Posted by vidyamaana on 2024-07-24 23:15:54 |
ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯಕ್ಕೆ ಯುವತಿಯೋರ್ವಳನ್ನು ಯುವಕನೋರ್ವ ಬೈಕ್ ನಲ್ಲಿ ಕಾಡಿಗೆ ಕರೆದುಕೊಂಡು ಬಂದಿದ್ದು, ಈ ಬಗ್ಗೆ ತಿಳಿಯುತ್ತಲೇ ಹಲವಾರು ಮಂದಿ ಕಾಡಿನಲ್ಲಿ ಹುಡುಕಾಡಿದ್ದಾರೆನ್ನಲಾಗಿದೆ.
ಜನ ಸೇರುತ್ತಿದ್ದಂತೆ ಅರೆ ನಗ್ನ ಸ್ಥಿತಿಯಲ್ಲಿ ಬೈಕ್, ಬಟ್ಟೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಯುವಕ-ಯುವತಿ ಪರಾರಿಯಾಗಿದ್ದಾರೆನ್ನಲಾಗಿದೆ.
ಸಾರ್ವಜನಿಕರ ಮಾಹಿತಿ ಹಿನ್ನಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾಡಿನಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ಮಾತ್ರೆಗಳು, ಕಾಂಡೋಮ್, ಚಪ್ಪಲಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
Posted by Vidyamaana on 2023-10-09 21:08:02 |
ಬೆಳ್ತಂಗಡಿ : ಕಳೆಂಜ ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ವಾಸವಾಗಿರುವ ಸುಮಾರು ನೂರಕ್ಕೂ ಹೆಚ್ಚು ಮನೆಗಳಿರುವ ಪ್ರದೇಶದಲ್ಲಿ ತಮ್ಮ ಪೂರ್ವಜರ ಕಾಲದಿಂದಲೂ ಕೃಷಿ ಮಾಡಿಕೊಂಡು ಬಂದಿರುವ ಜಾಗದಲ್ಲಿ ಮನೆಕಟ್ಟಲು ಹಾಕಿದ್ದ ಅಡಿಪಾಯವನ್ನು ಏಕಾಏಕಿ ಕಳೆಂಜದ ದೇವಣ್ಣ ಗೌಡರ ಮನೆ ದ್ವಂಸಗೊಳಿಸಲು ಸಜ್ಜಾದ ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜಾ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಅರುಣ್ ಕುಮಾರ್ ಪುತ್ತಿಲ ಹಾಗೂ ಪುತ್ತಿಲ ಪರಿವಾರದ ಪ್ರಮುಖರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಪ್ರತಿಭಟನಾ ನಿರತರಿಗೆ ಸಾಥ್ ನೀಡಿದರು.ಕೊನೆಗೆ ಅರಣ್ಯ ಅಧಿಕಾರಿಗಳು ಸರ್ವೆ ನಡೆಸುವ ಬಗ್ಗೆ ಒಪ್ಪಿಗೆ ಕೊಟ್ಟ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
Posted by Vidyamaana on 2023-07-28 04:23:35 |
ಮಲಪ್ಪುರಂ: ಮಲಪ್ಪುರಂ ಜಿಲ್ಲೆಯ ಪರಪ್ಪನಂಗಡಿ ನಗರಸಭೆಯ 11 ಮಂದಿ ಮಹಿಳಾ ಪೌರಕಾರ್ಮಿಕರ ಅದೃಷ್ಟ ಕೈಹಿಡಿದೆ. ಬುಧವಾರ ನಡೆದ ಡ್ರಾ ನಂತರ ಕೇರಳ ಲಾಟರಿ ಇಲಾಖೆಯು 10 ಕೋಟಿ ರೂಪಾಯಿಗಳ ಮಾನ್ಸೂನ್ ಬಂಪರ್ ವಿಜೇತರನ್ನು ಘೋಷಿಸಿದ್ದು 11 ಮಂದಿ ಮಹಿಳಾ ಪೌರ ಕಾರ್ಮಿಕರು ವಿಜೇತರಾಗಿದ್ದಾರೆ.ಪರಪ್ಪಂನಂಗಡಿ ನಗರಸಭೆಯ ‘ಹರಿತ ಕರ್ಮ ಸೇನೆ’ಯ 11 ಮಹಿಳೆಯರು ಅಂದರೆ ಒಬ್ಬೊಬ್ಬರು ತಲಾ 25 ರೂ. ಷೇರು ಹಾಕಿ ಟಿಕೆಟ್ ಖರೀದಿಸಿದ್ದರು. ಕುಟ್ಟಿಮಾಲು, ಬೇಬಿ, ಶೋಭಾ, ಪಾರ್ವತಿ, ರಾಧಾ, ಲಕ್ಷ್ಮಿ, ಲೀಲಾ, ಬಿಂದು, ಶೀಜಾ, ಚಂದ್ರಿಕಾ ಮತ್ತು ಕಾರ್ತ್ಯಾಯನಿ ಮಾನ್ಸೂನ್ ಬಂಪರ್ ಪ್ರಥಮ ಬಹುಮಾನ ಪಡೆದವರು.ಮೊದಲು 9 ಮಂದಿ ಸೇರಿ ಲಾಟರಿ ಟಿಕೆಟ್ ಖರೀಸಲು ನೋಡಿದೆವು, ಆದರೆ ಹಣದ ಕೊರತೆಯಿಂದ ಮತ್ತಿಬ್ಬರು ಕಾರ್ಮಿಕರು ಸೇರಿಕೊಂಡರು. ಕೊನೆಗೆ 11 ಮಂದಿ ಸೇರಿದ 250 ರೂಪಾಯಿಯ ಟಿಕೆಟ್ ಖರೀದಿಸಿದೆವು ಎಂದು ಟಿಕೆಟ್ ಖರೀದಿಸಿದ ರಾಧ ತಿಳಿಸಿದ್ದಾರೆ.ಸಾಲಗಳ ಬಾಕಿ, ಮಕ್ಕಳ ಮದುವೆ, ಆಸ್ಪತ್ರೆ, ಚಿಕಿತ್ಸೆಯ ವೆಚ್ಚ ಸೇರಿ ನಾವೆಲ್ಲರೂ ಆರ್ಥಿಕವಾಗಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದೆವು. ಈಗ ಹಣ ಗೆದ್ದಿರುವುದು ಬದುಕಿನಲ್ಲಿ ಹಲವು ಸಮಸ್ಯೆಗಳ ನಿವಾರಣೆಗೆ ನೆರವಾಗಲಿದೆ’ ಎನ್ನುತ್ತಾರೆ ಪೌರಕಾರ್ಮಿಕ ಮಹಿಳೆಯರು.ಟಿಕೆಟ್ ಸಂಖ್ಯೆ MB 200261 ಮೊದಲ ಬಹುಮಾನ 10 ಕೋಟಿ ರೂ. ಬಹುಮಾನದ ಚೀಟಿಯನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಪರಪ್ಪನಂಗಡಿ ಶಾಖೆಗೆ ಹಸ್ತಾಂತರಿಸಲಾಗಿದೆ
Posted by Vidyamaana on 2024-02-19 08:42:36 |
ಬೆಂಗಳೂರು : ರಾಜ್ಯದಲ್ಲಿ 1ನೇ ಏಪ್ರಿಲ್ 2019 ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (High Security Registration Plates - HSRP) ಅಳವಡಿಸುವುದು ಕಡ್ಡಾಯವಾಗಿದ್ದು, ಹೆಚ್ಎಸ್ಆರ್ಪಿ ಅಳವಡಿಕೆಗೆ ಫೆಬ್ರವರಿ 17 ರವರೆಗೆ ನೀಡಲಾಗಿದ್ದ ಕಾಲಾವಕಾಶವನ್ನು ಮೇ 31 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.ಸಾರ್ವಜನಿಕರು ಆನ್ಲೈನ್ ಮೂಲಕ ಹೆಚ್.ಎಸ್.ಆರ್.ಪಿ. ಪಡೆಯಲು ತೊಂದರೆಗಳಾದಲ್ಲಿ ದೂರವಾಣಿ ಸಂಖ್ಯೆ 94498 63429, 94498 63429 ಮೂಲಕ ಸಹಾಯವಾಣಿಯನ್ನು ಕಛೇರಿ ಕಾರ್ಯದ ಸಮಯ ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಸಂಪರ್ಕಿಸಬಹುದಾಗಿದೆ.
ಸಾರ್ವಜನಿಕರು https://transport.karnataka.gov.in ಅಥವಾ www.siam.in ಗೆ ತಮ್ಮ ವಾಹನಗಳಿಗೆ ನೋಂದಣಿ ಫಲಕಗಳನ್ನು ಅಳವಡಿಸಿಕೊಳ್ಳಲು ಆನ್ಲೈನ್ ಮೂಲಕ ವಿವರಗಳನ್ನು ಒದಗಿಸಿ ಹೆಚ್ಎಸ್ಆರ್ಪಿ ಅಳವಡಿಸುವ ದಿನಾಂಕ, ವಾಹನ ಡೀಲರ್ ಕೇಂದ್ರದ ಹೆಸರು ಮತ್ತು ವಿಳಾಸವನ್ನು ಖಚಿತ ಪಡಿಸಿಕೊಳ್ಳುವಂತೆ ತಿಳಿಸಲಾಗಿದೆ.ಈ ವೆಬ್-ಸೈಟ್ ಮೂಲಕ ಹೆಚ್ಎಸ್ಆರ್ಪಿ ಅಳವಡಿಸಿದ್ದಲ್ಲಿ ಮಾತ್ರ ಹೆಚ್ಎಸ್ಆರ್ಪಿ ನೋಂದಣಿ ಫಲಕಗಳು ಮಾನ್ಯತೆ ಹೊಂದಿರುತ್ತವೆ. ಇನ್ನಿತರೆ ಯಾವುದೇ ವೆಬ್ ಪೋರ್ಟಲ್ ಉಪಯೋಗಿಸಿ ಬುಕ್ ಮಾಡಿದ್ದಲ್ಲಿ ಅವುಗಳು ಅನಧಿಕೃತ ನೋಂದಣಿ ಫಲಕಗಳಾಗುತ್ತವೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Posted by Vidyamaana on 2023-05-02 23:02:43 |
ಪುತ್ತೂರು; ನಾನು ಬಿಜೆಪಿಯಲ್ಲಿರುವಾಗಲೇ ಕಳೆದ ಹಲವು ವರ್ಷಗಳಿಂದ ಉದ್ಯಮ ನಡೆಸುತ್ತಿದ್ದೇನೆ. ನಾನು ಮಾಡುವ ಎಲ್ಲಾ ವ್ಯವಹಾರವೂ ಪ್ರಾಮಾಣಿಕವಾಗಿಯೇ ಮಾಡುತ್ತಿದ್ದೇನೆ, ಸರಕಾರಕ್ಕೆ ಪಾವತಿಸಬೇಕಾದ ಎಲ್ಲಾ ತೆರಿಗೆಗಳನ್ನು ಸರಿಯಾದ ಸಮಯಕ್ಕೆ ಪಾವತಿಮಾಡುತ್ತಿದ್ದೇನೆ ಇದೆಲ್ಲವೂ ಬಿಜೆಪಿಗರಿಗೆ ಗೊತ್ತಿದೆ. ಇದೆಲ್ಲವೂ ಗೊತ್ತಿದ್ದೂ ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹವಾ ಕಂಡು ಬೆದರಿದ ಬಿಜೆಪಿ ನನ್ನ ಮನೆಯ ಮೇಲೆ ಐ ಟಿ ದಾಳಿ ನಡೆಸಿ ನನ್ನನ್ನು ಕಟ್ಟಿಹಾಕುವ ಕೆಲಸವನ್ನು ಮಾಡಿದ್ದಲ್ಲದೆ ನನಗೆ ಮಾನಸಿಕ ಕಿರುಕುಳ ನೀಡುವ ಕೆಲಸವನ್ನು ಮಾಡುತ್ತಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಸಭೆಯಲ್ಲಿ ಕಣ್ಣೀರು ಹಾಕಿದ ಘಟನೆ ವಿಟ್ಲ ವ್ಯಾಪ್ತಿಯ ಚಂದಳಿಕೆಯಲ್ಲಿ ನಡೆದಿದೆ.
ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ ಯವರ ಅಧ್ಯಕ್ಷತೆಯಲ್ಲಿ ಚಂದಳಿಕೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಅಶೋಕ್ ರೈ ನನ್ನ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೆಯಲ್ಲೆಲ್ಲಾ ಹುಡುಕಾಡಿ ಮನೆಯಲ್ಲಿದ್ದ ೧,೮೯೦೦೦ ರೂವನ್ನು ಕೊಂಡೊಯ್ದಿದ್ದಾರೆ. ನಾನು ಮನೆಯಲ್ಲಿ ಕೋಟಿಗಟ್ಟಲೆ ಹಣ ಇಟ್ಟಿದ್ದೇನೆ ಎಂಬ ತಪ್ಪು ಮಾಹಿತಿಯನ್ನು ಬಿಜೆಪಿಯೇ ನೀಡಿದೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದು ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಕಳೆದ ಕೆಲವು ದಿನಗಳಿಂದ ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯದಲ್ಲಿ ಮಗ್ನನಾಗಿದ್ದೇನೆ. ನಾವು ಹೋದಲ್ಲೆಲ್ಲಾ, ಸಭೆ ನಡೆಸಿದಲ್ಲೆಲ್ಲಾ ಅಭೂತ ಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದೆ ಇದನ್ನು ಕಂಡು ಸಹಿಸದ ಬಿಜೆಪಿ ಈ ಕೃತ್ಯಕ್ಕೆ ಕೈ ಹಾಕಿದೆ ಎಂದು ಹೇಳಿ ಭಾವುಕರಾದ ಅವರು ಮಾತನಾಡುತ್ತಲೇ ನೋವು ತಡೆಯಲಾರದೆ ಕಣ್ಣೀರು ಹಾಕಿದರು. ನಾನು ಯಾರಿಗೂ ಅನ್ಯಾಯ ಮಾಡಿಲ್ಲ, ಸರಕಾರದ , ಇಲಾಖೆಯ ಕಣ್ಣು ತಪ್ಪಿಸಿ ವ್ಯವಹಾರ ಮಾಡಿಲ್ಲ. ನಾನು ನನ್ನ ಉದ್ದಿಮೆಯ ಒಂದು ಪಾಲು ಬಡವರಿಗೆ ದಾನವಾಗಿ ನೀಡಿದ್ದೇನೆ ಅದೇ ಬಡವನ ಆಶೀರ್ವಾದದಿಂದ ನನಗೆ ಎಷ್ಟೇ ಕಿರುಕುಳ ಕೊಟ್ಟರೂ ಧೈರ್ಯವಾಗಿ ಮುನ್ನಡೆಯುತ್ತಿದ್ದೇನೆ. ಬಡ ಜೀವಗಳ ಆಶೀರ್ವಾದ ಇರುವ ತನಕ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿಗರು ಅರಿತುಕೊಳ್ಳಬೇಕು ಎಂದು ಹೇಳಿದರು.
ಅಭಿವೃದ್ದಿ ಕೆಲಸ ಮಾಡಿದ್ದರೆ ಚರ್ಚೆಗೆ ಬನ್ನಿಬಿಜೆಪಿ ಶಾಸಕರು ಕಳೆದ ಐದು ವರ್ಷಗಳಿಂದ ಮಾಡಿದ ಅಭಿವೃದ್ದಿ ಕಾರ್ಯ ಏನು ಎಂಬುದನ್ನು ಜನರ ಮುಂದೆ ಇಡಿ, ಆ ವಿಚಾರದಲ್ಲಿ ನಾನು ಚರ್ಚೆ ಮಾಡುವ. ಜಿಲ್ಲೆಯಲ್ಲಿ ಏಳುಮಂದಿ ಶಾಸಕರು, ಇಬ್ಬರು ಮಂತ್ರಗಳಿದ್ದರೂ ಒಬ್ಬ ಬಡವನಿಗೆ ಸೂರು ಕಲ್ಪಿಸಲು ಸಾಧ್ಯವಾಗಿಲ್ಲ, ಬಡವನ ಮನೆಯನ್ನು ಬೆಳಗಿಸಲು ಸಾಧ್ಯವಾಗಿಲ್ಲ. ಅಭಿವೃದ್ದಿ ಕೆಲಸ ಮಾಡದೆ ಚುನವಣೆ ಸಂದರ್ಭದಲ್ಲಿ ಎದುರಾಳಿ ಅಭ್ಯರ್ಥಿಗೆ ಐಟಿ ದಾಳಿ ಮಾಡಿಸುವುದು, ನನ್ನ ಸಿಬಂದಿಗಳನ್ನು ದಿಗ್ಬಂದನದಲ್ಲಿರಿಸುವ ಕೆಲಸಕ್ಕೆ ಯಾಕೆ ಕೈ ಹಾಕುತ್ತೀರಿ. ಅಭಿವೃದ್ದಿ ಮಾಡಿದ್ದರೆ ಧೈರ್ಯವಾಗಿ ಬನ್ನಿ ಎಂದು ಬಿಜೆಪಿಗೆ ಸವಾಲು ಹಾಕಿದರು. ವಿಟ್ಲ- ಕಬಕ ರಸ್ತೆಯನ್ನು ೬೦% ನಲ್ಲಿ ಡಾಮರೀಕರಣ ಮಾಡಲಾಗಿದೆ. ಈ ಬಾರಿಯ ಮಳೆಗಾಲದಲ್ಲಿ ಡಾಮಾರು ಕೊಚ್ಚಿ ಹೋಗಬಹುದು, ವಿಟ್ಲದಲ್ಲಿ, ಪುತ್ತೂರಿನಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ, ರಿಂಗ್ ರೋಡ್ ಮಾಡುವುದಾಗಿ ಹೇಳಿದವರು ಕಮಿಷನ್ ಪಡೆದು ತನ್ನ ಹಾಗೂ ತನ್ನ ಕುಟುಮಬದವರ ಕೈ ಬೆರಳಿಗೆ ಚಿನ್ನದ ರಿಂಗ್ ಹಾಕಿಸಿದ್ದು ಬಿಟ್ಟರೆ ಏನೂ ಅಭಿವೃದ್ದಿ ಕೆಲಸ ಮಾಡಿಲ್ಲ ಎಂದು ಹೇಳಿದರು.
ಬಡವರಿಗೆ ನೆರವು ನೀಡುವೆ ತಾಕತ್ತಿದ್ದರೆ ತಡೆಯಿರಿನಾನು ಬಡವರ ಸಮಾಜ ಸೇವೆ ಮಾಡಲೆಂದೇ ಚುನಾವಣಾ ಆಖಾಡಕ್ಕೆ ಇಳಿದಿದ್ದೇನೆ. ಕಳೆದ ೧೨ ವರ್ಷಗಳಿಂದ ಇದನ್ನೇ ಮಾಡುತ್ತಿದ್ದೇನೆ ಸಮಾಜ ಸೇವೆಯಲ್ಲಿ ನನಗೆ ಅತ್ಮ ತೃಪ್ತಿ ಇದೆ ಇದನ್ನು ತಡೆಯುವ ತಾಕತ್ತಿದ್ದರೆ ಬಂದು ತಡೆಯಿರಿ ಎಂದು ಬಿಜೆಪಿಗರಿಗೆ ಸವಾಲು ಹಾಕಿದರು. ತಾನು ಶಾಸಕನಾದಲ್ಲಿ ಬಡವರ ಮನೆಗೆ ಅಧಿಕಾರಿಗಳನ್ನು ಕಳಿಸಿ ಅವರ ಕೆಲಸವನ್ನು ಮಾಡಿಸುತ್ತೇನೆ. ಜನಪ್ರತಿನಿಧಿಯಾದವ ಜನಸೇವೆ ಮಾಡಬೇಕೇ ವಿನಾ ಸರಕಾರದ, ಜನರ ಸೊತ್ತನ್ನು ಲೂಟಿ ಹೊಡೆಯುವುದಲ್ಲ, ಮೋಜು ಮಸ್ತಿ ಮಾಡುವುದಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ ಅಶೋಕ್ ರೈ ಜನರ ಸೇವೆ ಮಾಡಲು ಸಾಧ್ಯವಾಗದ ಜನಪ್ರತಿನಿಧಿ ಚುನಾವಣೆಗೆ ಸ್ಪರ್ದಿಸಬಾರದು ಎಂದು ಹೇಳಿದರು.
೮ ಊಟದ ಲೆಕ್ಕವನ್ನು ತನಿಖೆ ಮಾಡಿದ ಮಠಂದೂರು ಇಂದಿರಾ ಕ್ಯಾಂಟೀನ್ ಬಂದ್ ಮಾಡಿಸಿದ್ದು ಯಾಕೆ; ಶಕುಂತಳಾ ಶೆಟ್ಟಿ
ಎಂಟು ಊಟ ಯಾರಿಗೆ ಕೊಟ್ಟಿದ್ದು ಎಂಬುದರ ತನಿಖೆ ಮಾಡಬೇಕು ಎಂದು ಹೇಳಿದ್ದ ಶಾಸಕ ಸಂಜೀವ ಮಠಂದೂರುರವರು ಬಡವರ ಇಂದಿರಾ ಕ್ಯಾಂಟೀನ್ ಬಂದ್ ಮಾಡಿಸಿದ್ದು ಯಾಕೆ? ಬಡವರು ಕನಿಷ್ಠ ದರಕ್ಕೆ ಊಟ ಮಾಡಬಾರದು ಎಂಬುದೇ ಬಿಜೆಪಿಯ ಉದ್ದೇಶವಾಗಿತ್ತು. ಕಾಂಗ್ರೆಸ್ ಸರಕರ ಜಾರಿಗೆ ತಂದಿದ್ದ ಎಲ್ಲಾ ಜನಪ್ರ ಯೋಜನೆಗಳನ್ನು ಬಂದ್ ಮಾಡಿದ್ದ ಬಿಜೆಪಿ ಮಕ್ಕಳಿಗೆ ಕೊಡುವ ಹಾಲು, ಮೊಟ್ಟೆ, ಶೂ ಭಾಗ್ಯ ಎಲ್ಲವನ್ನೂ ಬಂದ್ ಮಾಡಿದ್ದರು. ಬಿಜೆಪಿಗೆ ಮಾನವೀಯತೆ ಇದ್ದರೆ ಆಕೆಲಸ ಮಾಡುತ್ತಿದ್ರ ಎಂದು ಪ್ರಶ್ನಿಸಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಬಿಜೆಪಿಗರ ಅಮಾನವೀಯ ಕೃತ್ಯಗಳು ಮಿತಿಮೀರಿದ್ದು ಇದು ಇಂದು ಶಾಸಪವಾಗಿ ಅವರಿಗೆ ತಟ್ಟಿದೆ ಎಂದು ಹೇಳಿದರು. ಬೆಲೆ ಏರಿಕೆ ಮಾಡಿ ಬಡವರನ್ನು ಸುಲಿಗೆ ಮಾಡುತ್ತಿರುವ ಬಿಜೆಪಿಗೆ ಹಸಿದವನ ಕಣ್ಣೀರ ಒಂದೊಂದು ಹನಿಗಳೂ ಅವರಿಗೆ ಕಂಟಕವಾಗಿ ಚುಚ್ಚಲಿದೆ ಎಂಬುದನ್ನು ಅರಿತುಕೊಂಡರೆ ಉತ್ತಮ ಎಂದು ಹೇಳಿದ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯಾ ಬ್ಯಾಂಕನ್ನು ಮಾರ್ವಾಡಿಗಳ ಮುಳುಗುತ್ತಿದ್ದ ಬ್ಯಾಂಕ್ ಜೊತೆ ಮಾಡಿದೆ ವಿಜಯಾ ಬ್ಯಾಂಕ್ ಯಾವಾಗ ಮುಳುಗುತ್ತದೋ ಆದೇವರೇ ಬಲ್ಲ ಎಂದು ಹೇಳಿದರು. ಭೂ ಮಸೂದೆ ಕಾನೂನಿನಲ್ಲಿ ಭೂಮಿ ದೊರೆತ ಮನೆಯ ಯಜಮಾನನ ಮಕ್ಕಳು ಇಂದು ಭೂಮಿ ಕೊಟ್ಟ ಕಾಂಗ್ರೆಸ್ಸನ್ನು ಮರೆತು ಕೇಸರಿ ಶಾಲು ಹಾಕಿ ಬಿಜೆಪಿ ಜೊತೆ ಹೆಜ್ಜೆ ಹಾಕುತ್ತಿರುವುದು ಖೇದಕರ ಸಂಗತಿ ಎಂದು ಹೇಳಿದರು.
ವಿಟ್ಲ ಪಟ್ಟಣ ಪಂಚಾಯತ್ ದುರಾವಸ್ಥೆಯಿಂದ ಕೂಡಿದೆ: ಹೇಮನಾಥ ಶೆಟ್ಟಿ
ವಿಟ್ಲ ಪಟ್ಟಣಪಂಚಾಯತ್ಗೆ ಚುನಾವಣೇ ನಡೆದು ಹಲವು ತಿಂಗಳುಗಳೇ ಕಳೆದರೂ ಇನ್ನೂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಚುನಾಯಿತ ಸದಸ್ಯರು ಯಾವುದೇ ಕೆಲಸವನ್ನು ಮಾಡದಂತ ಸನ್ನಿವೇಶ ನಿರ್ಮಾಣವಾಗಿದೆ. ವಿಟ್ಲದಲ್ಲಿರುವ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಒಳಚರಂಡಿ ಇಲ್ಲದೆ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇಲ್ಲದೆ ಜನ ಕಂಗೆಟ್ಟಿದ್ದಾರೆ. ಬಿಜೆಪಿಗೆ ಮತ ಕೊಟ್ಟ ಮತದಾರ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಆರೋಪಿಸಿದರು. ಈ ಬರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಗೆ ಗೆಲುವಾಗಲಿದೆ. ಇದನ್ನು ಕಂಡು ಬಿಜೆಪಿ ಬೆರಗಾಗಿದೆ. ಬಿಜೆಪಿಯವರ ಕೈಯ್ಯಲ್ಲಿದ್ದ ಹಿಂದುತ್ವವನ್ನು ಪಕ್ಷೇತರ ಅಭ್ಯರ್ಥಿ ಕೊಂಡು ಹೋಗಿದ್ದಾರೆ. ಈಗ ಬಿಜೆಪಿಯನ್ನು ಹಿಂಧೂ ಸಂಗಟನೆಗಳು ದೂರುತ್ತಿದೆ, ಹಿಂದೂ ಸಂಘಟನೆಗಳನ್ನು ಬಿಜೆಪಿ ತೆಗಳುವ ಕೆಲಸವನ್ನು ಮಾಡುತ್ತಿದೆ ಇದೆಲ್ಲವೂ ಶಾಫದ ಪರಿಣಾಮವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕೆಪಿಸಿಸಿ ಸದಸ್ಯರಾದ ಎಂ ಎಸ್ ಮಹಮ್ಮದ್, ಹಿರಿಯ ಕಾಂಗ್ರೆಸ್ ಮುಖಂಡ ದೇಜಪ್ಪ ಸೇರಿದಂತೆ ಹಲವು ಮಂದಿ ಕಾಂಗ್ರೆಸ್ ನಾಯಕರುಗಳು ಉಪಸ್ತಿತರಿದ್ದರು.
Posted by Vidyamaana on 2024-08-05 22:01:09 |
ಮುಂಬೈ :ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನಡೆಯಲು ಆಗದಷ್ಟು ಫುಲ್ ಟೈಟಾಗಿ ತೂರಾಡಿದ್ದಾರೆ.ಅವರು ನಡೆಯಲು ಕಷ್ಟಪಡುತ್ತಿರುವ ಮತ್ತು ಸರಿಯಾಗಿ ನಿಲ್ಲಲು ಸಾಧ್ಯವಾಗದೇ ಬೈಕ್ ಹಿಡಿದುಕೊಂಡು ನಿಲ್ಲಲು ಪ್ರಯತ್ನಿಸಿದ ವಿಡಿಯೋ ವೈರಲ್ ಆಗಿದೆ.
ಕಾಂಬ್ಳಿ ಅವರು ನಡೆಯಲು ಕಷ್ಟಪಡುವುದನ್ನು ನೋಡಲಾಗದ ಕೆಲವರು ಅವರಿಗೆ ಸಹಾಯ ಮಾಡಿದ್ದಾರೆ. ಘಟನೆಯ ವೀಡಿಯೊವನ್ನು ಹಲವಾರು ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
2013ರಲ್ಲಿ ಚೆಂಬೂರಿನಿಂದ ವಾಹನ ಚಲಾಯಿಸಿಕೊಂಡು ಬರುತ್ತಿದ್ದಾಗ ಕಾಂಬ್ಳಿ ಅವರಿಗೆ ಹೃದಯಾಘಾತವಾಗಿತ್ತು. ಪೊಲೀಸ್ ಅಧಿಕಾರಿಯೊಬ್ಬರು ಲೀಲಾವತಿ ಆಸ್ಪತ್ರೆಗೆ ಕರೆದೊಯ್ದು ಪ್ರಾಣ ಉಳಿಸಿದ್ದರು. 52 ವರ್ಷ ವಯಸ್ಸಿನ ಅವರು ತಮ್ಮ ಎರಡು ಬ್ಲಾಕ್ ಅಪಧಮನಿಗಳಲ್ಲಿ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದರು.
ಕಾಂಬ್ಳಿ ತಮ್ಮ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ದೇಶೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಸಮೃದ್ಧ ರನ್ ಗಳಿಸುತ್ತಿದ್ದರು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಎಡಗೈ ಆಟಗಾರ ಕಾಂಬ್ಳಿ 129 ಪಂದ್ಯಗಳಲ್ಲಿ 9965 ರನ್ಗಳಿಗೆ 59.67 ಸರಾಸರಿ ಹೊಂದಿದ್ದರು.
Posted by Vidyamaana on 2023-12-11 16:02:30 |
ಮಡಿಕೇರಿ: ಕೇರಳದ (Kerala) ಮಾಜಿ ಯೋಧರೊಬ್ಬರಿಗೆ (Soldier) ಮದುವೆ ಮಾಡಿಸುವುದಾಗಿ ನಂಬಿಸಿ 8 ಲಕ್ಷ ರೂ. ನಗದು ಹಾಗೂ 2,00,000 ರೂ. ಚೆಕ್ ಪಡೆದು ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಕೊಡಗು (Kodagu) ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳದ ನಿವಾಸಿ ಅಬ್ದುಲ್ ಬಶೀರ್ (29) ಕಡಬದ ನಿವಾಸಿ ಸಾಧಿಕ್ (30) ಹಾಗೂ ಮತ್ತೊಬ್ಬ ಆರೋಪಿ ಫೈಸಲ್, ಈಗಾಗಲೇ ಬೇರೊಂದು ಪ್ರಕರಣದಲ್ಲಿ ಮೈಸೂರಿನಲ್ಲಿ ಬಂಧನವಾಗಿದ್ದಾನೆ. ಬಂಧಿತ ಆರೋಪಿಗಳಿಂದ ಮೊಬೈಲ್, ನಗದು ಹಾಗೂ ಚೆಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿ ಅಮೀರ್ ತಲೆಮರೆಸಿಕೊಂಡಿದ್ದಾನೆ. ಏನಿದು ಘಟನೆ?
ಕೇರಳದ ಎರ್ನಾಕುಲಂ (Ernakulam) ಜಿಲ್ಲೆಯ ನಿವಾಸಿ ಮಾಜಿ ಯೋಧ ಜಾನ್ ಮೇಥಿವ್ (64) ಅವರಿಗೆ ಮದುವೆಯಾಗಲು ಒಳ್ಳೆಯ ಒಂದು ಹುಡುಗಿ ಇದ್ದಾಳೆ ಎಂದು ಹೇಳಿ ಅವರನ್ನು ನವೆಂಬರ್ 26ರಂದು ಮಡಿಕೇರಿಯ ಹೋಂ ಸ್ಟೇ (Home Stay) ಒಂದಕ್ಕೆ ಕರೆಸಿಕೊಂಡು ಅಲ್ಲಿ ಮಹಿಳೆ ಒಬ್ಬಳನ್ನು ತೋರಿಸಿ ಇವರನ್ನು ವಿವಾಹವಾಗುವಂತೆ ಹೇಳಿ ಅದೇ ಹೋಂ ಸ್ಟೇನಲ್ಲಿ ಆರೋಪಿಗಳು ಮದುವೆ ಮಾಡಿಸಿ ಇಬ್ಬರನ್ನೂ ಹೋಂ ಸ್ಟೇಯಲ್ಲಿ ಅಂದು ತಂಗಲು ಅವಕಾಶ ನೀಡಿದ್ದರು. ನಂತರ ಸಂಜೆ ಆರೋಪಿಗಳು ಇವರಿಬ್ಬರ ಜೊತೆಯಲ್ಲಿರುವ ಮದುವೆಯ ಫೋಟೋವನ್ನು ಜಾನ್ ಅವರಿಗೆ ತೋರಿಸಿ ಬ್ಲ್ಯಾಕ್ಮೇಲ್ ಮಾಡಿ ಒಟ್ಟು 8 ಲಕ್ಷ ನಗದು ಹಾಗೂ 2 ಲಕ್ಷ ರೂ. ಚೆಕ್ ಅನ್ನು ಪಡೆದು ಆರೋಪಿಗಳು ಪರಾರಿಯಾಗಿದ್ದರು.ನಂತರ ಮೋಸ ಹೋಗಿದ ಮಾಜಿ ಯೋಧ ಜಾನ್ ಮಡಿಕೇರಿ ಪೊಲೀಸರಿಗೆ ನೀಡಿದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಅವರಿಂದ ನಗದು ಹಾಗೂ 3 ಮೊಬೈಲ್, ಚೆಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಮಡಿಕೇರಿ ಡಿವೈಎಸ್ಪಿ ಬಿ.ಜಗದೀಶ್ ಎಂ, ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ, ಡಿಸಿಆರ್ಬಿ, ಇನ್ಸ್ಪೆಕ್ಟರ್ ಐಪಿ ಮೇದಪ್ಪ, ನಗರ ಠಾಣಾಧಿಕಾರಿ ಲೋಕೇಶ್, ಪೊಲೀಸ್ ಸಿಬ್ಬಂದಿ ಹಾಗೂ ಮಹಿಳಾ ಸಿಬ್ಬಂದಿ ಭಾಗವಹಿಸಿದ್ದರು.