 10.45ರ ವೇಳೆಗೆ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆಯ ಎದುರುಗಡೆಯ ಕಟ್ಟೆಯೊಂದರಲ್ಲಿ ಕುಳಿತು ಆರೋಪಿ ಸೂರಜ್ ಮತ್ತು ರವಿರಾಜ್ ಎಂಬವರು ಬಿಯರ್ ಕುಡಿದು ಬಾಟಲಿಯನ್ನ ರಸ್ತೆಗೆ ಎಸೆದಿದ್ದರೆನ್ನಲಾಗಿದೆ. ಈ ವೇಳೆ ತನ್ನ ಮನೆಯಲ್ಲಿದ್ದ ವರುಣ್ ಮತ್ತು ಆತನ ಸ್ನೇಹಿತ ಅಕ್ಷಯ್ ಶಾಲೆಯ ಮುಂದೆ ಬಿಯರ್ ಬಾಟಲಿ ಯಾಕೆ ಎಸೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ. ವೇಳೆ ಇತ್ತಂಡಗಳ ನಡುವೆ ವಾಗ್ವಾದ, ತಳ್ಳಾಟ ನಡೆದಿದ್ದು ಸೂರಜ್, ವರುಣ್ ಬೆನ್ನಿಗೆ ಹರಿತವಾದ ಆಯುಧದಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡ ವರುಣ್ ಸಮೀಪದ ತನ್ನ ಮನೆ ಕಡೆ ನಡೆದು ಹೋಗಿದ್ದು ಆತನ ಸಹೋದರ ಶರಣ್ ಮತ್ತು ಸ್ನೇಹಿತರು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ವರುಣ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಘಟನಾ ಸ್ಥಳದ ರಸ್ತೆಯುದ್ದಕ್ಕೂ ವರಣ್ ರಕ್ತ ಹರಿದಿದೆ.
ಇರಿದು ಕೊಲೆ ಮಾಡಿದ ಸೂರಜ್ ಮತ್ತು ಆತನೊಂದಿಗಿದ್ದ ರವಿರಾಜ್ ಸಾರಸ್ವತ ಕಾಲೊನಿ ನಿವಾಸಿಗಳಾಗಿದ್ದು ಇಬ್ಬರನ್ನೂ ಕ್ಷಿಪ್ರವಾಗಿ ಉಳ್ಳಾಲ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರವಿರಾಜ್ ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯನಾಗಿದ್ದು ಸೂರಜ್ ಮರಳು ಸಾಗಿಸುವ ಲಾರಿ ಚಾಲಕನಾಗಿದ್ದಾನೆ.
ಮೃತ ವರುಣ್ ಮಂಗಳೂರು ಮೂಡಾದ ಕಮೀಷನರ್ ಅವರ ವಾಹನದ ಚಾಲಕನಾಗಿದ್ದರು. ಮೃತರು ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.