Posted by vidyamaana on 2024-07-05 17:43:40 |
ಬೆಂಗಳೂರು : ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಮಾಡಿ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ .ಈ ಮೂಲಕ ಆಟೋ, ಕ್ಯಾಬ್ ಚಾಲಕರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.ಕಳೆದ ವರ್ಷ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗಿತ್ತು.
ಈ ವೇಳೆ ಸರ್ಕಾರದಿಂದ ಎಲ್ಲ ಮಾದರಿಯ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಆದರೂ, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಮಾಡುವಂತೆ ಸಾರಿಗೆ ಸಂಘಟನೆಗಳು ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಿತ್ತು ಸಾರಿಗೆ ಸಂಘಟನೆಗಳ ಮನವಿ ಬೆನ್ನಲ್ಲೇ ಸಾರಿಗೆ ಇಲಾಖೆ ಅಧಿಕಾರಿಗಳು ಅನಧಿಕೃತ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ವಿರುದ್ದ ಕ್ರಮಕ್ಕೆ ಮುಂದಾಗಿದೆ.
ಈ ಹಿನ್ನೆಲೆ ಸಾರಿಗೆ ಅಧಿಕಾರಿಗಳು ನಗರದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೀಜ್ ಮಾಡಲು ಮುಂದಾಗಿದ್ದು. 11 ತಂಡವನ್ನು ರಚಿಸಿ ಆರ್ಟಿಓ ಅಧಿಕಾರಿಗಳ ನೇತೃತ್ವದಲ್ಲಿ ಸೀಜ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.ರಾಜ್ಯಾದ್ಯಂತ ಜು.5ರಿಂದ ಕಡ್ಡಾಯವಾಗಿ ಎಲೆಕ್ಟ್ಇಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಕಂಡುಬಂದಲ್ಲಿ ಕೂಡಲೇ ಅವುಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
Posted by Vidyamaana on 2022-12-29 06:41:59 |
ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ, ಇಂಟರ್ಯಾಕ್ಟ್ ಕ್ಲಬ್ ರಾಮಕೃಷ್ಣ ಯುವ, ದ.ಕ. ಜಿಲ್ಲಾ ಪೊಲೀಸ್, ಪುತ್ತೂರು ನಗರ ಪೊಲೀಸ್ ಠಾಣೆ, ಪುತ್ತೂರು ಸಂಚಾರ ಪೊಲೀಸ್ ಠಾಣೆ ಆಶ್ರಯದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಡಿ. 28ರಂದು ಅಪರಾಧ ತಡೆ ಮಾಸಾಚರಣೆ ಜಾಗೃತಿ ಜಾಥಾ ನಡೆಯಿತು.
ಕೊಂಬೆಟ್ಟಿನಿಂದ ಆರಂಭಗೊಂಡ ಜಾಗೃತಿ ಜಾಥಾ, ಗಾಂಧಿಕಟ್ಟೆಯಲ್ಲಿ ಸಮಾರೋಪಗೊಂಡಿತು.
Posted by Vidyamaana on 2023-11-05 04:30:43 |
ಮೂಡಿಗೆರೆ: ತಾಲೂಕಿನ ಬಿದರಹಳ್ಳಿ ಬಸ್ ಡಿಪೋ ಬಳಿ ಶನಿವಾರ ಭೀಕರ ಅಪಘಾತ ಸಂಭವಿಸಿದ್ದು, ರಸ್ತೆಮಧ್ಯೆ ಕೂತಿದ್ದ ಹಸುವಿಗೆ ಬೈಕ್ ಢಿಕ್ಕಿಯಾಗಿ ಕೆಳಗೆ ಬಿದ್ದ ಬೈಕ್ ಸವಾರರ ಮೇಲೆ ಗ್ಯಾಸ್ ಲಾರಿ ಹರಿದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಲಾರಿ ಚಕ್ರದಡಿಗೆ ಸಿಲುಕಿದ ಪರಿಣಾಮವಾಗಿ ವಿಶ್ವೇಂದ್ರ (43) ಎಂಬ ದುರ್ದೈವಿ ಛಿದ್ರ-ಛಿದ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಭೀಕರ ಅಪಘಾತ ನಡೆದಿದ್ದು, ಬೈಕ್ ಹಿಂಬದಿ ಸವಾರೆಯಾಗಿದ್ದ ಲಕ್ಷ್ಮೀ ಎಂಬ ಮಹಿಳೆಯ ಕಾಲು ತುಂಡಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಇಬ್ಬರೂ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಲ್ಕೆರೆ ಗ್ರಾಮದವರು ಎಂದು ತಿಳಿದು ಬಂದಿದೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Posted by Vidyamaana on 2024-01-17 09:31:21 |
ಹೊಸದಿಲ್ಲಿ: ಫಾಸ್ಟಾಗ್ಗಳಿಗೆ ಕೆವೈಸಿ ಪೂರ್ಣಗೊಳಿಸದಿದ್ದರೆ ಜ.31ರಿಂದ ಫಾಸ್ಟಾಗ್ ಖಾತೆಗಳು ನಿಷ್ಟ್ರಿಯವಾಗಲಿವೆ ಎಂದು ಈಗಾಗಲೇ ಎನ್ಎಚ್ಎಐ ಎಚ್ಚರಿಸಿದೆ. ಫಾಸ್ಟಾಗ್ಗೆ ಕೆವೈಸಿ ಪೂರ್ಣಗೊಂಡಿದೆಯೇ, ಇಲ್ಲವೇ ಎಂಬ ಸ್ಥಿತಿಗತಿ ತಿಳಿಯುವುದು ಹೇಗೆ ಹಾಗೂ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಪರಿಶೀಲನೆ ಹೇಗೆ?
ಬಳಕೆದಾರರು https://fastag.ihmcl.com ವೆಬ್ಸೈಟ್ಗೆ ಭೇಟಿ ನೀಡಬೇಕು.
ಲಾಗಿನ್ ಆಗಲು ನೋಂದಾಯಿತ ಮೊಬೈಲ್ ಸಂಖ್ಯೆ, ಪಾಸ್ವರ್ಡ್ ಮತ್ತು ಬಳಿಕ ಮೊಬೈಲ್ಗೆ ಬರುವ ಒಟಿಪಿ ಬೇಕಾಗಲಿದೆ.
ಒಮ್ಮೆ ಲಾಗಿನ್ ಆದ ಅನಂತರ, ಡ್ಯಾಶ್ಬೋರ್ಡ್ಗೆ ತೆರಳಿ, “ಮೈ ಪ್ರೊಫೈಲ್’ ವಿಭಾಗದ ಮೇಲೆ ಕ್ಲಿಕ್ ಮಾಡಬೇಕು.
ಇಲ್ಲಿ ನಿಮ್ಮ ಕೈವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎಂಬ ಸ್ಥಿತಿಗತಿ ಹಾಗೂ ನೀವು ಸಲ್ಲಿಸಿರುವ ಪ್ರೊಫೈಲ್ ವಿವರ ಸಿಗಲಿದೆ.
ಪೂರ್ಣಗೊಳ್ಳದಿದ್ದರೆ ಏನು ಮಾಡಬೇಕು?
ಪ್ರೊಫೈಲ್ ವಿಭಾಗದಲ್ಲಿ, ಕೆವೈಸಿ ಎಂಬ ಉಪ ವಿಭಾಗವಿದೆ. ಅಲ್ಲಿ ಕ್ಲಿಕ್ ಮಾಡಿ ನೀವು ನಿಮ್ಮ ಕೆವೈಸಿ ಅಪ್ಡೇಟ್ ಮಾಡಬಹುದು.
ಬಳಕೆದಾರರು ಗುರುತು, ವಿಳಾಸದ ದಾಖಲೆಗಳನ್ನು ಸಲ್ಲಿಸಬೇಕು. ಪಾಸ್ಪೋರ್ಟ್ ಗಾತ್ರದ ಫೋಟೋ ಕೂಡ ಅಗತ್ಯ.
ಒಮ್ಮೆ ಪರಿಶೀಲಿಸಿ, ಅನಂತರ ದೃಢೀಕರಿಸಬೇಕಾಗುತ್ತದೆ.
ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಅನಂತರ, “ಪ್ರೊಸೀಡ್’ ಕ್ಲಿಕ್ ಮಾಡಿ ದರೆ ಕೈವೈಸಿ ಪೂರ್ಣಗೊಳ್ಳಲಿದೆ.
Posted by Vidyamaana on 2023-03-04 09:24:18 |
ಉದ್ಯಾವರ: ಈ ವಿಧಾನಸಭಾ ಚುನಾವಣೆ ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ಕಪ್ಪುಚುಕ್ಕೆ ಬಂದಿಲ್ಲ. ಅಧಿಕಾರ ಇದ್ದಾಗಲೂ, ಇಲ್ಲದಿದ್ದಾಗಲೂ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಇಂದೂ ಕೂಡಾ ಜನ ನನ್ನ ಬಳಿ ಸಮಸ್ಯೆ ಹೇಳಿಕೊಂಡು ಬರ್ತಾರೆ. ನಾನು ವೈಯಕ್ತಿಕ ಸಹಾಯವನ್ನೂ ಮಾಡುತ್ತಿದ್ದೇನೆ. ಮುಂಬರುವ ಚುನಾವಣೆ ನನ್ನ ಕೊನೆಯ ಚುನಾವಣೆ. ಮತದಾರರು ನನ್ನನ್ನು ಆಶೀರ್ವದಿಸುತ್ತಾರೆಂದು ನಂಬಿದ್ದೇನೆ ಎಂದರು.
Posted by Vidyamaana on 2024-04-09 20:20:16 |
ತನ್ನೆಲ್ಲಾ ಸ್ವಾತಂತ್ರ್ಯಗಳನ್ನು ಸ್ವಯಂ ಪ್ರೇರಿತನಾಗಿ ತಡೆದು ಸೃಷ್ಟಿಕರ್ತನಿಗೆ ಸಂಪೂರ್ಣ ಶರಣಾಗತಿ ಸಲ್ಲಿಸುವ ವ್ರತಾಚರಣೆಯ ಮೂಲಕ ದೈಹಿಕ ಮತ್ತು ಆತ್ಮೀಯ ಪರಿಶುದ್ಧಿಯನ್ನು ಪಡೆದ ಮನುಷ್ಯನಿಗೆ ತನ್ನ ಸಂತೋಷವನ್ನು ಪ್ರಕಟಪಡಿಸಲು ಅಲ್ಲಾಹನು ನಿಗದಿಪಡಿಸಿದ ಪವಿತ್ರ ದಿನವಾಗಿದೆ ಈದ್. ಇದು ಸ್ರಷ್ಟಿಯನ್ನು ಸ್ರಷ್ಟಿಕರ್ತನೆಡೆಗೆ ಮತ್ತಷ್ಟು ನಿಕಟಗೊಳಿಸುವ ಗುರಿ ಸಾಧಿಸಿದವರ ಹಬ್ಬವಾಗಿದೆ.
ಅಲ್ಲಾಹು ಅಕ್ಬರ್.... ವಲಿಲ್ಲಾಹಿಲ್ ಹಮ್ದ್ -ತಕ್ಬೀರ್ ಮೊಳಗಿಸುತ್ತಾ ಗುರಿಸಾಧಿಸಿದ ಸಂತೋಷವನ್ನು ಪ್ರಕಟಿಸುತ್ತಾ ತನ್ನ ಸಹಜೀವಿಗಳೊಂದಿಗೆ ಸೇರಿ ಸದಾಚಾರದ ಪ್ರತಿಜ್ಞೆಗೈಯ್ಯುತ್ತಾನೆ.
ಹಬ್ಬಗಳಿಗೆ ಅರಬಿ ಭಾಷೆಯಲ್ಲಿ ಈದ್ ಎನ್ನಲಾಗುತ್ತಿದ್ದು ಒಳಿತು ಮತ್ತು ಔದಾರ್ಯಗಳು ಎಂಬ ಅರ್ಥದ ಜೊತೆಗೆ ಸಂಭ್ರಮ ಸಡಗರದೊಂದಿಗೆ ಪುನರಾವರ್ತನೆಯಾಗುವ ಹಬ್ಬ ಎಂಬ ವಿವರಣೆಯೂ ಇದೆ.
ರಂಝಾನ್ ಉಪವಾಸದ ಮುಕ್ತಾಯದ ವೇಳೆ ಬರುವ ಈದುಲ್ ಫಿತ್ರ್ ಹಬ್ಬವು ಮನುಷ್ಯನ ಆತ್ಮದ ರೋಗಗಳಾದ ಮದ, ಮೋಹ, ಅಹಂಕಾರ,ಲೋಭಾದಿಗಳನ್ನು ಮೆಟ್ಟಿನಿಂತು ವಿಶೇಷ ತರಬೇತಿ ಪಡೆದು ಶುದ್ಧ ಪ್ರಕೃತಿಗೆ ಮರಳುವ ಸ್ಥಿತಿಯನ್ನುಂಟುಮಾಡುತ್ತದೆ.
ಆ ಮೂಲಕ ಮನುಷ್ಯನು ತನ್ನನ್ನು ಹೊಸ ಬದುಕಿಗೆ ತೆರೆದುಕೊಳ್ಳುತ್ತಾನೆ.
ರಂಝಾನ್ ತಿಂಗಳ ಕೊನೆಯ ಸೂರ್ಯಾಸ್ತಮಾನದೊಂದಿಗೆ ಪ್ರಾರಂಭಿಸಿ ಆ ದಿನ ಸೂರ್ಯಾಸ್ತದವರೆಗೆ ಮುಂದುವರೆದು ಈ ದಿನದಲ್ಲಿ ವಿಶೇಷ ಸ್ನಾನ ಮಾಡಿ ಸೂರ್ಯೋದಯದ ಬಳಿಕ ವಿಶೇಷ ನಮಾಜಿಗೆ ಸಿದ್ದರಾಗುತ್ತಾರೆ. ಸೂರ್ಯನುದಯಿಸಿ ಸುಮಾರು 20 ನಿಮಿಷಗಳ ನಂತರ ನಮಾಝಿನ ಸಮಯವಾಗಲಿದ್ದು ಮಧ್ಯಾಹ್ನದೊಂದಿಗೆ ಕೊನೆಗೊಳ್ಳುತ್ತದೆ.ಪುರುಷರು ಮಸೀದಿಯಲ್ಲಿ ಸಾಮೂಹಿಕವಾಗಿಯೂ ಸ್ತ್ರೀಯರು ಮನೆಗಳಲ್ಲಿಯೂ ಇದನ್ನು ನಿರ್ವಹಿಸುತ್ತಾರೆ. ದಾನ ಧರ್ಮಗಳಿಗೂ ಸತ್ಕಾರ್ಯಗಳಿಗೂ ಕುಟುಂಬ ಸಂಬಂಧವನ್ನು ಸದೃಢಗೊಳಿಸುವುದಕ್ಕೂ ಈ ಹಬ್ಬವು ಬಹಳ ಉಪಕಾರಿ. ಫಿತ್ರ್ ಝಕಾತ್ ಎಂಬ ಕಡ್ಡಾಯ ದಾನವು ಆ ದಿನದ ಪ್ರಮುಖ ಆರಾಧನೆಗಳಲ್ಲೊಂದಾಗಿದೆ.
Posted by Vidyamaana on 2024-04-08 20:25:26 |
ಬೆಂಗಳೂರು, (ಏಪ್ರಿಲ್ 08): ಬೆಂಗಳೂರಿನ ಮಾಧವನಗರದಲ್ಲಿರುವ ಪ್ರತಿಷ್ಠಿತ ರೆನೈಸನ್ಸ್ ಹೋಟೆಲ್ (Renaissance hotel) 19ನೇ ಮಹಡಿಯಿಂದ ಬಿದ್ದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶರಣ್ ಎನ್ನುವ 28 ವರ್ಷದ ಯುವಕ ಇಂದು (ಏಪ್ರಿಲ್ 08) ಮಧ್ಯಾಹ್ನ 2.30ರ ಸುಮಾರಿಗೆ ಹೋಟೆಲ್ ರೂಮ್ನ ಬಾಲ್ಕನಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹೈಗ್ರೌಂಡ್ಸ್ ಠಾಣೆ ಪೊಲೀಸರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ತಮಿಳುನಾಡು ಮೂಲದ ಶರಣ್ , ನಿನ್ನೆ(ಏಪ್ರಿಲ್ 08) ಹೋಟೆಲ್ಗೆ ಬಂದು ಒಂದು ದಿನದ ಮೆಟ್ಟಿಗೆ ಎಂದು ಹೇಳಿ ರೂಮ್ ಪಡೆದುಕೊಂಡಿದ್ದ. ಬಳಿಕ ಇಂದು ಮತ್ತೆರೆಡು ದಿನ ಉಳಿಯುವುದಾಗಿ ಹೇಳಿದ್ದ. ಆದ್ರೆ, ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹಿಂದೆ ಹಲವು ಬಾರಿ ಇದೇ ಹೋಟೆಲ್ ನಲ್ಲಿ ಬಂದು ಉಳಿದುಕೊಂಡಿದ್ದ. ಆದ್ರೆ, ಶರಣ್ ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.