Posted by vidyamaana on 2024-06-28 19:50:37 |
ಉಪ್ಪಿನಂಗಡಿ;ಇಲ್ಲಿಗೆ ಸಮೀಪದ ಕರುವೇಲು ಜುಮಾ ಮಸೀದಿಯಲ್ಲಿ ಮರ್ಹೂಂ ಕೆಂಪಿ ಮುಸ್ತಫಾ ಹಾಜಿಯವರ ವಾರ್ಷಿಕ ಸಂಸ್ಮರಣಾ ಕಾರ್ಯಕ್ರಮವು ಇಂದು ಜುಮಾ ನಮಾಜಿನ ನಂತರ ನಡೆಯಿತು.
ಕುರ್ಅನ್ ಪಾರಾಯಣ ,ತಹ್ಲೀಲ್ ಸಮರ್ಪಣೆಯ ನಂತರ ಸ್ಥಳೀಯ ಖತೀಬ್ ಸಯ್ಯಿದ್ ಅನಸ್ ತಂಙಳ್ ದುಹಾಶಿರ್ವಚನ ಮಾಡಿ ಮುಸ್ತಪಾ ಹಾಜಿಯವರ ಗುಣಗಾನ ಮಾಡುತ್ತಾ ಸಮುದಾಯಕ್ಕಾಗಿ ತನ್ನ ಜೀವನ ಮುಡಿಪಾಗಿಟ್ಟಿದ್ದ ಹಾಜಿಯವರಲ್ಲಿ ಸಾಮಾಜಿಕ ಚಿಂತನೆ ಮೇಳೈಸಿತ್ತು.ಅವರು ನಿತ್ಯ ಸ್ಮರಣೀಯರು.ಕರವೇಲು ಮಸೀದಿಯ ಗೌರವದ್ಯಕ್ಷರಾಗಿ ನಮ್ಮ ಜಮಾತ್ ಗೆ ಅವರು ನೀಡಿದ ಕೊಡುಗೆ ಅಪಾರ ಎಂದರು.
ಮುಖ್ಯ ಭಾಷಣಗಾರರಾಗಿ ಆಗಮಿಸಿದ ಜನಾಬ್ ಎಸ್ ಬಿ ಮುಹಮ್ಮದ್ ದಾರಿಮಿ ಉಪ್ಪಿನಂಗಡಿ ಮಾತನಾಡಿ ಅವರ ಜೊತೆಗಿನ ದೀರ್ಘ ಒಡನಾಟದ ಅನುಭವವನ್ನು ಮೆಲುಕು ಹಾಕಿದರು.
ಇಂದಿನ ಯುವ ಪೀಳಿಗೆಗೆ ಕೆಂಪಿಯವರ ಆಡಳಿತ ವೈಖರಿ ಮಾದರಿಯಾಗಿದೆ.ಜಮಾತನ್ನು ಸುಧಾರಣೆಯ ಹಾದಿಯಲ್ಲಿ ಮುನ್ನಡೆಸುವಾಗ ಧರ್ಮ ಗುರುಗಳ ಜೊತೆ ಸಮಾಲೋಚನೆ ನಡೆಸುತ್ತಿದ್ದರು.ಹಿರಿಯರಿಗೆ ಗೌರವ,ಕಿರಿಯರ ಜೊತೆ ಪ್ರೀತಿ ತೋರಿದ್ದರಿಂದಲೇ ಮುಸ್ತಫಾ ಹಾಜಿ ಇಷ್ಟು ಎತ್ತರಕ್ಕೆ ಬೆಳೆದು ನಿಂತರು.
ಬಡವ ಬಲ್ಲಿದ ಎಂಬ ವ್ಯತ್ಯಾಸ ಇಲ್ಲದೆ ನ್ಯಾಯದ ಪರ ನಿಲ್ಲುವ ಧೈರ್ಯ ಅವರಿಗಿತ್ತು.
ಗಾಳಿ ಸುದ್ದಿ,ಪರಧೂಷಣೆಗೆ ನಿಂತು ಕೊಡದ ಹಾಜಿಯವರು ಎಲ್ಲವನ್ನೂ ಕೂಲಂಕುಷವಾಗಿ ಪರಾಂಬರಿಸಿ ನೋಡುತ್ತಿದ್ದರು.ತಂಟೆ ತಕರಾರು ಇದ್ದ ಉಪ್ಪಿನಂಗಡಿಯ ಅಸುಪಾಸಿನ ಬಹಳಷ್ಟು ಮೊಹಲ್ಲಾಗಳನ್ನು ಸರಿದಾರಿಗೆ ತರಲು ಹಾಜಿಯವರ ಕುಶಾಗ್ರತೆ ಬಹಳಷ್ಟು ಕೆಲಸ ಮಾಡಿತ್ತು.
ಆಯಾ ಊರಿನಲ್ಲಿ ನಾಯಕತ್ವ ಗುಣ ಇರುವವರಿಗೆ ಆಡಳಿತದ ಚುಕ್ಕಾಣಿ ವಹಿಸಿ ಕೊಡುವಲ್ಲಿ ಅವರು ನಿಪುಣರಾಗಿದ್ದರು.
ಎಂತಹ ಜಟಿಲ ಸಮಸ್ಯೆಗಳನ್ನು ಕೂಡಾ ನಿಭಾಯಿಸುವಲ್ಲಿ ಅವರದ್ದು ಎತ್ತಿದ ಕೈಯಾಗಿತ್ತು ಎನ್ನುತ್ತಾ ಹಾಜಿಯವರನ್ನು ಸ್ಮರಿಸಿದರಲ್ಲದೇ
ಉಪ್ಪಿನಂಗಡಿ ಅಸುಪಾಸಿನಲ್ಲಿ ಆ ಕಾಲದ ಹಿರಿಯರಾಗಿದ್ದ ಅಬ್ಬು ಹಾಜಿ ಮಠ,ಎಂಬಿ ಮೋನಾಕ,ಯೂಸಪಾಕ ಮಠ, ಕೆನರಾ ರಝಾಕ್ ಹಾಜಿ,ಪಳ್ಳಿಕುಞ ಹಾಜಿ,ಡಬ್ಬಲ್ ಫೋರ್ ಅಬ್ದುಲ್ ಖಾದಿರ್ ಹಾಜಿ,ಕೆಮ್ಮಾರ ಯೂಸುಪ್ ಹಾಜಿ,ಅಗ್ನಾಡಿ ಅಬೂಬಕರ್ ಹಾಜಿ,ಪೆದ್ಮಲೆ ಯೂಸುಪ್ ಹಾಜಿ,ಮೇದರಬೆಟ್ಟು ಕುಞಮೋನು ಹಾಜಿ,ಶುಕ್ರಿಯಾ ಅಬ್ಬಾಸ್ ಹಾಜಿ,ಕಡವಿನ ಬಾಗಿಲು ಅಬ್ಬು ಹಾಜಿ,ಮೋನು ಹಾಜಿ,ಐ ಹಸೈನಾರ್ ಹಾಜಿ,ಯುಟಿ ಇದ್ದಿಯಬ್ಬ ಹಾಜಿ,ಕರುವೇಲು ಮಮ್ಮಿ ಹಾಜಿ,ಮೈನಾ ಹಸನಬ್ಬ ಹಾಜಿ,ಅಬ್ದುಲ್ ರಹ್ಮಾನ್ ಬಾಬುಲ್ ಸಾಹೇಬ್ ಹಾಜಿ,ಕುದ್ಲೂರು ಹಮೀದ್ ಹಾಜಿ,ಕೆಂಪಿ ಅಬೂಬಕರ್ ,ಕೆಮ್ಮಾರ ಅಬ್ಬಾಸ್ ಹಾಜಿ,ರೈಟರ್ ಅಬೂಬಕರ್ ಹಾಜಿ,ಕರಾಯ ದೇಂತಾರು ಆದಂ ಹಾಜಿ,ಕೋಲ್ಪೆ ಅಬ್ದುಲ್ಲ ಕೋಯ ತಂಙಲ್,ಬಂಡಾಡಿ ರಝಾಕ್ ಮಾಸ್ಟರ್ ಮೊದಲಾದ ಹಲವಾರು ಅಗಲಿದ ಉಪ್ಪಿನಂಡಿ ಅಸುಪಾಸಿನ ಗೌರವಯುತ ನಾಯಕರ ಗರಡಿಯಲ್ಲಿ ಪಳಗಿದ ಮುಸ್ತಫಾ ಹಾಜಿ ಹಳೇ ಬೇರು ಹೊಸ ಚಿಗುರು ಎಂಬಂತೆ ಕಾಲದ ನಾಯಕನಾಗಿ ಹೊರಹೊಮ್ಮಿ ಬದುಕನ್ನು ದೀರ್ಘವಾಗಿ ಆಸ್ವಾದಿಸುವ ಮುನ್ನವೇ ನಮ್ಮಿಂದ ಅಗಲಿದ್ದು ಇಡೀ ಸಮಾಜಕ್ಕೆ ನಷ್ಟವಾಯಿತು ಎಂದರು.
ದೀರ್ಘ ಇಪ್ಪತ್ತು ವರ್ಷಗಳ ನನ್ನ ಸೇವಾವಧಿಯ ಅರ್ಧ ಭಾಗ ಅವರ ಅಧಿಕಾರವಧಿಯಲ್ಲಿ ಸೇವೆ ಗಯ್ಯುವ ವೇಳೆ ನನ್ನೊಂದಿಗೆ ಬಹಳ ವಿನಯ ಗೌರವದೊಂದಿಗೆ ವರ್ತಿಸುತ್ತಿದ್ದ ಮುಸ್ತಫಾ ಹಾಜಿ ಮಸೀದಿಯಿಂದ ವಿರಮಿಸಿದ ನಂತರವೂ ಪ್ರತೀ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದರಲ್ಲದೇ ಪ್ರತೀ ರಮದಾನಿನಲ್ಲಿ ಪ್ರತ್ಯೇಕ ಆಹ್ವಾನ ನೀಡಿ ಪ್ರೀತಿ ತೋರುತ್ತಿದ್ದರು.
ಇಂತಹ ಸದ್ಗುಣಗಳನ್ನು ಅಳವಡಿಸಿಕೊಳ್ಳಲು ಅದಕ್ಕೆ ಅಲ್ಲಾಹುವಿನ ವಿಶೇಷ ಭಾಗ್ಯ ಇರಬೇಕು ಎಂದ ದಾರಿಮಿಯವರು
ಇಂದಿನ ಕೆಲವು ಮಸೀದಿ ಸಮಿತಿಯ ಯುವಕರು ಮಸೀದಿಯ ಗುರುಗಳನ್ನು ನಡೆಸಿಕೊಳ್ಳುವ ರೀತಿಯಿಂದಾಗಿ ಮಸೀದಿ ಕೆಲಸದಿಂದ ಉಸ್ತಾದರು ದೂರ ಸರಿಯುವಂತಹ ದುಸ್ಥಿತಿ ಉಂಟಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಕರುವೇಳು ಮಸೀದಿಯ ಅಧ್ಯಕ್ಷ ತೋಜಾ ಉಮ್ಮರ್ ಹಾಗೂ ಬೆಂಗಳೂರಿನ ಉದ್ಯಮಿ ಇಕ್ಬಾಲ್ ಕರುವೇಲು ರವರ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಂದಿಗೆ ಅನ್ನದಾನ ಮಾಡಲಾಯಿತು.
Posted by Vidyamaana on 2024-05-20 15:33:02 |
ಬಂಟ್ವಾಳ: ಕಾರೊಂದು ಆ್ಯಕ್ಟೀವಾಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕೋಕಳ ಸಮೀಪದ ನೂಜಿ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಘಟನೆಯಲ್ಲಿ ಆ್ಯಕ್ಟೀವಾ ಸವಾರ, ಪುತ್ತೂರಿನ ನೆಹರುನಗರ ರಕ್ತೇಶ್ವರಿ ಗುಡಿಯ ಹಿಂಬದಿ ನಿವಾಸಿ, ನಿವೃತ್ತ ಸೈನಿಕ ಚಿದಾನಂದ್ ಕಾಮತ್ (55) ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಹೇಳಲಾಗಿದೆ.
Posted by Vidyamaana on 2024-01-05 15:03:39 |
ಬೆಂಗಳೂರು : ಆರ್ಥಿಕ ಇಲಾಖೆಯ ಅನುಮತಿ ಪಡೆದುಕೊಳ್ಳದೆ ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಭರ್ತಿ ಮಾಡಿರುವ ಹುದ್ದೆಗಳಿಗೆ ವೇತನಾನುದಾನ ನೀಡದಿರಲು ಸರ್ಕಾರ ನಿರ್ಧರಿಸಿದೆ.ರಾಜ್ಯದಲ್ಲಿ 41 ಸರ್ಕಾರಿ ವಿವಿಗಳಿದ್ದು, ಕೆಲವು ವಿವಿಗಳ ಕುಲಪತಿಗಳು ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳದೆ ತಮ್ಮ ನಿವೃತ್ತಿ ಅವಧಿಯ ಕೊನೆ ಕ್ಷಣದಲ್ಲಿ ಭರ್ತಿ ಮಾಡಿದ ಪ್ರಕರಣಗಳಿವೆ.ಆರ್ಥಿಕ ಇಲಾಖೆ ಈ ಮೊದಲೇ ಎಚ್ಚರಿಕೆ ನೀಡಿದ್ದರೂ ನೇಮಕಾತಿ ಮಾಡಿಕೊಳ್ಳಲಾಗಿದೆ.
ಅನುಮತಿ ಪಡೆದುಕೊಳ್ಳದೆ ಭರ್ತಿ ಮಾಡಿದ ಹುದ್ದೆಗಳನ್ನು ಮಂಜೂರಾದ ಹುದ್ದೆಗಳೆಂದು ಪರಿಗಣಿಸಲಾಗುವುದಿಲ್ಲ. ಈ ಹುದ್ದೆಗಳ ಭರ್ತಿಗೆ ಸಹಮತ ನೀಡುವುದಿಲ್ಲವೆಂದು ಆರ್ಥಿಕ ಇಲಾಖೆಯಿಂದ ವಿವಿಗಳಿಗೆ ಸೂಚನೆ ನೀಡಲಾಗಿದೆ. ಈ ಹುದ್ದೆಗಳಿಗೆ ವಿವಿಯ ಆರ್ಥಿಕ ಸಂಪನ್ಮೂಲದಿಂದ ಮಾತ್ರ ವೇತನ ನೀಡಬೇಕಾಗುತ್ತದೆ. ಆರ್ಥಿಕ ಇಲಾಖೆ ನೀಡುವ ವೇತನಾನುನುದಾನ ಬಳಕೆ ಸಾಧ್ಯವಿರುವುದಿಲ್ಲ.
ಆರ್ಥಿಕ ಇಲಾಖೆ ಅನುಮತಿ ಪಡೆದುಕೊಳ್ಳದೆ ಭರ್ತಿ ಮಾಡಿದ ಹುದ್ದೆಗಳಿಗೆ ವೇತನಾನುದಾನ ನೀಡಲು ವಿವಿಗಳು ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಆರ್ಥಿಕ ಇಲಾಖೆ ಪರಿಶೀಲಿಸಿದಾಗ ಅನುಮತಿ ಪಡೆದುಕೊಳ್ಳದೆ ನೇಮಕಾತಿ ನಡೆಸಿರುವುದು ಕಂಡುಬಂದಿದೆ.ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಸಾಮಾನ್ಯ ವಿವಿ, ವೈದ್ಯಕೀಯ ವಿವಿ, ಕೃಷಿ ವಿವಿಗಳು ಆಡಳಿತ ಮಂಡಳಿಯ ಅನುಮೋದನೆ ಪಡೆದು ತಮ್ಮ ಹಂತದಲ್ಲಿ ಅನುಮೋದನೆ ಪಡೆದುಕೊಂಡ ಹುದ್ದೆಗಳ ವಿವರ, ಸರ್ಕಾರದ ಆದೇಶ ನೀಡಿರುವ ಕುರಿತಾದ ಮಾಹಿತಿ ಸಲ್ಲಿಸುವಂತೆ ಸೂಚಿಸಲಾಗಿದೆ.
Posted by Vidyamaana on 2024-01-18 13:39:32 |
ಶಿವಮೊಗ್ಗ: ಪರಸ್ಪರ ಪ್ರೀತಿಸಿ ಕಳೆದ 8 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆ ತೀರ್ಥಹಳ್ಳಿ (Thirthahalli) ತಾಲೂಕಿನ ದಾಸನಕೂಡಿಗೆ ಗ್ರಾಮದಲ್ಲಿ ನಡೆದಿದೆ.ಮೃತಪಟ್ಟ ನವವಿವಾಹಿತೆಯನ್ನು ಶಮಿತಾ (24) ಎಂದು ಗುರುತಿಸಲಾಗಿದೆ. ರಾತ್ರಿ ಮಲಗಲು ಮನೆಯ ಉಪ್ಪರಿಗೆಯ ಕೊಠಡಿಗೆ ತೆರಳಿದ್ದ ಶಮಿತಾ ಬೆಳಗ್ಗೆ ಬಹಳ ಹೊತ್ತಾದರೂ ಹೊರ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಮನೆಯ ಕೆಲಸದವರು ಕಿಟಕಿ ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.ನೊಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜ್ಜಳ ಗ್ರಾಮದ ಶಮಿತಾ 2023ರ ಮಾರ್ಚ್ನಲ್ಲಿ ದಾಸನಕೊಡಿಗೆಯ ವಿದ್ಯಾರ್ಥ್ ಜೊತೆ ವಿವಾಹವಾಗಿದ್ದರು. ವಿದ್ಯಾರ್ಥ್ ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವಿಭಾಗದ ಅಮಾವಾಸ್ಯೆಬೈಲು ವಲಯ ಅರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಪಾಳಿ ಕೆಲಸಕ್ಕೆ ಪತಿ ವಿದ್ಯಾರ್ಥ್ ತೆರಳಿದ್ದರು. ಮನೆಯಲ್ಲಿ ಪತಿಯ ತಂದೆ, ತಾಯಿ ಇದ್ದರು. ಕೊಠಡಿಯಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ಆರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಲಾಗಿದೆ.ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ತಹಶೀಲ್ದಾರ್ ಜಕ್ಕನಗೌಡರ್ ಉಪಸ್ಥಿತಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ಆಗುಂಬೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ
Posted by Vidyamaana on 2024-03-17 17:23:49 |
ಬಾಗಲಕೋಟೆ:ಶಿಕ್ಷಕಿಯರು ವಿದ್ಯಾರ್ಥಿನಿಯ ವಿರುದ್ಧ ಕಳ್ಳತನ ಆರೋಪ ಮಾಡಿ ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿಸಿ ಅವಮಾನವಾಗಿ ವರ್ತಿಸಿದ್ದ ಸಲುವಾಗಿ ಇದರಿಂದ ಮನನೊಂದು ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.ಬಾಗಲಕೋಟೆ ತಾಲೂಕಿನ ಕದಂಪುರ ಗ್ರಾಮದ ಪ್ರೌಢ ಶಾಲೆಯ ಕನ್ನಡ ಶಿಕ್ಷಕಿ ಜಯಶ್ರೀ ಮಿಶ್ರೀಕೋಟಿ, ಮುಖ್ಯಶಿಕ್ಷಕ ಕೆ.ಹೆಚ್.ಮುಜಾವರ ಹಾಗೂ ಇತರೆ ಶಿಕ್ಷಕರು ಶಾಲೆಯಲ್ಲಿ 2 ಸಾವಿರ ರೂಪಾಯಿ ಕಳೆದುಹೋಗಿದೆ ಅಂಥ ಹೇಳಿ, 8ನೇ ತರಗತಿ ಓದುತ್ತಿದ್ದ ದಿವ್ಯಾ ಬಾರಕೇರ ಎನ್ನುವ ವಿದ್ಯಾರ್ಥಿನಿಯ ಬಳಿಯಲ್ಲಿ ಅಮಾನೀಯವಾಗಿ ವರ್ತನೆ ಮಾಡಿದ್ದಾರೆ ಎನ್ನಲಾಗಿದೆ.ಇದಲ್ಲದೇ ವಿದ್ಯಾರ್ಥಿನಿಯ ಮೇಲೆ ಸಂಶಯ ಪಟ್ಟು ಶಿಕ್ಷಕಿಯರು ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿಸಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಈ ನಡುವೆ ಇದರಿಂದ ಮನನೊಂದ ದಿವ್ಯಾ ಬಾರಕೇರ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಸದ್ಯ ಪ್ರಕರಣ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Posted by Vidyamaana on 2024-04-11 07:34:41 |
ಮುಂಬೈ ಕುರ್ಲಾ ದಲ್ಲಿರುವ ಬಂಟರ ಸಂಘದ ಕೇಂದ್ರ ಕಚೇರಿಗೆ ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿದರು.
ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಬಿ ಶೆಟ್ಟಿ ಅವರು ಪದ್ಮರಾಜ್ ಆರ್. ಪೂಜಾರಿ ಅವರನ್ನು ಗೌರವಿಸಿ, ಹಾರೈಸಿದರು.
Posted by Vidyamaana on 2024-06-21 14:41:56 |
ಬೆಂಗಳೂರು : ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದವರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದ್ದು, ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದವರ ಪಟ್ಟಿ ಬಿಡುಗಡೆಯಾಗಿದ್ದು, ಅರ್ಜಿ ಸಲ್ಲಿಸಿದವರು ಅಧಿಕೃತ ವೆಬ್ ಸೈಟ್ ಭೇಟಿ ನೀಡುವ ಮೂಲಕ ನಿಮ್ಮ ಹೆಸರನ್ನು ಪರಿಶೀಲನೆ ಮಾಡಿಕೊಳ್ಳಬಹುದು.
ಕರ್ನಾಟಕ ಪಡಿತರ ಚೀಟಿಯ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಲು ನೀವು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಬೇಕು:-
ಮೊದಲಿಗೆ, ಇಲ್ಲಿ ನೀಡಲಾದ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಗೆ ಭೇಟಿ ನೀಡಿ