Posted by vidyamaana on 2023-08-18 08:29:00 |
ಬೆಳ್ತಂಗಡಿ: ರೋಗಿಯೊಬ್ಬರನ್ನು ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.
ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
Posted by Vidyamaana on 2023-12-16 06:58:40 |
ಬಂಟ್ವಾಳ: ಮೂರು ಮಕ್ಕಳ ತಾಯಿಯನ್ನು ಆಕೆಯ ಗಂಡನ ಸ್ನೇಹಿತನೇ ಮದುವೆಯಾಗುವುದಾಗಿ ನಂಬಿಸಿ, ನಿರಂತರವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಕೊನೆಗೆ ಹಲ್ಲೆಗೈದು ಕೊಲ್ಲುವ ಬೆದರಿಕೆ ಹಾಕಿದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಲೊರೆಟ್ಟೊ ಪದವು ನಿವಾಸಿಯೊಬ್ಬರ ಪತ್ನಿಯಾಗಿದ್ದ ಸಂತ್ರಸ್ತ ಮಹಿಳೆ ತಾನು ಮೋಸ ಹೋದ ಬಗ್ಗೆ ಪೊಲೀಸ್ ದೂರು ನೀಡಿದ್ದಾಳೆ. ನರಿಕೊಂಬು ನಿವಾಸಿ ತಸ್ಲೀಂ ಆರೀಫ್ ಆರೋಪಿಯಾಗಿದ್ದು ನಿರಂತರ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿದ್ದಾನೆಂದು ದೂರು ದಾಖಲಾಗಿದೆ.
ತಸ್ಲೀಂ ಆರೀಫ್ ಗಂಡನ ಸ್ನೇಹಿತನಾಗಿದ್ದು ಆತನ ಜೊತೆ ಮನೆಗೆ ಬರುತ್ತಿದ್ದು, ಸಲುಗೆ ಉಂಟಾಗಿ ಮೊಬೈಲ್ ನಂಬ್ರ ಪಡೆದು, ಗಂಡ ಕೆಲಸಕ್ಕೆ ಹೋದ ಸಮಯ ಮನೆಗೆ ಬರುತ್ತಿದ್ದ. ಸಲುಗೆ ಬರಬರುತ್ತಾ ದೈಹಿಕ ಸಂಪರ್ಕಕ್ಕೆ ಬಂದಾಗ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದ. ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಕೊನೆಗೆ ಅಕ್ರಮ ಸಂಬಂಧ ಗಂಡನಿಗೆ ತಿಳಿದು ಅವಳಿಂದ ದೂರ ಇದ್ದ.
ಬಳಿಕ ಆರೋಪಿಯೊಂದಿಗೆ ಸಂತ್ರಸ್ತ ಮಹಿಳೆ ಬಾಡಿಗೆ ಮನೆಯಲ್ಲಿ ವಾಸವಿದ್ಧಳು. ಮೂರು ತಿಂಗಳಿನಿಂದ ಮಹಿಳೆಯನ್ನು ಪಾಣೆಮಂಗಳೂರು ಗ್ರಾಮದ ಜೈನರ ಪೇಟೆಯಲ್ಲಿ ಬಾಡಿಗೆ ಮನೆ ಮಾಡಿ ಕೂರಿಸಿದ್ದ. ಇದೀಗ ಆರೋಪಿ ತಸ್ಲೀಂ ಕುಲ್ಲಕ ಕಾರಣಕ್ಕೆ ಸಂತ್ರಸ್ತೆಯ ಮುಖಕ್ಕೆ, ಬಾಯಿಗೆ ಕೈಯಿಂದ ಹೊಡೆದು ಸೊಂಟಕ್ಕೆ ಒದ್ದಿರುವುದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಮತ್ತು ಮಕ್ಕಳನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
Posted by Vidyamaana on 2024-06-15 12:28:20 |
ಪುತ್ತೂರು: ಸರ್ಕಾರದಿಂದ ಕೆಲವು ಸವಲತ್ತುಗಳು ಸಿಬ್ಬಂದಿಗಳಿಗೆ ಲಭಿಸಿದರೂ, ಸಿಗದೇ ಇರುವುದನ್ನು ಮುಳಿಯ ಸಂಸ್ಥೆಯ ಮೂಲಕ ನೀಡಲಾಗುತ್ತಿದೆ. ಪೊಲೀಸರು ಜನರ ಹತ್ತಿರವಾಗುತ್ತಿದ್ದು, ಇನ್ನಷ್ಟು ಉತ್ತಮ ಕೆಲಸಗಳು ಅವರಿಂದ ನಡೆಯುವಂತಾಗಬೇಕು ಎಂದು ಮುಳಿಯ ಜ್ಯುವೆಲ್ಸ್ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಹೇಳಿದರು.
ಪುತ್ತೂರು ನಗರ ಠಾಣೆಯಲ್ಲಿ ಪುತ್ತೂರು ಮುಳಿಯ ಜುವೆಲ್ಸ್ ಮತ್ತು ರೋಟರಿ ಕ್ಲಬ್ ಪುತ್ತೂರು ಯುವ ವತಿಯಿಂದ ಪೊಲೀಸ್ ಸಿಬ್ಬಂದಿಗಳಿಗೆ ರೈನ್ ಕೋಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಳಿಯ ಸಂಸ್ಥೆಯಿಂದ ರೈನ್ ಕೋಟ್ ವಿತರಣೆಯನ್ನು ಮೂರನೇ ಬಾರಿ ಮಾಡಲಾಗುತ್ತಿದ್ದು, ಜಾಹೀರಾತು ಪಡೆದುಕೊಳ್ಳುವ ಉದ್ದೇಶದಿಂದ ಇದನ್ನು ಮಾಡುತ್ತಿಲ್ಲ. ಧರಿಸುವ ವ್ಯಕ್ತಿಗೆ ಮಾತ್ರ ಯಾರು ನೀಡಿದ್ದು ಎಂದು ತಿಳಿದರೆ ಸಾಕು ಎಂದು ತಿಳಿಸಿದರು.
Posted by Vidyamaana on 2023-09-07 15:14:22 |
ಪುತ್ತೂರು: ಬಡಗನ್ನೂರು ಗ್ರಾಪಂ ಸದಸ್ಯ ಗುರುಪ್ರಸಾದ್ ಅವರ ಮನೆಗೆ ತಡರಾತ್ರಿ ನುಗ್ಗಿದ ಮುಸುಕುಧಾರಿಗಳ ತಂಡ ನಡೆಸಿದ ದರೋಡೆ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗುವುದು ಎಂದು ಎಸ್ಪಿ ರಿಷ್ಯಂತ್ ಸಿ.ಬಿ. ತಿಳಿಸಿದ್ದಾರೆ.
ಬಡಗನ್ನೂರು ಗ್ರಾಪಂ ಮಾಜಿ ಸದಸ್ಯ ಗುರುಪ್ರಸಾದ್ ಅವರ ಮನೆ ಪರಿಶೀಲಿಸಿ ಮಾಧ್ಯಮದೊಂದಿಗೆ ಅವರು ಮಾತನಾಡಿದರು.
ತಡರಾತ್ರಿ ಮನೆಯೊಳಗೆ ನುಗ್ಗಿದ ದರೋಡರಕೋರರ ಗುಂಪು, ಗುರುಪ್ರಸಾದ್, ಅವರ ತಾಯಿ ಹಾಗೂ ಮನೆಯವರನ್ನು ಕಟ್ಟಿ ಹಾಕಿದೆ. ಬಳಿಕ ಮೊಬೈಲ್ಗಳನ್ನು ನೀರಿಗೆ ಎಸೆದು, ದರೋಡೆ ನಡೆಸಿದೆ. ದರೋಡೆ ನಡೆಸಿದ ಬಳಿಕ ಬಂಧಮುಕ್ತಗೊಳಿಸಿ ತೆರಳಿದೆ. ಕೃತ್ಯ ಎಸಗಿದವರ ಬಗ್ಗೆ ಸುಳಿವು ಸಿಕ್ಕಿಲ್ಲ. ಹಾಗಾಗಿ ವಿಶೇಷ ತಂಡ ರಚಿಸಲಾಗುವುದು ಎಂದು ತಿಳಿಸಿದರು
ರಾತ್ರಿ ಸುಮಾರು 2 ಗಂಟೆ ವೇಳೆಗೆ ಕೃತ್ಯ ಎಸಗಿದ್ದು, 25 ಪವನ್ ಚಿನ್ನಾಭರಣ, 40 ಸಾವಿರ ರೂ. ನಗದು ಕಳವಾಗಿದೆ ಎನ್ನಲಾಗಿದೆ. ಈ ಬಗ್ಗೆ ಎಸ್ಪಿ ಅವರಲ್ಲಿ ಪ್ರಶ್ನಿಸಿದಾಗ, ಇದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಮುಂದೆ ಸ್ಪಷ್ಟ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಸ್ಥಳಕ್ಕೆ ಐಜಿ, ಎಸ್ಪಿ,ಡಿ ವೈ ಎಸ್ ಪಿ ಸಹಿತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಶ್ವಾನದಳ, ಬೆರಳಚ್ಚುಗಾರರು ಪೊಲೀಸರೊಂದಿಗೆ ಕೈಜೋಡಿಸಿದ್ದಾರೆ.
Posted by Vidyamaana on 2024-02-02 14:12:03 |
ಮಂಗಳೂರು, ಫೆ.2: ನರೇಂದ್ರ ಮೋದಿಯವರ ವಿಕಸಿತ ಭಾರತದ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸುವ ನಿಟ್ಟಿನಲ್ಲಿ ವಿತ್ತ ಮಂತ್ರಿಗಳಾದ ನಿರ್ಮಲಾ ಸೀತಾರಮನ್ ಮಂಡಿಸಿದ ದೂರದೃಷ್ಟಿಯ, ಪ್ರಗತಿಶೀಲ ಮತ್ತು ವಿತ್ತೀಯ ಶಿಸ್ತಿನ ಮಧ್ಯಂತರ ಬಜೆಟ್ 2024ನ್ನು ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತೇನೆ. ವಿಕಸಿತ ಭಾರತದ 4 ಸ್ತಂಭಗಳಾದ ಯುವಜನತೆ, ಬಡವರು, ಮಹಿಳೆಯರು ಮತ್ತು ರೈತರನ್ನು ಸಶಕ್ತಗೊಳಿಸುವ ಮೂಲಕ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಭರವಸೆಯನ್ನು ಈ ಬಜೆಟ್ ನೀಡುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ. ಬೃಜೇಶ್ ಚೌಟ ಹೇಳಿದ್ದಾರೆ.
ಈ ಬಜೆಟ್ನಲ್ಲಿ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಟ್ಟು ಬಂಡವಾಳ ವೆಚ್ಚಕ್ಕೆ ಐತಿಹಾಸಿಕ ಗರಿಷ್ಠ 11,11,111 ಕೋಟಿ ರೂಪಾಯಿಗಳನ್ನು ನೀಡುವ ಮೂಲಕ ಭಾರತದ ಆಧುನಿಕ ಮೂಲಸೌಕರ್ಯ ನಿರ್ಮಾಣದೊಂದಿಗೆ ಯುವಜನತೆಗೆ ಹೊಸ ಉದ್ಯೋಗಾವಕಾಶಗಳನ್ನು ಕಲ್ಪಿಸಲಿದೆ. ಸ್ಕಿಲ್ ಇಂಡಿಯಾ ಮಿಷನ್ ಯೋಜನೆಯಡಿ 1.4 ಕೋಟಿ ಯುವಕರಿಗೆ ತರಬೇತಿ ನೀಡಲಾಗಿದ್ದು, ಪುನರ್ ಕೌಶಲ್ಯ ಯೋಜನೆಯಡಿ 54 ಲಕ್ಷ ಯುವಕರಿಗೆ ತರಬೇತಿ ನೀಡಲಾಗಿದೆ. ದೇಶದಲ್ಲಿ 3,000 ಐಟಿಐ, 7 ಐಐಟಿ, 16 ಐಐಐಟಿಎಸ್, 7 ಐಐಎಂಎಸ್, 15 ಎಐಐಎಂಎಸ್ ಅನ್ನು ನಿರ್ಮಿಸಿರುವ ಕಾರ್ಯ ಶ್ಲಾಘನೀಯ.
ಮೀನುಗಾರಿಕೆಗೆ ಹೊಸ ಸಚಿವಾಲಯ ಸ್ಥಾಪನೆ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮೂಲಕ ಬಡ, ಮಧ್ಯಮ ವರ್ಗದವರ ಅಭಿವೃದ್ಧಿ ಹಾಗೂ ಈ ಯೋಜನೆಯಡಿಯಲ್ಲಿ ಮೀನುಗಾರರ ಆರ್ಥಿಕತೆಯ ಅಭಿವೃದ್ಧಿ ಜೊತೆಗೆ 55 ಲಕ್ಷ ಉದ್ಯೋಗ ಸೃಷ್ಟಿಯಿಂದ ಕರಾವಳಿ ರಾಜ್ಯಗಳ ಅಭಿವೃದ್ಧಿಯ ಜೊತೆಗೆ ನಮ್ಮ ಕರಾವಳಿ ಕರ್ನಾಟಕಕ್ಕೆ ವಿಶೇಷ ಕೊಡುಗೆಯಾಗಲಿದೆ.
ರೂ. 6.21 ಲಕ್ಷ ಕೋಟಿಯ ರಕ್ಷಣಾ ಕ್ಷೇತ್ರದ ಅನುದಾನ ನಮ್ಮ ಸೇನೆಗೆ ಇನ್ನಷ್ಟು ಬಲ ನೀಡಲಿದ್ದು, ಗಡಿ ರಕ್ಷಣೆ ಹಾಗೂ ಸೇನೆಯ ಸೌಕರ್ಯಗಳ ಆಧುನೀಕರಣಕ್ಕೆ ನೆರವಾಗಲಿದೆ. ಇದು ಹೆಚ್ಚಿನ ಭದ್ರತೆಗೆ ಇನ್ನಷ್ಟು ಪ್ರೋತ್ಸಾಹ ನೀಡಲಿದೆ. ಉತ್ಪಾದನೆಯ ವಿಷಯದಲ್ಲಿ ದೇಶವನ್ನು ಸ್ವತಂತ್ರಗೊಳಿಸುವ ಗುರಿಯೊಂದಿಗೆ ರಕ್ಷಣಾ ವಲಯದಲ್ಲಿ ಆತ್ಮ ನಿರ್ಭರತೆಯನ್ನು ಸಾಧಿಸಲಿದೆ.
ದೇಶದ ಹಲವು ನಗರಗಳಲ್ಲಿ ಮೆಟ್ರೋ ರೈಲು ಮಾರ್ಗ ವಿಸ್ತರಣೆಗೆ ಅನುದಾನ, ಭವಿಷ್ಯದ ಸಾರಿಗೆ ಎಂದೇ ಬಿಂಬಿತವಾಗಿರುವ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಹಾಗೂ ಚಾರ್ಜಿಂಗ್ ಸ್ಟೇಷನ್ ಹೆಚ್ಚಳಕ್ಕೆ ಆದ್ಯತೆ, 40 ಸಾವಿರ ಹಳೆಯ ರೀತಿಯ ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಬೋಗಿಗಳಾಗಿ ಪರಿವರ್ತನೆ, ಉಡಾನ್ ಯೋಜನೆಗೆ 517 ಹೊಸ ಮಾರ್ಗ ರೂಪಿಸುವ ಮೂಲಕ ಸಣ್ಣ ನಗರಗಳಿಗೂ ವಿಮಾನಯಾನ ಸೇವೆ ಒದಗಿಸುವ ಯೋಜನೆ ಅತ್ಯಂತ ಸ್ವಾಗತಾರ್ಹ ಬೆಳವಣಿಗೆ.
ರಾಜ್ಯಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದಂತಾಗಿದೆ. ಡೈರಿ ಉದ್ಯಮದಲ್ಲಿ ತೊಡಗಿರುವ ಕೃಷಿಕರಿಗೆ ನೆರವು, ರಾಸುಗಳಲ್ಲಿ ಕಂಡು ಬರುವ ಕಾಲು ಬಾಯಿ ರೋಗ ತಡೆಗೆ ಕ್ರಮ, ಪಿಎಂ ಫಸಲ್ ಬೀಮಾ ಯೋಜನೆಯಡಿ 4 ಕೋಟಿ ಕೃಷಿಕರಿಗೆ ಬೆಳೆ ವಿಮೆ, ಕೊಯ್ಲಿನ ನಂತರ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಸಂಸ್ಕರಣೆಗೆ ಖಾಸಗಿ ಹಾಗೂ ಸಾರ್ವಜನಿಕ ವಲಯದ ಸಹಭಾಗಿತ್ವದ ಪರಿಕಲ್ಪನೆ ಶ್ಲಾಘನೀಯ ನಡೆ.
ದೇಶದ ಎಲ್ಲ ಜಿಲ್ಲೆಗಳಲ್ಲೂ ಆಸ್ಪತ್ರೆ ಸ್ಥಾಪನೆ, 9 ರಿಂದ 14 ವರ್ಷದೊಳಗಿನ ಬಾಲಕಿಯರಿಗೆ ಗರ್ಭಕಂಠದ ಕ್ಯಾನ್ಸರ್ಗೆ ಲಸಿಕೆ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ವಿಸ್ತರಣೆಯ ಮೂಲಕ ಆರೋಗ್ಯ ರಕ್ಷೆ ಒದಗಿಸಲಾಗಿದೆ. ಮಧ್ಯಂತರ ಬಜೆಟ್ ಚುನಾವಣಾ ಪೂರ್ವ ಘೋಷಣೆಗಳ ಬಜೆಟ್ ಆಗದೆ ಜನಸಾಮಾನ್ಯರ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್, ಸಬ್ ಕಾ ವಿಶ್ವಾಸ್” ಎನ್ನುವ ದೂರ ದೃಷ್ಟಿಯ ಘೋಷಣೆಯನ್ನು ಸಕಾರಗೊಳಿಸುವ ವಿಕಸಿತ ಭಾರತಕ್ಕೆ ಮುನ್ನುಡಿ ಬರೆದ ಅತ್ಯಂತ ಸ್ವಾಗತರ್ಹ ಬಜೆಟ್ ಇದಾಗಿದೆ ಎಂದು ಕ್ಯಾ. ಬೃಜೇಶ್ ಚೌಟ ತಿಳಿಸಿದ್ದಾರೆ.