Posted by vidyamaana on 2024-06-30 19:31:43 |
ಕೋಟ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ತಾಯಿ, ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್ತಿ (97) ವಯೋಸಹಜ ಅಸೌಖ್ಯದಿಂದ
ಜೂ.30ರಂದು ನಿಧನ ಹೊಂದಿದರು. ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ
Posted by Vidyamaana on 2024-03-09 05:12:48 |
ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಂದ ಮಂಜುನಾಥನ ಸೇವೆ ಸಲ್ಲಿಸುತ್ತಿದ್ದ ಆನೆ ಲತಾ ಶಿವರಾತ್ರಿಯಂದೇ ಶಿವೈಕ್ಯಳಾಗಿದ್ದಾಳೆ. ಶುಕ್ರವಾರ ಮಧ್ಯಾಹ್ನ ಹೃದಾಯಾಘಾತದಿಂದ ಗಜರಾಣಿ ಲತಾ ಇಹಲೋಕ ತ್ಯಜಿಸಿ ಶಿವನ ಪಾದ ಸೇರಿದ್ದಾಳೆ. 60 ವರ್ಷ ಪ್ರಾಯವಾಗಿರುವ ಲತಾ ಧರ್ಮಸ್ಥಳ ಕ್ಷೇತ್ರದ ಜಾತ್ರೋತ್ಸವ, ಲಕ್ಷಾದೀಪೋತ್ಸವ, ಶಿವರಾತ್ರಿ ಉತ್ಸವ ಹೀಗೆ ಎಲ್ಲಾ ಉತ್ಸವದಲ್ಲೂ ಮುಂಚೂಣಿಯಲ್ಲಿದ್ದಳು.
ಉತ್ಸವಗಳು ನಡೆಯುವಾಗ ಸೊಂಡಿಲು ಎತ್ತಿ ನಮಸ್ಕರಿಸುತ್ತಾ ಸಾಗುವುದನ್ನು ನೋಡುವುದೇ ಒಂದು ಖುಷಿಯಾಗಿತ್ತು. ಭಕ್ತಾದಿಗಳಿಗೂ ಯಾವುದೇ ತೊಂದರೆ ನೀಡದೆ ಏನನ್ನೂ ಅಪೇಕ್ಷಿಸದೇ ಇದ್ದ ಲತಾ ಧರ್ಮಸ್ಥಳ ಧರ್ಮಾಧಿಕಾರಿಗಳಿಗೂ ಅಚ್ಚುಮೆಚ್ಚಿನವಳಾಗಿದ್ದಳು.
ಶಿವಾನಿ ಹಾಗೂ ಲಕ್ಷ್ಮಿ ಕ್ಷೇತ್ರದಲ್ಲಿ ಇದ್ದರೂ ಕೂಡಾ ಲತಾ ನಡೆದುಕೊಂಡಂತೆ ಆಕೆಯನ್ನು ಅನುಸರಿಸುತ್ತಿದ್ದವು. ಲತಾಳಿಗೆ ಜನಿಸಿದವಳು ಲಕ್ಷ್ಮಿಯಾಗಿದ್ದರೆ, ಲಕ್ಷ್ಮಿಯಲ್ಲಿ ಜನಿಸಿದ ಆನೆ ಶಿವಾನಿ. ಶಿವಾನಿ ಜನನವಾದ ಬಳಿಕ ಲಕ್ಷ್ಮೀ ಉತ್ಸವದಲ್ಲಿ ಭಾಗವಹಿಸುತ್ತಿರಲಿಲ್ಲವಾಗಿದ್ರೂ, ಲತಾ ಮಾತ್ರ ನಿರಂತರವಾಗಿ ದೇವರ ಸೇವೆಯಲ್ಲಿ ಭಾಗಿಯಾಗಿದ್ದಳು.
ವಯಸ್ಸಾಗಿರೋ ಲತಾ ಶಿವರಾತ್ರಿಯಂದೇ ಶಿವನ ಪಾದ ಸೇರಿದ್ದು, ಧರ್ಮಸ್ಥಳ ಕ್ಷೇತ್ರದ ಜನರು ಕಂಬನಿ ಮಿಡಿದಿದ್ದಾರೆ. ಶುಕ್ರವಾರ ಸಂಜೆ ಧರ್ಮಸ್ಥಳದಲ್ಲಿ ಲತಾ ಅಂತ್ಯಕ್ರಿಯೆ ನಡೆಯಲಿದೆ.
Posted by Vidyamaana on 2023-03-29 05:05:44 |
ಬೆಂಗಳೂರು : ಕೇಂದ್ರ ಚುನಾವಣಾ ಆಯೋಗವು ಇಂದು ದೆಹಲಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದು, ಇಂದೇ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದ್ದು, ಸಿಎಂ ಬೊಮ್ಮಾಯಿ ಅವರ ಇಂದಿನ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ.ಇಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅವರ ಇಂದಿನ ಸರ್ಕಾರಿ ಕಾರ್ಯಕ್ರಮಗಳು ರದ್ದಾಗಿವೆ. ಇಂದು ಸಿಎಂ ಬೊಮ್ಮಾಯಿ ಅವರು ಕೊಪ್ಪಳ ಹಾಗೂ ತವರು ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ನೀರಾವರಿ ಯೋಜನೆಗೆ ಚಾಲನೆ ನೀಡಬೇಕಿತ್ತು. ಕೆರೆಗಳಿಗೆ ನೀರು ತುಂಬುವ ಯೋಜನೆ ಚಾಲನೆ ಹಾಗೂ ಶಿಗ್ಗಾಂವಿ, ರಾಣೆಬೆನ್ನೂರಿನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೂ ರದ್ದು ಮಾಡಿದ್ದಾರೆ.ಇಂದು ಬೆಳಗ್ಗೆ 11.30 ಕ್ಕೆ ದೆಹಲಿಯ ವಿಜ್ಞಾನ ಭವದಲ್ಲಿ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಲಿದ್ದು, ಕರ್ನಾಟಕ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಕರ್ನಾಟಕದ 224 ವಿಧಾನಸಭೆ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಇಂದು ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ.
Posted by Vidyamaana on 2024-01-19 15:12:44 |
ನವದೆಹಲಿ: ಜೈಲು ಅಧಿಕಾರಿಗಳ ಮುಂದೆ ಶರಣಾಗಲು ಹೆಚ್ಚುವರಿ ಕಾಲಾವಕಾಶ ಕೋರಿ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.ಅದರಂತೆ ನ್ಯಾಯಾಲಯವು ನಿಗದಿಪಡಿಸಿದ ಮೂಲ ಗಡುವಿನ ಪ್ರಕಾರ ಜನವರಿ 21 ರೊಳಗೆ ಎಲ್ಲಾ 11 ಅಪರಾಧಿಗಳು ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ಎಸಗಿದ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಕೊಲೆ ಮಾಡಿದ ಆರೋಪದಲ್ಲಿ ಹನ್ನೊಂದು ಅಪರಾಧಿಗಳು ಸುಪ್ರೀಂ ಕೋರ್ಟ್ ಶಿಕ್ಷೆಗೆ ಗುರಿಯಾಗಿದ್ದರು. ಆದರೆ ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ, ಆಗಸ್ಟ್ 14, 2023ರಂದು, ಈ ಅಪರಾಧಿಗಳನ್ನು ಗುಜರಾತ್ ಸರ್ಕಾರ ಅವಧಿಪೂರ್ವವಾಗಿ ಬಿಡುಗಡೆ ಮಾಡಿತ್ತು. ಗುಜರಾತ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಪ್ರಕರಣದ ಸಂತ್ರಸ್ತೆ ಬಿಲ್ಕಿಸ್ ಬಾನೊ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠ ಜನವರಿ 8ರಂದು ಗುಜರಾತ್ ಸರ್ಕಾರದ ಬಿಡುಗಡೆ ಆದೇಶವನ್ನು ರದ್ದುಗೊಳಿಸಿತ್ತು. ಪ್ರಕರಣದ ಅಪರಾಧಿಗಳಿಗೆ ಕ್ಷಮಾದಾನ ನೀಡಲು ಗುಜರಾತ್ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ ಎಂದಿದ್ದ ಅದು ಎಲ್ಲಾ ಹನ್ನೊಂದು ಅಪರಾಧಿಗಳಿಗೆ ಎರಡು ವಾರಗಳಲ್ಲಿ ಶರಣಾಗುವಂತೆ ನಿರ್ದೇಶಿಸಿತ್ತು.ಕೋರ್ಟ್ ಆದೇಶ ಬರುತ್ತಿದ್ದಂತೆ ಹನ್ನೊಂದು ಮಂದಿ ಅಪರಾಧಿಗಳ ಪೈಕಿ ಮೂವರು ಅಪರಾಧಿಗಳು ಶರಣಾಗಲು ಹೆಚ್ಚಿನ ಸಮಯ ಕೋರಿ ಗುರುವಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ಪೀಠವು ಅರ್ಜಿಗಳಿಗೆ ಅರ್ಹತೆಯ ಕೊರತೆಯಿದೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ ಅಲ್ಲದೆ ಮುಂದಿನ ಭಾನುವಾರದೊಳಗೆ ಎಲ್ಲ ಅಪರಾಧಿಗಳು ಜೈಲು ಅಧಿಕಾರಿಗಳಿಗೆ ವರದಿ ಮಾಡುವಂತೆ ಆದೇಶಿಸಿದೆ.
Posted by Vidyamaana on 2023-06-11 13:28:40 |
ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈ ಮೂಲದ ನವವಿವಾಹಿತ ಜೋಡಿಯೊಂದು ಹನಿಮೂನ್ ಪ್ರವಾಸದ ವೇಳೆ ದುರಂತ ಸಾವಿಗೀಡಾಗಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.ಮೃತರನ್ನು ಡಾ. ಲೋಕೇಶ್ವರನ್ ಮತ್ತು ಡಾ. ವಿಬುಷ್ನಿಯಾ ಎಂದು ಗುರುತಿಸಲಾಗಿದೆ.ಇಬ್ಬರು ಕೂಡ ವೈದ್ಯರಾಗಿದ್ದರು. ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಹನಿಮೂನ್ಗೆಂದು ಇಂಡೋನೇಷ್ಯಾದ ಬಾಲಿ ದ್ವೀಪಕ್ಕೆ ತೆರಳಿದ್ದರು. ಫೋಟೋಗೆ ಪೋಸ್ ಕೊಡುವ ವೇಳೆ ಇಬ್ಬರು ನೀರುಪಾಲಾಗಿದ್ದಾರೆ.ಜೂನ್ 1ರಂದು ಮದುವೆಯಾದ ಲೋಕೇಶ್ವರನ್ ಮತ್ತು ವಿಬುಷ್ನಿಯಾ ತಮ್ಮ ಹೊಸ ಪ್ರಯಾಣವನ್ನು ಒಟ್ಟಿಗೆ ಆಚರಿಸಲು ಇಂಡೋನೇಷ್ಯಾಕ್ಕೆ ತೆರಳಿದ್ದರು. ಅನೇಕ ಜೋಡಿಗಳಂತೆ, ಅವರು ಕೂಡ ಸುಂದರವಾದ ನೆನಪುಗಳನ್ನು ಸೆರೆಹಿಡಿಯಲು ಉತ್ಸುಕರಾಗಿದ್ದರು. ಸಮುದ್ರದಲ್ಲಿ ಮೋಟಾರ್ ಬೋಟ್ನಲ್ಲಿ ಫೋಟೋಶೂಟ್ ಮಾಡಲು ನಿರ್ಧರಿಸಿದರು. ದುರಂತವೆಂದರೆ ಚಿತ್ರೀಕರಣದ ವೇಳೆ ಇಬ್ಬರೂ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಎರಡೂ ಕುಟುಂಬಗಳು ಆಘಾತಕ್ಕೆ ಒಳಗಾಗಿವೆ. ಮಕ್ಕಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ದಂಪತಿ ಮೃತದೇಹಗಳನ್ನು ಹುಟ್ಟೂರಾದ ಚೆನ್ನೈಗೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ
Posted by Vidyamaana on 2023-06-24 07:00:37 |
ಬಳ್ಳಾರಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ನೀಡಿರುವುದಾಗಿ ಘೋಷಣೆ ಮಾಡಿದ್ದಾರೆ.
ಶನಿವಾರ ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸೋಲಿನ ಹಿನ್ನೆಲೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ನನ್ನ ಎರಡು ವರ್ಷದ ಅವಧಿ ಮುಗಿದಿದೆ. ಅದರ ಬೆನ್ನಲ್ಲಿಯೇ ನಾನು ರಾಜೀನಾಮೆಯನ್ನೂ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.
Posted by Vidyamaana on 2023-09-17 04:52:32 |
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು. ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ.17ರಂದು ಕದಿರು ವಿನಿಯೋಗ (ಹೊಸತನೆ) ವಿತರಣೆ ನಡೆಯಲಿದೆ. ಬೆಳಿಗ್ಗೆ ದೇವಳದ ಪುಷ್ಕರಣಿಯ ಕಟ್ಟೆಯಿಂದ ಹೊಸತೆನೆಗೆ ಪೂಜೆ ಮಾಡುವ ಮೂಲಕ ದೇವಳದ ಒಳಾಂಗಣಕ್ಕೆ ತರಲಾಗುವುದು.ಬಳಿಕ ಸಂಪ್ರದಾಯದಂತೆ ದೇವಳದಲ್ಲಿ ಪೂಜೆ ನಡೆಯಲಿದೆ. ದೇವಳದ ಹೊರಾಂಗಣದಲ್ಲಿ ಭಕ್ತರಿಗೆ ಕದಿರು ವಿತರಣೆ ನಡೆಯಲಿದೆ.