Posted by vidyamaana on 2024-07-23 21:09:49 |
ಬೆಂಗಳೂರು : ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಸ್ಕೂಲ್ನ ಪರವಾನಗಿ ಹಾಗೂ ಅದೇ ಶಾಲೆಯ ತರಬೇತುದಾರನ ಚಾಲನಾ ಪರವಾನಗಿಯನ್ನು (ಡಿಎಲ್) ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ರದ್ದುಗೊಳಿಸಿದೆ.
ಯುವತಿಗೆ ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪದ ಅಡಿ ಕಾರು ತರಬೇತಿದಾರನ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.
ನಗರದ ಯಾವುದೇ ಡ್ರೈವಿಂಗ್ ಶಾಲೆಯಲ್ಲೂ ಈ ರೀತಿಯ ಘಟನೆಗಳು ನಡೆಯಬಾರದು. ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಹಾಲಕ್ಷ್ಮೀಪುರದ 18 ವರ್ಷದ ಯುವತಿ ನೀಡಿದ್ದ ದೂರು ಆಧರಿಸಿ, ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಸ್ಕೂಲ್ನ ತರಬೇತುದಾರ ಅಣ್ಣಪ್ಪ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?:
ದೂರು ನೀಡಿದ್ದ ಯುವತಿ ಕಾರು ಚಾಲನೆ ಕಲಿಯಲು ಮಾರುತಿ ಡ್ರೈವಿಂಗ್ ಸ್ಕೂಲ್ಗೆ ಸೇರಿದ್ದರು. ಅಣ್ಣಪ್ಪ ಎಂಬಾತ ಕಾರು ಚಾಲನೆ ಬಗ್ಗೆ ತರಬೇತಿ ನೀಡಿದ್ದರು. ಒಂದು ತಿಂಗಳ ಕೋರ್ಸ್ ಮುಕ್ತಾಯವಾದ ಮೇಲೆ ಅಣ್ಣಪ್ಪ, ನಿಮ್ಮ ಮನೆಯ ಕಾರಿನಲ್ಲೇ ಪರಿಪೂರ್ಣವಾಗಿ ಚಾಲನೆ ಬಗ್ಗೆ ಹೇಳಿಕೊಡುತ್ತೇನೆ. ಒಂದು ಗಂಟೆಯ ವಿಶೇಷ ಕ್ಲಾಸ್ಗೆ ₹750 ಕೊಡಬೇಕು ಎಂದು ಯುವತಿಯನ್ನು ಕೇಳಿಕೊಂಡಿದ್ದರು. ಯುವತಿ 15 ದಿನಗಳ ವಿಶೇಷ ಕ್ಲಾಸ್ಗೆ ಅಣ್ಣಪ್ಪ ಅವರಿಗೆ ₹10,500 ಪಾವತಿಸಿದ್ದರು. ಅದರಂತೆ ಅಣ್ಣಪ್ಪ ವಿಶೇಷ ತರಬೇತಿ ಆರಂಭಿಸಿದ್ದರು ಎಂದು ಪೊಲೀಸರು ಹೇಳಿದರು.
ಪ್ರತಿದಿನ ಯುವತಿಯ ಮನೆ ಬಳಿ ಬಂದು ಆಕೆಯ ಕಾರಿನಲ್ಲೇ ಅಣ್ಣಪ್ಪ ಚಾಲನೆ ತರಬೇತಿ ನೀಡುತ್ತಿದ್ದರು. ಜುಲೈ 7ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಯುವತಿ ಮನೆ ಬಳಿ ಬಂದಿದ್ದ ಅಣ್ಣಪ್ಪ, ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಬಗ್ಗೆ ಹೇಳಿಕೊಡಲು ಮುಂದಾಗಿದ್ದರು. ಬಸವೇಶ್ವರ ನಗರದ ನ್ಯಾಷನಲ್ ಶಾಲೆಯ ಮೇಲ್ಸೇತುವೆಯಲ್ಲಿ ತೆರಳುವಾಗ, ಯುವತಿ ಕಾರು ಚಾಲನೆ ಮಾಡುತ್ತಿದ್ದರು. ಆಗ ಅಣ್ಣಪ್ಪ ಅಸಭ್ಯವಾಗಿ ವರ್ತಿಸಿದ್ದರು ಎಂದು ಪೊಲೀಸರು ತಿಳಿಸಿದರು.
ತರಬೇತುದಾರನ ಅಸಭ್ಯ ವರ್ತನೆಯಿಂದ ಗಾಬರಿಗೊಂಡಿದ್ದ ಯುವತಿ ಕಾರನ್ನು ಮನೆಯತ್ತ ತಿರುಗಿಸಿದ್ದರು. ಅದಾದ ಮೇಲೆ ತರಬೇತುದಾರ ಸುಮ್ಮನಾಗಿದ್ದರು. ಅಣ್ಣಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಯುವತಿ ಪೊಲೀಸರಿಗೆ ದೂರು ನೀಡಿದ್ದರು.
Posted by Vidyamaana on 2023-07-19 06:24:06 |
ಬೆಂಗಳೂರು : ಭಾರತದಲ್ಲಿ ಯಾವ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ಎಷ್ಟು ದಂಡ ಕಟ್ಟಬೇಕಾಗುತ್ತದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳುವುದು ಮುಖ್ಯ. ಈಗ ವಿವಿಧ ಸಂಚಾರ ನಿಯಮ ಉಲ್ಲಂಘನೆಯ ದಂಡಗಳನ್ನು ಪರಿಷ್ಕರಿಸಲಾಗಿದೆ.ಹಾಗಾದ್ರೆ ಯಾವ ಸಂಚಾರ ನಿಯಮ ಉಲ್ಲಂಘನೆ, ಎಷ್ಟು ದಂಡ ಎನ್ನುವ ಬಗ್ಗೆ ಮುಂದೆ ಓದಿ.
ನೀವು ರಸ್ತೆಗೆ ವಾಹನವನ್ನು ತೆಗೆದುಕೊಂಡಾಗ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಇದರೊಂದಿಗೆ, ಟ್ರಾಫಿಕ್ನಲ್ಲಿ ವಾಹನಗಳು ಸುಗಮವಾಗಿ ಚಲಿಸುತ್ತದೆ. ಟ್ರಾಫಿಕ್ ಸಮಯದಲ್ಲಿ ನಿಮ್ಮ ಸುರಕ್ಷತೆಯು ಹೆಚ್ಚಾಗುತ್ತದೆ ಮತ್ತು ಪೋಲಿಸರಿಂದ ಕಡಿತಗೊಳಿಸಲ್ಪಡುವ ಚಲನ್ ಅನ್ನು ಸಹ ನೀವು ತಪ್ಪಿಸಬಹುದು.
ಸದ್ಯ ಭಾರತದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ. ಇದರೊಂದಿಗೆ ಹಲವು ಪ್ರಕರಣಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವ್ಯಕ್ತಿಯೂ ಜೈಲು ಪಾಲಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಯಾವ ಸಂಚಾರಿ ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ ವಿಧಿಸಲಾಗುತ್ತದೆ. ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ಭಾರತದಲ್ಲಿ ಯಾವ ಸಂಚಾರಿ ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ ವಿಧಿಸಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಇಲ್ಲಿ ನೀಡಲಿರುವ ಮಾಹಿತಿಯು ಕೇಂದ್ರ ಸರ್ಕಾರ ತಂದಿರುವ ಕಾನೂನನ್ನು ಆಧರಿಸಿದೆ. ಕೆಲವು ರಾಜ್ಯಗಳು ತಮ್ಮ ಸ್ವಂತಕ್ಕೆ ಅನುಗುಣವಾಗಿ ಇವುಗಳಲ್ಲಿ ಬದಲಾವಣೆಗಳನ್ನೂ ಮಾಡಿಕೊಂಡಿವೆ.
ಹೀಗಿದೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಸಂಚಾರಿ ನಿಯಮಗಳ ಪರಿಷ್ಕೃತ ದಂಡದ ವಿವರ
ಅಜಾಗರೂಕತೆ ಚಾಲನೆ - ರೂ.1000
ಅತೀ ವೇಗದ ಚಾಲನೆ - ರೂ.2000
ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದು - ರೂ.1000
ಸಮವಸ್ತ್ರ ಧರಿಸದೇ ಚಾಲನೆ - ರೂ.500
ಡಿಸಿ ಆದೇಶ ಉಲ್ಲಂಘನೆ - ಕೋರ್ಟ್ ಫೈನ್
ಕರ್ಕಶ ಹಾರ್ನ್ - ರೂ.500
ಬಲ್ಬು ಹಾರ್ನ್ ಅಳವಡಿಸದಿರುವುದು - ರೂ.500
ಬ್ರೇಕ್ ಲೈಟ್ ಇಲ್ಲದೇ ಚಾಲನೆ - ರೂ.500
ಅಮಲು ಪದಾರ್ಥ ಸೇವನೆ - ಕೋರ್ಟ್ ಫೈನ್
ಹೆಡ್ ಲೈನ್ ಇಲ್ಲದೇ ವಾಹನ ಚಾಲನೆ - ರೂ.500
ಕಣ್ಣು ಕುಕ್ಕುವ ಹೆಡ್ ಲೈನ್ - ರೂ.500
ಸರಕು ವಾಹನದಲ್ಲಿ ಜನರನ್ನು ಸಾಗಿಸುವುದು - ಕೋರ್ಟ್ ಫೈನ್, ಡಿಎಲ್, ಪರ್ಮಿಟ್, ಆರ್.ಸಿ ಕ್ಯಾನ್ಸಲ್.
ಕ್ಯಾಬೀನ್ ನಲ್ಲಿ ಜನರನ್ನು ಕೂರಿಸಿಕೊಂಡು ಹೋಗುವುದು - ಪ್ರತಿ ವ್ಯಕ್ತಿಗೆ ರೂ.200
ಚಾಲಕ ಹಸಿಮೀನು ಹೇರಿ ವಾಹನ ಸಾಗಿಸುವುದು - ರೂ.500
ಪರವಾನಿಗೆ ನಿಬಂಧನೆ ಉಲ್ಲಂಘನೆ ಮಾಡಿರುವುದು - ಕೋರ್ಟ್ ಫೈನ್
ಪೊಲೀಸ್ ನೋಟಿಸ್ ಗೆ ಸಹಿ ಹಾಕದಿರುವುದು, ಅಸಭ್ಯರೀತಿಯ ವರ್ತನೆ - ರೂ.2000
ವಾಹನವನ್ನು ಬಸ್ಸು ತಂಗುದಾಣದಲ್ಲಿ ನಿಲ್ಲಿಸಿ ನಿಯಮ ಉಲ್ಲಂಘನೆ - ರೂ.1000
ಡಿಎಲ್ ಇಲ್ಲದೇ ವಾಹನ ಚಾಲನೆ - ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ರೂ.1000. ಲಘುವಾಹನ ಚಾಲನೆ ರೂ.2000. ಇತರೆ ರೂ.5000
ಡಿಎಲ್ ಪರಿಶೀಲನೆ ತೋರಿಸದೇ ಇರುವುದು - ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ರೂ.1000. ಲಘುವಾಹನ ಚಾಲನೆ ರೂ.2000. ಇತರೆ ರೂ.5000.
ಡಿಎಲ್ ಇಲ್ಲದವರಿಗೆ ವಾಹನ ಚಾಲನೆಗೆ ನೀಡಿದ್ದು - ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ರೂ.1000. ಲಘುವಾಹನ ಚಾಲನೆ ರೂ.2000. ಇತರೆ ರೂ.5000.
ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ - ಕೋರ್ಟ್ ಫೈನ್
ಅಪ್ರಾಪ್ತ ವಯಸ್ಸಿನವರಿಗೆ ವಾಹನ ಚಾಲನೆಗೆ ನೀಡಿದ್ದು - ಕೋರ್ಟ್ ಫೈನ್. ಹಾಗೆ 25,000ವರೆಗೆ ದಂಡ ಮತ್ತು 3 ವರ್ಷ ಜೈಲು ಶಿಕ್ಷೆ. ವಾಹನ ನೋಂದಣಿ ರದ್ದು.
ಎಫ್ಎ ಬಾಕ್ಸ್ ಅಳವಡಿಸದೇ ಇರುವುದು - ರೂ.500.
ಆರ್ ಸಿ ವಿವರ ಬಾಡಿಗೆಯಲ್ಲಿ ಬರೆಯದೇ ಇರುವುದು - ರೂ.500
ನಂಬರ್ ಪ್ಲೇಟ್ ಇಲ್ಲದೇ, ದೋಷಪೂರಿತ ಬಳಕೆ - ರೂ.500
ಸೈಡ್ ಮಿರರ್ ಇಲ್ಲದಿರುವುದು - ರೂ.500
ಹ್ಯಾಂಡ್ ಬ್ರೇಕ್ ಇಲ್ಲದಿರುವುದು - ರೂ.500
ಖಾಸಗಿ ಕಾರಿನಲ್ಲಿ ಬಾಡಿಗೆ ಮಾಡಿದ್ದು - ಕೋರ್ಟ್ ಫೈನ್.
ದೂರು ಪೆಟ್ಟಿಗೆ ಇಲ್ಲದಿರುವುದು - ರೂ.500
ಅಗ್ನಿ ಶಾಮಕ ಸಾಧನ ಅಳವಡಿಸದಿರುವುದು - ರೂ.500
ದೂಮಪಾನ ಮಾಡುತ್ತ ವಾಹನ ಚಾಲನೆ - ರೂ.500
ಟ್ರಾಫಿಕ್ ಲೈಟ್ ಉಲ್ಲಂಘನೆ - ರೂ.500
ಪೊಲೀಸ್ ಸಿಗ್ನಲ್ ಉಲ್ಲಂಘನೆ - ರೂ.500
ಏಕಮುಖ ರಸ್ತೆಯ ವಿರುದ್ಧ ಚಾಲನೆ - ರೂ.500
ಚಾಲಕ ಬ್ಯಾಡ್ಜ್ ಧರಿಸದ್ದು - ರೂ.500
Posted by Vidyamaana on 2024-06-14 16:21:36 |
ಮಡಿಕೇರಿ: ಕೆಎಸ್ಆರ್ಟಿಸಿಯ ನೂತನ ಅಶ್ವಮೇಧ ಬಸ್ಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಗುರುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮಡಿಕೇರಿ-ಸೋಮವಾರಪೇಟೆ-ಅರಕಲಗೋಡು-ಚೆನ್ನರಾಯಪಟ್ಟಣ ಮಾರ್ಗ ಪ್ರತಿ ದಿನ ಬೆಳಗ್ಗೆ 10.15ಕ್ಕೆ ಹೊರಟು ಸಂಜೆ 4.45 ಗಂಟೆಗೆ ಬೆಂಗಳೂರು ತಲುಪಲಿದೆ.
Posted by Vidyamaana on 2023-09-12 16:56:22 |
ನೆಲಮಂಗಲ: ಕಾರಿನ ಗ್ಲಾಸ್ ಒಡೆದು ವಿಜ್ಞಾನಿ ಮೇಲೆ ಹಲ್ಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು
ಪೊಲೀಸರು ಬಂಧಿಸಿದ್ದಾರೆ.
ಮೈಲಾರಿ(22), ನವೀನ್(22) ಹಾಗೂ ಶಿವರಾಜ್(30) ಬಂಧಿತ ಆರೋಪಿಗಳು.
ಸೋಮ ಅಲಿಯಾಸ್ ಸೋನು, ಕೀರ್ತಿ ಅಲಿಯಾಸ್ ಉಮೇಶ್ ಎಂಬ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ರಾವುತನಹಳ್ಳಿಯಲ್ಲಿ ಆ.24ರಂದು ನ್ಯಾನೊ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರದ (ಸಿಇಎನ್ಎಸ್) 34 ವರ್ಷದ ವಿಜ್ಞಾನಿ ಅಶುತೋಷ್ ಕುಮಾರ್ ಸಿಂಗ್ ಅವರ ಕಾರಿಗೆ ದುಷ್ಕರ್ಮಿಗಳು ಕಲ್ಲೆಸೆದು ಹಲ್ಲೆಗೆ ಯತ್ನಿಸಿದ್ದರು
Posted by Vidyamaana on 2023-03-13 10:37:47 |
ಬೆಳ್ಳಾರೆ : ದ.ಕ.ಜಿಲ್ಲಾ ಪೊಲೀಸ್ ಘಟಕ ಬೆಳ್ಳಾರೆ ಪೊಲೀಸ್ ಠಾಣಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ಮಾ.13 ರಂದು ನಡೆಯಿತು.
ಮೀನುಗಾರಿಕೆ,ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ನೂತನ ಕಟ್ಟಡವನ್ನು ಉದ್ಘಾಟಿಸಿ ಇತ್ತೀಚಿನ ದಿನದಲ್ಲಿ ವಿದ್ಯಾವಂತರು ಜಾಸ್ತಿಯಾದಂತೆ ಅಪರಾಧ ಪ್ರಕರಣಗಳು ಜಾಸ್ತಿಯಾಗುತ್ತಿದೆ.ಪೊಲೀಸ್ ಠಾಣೆಗಳು ಕೂಡ ಜಾಸ್ತಿಯಾಗುತ್ತಿದೆ.ಪ್ರಕರಣಗಳು ಕಮ್ಮಿಯಾಗಬೇಕು.ಪ್ರತಿಯೊಬ್ಬರು ಪ್ರೀತಿ ವಿಶ್ವಾಸದಿಂದ ಬಾಳಬೇಕು.ಪ್ರೀತಿ ವಿಶ್ವಾಸ,ನಂಬಿಕೆ ಇದ್ದರೆ ಸಮಸ್ಯೆ ನಿವಾರಣೆ ಸಾಧ್ಯ ಮತ್ತು
ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಜನರಿಗೆ ಉತ್ತಮ ಸೇವೆ ನೀಡುವಂತಾಗಬೇಕು ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ವಿಕ್ರಂ ಅಮಟೆ IPS ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಡಿಷನಲ್ಲಿ ಎಸ್ಪಿ ಧರ್ಮಪ್ಪ ಹೊಂದಿಸಿದರು. ನಿವೃತ್ತ ಎ ಎಸ್ ಐ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಸುಳ್ಯ ತಹಶೀಲ್ದಾರ್ ಮಂಜುನಾಥ್, ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ರವೀಂದ್ರ, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಉಪಸ್ಥಿತರಿದ್ದರು.
Posted by Vidyamaana on 2023-07-09 05:57:26 |
ಮಂಗಳೂರು: ಕಾರ್ಮಿಕನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಮಾಡಿರುವ ಘಟನೆ ನಗರದ ಮುಳಿಹಿತ್ಲುವಿನಲ್ಲಿ ನಡೆದಿದೆ.
ಉತ್ತರ ಭಾರತ ಮೂಲದ ಗಜ್ಞಾನ್ ಅಲಿಯಾಸ್ ಜಗು ಎಂಬ ಕಾರ್ಮಿಕನನ್ನು ಮಶುಪಾ ಜನರಲ್ ಸ್ಟೋರ್ ಮಾಲೀಕ ತೌಸಿಫ್ ಹುಸೈನ್ ಎಂಬಾತ ಕೊಲೆ ಮಾಡಿರುವುದಾಗಿ ಹೇಳಲಾಗಿದೆ.
ಬೆಂಕಿ ಹಚ್ಚಿ ಕೊಂದ ಬಳಿಕ ಆರೋಪಿ ವಿದ್ಯುತ್ ಶಾಕ್ ಎಂದು ಪೊಲೀಸ್ ದೂರು ನೀಡಿದ್ದಾನೆ. ಶನಿವಾರ ಬೆಳಗ್ಗೆ 7.30 ಕ್ಕೆ ಕೃತ್ಯ ಎಸಗಿದ್ದು, ಬಳಿಕ ಮಧ್ಯಾಹ್ನ 1.30 ಕ್ಕೆ ವೆನ್ಲಾಕ್ ಆಸ್ಪತ್ರೆಗೆ ರವಾನೆ ಮಾಡಿ ವಿದ್ಯುತ್ ಶಾಕ್ ನಿಂದ ಘಟನೆ ಅಂತಾ ತಿರುಚಲು ಯತ್ನಿಸಿದ್ದಾನೆ.
ಆದರೆ ಪೊಲೀಸರ ಅನುಮಾನದಿಂದ ವಿಚಾರಿಸಿದಾಗ ಕೃತ್ಯ ಬಯಲಾಗಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ತೌಸಿಫ್ ಹುಸೈನ್ ಅನ್ನು ಪೊಲೀಸರು ಬಂಧಿಸಿದ್ದಾರೆ.
Posted by Vidyamaana on 2023-11-15 21:31:50 |
ಪುತ್ತೂರು : ಶಿಕ್ಷಣದಲ್ಲಿ ನವ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಕಲಿಯಲು ಪ್ರಾಥಮಿಕ ಹಂತದಲ್ಲೇ ಕಂಪ್ಯೂಟರ್ ಕಲಿಕೆಯು ಪ್ರಸ್ತುತ ಕಾಲಘಟ್ಟದ ಅನಿವಾರ್ಯತೆಯಾಗಿದೆ. ಗ್ರಾಮೀಣ ಮತ್ತು ಹಳ್ಳಿಗಾಡು ಪ್ರದೇಶದ ಮಕ್ಕಳು ಅದರಲ್ಲೂ ಸರಕಾರೀ ಶಾಲಾ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಇದಕ್ಕಾಗಿ ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮವಾಗಿ ಮಂಗಳೂರಿನ ಪ್ರಸಿದ್ಧ ಸೇವಾ ಸಂಸ್ಥೆಯಾದ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ತನ್ನ ದಶಮಾನೋತ್ಸವದ ಸ್ಮರಣಾರ್ಥ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ನೂತನ ತಂತ್ರಜ್ಞಾನದ ಡಿಜಿಟಲ್ ಬಸ್ ಒಂದನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸುತ್ತಿದೆ.
"ಕ್ಲಾಸ್ ಆನ್ ವ್ಹೀಲ್ಸ್" ಎಂಬ ಹೆಸರಲ್ಲಿ ಐಷಾರಾಮಿ ಹವಾನಿಯಂತ್ರಿತ ಬಸ್, ಇನ್ನು ಮುಂದೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಉಚಿತ ಸೇವೆಯೊಂದಿಗೆ ಕಾರ್ಯಾಚರಿಸಲಿದೆ. ವಾರ್ಷಿಕ ಐದು ಸಾವಿರ ಮಕ್ಕಳಿಗೆ ಕಂಪ್ಯೂಟರ್ ನ ಮೂಲಭೂತ ಶಿಕ್ಷಣ ನೀಡುವ ಗುರಿ ಮತ್ತು ಅದಮ್ಯವಾದ ಬಯಕೆಯನ್ನು ಈ ಡಿಜಿಟಲ್ ಬಸ್ ಹೊಂದಿದೆ.
ಬಸ್ ನಲ್ಲಿ ಏನೇನಿದೆ ಗೊತ್ತಾ?
ಕಂಪ್ಯೂಟರ್ ಬಸ್ ನ್ನು ಸಂಪೂರ್ಣ ಕ್ಲಾಸ್ ರೂಮ್ ಆಗಿ ಪರಿವರ್ತಿಸಲಾಗಿದೆ. ತರಗತಿಯೊಳಗೆ ಒಂದು ಟನ್ನಿನ ಎರಡು ಎ.ಸಿ. ಅಳವಡಿಸಲಾಗಿದೆ. ಏಕಕಾಲದಲ್ಲಿ 16 ಅಥವಾ 32 ವಿದ್ಯಾರ್ಥಿಗಳು ಕಲಿಯಲು 16 ಲ್ಯಾಪ್ ಟಾಪ್ ಕಂಪ್ಯೂಟರ್, ಕೀಪೇಡ್, ಮೌಸ್, ಚಾರ್ಜರ್ಸ್, ಕೂರಲು 16 ರಿವೋಲ್ವಿಂಗ್ ಚೆಯರ್ಸ್, 16 ಮಡಚುವ ಸಂವಿಧಾನವಿರುವ ಡೆಸ್ಕ್ ಇದೆ. ಶಿಕ್ಷಕರಿಗೆ ಪ್ರತ್ಯೇಕ ಕಂಪ್ಯೂಟರ್, ಚೆಯರ್, ಡೆಸ್ಕ್ ನಿರ್ಮಿಸಲಾಗಿದೆ. ಕಾನ್ಫರೆನ್ಸ್ ಗೆ ಪ್ರಾಜೆಕ್ಟರ್, ಪ್ರಸೆಂಟೇಶನ್ ಗೆ ಟಿ.ವಿ., ಮ್ಯೂಸಿಕ್ ಸಿಸ್ಟಮ್ ವ್ಯವಸ್ಥೆ, ಮೈಕ್ ಸೌಂಡ್ ಸಿಸ್ಟಮ್, ಲೈಟಿಂಗ್ಸ್, ಎಲ್ಇಡಿ ಡಿಜಿಟಲ್ ಬೋರ್ಡ್ ಅಳವಡಿಸಲಾಗಿದೆ. ಅಂತರ್ಜಾಲದ ವಿದ್ಯೆಗಾಗಿ ವೈಫೈ, ಇಂಟರ್ನೆಟ್ ನ್ನೂ ಒಳಗೊಂಡಿದೆ. ಅವಶ್ಯಕತೆಗಾಗಿ ಕಲರ್ ಪ್ರಿಂಟರ್, ಫೋಟೋ ಕೋಪಿ ಮತ್ತು ಸ್ಕ್ಯಾನರ್ ಇದೆ. ವಿದ್ಯಾರ್ಥಿಗಳ, ಶಿಕ್ಷಕರ ಹಾಜರಾತಿಗೆ ಬಸ್ ಬಾಗಿಲ ಬಳಿ ಅತ್ಯಾಧುನಿಕ ಬಯೋಮೆಟ್ರಿಕ್ ಡಿವೈಸ್ ಸ್ಥಾಪಿಸಲಾಗಿದೆ. ಇತರ ಸಮಯಗಳಲ್ಲಿ 25 ಜನರ ಸಭೆ ಸಮಾರಂಭಗಳನ್ನು ಬಸ್ ನೊಳಗೆ ಎಲ್ಲಿ ಬೇಕಾದರೂ ಮಾಡುವಂತಹ ಮಲ್ಟಿಸ್ಪೆಶಾಲಿಟಿ ವ್ಯವಸ್ಥೆ ಇದೆ. ತರಗತಿ ಒಳ ಹೋಗಲು ಮೂರು ಪ್ರವೇಶ ದ್ವಾರಗಳಿವೆ. ಮಕ್ಕಳ ಸುರಕ್ಷತೆ ಗಾಗಿ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಸಲಾಗಿದೆ.
ಸ್ವಂತ ವಿದ್ಯುತ್ ಸಂಚಲನಕ್ಕಾಗಿ 6.8 ಕೆ.ವಿ. ಯ ಅತ್ಯಾಧುನಿಕ ಜನರೇಟರ್, ಹೊರಗಿನ ವಿದ್ಯುತ್ ಸಂಪರ್ಕದ ಸೌಲಭ್ಯದ ಪಾಯಿಂಟ್, ಕೈ ಮುಖ ತೊಳೆಯಲು ಬಸ್ ಟಾಪಲ್ಲಿ 200 ಲೀಟರಿನ ನೀರಿನ ಟ್ಯಾಂಕ್, ವಾಶ್ ಬೇಸಿನ್, 40 ಲೀಟರಿನ ಕುಡಿಯುವ ನೀರಿನ ಸೌಲಭ್ಯ, ಎರಡು ಎಸಿ ಔಟ್ ಡೋರ್ ಯೂನಿಟ್, ಬ್ಯಾಟರಿ ಬಾಕ್ಸ್, ಟೂಲ್ ಬಾಕ್ಸ್, ಪವರ್ ಪಾಯಿಂಟ್ ಮೊದಲಾದವನ್ನು ಬಸ್ ಹೊಂದಿದೆ.
ಬಸ್ ಕನಸು ಕಂಡದ್ದಾದರೂ ಹೇಗೆ?
ಹನೀಫ್ ಪುತ್ತೂರು ಅವರು ಸದ್ಯ ದುಬೈ ಯ ಮಹಮ್ಮದ್ ಬಿನ್ ರಾಶಿದ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯ ಪ್ರಯೋಗಾಲಯ ದಲ್ಲಿ ಕ್ಲೌಡ್ & ಇನ್ಫ್ರಾ ಸ್ಟ್ರೆಕ್ಚರ್ ಮೆನೇಜರ್ ಆಗಿ ಉದ್ಯೋಗದಲ್ಲಿದ್ದು, ಯುಎಇ ಗೋಲ್ಡನ್ ವೀಸಾ ಹೊಂದಿದ್ದಾರೆ. ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್’ನ ಯುಎಇ ಪ್ರಾಂತ್ಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಯುಎಇಯ ಅಬುದಾಬಿಯಲ್ಲಿನ ಸಂಸ್ಥೆಯೊಂದು ಹಮ್ಮಿಕೊಂಡಿರುವ ಸ್ಪರ್ಧೆಯಲ್ಲಿ ಪುತ್ತೂರು ಸಮೀಪದ ಆರ್ಯಾಪು ಗ್ರಾಮದ ಬಲ್ಲೇರಿ ಅಬ್ಬಾಸ್ ಹಾಜಿ ಅವರ ಪುತ್ರ ಮಹಮ್ಮದ್ ಹನೀಫ್ ಅವರು ವಿಜೇತರಾಗುವ ಮೂಲಕ ಕರಾವಳಿ ಜಿಲ್ಲೆಗೆ ಹೆಸರು ತಂದಿದ್ದರು.
ಹನೀಫ್ ಅವರು ತನ್ನೂರಿನ ಗ್ರಾಮೀಣ ಪ್ರದೇಶದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ಬಸ್ ಪ್ರಾರಂಭಿಸುವ ಇರಾದೆ ವ್ಯಕ್ತಪಡಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಂದು ಮೊಬೈಲ್ ಬಸ್ ನ್ನು ಅತ್ಯಾಧುನಿಕ ಟೆಕ್ನಾಲಜಿಯಲ್ಲಿ ನಿರ್ಮಿಸಿ ಶಾಲೆಗಳಿಗೆ ತೆರಳಿ ಕಂಪ್ಯೂಟರ್ ಬೋಧಿಸುವ ಕನಸನ್ನು ಬಿಚ್ಚಿಟ್ಟರು. ಈ ಯೋಜನೆಯನ್ನು ಮೆಚ್ಚಿ ಲಕ್ಷಾಂತರ ಜನರು ಆನ್ಲೈನ್ ವೋಟ್ ಮಾಡುವ ಮೂಲಕ ಅವರನ್ನು ವಿಜೇತರನ್ನಾಗಿಸಿದ್ದರು. ಅದರಲ್ಲಿ ದೊರೆತ ಬಹುಮಾನದ ಮೊತ್ತಕ್ಕೆ ತಮ್ಮಿಂದಾಗುವ ಹಣವನ್ನು ಸೇರಿಸಿ ತಾನು ಸೇವೆಗೈಯ್ಯುವ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಗೆ ಆ ಮೊತ್ತ ಹಸ್ತಾಂತರಿಸಿ ಬಸ್ ಕನಸನ್ನು ಸಾಕ್ಷಾತ್ಕರಿಸಿದರು. ಬಸ್ ಗೆ ಒಟ್ಟು 60 ಲಕ್ಷ ರೂ. ಖರ್ಚು ಆಗಿದ್ದು, ಹೆಚ್ಚುವರಿ ಭಾಗಶಃ ಮೊತ್ತವನ್ನು ಎಂ.ಫ್ರೆಂಡ್ಸ್ ಟ್ರಸ್ಟ್ ಭರಿಸಿದೆ. ಅರವಿಂದ್ ಮೋಟಾರ್ಸ್ ನ ಟಾಟಾ ಕಂಪೆನಿಯ ಹೀರಾ ಮಾಡೆಲಿನ ಈ ಬಸ್ ನ್ನು ಕಂಪ್ಯೂಟರ್ ಕ್ಲಾಸ್ ರೂಮ್ ಆಗಿ ಸುಸಜ್ಜಿತವಾಗಿ ಪರಿವರ್ತಿಸಿದವರು ಬೈಕಂಪಾಡಿಯ ರೋಡ್ರಿಕ್ಸ್ ಇಂಡಸ್ಟ್ರೀಸ್ ನವರು.
ಈ ಬಸ್ ಜಿಲ್ಲೆಯ ಗ್ರಾಮೀಣ ವಿದ್ಯಾಸಂಸ್ಥೆಗಳಿಗೆ ತೆರಳಿ ಶಾಲಾ ಆವರಣದಲ್ಲೇ ಕಂಪ್ಯೂಟರ್ ಶಿಕ್ಷಣ ನೀಡಲಿದೆ. ಒಂದು ವಿದ್ಯಾರ್ಥಿಗೆ ಕನಿಷ್ಟ 15 ರಿಂದ 20 ತಾಸುಗಳ ತರಬೇತಿಯನ್ನು ಹಂತ ಹಂತವಾಗಿ ಕೊಡಲಿದೆ. ಒಂದು ದಿನದಲ್ಲಿ ಮೂರು ಅಥವಾ ನಾಲ್ಕು ಶಾಲೆಗಳಿಗೆ ತೆರಳಿ ತಲಾ ಒಂದರಿಂದ ಒಂದೂವರೆ ತಾಸಿನ ತರಗತಿಯನ್ನು ಬಿತ್ತರಿಸಲಿದೆ. ಇದಕ್ಕಾಗಿಯೇ ಪ್ರತ್ಯೇಕ ಸಿಲೆಬಸ್ ರಚಿಸಲಾಗಿದೆ. ಬಸ್ ನಲ್ಲಿ ಇಬ್ಬರು ಕಂಪ್ಯೂಟರ್ ಶಿಕ್ಷಕಿಯರು, ಅನುಭವಿ ಚಾಲಕ ಮತ್ತು ನಿರ್ವಾಹಕರು ಇರುತ್ತಾರೆ. ಸರಕಾರಿ ರಜೆ ಹೊರತುಪಡಿಸಿ ಬೆಳಿಗ್ಗೆ 9 ರಿಂದ ಸಂಜೆ 4 ರ ತನಕ ಡಿಜಿಬಸ್ ಕಾರ್ಯಾಚರಿಸಲಿದೆ. ಈ ಯೋಜನೆಗೆ ವಾರ್ಷಿಕ 10 ಲಕ್ಷ ರೂಪಾಯಿ ವೆಚ್ಚ ತಗುಲಲಿದೆ.
ಪ್ರಾರಂಭ ಎಲ್ಲಿಂದ?
ಹನೀಫ್ ಅವರು ಪ್ರಾಥಮಿಕ ಶಾಲಾ ಶಿಕ್ಷಣ ಪಡೆದ ಕುಂಜೂರು ಪಂಜ ಶಾಲೆಯಿಂದಲೇ ಈ ಡಿಜಿ ಬಸ್ ಪ್ರಾರಂಭವಾಗಲಿದ್ದು, ತಾನು ಉನ್ನತ ಹುದ್ದೆಗೇರಿದಾಗ ಕಲಿತ ಶಾಲೆಯನ್ನು ಮರೆತು ಬಿಡುವವರಿಗೆ ಇದೊಂದು ಪ್ರೇರಣಾ ಶಕ್ತಿಯಾಗಿ ಕಲಿತ ಶಾಲೆಗೂ, ಊರಿಗೂ ಹೆಮ್ಮೆಯ ಪ್ರತೀಕವಾಗಲಿದೆ.
ಎಂ.ಫ್ರೆಂಡ್ಸ್ ನ ಈ ಕಂಪ್ಯೂಟರ್ ಬಸ್ ರಾಜ್ಯಕ್ಕೆ ಹೊಸ ಯೋಜನೆಯಾಗಿದೆ. ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ತನ್ನ ದಶಮಾನೋತ್ಸವದ ಸವಿ ನೆನಪಿಗಾಗಿ ಈ ವಿದ್ಯಾ ಯೋಜನೆಯನ್ನು ಬಿಡುಗಡೆಗೊಳಿಸಿದೆ. 2013 ರಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಪ್ರಾರಂಭವಾದ ಎಂ. ಫ್ರೆಂಡ್ಸ್ ತಂಡ ಇಂದು ಪ್ರಸಿದ್ಧ ಚಾರಿಟಿ ಟ್ರಸ್ಟ್ ಆಗಿ ಪರಿವರ್ತನೆಗೊಂಡಿದೆ. ಕಳೆದ 10 ವರ್ಷದಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ಹಲವಾರು ಸೇವಾ ಯೋಜನೆಗಳ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ. ಅನಾರೋಗ್ಯ ಪೀಡಿತರ ಸೇವೆ ಮೂಲಕ ಪ್ರಾರಂಭವಾದ ಟ್ರಸ್ಟ್ ನ ಸೇವೆ ಜಿಲ್ಲೆಯ 8 ಕುಗ್ರಾಮಗಳನ್ನು ಸಮೀಕ್ಷೆ ಮಾಡಿ ಅಲ್ಲಿನ ಮೂಲಭೂತ ಸೌಕರ್ಯ, ವಿದ್ಯಾಭ್ಯಾಸ, ಆರೋಗ್ಯಕ್ಕೆ ದೊಡ್ಡ ಕೊಡುಗೆ ನೀಡಿದೆ. ಅನ್ನದಾನದ ಮಹತ್ವವನ್ನು ಅರಿತು ಕಳೆದ ಆರು ವರ್ಷಗಳಿಂದ ಮಂಗಳೂರಿನ ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಹವರ್ತಿಗಳಿಗೆ ದಿನನಿತ್ಯ ಸುಮಾರು 500 ಬಡ/ಅಶಕ್ತರಿಗೆ ರಾತ್ರಿಯ ಭೋಜನವನ್ನು ಉಚಿತವಾಗಿ ವಿತರಿಸುತ್ತಿದೆ. ಇದೀಗ ಕಂಪ್ಯೂಟರ್ ಡಿಜಿಟಲ್ ಬಸ್ಸಿನ ಹೊಸ ಯೋಜನೆ ಸಹಸ್ರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ.
ಕ್ಲಾಸ್ ಆನ್ ವ್ಹೀಲ್ಸ್
ಕಂಪ್ಯೂಟರ್ ಸಾಕ್ಷರತಾ ಡಿಜಿ ಬಸ್
ಎಂ.ಫ್ಫೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ)
ಮಂಗಳೂರು
ಸಂಪರ್ಕ ಸಂಖ್ಯೆ: 9019111177