Posted by vidyamaana on 2023-08-18 08:29:00 |
ಬೆಳ್ತಂಗಡಿ: ರೋಗಿಯೊಬ್ಬರನ್ನು ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.
ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
Posted by Vidyamaana on 2024-07-02 11:34:54 |
ಪುತ್ತೂರು: ಮಂಗಳೂರು ಕೃಷಿಕರ ಸಹಕಾರಿ ಸಂಘ ಮಂಗಳೂರು ಇವರಿಂದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಸಹಕಾರ ರತ್ನ ಡಾ। ಎಂ ಎನ್ ರಾಜೇಂದ್ರ ಕುಮಾರ್ ಇವರ ಸಹಕಾರದೊಂದಿಗೆ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಅಡಿಕೆ ಖರೀದಿ ಕೇಂದ್ರದ ಉದ್ಘಾಟನೆ ನಡೆಯಲಿದೆ ಎಂದು ಮಾಸ್ ಲಿಮಿಟೆಡ್ ನ ಅಧ್ಯಕ್ಷ ಕೆ ಸೀತಾರಾಮ ರೈ ಸವಣೂರು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಶಾಸಕ ಅಶೋಕ್ ಕುಮಾರ್ ರೈ ಅವರು ಅಡಿಕೆ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಗೊಟ್ಟು ಮತ್ತು ಎಸ್ ಬಿ ಜಯರಾಮ ರೈ ಮತ್ತು ಅರಿಯಡ್ಕ ಗ್ರಾ.ಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.
Posted by Vidyamaana on 2023-12-16 06:58:40 |
ಬಂಟ್ವಾಳ: ಮೂರು ಮಕ್ಕಳ ತಾಯಿಯನ್ನು ಆಕೆಯ ಗಂಡನ ಸ್ನೇಹಿತನೇ ಮದುವೆಯಾಗುವುದಾಗಿ ನಂಬಿಸಿ, ನಿರಂತರವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಕೊನೆಗೆ ಹಲ್ಲೆಗೈದು ಕೊಲ್ಲುವ ಬೆದರಿಕೆ ಹಾಕಿದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಲೊರೆಟ್ಟೊ ಪದವು ನಿವಾಸಿಯೊಬ್ಬರ ಪತ್ನಿಯಾಗಿದ್ದ ಸಂತ್ರಸ್ತ ಮಹಿಳೆ ತಾನು ಮೋಸ ಹೋದ ಬಗ್ಗೆ ಪೊಲೀಸ್ ದೂರು ನೀಡಿದ್ದಾಳೆ. ನರಿಕೊಂಬು ನಿವಾಸಿ ತಸ್ಲೀಂ ಆರೀಫ್ ಆರೋಪಿಯಾಗಿದ್ದು ನಿರಂತರ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿದ್ದಾನೆಂದು ದೂರು ದಾಖಲಾಗಿದೆ.
ತಸ್ಲೀಂ ಆರೀಫ್ ಗಂಡನ ಸ್ನೇಹಿತನಾಗಿದ್ದು ಆತನ ಜೊತೆ ಮನೆಗೆ ಬರುತ್ತಿದ್ದು, ಸಲುಗೆ ಉಂಟಾಗಿ ಮೊಬೈಲ್ ನಂಬ್ರ ಪಡೆದು, ಗಂಡ ಕೆಲಸಕ್ಕೆ ಹೋದ ಸಮಯ ಮನೆಗೆ ಬರುತ್ತಿದ್ದ. ಸಲುಗೆ ಬರಬರುತ್ತಾ ದೈಹಿಕ ಸಂಪರ್ಕಕ್ಕೆ ಬಂದಾಗ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದ. ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಕೊನೆಗೆ ಅಕ್ರಮ ಸಂಬಂಧ ಗಂಡನಿಗೆ ತಿಳಿದು ಅವಳಿಂದ ದೂರ ಇದ್ದ.
ಬಳಿಕ ಆರೋಪಿಯೊಂದಿಗೆ ಸಂತ್ರಸ್ತ ಮಹಿಳೆ ಬಾಡಿಗೆ ಮನೆಯಲ್ಲಿ ವಾಸವಿದ್ಧಳು. ಮೂರು ತಿಂಗಳಿನಿಂದ ಮಹಿಳೆಯನ್ನು ಪಾಣೆಮಂಗಳೂರು ಗ್ರಾಮದ ಜೈನರ ಪೇಟೆಯಲ್ಲಿ ಬಾಡಿಗೆ ಮನೆ ಮಾಡಿ ಕೂರಿಸಿದ್ದ. ಇದೀಗ ಆರೋಪಿ ತಸ್ಲೀಂ ಕುಲ್ಲಕ ಕಾರಣಕ್ಕೆ ಸಂತ್ರಸ್ತೆಯ ಮುಖಕ್ಕೆ, ಬಾಯಿಗೆ ಕೈಯಿಂದ ಹೊಡೆದು ಸೊಂಟಕ್ಕೆ ಒದ್ದಿರುವುದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಮತ್ತು ಮಕ್ಕಳನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
Posted by Vidyamaana on 2024-06-05 09:46:29 |
ಹೊಸದಿಲ್ಲಿ : ಆಕ್ಸಿಸ್ ಮೈ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಗುಪ್ತಾ ಅವರು 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ತಮ್ಮ ಲೆಕ್ಕಾಚಾರ ಮೀರುತ್ತಿದ್ದಂತೆ, ಇಂಡಿಯಾ ಟುಡೇ ಟಿ ವಿ ಲೈವ್ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಘಟನೆ ನಡೆದಿದೆ.
ಇಂಡಿಯಾ ಟುಡೆಯ ಚುನಾವಣಾ ಫಲಿತಾಂಶಗಳ ಲೈವ್ ಕವರೇಜ್ನಲ್ಲಿ ಕಾಣಿಸಿಕೊಂಡ ಗುಪ್ತಾ, ಕಣ್ಣೀರಿಡುತ್ತಿದ್ದಂತೆ ಆಂಕರ್ಗಳು ಅವರಿಗೆ ಸಾಂತ್ವನ ಹೇಳಿದರು.
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ, ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ 361-401 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದವು. INDIA ಒಕ್ಕೂಟವು 131-166 ಸ್ಥಾನಗಳನ್ನು ಗೆಲ್ಲಲಿದೆ, ಸಮೀಕ್ಷೆಗಳ ಪ್ರಕಾರ ಇತರ ಪಕ್ಷಗಳು 8 ರಿಂದ 20 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿತ್ತು.
ಶನಿವಾರದ ಅಂತಿಮ ಸುತ್ತಿನ ಮತದಾನದ ನಂತರ ಬಿಡುಗಡೆಯಾದ ಬಹುಪಾಲು ಎಕ್ಸಿಟ್ ಪೋಲ್ಗಳು ಬಿಜೆಪಿ ಮತ್ತು ಎನ್ಡಿಎ ಮುನ್ನಡೆ ಸಾಧಿಸಲಿವೆ ಎಂದು ತೋರಿಸಿದ್ದವು.
Posted by Vidyamaana on 2023-09-07 17:47:26 |
ಬೆಳ್ಳಾರೆ: ಕಳಂಜದ ಮಸೂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಿರುವುದಾಗಿ ತಿಳಿದುಬಂದಿದೆ.
ಆರೋಪಿಗಳಾದ ರಂಜಿತ್, ಸದಾಶಿವ, ಸುಧೀರ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯದ ಏಕಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಜಸ್ಟಿಸ್ ವಿಶ್ವಜೀತ್ ಎಸ್ ಶೆಟ್ಟಿ ಜಾಮೀನು ಮಂಜೂರು ಮಾಡಿದರು. ಆರೋಪಿಗಳ ಪರವಾಗಿ ಹಿರಿಯ ವಕೀಲರಾದ ಅರುಣ್ ಶಾಮ್ ರವರು ವಾದ ಮಂಡಿಸಿದ್ದರು. ಒಟ್ಟು ಎಂಟು ಆರೋಪಿಗಳ ಪೈಕಿ ಈ ಮೊದಲು ಮೂರು ಜನ ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು. 2022ರ ಜು. 19ರಂದು ಪರಿಚಯದ ಇಬ್ಬರು ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳದ ಬಳಿಕ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸುವುದಾಗಿ ಕರೆಸಿಕೊಂಡ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.
ಮಸೂದ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಅಭಿಲಾಶ್, ಸುನಿಲ್ ಕೆ, ಸುಧೀರ್, ಶಿವಪ್ರಸಾದ್, ರಂಜಿತ್ ಬಿ, ಸದಾಶಿವ ಪೂಜಾರಿ, ರಂಜಿತ್, ಭಾಸ್ಕರ ಕೆ ಎಂ ಯನ್ನು ಪೊಲೀಸರು ಬಂಧಿಸಿದ್ದರು.
Posted by Vidyamaana on 2023-05-08 05:21:21 |
ಬೆಂಗಳೂರು; ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ 83.89 ಶೇಕಡಾ ಫಲಿತಾಂಶ ಬಂದಿದೆ. ನಾಲ್ಕು ವಿದ್ಯಾರ್ಥಿಗಳ 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ.ಈ ಬಾರಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಚಿತ್ರದುರ್ಗ ಫಲಿಂತಾಶದಲ್ಲಿ ಪ್ರಥಮ ಸ್ಥಾನ ಪಡೆದ್ರೆ ಮಂಡ್ಯ ಜಿಲ್ಲೆ ಎರಡನೇ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ.
ಚಿತ್ರದುರ್ಗ ಜಿಲ್ಲೆ 96.80 ಶೇಕಡಾ ಫಲಿತಾಂಶ ಪಡೆದರೆ, ಮಂಡ್ಯ ಜಿಲ್ಲೆ 96.74 ಶೇಕಡಾ ಫಲಿತಾಂಶ ಪಡೆದಿದೆ.
Posted by Vidyamaana on 2023-11-17 12:33:12 |
ಮಂಗಳೂರು, ನ.17: ಮಂಗಳೂರಿನ ಖ್ಯಾತ ಯೂರಾಲಜಿಸ್ಟ್ (ಮೂತ್ರಶಾಸ್ತ್ರ ವಿಭಾಗ) ತಜ್ಞರಾಗಿದ್ದ ಕೆಎಂಸಿ ಆಸ್ಪತ್ರೆಯ ವೈದ್ಯ ಡಾ.ಜಿ.ಜಿ. ಲಕ್ಷ್ಮಣ ಪ್ರಭು ಹೃದಯಾಘಾತದಿಂದ ನಿಧನರಾಗಿದ್ದಾರೆ.
61 ವರ್ಷದ ಲಕ್ಷ್ಮಣ ಪ್ರಭು ಅವರು ವಾರದ ಹಿಂದೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ತೀವ್ರ ನಿಗಾ ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ.
ಮೂರು ದಶಕಕ್ಕೂ ಹೆಚ್ಚು ಅನುಭವ ಹೊಂದಿದ್ದ ಡಾ. ಜಿ ಜಿ ಲಕ್ಷ್ಮಣ ಪ್ರಭು ಹಲವು ವರ್ಷಗಳ ಕಾಲ ಕೆಎಂಸಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು. ಹಲವಾರು ಸಂಕೀರ್ಣ ವೈದ್ಯಕೀಯ ಪ್ರಕರಣಗಳನ್ನು ನಿರ್ವಹಿಸಿದ್ದ ಅವರು, ಯುರೊಲಿಥಿಯಾಸಿಸ್, ಆಂಡ್ರಾಲಜಿ, ಯುರೊಡೈನಾಮಿಕ್ಸ್, ರೆಕಾನ್-ಯೂರಾಲಜಿ, ಯುರೊಜಿನೆಕಾಲಜಿ ಮತ್ತು ಎಂಡೋರಾಲಜಿಯಲ್ಲಿ ಪರಿಣತಿಯನ್ನು ಹೊಂದಿದ್ದರು. ಡಾ.ಜಿ.ಜಿ. ಲಕ್ಷ್ಮಣ ಪ್ರಭು ಅವರ ಅಕಾಲಿಕ ನಿಧನಕ್ಕೆ ಅನೇಕ ಗಣ್ಯರು, ಹಿರಿಯ , ಕಿರಿಯ ವೈದ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.