Posted by vidyamaana on 2023-11-07 04:42:13 |
ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.
ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Posted by Vidyamaana on 2023-03-05 15:31:42 |
ಬಂಟ್ವಾಳ: ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಸಮೀಪದ ಗುಡ್ಡೆಅಂಗಡಿಯಲ್ಲಿ ರೆಫ್ರಿಜರೇಟರ್ ರಿಪೇರಿ ಅಂಗಡಿಯಲ್ಲಿ ಭಾನುವಾರ ಸಂಜೆ ಆಕಸ್ಮಿಕ ಅಗ್ನಿ ಅವಘಡ ಉಂಟಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಬಿ ಸಿ ರೋಡು-ಪರ್ಲಿಯಾ ನಿವಾಸಿ ಫಾರೂಕ್ ಎಂಬವರಿಗೆ ಸೇರಿದ ಅಂಗಡಿಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿ ಹೊತ್ತಿಕೊಂಡ ಬಗ್ಗೆ ತಿಳಿದು ಬರುತ್ತಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿಗಳು ಪೂರ್ಣವಾಗಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
Posted by Vidyamaana on 2023-11-01 07:28:09 |
ಯೆಮನ್: ಹಮಾಸ್ ದಾಳಿಯ ನೆಪದಲ್ಲಿ ಇಸ್ರೇಲ್ ಪ್ಯಾಲೆಸ್ತೀನ್ ನಾಗರಿಕರನ್ನು ಬೇಟೆಯಾಡುತ್ತಿದ್ದು, ಅಂತಾರಾಷ್ಟ್ರೀಯ ಕಾನೂನನ್ನು, ವಿಶ್ವಸಂಸ್ಥೆಯ ಸಲಹೆಗಳನ್ನು ಎಲ್ಲ ಮೀರುತ್ತಿದೆ. ದಾಳಿ ಮುಂದುವರೆಸುವ ಹೇಳಿಕೆಗಳನ್ನೂ ನೀಡುತ್ತಿದೆ. ಪ್ಯಾಲೆಸ್ತಿನಿಯನ್ ನಾಗರಿಕರ ಸಾವು ನೋವಿನ ಬಗ್ಗೆ, ಮಿಲಿಯಾಂತರ ಜನರ ನಿರಾಶ್ರಿತರಾಗಿರುವುದರ ಬಗ್ಗೆ ಕೆಲವು ಮುಸ್ಲಿಂ ರಾಷ್ಟ್ರಗಳು ಕೆರಳಿ ಕೆಂಡಾಮಂಡಲವಾಗಿದೆ. ದಾಳಿ ನಿಲ್ಲಿಸುವ ಎಚ್ಚರಿಕೆ ಮೀರಿದ ಇಸ್ರೇಲ್ ವಿರುದ್ಧ ಇದೀಗ ಯೆಮೆನ್ ಅಧಿಕೃತವಾಗಿ ಯುದ್ಧ ಘೋಷಿಸಿದೆ.
ಯೆಮೆನ್ ಭದ್ರತಾ ಪಡೆ ಮುಖ್ಯಸ್ಥ ಯುದ್ಧ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಇಸ್ರೇಲ್ ಮೇಲೆ ಮಿಸೈಲ್ಗಳು ತೂರಿ ಬಂದಿದೆ.
ಯೆಮನ್ ಯುದ್ಧ ಘೋಷಣೆ ಕುರಿತು ಭದ್ರತಾ ಪಡೆ ವಕ್ತಾರ ಯಹ್ಯಾ ಸೆರಿ ವಿಡಿಯೋ ಮೂಲಕ ಘೋಷಣೆ ಮಾಡಿದ್ದಾರೆ. ಯುದ್ಧ ಘೋಷಣೆ ಬೆನ್ನಲ್ಲೇ ಬ್ಯಾಲಿಸ್ಟಿಕ್ ಮಿಸೈಲ್ ದಾಳಿ ಆರಂಭಗೊಂಡಿದೆ.
ಪ್ಯಾಲೆಸ್ತಿನ್ ಸಹೋದರ,ಸಹೋದರಿಯರಿಗೆ ನಾವು ಹೋರಾಟ ಆರಂಭಿಸಿದ್ದೇವೆ ಎಂದು ಯೆಮೆನ್ ಹೇಳಿದೆ. ಇಸ್ರೇಲ್ ದಾಳಿ ನಿಲ್ಲಿಸುವವರೆಗೆ ಯೆಮೆನ್ ಶಸಸ್ತ್ರ ಪಡೆಗಳು ಭೀಕರ ದಾಳಿ ನಡೆಸಲಿದೆ ಎಂದೂ ಹೇಳಿದೆ. ಇಸ್ರೇಲ್ ಘೋರ ಪರಿಣಾಮ ಎದುರಿಸಬೇಕಾಗಲಿದೆ ಎಂದು ಕೂಡ ಯೆಮೆನ್ ಎಚ್ಚರಿಸಿದೆ.
Posted by Vidyamaana on 2024-02-19 12:22:54 |
ಕುಂಬಳೆ: ಬಸ್ ಚಲಾಯಿಸುತ್ತಿದ್ದ ವೇಳೆಯಲ್ಲಿ ಚಾಲಕ ಹೃದಯಾಘಾತದಿಂದ ಸಾವೀಗೀಡಾದ ಘಟನೆ ಚೇವಾರು ಕುಂಟಂಗರಡ್ಕದಲ್ಲಿ ನಡೆದಿದೆ.
ಕಾಸರಗೋಡು-ಧರ್ಮತ್ತಡ್ಕ ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್ನ ಚಾಲಕ ಕುಂಟಗರಡ್ಕದ ಅಬ್ದುಲ್ ರಹಿಮಾನ್ (42) ಮೃತ ವ್ಯಕ್ತಿ. ಧರ್ಮತ್ತಡ್ಕದಿಂದ ಬಸ್ ಕಾಸರಗೋಡಿಗೆ ತೆರಳುತ್ತಿದ್ದು, ಕುಂಟಗರಡ್ಕಕ್ಕೆ ತಲಪಿದಾಗ ಅಬ್ದುಲ್ ರಹಿಮಾನ್ಗೆ ಎದೆನೋವು ಕಾಣಿಸಿಕೊಂಡಿದೆ.
ಅಬ್ದುಲ್ ರಹಿಮಾನ್ ತಕ್ಷಣ ಬಸ್ಅನ್ನು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಆ ಬಳಿಕ ಅವರು ಕುಸಿದು ಬಿದ್ದಿದ್ದಾರೆ.
ಅವರನ್ನು ಬಂದ್ಯೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ..ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.
Posted by Vidyamaana on 2024-03-12 15:57:41 |
ಪುತ್ತೂರು: ಹೆದ್ದಾರಿ ಮೇಲೆ ಮರದ ಕೊಂಬೆ ಬಿದ್ದು, ದ್ವಿಚಕ್ರ ಸವಾರರು ಸ್ವಲ್ಪದರಲ್ಲೇ ಬಚಾವಾದ ಘಟನೆ ಮುರ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯ ಪುತ್ತೂರು - ಕಬಕ ನಡುವಿನ ಮುರ ಜಂಕ್ಷನಲ್ಲೇ ಮರದ ಕೊಂಬೆ ಮುರಿದು ಬಿದ್ದಿದೆ. ಸೋಮವಾರ ಸಂಜೆಯೇ ಕೊಂಬೆ ಮುರಿದು ಬಿದ್ದಿದ್ದರೂ, ಇನ್ನೂ ಸಂಬಂಧಪಟ್ಟವರು ಕೊಂಬೆಯನ್ನು ತೆರವು ಮಾಡಿಲ್ಲ.
ರಾತ್ರಿ ಹೊತ್ತು ವಾಹನ ಸವಾರರ ಗಮನಕ್ಕೆ ಬಾರದೇ, ಅಪಾಯ ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ಎರಡು ದ್ವಿಚಕ್ರ ವಾಹನ ಸವಾರರು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Posted by Vidyamaana on 2023-02-11 04:31:42 |
ವಿಟ್ಲ: ಬೈಕ್ ಅಪಘಾತ ಸಂಭವಿಸಿ ವಿಟ್ಲ ಮೂಲದ ಯುವಕನೋರ್ವ ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.ಮೃತ ಯುವಕನನ್ನು ಮಾಣಿಲ ಗ್ರಾಮದ ಪಕಳಕುಂಜ ಬಾಳೆಕಾನ ನಿವಾಸಿ ಗೋಪಾಲಕೃಷ್ಣ ಮಣಿಯಾನಿ ಮತ್ತು ಸುಧಾಮಣಿ ದಂಪತಿಗಳ ಪುತ್ರ ಕಾರ್ತಿಕ್ ಮಣಿಯಾನಿ (24) ಎಂದು ಗುರುತಿಸಲಾಗಿದೆ.
ಕಾರ್ತಿಕ್ ಮಂಗಳೂರಿನಲ್ಲಿ ಡೆಕೋರೇಷನ್ ಕೆಲಸ ನಿರ್ವಹಿಸುತ್ತಿದ್ದು, ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅಡ್ಯಾರ್ ಬಳಿ ಅಪಘಾತ ನಡೆದಿದೆ ಎನ್ನಲಾಗಿದೆ.
ಮೃತರು ತಂದೆ, ತಾಯಿ, ಓರ್ವ ಸಹೋದರ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ
Posted by Vidyamaana on 2024-05-08 07:16:07 |
ಬೆಂಗಳೂರು, ಮೇ.07: ತನ್ನ ಅಕ್ಕನ ಮನೆಯಲ್ಲೇ ಹಣ ಹಾಗೂ ಚಿನ್ನಾಭರಣ ಕದ್ದಿದ್ದ ಆರೋಪಿ ತಂಗಿಯನ್ನ ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಉಮಾ ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಅಕ್ಕ ಊರಿಗೆ ತೆರಳಿದ್ದ ವೇಳೆ ನಕಲಿ ಕೀ ಬಳಸಿ 52 ಲಕ್ಷ ರೂ. ಕ್ಯಾಶ್ ಹಾಗೂ 180 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಳು. ಬಂಧಿತ ಆರೋಪಿಯಿಂದ 65 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಲಕ್ಷಾಂತರ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ.
ಚೌಡೇಶ್ವರಿ ದೇವರ ಹಬ್ಬ ಎಂದು ಉಮಾಳ ಅಕ್ಕ ಊರಿಗೆ ಹೋಗಿದ್ದರು. ಹೋಗುವ ಮುನ್ನ ಸಂಬಂಧಿಗೆ ಮನೆಯ ಕೀ ಕೊಟ್ಟು ಹೋಗಿದ್ದರು. ನಂತರ ಕಳೆದ ಏ. 24ರ ರಾತ್ರಿ ಆಕೆಯ ಸಂಬಂಧಿ ಮನೆಗೆ ಮಲಗಲು ಹೋಗಿದ್ದಾಗ ನಕಲಿ ಕೀ ಬಳಸಿ ಕಳ್ಳತನ ಮಾಡಿದ್ದಳು. ಉಮಾ 182 ಗ್ರಾಂ ಚಿನ್ನಾಭರಣ ಹಾಗು 52 ಲಕ್ಷ ನಗದು ಕಳ್ಳತನ ಮಾಡಿದ್ದಳು.