Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34
ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.
ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
Posted by Vidyamaana on 2024-01-08 11:06:36 |
ಬೆಂಗಳೂರು : ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ಸಾಧ್ಯತೆ ದಟ್ಟವಾಗಿದೆ.ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಕೇಂದ್ರ ಕೃಷಿ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರು ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕುಮಾರಸ್ವಾಮಿ, ಕೇಂದ್ರ ಸರ್ಕಾರದ ಕೃಷಿ ಮತ್ತು ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಅರ್ಜುನ್ ಮುಂಡಾ ಅವರು ಎಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅತ್ಯಂತ ಪ್ರೀತಿ ವಿಶ್ವಾಸದಿಂದ ಗೌರವಿಸಲಾಯಿತು ಎಂದು ತಿಳಿಸಿದ್ದಾರೆ.
ಇದೇ ವೇಳೆ ಕಾಡುಗೊಲ್ಲ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸುವುದು, ರಾಜ್ಯದ ತೆಂಗು ಬೆಳೆಗಾರರಿಂದ ಕೊಬ್ಬರಿ ಖರೀದಿ ಹಾಗೂ ರಾಜ್ಯ ಎದುರಿಸುತ್ತಿರುವ ಬರ ಪರಿಸ್ಥಿತಿಯ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಎಚ್ಡಿಕೆ ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ಸಾಧ್ಯತೆ
ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ಜೆಡಿಎಸ್ಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಇರಾದೆ ಬಿಜೆಪಿ ವರಿಷ್ಠರದ್ದಾಗಿದೆ. ರಾಮಮಂದಿರ ಉದ್ಘಾಟನೆ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಐವರು ಹೊಸದಾಗಿ ಸೇರ್ಪಡೆಯಾಗಲಿದ್ದಾರೆ. ಇದೇ ವೇಳೆ ಕುಮಾರಸ್ವಾಮಿ ಅವರು ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ಹೇಳಿವೆ.
ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್, ಗೆದ್ದ ಬಳಿಕ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ, ಸಂಪುಟ ದರ್ಜೆಯ ಖಾತೆ ಖಾಲಿ ಇದೆ. ಕೃಷಿ ಖಾತೆಯ ಬಗ್ಗೆ ಕುಮಾರಸ್ವಾಮಿ ಒಲವು ಹೊಂದಿದ್ದು, ಸಂಪುಟಕ್ಕೆ ಸೇರಿದರೆ ಅದೇ ಖಾತೆ ಸಿಗುವ ಸಂಭವ ಇದೆ ಎಂಬ ಚರ್ಚೆಯೂ ನಡೆದಿದೆ. ಕೃಷಿ ಖಾತೆ ರಾಜ್ಯ ಸಚಿವರಾಗಿ ರಾಜ್ಯದವರೇ ಆದ ಶೋಭಾ ಕರಂದ್ಲಾಜೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಕುಮಾರಸ್ವಾಮಿ ಕೃಷಿ ಸಚಿವರಾದರೆ, ಶೋಭಾ ಖಾತೆ ಬದಲಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
Posted by Vidyamaana on 2023-10-04 15:29:15 |
ಪುತ್ತೂರು: ಒಳಮೊಗ್ರು ಗ್ರಾಮದ ಕುಟಿನೋಪ್ಪಿನಡ್ಕ ಸಮೀಪದ ಮುಳಿಯಡ್ಕ ಎಂಬಲ್ಲಿರುವ ಕಿರು ಸೇತುವೆಯು ಶಿಥಿಲಗೊಂಡಿದ್ದು ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಸೇತುವೆಯನ್ನು ಪರಿಶೀಲನೆ ಮಾಡಿದರು.
ಗ್ರಾಮದ ಪರ್ಪುಂಜದಿಂದ ಕುಟನೋಪ್ಪಿನಡ್ಕ ಮೂಲಕ ದರ್ಬೆತ್ತಡ್ಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಈ ಸೇತುವೆಯು ಸುಮಾರು ೩೦ ವರ್ಷಗಳ ಹಿಂದೆ ಜನಾರ್ಧನ ಪೂಜಾರಿಯವರು ಲೋಕಸಭಾ ಸದಸ್ಯರಾಗಿರುವ ಕಾಲದಲ್ಲಿ ನಿರ್ಮಾಣವಾಗಿದೆ. ಸೇತುವೆ ಅಗಲ ಕಿರಿದಾಗಿದ್ದು ಘನ ವಾಹನಗಳು ಇದರಲ್ಲಿ ಸಂಚರಿಸಲು ಸಾಧ್ಯವಿಲ್ಲ. ಸೇತವೆಯು ಶಿಥಿಲಗೊಂಡಿದ್ದು ಲಘು ವಾಹನ ಸಂಚಾರಕ್ಕೂ ಅಯೋಗ್ಯವಾಗಿದೆ. ಸೇತುವೆಯನ್ನು ದುರಸ್ಥಿ ಮಡಿ ಎಂದು ಕಳೆದ ೧೫ ವರ್ಷಗಳಿಂದ ಸ್ಥಳೀಯ ನಿವಾಸಿಗಳು ಜನಪ್ರತಿನಿಧಿಗಳ ಬಳಿ ಮನವಿ ಮಾಡುತ್ತಿದ್ದಾರೆ. ಆದರೆ ಯಾವೊಬ್ಬ ಜನಪ್ರತಿನಿಧಿಯಾಗಲಿ ಇತ್ತ ಕಡೆ ಸುಳಿಯಲಿಲ್ಲ. ಅ. ೩ ರಂದು ಸ್ಥಳಕ್ಕೆ ಭೇಟಿ ನೀಡಿದ ಶಸಕರು ಶಿಥಿಲಗೊಂಡ ಸೇತುವೆಯನ್ನು ವೀಕ್ಷಣೆ ಮಾಡಿದರು. ಶೀಘ್ರದಲ್ಲೇ ಹೊಸ ಸೇತುವೆಯ ನಿರ್ಮಾಣ ಮತ್ತು ಸೇತುವೆಯ ಸಂಪರ್ಕದ ಎರಡೂ ಬದಿಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕರು ಹೇಳಿದರು. ಇದರಿಂದಾಗಿ ಈ ಭಾಗದ ಜನತೆಯ ಸುಮಾರು ೧೫ ವರ್ಷಗಳ ಕನಸು ನನಸಾದಂತಾಗಿದೆ. ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾಪಂ ಉಪಾಧ್ಯಕ್ಷರಾದ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ್, ಶಾರದಾ, ಕುಂಬ್ರ ಕೆಪಿಎಸ್ ಸ್ಕೂಲ್ ಕಾರ್ಯಾಧ್ಯಕ್ಷರಾದ ರಕ್ಷಿತ್ ರೈ ಮುಗೇರು,ಕೆ ಪಿ ಮಹಮ್ಮದ್, ಸೇರಿದಂತೆ ಗ್ರಾಮಸ್ಥರು ಉಪಸ್ತಿತರಿದ್ದರು.
ಕೋಟ್
ಸೇತುವೆ ಮಾಡಿ ಎಂದು ಮನವಿ ಮಾಡಿ ಸಾಕಾಗಿ ಹೋಗಿದೆ. ಈಗ ಇರುವ ಸೇತುವೆ ಅಗಲ ಕಿರಿದಾಗಿರುವ ಕಾರಣ ಉಪಯೋಗ ಶೂನ್ಯವಾಗಿದೆ. ಪ್ರಧಾನ ಸಂಪರ್ಕ ಕೊಂಡಿಯಾಗಿರುವ ಈ ಸೇತುವೆಗೆ ಮುಕ್ತಿ ದೊರೆಯುವ ವಿಶ್ವಾಸ ನಮಗಿದ್ದು ಹೊಸ ಸೇತುವೆಗೆ ಅನುದಾನ ಒದಗಿಸುವುದಾಗಿ ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ. ಶಾಸಕರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ. ಇಚ್ಚಾಶಕ್ತಿಯ ಕೊರತೆಯಿಂದಾಗಿ ಇಷ್ಟು ವರ್ಷದಲ್ಲಿ ಈ ಸೇತವೆಗೆ ಮುಕ್ತಿ ದೊರೆತಿರಲಿಲ್ಲ
ಇಸುಬು, ಮಾಜಿ ಉಪಾಧ್ಯಕ್ಷರು, ಒಳಮೊಗ್ರು ಗ್ರಾಪಂ
ಕೋಟ್
ನುಡಿದಂತೆ ನಡೆಯುವ ಪುತ್ತೂರು ಶಾಸಕರು ಮುಳಿಯಡ್ಕ ಸೇತುವೆಗೆ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಖಂಡಿತವಾಗಿಯೂ ಇಲ್ಲಿ ಹೊಸ ಸೇತುವೆಯ ನಿರ್ಮಾಣ ಕಾರ್ಯ ನಡೆಯಲಿದೆ. ಸೇತುವೆಯ ನಿರ್ಮಾಣದ ಜೊತೆಗೆ ರಸ್ತೆ ಕಾಮಗಾರಿ ಮತ್ತು ರಸ್ತೆ ಅಗಲೀಕರಣ ಕಾಮಗಾರಿ ನಡೆಯಲಿದೆ. ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಶಾಸಕರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ
ಅಶೋಕ್ ಪೂಜಾರಿ ಬೊಳ್ಳಾಡಿ, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷರು
Posted by Vidyamaana on 2024-03-25 11:23:32 |
ಪುತ್ತೂರು: ಕಬಕ ಅಡ್ಯಲಾಯ ದೈವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಶಿಫ್ಟ್ ಕಾರಿನಲ್ಲಿ ದನವನ್ನು ಅಕ್ರಮ ಸಾಗಾಟ ಮಾಡುತ್ತಿದ್ದ ಸಂದರ್ಭ ಘಟನೆ ನಡೆದಿದೆ.
ಕಾರಿನಲ್ಲಿ ನಾಲ್ಕು ಗೋವುಗಳು ಪತ್ತೆಯಾಗಿದ್ದು, ಕಾರು ಚಾಲಕ ಹಾಗೂ ಕಾರಿನಲ್ಲಿದ್ದವರು ಕಾರು ಹಾಗೂ ಗೋವುಗಳನ್ನು ಬಿಟ್ಟು ಪರಾರಿಯಾಗಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.
ಬಜರಂಗದಳ ಕಬಕದ ಕಾರ್ಯಕರ್ತರು ಕಾರನ್ನು ತಡೆಯಲು ಪ್ರಯತ್ನಿಸಿದಾಗ ಕಾರಿನ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು ಜಖಂಗೊಂಡಿದೆ ಎಂದು ಹೇಳಲಾಗಿದೆ.ಕಾರಿನಲ್ಲಿ ಎರಡು ದನ ಹಾಗೂ ಎರಡು ಕರು ಪತ್ತೆಯಾಗಿದೆ. ಅದರ ಕೈ ಕಾಲುಗಳನ್ನು ಹಿಂಸಾತ್ಮಕ ರಿತಿಯಲ್ಲಿ ಕಟ್ಟಲಾಗಿತ್ತು. ಹಿಂಸಾತ್ಮಕವಾಗಿ ಗೋವುಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಪಡೆದ ಬಜರಂಗದಳ ಕಬಕದ ಕಾರ್ಯಕರ್ತರು ಕಾರನ್ನು ನಿಲ್ಲಿಸಲು ಸೂಚಿಸಿದ್ದು, ಈ ವೇಳೆ ಕಾರು ಚಾಲಕ ಪರಾರಿಯಾಗಲು ಯತ್ನಿಸಿದ್ದು ಇದರಿಂದ ಚಾಲಕ ತನ್ನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ.
ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಠಾಣಾ ಪೊಲೀಸ್ ಅಧಿಕಾರಿಗಳು 4 ಗೋವುಗಳನ್ನು ಮತ್ತು ಜಖಂಗೊಂಡ ವಾಹನವನ್ನು ಪುತ್ತೂರು ನಗರ ಠಾಣೆಗೆ ತರಲಾಯಿತು. ರಕ್ಷಿಸಿದ ಗೋವುಗಳಿಗೆ ನೀರು ಮತ್ತು ಮೇವಿನ ವ್ಯವಸ್ತೆಯನ್ನು ಬಜರಂಗದಳದ ಕಾರ್ಯಕರ್ತರ ವ್ಯವಸ್ಥೆ ಮಾಡಿರುತ್ತಾರೆ.
Posted by Vidyamaana on 2023-04-05 03:18:22 |
ಸುಳ್ಯ : ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶೀನ ಮತ್ತು ಮಗ ಶಿವರಾಮ ಎಂಬವರಿಗೂ ನಿನ್ನೆ ರಾತ್ರಿ 12 ಗಂಟೆಗೆ ಕೋಳಿ ಪದಾರ್ಥದ ವಿಚಾರವಾಗಿ ಜಗಳ ಆರಂಭವಾಯಿತು. ಶಿವರಾಮ ರಾತ್ರಿ ಮನೆಗೆ ಬರುವಾಗ ಕೋಳಿ ಪದಾರ್ಥ ಖಾಲಿ ಆಗಿತ್ತೆನ್ನಲಾಗಿದೆ. ಇದನ್ನು ಆಕ್ಷೇಪಿಸಿ ಆತ ಮಾತನಾಡತೊಡಗಿದಾಗ ತಂದೆ ಶೀನರಿಗೂ ಆತನಿಗೂ ಜಗಳ ಆರಂಭವಾಯಿತು. ಕೋಪಗೊಂಡ ಶೀನ ಬಡಿಗೆಯಿಂದ ಮಗನ ತಲೆಗೆ ಹೊಡೆದರೆನ್ನಲಾಗಿದೆ. ಏಟು ಬಲವಾಗಿ ಬಿದ್ದು ತಲೆಯ ಬುರುಡೆ ಒಡೆಯಿತು. ಪರಿಣಾಮವಾಗಿ ಶಿವರಾಮ ಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದನೆನ್ನಲಾಗಿದೆ.
ವಿಷಯ ತಿಳಿದು ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಶೀನನನ್ನು ಬಂಧಿಸಿದ್ದಾರೆ. ಶಿವರಾಮರ ಮೃತ ದೇಹವನ್ನು ಕಡಬ ಆಸ್ಪತ್ರೆಗೆ ಕೊಂಡಯ್ಯಲಾಗಿದೆ.
ಮೃತ ಶಿವರಾಮ (32) ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.
Posted by Vidyamaana on 2023-10-24 20:25:27 |
ಬೆಂಗಳೂರು: ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಅಂಬುಲೆನ್ಸ್ ಲಾರಿಗೆ ಡಿಕ್ಕಿಯಾದ ಪರಿಣಾಮ ಅದರಲ್ಲಿದ್ದ ರೋಗಿ ಸಾವನ್ನಪ್ಪಿದ ದುರಂತ ಘಟನೆ ನೆಲಮಂಗಲದ ಬೊಮ್ಮನಹಳ್ಳಿಯ ಬಳಿ ನಡೆದಿದೆ. ಚಿತ್ರದುರ್ಗ ಆಸ್ಪತ್ರೆಯಿಂದ ಬೆಂಗಳೂರಿನ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುತ್ತಿರುವಾಗ ಈ ದುರಂತ ನಡೆದಿದೆ. ವೇಗವಾಗಿ ಬರುತ್ತಿದ್ದ ಅಂಬುಲೆನ್ಸ್ ಲಾರಿಗೆ ಬಲವಾಗಿ ಗುದ್ದಿದ್ದು, ಅದರಲ್ಲಿದ್ದ ರೋಗಿ ವಿಜಯ್ ಕುಮಾರ್ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಅಂಬುಲೆನ್ಸ್ ಚಾಲಕ ಸೇರಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ವಿಜಯ್ ಕುಮಾರ್ ರವರನ್ನು ಮಲಗಿಸಿಕೊಂಡ ಅಂಬುಲೆನ್ಸ್ ತುಮಕೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿತ್ತು. ವೇಗವಾಗಿ ಬರುತ್ತಿರುವಾಗ ಕಂಟೈನರ್ ಲಾರಿಗೆ ಅಂಬುಲೆನ್ಸ್ ಡಿಕ್ಕಿಯಾಗಿದೆ. ಪರಿಣಾಮ ವಿಜಯ್ ಕುಮಾರ್ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವದಿಂದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.
Posted by Vidyamaana on 2024-03-19 16:11:46 |
ಮೈಸೂರು : ಇನ್ಸ್ಟಾಗ್ರಾಂನಲ್ಲಿ(Instagram love) ಲವ್ ಮಾಡಿ ಮದುವೆ ವಿಚಾರ ಬಂದಾಗ ಭಿನ್ನಾಭಿಪ್ರಾಯ ಮೂಡಿದ್ದು ಮಹಿಳೆ ಬಿಲ್ಡಿಂಗ್ ಏರಿ ಆತ್ಮಹತ್ಯೆಗೆ(Suicide attempt) ಯತ್ನಿಸಿದ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.ಬಿಹಾರ ಮೂಲದ ವಿವಾಹಿತ ಮಹಿಳೆ ನಾಸೀಂ ಬೇಗಂ (31 ಹಾಗೂ ಅದೇ ರಾಜ್ಯದ ಸದ್ಯ ಹಿಮ್ಮಾವು ಗ್ರಾಮದಲ್ಲಿ ವಾಸವಿರುವ ಅಸಿಬೂರ್ ರೆಹಮಾನ್ ನಡುವೆ ಸಾಮಾಜಿಕ ಜಾಲತಾಣದಲ್ಲಿ ಲವ್ ಆಗಿದ್ದು , ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮಹಿಳೆ ರೆಹಮಾನ್ನನ್ನು ಭೇಟಿಯಾಗಲಲು ಸೀದಾ ಮೈಸೂರಿಗೆ ಬಂದಿದ್ದಾಳೆ. ಮಹಿಳೆಯನ್ನು ನೋಡುತ್ತಲೇ ಆಸಿಬೂರ್ ರೆಹಮಾನ್ ವಯಸ್ಸಿನ ಅಂತರ ಹೆಚ್ಚು ಎಂಬ ಕಾರಣ ನೀಡಿ ಮದುವೆಗೆ ಒಲ್ಲೆ ಎಂದಿದ್ದಾನೆ.
ಇದರಿಂದ ಸಿಟ್ಟಾದ ನಾಸೀಂ ಬೇಗಂ ಖಾಸಗಿ ಹೊಟೇಲ್ ಬಿಲ್ಡಿಂಗ್ ಏರಿ ಮದುವೆ ಮಾಡಿಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಸದ್ಯ ಆಕೆಯನ್ನು ಕೆಳಗೆ ಇಳಿಸಿ ನಂಜನಗೂಡು ಪೊಲೀಸರು ವಶಕ್ಕೆ ಪಡೆದಿದ್ದಾರೆ.