Posted by vidyamaana on 2024-07-08 17:22:55 |
ಉಡುಪಿ: ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನೆಲೆ ಜು.09 ರಂದು ರೆಡ್ ಅಲರ್ಟ್ ಘೋಷಿಸಿದ್ದು ಅದರಂತೆ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಮಂಗಳವಾರ ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.
ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜು.9ರಂದು ರಜೆ ಘೋಷಿಸಿ ಉಡುಪಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ
Posted by Vidyamaana on 2024-03-19 11:48:44 |
ಬೆಂಗಳೂರು: ಇಂದು ನಿಗದಿಯಾಗಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಸುದ್ದಿಗೋಷ್ಠಿ ಮುಂದೂಡಲ್ಪಟ್ಟಿದೆ.
ಬೆಂಗಳೂರಿನಲ್ಲಿ ಇಂದು ಸದಾನಂದ ಗೌಡ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಜೊತೆ ಚರ್ಚೆ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಮುಂದೂಡಲಾಗಿದೆ ಎಂದು ಹೇಳಲಾಗಿದೆ.
Posted by Vidyamaana on 2024-04-28 14:14:12 |
ಪುತ್ತೂರು: ಕೆಲಸದ ಆಮಿಷವೊಡ್ಡಿ ಯುವತಿಯನ್ನು ಕರೆಸಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಹರ್ಷಿತ್ ಎಂಬ ಇನ್ನೋರ್ವ ಆರೋಪಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಬನ್ನೂರು ಗ್ರಾಮದ ಬನ್ನೂರು ಬೈಲು ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಕಳೆದ ಮಾ.13ರಂದು ಘಟನೆ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.
ವಾಮಂಜೂರು ಮೂಲದ ಯುವತಿಗೆ ಪುತ್ತೂರಿನ ಯುವಕನೊಂದಿಗೆ ಇನ್ಸ್ಟಾಗ್ರಾಮ್ ಮೂಲಕ ಸಂಪರ್ಕವಿದ್ದು,ಆಕೆಯ ಕೋರಿಕೆಯಂತೆ ಯುವಕ ಪುತ್ತೂರಿನಲ್ಲಿ ಆಕೆಗೆ ಉದ್ಯೋಗಕ್ಕಾಗಿ ತನ್ನ ಸ್ನೇಹಿತರಿಗೆ ತಿಳಿಸಿದ್ದ.ಯುವಕನ ಸ್ನೇಹಿತರಿಬ್ಬರು ಇದನ್ನು ದುರುಪಯೋಗಪಡಿಸಿಕೊಂಡು ವಾಮಂಜೂರಿನ ಆತನ ಸ್ನೇಹಿತೆಯ ನಂಬರ್ ಪಡೆದು ಆಕೆಗೆ ಉದ್ಯೋಗ ಕೊಡಿಸುವುದಾಗಿ ಪುತ್ತೂರಿಗೆ ಕರೆಸಿದ್ದರು.ಯುವತಿಯು ತನ್ನ ಸ್ನೇಹಿತೆಯ ಜೊತೆಗೆ ಮಾ.13ರಂದು ಪುತ್ತೂರಿಗೆ ಬಂದಾಗ ಆಪಾದಿತ ಯುವಕರಿಬ್ಬರು ಆಕೆಗೆ ಪ್ರೊಫೈಲ್ ಬರೆಯಲೆಂದು ಹೇಳಿ ಆಕೆಯನ್ನು ಬನ್ನೂರು ಗ್ರಾಮದ ಬನ್ನೂರು ಬೈಲು ಬಾಲಏಸು ಮಂದಿರ ಬಳಿಯ ನಿರ್ಜನ ಮನೆಯೊಂದಕ್ಕೆ ಕರೆದೊಯ್ದರು.
Posted by Vidyamaana on 2024-01-11 14:50:55 |
ಬಂಟ್ವಾಳ, ಜ.11: ನಾಲ್ವರು ಮುಸುಕುಧಾರಿಗಳು ಮನೆಯೊಂದಕ್ಕೆ ನುಗ್ಗಿ ತಾಯಿ, ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ರೂಪಾಯಿ ನಗ- ನಗದನ್ನು ದರೋಡೆಗೈದ ಘಟನೆ ಬೆಳ್ಳಂಬೆಳಗ್ಗೆ ವಗ್ಗದಲ್ಲಿ ನಡೆದಿದೆ.
ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕನ ಟ್ರೀ ಪಾರ್ಕ್ ಮುಂಭಾಗದಲ್ಲಿರುವ ಫ್ಲೋರಿನ್ ಪಿಂಟೋ ಅವರ ಹೊಸ ಮನೆಯಿಂದ ದರೋಡೆ ಮಾಡಲಾಗಿದೆ. ಮನೆಯಲ್ಲಿ ತಾಯಿ ಫ್ಲೋರಿನ್ ಪಿಂಟೊ ಮತ್ತು ಅವರ ಮಗಳು ಮರಿನಾ ಪಿಂಟೋ ಇಬ್ಬರು ಮಾತ್ರ ಇದ್ದರು. ಮನೆಯಲ್ಲಿ ಬೇರೆ ಯಾರೂ ಇಲ್ಲವೆಂದು ತಿಳಿದಿದ್ದವರೇ ರಾಬರಿ ನಡೆಸಿದ್ದಾರೆ. ಕಪಾಟಿನಲ್ಲಿರಿಸಿದ್ದ ಸುಮಾರು ಅಂದಾಜು ರೂ 3,20,000/-ಮೌಲ್ಯದ ಒಟ್ಟು 82 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು, ರೂ 11,000/- ಮೌಲ್ಯದ 2 ಮೊಬೈಲ್ ಫೋನ್ ಗಳನ್ನು ಸುಲಿಗೆ, 30 ಸಾವಿರ ರೂ. ನಗದು ಹಾಗೂ ಒಟ್ಟು ಮೂರುವರೆ ಲಕ್ಷಕ್ಕೂ ಅಧಿಕ ಮೌಲ್ಯದ ನಗ- ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬೆಳಗ್ಗೆ ಸುಮಾರು 6.30ರ ವೇಳೆಗೆ ಕಾಲಿಂಗ್ ಬೆಲ್ ಹಾಕಿದ್ದು ಬಾಗಿಲು ತೆಗದ ಕೂಡಲೇ ನಾಲ್ವರು ಮುಸುಕುಧಾರಿಗಳು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಮನೆಯಲ್ಲಿರುವ ಚಿನ್ನ, ನಗದು ತೆಗೆದು ಕೊಡುವಂತೆ ಬೆದರಿಸಿದ್ದಾರೆ.
ಬೆದರಿಕೆಗೆ ಬಗ್ಗದಾಗ ನಾಲ್ವರು ಕೈಯಲ್ಲಿ ಚೂರಿ ತೋರಿಸಿ ಕೊಲ್ಲುವ ಬೆದರಿಕೆ ಒಡ್ಡಿದ್ದು ಕಪಾಟು ಬೀಗದ ಕೀ ಪಡೆದಿದ್ದಾರೆ. ಬಂಗಾರವನ್ನು ದೋಚುವ ವೇಳೆ ಅಡ್ಡ ಬಂದ ಮಗಳು ಮರೀನಾ ಪಿಂಟೋ ಅವರ ಕೈಗೆ ಗಾಯವಾಗಿದೆ ಎಂದು ಇವರ ಅಣ್ಣ ಆಸ್ಟಿನ್ ಪಿಂಟೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಹಿಂದೆ ಇದೇ ಪರಿಸರದಲ್ಲಿ ಅಂಗಡಿಯಿಂದ ಜ್ಯೂಸ್ ಮೆಷಿನ್ ಒಂದನ್ನು ಕಳವು ಮಾಡಲಾಗಿತ್ತು. ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ. ಹರೀಶ್ ಭೇಟಿ ನೀಡಿದ್ದಾರೆ. ಶ್ವಾನ ದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Posted by Vidyamaana on 2024-01-29 07:49:07 |
ಬಂಟ್ವಾಳ: ಗುಡ್ಡವೊಂದರ ಹುಲ್ಲುಗಾವಲಿಗೆ ಬೆಂಕಿ ಕೊಡಲು ಹೋದ ಪತಿ ಪತ್ನಿ ಇಬ್ಬರೂ ಸಜೀಹ ದಹನಗೊಂಡ ಘಟನೆ ಬಂಟ್ವಾಳ ತಾಲೂಕಿನ ಲೋರೆಟ್ಟೋ ಸಮೀಪದ ತುಂಡು ಪದವು ಎಂಬಲ್ಲಿ ಮಧಾಹ್ನ ನಡೆದಿದೆ.
ಲೊರೆಟ್ಟೊಪದವು ತುಂಡುಪದವು ನಿವಾಸಿ ಕ್ರಿಸ್ಟಿನ್ ಕಾರ್ಲೋ(51) ಮತ್ತು ಗಿಲ್ಬರ್ಟ್ ಕಾರ್ಲೊ (65) ಮೃತರು.
ಮನೆ ಸಮೀಪದಲ್ಲಿರುವ ಗುಡ್ಡದಲ್ಲಿರುವ ಮುಳಿಹುಲ್ಲು ತೆಗೆಯುವ ಉದ್ದೇಶದಿಂದ ಅದಕ್ಕೆ ಬೆಂಕಿ ನೀಡಲು ಹೋಗಿದ್ದರು.ಅದೇ ಬೆಂಕಿಯ ಜ್ವಾಲೆ ಇವರಿಗೆ ಹತ್ತಿಕೊಂಡಿರಬೇಕು ಎಂದು ಊಹಿಸಲಾಗಿದೆ.
ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Posted by Vidyamaana on 2024-01-16 20:47:54 |
ಪುತ್ತೂರು : ಜಾಗದ ವಿಚಾರವಾಗಿ ನಡೆದ ತಕರಾರು ಹಲ್ಲೆ ವಿಚಾರದಲ್ಲಿ ಪುತ್ತಿಲ ಪರಿವಾರದ ಹೆಸರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಈ ವಿಚಾರವನ್ನು ಪುತ್ತಿಲ ಪರಿವಾರ ಖಂಡಿಸಿದೆ.
500 ವರ್ಷಗಳಿಂದ ಹಿಂದೂ ಸಮಾಜ ಕಾತರದಿಂದ ಕಾಯುತ್ತಿರುವ ಅಮೋಘ ಕ್ಷಣ ಜ.22ರ ಅಯೋಧ್ಯೆಯ ಶ್ರೀ ರಾಮಮಂದಿರ ಪ್ರತಿಷ್ಠಾಪನೆ. ಮಂತ್ರಾಕ್ಷತೆ ವಿತರಿಸುವುದು ಸಹಿತ ರಾಮಮಂದಿರಕ್ಕೆ ಶುಭಕೋರಿ ಪುತ್ತೂರಿನಲ್ಲಿ ಪ್ರಪ್ರಥಮ 3ಡಿ ಬ್ಯಾನರ್ ಅಳವಡಿಸಿ ರಾಷ್ಟ್ರೀಯ ಹಬ್ಬದಂತೆ ಮನೆ ಮನೆಗಳಲ್ಲಿ ರಾಮಮಂದಿರ ಪ್ರತಿಷ್ಠಾಪನೆಯನ್ನು ಆಚರಿಸಲು ಪುತ್ತಿಲ ಪರಿವಾರ ಕಾಯುತ್ತಿದೆ.
ಮುಂಡೂರು ಗ್ರಾಮದಲ್ಲಿ ನಡೆದ ಜಾಗದ ತಕರಾರಿಗೆ ಪುತ್ತಿಲ ಪರಿವಾರವನ್ನು ಅದರಲ್ಲೂ ರಾಮಮಂದಿರದ ಮಂತ್ರಾಕ್ಷತೆಯನ್ನು ಬಳಸಿಕೊಂಡು ಸುಳ್ಳು ಅಪವಾದ ಮಾಡಿರುವುದು ತೀರಾ ಖಂಡನೀಯ.
ಜಾಗದ ಗಲಾಟೆಗೆ ನಡೆದ ಘಟನೆ ಎಂದು ಪೊಲೀಸ್ ಎಫ್ಐಆರ್ ನಲ್ಲೇ ಉಲ್ಲೇಖ ಆಗಿದ್ದು, ಈ ಬಗ್ಗೆ ತಕ್ಷಣ ಸ್ಪಷ್ಟಿಕರಣ ಕೊಟ್ಟು ಗೊಂದಲ ನಿವಾರಿಸಿದ ದಕ್ಷಿಣ ಕನ್ನಡ ಎಸ್ಪಿ ರಿಷ್ಶಂತ್ ಅವರಿಗೆ ಧನ್ಯವಾದ ಎಂದು ಪುತ್ತಿಲ ಪರಿವಾರ ಹೇಳಿದೆ.
ದುರುದ್ದೇಶದಿಂದ ಸಮಾಜದಲ್ಲಿ ತಪ್ಪು ಅಭಿಪ್ರಾಯ, ತೇಜೋವಧೆ, ಧಾರ್ಮಿಕ ಭಾವನೆಗೆ ಧಕ್ಕೆ ತಂದು ಪ್ರಕರಣವನ್ನು ತಿರುಚಿದವರ ವಿರುದ್ದ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಪೊಲೀಸ್ ಇಲಾಖೆಯನ್ನು ಪುತ್ತಿಲ ಪರಿವಾರ ವಿನಂತಿಸಿದೆ.
Posted by Vidyamaana on 2023-11-28 21:10:08 |
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರ್ ಸುರಂಗದೊಳಗೆ ಸಿಲುಕಿ, ಕಳೆದ 17 ದಿನಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಹೊಸ ಬದುಕಿಗಾಗಿ ಆಸೆಗಣ್ಣುಗಳಿಂದ ಎದುರು ನೋಡುತ್ತಿದ್ದ ಎಲ್ಲ 41 ಕಾರ್ಮಿಕರನ್ನು ಸುರಕ್ಷಿತವಾಗಿ ಸುರಂಗದಿಂದ ಇಂದು ಹೊರಕರೆತರಲಾಗಿದೆ.17 ದಿನಗಳ ನಿರಂತರ ಶ್ರಮ ಮತ್ತು ಅಸಂಖ್ಯಾತ ಜನಗಳ ಪ್ರಾರ್ಥನೆಗೆ ಫಲ ಸಿಕ್ಕಿದ್ದು, ಬಹುದೊಡ್ಡ ರಕ್ಷಣಾ ಕಾರ್ಯಾಚರಣೆ ದೊಡ್ಡ ಯಶಸ್ಸು ಸಾಧಿಸಿದೆ. ನಿಜಕ್ಕೂ ಇದೊಂದು ಬಿಗ್ ಅಂಡ್ ಸ್ವೀಟ್ ನ್ಯೂಸ್ ಎಂದೇ ಹೇಳಬಹುದಾಗಿದೆ.ಸುಮಾರು 50 ಮೀಟರ್ಗೂ ಅಧಿಕ ದೂರದಲ್ಲಿ ಸುರಂಗದ ಒಳಗಡೆ ಸಿಲುಕಿದ್ದ ಎಲ್ಲ 41 ಕಾರ್ಮಿಕರನ್ನು ಒಬ್ಬೊಬ್ಬರಾಗಿ ಪೈಪ್ ಮೂಲಕ ಗಾಲಿ ಸ್ಟ್ರೆಚರ್ ಸಹಾಯದಿಂದ ರಕ್ಷಣಾ ತಂಡಗಳು ಹೊರಗೆಳೆದು ರಕ್ಷಣೆ ಮಾಡಿದವು. ಹೊರಗೆ ಬಂದರ ಕಾರ್ಮಿಕರಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ಅಡಿಯಲ್ಲಿ ದೇಹ ಪರೀಕ್ಷೆ ಮಾಡಿ ತಕ್ಷಣ ಆಂಬ್ಯುಲೆನ್ಸ್ಗಳ ಸಹಾಯದಿಂದ ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಎಲ್ಲ ಕಾರ್ಮಿಕರು ಆರೋಗ್ಯಯುತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಪ್ರತೀ ಹಂತದಲ್ಲೂ ನಾಲ್ಕು ನಾಲ್ಕು ಕಾರ್ಮಿಕರನ್ನು ಹೊರಗೆ ಕರೆತರಲಾಯಿತು. ಕಾರ್ಮಿಕರ ರಕ್ಷಣೆಗೆ ಶತಕೋಟಿ ಭಾರತೀಯರು ಪ್ರಾರ್ಥಿಸಿದ್ದರು. ಎಲ್ಲರ ಪ್ರಾರ್ಥನೆ ಇಂದು ಫಲಿಸಿದ್ದು, ಕಾರ್ಯಾಚರಣೆ ಯಶಸ್ವಿಯಾಗಿದೆ. ಕಾರ್ಮಿಕರು ಹೊರಗೆ ಬರುತ್ತಿದ್ದಂತೆ ಸುತ್ತಲೂ ಜೈಕಾರಗಳು ಮೊಳಗಿದವು ಮತ್ತು ಸ್ಥಳದಲ್ಲಿ ನೆರೆದಿದ್ದ ಜನರು ಸಿಹಿ ಹಂಚಿ ಸಂಭ್ರಮಿಸಿದರು.ಸುರಂಗ ಮಾರ್ಗ ನಿರ್ಮಾಣದ ಉದ್ದೇಶವೇನು?
ಕೇಂದ್ರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾದ ಸುರಂಗವು ಉತ್ತರಾಖಂಡದ ಸಿಲ್ಕ್ಯಾರಾ ಮತ್ತು ದಂಡಲ್ಗಾಂವ್ ನಡುವೆ ಉತ್ತರಕಾಶಿ ಮತ್ತು ಯಮುನೋತ್ರಿಯನ್ನು ಸಂಪರ್ಕಿಸಲು ಉದ್ದೇಶಿಸಿರುವ ರಸ್ತೆಯಲ್ಲಿದೆ. ಇದರ ಕಾಮಗಾರಿ ಭರದಿಂದ ಸಾಗಿತ್ತು. ಆದರೆ, ಮಣ್ಣು ಕುಸಿತದಿಂದಾಗಿ ನ.12 ರಂದು 41 ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ.