Posted by vidyamaana on 2024-07-03 19:28:29 |
ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಶಾಸಕ ಅಶೋಕ್ ರೈ ಕಚೇರಿ ಮೂಲಕ ಉಚಿತ ಕಾರ್ಮಿಕ ಇ ಕಾರ್ಡು ಮಾಡಿಸಿಕೊಂಡ ಕಟ್ಟಡ ಕಾರ್ಮಿಕರಿಗೆ ಕಾರ್ಡು ವಿತರಣಾ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.
ಒಟ್ಟು ೩೪ ಮಂದಿ ಕಾರ್ಮಿಕರಿಗೆ ಕಾರ್ಡು ವಿತರಿಸಲಾಯಿತು. ಕಟ್ಟಡ ಕಾರ್ಮಿಕರು ಶಾಸಕರ ಕಚೇರಿ ಮೂಲಕ ನೋಂದಾವಣೆ ಮಾಡಿಕೊಂಡಿದ್ದರು. ಇ ಕಾರ್ಡು ವಿತರಿಸಿ ಮಾತನಾಡಿದ ಶಾಸಕರು ರಾಜ್ಯ ಸರಕಾರದಿಂದ ಕಾರ್ಮಿಕರಿಗ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.ಆಕಸ್ಮಿಕಮರಣಾವಾದರೆ ರೂ ೧ ಲಕ್ಷ ಮತ್ತು ಅಪಘಾತದಲ್ಲಿ ಮರಣಹೊಂದಿದರೆ ೫ ಲಕ್ಷ ಸರಕಾರದಿಂದ ಪರಿಹಾರ ಸಿಗುತ್ತದೆ. ಕಾರ್ಮಿಕರು ತನ್ನ ಕಚೇರಿ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಒಟ್ಟು ೩೦೦೦ ಮಂದಿಗೆ ಕಾರ್ಡು ವಿತರಣೆ ಮಾಡಲಾಗಿದೆ.
ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸರಕಾರ ನೀಡುತ್ತಿದೆ. ಕಳೆದ ಸಾಲಿನಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ಟ್ಯಾಪ್ ಕೂಡಾ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುವುದರ ಜೊತೆ ಇದುವರೆಗೂ ಕಾರ್ಡು ಮಾಡಿಸದವರು ಶಾಸಕರ ಕಚೇರಿಗೆ ಬಂದು ಉಚಿತವಾಗಿ ಕಾರ್ಡು ಮಾಡಿಸಿಕೊಳ್ಳಬಹುದಾಗಿದೆ ಎಂದು ಶಾಸಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಮಾಧ್ಯಮ ಸಂಚಾಲಕ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ ಉಪಸ್ಥಿತರಿದ್ದರು. ಸಿಬಂದಿ ರಚನಾ ಸ್ವಾಗತಿಸಿ ವಂದಿಸಿದರು.
Posted by Vidyamaana on 2023-12-02 08:23:14 |
ಬೆಂಗಳೂರು : ಮೈಸೂರು ಜಿಲ್ಲೆಯಲ್ಲಿ ನಡೆದಿದ್ದಂತ ಭ್ರೂಣ ಹತ್ಯೆ ಪ್ರಕರಣ ಸಂಬಂಧ, ಇಬ್ಬರು ಅಧಿಕಾರಿಗಳ ತಲೆದಂಡವಾಗಿದೆ. ಮೈಸೂರು ಜಿಲ್ಲೆಯ ಈ ಹಿಂದಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ರಂದೀಪ್ ಅವರು ಆದೇಶ ಹೊರಡಿಸಿದ್ದು, ಮೈಸೂರು ಜಿಲ್ಲೆಯ ಹಿಂದಿನ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವಿ.ಪಿ ಹಾಗೂ ಹಾಲಿ ಮೈಸೂರು ತಾಲೂಕಿನ ತಾಲೂಕು ಆರೋಗ್ಯ ಅಧಿಕಾರಿ ಡಾ.ರಾಜೇಶ್ವರಿ.ಎಸ್ ಅವರುಗಳ ವಿರುದ್ಧ ಕರ್ತವ್ಯಲೋಪ ಆರೋಪದ ಬಗ್ಗೆ ಶಿಸ್ತುಕ್ರಮ ಬಾಕಿ ಇರಿಸಿ, ಈ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾತನುಗೊಳಿಸಿ ಆದೇಶಿಸಿದ್ದಾರೆ.
ಇನ್ನೂ ಡಾ.ರವಿ. ಪಿ ಹಾಗೂ ಡಾ.ರಾಜೇಶ್ವರಿ.ಪಿ ಇವರುಗಳಿಗೆ ಅಮಾನತ್ತಿನ ಅವಧಿಯಲ್ಲಿ ಜೀವನಾಂಶ ಭತ್ಯೆಯನ್ನು ಪಡೆಯುವ ಸಲುವಾಗಿ ಲೀನ್ ಅನ್ನು ರಾಮನಗ ಜಿಲ್ಲಾ ಆಸ್ಪತ್ರೆ ಇಲ್ಲಿನ ಖಾಲಿ ಇರುವ ಹುದ್ದೆಗೆ ಸ್ಥಳಾಂತರಿಸಲಾಗಿದೆ ಎಂದು ಆದೇಶದಲ್ಲಿ ಹೇಳಿದ್ದಾರೆ. ಈ ಮೂಲಕ ಭ್ರೂಣಹತ್ಯೆ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳ ತಲೆದಂಡವಾಗಿದೆ.
Posted by Vidyamaana on 2024-01-08 15:31:10 |
ಪುತ್ತೂರು: ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷರಾಗಿ ರಾಕೇಶ್ ಮಲ್ಲಿ ಹಾಗೂ ಕಾರ್ಯಾಧ್ಯಕ್ಷರಾಗಿ ಎನ್. ಚಂದ್ರಹಾಸ ಶೆಟ್ಟಿರವರು ಆಯ್ಕೆಯಾಗಿದ್ದಾರೆ.
ಉದ್ಯಮಿ ರಾಕೇಶ್ ಮಲ್ಲಿರವರು ಬಂಟ್ವಾಳ ತಾಲೂಕಿನವರಾಗಿದ್ದು, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಅಮೆಚೂರು ಕಬಡ್ಡಿ ಅಸೋಸಿಯೇಶನ್ ನ ಕಾರ್ಯಾಧ್ಯಕ್ಷರಾಗಿ, ಕಾಂಗ್ರೆಸ್ ಕಾರ್ಮಿಕ ಘಟಕದ ಇಂಟಕ್ ರಾಜ್ಯಾಧ್ಯಕ್ಷರಾಗಿ, ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಎನ್.ಚಂದ್ರಹಾಸ ಶೆಟ್ಟಿಯವರು ಪ್ರತಿಷ್ಠಿತ ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿಯಾಗಿದ್ದು, ಪುತ್ತೂರು ಕೋಟಿ- ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷರಾಗಿ, ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ನ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯ ನಡುವೆ ಉದ್ಯಮಿ ಮುತ್ತಪ್ಪ ರೈ ನೇತೃತ್ವದ ಪುತ್ತೂರಿನ ಕೋಟಿ ಚೆನ್ನಯ ಕಂಬಳದ ಮುಂದಾಳತ್ವ ವಹಿಸಿಕೊಂಡು ಅದರ ಯಶಸ್ಸಿಗಾಗಿ ಈಗಲೂ ಶ್ರಮಿಸುತ್ತಾ ಬಂದಿರುತ್ತಾರೆ.
Posted by Vidyamaana on 2024-02-07 10:43:01 |
ಪುತ್ತೂರು : ಅರುಣ್ ಕುಮಾರ್ ಪುತ್ತಿಲರಿಗೆ ಪಕ್ಷದ ಹುದ್ದೆ, ಜವಾಬ್ದಾರಿ ನೀಡುವ ನಿರ್ಧಾರ ಜಿಲ್ಲೆ ಮತ್ತು ರಾಜ್ಯಕ್ಕೆ ಬಿಟ್ಟಿದ್ದು, ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಯವರು ಈಗಾಗಲೇ ನಮ್ಮಲ್ಲಿ ಅಭಿಪ್ರಾಯ ಸಂಗ್ರಹಿಸಿ ಹೋಗಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ತಿಳಿಸಿದ್ದಾರೆ.
ಪುತ್ತಿಲ ಪರಿವಾರದಿಂದ ಫೆ.5 ರಂದು ನಡೆದ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ, ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸ್ಥಾನ ಕೊಡುವುದು ಸೇರಿದಂತೆ ಮೂರು ಮಹತ್ವದ ನಿರ್ಣಯ ಕೈಗೊಳ್ಳಲಾಗಿತ್ತು.
ಈ ಕುರಿತು ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಪ್ರತಿಕ್ರಿಯೆ ನೀಡಿದ್ದು, ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷಕ್ಕೆ ಸೇರ್ಪಡೆಯಾಗುವುದು ಮತ್ತು ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ಸೇರಿದಂತೆ ಯಾವುದೇ ಹುದ್ದೆ, ಜವಾಬ್ದಾರಿ ನೀಡುವ ವಿಚಾರ ನಮ್ಮ ತೀರ್ಮಾನವಲ್ಲ, ಅದು ಜಿಲ್ಲೆ ಮತ್ತು ರಾಜ್ಯದ ಪ್ರಮುಖರ ನಿರ್ಧಾರಕ್ಕೆ ಬಿಟ್ಟ ವಿಚಾರ. ಇತ್ತೀಚೆಗೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅವರು ಪುತ್ತೂರಿನಲ್ಲಿ ಬಿಜೆಪಿಯ ಕಾರ್ಯನಿರ್ವಹಣಾ ತಂಡದ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಸಂಗ್ರಹಿತ ಅಭಿಪ್ರಾಯವನ್ನು ರಾಜ್ಯಕ್ಕೆ ತಿಳಿಸಿದ್ದಾರೆ.
ಮುಂದಿನ ತೀರ್ಮಾನ ಎನಿದ್ದರೂ ಜಿಲ್ಲೆ ಮತ್ತು ರಾಜ್ಯದ ಪ್ರಮುಖರಿಗೆ ಬಿಟ್ಟ ವಿಚಾರ ಎಂದು ಅವರು ತಿಳಿಸಿದ್ದಾರೆ.
Posted by Vidyamaana on 2023-09-19 21:51:51 |
ವಿದ್ಯಮಾನದ ಗ್ರೂಪಿಗೆ ಸೇರಲು ಈ ಲಿಂಕ್ ಒತ್ತಿ*
ಬೆಂಗಳೂರು: ಜನರೊಟ್ಟಿಗೆ ಸಂಪರ್ಕವನ್ನು ಮತ್ತಷ್ಟು ಸುಲಭವಾಗಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ವಾಟ್ಸಪ್ ಚಾನೆಲ್ ಆರಂಭಿಸಿದ್ದಾರೆ.ಈ ಮೂಲಕ ದೇಶದ ಸರ್ಕಾರವೊಂದರ ಮುಖ್ಯಸ್ಥರ ಪೈಕಿ ಮೊಟ್ಟಮೊದಲ ವಾಟ್ಸಪ್ ಚಾನೆಲ್ ಅನ್ನು ಆರಂಭಿಸಿದ ಹೆಗ್ಗಳಿಕೆಯು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಇನ್ನು ಜನ ಸಂಪರ್ಕ ಸಾಧನೆಯ ನಿಟ್ಟಿನಲ್ಲಿ ಮುಂದಡಿಯಿಟ್ಟವರು ಸಿಎಂ ಸಿದ್ದರಾಮಯ್ಯ ಅವರ ನಡೆಗೆ ನೆಟ್ಟಿಗರು ಅಭಿನಂದನೆ ಸಲ್ಲಿಸಿದ್ದಾರೆ.
ಸಿಎಂ ವಾಟ್ಸಪ್ ಚಾನೆಲ್ನಲ್ಲಿ ಏನೆಲ್ಲಾ ಸಿಗುತ್ತದೆ?
ಈ ಚಾನೆಲ್ನಲ್ಲಿ ಸಿಎಂ ದೈನಂದಿನ ಚಟುವಟಿಕೆ, ತೆಗೆದುಕೊಂಡ ಮಹತ್ವದ ನಿರ್ಧಾರಗಳು, ಸಭೆಗಳ ಪ್ರಮುಖ ಅಂಶಗಳು, ಹೊಸ ಯೋಜನೆ ಮಾಹಿತಿ, ಆರೋಪ ಅಥವಾ ಪ್ರಚಲಿತ ಘಟನೆಗಳಿಗೆ ಪ್ರತಿಕ್ರಿಯೆಗಳು ಸೇರಿದಂತೆ ಸಾಕಷ್ಟು ಮಾಹಿತಿಯ ನೇರವಾಗಿ ಸಿಗಲಿದೆ. ಇನ್ನು ಚಾನೆಲ್ಗಳಲ್ಲಿ ಬಂದ ಸಂದೇಶಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ಇಮೋಜಿ ಬಳಸಿ ನೀಡುವ ಅವಕಾಶ ಇದೆ.
Readmore.....
ವಾಟ್ಸಾಪ್ ಚಾನೆಲ್ ಸೇರಿದ ಪ್ರಧಾನಿ ಮೋದಿ : ನಮೋ ಸಂಪರ್ಕಿಸೋದು ಈಗ ಇನ್ನಷ್ಟು ಸುಲಭ
ಚಾನೆಲ್ ಸೇರುವುದು ಹೇಗೆ?
ಸಿಎಂ ವಾಟ್ಸಪ್ ಚಾನೆಲ್ ಸೇರಬೇಕು ಎಂಬುವವರು ನಿಮ್ಮ ವಾಟ್ಸಪ್ ಚಾನಲ್ ಸೆಕ್ಷನ್ನಲ್ಲಿ Chief Minister of Karnataka ಎಂದು ಸರ್ಚ್ ಮಾಡಬೇಕು. ಬಳಿಕ ಸಿಎಂ ಅಧಿಕೃತ ಚಾನೆಲ್ ಕಾಣಿಸಲಿದೆ. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಮುಖ್ಯಮಂತ್ರಿಗಳ ಅಧಿಕೃತ ಚಾನಲ್ ಅನ್ನು ಸೇರಬಹುದು.
ಸದ್ಯ ವಾಟ್ಸಪ್ ಪರಿಚಯ ಮಾಡಿರುವ " ಚಾನೆಲ್ ಎಂಬ ಹೊಸ ಆಯ್ಕೆ ಸಿಗಬೇಕು ಎಂದರೆ ನಿಮ್ಮ ವಾಟ್ಸಪ್ ಅಪ್ಲೇಟ್ ಮಾಡಿಕೊಳ್ಳಬೇಕು. ಆ ಬಳಿಕ ಸ್ಟೇಟಸ್ ನೋಡುವ ಆಯ್ಕೆ ಬಳಿ ಬಂದರೆ ಅಲ್ಲಿಯೇ ಚಾನೆಲ್ಗಳು ಸಿಗುತ್ತವೆ. ಈಗಾಗಲೇ ಬಾಲಿವುಡ್ ತಾರೆಯರು, ಕ್ರಿಕೆಟ್ ಪಡುಗಳು ಸೇರಿದಂತೆ ಪ್ರಮುಖ ಸೆಲಿಬ್ರಿಟಿಗಳು ತಮ್ಮ ವ್ಯಾಟ್ಸಪ್ ಚಾನೆಲ್ ಆರಂಭಿಸಿದ್ದಾರೆ. ಇನ್ನು ಯಾರು ಬೇಕಾದರೂ ತಮ್ಮ ಹೆಸರಿನಲ್ಲಿ ಚಾನೆಲ್ ಆರಂಭಿಸುವ ಸೌಲಭ್ಯವನ್ನು ಮೇಟಾ ಕಂಪನಿ ನೀಡಿದೆ
*ವಿದ್ಯಮಾನದ ಗ್ರೂಪಿಗೆ ಸೇರಲು ಈ ಲಿಂಕ್ ಒತ್ತಿ*
Posted by Vidyamaana on 2023-10-18 21:02:43 |
ಮಂಗಳೂರು, ಅ.18: ಕುದ್ರೋಳಿ ದೇವಸ್ಥಾನಕ್ಕೆ ಬಂದು ನಡೆದುಕೊಂಡು ಹಿಂತೆರಳುತ್ತಿದ್ದ ಹುಡುಗಿಯರ ಮೇಲೆ ಕಾರು ಡಿಕ್ಕಿಯಾಗಿದ್ದು ಯುವತಿಯೊಬ್ಬಳು ಮೃತಪಟ್ಟ ಘಟನೆ ನಗರದ ಮಣ್ಣಗುಡ್ಡದಲ್ಲಿ ನಡೆದಿದೆ.
ಬುಧವಾರ ಸಂಜೆ 5.30ರ ವೇಳೆಗೆ ಘಟನೆ ನಡೆದಿದ್ದು ಸುರತ್ಕಲ್ ಕಾನ ಬಾಳ ನಿವಾಸಿ ರೂಪಶ್ರೀ (23) ಮೃತಪಟ್ಟವರು. ಇವರು ಇತರ ನಾಲ್ಕು ಹುಡುಗಿಯರ ಜೊತೆಗೆ ಕುದ್ರೋಳಿ ದೇವಸ್ಥಾನಕ್ಕೆ ಬಂದಿದ್ದರು. ಸಂಜೆ ದೇವಸ್ಥಾನ ಕಡೆಯಿಂದ ಲೇಡಿಹಿಲ್ ಕಡೆಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ನುಗ್ಗಿ ಬಂದ ಕಾರು ಡಿಕ್ಕಿಯಾಗಿದೆ. ಕಾರು ನೇರವಾಗಿ ರಸ್ತೆಯಿಂದ ಹೊರಗೆ ಬಂದಿದ್ದು ಫುಟ್ ಪಾತ್ ಮೇಲೆ ನಡೆದು ಹೋಗುತ್ತಿದ್ದ ಯುವತಿಯರ ಮೇಲೆರಗಿದೆ. ಒಬ್ಬಳು ಯುವತಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದರೆ, ಇತರ ನಾಲ್ಕು ಮಂದಿಯೂ ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ.
ಕಾರು ಸಂಪೂರ್ಣ ಚಾಲಕನ ನಿಯಂತ್ರಣ ಇಲ್ಲದ ರೀತಿ ಹುಡುಗಿಯರ ಮೇಲೆ ಹರಿದಿದ್ದು ಅಪಘಾತದ ದೃಶ್ಯ ಸ್ಥಳೀಯ ಕಟ್ಟಡದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರು ನಾಲ್ಕು ಹುಡುಗಿಯರಿಗೆ ಡಿಕ್ಕಿಯಾದ ಬಳಿಕ ರಸ್ತೆ ದಾಟುತ್ತಿದ್ದ ಇನ್ನೊಬ್ಬ ಮಹಿಳೆಗೂ ಡಿಕ್ಕಿಯಾಗಿದೆ.
ಕಾರು ಚಾಲಕ ಕಮಲೇಶ್ ಬಲದೇವ್ ಎಂಬಾತ ಅಪಘಾತದ ಬಳಿಕ ಕಾರನ್ನು ನಿಲ್ಲಿಸದೆ, ಮಣ್ಣಗುಡ್ಡದ ಮನೆಗೆ ತೆರಳಿದ್ದ. ಮನೆಗೆ ಹೋಗಿ ತಂದೆಯ ಜೊತೆಗೆ ಪಾಂಡೇಶ್ವರ ಠಾಣೆಗೆ ಆಗಮಿಸಿದ್ದ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಂಭೀರ ಗಾಯಗೊಂಡಿದ್ದ ಯುವತಿಯನ್ನು ಕೂಡಲೇ ಸ್ಥಳೀಯರು ಎಜೆ ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಸಾವು ಕಂಡಿದ್ದಾರೆ. ಪಾಂಡೇಶ್ವರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಾತಿ(26), ಹಿತ್ನವಿ (16), ಕೃತಿಕಾ (16), ಯತಿಕಾ(12) ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
Posted by Vidyamaana on 2023-08-28 14:48:05 |
ಪುತ್ತೂರು: ಬಿಲ್ಲವ ಯುವ ಸಮಾಜ ಪುತ್ತೂರು ಇದರ ವತಿಯಿಂದ ಪುತ್ತೂರು ಶಾಸಕರಾದ ಅಶೋಕ್ ರೈಯವರಿಗೆ ಅಭಿನಂದನೆ ಸಲ್ಲಿಸಲಾಯಿತು. ಶಾಸಕರ ನೂತನ ಕಚೇರಿ ಶುಭಾರಂಭ ಕಾರ್ಯಕ್ರಮದ ಬಳಿಕ ಯುವ ವೇದಿಕೆಯ ವತಿಯಿಂದ ಶಾಸಕರ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಕ್ಷೇತ್ರದ ಅಭಿವೃದ್ದಿಗೆ ಇನ್ನಷ್ಟು ಒತ್ತು ನೀಡುವ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಡವರ ಕೆಲಸಗಳು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಕೆಲಸ ನಿಮ್ಮಿಂದಾಗಲಿ ಎಂದು ಬಿಲ್ಲವ ಯುವ ಸಮಾಜದ ಮುಖಂಡರು ಶಾಸಕರಲ್ಲಿ ವಿನಂತಿಸಿದರು. ಈ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಕಿರಣ್ಬಸಂತಕೋಡಿ, ದಿನೇಶ್ ಕರ್ಕೆರಾ ಕೋಲಾಡಿ, ಚಂಧ್ರಶೇಖರ್ ಕಲ್ಲಗುಡ್ಡೆ, ಚಂದ್ರಕಲಾ ಮುಕ್ವೆ, ಮೋಹನ್ ಗುರ್ಜಿನಡ್ಕ, ಕೇಶವ ಅರ್ಕ, ಮೋಹನ್ ಪೂಜಾರಿ ಪುಣಚ, ಅಶೋಕ್ ಪೂಜಾರಿ ಬೊಳ್ಳಾಡಿ, ಕೃಷ್ಣಪ್ಪ ಕಲಾವಿದ, ಎಲ್ಯಣ್ಣ ಪೂಜಾರಿ ಮಿರುಂಡ, ನಾರಾಯಣ ಪೂಜಾರಿ ಬದಿಗುಡ್ಡೆ ಮೊದಲಾದವರು ಉಪಸ್ತಿತರಿದ್ದರು. ನೆನಪಿನ ಕಾಣಿಕೆಯಾಗಿ ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದರು.