Posted by vidyamaana on 2024-07-03 11:16:18 |
ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.
ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.
Posted by Vidyamaana on 2023-07-21 03:52:22 |
ಜೈಪುರ: ಶುಕ್ರವಾರ ಮುಂಜಾನೆ ರಾಜಸ್ಥಾನದ ಜೈಪುರದ ಮೂರು ಭಾಗಗಳಲ್ಲಿ ಭೂಕಂಪಗಳು ಸಂಭವಿಸಿವೆ ಎಂದು ವರದಿಯಾಗಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಮೂರು ಕಂಪನಗಳು ಕೇವಲ 30 ನಿಮಿಷಗಳ ಅವಧಿಯಲ್ಲಿ ಸಂಭವಿಸಿದೆ ಎಂದು ಹೇಳಿದ್ದಾರೆ.
ಶುಕ್ರವಾರ ನಸುಕಿನ ಜಾವಾ 4 ಗಂಟೆಯಿಂದ 4;30 ನಿಮಿಷಗಳ ಅವಧಿಯಲ್ಲಿ ಮೂರು ಕಂಪನಗಳು ಸಂಭವಿಸಿದೆ ಎಂದು ಹೇಳಲಾಗಿದೆ ಅದರಲ್ಲಿ 4.09ರ ಸುಮಾರಿಗೆ 4.4ರ ತೀವ್ರತೆ ಹೊಂದಿದ್ದರೆ, 4.22ರ ಸುಮಾರಿಗೆ 3.1 ರ ತೀವ್ರತೆ ಹಾಗೂ 4.25 ರ ಸುಮಾರಿಗೆ 3.4ರ ತೀವ್ರತೆಯ ಭೂಕಂಪನದ ಅನುಭವಾಗಿದೆ ಎಂದು ಹೇಳಲಾಗಿದೆ.
ಕಂಪನದ ಅನುಭವವಾಗುತ್ತಿದ್ದಂತೆ ಜನ ಭಯಭೀತರಾಗಿ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ, ಭೂಕಂಪನದಿಂದ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಮಣಿಪುರದಲ್ಲೂ 3.5 ತೀವ್ರತೆಯ ಕಂಪನ:
ಶುಕ್ರವಾರ ಮುಂಜಾನೆ ಸುಮಾರು 5.01ಕ್ಕೆ ಮಣಿಪುರದ ಉಖ್ರುಲ್ನಲ್ಲಿ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ. ಭೂಕಂಪವು 20 ಕಿಲೋಮೀಟರ್ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Posted by Vidyamaana on 2024-05-10 07:23:36 |
ಮಂಡ್ಯ, ಮೇ 9: ಮಂಡ್ಯ ಜಿಲ್ಲೆಯಲ್ಲಿ SSLC ಫಲಿತಾಂಶ ಪ್ರಕಟಗೊಂಡ ನಂತರ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತ ವಿದ್ಯಾರ್ಥಿನಿಯ ಫಲಿತಾಂಶ ಸೆಕೆಂಡ್ ಕ್ಲಾಸ್ನಲ್ಲಿ ಪಾಸಾಗಿದ್ದಾಳೆ. ಆದರೆ, ಕಡಿಮೆ ಅಂಕ ಬಂದಿದ್ದಕ್ಕೆ ತಾನು ಫೇಲ್ ಆಗಿದ್ದೇನೆಂದು ತಪ್ಪಾಗಿ ಭಾವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಹುಲಿಗೆರೆಪುರ ಗ್ರಾಮದ ಅಮೃತಾ (16) ಮೃತ ದುರ್ದೈವಿ. ಅಮೃತಾ ನಗರಕೆರೆ ಗ್ರಾಮದ ಪೂರ್ಣಿಮಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡ ನಂತರ ಅದನ್ನು ಮೊಬೈಲ್ನಲ್ಲಿ ನೋಡಿದ್ದಾಳೆ. ಆದರೆ, 400ಕ್ಕಿಂತ ಕಡಿಮೆ ಅಂಕ ಬಂದಿರುವುದನ್ನು ನೋಡಿ ತಾನು ಫೇಲ್ ಆಗಿದ್ದೇನೆಂದು ಭಾವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
Posted by Vidyamaana on 2024-05-16 07:23:16 |
ಉಳ್ಳಾಲ: ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದೇರಳಕಟ್ಟೆ ಪರಿಸರದಲ್ಲಿ ಕಾರನ್ನು ಪತ್ತೆ ಹಚ್ಚಿದ್ದು, ಕಾರಿನಲ್ಲಿದ್ದ ಬಿಜೈ ನ್ಯೂರೋಡ್ನ ಮೊಹಮ್ಮದ್ ಅಮೀನ್ ರಾಫಿ (23), ಅಡ್ಡೂರಿನ ಮೊಹಮ್ಮದ್ ಸಿನಾನ್ ಅಬ್ದುಲ್ಲಾ (23), ಬಂದರಿನ ಮೊಹಮ್ಮದ್ ನೌಮಾನ್ (22) ಮತ್ತು ಬೋಳಿಯಾರ್ನ ಮೊಹಮ್ಮದ್ ಸಫೀಲ್ (23)ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅವರಿಂದ 6,50,000 ರೂ ಮೌಲ್ಯದ 270 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, 4 ಮೊಬೈಲ್, ಕಾರು, ಡಿಜಿಟಲ್ ತೂಕ ಮಾಪಕವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ಅಂದಾಜು 14,85,500 ರೂ. ಎಂದು ಅಂದಾಜಿಸಲಾಗಿದೆ.
Posted by Vidyamaana on 2023-09-26 15:32:07 |
ಮಂಗಳೂರು ಸೆ.26: ನಗರದ ಇಂಡಿಯಾನ ಆಸ್ಪತ್ರೆಗೆ ರೋಗಿಯ ಜೊತೆ ಬಂದಿದ್ದ ವ್ಯಕ್ತಿಯೊಬ್ಬ ರಿಸೆಪ್ಶನಿಸ್ಟ್ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ಆಸ್ಪತ್ರೆ ಸೊತ್ತುಗಳನ್ನು ಹಾನಿಗೈದು ಘಟನೆ ನಡೆದಿದೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕದ್ರಿ ವ್ಯಾಸನಗರ ನಿವಾಸಿ ಆಶೀಕ್ (32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸೆ.25ರಂದು ಸಂಜೆ ಆಶೀಕ್ ತನ್ನ ತಾಯಿಯನ್ನು ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದು ಈ ವೇಳೆ ಆಸ್ಪತ್ರೆಯಲ್ಲಿ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ಮಹಿಳೆ ರೋಗಿಯ ಮಾಹಿತಿ ಕೇಳಿದ್ದಾರೆ.
ರೋಗಿಯ ವೈಯಕ್ತಿಕ ವಿವರ, ಪ್ರಾಯ, ವಿಳಾಸ ಇತ್ಯಾದಿ ಮಾಹಿತಿಗಳನ್ನು ಕೇಳಿದಾಗ, ಆರೋಪಿ ಆಶೀಕ್ ಕೋಪಗೊಂಡಿದ್ದು ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿದ್ದಾನೆ. ಅಲ್ಲದೆ, ಸ್ಥಳದಲ್ಲಿ ದಾಂಧಲೆ ನಡೆಸಿದ್ದು ಮಹಿಳೆಯನ್ನು ದೂಡಿ ಮೈ ಕೈಯನ್ನು ಮುಟ್ಟಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಅಡ್ಮಿಶನ್ ಡೆಸ್ಕ್ ನಲ್ಲಿದ್ದ ಆಸ್ಪತ್ರೆಯ ಟೇಬಲ್, ಕಂಪ್ಯೂಟರ್ ಇನ್ನಿತರ ಸೊತ್ತುಗಳನ್ನು ಹಾನಿ ಮಾಡಿದ್ದಾನೆ. ಈ ಬಗ್ಗೆ ತೊಂದರೆಗೀಡಾದ ಮಹಿಳೆ ಕಂಕನಾಡಿ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಆರೋಪಿ ಕೆಲಸವಿಲ್ಲದೇ ಮನೆಯಲ್ಲೇ ಇದ್ದು, ಮಾನಸಿಕ ತೊಂದರೆ ಎದುರಿಸುತ್ತಿದ್ದಾನೆ. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ಮನೆಯವರು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
Posted by Vidyamaana on 2023-07-24 07:43:45 |
ಪುತ್ತೂರು: ಭಾರೀ ಮಳೆಗೆ ಅರಿಯಡ್ಕ ಸರಕಾರಿ ಹಿ ಪ್ರಾ ಶಾಲಾ ಕಟ್ಟಡದ ಗೋಡೆ ಬಿರುಕುಬಿಟ್ಟಿದ್ದು ಕುಸಿಯುವ ಭೀತಿಯಲ್ಲಿದ್ದು ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ.
ಶತಮಾನಗಳ ಇತಿಹಾಸ ಹೊಂದಿರುವ ಅರಿಯಡ್ಕ ಶಾಲೆಯಲ್ಲಿ ಒಂದರಿಂದ ಏನೇ ತರಗತಿ ತನಕ ವಿದ್ಯಾರ್ಥಿಗಳಿದ್ದು ಒಂದೇ ಕಟ್ಟಡದಲ್ಲಿ ೩ ೭ ನೇ ತರಗತಿ ತನಕ ಕ್ಲಾಸ್ಗಳು ನಡೆಯುತ್ತಿದ್ದು ಅದೇ ಕಟ್ಟಡದ ಗೋಡೆ ಬಿರುಕುಬಿಟ್ಟಿದೆ. ಗೋಡೆ ಬಿರುಕುಬಿಟ್ಟಿರುವ ಕಾರಣ ಕಟ್ಟಡದ ಮಾಡು, ಪಕ್ಕಾಸುಗಳು ಕುಸಿತಗೊಂಡಿದ್ದು ಮುರಿದು ಬೀಳುವ ಹಂತದಲ್ಲಿದೆ. ಭಾನುವಾರ ಈ ಘಟನೆ ನಡೆದಿದ್ದು ಇಂದು ತರಗತಿಗೆ ವಿದ್ಯಾರ್ಥಿಗಳು ಬಂದಾಗ ವಿಷಯ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿದರೂ ಅವರಿಗೆ ಅಲ್ಲಿ ಬದಲಿ ವ್ಯವಸ್ಥೆಗೆ ಯಾವುದೇ ತರಗತಿ ಕೋಣೇಗಳಿರುವುದಿಲ್ಲ. ರಂಗಮಂಟಪದಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಟ್ಟಡ ಶಿಥಿಲಗೊಂಡಿರುವ ಕಾರಣ ಕೆಲವು ಪೋಷಕರು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿರುವುದಾಗಿ ಕೆಲವು ಪೋಷಕರು ಮಾಹಿತಿ ನೀಡಿದ್ದಾರೆ.
ಶಾಸಕರಿಗೆ ತಿಳಿಸಲಾಗಿದೆ: ಎಸ್ಡಿಎಂಸಿ
ಕಟ್ಟಡ ಬಿರುಕುಬಿಟ್ಟಿರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು ಸದ್ಯ ತರಗತಿ ಕೋಣೆಗಳು ಇಲ್ಲದೇ ಇರುವುದರಿಂದ ಒಂದೇ ಹಾಲ್ ಮತ್ತು ರಂಗಮಂಟಪದಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ. ಘಟನೆಯ ಬಗ್ಗೆ ಶಾಸಕರಿಗೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಇನ್ನುಳಿದ ಹಳೆಯ ಕಟ್ಟಡವೂ ಶಿಥಿಲಗೊಂಡಿದ್ದು ಈ ಬಗ್ಗೆ ಈ ಹಿಂದೆಯೇ ಸಂಬಂಧಿಸಿದವರಿಗೆ ಮಾಹಿತಿ ನೀಡಲಾಗಿದೆ. ಮಾಡು ದುರಸ್ಥಿಗೆ ಮಾತ್ರ ಅನುದಾನ ನೀಡಲಾಗಿದ್ದು ಅದರಲ್ಲಿ ಮಾಡು ದುರಸ್ಥಿ ಮಾಡಲಾಗಿದೆ. ಕಟ್ಟಡದ ಗೋಡೆಗಳು ತುಂಬಾ ಹಳೆಯದಾಗಿರುವ ಕಾರಣ ಮಳೆಗೆ ಕುಸಿತವಾಗುತ್ತಿದೆ ಎಂದು ಎಸ್ಡಿಎಂಸಿ ಅಧ್ಯಕ್ಷರಾದ ಹನೀಫ್ರವರು ಮಾಹಿತಿ ನೀಡಿದ್ದಾರೆ. ಕಟ್ಟಡ ಬಿರುಕುಬಿಟ್ಟ ವಿಷಯ ತಿಳಿದು ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಇಕ್ಬಾಲ್ ಹುಸೇನ್, ಒಳಮೊಗ್ರು ವಲಯ ಅಧ್ಯಕ್ಷ ಅಶೋಕ್ಪೂಜಾರಿ, ರಫೀಕ್ ದರ್ಖಾಸ್, ಮಹಮ್ಮದ್ ಬೊಳ್ಳಾಡಿ ಮೊದಲಾದವರು ಭೇಟಿ ನೀಡಿ ಸಹಕರಿಸಿದ್ದಾರೆ.
Posted by Vidyamaana on 2023-06-09 02:59:27 |
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೈಲೂರು ಪರಶುರಾಮ ಥೀಮ್ ಪಾರ್ಕ್ ಬಳಿ ನಡೆದಿದೆ. ನೆಲ್ಲಿಗುಡ್ಡೆ ನಿವಾಸಿ ಕಾರ್ತಿಕ್ (23) ಮೃತ ದುರ್ದೈವಿ.
ಕಾರ್ತಿಕ್ ಬೈಲೂರಿನಿಂದ ಹೋಗುತ್ತಿದ್ದಾಗ ಕಾರ್ಕಳದಿಂದ ಉಡುಪಿಗೆ ಹೋಗುತ್ತಿದ್ದ ಖಾಸಗಿ ಬಸ್ ಢಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡ ಕಾರ್ತಿಕ್ ಅವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮೃತ ಕಾರ್ತಿಕ್ ಪತ್ನಿ ಹಾಗೂ 10 ತಿಂಗಳ ಮಗುವನ್ನು ಅಗಲಿದ್ದಾರೆ. ಮೃತದೇಹವನ್ನು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.