Posted by vidyamaana on 2024-07-23 18:35:28 |
ಕಾರವಾರ: ಶಿರೂರು ಭೂಕುಸಿತ ಸ್ಥಳದಲ್ಲಿ 8 ದಿವಸದ ಬಳಿಕ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಈ ಮೂಲಕ 8ನೇ ಮೃತದೇಹ ಸಿಕ್ಕಂತಾಗಿದೆ. ಈ ನಡುವೆ ಕೇರಳದ ಲಾರಿ ಚಾಲಕ ಅರ್ಜುನ್ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಮಂಗಳವಾರ ಬೆಳಗ್ಗೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆ ಸಣ್ಣಿ ಹನ್ಮಂತ ಗೌಡ (57) ಸಾವನ್ನಪ್ಪಿದ್ದು, ಮೃತದೇಹ ದೊರೆತಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಅವರ ಶವ ಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಮನೆ ಕುಸಿತವಾಗಿ ಸಣ್ಣಿ ಹನ್ಮಂತ ಗೌಡ ಅವರು ಕಣ್ಮರೆಯಾಗಿದ್ದರು. ಇನ್ನೂ ಅರ್ಜುನ್ ಸಹಿತ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ NDRF, SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ಮುಂದುವರೆದಿದೆ.
ಕೇರಳ ಮಾಧ್ಯಮಗಳ ಕವರೇಜ್
ಸದ್ಯ ಕರ್ನಾಟಕದ ಉತ್ತರ ಕನ್ನಡದಲ್ಲಾದ ಭೂಕುಸಿತ ವರದಿಯನ್ನ ಕನ್ನಡಿಗರು ಕೂಡಾ ಮಲಯಾಳಂ ಸುದ್ದಿವಾಹಿನಿಗಳಲ್ಲಿ ವೀಕ್ಷಿಸುವಂತಾಗಿದೆ. ಕೇರಳದ ಪ್ರಮುಖ ರಾಜ್ಯ ಮಟ್ಟದ ವಾಹಿನಿಗಳು ಕಳೆದ 4 ದಿನಗಳಿಂದಲೂ ಉತ್ತರ ಕನ್ನಡದಲ್ಲಿ ಬೀಡುಬಿಟ್ಟಿವೆ. ಅರ್ಜುನ್ ಶೋಧ ಕಾರ್ಯಾಚರಣೆಗೆ ಹೆಚ್ಚಿನ ಒತ್ತಡ ಏರುತ್ತಿದೆ. ಜೊತೆಗೆ ಕೇರಳದ ನಾಗರಿಕ ಸುರಕ್ಷತಾ ತಂಡಗಳು ಕೂಡಾ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕೇರಳದಿಂದ ಶಿರೂರಿಗೆ ತಂಡವಾಗಿ ಆಗಮಿಸಿವೆ
Posted by Vidyamaana on 2023-10-15 20:54:36 |
ಬೆಂಗಳೂರು: ಕರ್ನಾಟಕ ರಾಜ್ಯ ಹೈಕೋರ್ಟ್ಗೆ (Karnataka High court) ಅಕ್ಟೋಬರ್ 16ರಿಂದ 21ರವರೆಗೆ ದಸರಾ ರಜೆ (Dasara Holiday) ಘೋಷಣೆಯಾಗಿದೆ. ಈ ಸಂದರ್ಭದಲ್ಲಿ ಎದುರಾಗುವ ತುರ್ತು ಅರ್ಜಿಗಳ ವಿಚಾರಣೆಗಾಗಿ ರಜಾಕಾಲೀನ ಪೀಠಗಳು (Holiday Benches) ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠದಲ್ಲಿ ಕರ್ತವ್ಯ ನಿರ್ವಹಸಲಿವೆ ಎಂದು ಪ್ರಕಟಣೆ ತಿಳಿಸಿದೆ.
ನ್ಯಾಯಿಕ ರಿಜಿಸ್ಟ್ರಾರ್ ಎಂ ಚಂದ್ರಶೇಖರ್ ರೆಡ್ಡಿ ಅವರು ಈ ವಿಷಯವನ್ನು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಅದರ ಜತೆಗೆ ರಜಾಕಾಲೀನ ಪೀಠಗಳ ವಿವರವನ್ನೂ ಒದಗಿಸಿದ್ದಾರೆ.
ಬೆಂಗಳೂರು ಪೀಠದಲ್ಲಿ ಯಾರು ಇರುತ್ತಾರೆ?
ಬೆಂಗಳೂರು ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್ ಪ್ರಸಾದ್ ಮತ್ತು ಟಿ ವೆಂಕಟೇಶ್ ನಾಯ್ಕ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಲಿದ್ದು, ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇ ಗೌಡ ಅವರ ನೇತೃತ್ವದ ಏಕಸದಸ್ಯ ಪೀಠಗಳು ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿವೆ.
ಧಾರವಾಡ ಪೀಠದ ರಜಾ ಕಾಲೀನ ನ್ಯಾಯಮೂರ್ತಿಗಳು ಇವರು:
ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ಕೆ.ಎಸ್ ಹೇಮಲೇಖಾ ಮತ್ತು ಅನಿಲ್ ಬಿ. ಕಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ಮೊದಲಿಗೆ ವಿಭಾಗೀಯ ಪೀಠದ ಪ್ರಕರಣಗಳನ್ನು ವಿಚಾರಣೆ ನಡೆಸಲಿದೆ. ಆನಂತರ ಉಭಯ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ಏಕಸದಸ್ಯ ಪೀಠದಲ್ಲಿ ಕುಳಿತು ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.
ಕಲಬುರ್ಗಿ ಪೀಠದಲ್ಲಿ ಯಾರಿರುತ್ತಾರೆ?
ಕಲಬುರ್ಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಚ್ ಟಿ ನರೇಂದ್ರ ಪ್ರಸಾದ್ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠವು ಮೊದಲಿಗೆ ವಿಭಾಗೀಯ ಪೀಠದ ಪ್ರಕರಣಗಳ ವಿಚಾರಣೆ ನಡೆಸಲಿದ್ದು, ಆನಂತರ ಏಕಸದಸ್ಯ ಪೀಠಗಳು ಪ್ರತ್ಯೇಕವಾಗಿ ಪ್ರಕರಣಗಳ ವಿಚಾರಣೆ ನಡೆಸಲಿದೆ.
ಯಾವ ಯಾವ ಪ್ರಕರಣಗಳ ವಿಚಾರಣೆ ನಡೆಯುತ್ತದೆ?
ತುರ್ತಾಗಿ ಆಗಬೇಕಾದ ಮಧ್ಯಂತರ ತಡೆಯಾಜ್ಞೆ, ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶದಂಥ ಪ್ರಕರಣಗಳನ್ನು ಮಾತ್ರ ವಿಚಾರಣೆಗೆ ಪರಿಗಣಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೇಲಿನ ಪ್ರಕರಣಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ರಜಾಕಾಲೀನ ಪೀಠದ ವಿಚಾರಣೆಯ ದಿನ ಹೊರತುಪಡಿಸಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ ಸಲ್ಲಿಸಬಹುದಾಗಿದೆ. ರಜಾಕಾಲೀನ ಪೀಠದ ವಿಚಾರಣೆಯ ದಿನದಂದು ಅರ್ಜಿ ಸಲ್ಲಿಕೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 3.30 ರವರೆಗೆ ಅವಕಾಶ ಇರಲಿದೆ. ಇದರೊಂದಿಗೆ ಇ-ಫೈಲಿಂಗ್ ಪೋರ್ಟಲ್ ಮೂಲಕ ಇ-ಫೈಲಿಂಗ್ ಮಾಡಬಹುದಾಗಿದೆ ಎಂದು ರಿಜಿಸ್ಟ್ರಾರ್ ಮತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Posted by Vidyamaana on 2023-04-18 14:30:38 |
ಪುತ್ತೂರು: ಎಸ್.ಡಿ.ಪಿ.ಐ. ಅಭ್ಯರ್ಥಿಯಾಗಿ ಶಾಫಿ ಬೆಳ್ಳಾರೆ ಏ. 19ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಯೇ ಇರುವುದಿಲ್ಲ ಎನ್ನುವುದೇ ಇಲ್ಲಿನ ವಿಶೇಷ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಶಾಫಿ ಬೆಳ್ಳಾರೆ, ಪುತ್ತೂರು ಎಸ್.ಡಿ.ಪಿ.ಐ. ಅಭ್ಯರ್ಥಿ. ಶಾಫಿ ಬೆಳ್ಳಾರೆ ಯವರ ಪರವಾಗಿ ಎಲೆಕ್ಷನ್ ಏಜೆಂಟ್ ಅಬ್ದುಲ್ ರಹಿಮಾನ್ ನಾಮಪತ್ರ ಸಲ್ಲಿಸಲಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರುಗಳಾದ ರಿಯಾಜ್ ಪರಂಗಿಪೇಟೆ, ಅಲ್ಪಾನ್ಸ್ ಫ್ರಾಂಕೋ, ಅಬ್ದುಲ್ ಲತೀಫ್, ಅಬ್ದುಲ್ ಮಜೀದ್, ರಿಯಾಜ್ ಕಡಂಬು, ಅನ್ವರ್ ಸಾದಾತ್, ಇಬ್ರಾಹಿಂ ಸಾಗರ್ ಮೊದಲಾದವರು ಆಗಮಿಸಲಿದ್ದಾರೆ.
ಎಪಿಎಂಸಿ ರಸ್ತೆಯಲ್ಲಿರುವ ಪಕ್ಷದ ಕಚೇರಿಯಿಂದ ಕಾಲ್ನಡಿಗೆ ಮೆರವಣಿಗೆ ಮೂಲಕ ತಾಲೂಕು ಆಡಳಿತ ಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ ತಿಳಿದು ಬಂದಿದೆ.
Posted by Vidyamaana on 2024-04-13 14:52:44 |
ಗದಗ: ಒಂದೇ ಮರಕ್ಕೆ ನೇಣು ಹಾಕಿಕೊಂಡು ಪ್ರೇಮಿಗಳು (Lovers Death) ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ನರೇಗಲ್ ಪಟ್ಟಣದ ಅಪ್ಪಣ್ಣ ಗೊರಕಿ(28), ಲಲಿತಾ ಹಲಗೇರಿ (21) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಘಟನೆ ನಡೆದಿದೆ.
ಒಂದೇ ಊರಿನವರಾದ ಅಪ್ಪಣ್ಣ ಗೊರಕಿ ಹಾಗೂ ಲಲಿತಾ ನಡುವೆ ಪ್ರೀತಿ ಚಿಗುರೊಡೆದಿತ್ತು. ಗಾಢವಾಗಿದ್ದ ಅವರ ಪ್ರೀತಿಗೆ ಮನೆಯವರ ಒಪ್ಪಿಗೆ ಇರಲಿಲ್ಲ ಎಂದು ತಿಳಿದು ಬಂದಿದೆ. ಈ ಮಧ್ಯೆ ಮನೆಯವರ ಬಲವಂತಕ್ಕೆ ಲಲಿತಾ ಇದೇ ಏಪ್ರಿಲ್ 4 ರಂದು ಬೇರೆ ಯುವಕನೊಂದಿಗೆ ಮದುವೆಯಾಗಿದ್ದಳು.
ಇದರಿಂದ ಅಪ್ಪಣ್ಣ-ಲಲಿತಾ ಇಬ್ಬರು ಮನ ನೊಂದಿದ್ದರು. ಅಪ್ಪಣ್ಣನೊಂದಿಗೆ ನೂರಾರು ಕನಸು ಕಂಡಿದ್ದ ಲಲಿತಾ ಆತನನ್ನು ಮರೆಯಲು ಆಗಿರಲಿಲ್ಲ. ಬೇರೊಬ್ಬನ ಜತೆಗೆ ಮದುವೆ ಆಗಿದ್ದರೂ, ಮನಸ್ಸೆಲ್ಲವೂ ಅಪ್ಪಣ್ಣನೊಂದಿಗೆ ಬೆರೆತು ಹೋಗಿತ್ತು. ಅಪ್ಪಣ್ಣ ಹಾಗೂ ಲಲಿತಾ ಒಬ್ಬರನ್ನೊಬ್ಬರು ಬಿಟ್ಟು ಇರಲು ಆಗದೆ ಊರಿನ ಹೊರವಲಯದ ಖಾಲಿ ಜಾಗದಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡಿದ್ದಾರೆ.
Posted by Vidyamaana on 2024-03-30 08:28:35 |
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯೂ ಸಾಮಾಜಿಕ ಜಾಲತಾಣಗಳನ್ನು ನೋಡಿ ಹೆಚ್ಚು ಪ್ರಭಾವಿತರಾಗುತ್ತಿದ್ದು, ವೈರಲ್ ಆಗುವ ಭರದಲ್ಲಿ ಹುಚ್ಚಾಟವಾಡಿ ತಮ್ಮ ಮೈಮೇಲೆ ಗಂಡಾಂತರವನ್ನು ಎಳೆದುಕೊಳ್ಳುತ್ತಿದ್ದಾರೆ. ಇದೀಗ ಅದಕ್ಕೆ ಸಂಬಂಧಿಸಿದಂತೆ ಸ್ನೇಹಿತನ ಹುಚ್ಚಾಟಕ್ಕೆ ಯುವಕನೊಬ್ಬ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ನಡೆದಿದೆ.ಮಾರ್ಚ್ 25ರಂದು ಘಟನೆ ನಡೆದಿದ್ದು, ಮೃತ ಯುವಕನನ್ನು ಯೋಗೇಶ್ (24) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಆರೋಪಿ ಮುರಳಿ (25) ಯನ್ನು ವಶಕ್ಕೆ ಪಡೆದಿದ್ದಾರೆ. ಏರ್ಪ್ರೆಷರ್ ಪೈಪ್ನಿಂದ ಗುದನಾಳಕ್ಕೆ ಗಾಳಿ ಬಿಟ್ಟಿದ್ದರಿಂದ ಹೊಟ್ಟೆಯೊಳಗೆ ಕರುಳು ಬ್ಲಾಸ್ಟ್ ಆಗಿ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
Posted by Vidyamaana on 2024-04-19 20:04:23 |
ಬಜ್ಪೆ :ಇಲ್ಲಿನ ಎಡಪದವು ಪೇಟೆಯಲ್ಲಿ ಶುಕ್ರವಾರ ಸಂಜೆ ಮಣ್ಣು ತುಂಬಿಕೊಂಡು ಹೋಗುತ್ತಿದ್ದ ಬೃಹತ್ ಲಾರಿಯೊಂದರ ಬ್ರೇಕ್ ಫೇಲ್ ಆದ ಕಾರಣ ರಸ್ತೆ ಬದಿಯಲ್ಲಿದ್ದ ಅಂಗಡಿಗಳಿಗೆ ಗುದ್ದಿ ಬಳಿಕ ಖಾಸಗಿ ಬಸ್, ಲಾರಿ ಮತ್ತು ಹಲವು ವಾಹನಗಳಿಗೆ ಗುದ್ದಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಭಾರೀ ಅವಘಡ ತಪ್ಪಿ ಹೋಗಿದೆ.
Posted by Vidyamaana on 2024-01-17 09:31:21 |
ಹೊಸದಿಲ್ಲಿ: ಫಾಸ್ಟಾಗ್ಗಳಿಗೆ ಕೆವೈಸಿ ಪೂರ್ಣಗೊಳಿಸದಿದ್ದರೆ ಜ.31ರಿಂದ ಫಾಸ್ಟಾಗ್ ಖಾತೆಗಳು ನಿಷ್ಟ್ರಿಯವಾಗಲಿವೆ ಎಂದು ಈಗಾಗಲೇ ಎನ್ಎಚ್ಎಐ ಎಚ್ಚರಿಸಿದೆ. ಫಾಸ್ಟಾಗ್ಗೆ ಕೆವೈಸಿ ಪೂರ್ಣಗೊಂಡಿದೆಯೇ, ಇಲ್ಲವೇ ಎಂಬ ಸ್ಥಿತಿಗತಿ ತಿಳಿಯುವುದು ಹೇಗೆ ಹಾಗೂ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಪರಿಶೀಲನೆ ಹೇಗೆ?
ಬಳಕೆದಾರರು https://fastag.ihmcl.com ವೆಬ್ಸೈಟ್ಗೆ ಭೇಟಿ ನೀಡಬೇಕು.
ಲಾಗಿನ್ ಆಗಲು ನೋಂದಾಯಿತ ಮೊಬೈಲ್ ಸಂಖ್ಯೆ, ಪಾಸ್ವರ್ಡ್ ಮತ್ತು ಬಳಿಕ ಮೊಬೈಲ್ಗೆ ಬರುವ ಒಟಿಪಿ ಬೇಕಾಗಲಿದೆ.
ಒಮ್ಮೆ ಲಾಗಿನ್ ಆದ ಅನಂತರ, ಡ್ಯಾಶ್ಬೋರ್ಡ್ಗೆ ತೆರಳಿ, “ಮೈ ಪ್ರೊಫೈಲ್’ ವಿಭಾಗದ ಮೇಲೆ ಕ್ಲಿಕ್ ಮಾಡಬೇಕು.
ಇಲ್ಲಿ ನಿಮ್ಮ ಕೈವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎಂಬ ಸ್ಥಿತಿಗತಿ ಹಾಗೂ ನೀವು ಸಲ್ಲಿಸಿರುವ ಪ್ರೊಫೈಲ್ ವಿವರ ಸಿಗಲಿದೆ.
ಪೂರ್ಣಗೊಳ್ಳದಿದ್ದರೆ ಏನು ಮಾಡಬೇಕು?
ಪ್ರೊಫೈಲ್ ವಿಭಾಗದಲ್ಲಿ, ಕೆವೈಸಿ ಎಂಬ ಉಪ ವಿಭಾಗವಿದೆ. ಅಲ್ಲಿ ಕ್ಲಿಕ್ ಮಾಡಿ ನೀವು ನಿಮ್ಮ ಕೆವೈಸಿ ಅಪ್ಡೇಟ್ ಮಾಡಬಹುದು.
ಬಳಕೆದಾರರು ಗುರುತು, ವಿಳಾಸದ ದಾಖಲೆಗಳನ್ನು ಸಲ್ಲಿಸಬೇಕು. ಪಾಸ್ಪೋರ್ಟ್ ಗಾತ್ರದ ಫೋಟೋ ಕೂಡ ಅಗತ್ಯ.
ಒಮ್ಮೆ ಪರಿಶೀಲಿಸಿ, ಅನಂತರ ದೃಢೀಕರಿಸಬೇಕಾಗುತ್ತದೆ.
ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಅನಂತರ, “ಪ್ರೊಸೀಡ್’ ಕ್ಲಿಕ್ ಮಾಡಿ ದರೆ ಕೈವೈಸಿ ಪೂರ್ಣಗೊಳ್ಳಲಿದೆ.