Posted by vidyamaana on 2024-07-03 19:28:29 |
ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಶಾಸಕ ಅಶೋಕ್ ರೈ ಕಚೇರಿ ಮೂಲಕ ಉಚಿತ ಕಾರ್ಮಿಕ ಇ ಕಾರ್ಡು ಮಾಡಿಸಿಕೊಂಡ ಕಟ್ಟಡ ಕಾರ್ಮಿಕರಿಗೆ ಕಾರ್ಡು ವಿತರಣಾ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.
ಒಟ್ಟು ೩೪ ಮಂದಿ ಕಾರ್ಮಿಕರಿಗೆ ಕಾರ್ಡು ವಿತರಿಸಲಾಯಿತು. ಕಟ್ಟಡ ಕಾರ್ಮಿಕರು ಶಾಸಕರ ಕಚೇರಿ ಮೂಲಕ ನೋಂದಾವಣೆ ಮಾಡಿಕೊಂಡಿದ್ದರು. ಇ ಕಾರ್ಡು ವಿತರಿಸಿ ಮಾತನಾಡಿದ ಶಾಸಕರು ರಾಜ್ಯ ಸರಕಾರದಿಂದ ಕಾರ್ಮಿಕರಿಗ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.ಆಕಸ್ಮಿಕಮರಣಾವಾದರೆ ರೂ ೧ ಲಕ್ಷ ಮತ್ತು ಅಪಘಾತದಲ್ಲಿ ಮರಣಹೊಂದಿದರೆ ೫ ಲಕ್ಷ ಸರಕಾರದಿಂದ ಪರಿಹಾರ ಸಿಗುತ್ತದೆ. ಕಾರ್ಮಿಕರು ತನ್ನ ಕಚೇರಿ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಒಟ್ಟು ೩೦೦೦ ಮಂದಿಗೆ ಕಾರ್ಡು ವಿತರಣೆ ಮಾಡಲಾಗಿದೆ.
ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸರಕಾರ ನೀಡುತ್ತಿದೆ. ಕಳೆದ ಸಾಲಿನಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ಟ್ಯಾಪ್ ಕೂಡಾ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುವುದರ ಜೊತೆ ಇದುವರೆಗೂ ಕಾರ್ಡು ಮಾಡಿಸದವರು ಶಾಸಕರ ಕಚೇರಿಗೆ ಬಂದು ಉಚಿತವಾಗಿ ಕಾರ್ಡು ಮಾಡಿಸಿಕೊಳ್ಳಬಹುದಾಗಿದೆ ಎಂದು ಶಾಸಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಮಾಧ್ಯಮ ಸಂಚಾಲಕ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ ಉಪಸ್ಥಿತರಿದ್ದರು. ಸಿಬಂದಿ ರಚನಾ ಸ್ವಾಗತಿಸಿ ವಂದಿಸಿದರು.
Posted by Vidyamaana on 2023-12-26 08:47:39 |
ಬೆಂಗಳೂರು :- ಕೇವಲ ಡೆತ್ ನೋಟ್ ಪರಿಗಣಿಸಿ ಆರೋಪಿಗೆ ಶಿಕ್ಷೆ ನೀಡಲ್ಲ, ಅದಕ್ಕೆ ತನಿಖೆಯ ಅಗತ್ಯವಿದೆ ಎಂದು ಹೈಕೋರ್ಟ್ ಹೇಳಿದೆ.ಆತ್ಮಹತ್ಯೆ ನೋಟ್ನಲ್ಲಿ ವ್ಯಕ್ತಿಯ ಹೆಸರು ಇದ್ದ ಮಾತ್ರಕ್ಕೆ ಆತ ಆರೋಪಿಯೆಂಬ ತೀರ್ಮಾನ ಸಲ್ಲ. ಆತ ನಿಜಕ್ಕೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆಯೇ ಇಲ್ಲವೇ ಎಂಬುದನ್ನು ತಿಳಿಯಲು ಸಂಪೂರ್ಣ ತನಿಖೆ ಅತ್ಯಗತ್ಯ ಎಂದರು.ನ್ಯಾ. ವೆಂಕಟೇಶ್ ಟಿ.ನಾಯಕ್ ಅವರಿದ್ದ ಏಕಸದಸ್ಯಪೀಠ, ಈ ಆದೇಶ ನೀಡಿದೆ.
ವಕೀಲರ ವಾದ ಆಲಿಸಿದ ಬಳಿಕ ನ್ಯಾಯಾಲಯ, ಆತ್ಮಹತ್ಯೆ ಪ್ರಕರಣಗಳಲ್ಲಿ ಸಿಗುವ ಸೂಸೈಡ್ ನೋಟ್ಗಳಲ್ಲಿ ಕೆಲವು ಸಲ ವ್ಯಕ್ತಿಯ ಹೆಸರು ಉಲ್ಲೇಖವಾಗಿರುತ್ತದೆ. ಅಂತಹ ಪ್ರಕರಣಗಳಲ್ಲಿ ಮೊದಲಿಗೆ ತನಿಖೆ ನಡೆಸಿ ನೋಟ್ನಲ್ಲಿನ ಅಂಶಗಳ ಸತ್ಯಾಸತ್ಯತೆ ಪರಿಶೀಲಿಸುವ ಬದಲು ತಕ್ಷಣಕ್ಕೆ ಐಪಿಸಿ 306ರಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿ, ಅಪರಾಧ ಎಸಗಿದ್ದಾರೆನ್ನುವಂತೆ ಭಾವಿಸಿ ಅವರನ್ನು ಬಂಧಿಸುವುದು ಮಾಮೂಲಿಯಾಗಿದೆ.
ಡೆತ್ ನೋಟ್ನಲ್ಲಿನ ಅಂಶಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿ, ನಿಜವಾಗಿಯೂ ಆತ್ಮಹತ್ಯೆಗೆ ಆ ವ್ಯಕ್ತಿ ಪ್ರಚೋದನೆ ನೀಡಿದ್ದಾನೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಆದರೆ ಸತ್ಯಾಂಶ ಅರಿಯಲು ಪೂರ್ಣ ಪ್ರಮಾಣದ ತನಿಖೆ ಮತ್ತು ವಿಚಾರಣೆ, ಎರಡೂ ನಡೆಯಬೇಕಾಗುತ್ತದೆ ಎಂದು ಹೇಳಿದೆ.
ಒಂದು ವೇಳೆ ಐಪಿಸಿ ಸೆಕ್ಷನ್ 306 ಅನ್ವಯಿಸಬೇಕಾದರೆ, ಆತ್ಮಹತ್ಯೆಗೆ ಪ್ರಚೋದನೆಯೇ ಮುಖ್ಯ ಕಾರಣವೆಂದು ದೃಢಪಡಬೇಕು. ಅನ್ಯ ದಾರಿಯಲ್ಲದೆ ಮೃತರು ಆತ್ಮಹತ್ಯೆ ಹಾದಿ ಹಿಡಿದರೆಂದು ಸಾಬೀತುಪಡಿಸಬೇಕಾಗುತ್ತದೆ ಎಂದೂ ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
Posted by Vidyamaana on 2023-09-07 11:46:29 |
ಕಾರ್ಕಳ: ಶಾಲಾ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗೆ ಪ್ರಾಂಶುಪಾಲರು ಹೊಡೆದಿದ್ದಾರೆ ಎಂದು ಪ್ರಿನ್ಸ್ ಪಾಲ್ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.
ಮೈಸೂರು ಮೂಲದ ವೆರೋನಿಕಾ ಎಂಬವರ ಮಕ್ಕಳಾದ ಆಯಂಟೋನಿ ಜೀವನ್ ಹಾಗೂ ಮರಿಯನ್ ಕೆವಿನ್ ಎಂಬವರು ಈದು ಗ್ರಾಮದ ಬೊಟ್ಟು ಗುರುಕುಲ ಸೆಂಟ್ರಲ್ ಸ್ಕೂಲ್ನಲ್ಲಿ ಓದುತ್ತಿದ್ದಾರೆ. ಇವರಿಬ್ಬರು ಶಾಲಾ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದರು.ಸೆ.2ರಂದು ಶಾಲಾ ಪ್ರಾಂಶುಪಾಲ ರೋಹಿತ್, ಹಾಸ್ಟೆಲ್ನ ಕೊಠಡಿಯಲ್ಲಿ ಬೆಡ್ ಮೇಲೆ ಗಲಾಟೆ ಮಾಡಿದ ಕಾರಣಕ್ಕಾಗಿ 7ನೇ ತರಗತಿಯ ವಿದ್ಯಾರ್ಥಿ ಮರಿಯನ್ ಕೆವಿನ್ಗೆ ಬೆತ್ತದಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ದೂರಲಾಗಿದೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Posted by Vidyamaana on 2024-05-22 21:16:57 |
ಬಂಟ್ವಾಳ : ಬೋರ್ವೆಲ್ ಕೊರೆಯುವ ಯಂತ್ರವಿರುವ ಘನಗಾತ್ರದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟು, ಸಹಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಅಲ್ಲಿಪಾದೆ ಎಂಬಲ್ಲಿ ಬುಧವಾರ ರಾತ್ರಿ ವೇಳೆ ನಡೆದಿದೆ.
ನಾವೂರ ಸಮೀಪದ ಪರಾರಿ ಜಯಪೂಜಾರಿ ( 55) ಮೃತರು ಎಂದು ಗುರುತಿಸಲಾಗಿದ್ದು, ಇವರ ಮಗ ರಕ್ಷಿತ್ ಸಹ ಸವಾರನಾಗಿದ್ದು, ಈತನಿಗೆ ಗಂಭೀರ ಗಾಯವಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Posted by Vidyamaana on 2024-03-27 15:29:06 |
ಉಡುಪಿ, ಮಾ.27: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಕಗ್ಗೋಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುಂದೆ ತನ್ನ ಮೇಲಿನ ಆರೋಪವನ್ನು ನಿರಾಕರಿಸಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಪ್ರಕರಣದ ತನಿಖಾಧಿಕಾರಿ ಯಾಗಿರುವ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣ ಎಸ್.ಕೆ. ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಧೀಶ ದಿನೇಶ್ ಹೆಗ್ಡೆ ಆರೋಪಿ ಮೇಲಿನ ಆಪಾದನೆಯನ್ನು ವಾಚಿಸಿದರು. ಆದರೆ ಚೌಗುಲೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾನೆ ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಈ ಗಂಭೀರ ಪ್ರಕರಣದ ವಿಚಾರಣೆಗೆ ಪೂರ್ವಭಾವಿಯಾಗಿ ಎ.5ರಂದು ಪ್ರಿ ಟ್ರಾಯಲ್ ಕಾನ್ಸರೆನ್ಸ್ ನಡೆಸಲು ಆದೇಶ ನೀಡಿದರು. ನ್ಯಾಯಾಧೀಶರ ಸಮಕ್ಷಮದಲ್ಲಿ ನಡೆಯುವ ಈ ಕಾನ್ಸರೆನ್ಸ್ನಲ್ಲಿ ಪ್ರಕರಣದ ತನಿಖಾಧಿಕಾರಿ, ವಿಶೇಷ ಪಿಪಿ, ಆರೋಪಿ ಪರ ವಕೀಲರು ಭಾಗವಹಿಸಿ, ಮುಂದಿನ ವಿಚಾರಣೆ ಯಾವ ರೀತಿ ನಡೆಸಬೇಕೆಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಯಾವ ವಿಚಾರಣೆ ಅಗತ್ಯ ಇದೆ ಎಂಬುದರ ಬಗ್ಗೆ ಈ ಸಭೆಯಲ್ಲಿ ತೀರ್ಮಾನಿಸಿ, ವಿಚಾರಣೆ ಆರಂಭಿಸಲು ಸಾಕ್ಷಿಗಳಿಗೆ ಸಮನ್ಸ್ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
Posted by Vidyamaana on 2024-04-23 16:20:35 |
ವಿಟ್ಲ: ಬಾವಿಗೆ ರಿಂಗ್ ಹಾಕುವಾಗ ಆಕ್ಸಿಜನ್ ಸಿಗದೇ ಇಬ್ಬರು ಮೃತಪಟ್ಟ ಘಟನೆ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ನಡೆದಿದೆ.
ಮೃತ ಕಾರ್ಮಿಕರನ್ನು ಕುಕ್ಕಿಲ ನಿವಾಸಿ ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ(40) ಮತ್ತು ಮಲಾರ್ ನಿವಾಸಿ ಆಲಿ(24) ಎಂದು ಗುರುತಿಸಲಾಗಿದೆ.
Posted by Vidyamaana on 2024-07-02 20:15:00 |
ಕುಣಿಗಲ್: ಆಂಬುಲೆನ್ಸ್ ವಾಹನ ನಿಯಂತ್ರಣ ತಪ್ಪಿ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಸಿಂಗೋನಹಳ್ಳಿ ಅಗ್ರಹಾರ ಗೇಟ್ ಬಳಿ ಮಂಗಳವಾರ ಸಂಭವಿಸಿದೆ.ಮೃತನನ್ನು ಮುಳಬಾಗಿಲಿನ ಶ್ರೀಕಾಂತ (26) ಎಂದು ಗುರುತಿಸಲಾಗಿದೆ.