Posted by vidyamaana on 2024-07-10 06:18:20 |
ಮಂಗಳೂರು: ಉರ್ವಾದಲ್ಲಿ ವೃದ್ಧ ದಂಪತಿಯ ಮೇಲೆ ಹಲ್ಲೆಗೈದು ಚಿನ್ನಾಭರಣ ದರೋಡೆ ಮಾಡಿದ್ದ ಮಧ್ಯಪ್ರದೇಶ ಮೂಲದ ಚಡ್ಡಿ ಬನಿಯಾನ್ ಗ್ಯಾಂಗ್ ಸದಸ್ಯರನ್ನು ಮಂಗಳೂರು ಪೊಲೀಸರು ಮಿಂಚಿನ ಕಾರ್ಯಾಚರಣೆಯಲ್ಲಿ ಸಕಲೇಶಪುರದಲ್ಲಿ ಬಂಧಿಸಿದ್ದಾರೆ.
ಮಧ್ಯಪ್ರದೇಶ ಗುಣಾ ಜಿಲ್ಲೆಯ ರಗೋಗರ್ ತಾಲೂಕಿನ ವಿಶ್ವನಗರ ನಿವಾಸಿ ರಾಜು ಸಿಂಗ್ವಾನಿಯ (24), ಭೋಪಾಲ್ ಜಿಲ್ಲೆಯ ಗುಲಾಬ್ಗಂಜ್ ನಿವಾಸಿ ಮಯೂರ್ (30), ಮಾಧವ್ಗಡ್ ಅಶೋಕನಗರ ನಿವಾಸಿ ಬಾಲಿ (22), ಗುಣಾ ಜಿಲ್ಲೆಯ ಕೋತ್ವಾಲಿ ನಿವಾಸಿ ವಿಕ್ಕಿ (21) ಬಂಧಿತರು.
ಇಂದು ನಸುಕಿನ ಜಾವ ಸುಮಾರು 4 ಗಂಟೆಗೆ ಬರ್ಮುಡಾ ಚಡ್ಡಿ ಮತ್ತು ಬನಿಯನ್ ಧರಿಸಿದ ಸುಮಾರು 30 ರಿಂದ 40 ವರ್ಷ ಪ್ರಾಯದ 4 ಜನ ಯುವಕರು (ಚೆಡ್ಡಿ ಗ್ಯಾಂಗ್) ಉರ್ವಾ ಬಳಿಯ ದೇರೆಬೈಲು ಗ್ರಾಮದ ಕೋಟೆಕಣಿ ರಸ್ತೆಯ ವಿಕ್ಟರ್ ಮೆಂಡೋನ್ಸಾ ಎನ್ನುವವರ ಮನೆಯ ಕಿಟಕಿಯ ಗ್ರಿಲ್ಸ್ ತುಂಡರಿಸಿ ಒಳನುಗ್ಗಿದ್ದು ವೃದ್ಧ ದಂಪತಿಗೆ ಹಲ್ಲೆಗೈದು ಬೆದರಿಸಿ, ಮನೆಯಲ್ಲಿದ್ದ 3 ಮೊಬೈಲ್ ಫೋನ್ ಗಳನ್ನು ನೆಲಕ್ಕೆ ಬಡಿದು ಕಪಾಟಿನ ಲಾಕರ್ ಒಳಗೆ ಇರಿಸಿದ್ದ 12 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಸ್ಯಾಮ್ ಸಂಗ್ ಮೊಬೈಲ್ ಫೋನ್ ಮತ್ತು ರೂ 1 ಲಕ್ಷ ಮೌಲ್ಯದ 10 ಬ್ರಾಂಡೆಡ್ ವಾಚ್ ಗಳು, ರೂ. 3000 ನಗದು ಹಣವನ್ನು ಸುಲಿಗೆ ಮಾಡಿ, ಸದ್ರಿ ಮನೆಯ ವೆರಾಂಡದಲ್ಲಿದ್ದ ಕಾರಿನ ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ವಿಕ್ಟರ್ ಅವರ ಪತ್ನಿ ಪ್ಯಾಟ್ರಿಸಿಯಾ ಮೆಂಡೊನ್ಸಾ ನೀಡಿದ ದೂರಿನಂತೆ ಉರ್ವಾ ಠಾಣೆಯಲ್ಲಿ ಅ.ಕ್ರ 69/2024 ಕಲಂ 309(6), 331(7), 311, 305, 3(5) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣ ನಡೆದ ಬೆನ್ನಲ್ಲೇ ಪೊಲೀಸರು ನಗರ ನಿಸ್ತಂತು ಕೊಠಡಿಗೆ ನೀಡಿದ್ದು, ಎಲ್ಲ ಠಾಣೆಯ ಪೊಲೀಸರಿಗೆ ಅಲರ್ಟ್ ಸೂಚನೆ ಹೋಗಿತ್ತು. ಮುಲ್ಕಿ ಬಸ್ಸು ನಿಲ್ದಾಣದ ಸಮೀಪ ನಿಲ್ಲಿಸಿದ್ದ ಕಳವು ಮಾಡಲ್ಪಟ್ಟ ಕಾರನ್ನು ಪತ್ತೆ ಮಾಡಿ ಆಸುಪಾಸಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೆ.ಎಸ್.ಅರ್.ಟಿ.ಸಿ ಬಸ್ಸಿನಲ್ಲಿ ಶಂಕಿತ ವ್ಯಕ್ತಿಗಳು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡುಬಂದಿತ್ತು.
ಕೂಡಲೇ ಕೆ.ಎಸ್.ಅರ್.ಟಿ.ಸಿ ಅಧಿಕಾರಿಗಳನ್ನು ಸಂಪರ್ಕಿಸಿ, ಮುಲ್ಕಿ ಕಡೆಯಿಂದ ಮಂಗಳೂರಿಗೆ ಬಂದ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಮಾಹಿತಿ ಪಡೆದಿದ್ದು ಬಾಗಲಕೋಟೆ ಕಡೆಯಿಂದ ಮಂಗಳೂರಿಗೆ ಬಂದಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸಿನ ನಿರ್ವಾಹಕರು ಅವರ ಬಸ್ಸಿನಲ್ಲಿ ಮುಲ್ಕಿಯಿಂದ 4 ಜನರು ಒಟ್ಟಿಗೆ ಪ್ರಯಾಣಿಸಿದ ಮಾಹಿತಿ ತಿಳಿಸಿದ್ದರು. ಸದರಿ ವ್ಯಕ್ತಿಗಳು ಅವರಲ್ಲಿ ಬೆಂಗಳೂರಿಗೆ ಹೋಗುವ ಬಸ್ಸಿನ ಬಗ್ಗೆ ಮಾಹಿತಿ ಕೇಳಿದ ಬಗ್ಗೆ ತಿಳಿಸಿದ್ದರು. ಮಂಗಳೂರಿನಿಂದ ಬೆಂಗಳೂರಿಗೆ ಹೋದ ಬಸ್ಸಿನ ನಿರ್ವಾಹಕರನ್ನು ಸಂಪರ್ಕಿಸಿ ಅವರ ಮಾಹಿತಿಯಂತೆ ವಿಷಯವನ್ನು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ತಿಳಿಸಲಾಗಿತ್ತು. ಸಕಲೇಶಪುರ ಡಿವೈಎಸ್ಪಿ, ಸಿಪಿಸಿ ಹಾಗೂ ಸಿಬ್ಬಂದಿಗಳ ತಂಡ ಸಕಲೇಶಪುರ ಸಮೀಪ ಸದರಿ ಬಸ್ಸನ್ನು ತಡೆದು ನಿಲ್ಲಿಸಿ ಅದರಲ್ಲಿ ಪ್ರಯಾಣಿಸುತ್ತಿದ್ದ 4 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ದರೋಡೆ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದಾರೆ. ಅವರ ಬಳಿಯಲ್ಲಿದ್ದ ಮಂಗಳೂರಿನಲ್ಲಿ ಸುಲಿಗೆ ಮಾಡಿದ್ದ ಎಲ್ಲಾ ಚಿನ್ನ ಹಾಗೂ ವಜ್ರದ ಆಭರಣಗಳು, ವಾಚ್ ಹಾಗೂ ಹಣವನ್ನು ವಶಪಡಿಸಿ ಉರ್ವಾ ಪೊಲೀಸರಿಗೆ ನೀಡಿರುತ್ತಾರೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸುಳಿವೇ ಇಲ್ಲದ ಕೃತ್ಯದ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಸಿದ್ದಾರ್ಥ್ ಗೋಯಲ್, ದಿನೇಶ್ ಕುಮಾರ್, ಮಂಗಳೂರು ಕೇಂದ್ರ ವಿಭಾಗದ ಎಸಿಪಿ ಪ್ರತಾಪ್ ಸಿಂಗ್ ತೋರಟ್, ಉರ್ವಾ ಠಾಣೆಯ ನಿರೀಕ್ಷಕರಾದ ಭಾರತೀ ಜಿ. ನೇತೃತ್ವದಲ್ಲಿ ಉರ್ವಾ ಪೊಲೀಸ್ ಠಾಣೆಯ ಎಸ್.ಐ ಹರೀಶ ಹೆಚ್.ವಿ , ಅನಿತಾ ಹೆಚ್.ಬಿ, ಎ.ಎಸ್.ಐ ವಿನಯ್ ಕುಮಾರ್, ವೇಣುಗೋಪಾಲ್ ಸಿಬ್ಬಂದಿಗಳಾದ ಪುಷ್ಪರಾಜ್, ಪ್ರಮೋದ್, ನಾರಾಯಣ, ಸತೀಶ್, ಪೀಟರ್, ರಾಮಚಂದ್ರ ವೆಂಕಟೇಶ್, ಅಭಿಷೇಕ್, ಪ್ರಜ್ವಲ್ ಕಾರ್ಯಾಚರಣೆ ನಡೆಸಿದ್ದಾರೆ. ಶೀಘ್ರ ಪತ್ತೆ ಕಾರ್ಯಕ್ಕೆ ಹಾಸನ ಜಿಲ್ಲೆಯ ಎಸ್ಪಿ ಮಹಮ್ಮದ್ ಸುಜೀತಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಮ್ಮಯ್ಯ ಎಂ.ಕೆ , ಸಕಲೇಶಪುರ ಉಪ ವಿಭಾಗದ ಡಿವೈಎಸ್ಪಿ ಪ್ರಮೋದ್ ಬಿ., ಸಕಲೇಶಪುರ ನಗರ ಪಿ.ಎಸ್.ಐ ಪ್ರಮೋದ್ ಕೆ.ಎಸ್ ಮತ್ತು ಗ್ರಾಮಾಂತರ ಠಾಣೆಯ ಪಿ.ಎಸ್.ಐ ಸದಾಶಿವ ತಿಪ್ಪರೆಡ್ಡಿ, ಸಿಬ್ಬಂದಿಗಳಾದ ಖಾದರ್ ಆಲಿ, ಸುನಿಲ್, ಜಗದೀಶ್, ಯೋಗಿಶ್, ಮೂಲ್ಕಿ ಪೊಲೀಸ್ ಠಾಣೆಯ ಪಿ.ಎಸ್.ಐ ವಿನಾಯಕ್ ಬಾವಿಕಟ್ಟೆ, ಸಿಬ್ಬಂದಿಗಳಾದ ಹರೀಶೇಖರ್ ಎ.ಎಸ್.ಐ ಕಿಶೋರ್ ಕೋಟ್ಯಾನ್ , ಚಂದ್ರಶೇಖರ್ ಹಾಗೂ ಶಶಿಧರ್ ಸಹಕರಿಸಿರುತ್ತಾರೆ.
Posted by Vidyamaana on 2023-02-07 13:48:38 |
ಜಿದ್ದಾ: ಯುವ ಕಾಂಗ್ರೆಸ್ ಕಾರ್ಯಕರ್ತನೋರ್ವ ಸೌದಿ ಅರೇಬಿಯಾದ ಪವಿತ್ರ ಕಅಬಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸುವ ಫಲಕವನ್ನು ಹಿಡಿದಿದ್ದಕ್ಕಾಗಿ ಆತನನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಧ್ಯಪ್ರದೇಶದ ಝಾನ್ಸಿ ಬಳಿಯ ನಿವಾರಿ ಜಿಲ್ಲೆಯ ನಿವಾಸಿ ರಝಾ ಖಾದ್ರಿ (26) ಅವರನ್ನು ಮಕ್ಕಾದಲ್ಲಿನ ಪವಿತ್ರ ಕಾಬಾದಲ್ಲಿ ಫಲಕವನ್ನು ಪ್ರದರ್ಶಿಸಿದ್ದಕ್ಕಾಗಿ ಬಂಧಿಸಲಾಗಿದೆ.ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸುವ ಫಲಕವನ್ನು ಹಿಡಿದಿರುವ ಛಾಯಾಚಿತ್ರವನ್ನೂ ಅವರು ತೆಗೆದುಕೊಂಡಿದ್ದರು. ಎರಡು ದಿನಗಳ ನಂತರ, ಮಧ್ಯಪ್ರದೇಶದ ಇತರ ಯಾತ್ರಾರ್ಥಿಗಳೊಂದಿಗೆ ತಂಗಿದ್ದ ಹೋಟೆಲ್ ನಲ್ಲಿ ಅವರನ್ನು ಸೌದಿ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇಸ್ಲಾಮಿಕ್ ಪವಿತ್ರ ಸ್ಥಳಗಳು ಸೇರಿದಂತೆ ಸೌದಿ ಅರೇಬಿಯಾದಲ್ಲಿ ಯಾವುದೇ ರೀತಿಯ ಧ್ವಜ ಮತ್ತು ಫಲಕವನ್ನು ಪ್ರದರ್ಶಿಸುವುದು ಕಾನೂನುಬಾಹಿರವಾಗಿದೆ.
Posted by Vidyamaana on 2024-05-13 15:11:55 |
ಉಪ್ಪಳ: ಖಾಸಗಿ ಬಸ್ ಮತ್ತು ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಉಪ್ಪಳ ಗೇಟ್ ಬಳಿ ನಡೆದಿದೆ.
ಪ್ರಯಾಣಿಕರನ್ನು ಇಳಿಸಲು ರಸ್ತೆ ಬದಿ ನಿಲ್ಲಿಸಿದ್ದ ಬಸ್ಸನ್ನು ಹಿಂದಿಕ್ಕುವ ರಭಸದಲ್ಲಿ ಕಂಟೈನರ್ ಲಾರಿಯೊಂದು ಮುಂದೆ ಬರುತ್ತಿದ್ದ ಇನ್ನೊಂದು ಬಸ್ಸಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ತಲಪಾಡಿ ಯಿಂದ ಕಾಸರಗೋಡಿಗೆ ಹಾಗೂ ಲಾರಿ ಮಂಗಳೂರು ಕಡೆಗೆ ತೆರಳುತ್ತಿತ್ತು.
Posted by Vidyamaana on 2023-10-23 13:14:43 |
ಪುತ್ತೂರು: ಮುಕ್ವೆ ನಿವಾಸಿ ಮುಕ್ವೆ ರಹ್ಮಾನಿಯಾ ಜುಮಾ ಮಸೀದಿಯ ಜಮಾಅತ್ ಸದಸ್ಯಎ.ಕೆ.ಮಮ್ಮುಂಞ (70 ವ.) ಅಲ್ಪಕಾಲದ ಅನಾರೋಗ್ಯದಿಂದ ಅ. 23ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಮುಕ್ವೆ ನಿವಾಸಿ ರೋಯಲ್ ಉಮ್ಮರ್ ಹಾಜಿ ಮತ್ತು M A ಅಬೂಬಕ್ಕರ್ ಹಾಜಿ ಪುರುಷರ ಕಟ್ಟೆ ಅವರ ಸಹೋದರಿಯ ಗಂಡ.
ಮೃತರು ಪತ್ನಿ, ಮಕ್ಕಳಾದ ನಾಸೀರ್, ಸಲೀಮ್, ಮನ್ಸೂರ್ ಮತ್ತು ರಿಯಾಝ್ ಅವರನ್ನು ಅಗಲಿದ್ದಾರೆ.
Posted by Vidyamaana on 2024-05-24 11:06:49 |
ಕನ್ಯಾನ : ಸಂಶಯಾಸ್ಪದವಾಗಿ ಮೃತಪಟ್ಟ ವ್ಯಕ್ತಿಯೊಬ್ಬರ ಶವ ದಫನ ಮಾಡಿದ ಬಳಿಕ, ಸಾವಿನಲ್ಲಿ ಸಂಶಯವಿದೆ ಎಂದು ಮೃತ ವ್ಯಕ್ತಿಯ ಸಹೋದರ ಮಂಜೇಶ್ವರ ಠಾಣೆಗೆ ದೂರು ನೀಡಿದ್ದು, ನ್ಯಾಯಾಲಯದ ಆದೇಶದಂತೆ ಕನ್ಯಾನ ಬಂಡಿತ್ತಡ್ಕ ಮಸೀದಿ ಆವರಣದಲ್ಲಿ ದಫನ ಮಾಡಿದ್ದ ಶವವನ್ನು 18 ದಿನಗಳ ಬಳಿಕ ಮೇಲೆತ್ತಿ ಮರಣೋತ್ತರ ಪರೀಕ್ಷೆಯನ್ನು ಗುರುವಾರ ನಡೆಸಲಾಯಿತು.
ಕೇರಳದ ಸುಂಕದಕಟ್ಟೆ ಮಜೀರ್ಪಳ್ಳ ನಿವಾಸಿ ಅಶ್ರಫ್ (44) ಅವರ ದೇಹವನ್ನು ಕನ್ಯಾನದ ಬಂಡಿತ್ತಡ್ಕದಲ್ಲಿರುವ ರಹ್ಮಾನಿಯಾ ಜುಮಾ ಮಸೀದಿ ಆವರಣದಲ್ಲಿ ದಫನ ಮಾಡಲಾಗಿತ್ತು. ಆ ಶವವನ್ನು ಬಂಟ್ವಾಳ ತಹಶೀಲ್ದಾರ್ ಡಿ.ಅರ್ಚನಾ ಭಟ್, ಮಂಜೇಶ್ವರ ಸಿಪಿಐ ರಾಜೀವ್ ಕುಮಾರ್ ಕೆ., ಕೇರಳ ಆರೋಗ್ಯ ಇಲಾಖೆಯ ಡಾ.ಹರಿಕೃಷ್ಣ ಕಾಸರಗೋಡು, ಯೆನೆಪೋಯ ವಿಧಿವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಕಿಶೋರ್ ಕುಮಾರ್ ಬಿ., ವಿಟ್ಲ ಪೊಲೀಸರ ಸಮ್ಮುಖದಲ್ಲಿ ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ದೇಹದ ಅಂಗಾಗಳ ಮಾದರಿಯನ್ನು ವಿಧಿವಿಜ್ಞಾನ ತಂಡ ಪಡೆದುಕೊಂಡಿದ್ದು, ತನಿಖೆಗಾಗಿ ಯೆನೆಪೋಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಅಧಿಕಾರಿಗಳ ಸೂಚನೆಯಂತೆ ಬಂದಿದ್ದು, ವರದಿಯನ್ನು ಕೇರಳದ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
Posted by Vidyamaana on 2023-05-12 15:30:03 |
ಪುತ್ತೂರು : ನಿನ್ನೆ ಸುರಿದ ಭಾರೀ ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದು ಹಾನಿಗೊಂಡ ಸ್ಥಳಕ್ಕೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರು ಭೇಟಿ ನೀಡಿದರು.ಲೋಕೇಶ್ ಮೇರ್ಲ ಎಂಬವರ ಮನೆಗೆ ಮರ ಬಿದ್ದು, ಸಂಪೂರ್ಣ ಛಾವಣಿ ಹಾನಿಗೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪುತ್ತಿಲ ರವರು ತಮ್ಮಿಂದಾದ ಧನ ಸಹಾಯವನ್ನು ಮಾಡಿದರು.ಪುತ್ತೂರಮೂಲೆ ಸಂತೋಷ್ ಕುಮಾರ್ ಎಂಬವರ ಮನೆಗೆ ಮರ ಬಿದ್ದು ಹಾನಿಗೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿ ತಮ್ಮಿಂದಾದ ಧನ ಸಹಾಯವನ್ನು ಮಾಡಿದರು.
Posted by Vidyamaana on 2024-02-25 08:33:25 |
ಕರ್ನಾಟಕ ಮೂಲದ ನಟಿ ಪ್ರಿಯಾಮಣಿ ಇತ್ತೀಚೆಗಷ್ಟೆ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ
ಕನ್ನಡತಿ ನಟಿ ಪ್ರಿಯಾಮಣಿ, ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಪ್ರತಿಭಾವಂತ ನಟಿ ಈಗಲೂ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.ಬರೋಬ್ಬರಿ ಎರಡು ದಶಕಕ್ಕೂ ಹೆಚ್ಚು ಸಮಯದಿಂದ ನಟನೆಯಲ್ಲಿ ತೊಡಗಿಸಿಕೊಂಡಿರುವ ಪ್ರಿಯಾಮಣಿ, ಈಗಲೂ ಸಾಲು-ಸಾಲು ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ.ಇತ್ತೀಚೆಗಷ್ಟೆ ಪ್ರಿಯಾಮಣಿ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಮರ್ಸಿಡೀಸ್ ಬೆಂಜ್ ನ ಜಿಎಲ್ಸಿ ಕಾರನ್ನು ಪ್ರಿಯಾಮಣಿ ಖರೀದಿ ಮಾಡಿದ್ದಾರೆ.
ತಮ್ಮ ಪತಿ ಮುಸ್ತಾಫಾ ರಾಜಾ, ಅತ್ತೆಯೊಟ್ಟಿಗೆ ಮರ್ಸಿಡೀಜ್ ಬೆಂಜ್ ಶೋರೂಂಗೆ ಬಂದು ಮೆಚ್ಚಿನ ಕಾರನ್ನು ಖರೀದಿ ಮಾಡಿದ್ದಾರೆ ಪ್ರಿಯಾಮಣಿಅರಿಶಿಣ-ಕುಂಕುಮವಿಟ್ಟು, ತೆಂಗಿನ ಕಾಯಿ ಒಡೆದು, ಹಾರ ಹಾಕಿ ಕಾರಿಗೆ ಪೂಜೆ ಮಾಡಿ ಕಾರನ್ನು ಕೊಂಡೊಯ್ದಿದ್ದಾರೆ ಪ್ರಿಯಾಮಣಿ.
ಪ್ರಿಯಾಮಣಿ ಕಾರು ಖರೀದಿ ಮಾಡಿರುವ ಚಿತ್ರಗಳನ್ನು ಮರ್ಸಿಡೀಜ್ ಬೆಂಜ್ ಇಂಡಿಯಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.ಅಂದಹಾಗೆ ಪ್ರಿಯಾಮಣಿ ಖರೀದಿ ಮಾಡಿರುವ ಐಶಾರಾಮಿ ಮರ್ಸಿಡೀಜ್ ಬೆಂಜ್ ಜಿಎಲ್ಸಿ ಕಾರಿನ ಬೆಲೆ ಬೆಂಗಳೂರಿನಲ್ಲಿ 90.15 ಲಕ್ಷದಿಂದ ಒಂದು ಕೋಟಿ ಆಗುತ್ತದೆ.