Posted by vidyamaana on 2024-07-24 08:25:31 | Last Updated by Vidyamaana on 2024-07-24 08:25:31
ಪುತ್ತೂರು: ನೆಹರುನಗರ ಮಂಜಲ್ಪಡ್ಪು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು ಲಾರಿ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50ವ) ಎಂಬವರು ಮೃತಪಟ್ಟ ಬಗ್ಗೆ ವರದಿಯಾಗಿದೆ
ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಸವಾರ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.
Posted by Vidyamaana on 2023-08-15 03:12:13 |
ಬೆಂಗಳೂರು: ಬಿಜೆಪಿ ಬೆಂಗಳೂರು ಉತ್ತರ ಜಿಲ್ಲೆ ವತಿಯಿಂದ ವಿಭಜನ, ವಿಭೀಷಕ ಸ್ಮೃತಿ ದಿವಸ ಕಾರ್ಯಕ್ರಮದ ಅಂಗವಾಗಿ ಇಂದು ಸಂಜೆ ಹೆಬ್ಬಾಳ ಗೆದ್ದಲಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಪಂಜಿನ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಮಂಡಲ ಕಾರ್ಯಾಲಯದ ವರೆಗೆ ಈ ಮೆರವಣಿಗೆ ನಡೆಯಿತು.ದೇಶ ವಿಭಜನೆ ಸಂದರ್ಭದಲ್ಲಿ ನಡೆದ ಕರಾಳ ದುರ್ಘಟನೆಯ ಸಂತಾಪ ಕಾರ್ಯಕ್ರಮ ಇದಾಗಿತ್ತು. ಪಕ್ಷದ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಶಾಸಕ ಎಸ್.ಆರ್.ವಿಶ್ವನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಉತ್ತರ ಜಿಲ್ಲಾ ಅಧ್ಯಕ್ಷ ನಾರಾಯಣ ಗೌಡ, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
Posted by Vidyamaana on 2023-05-29 04:35:05 |
ಬೆಳ್ಳಾರೆ : ತಾನು ಓಡಿಸುವ ವಾಹನ ಇನ್ನೊಂದು ವಾಹನಕ್ಕೆ ಢಿಕ್ಕಿ ಹೊಡೆಯಿತು ಎಂದಾಕ್ಷಣ ನಿಂತು ವಿಚಾರಿಸಬೇಕು ತಾನೇ? ವಿಚಾರಿಸದೇ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಪಾಲ್ತಾಡಿನಲ್ಲಿ ನಡೆದ ಘಟನೆಯೇ ಸಾಕ್ಷಿ.
ಅಂಕತ್ತಡ್ಕದಿಂದ ಪಾಲ್ತಾಡು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನ ಸವಾರ, ಪಾಲ್ತಾಡು ನಿವಾಸಿ ಸಿ. ಇಸಾಕ್ ಸಾಹೇಬ್ ಅವರು ರಸ್ತೆಗೆ ಎಸೆಯಲ್ಪಟ್ಟು, ಗಾಯಗೊಂಡರು. ಸ್ಥಳೀಯರ ಸಹಕಾರದಿಂದ ಗಾಯಾಳುವನ್ನು ಪುತ್ತೂರಿನ ಪ್ರಗತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಕಾರು ಚಾಲಕ ಮಾತ್ರ, ಢಿಕ್ಕಿ ಹೊಡೆದು ಸೀದಾ ಪರಾರಿಯಾಗಿದ್ದ.
ಆರೋಪಿ ಕಾರು ಚಾಲಕನಿಗೆ ಎಲ್ಲರೂ ಹಿಡಿಶಾಪ ಹಾಕುವವರೇ. ಆದರೆ ಅವರ ಜಾಡನ್ನು ಹಿಡಿದದ್ದೇ ಭಾರೀ ಕುತೂಹಲದ ವಿಷಯ.
ಢಿಕ್ಕಿ ಹೊಡೆದ ರಭಸಕ್ಕೆ ಕಾರಿನ ನಂಬರ್ ಪ್ಲೇಟ್ ರಸ್ತೆಯಲ್ಲೇ ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯರೋರ್ವರು ನಂಬರ್ ದಾಖಲಿಸಿಕೊಂಡು, ಕಾರಿನ ಚಾಲಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಅಪಘಾತ ನಡೆಸಿ ಪರಾರಿಯಾದ ಕಾರು ಚಾಲಕನ ಮೇಲೆ ಭಾರೀ ಕೋಪ - ಆಕ್ರೋಶದ ನಡುವೆಯೂ ಆತನ ಎಡವಟ್ಟಿಗೆ ಎಲ್ಲರೂ ಮುಸಿಮುಸಿ ನಕ್ಕರು.
ಮೇ 26ರಂದು ರಾತ್ರಿ 8 ಗಂಟೆಗೆ ಘಟನೆ ನಡೆದಿದ್ದು, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Posted by Vidyamaana on 2023-12-02 14:06:13 |
ಪುತ್ತೂರು: ಡಿ.ಸಿ.ಆರ್.ಬಿ. ಚಿಕ್ಕಮಗಳೂರು
ಘಟಕದಲ್ಲಿದ್ದ ಜಂಬೂರಾಜ್ ಮಹಾಜನ್ ಅವರನ್ನು ಪುತ್ತೂರು ಗ್ರಾಮಾಂತರ ಠಾಣಾ ಪಿ.ಎಸ್.ಐ. ಆಗಿ ನೇಮಕಗೊಳಿಸಿ ಪೊಲೀಸ್ ಉಪ ಮಹಾನಿರೀಕ್ಷಕ ಚಂದ್ರಗುಪ್ತ ಆದೇಶಿಸಿದ್ದಾರೆ.
ಇವರು ಈ ಹಿಂದೆ ಪುತ್ತೂರು ನಗರ ಠಾಣೆಯಲ್ಲಿ ಪಿ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸಿದ್ದರು.ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ. ಆಗಿದ್ದ ಧನಂಜಯ ಬಿ.ಸಿ. ಅವರು ಪಶ್ಚಿಮ ವಲಯ ಕಚೇರಿಗೆ ಸ್ಥಳಾಂತರಗೊಂಡಿದ್ದು, ತೆರವಾದ ಹುದ್ದೆಗೆ ಜಂಬೂರಾಜ್ ಮಹಾಜನ್ ವರ್ಗಾವಣೆಗೊಂಡಿದ್ದಾರೆ.
Posted by Vidyamaana on 2023-01-18 08:23:59 |
ಪುತ್ತೂರು: 1979ರಲ್ಲಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ದಕ್ಷಿಣ ಕನ್ನಡಕ್ಕೆ ಬಂದಿದ್ದರು. ಆಗ ಒಕ್ಕಲುತನ ಮಾಡುತ್ತಿದ್ದ ಮನೆಗಳಲ್ಲಿ ನಿಂತು, ಇಲ್ಲಿನ ಕೃಷಿ ಕಾರ್ಯದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದರು. ಸಂಘಟನೆಯ ಕಾರ್ಯಕ್ಕೂ ಚಾಲನೆ ನೀಡಿ, ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನ ನಿರ್ಮಾಣಕ್ಕೆ, ಕೊಂಬೆಟ್ಟು ಐಟಿಐ ನಿರ್ಮಾಣಕ್ಕೆ ಕಾರಣಕರ್ತರಾದರು. ಅವರ ಈ ಎಲ್ಲಾ ಕೆಲಸಗಳನ್ನು ನೆನಪಿಸಿಕೊಳ್ಳುವ ಹಿನ್ನೆಲೆಯಲ್ಲಿ ಜ. 22ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
Posted by Vidyamaana on 2023-01-19 03:44:43 |
ಭಾರತದ ಗೌರವದ ಪ್ರತೀಕ ಭಾರತೀಯ ಸೇನೆ. ವಿಶ್ವದ ಬಲಿಷ್ಠ ಸೈನ್ಯಗಳ ಪೈಕಿ ಭಾರತವೂ ಅಗ್ರಪಂಕ್ತಿಯಲ್ಲಿ ಗುರುತಿಸಿಕೊಂಡಿದೆ. ಆದ್ದರಿಂದ ಸೇನಾ ದಿನಾಚರಣೆ ಎಂದರೆ ಎಲ್ಲರಿಗೂ ಪುಳಕ. ಈ ವರ್ಷ ಬೆಂಗಳೂರಿನಲ್ಲಿ ಭಾರತೀಯ ಸೇನಾ ದಿನ ಆಯೋಜನೆಗೊಳ್ಳುತ್ತಿದೆ ಎನ್ನುವುದೇ ಹೆಮ್ಮೆಯ ವಿಷಯ.
ಪ್ರತೀ ವರ್ಷವೂ ಜನವರಿ 15ರಂದು ಆಯೋಜನೆಗೊಳ್ಳುವ ಭಾರತೀಯ ಸೇನಾ ದಿನಾಚರಣೆ ಈ ವರ್ಷ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲಿದೆ. ವಿಶೇಷವಾಗಿ, ಈ ವರ್ಷ ಭಾರತೀಯ ಸೇನಾ ದಿನಾಚರಣೆಯ 75ನೇ ವರ್ಷಾಚರಣೆ ರಾಷ್ಟ್ರ ರಾಜಧಾನಿ ದಿಲ್ಲಿಯಿಂದ ಹೊರಗಡೆ ನಡೆಯುತ್ತಿದೆ.
ಕರ್ನಾಟಕ ಮತ್ತು ಕೇರಳ ಉಪ ಪ್ರಾಂತದ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಆಗಿರುವ ಮೇಜರ್ ಜನರಲ್ ರವಿ ಮುರುಗನ್ ಅವರು ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ (ಎಂಇಜಿ) ಕೇಂದ್ರ ಬೆಂಗಳೂರಿನಲ್ಲಿ ಮಾತನಾಡುತ್ತಾ, ಈ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದಿದ್ದಾರೆ. ಎಂಇಜಿ ಕೇಂದ್ರ ಸೇನಾ ದಿನಾಚರಣೆಯ ಪರೇಡಿನ ಸ್ಥಳವಾಗಿರಲಿದ್ದು, ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಿಸಲಿದೆ ಎನ್ನುತ್ತಾರವರು.
ಪಥ ಸಂಚಲನದಲ್ಲಿ ಒಟ್ಟು ಎಂಟು ವಿಭಾಗಗಳಿರಲಿದ್ದು, ಅವುಗಳಲ್ಲಿ ಒಂದು ಆರ್ಮಿ ಸರ್ವಿಸ್ ಕಾರ್ಪ್ಸ್ನ ಅಶ್ವದಳವೂ ಸೇರಿದೆ. ಅದರೊಡನೆ, ಐದು ರೆಜಿಮೆಂಟುಗಳ ಬ್ರಾಸ್ ಬ್ಯಾಂಡ್ಗಳ ಸಮ್ಮಿಲಿತವಾದ ಮಿಲಿಟರಿ ಬ್ಯಾಂಡ್ ಸಹ ಕಾರ್ಯಾಚರಿಸಲಿದೆ. ಈ ಎಂಟರಲ್ಲಿ ಪ್ರತಿಯೊಂದು ವಿಭಾಗವೂ ಬೇರೆ ಬೇರೆ ರೆಜಿಮೆಂಟ್ಗಳನ್ನು ಪ್ರತಿನಿಧಿಸಲಿದೆ. ಪ್ರತಿಯೊಂದು ರೆಜಿಮೆಂಟಿಗೂ ಅದರದೇ ಆದ ಸುಪ್ರಸಿದ್ಧ ಇತಿಹಾಸ ಮತ್ತು ಪರಂಪರೆಗಳಿವೆ. ಸೇನಾ ದಿನದ ಪಥಸಂಚಲನಕ್ಕೆ ಬೆಂಬಲವಾಗಿ, ಆರ್ಮಿ ಏವಿಯೇಷನ್ನ ಧ್ರುವ್ ಹಾಗೂ ರುದ್ರ ಹೆಲಿಕಾಪ್ಟರ್ಗಳು ಫ್ಲೈ ಬೈ ಹಾರಾಟ ಪ್ರದರ್ಶಿಸಲಿವೆ.
ಸೇನಾ ದಿನಾಚರಣೆಯ ಬಗ್ಗೆ ಒಂದಿಷ್ಟು...
ಜನವರಿ 15, 1949ರಂದು ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಅವರು ಕೊನೆಯ ಬ್ರಿಟಿಷ್ ಜನರಲ್ ಫ್ರಾನ್ಸಿಸ್ ಬುಚರ್ ಅವರಿಂದ ಸೇನಾ ಮಹಾದಂಡನಾಯಕರಾಗಿ ಅಧಿಕಾರ ಸ್ವೀಕರಿಸಿದರು. ಈ ಭಡ್ತಿಯ ಬಳಿಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪಅವರು ಭಾರತೀಯ ಸೇನೆಯ ಪ್ರಥಮ ಕಮಾಂಡರ್ ಇನ್ ಚೀಫ್ ಆಗಿ ನೇಮಕಗೊಂಡರು. ಈ ದಿನವನ್ನು ಸ್ಮರಿಸಲು ಪ್ರತಿವರ್ಷ ಜನವರಿ 15ರಂದು ಸೇನಾ ದಿನವನ್ನು ಆಚರಿಸಲಾಗುತ್ತದೆ.
ಪಥ ಸಂಚಲನ, ಪದಕ ಪ್ರದಾನ, ಮಿಲಿಟರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ದಿನ ಹೊಸದಿಲ್ಲಿ ಮತ್ತು ಇತರ ಆರ್ಮಿ ಕಮಾಂಡ್ ಮುಖ್ಯ ಕಚೇರಿಗಳಲ್ಲಿ ನಡೆಯುತ್ತವೆ.
1947ರಲ್ಲಿ ಭಾರತ ಸಾರ್ವಭೌಮತ್ವವನ್ನು ಪಡೆದುಕೊಂಡಿತು. ಬಹುತೇಕ ಎರಡು ಶತಮಾನಗಳ ಬ್ರಿಟಿಷ್ ಆಡಳಿತದಿಂದ ಭಾರತ ಮುಕ್ತವಾಯಿತು. ಆ ಸಂದರ್ಭದಲ್ಲಿ ದೇಶ ವಿಭಜನೆ ನಡೆದು, ಪಾಕಿಸ್ತಾನದಿಂದ ಸಾಕಷ್ಟು ನಿರಾಶ್ರಿತರು ಭಾರತಕ್ಕೆ ಬರುತ್ತಿದ್ದರು. ಆಗ ದೇಶಾದ್ಯಂತ ಅಸ್ಥಿರತೆ ಎದುರಾಗಿತ್ತು.
ಆಡಳಿತ ಅಸ್ಥಿರತೆಯ ಕಾರಣದಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು, ಶಾಂತಿ ಸ್ಥಾಪಿಸಲು ಸೇನೆ ಮಧ್ಯ ಪ್ರವೇಶಿಸಬೇಕಾಗಿತ್ತು. ಈ ಸಂದರ್ಭದಲ್ಲಿ ಕೆ.ಎಂ. ಕಾರ್ಯಪ್ಪನವರನ್ನು ಸೇನಾ ಮುಖ್ಯಸ್ಥರಾಗಿ ನೇಮಿಸಲಾಯಿತು.
ಕಾರ್ಯಪ್ಪನವರು 1899ರಲ್ಲಿ ಕರ್ನಾಟಕದ ಕೊಡಗಿನಲ್ಲಿ ಜನಿಸಿದರು. ಅವರ ತಂದೆ ಮಾದಪ್ಪಕಂದಾಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ಸ್ಯಾಮ್ ಮಾಣಿಕ್ ಶಾ ಅವರೊಡನೆ ಐದು ಸ್ಟಾರ್ಗಳ ಫೀಲ್ಡ್ ಮಾರ್ಷಲ್ ಹುದ್ದೆಗೆ ನೇಮಕಗೊಂಡರು. ಅವರು ಭಾರತದ ಪ್ರಥಮ ಸೇನಾ ಮಹಾದಂಡನಾಯಕರಾಗಿ ನೇಮಕಗೊಳ್ಳುವ ಮತ್ತು ಫೈವ್ ಸ್ಟಾರ್ ಜನರಲ್ ಆಗಿರುವುದನ್ನು ಹೊರತುಪಡಿಸಿ, ಅವರು ಭಾರತೀಯ ಸೇನೆ ಆರಂಭಗೊಂಡ ಅವಧಿಯಲ್ಲಿ ಸೇರ್ಪಡೆಗೊಂಡಿದ್ದವರಲ್ಲಿ ಒಬ್ಬರಾಗಿದ್ದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ
ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ಪದವಿ ಗಳಿಸಿದ ಬಳಿಕ ಡಿಸೆಂಬರ್ 1, 1919ರಂದು ತಾತ್ಕಾಲಿಕ ಸೇನಾ ಸೇರ್ಪಡೆ ಪಡೆದುಕೊಂಡರು. ಅವರನ್ನು ಸೇನೆಗೆ ಸೆಪ್ಟಂಬರ್ 9, 1922ರಂದು, ಜುಲೈ 17, 1920ರಿಂದ ಜಾರಿಗೆ ಬರುವಂತೆ ಶಾಶ್ವತ ಸೇರ್ಪಡೆಗೊಳಿಸಲಾಯಿತು. ಇದನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪಅವರು ತನ್ನೊಡನೆ ಜುಲೈ 16, 1920ರಂದು ಪದವಿ ಪಡೆದ ಬ್ರಿಟಿಷ್ ಅಧಿಕಾರಿಗಳಿಂದ ಕೆಳಗಿನ ರ್ಯಾಂಕಿಂಗ್ ಪಡೆಯುವಂತೆ ಮಾಡುವ ಉದ್ದೇಶದಿಂದ ಮಾಡಲಾಗಿತ್ತು. ಮೇ 1920ರಲ್ಲಿ ಕಾರ್ಯಪ್ಪನವರನ್ನು 2/125 ನೇಪಿಯರ್ ರೈಫಲ್ಸ್ ಗೆ ವರ್ಗಾಯಿಸಲಾಯಿತು. ಆ ಪಡೆಯನ್ನು ಮೆಸಪೊಟಾಮಿಯಾಗೆ (ಇಂದಿನ ಇರಾಕ್) ಸ್ಥಳಾಂತರಿಸಲಾಯಿತು. ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ಭಾರತಕ್ಕೆ ಬಂದ ಬಳಿಕ ಜೂನ್ 1922ರಲ್ಲಿ 7ನೇ ಪ್ರಿನ್ಸ್ ಆಫ್ ವೇಲ್ಸ್ ಡೋಗ್ರಾ ರೆಜಿಮೆಂಟಿಗೆ ನೇಮಿಸಲಾಯಿತು. ಜೂನ್ 1923ರಲ್ಲಿ ಅವರು 1/7 ರಜಪೂತ್ ರೆಜಿಮೆಂಟಿಗೆ ನೇಮಕಗೊಂಡರು. ಅದು ಅವರ ಶಾಶ್ವತ ರೆಜಿಮೆಂಟ್ ಆಯಿತು.
1925ರಲ್ಲಿ ಕಾರ್ಯಪ್ಪನವರು ಯುರೋಪ್, ಅಮೆರಿಕ, ಜಪಾನ್, ಚೀನಾ ಹಾಗೂ ಇತರ ದೇಶಗಳ ಪ್ರವಾಸ ನಡೆಸಿದರು. ಅವರು ಈ ಪ್ರವಾಸದಲ್ಲಿ ಹಲವು ದೇಶಗಳ ಸೈನಿಕರು ಮತ್ತು ನಾಗರಿಕರನ್ನು ಭೇಟಿ ಮಾಡಿದ್ದು, ಅವರಿಗೆ ಹೊಸ ಜ್ಞಾನ ನೀಡಿತ್ತು. ಅವರು ಫತೇಗರ್ನಲ್ಲಿ ಕಾರ್ಯ ನಿರ್ವಹಿಸುವಾಗ ಓರ್ವ ಬ್ರಿಟಿಷ್ ಅಧಿಕಾರಿಯ ಪತ್ನಿ ಅವರಿಗೆ ‘ಕಿಪ್ಪರ್’ ಎಂಬ ಅಡ್ಡ ಹೆಸರು ನೀಡಿದರು. 1927ರಲ್ಲಿ ಅವರು ಕ್ಯಾಪ್ಟನ್ ಆಗಿ ಪದೋನ್ನತಿ ಪಡೆದರೂ, ಅದನ್ನು ಸಾರ್ವಜನಿಕವಾಗಿ 1931ರ ತನಕ ಪ್ರಕಟಿಸಿರಲಿಲ್ಲ.
1947ರಲ್ಲಿ ಕಾರ್ಯಪ್ಪ ಯುನೈಟೆಡ್ ಕಿಂಗ್ಡಮ್ನ ಇಂಪೀರಿಯಲ್ ಡಿಫೆನ್ಸ್ ಕಾಲೇಜ್ನಲ್ಲಿ ತರಬೇತಿಗೆ ದಾಖಲಾದ ಪ್ರಥಮ ಭಾರತೀಯ ಎನಿಸಿಕೊಂಡರು. ಭಾರತ ಸ್ವತಂತ್ರಗೊಂಡ ಬಳಿಕ, ಕಾರ್ಯಪ್ಪನವರನ್ನು ಮೇಜರ್ ಜನರಲ್ ರ್ಯಾಂಕ್ನೊಂದಿಗೆ ಡೆಪ್ಯುಟಿ ಚೀಫ್ ಆಫ್ ಜನರಲ್ ಸ್ಟಾಫ್ ಆಗಿ ನೇಮಿಸಲಾಯಿತು. ಪಾಕಿಸ್ತಾನದೊಡನೆ ಯುದ್ಧ ಆರಂಭವಾದ ಬಳಿಕ, ಅವರನ್ನು ಈಸ್ಟರ್ನ್ ಆರ್ಮಿ ಕಮಾಂಡರ್ ಹಾಗೂ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ವೆಸ್ಟರ್ನ್ ಕಮಾಂಡ್ ಆಗಿ ಭಡ್ತಿಗೊಳಿಸಲಾಯಿತು.
1947ರ ಭಾರತ ಪಾಕ್ ಯುದ್ಧದಲ್ಲಿ ಕಾರ್ಯಪ್ಪನವರು ಭಾರತದ ಪಶ್ಚಿಮ ಪಡೆಗಳನ್ನು ಮುನ್ನಡೆಸಿದರು. ಬಳಿಕ ಅವರನ್ನು ಸೇನಾ ಮುಖ್ಯಸ್ಥರಾಗಿ ನೇಮಿಸಲಾಯಿತು. ಅವರು ಕಾರ್ಗಿಲ್ ಪ್ರಾಂತವನ್ನು ಮರುವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅದೊಂದು ಮಹತ್ತರ ಸಾಧನೆಯಾಗಿತ್ತು.
ಕಾರ್ಯಪ್ಪನವರು ಕಮಾಂಡರ್ ಇನ್ ಚೀಫ್ ಹುದ್ದೆಯಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ, ಜನವರಿ 14, 1953ರಂದು ನಿವೃತ್ತರಾದರು. ಅವರು ನಿವೃತ್ತಿ ಪಡೆಯುವ ಮುನ್ನ, ಅವರ ಮೊದಲ ರೆಜಿಮೆಂಟ್ ಆಗಿದ್ದ ರಜಪೂತ್ ರೆಜಿಮೆಂಟಲ್ ಕೇಂದ್ರಕ್ಕೆ ಬೀಳ್ಕೊಡುಗೆ ಭೇಟಿ ನೀಡಿದರು. ಅವರು ನಿವೃತ್ತರಾದ ಬಳಿಕ 1956ರ ತನಕ ಆಸ್ಟ್ರೇಲಿಯಾ ಹಾಗೂ ನ್ಯೂಝಿಲ್ಯಾಂಡ್ ಗಳಲ್ಲಿ ಭಾರತೀಯ ಹೈಕಮಿಷನರ್ ಆಗಿ ಕಾರ್ಯನಿರ್ವಹಿಸಿದರು.
ವೈಯಕ್ತಿಕ ಜೀವನ
ಮಾರ್ಚ್ 1937ರಲ್ಲಿ ಕಾರ್ಯಪ್ಪನವರು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರ ಮಗಳಾದ ಮುತ್ತು ಮಾಚಯ್ಯನವರನ್ನು ವಿವಾಹವಾದರು. ಅವರಿಗೆ ಒಬ್ಬ ಮಗ ಮತ್ತು ಒಬ್ಬಳು ಮಗಳಿದ್ದು, ಅವರ ಮಗ ಏರ್ ಮಾರ್ಷಲ್ ಕೆ.ಸಿ. ನಂದಾ ಕಾರ್ಯಪ್ಪಸಹ ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿಯಾಗಿದ್ದರು.
ಅವರಿಗೆ ಗೌರವಾರ್ಥವಾಗಿ ‘ಆರ್ಡರ್ ಆಫ್ ದ ಕಮಾಂಡರ್ ಇನ್ ಚೀಫ್ ಆಫ್ ದ ಲೀಜನ್ ಆಫ್ ಮೆರಿಟ್’ ನೀಡಲಾಯಿತು. 1993ನೇ ಇಸವಿಯಲ್ಲಿ, ತನ್ನ 94ನೇ ವಯಸ್ಸಿನಲ್ಲಿ ಕಾರ್ಯಪ್ಪನವರು ಬೆಂಗಳೂರಿನಲ್ಲಿ ವಿಧಿವಶರಾದರು. ಶಿಸ್ತಿನ ವ್ಯಕ್ತಿಯಾಗಿದ್ದ ಅವರ ಕೊಡುಗೆಗಳನ್ನು ಸೇನಾ ದಿನಾಚರಣೆಯ ಮೂಲಕ ನೆನಪಿಸಿ, ಗೌರವಿಸಲಾಗುತ್ತದೆ. ಅವರು ತನ್ನ ದೇಶಭಕ್ತಿಯ ಕಾರ್ಯಗಳಿಂದ ತಲೆಮಾರುಗಳ ಕಾಲ ಆದರ್ಶವಾಗಿ ಉಳಿದಿದ್ದಾರೆ.