Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10
ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.
Posted by Vidyamaana on 2024-01-25 16:52:35 |
ಪುತ್ತೂರು: 31ನೇ ವರ್ಷದ ಹೊನಲು ಬೆಳಕಿನ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಜ.27 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ತಿಳಿಸಿದ್ದಾರೆ.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದಿ.ಜಯಂತ ರೈ ಹಾಗೂ ದಿ.ಎನ್. ಮುತ್ತಪ್ಪ ರೈ ಅವರ ನೇತೃತ್ವದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಗೌರವಾಧ್ಯಕ್ಷತೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಗೌರವ ಉಪಸ್ಥಿತಿಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ನಡೆದುಕೊಂಡು ಬಂದಿರುವ ಪುತ್ತೂರು ಕೋಟಿ-ಚೆನ್ನಯ ಕಂಬಳಕ್ಕೆ ಭಾರೀ ಮಹತ್ವವಿದೆ. ಈ ಮೂಲಕ ಪುತ್ತೂರಿನ ಸಂಸ್ಕೃತಿ, ಘನತೆಯನ್ನು ಎತ್ತಿ ಹಿಡಿದಿದೆ ಎಂದು ಹೇಳಿದರು.
ಜ.27 ರಂದು ಬೆಳಿಗ್ಗೆ ಉದ್ಘಾಟನಾ ಸಮಾರಂಭವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಉದ್ಘಾಟಿಸಲಿದ್ದು, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂತ ಫಿಲೋಮಿನಾ ಕಾಲೇಜು ಪ್ರಾಂಶುಪಾಲ ರೆ.ಫಾ.ಆಂಟನಿ ಪ್ರಕಾಶ್ ಮೊಂತೆರೋ, ಡಾ.ಸುರೇಶ್ ಪುತ್ತೂರಾಯ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಂಜೆ 6.00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಶೋಕ್ ಕುಮಾರ್ ರೈ ವಹಿಸಲಿದ್ದು, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೇಂದ್ರ ನಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಶಾಸಕರಾದ ಪ್ರದೀಪ್ ಈಶ್ವರ್, ಮಂಥರ್ ಗೌಡ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ರಾಜೇಶ್ ನಾಯ್ಡ್, ಭರತ್ ಶೆಟ್ಟಿ, ಹರೀಶ್ ಪೂಂಜಾ, ಭಾಗೀರಥಿ ಮುರುಳ್ಯ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರತ್ತಿತರರು ರಾಜಕೀಯ ನೇತಾರರು, ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ವಿಶೇಷ ಆಕರ್ಷಣೆಯಾಗಿ ನಾಯಕ ನಟರಾದ ಪ್ರಜ್ವಲ್ ದೇವರಾಜ್, ಕಾರ್ತಿಕ್ ಜಯರಾಮ್, ನಟಿಯರಾದ ಸೋನು ಗೌಡ, ನೇಹಾ ಗೌಡ, ನಟರಾದ ಗುರುನಂದನ್, ಅರವಿಂದ ಬೋಳಾರ್, ಅರ್ಜುನ್ ಕಾಪಿಕಾಡ್, ರೂಪೇಶ್ ಶೆಟ್ಟಿ, ಚಂದನ್ ಗೌಡ ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ ಮಾಣಿಸಾಗು ಉಮೇಶ್ ಶೆಟ್ಟಿ (ಕಂಬಳ), ಕೇಶವ ಗೌಡ (ಉದ್ಯಮ), ರವೀಂದ್ರ ಶೆಟ್ಟಿ ನುಳಿಯಾಲು (ಧಾರ್ಮಿಕ), ದೀಪಕ್ ರೈ ಪಾಣಾಜೆ (ನಟ), ಜೈಗುರು ಆಚಾರ್ ಹಿಂದಾರ್ (ಹೈನುಗಾರಿಕೆ), ಕಡಬ ಶ್ರೀನಿವಾಸ ರೈ (ಯಕ್ಷಗಾನ) ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಜ.28 ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸಂಚಾಲಕ ವಸಂತ ಕುಮಾರ್ ರೈ, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.
Posted by Vidyamaana on 2024-03-04 21:07:16 |
ನವದೆಹಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಜುಬಿನ್ ಇರಾನಿ ಭಾನುವಾರ ಹಜ್ ಸುವಿಧಾ ಆಯಪ್ ಅನ್ನು ಬಿಡುಗಡೆ ಮಾಡಿದರು, ಇದು ವಾರ್ಷಿಕ ಹಜ್ ತೀರ್ಥಯಾತ್ರೆಯನ್ನು ಪ್ರಾರಂಭಿಸುವವರಿಗೆ ತರಬೇತಿ ಮಾಡ್ಯೂಲ್ಗಳು, ವಿಮಾನ ವಿವರಗಳು ಮತ್ತು ವಸತಿಯಂತಹ ಪ್ರಮುಖ ಸೇವೆಗಳಿಗೆ ಅಗತ್ಯ ಮಾಹಿತಿ ಮತ್ತು ನೇರ ಪ್ರವೇಶವನ್ನು ಒದಗಿಸುತ್ತದೆ.ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾನ್ ಬಾರ್ಲಾ ಅವರ ಉಪಸ್ಥಿತಿಯಲ್ಲಿ ನವದೆಹಲಿಯ ವಿಜ್ಞಾನ ಭವನದಲ್ಲಿ ಹಜ್ 2024 ರ ಸಿದ್ಧತೆಗಳ ಭಾಗವಾಗಿ ಇರಾನಿ ಎರಡು ದಿನಗಳ ತರಬೇತುದಾರರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 550 ಕ್ಕೂ ಹೆಚ್ಚು ತರಬೇತುದಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.ತರಬೇತುದಾರರ ತರಬೇತಿ ಕಾರ್ಯಕ್ರಮವು ಹಜ್ ಯಾತ್ರಿಕರಿಗೆ ಹೆಚ್ಚಿನ ತರಬೇತಿ ನೀಡುವ ತರಬೇತುದಾರರನ್ನು ಸಂವೇದನಾಶೀಲಗೊಳಿಸಲು ಮತ್ತು ಶಿಕ್ಷಣ ನೀಡಲು ಉದ್ದೇಶಿಸಿದೆ, ಯಾತ್ರಾರ್ಥಿಗಳು ತೃಪ್ತಿದಾಯಕ ಅನುಭವವನ್ನು ಹೊಂದಿದ್ದಾರೆ ಮತ್ತು ತೀರ್ಥಯಾತ್ರೆಯ ವಿವಿಧ ಅಂಶಗಳ ಬಗ್ಗೆ ತಿಳಿದಿದ್ದಾರೆ ಎಂದು ಖಚಿತಪಡಿಸಿಕೊಳ್ಳುತ್ತದೆ. ಹಜ್ ಅನ್ನು ಸುಗಮ ಮತ್ತು ಹೆಚ್ಚು ಆರಾಮದಾಯಕ ಅನುಭವವನ್ನಾಗಿ ಮಾಡುವ ಸರ್ಕಾರದ ಪ್ರಯತ್ನಗಳ ಭಾಗವಾಗಿ, ಇರಾನಿ ಈ ಪ್ರಯೋಜನಕ್ಕಾಗಿ ಹಜ್ ಸುವಿಧಾ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದರು.
ಡಿಜಿಟಲ್ ಮತ್ತು ಮೊಬೈಲ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಹಜ್ ಸುವಿಧಾ ಅಪ್ಲಿಕೇಶನ್ ಯಾತ್ರಾರ್ಥಿಗಳ ಬೆರಳ ತುದಿಯಲ್ಲಿ ತರಬೇತಿ ಮಾಡ್ಯೂಲ್ಗಳು, ವಿಮಾನ ವಿವರಗಳು, ವಸತಿ, ತುರ್ತು ಸಹಾಯವಾಣಿ ಮತ್ತು ಆರೋಗ್ಯದಂತಹ ಪ್ರಮುಖ ಸೇವೆಗಳಿಗೆ ಅಗತ್ಯ ಮಾಹಿತಿ ಮತ್ತು ನೇರ ಪ್ರವೇಶವನ್ನು ಒದಗಿಸುತ್ತದೆ. ಯಾತ್ರಾರ್ಥಿಗಳು ತಮ್ಮ ಆಧ್ಯಾತ್ಮಿಕ ಪ್ರಯಾಣದ ಮೇಲೆ ಉತ್ತಮವಾಗಿ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ ಮತ್ತು ಪ್ರಯಾಣ, ಸಾಮಾನು ಮತ್ತು ದಾಖಲೆಗಳಂತಹ ಪ್ರಾಪಂಚಿಕ ಕಾರ್ಯಗಳನ್ನು ಮರೆತುಬಿಡಬಹುದು. ಯಾತ್ರಾರ್ಥಿಗಳು ತಮ್ಮ ಪ್ರಯಾಣದ ಸಮಯದಲ್ಲಿ ಎದುರಿಸುವ ಸಾಮಾನ್ಯ ಸಮಸ್ಯೆಗಳಿಗೆ ಈ ಅಪ್ಲಿಕೇಶನ್ ಪರಿಹಾರಗಳನ್ನು ನೀಡುತ್ತದೆ ಮತ್ತು ವಿಶೇಷವಾಗಿ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಹಜ್ ಮಾಡುವವರಿಗೆ ವರದಾನವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ
Posted by Vidyamaana on 2023-08-18 05:58:17 |
ಲಖನೌ: ಈ ಕನ್ನಡಿಯಲ್ಲಿ ಎಲ್ಲರೂ ಬೆತ್ತಲೆಯಾಗಿ ಕಾಣಿಸುತ್ತಾರೆ ಎಂಬ ಮೋಸದ ಆಶ್ವಾಸನೆ ಬಲೆಗೆ ಬಿದ್ದ 72 ವರ್ಷದ ವೃದ್ಧನೊಬ್ಬ ಬರೋಬ್ಬರಿ 9 ಲಕ್ಷ ರೂ.. ಕೊಟ್ಟು ಮ್ಯಾಜಿಕ್ ಕನ್ನಡಿ ಖರೀದಿಸಿ ಮೋಸ ಹೋದ ಚಿತ್ರ ವಿಚಿತ್ರವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಮ್ಯಾಜಿಕ್ ಕನ್ನಡಿ ಖರೀದಿಸಿದ ಬಳಿಕ ಇದರಲ್ಲಿ ಯಾವುದೇ ಮ್ಯಾಜಿಕ್ ಇಲ್ಲ, ನನಗೇ ಮ್ಯಾಜಿಕ್ ಮಾಡಿ ವಂಚಿಸಲಾಗಿದೆ ಎಂಬುದು ವೃದ್ಧನ ಅರಿವಿಗೆ ಬಂದಿದೆ. ವಂಚನೆ ಎಸಗಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅವಿನಾಶ್ ಕುಮಾರ್ ಶುಕ್ಲಾ (72) ಎಂಬ ವೃದ್ಧನಿಗೆ ಪಶ್ಚಿಮ ಬಂಗಾಳದ (West Bengal) ಮೂರು ವ್ಯಕ್ತಿಗಳು ಈ ವಂಚನೆ ಎಸಗಿದ್ದು ಇದು ಮ್ಯಾಜಿಕ್ ಕನ್ನಡಿ. ಇದರಲ್ಲಿ ಎಲ್ಲರೂ ಬೆತ್ತಲಾಗಿ ಕಾಣುತ್ತಾರೆ. ಇದು ಭವಿಷ್ಯವನ್ನು ತೋರಿಸುತ್ತದೆ. ಇದನ್ನು ನಾಸಾ ವಿಜ್ಞಾನಿಗಳು (Nasa Scientist) ಬಳಸಿದ್ದಾರೆ ಎಂದು ಸುಳ್ಳು ಹೇಳಿ ಕನ್ನಡಿ ಕೊಳ್ಳುವಂತೆ ಮಾಡಿದ್ದರುಇದನ್ನು ನಂಬಿದ ವೃದ್ಧ 9 ಲಕ್ಷ ರು. ಹಣ ಕೊಟ್ಟು ಕನ್ನಡಿ ಖರೀದಿಸಿ ಮೋಸ ಹೋಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಥ ಸಿಂಗ್ರೇ, ಮೊಲಯ ಸರ್ಕಾರ್, ಸುದೀಪ್ತ ಸಿನ್ಹಾ ರಾಯ್ ಎಂಬ ಮೂವರು ವಂಚಕರನ್ನು ಬಂಧಿಸಲಾಗಿದೆ. ಅಲ್ಲದೇ ಬಂಧಿತರಿಂದ 5 ಮೊಬೈಲುಗಳು, ಅತಿಂದ್ರೀಯ ಶಕ್ತಿ ಪ್ರದರ್ಶಿಸುವ ವಿಡಿಯೋ 28 ಸಾವಿರ ರು.ಗಳನ್ನು ವಶಪಡಿಸಿಕೊಳ್ಳಲಾಗಿದೆ.
Posted by Vidyamaana on 2023-04-14 04:15:49 |
ಪುತ್ತೂರು: ಕಾಂಗ್ರೆಸ್ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದ, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆಯಾಗಿದ್ದ ದಿವ್ಯಪ್ರಭಾ ಚಿಲ್ತಡ್ಕ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಜೆಪಿ ಭವನದಲ್ಲಿ ಜೆಡಿಎಸ್ ಗೆ ಏ ೧೪ರಂದು ಸೇರ್ಪಡೆಗೊಳ್ಳಲಿದ್ದಾರೆ.
ಕಾಂಗ್ರೆಸ್ ಮುಖಂಡೆಯಾಗಿ ಸಮಾಜಮುಖಿಯಾಗಿ ಗುರುತಿಸಿಕೊಂಡಿದ್ದ ದಿವ್ಯಪ್ರಭಾ ಅವರು ಕಾಂಗ್ರೆಸಿನ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದರು. ಆದರೆ ಕೊನೆ ಕ್ಷಣದಲ್ಲಿ ಟಿಕೇಟ್ ಕೈತಪ್ಪುವ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಕಾಂಗ್ರೆಸಿಗೆ ರಾಜೀನಾಮೆ ನೀಡಲಿದ್ದಾರೆ. ಬಳಿಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಮುಖಂಡೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ರವರು ಎಂಎಲ್ಎ ರಘು ಆಚಾರ್ ಹಾಗೂ ಇತರ ಕಾಂಗ್ರೆಸ್ ಮುಖಂಡರ ಜೊತೆ ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
Posted by Vidyamaana on 2024-04-25 22:52:33 |
ಬೆಂಗಳೂರು: ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ ಡ್ರೈವ್ ನಿಮ್ಮದೇ ಎಂದು ರಾಜ್ಯ ಕಾಂಗ್ರೆಸ್ ಘಟಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದೆ.
ಪತ್ರಕರ್ತರೊಂದಿಗೆ ಮಾತನಾಡುವ ವೇಳೆ ಪೆನ್ ಡ್ರೈವ್ ತೋರಿಸುವ ಕುಮಾರಸ್ವಾಮಿ ಅವರ ಹಳೆಯ ವಿಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಈ ಪ್ರಶ್ನೆ ಕೇಳಿದೆ.ರಾಜ್ಯದ ಮಹಿಳೆಯರ ಬಗ್ಗೆ ನಾಲಿಗೆ ಹರಿಬಿಟ್ಟು ದಾರಿ ತಪ್ಪಿದ್ದಾರೆ ಎಂದಿದ್ದ ನೀವು ಯಾಕೆ ಈಗ ಗಾಢ ಮೌನ ವಹಿಸಿದ್ದೀರಿ? ದಾರಿ ತಪ್ಪಿ ನಡೆದವರು ಯಾರು ಎನ್ನುವ ಸಂಗತಿ ಬಟಾಬಯಲಾಗಿರುವಾಗ ರಾಜ್ಯದ ಜನರಿಗೆ ಮುಖ ತೋರಿಸಲಾಗುತ್ತಿಲ್ಲವೇ ಎಂದು ಕಾಂಗ್ರೆಸ್ ಎಕ್ಸ್ನಲ್ಲಿ ಪ್ರಶ್ನೆ ಮಾಡಿದೆ.
Posted by Vidyamaana on 2023-07-06 15:15:50 |
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜು. 7 ರಂದು ಕೂಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
ನೀರು ಇರುವ ತಗ್ಗು ಪ್ರದೇಶ ಕೆರೆ, ನದಿ, ಸಮುದ್ರ ತೀರಕ್ಕೆ ಮಕ್ಕಳು ತೆರಳದಂತೆ ಪಾಲಕರು ಜಾಗ್ರತೆ ವಹಿಸುವುದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ, ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತು ನಿರ್ವಹಣಾ ಕಾರ್ಯ ಕೈಗೊಳ್ಳಬೇಕು, ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳು ಸದಾ ಜಾಗೃತರಾಗಿದ್ದು ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸುವುದು ಮತ್ತು ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದು.
ಪ್ರವಾಸಿಗರು, ಸಾರ್ವಜನಿಕರು ನದಿ, ಸಮುದ್ರ ತೀರಕ್ಕೆ ತೆರಳದಂತೆ ಸೂಚಿಸಲಾಗಿದೆ.
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪ್ರತಿ ತಾಲೂಕುಗಳಲ್ಲಿ ಕಾಳಜಿ ಕೇಂದ್ರವನ್ನು ತೆರೆದು ಸನ್ನದ್ಧ ಸ್ಥಿತಿಯಲ್ಲಿರಿಸಿಕೊಳ್ಳುವುದು.
ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಕಂಟ್ರೋಲ್ ರೂಂ 1077 ಹಾಗೂ ದೂರವಾಣಿ: 0824 – 2442590 ಸಂಪರ್ಕಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ