Posted by vidyamaana on 2024-03-23 10:38:46 |
ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.
ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.
Posted by Vidyamaana on 2024-01-07 22:15:59 |
ಸುಳ್ಯ , ಜ.7: ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆ ಕುರಿತಾಗಿ ಹಾಕಲಾಗಿದ್ದ ಬ್ಯಾನರ್ ಹರಿದ ಪ್ರಕರಣವನ್ನು ಸುಳ್ಯ ಪೊಲೀಸರು ಭೇದಿಸಿದ್ದು, ಮಧ್ಯರಾತ್ರಿ ಮಾನಸಿಕ ಅಸ್ವಸ್ಥ ವ್ಯಕ್ತಿ ಎಸಗಿರುವ ಕೃತ್ಯ ಎಂದು ತನಿಖೆಯಲ್ಲಿ ತಿಳಿದುಬಂದಿರುತ್ತದೆ.
ಜ.5ರಂದು ರಾತ್ರಿ ವೇಳೆ ಬ್ಯಾನರನ್ನು ಹರಿದು ಹಾಕಿದ ಬಗ್ಗೆ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರು ಸುಳ್ಯ ಠಾಣೆಯಲ್ಲಿ ಪೊಲೀಸ್ ದೂರು ನೀಡಿದ್ದರು. ಶ್ರೀರಾಮ ಮಂದಿರದ ಬ್ಯಾನರ್ ಹರಿದ ಬಗ್ಗೆ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಆಗ್ರಹ ಮಾಡಿತ್ತು.ಪೊಲೀಸರು ಸುಳ್ಯ ಪೇಟೆಯ ಆಸುಪಾಸಿನಲ್ಲಿ 40 ಕಡೆಯ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕಾಗಿ ಶೋಧ ನಡೆಸಿದ್ದಾರೆ. ಜ.5ರಂದು ಮಧ್ಯರಾತ್ರಿ ಮಾನಸಿಕ ಅಸ್ವಸ್ಥನಂತೆ ಕಂಡುಬರುವ ವಯಸ್ಸಾದ ವ್ಯಕ್ತಿಯೊಬ್ಬ ಆ ಬ್ಯಾನರನ್ನು ಹರಿದು ಸುಳ್ಯ ಪೇಟೆಯಲ್ಲಿ ಸುತ್ತಾಡಿರುವುದು ಕಂಡುಬಂದಿದೆ. ಸುಳ್ಯದ ವಿವೇಕಾನಂದ ಸರ್ಕಲ್ ಬಳಿ ಹರಿದ ಬ್ಯಾನರ್ ತುಂಡನ್ನು ಇಟ್ಟು ರಾಮನ ಜಪ ಮಾಡಿರುವುದನ್ನು ಸಾರ್ವಜನಿಕರು ನೋಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಹರಿದ ಬ್ಯಾನರ್ ತುಂಡನ್ನು ಪರಿಶೀಲಿಸಿದಾಗ ಶ್ರೀರಾಮನ ಫೋಟೊಗೆ ಯಾವುದೇ ಹಾನಿ ಮಾಡಿರುವುದು ಕಂಡುಬಂದಿಲ್ಲ. ಹರಿದ ಬ್ಯಾನರ್ ತುಂಡನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಯಾರೋ ಕಿಡಿಗೇಡಿಗಳು ಕೋಮು ದ್ವೇಷ ಹರಡಿಸುವುದಕ್ಕಾಗಿ ಇಂತಹ ಕೃತ್ಯ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಆದರೆ ತನಿಖೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಎನ್ನುವುದು ತಿಳಿಯುತ್ತಲೇ ವಾತಾವರಣ ತಿಳಿಯಾಗಿದೆ.
Posted by Vidyamaana on 2024-04-19 18:10:41 |
ಅಬುಧಾಬಿ: ಯುಎಇಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹದ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಪರಿಸ್ಥಿತಿ ಮರಳುವವರೆಗೂ ತಮ್ಮ ಅನಗತ್ಯ ಪ್ರವಾಸವನ್ನು ಮುಂದೂಡುವಂತೆ ದುಬೈಗೆ ಆಗಮಿಸುವ ಅಥವಾ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಭಾರತೀಯರಿಗೆ ಯುಎಇಯಲ್ಲಿನ ಭಾರತಿಯ ರಾಯಭಾರ ಕಚೇರಿಯು ಶುಕ್ರವಾರ ಸಲಹೆ ನೀಡಿದೆ.
ದುಬೈನ ಭಾರತೀಯ ಕಾನ್ಸುಲೇಟ್, ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಈಗಾಗಲೇ ಸಹಾಯವಾಣಿಯನ್ನೂ ಆರಂಭಿಸಿದ್ದಾರೆ.
Posted by Vidyamaana on 2023-09-24 07:43:09 |
ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಒಟ್ಟು 55 ಗ್ರಾಂ ತೂಕದ 2 ಲಕ್ಷ 75 ಸಾವಿರ ರೂ. ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.ಇದೇ ವೇಳೆ ಸ್ಕೂಟರ್, ಮೊಬೈಲ್ ಫೋನ್ ಸೇರಿದಂತೆ ಒಟ್ಟು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕೂಡಾ ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ.
ಅಬ್ದುಲ್ ಅಜೀಜ್, ಅಕ್ಷಿತ್ ಕುಮಾರ್, ಜಾಕೀರ್ ಮತ್ತು ಕಾರ್ತಿಕ್ ಸುವರ್ಣ ಬಂಧಿತ ಆರೋಪಿಗಳಾಗಿದ್ದು, ಈ ಪೈಕಿ ಅಬ್ದುಲ್ ಅಜೀಜ್ 15 ದಿನಗಳ ಹಿಂದೆಯಷ್ಟೇ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ.ಮಂಗಳೂರು ನಗರದ ಕೆ.ಎಸ್. ರಾವ್ ರಸ್ತೆ, ಉಳ್ಳಾಲಬೈಲ್ ಪರಿಸರದಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
Posted by Vidyamaana on 2023-03-13 10:37:47 |
ಬೆಳ್ಳಾರೆ : ದ.ಕ.ಜಿಲ್ಲಾ ಪೊಲೀಸ್ ಘಟಕ ಬೆಳ್ಳಾರೆ ಪೊಲೀಸ್ ಠಾಣಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ಮಾ.13 ರಂದು ನಡೆಯಿತು.
ಮೀನುಗಾರಿಕೆ,ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ನೂತನ ಕಟ್ಟಡವನ್ನು ಉದ್ಘಾಟಿಸಿ ಇತ್ತೀಚಿನ ದಿನದಲ್ಲಿ ವಿದ್ಯಾವಂತರು ಜಾಸ್ತಿಯಾದಂತೆ ಅಪರಾಧ ಪ್ರಕರಣಗಳು ಜಾಸ್ತಿಯಾಗುತ್ತಿದೆ.ಪೊಲೀಸ್ ಠಾಣೆಗಳು ಕೂಡ ಜಾಸ್ತಿಯಾಗುತ್ತಿದೆ.ಪ್ರಕರಣಗಳು ಕಮ್ಮಿಯಾಗಬೇಕು.ಪ್ರತಿಯೊಬ್ಬರು ಪ್ರೀತಿ ವಿಶ್ವಾಸದಿಂದ ಬಾಳಬೇಕು.ಪ್ರೀತಿ ವಿಶ್ವಾಸ,ನಂಬಿಕೆ ಇದ್ದರೆ ಸಮಸ್ಯೆ ನಿವಾರಣೆ ಸಾಧ್ಯ ಮತ್ತು
ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಜನರಿಗೆ ಉತ್ತಮ ಸೇವೆ ನೀಡುವಂತಾಗಬೇಕು ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ವಿಕ್ರಂ ಅಮಟೆ IPS ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಡಿಷನಲ್ಲಿ ಎಸ್ಪಿ ಧರ್ಮಪ್ಪ ಹೊಂದಿಸಿದರು. ನಿವೃತ್ತ ಎ ಎಸ್ ಐ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಸುಳ್ಯ ತಹಶೀಲ್ದಾರ್ ಮಂಜುನಾಥ್, ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ರವೀಂದ್ರ, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಉಪಸ್ಥಿತರಿದ್ದರು.
Posted by Vidyamaana on 2023-09-01 01:45:46 |
ಬೆಂಗಳೂರು: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ ಎನ್ನಲಾಗುತ್ತಿರುವ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಕೋರ್ಟು ಆದೇಶ ಉಲ್ಲಂಘಿಸದಂತೆ ಎಚ್ಚರಿಕೆ ನೀಡಿದೆ.
ಇನ್ನು ಮುಂದಕ್ಕೂ ಇದಕ್ಕೆ ತಪ್ಪಿದಲ್ಲಿ ಡಿ.ಜಿ. ಮತ್ತು ಐ.ಜಿ., ಸರಕಾರದ ಮುಖ್ಯ ಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೇರಿದಂತೆ ಪೋಲಿಸ್ ಉನ್ನತ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ನ್ಯಾಯಾಲಯ ಆದೇಶ ಹೊರಡಿಸಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಹೆಗ್ಗಡೆ ಕುಟುಂಬಸ್ಥರ ಪರವಾಗಿ ಖ್ಯಾತ ಹಿರಿಯ ನ್ಯಾಯವಾದಿಗಳಾದ ಉದಯ ಹೊಳ್ಳ ಹಾಗೂ ರಾಜಶೇಖರ್ ಹಿಲ್ಯಾರು ವಾದಿಸಿದ್ದರು. ಕಳೆದ ವಾರವೇ ಹೆಗ್ಗಡೆ ಕುಟುಂಬ ಕೋರ್ಟ್ ಮೆಟ್ಟಲು ಹತ್ತಿತ್ತು. ಇದೀಗ ಮಹೇಶ್ ಶೆಟ್ಟಿಯವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡದಂತೆ ಆದೇಶ ನೀಡಿದೆ.
Posted by Vidyamaana on 2023-05-24 11:23:35 |
ಬೆಂಗಳೂರು: ರಾಜ್ಯದಲ್ಲಿ ಶಾಂತಿ ಕದಡಿದರೆ ಬಜರಂಗದಳ ಮತ್ತು ಆರ್ಎಸ್ಎಸ್ನಂತಹ ಸಂಘಟನೆಗಳನ್ನು ತಮ್ಮ ಸರಕಾರ ನಿಷೇಧಿಸುತ್ತದೆ ಮತ್ತು ಬಿಜೆಪಿ ನಾಯಕತ್ವವು ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೆ ಪಾಕಿಸ್ತಾನಕ್ಕೆ ಹೋಗಬಹುದು ಎಂದು ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಪುನರುಚ್ಚರಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್, ”ಕರ್ನಾಟಕವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ, ಶಾಂತಿ ಕದಡಿದರೆ ಅದು ಬಜರಂಗದಳ ಅಥವಾ ಆರ್ಎಸ್ಎಸ್ ಎಂದು ಪರಿಗಣಿಸುವುದಿಲ್ಲ, ಕಾನೂನು ಕೈಗೆತ್ತಿಕೊಂಡಾಗ ನಿಷೇಧ ಹೇರಲಾಗುವುದು” ಎಂದು ಖರ್ಗೆ ಹೇಳಿದ್ದಾರೆ.ಹಿಜಾಬ್, ಹಲಾಲ್ ಕಟ್ ಮತ್ತು ಗೋಹತ್ಯೆ ಕಾನೂನುಗಳ ಮೇಲಿನ ನಿಷೇಧವನ್ನು ಸರಕಾರ ಹಿಂಪಡೆಯಲಿದೆ. ಸಮಾಜದಲ್ಲಿ ಕಾನೂನು ಮತ್ತು ಪೊಲೀಸರ ಭಯವಿಲ್ಲದೆ ಕೆಲವು ಅಂಶಗಳು ಮುಕ್ತವಾಗಿ ವಿಹರಿಸುತ್ತಿವೆ. ಮೂರು ವರ್ಷಗಳಿಂದ ಈ ಪ್ರವೃತ್ತಿ ನಡೆಯುತ್ತಿದೆ” ಎಂದರು.
”ಜನರು ವಿರೋಧ ಪಕ್ಷದಲ್ಲಿ ಕೂರಿಸಲು ಕಾರಣವೇನು ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು. ಕೇಸರಿಕರಣ ತಪ್ಪು ಎಂದು ಹೇಳಿದ್ದೇವೆ, ಎಲ್ಲರೂ ಅನುಸರಿಸಬಹುದಾದ ಬಸವಣ್ಣನವರ ತತ್ವಗಳನ್ನು ಕಾಂಗ್ರೆಸ್ ಅನುಸರಿಸುತ್ತದೆ” ಎಂದರು.