Posted by vidyamaana on 2023-06-29 12:19:28 |
ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.
ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು, ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು.
ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು. ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು.
ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು.
ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ ಮುಸ್ಲಿಂ ಮಗುವೊಂದು ಮೃತಪಟ್ಟಿದೆ.
ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.
Posted by Vidyamaana on 2024-05-08 13:59:51 |
ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿಯು 2024ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶವನ್ನು ನಾಳೆ ಬೆಳಗ್ಗೆ 10.30 ಗಂಟೆಗೆ ಪ್ರಕಟಿಸಲಿದೆ.ರಾಜ್ಯಾದ್ಯಂತ 10 ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಕೆಎಸ್ಇಎಬಿ 10 ನೇ ತರಗತಿ ಫಲಿತಾಂಶಗಳನ್ನು ಕರ್ನಾಟಕ ಫಲಿತಾಂಶಗಳ ಅಧಿಕೃತ ವೆಬ್ಸೈಟ್ನಲ್ಲಿ karresults.nic.in ನಲ್ಲಿ ಪರಿಶೀಲಿಸಬಹುದು.
ನೇರ ಲಿಂಕ್ ಅನ್ನು kseab.karnataka.gov.in ನಲ್ಲಿ ಪರಿಶೀಲಿಸಬಹುದು.ರಾಜ್ಯಾದ್ಯಂತ ಸುಮಾರು 8 ಲಕ್ಷ ಅಭ್ಯರ್ಥಿಗಳು ಕರ್ನಾಟಕ 10 ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾಗಿದ್ದರು.
Posted by Vidyamaana on 2023-07-31 15:58:06 |
ಪುತ್ತೂರು: ಮನೆಯನ್ನು ಟಾರ್ಗೆಟ್ ಮಾಡಿ, ಹೊಂಚು ಹಾಕಿ ಸಂಚು ರೂಪಿಸಿ, ಕನ್ನ ಹಾಕುವ ಹೊರರಾಜ್ಯದ ಕಳ್ಳರ ತಂಡ ಪುತ್ತೂರಿಗೆ ಎಂಟ್ರಿ ನೀಡಿದೆ! ಹಾಗಾಗಿ ನಿಮ್ಮ ಮನೆಗೆ ಬೀಗ ಹಾಕಿ, ಹೊರಗಡೆ ಹೋಗುವಾಗ ಎಚ್ಚರ ವಹಿಸಿ.
ಅರೆ! ಹೊರರಾಜ್ಯದ ಕಳ್ಳರ ಗುಂಪು ನಮ್ಮ ಮನೆಯೊಳಗೆ ಹೇಗೆ ಬರುವುದು? ನಮ್ಮ ಮನೆಯೊಳಗೆ ಏನಿದೆ ಎಂದು ಅವರಿಗೆ ತಿಳಿಯುವುದಾದರೂ ಹೇಗೆ? ಎಂಬಿತ್ಯಾದಿ ಪ್ರಶ್ನೆ ನಿಮ್ಮ ಮನದೊಳಗೆ ಮೂಡಬಹುದು. ಹೀಗೆಂದು ಹೇಳಿ, ಕಳ್ಳರ ತಂಡವನ್ನು ಉಪೇಕ್ಷೆ ಮಾಡದಿರಿ. ಕಾರಣ, ಪುತ್ತೂರು ಪೇಟೆಯಲ್ಲಿ ಹಾಡಹಗಲೇ ಮನೆಯೊಂದಕ್ಕೆ ನುಗ್ಗಿರುವ ಕಳ್ಳರು, ಸ್ವಲ್ಪದರಲ್ಲೇ ಎಸ್ಕೇಪ್ ಆಗಿದ್ದಾರೆ.
ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ಕಳ್ಳರು ಒಂದು ಸಣ್ಣ ಸುಳಿವನ್ನು ಬಿಟ್ಟುಹೋಗಿಲ್ಲ. ಹೆಚ್ಚೇಕೆ, ಕಳ್ಳರ ಕೈಬೆರಳಿನ ಗುರುತೂ ಪತ್ತೆಯಾಗಿಲ್ಲ. ಹಾಗೆಂದು ಬಂಗಲೆಯಂತಹ ಮನೆ ಪೂರ್ತಿ ತಡಕಾಡಿದ್ದಾರೆ. ಕೈಗೆ ಸಿಕ್ಕ ಸಣ್ಣ ಪುಟ್ಟ ವಸ್ತುಗಳನ್ನು ದೋಚಿದ್ದಾರೆ. ಮಾತ್ರವಲ್ಲ, ಮನೆಯಲ್ಲಿ ಕೃತ್ಯದ ಸಚಿತ್ರ ಮಾಹಿತಿ ನೀಡಬೇಕಿದ್ದ ಸಿಸಿ ಕ್ಯಾಮರಾದ ಇಡೀಯ ಸೆಟ್ಟನ್ನೇ ಹೊತ್ತೊಯ್ದಿದ್ದಾರೆ. ಅಚ್ಚರಿ ಪಡಬೇಕಾದ ವಿಚಾರವೇನೆಂದರೆ, ಮನೆಯ ಬಾಗಿಲನ್ನು ಗ್ಯಾಸ್ ಕಟ್ಟರಿನಂತಹ ಆಯುಧದಿಂದ ತುಂಡರಿಸಿ ಒಳ ನುಗ್ಗುತ್ತಾರೆ ಎನ್ನುವುದು. ಸೋಮವಾರ ಮನೆಯೊಳಗೆ ನುಗ್ಗಿದ ಕಳ್ಳರು, ಮಾಡಿರುವ ರಾದ್ಧಾಂತ ನೋಡಿದರೆ – ಪ್ರೊಫೆಷನಲ್ ಕಳ್ಳರು ಎನ್ನುವುದು ಸ್ಪಷ್ಟ.
ಆದ್ದರಿಂದ ಮನೆಯಿಂದ ಹೊರ ಹೋಗುವಾಗ ಸ್ಥಳೀಯರ ಗಮನಕ್ಕೆ ತನ್ನಿ. ಒಂದು ದಿನ ಮನೆ ಬಿಟ್ಟು ಹೋಗುತ್ತೀರಿ ಎಂದರೆ, ಸ್ಥಳೀಯ ಪೊಲೀಸ್ ಠಾಣೆಯ ಗಮನಕ್ಕೆ ತನ್ನಿ. ಇನ್ನು, ಬೆಲೆಬಾಳುವ ಚಿನ್ನಾಭರಣಗಳನ್ನು ಸೇಫ್ ಲಾಕರಿನಲ್ಲೋ, ಬ್ಯಾಂಕ್ ಲಾಕರಿನಲ್ಲೋ ಇಡುವುದನ್ನು ಮಾತ್ರ ಮರೆಯದಿರಿ.
ಸ್ಥಳೀಯರ ಸಹಕಾರ!!??:
ಹೊರರಾಜ್ಯದ ಕಳ್ಳರಿಗೆ ನಮ್ಮ ಮನೆಯ ಮಾಹಿತಿ ತಿಳಿಯುವುದಾದರೂ ಹೇಗೆ ಎನ್ನುವ ಯಕ್ಷಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಮೂಡುತ್ತದೆ. ಉತ್ತರ ಸುಲಭವೇ ಇದೆ. ಹೊರರಾಜ್ಯದ ಕಳ್ಳರು, ಸ್ಥಳೀಯರ ನೆರವು ಪಡೆದುಕೊಳ್ಳದೇ ಏಕಾಏಕೀ ನುಗ್ಗಲು ಸಾಧ್ಯವೇ ಇಲ್ಲ. ಏಕೆಂದರೆ, ಮನೆಯವರು ಎಷ್ಟು ಹೊತ್ತಿಗೆ ಹೊರಹೋಗುತ್ತಾರೆ, ಪುನಃ ಎಷ್ಟು ಹೊತ್ತಿಗೆ ಹಿಂದಿರುಗಿ ಬರುತ್ತಾರೆ ಎನ್ನುವ ಸ್ಪಷ್ಟ ಮಾಹಿತಿ ಅವರಲ್ಲಿರುತ್ತದೆ. ಅದು ಹಾಡಹಗಲೇ ಆದರೂ ಸರಿ, ಸ್ಥಳೀಯರಿಗೆ ಸಂದೇಹವೇ ಬಾರದ ರೀತಿಯಲ್ಲಿ ಕನ್ನ ಹಾಕುತ್ತಾರೆ. ಮನೆಯ ಬಾಗಿಲು ಎಷ್ಟೇ ಗಟ್ಟಿಯಾಗಿರಲಿ, ಅದನ್ನು ಮುರಿಯುವ ಆಯುಧಗಳು ಅವರಲ್ಲಿರುತ್ತವೆ ಎನ್ನುವುದು ಸೋಮವಾರದ ಘಟನೆಯಿಂದ ಸಾಬೀತಾಗಿದೆ. ಇಷ್ಟೇಲ್ಲಾ ಯೋಜನೆ ರೂಪಿಸಬೇಕಾದರೆ, ಸ್ಥಳೀಯರ ಸಹಕಾರ ಖಂಡಿತಾ ಪಡೆದುಕೊಂಡಿರಲೇಬೇಕು ಅಲ್ಲವೇ?
ಹೈಫೈ ಕಳ್ಳರು:
ಜನಸಂಖ್ಯೆ ಹೆಚ್ಚಿರುವ ಪ್ರದೇಶವನ್ನೇ ಆಯ್ಕೆ ಮಾಡಿಕೊಳ್ಳುವ ಕಳ್ಳರು, ಸ್ಥಳೀಯರ ಗಮನಕ್ಕೂ ಬಾರದಂತೆ ಕೃತ್ಯ ಎಸಗಿ ಕಣ್ಮರೆಯಾಗುತ್ತಾರೆ. ಪೇಟೆಯಲ್ಲಿ ಹತ್ತಿರತ್ತಿರ ಮನೆಗಳಿದ್ದರೂ, ಪಕ್ಕದ ಮನೆಯಲ್ಲೇನೂ ನಡೆಯುತ್ತಿದೆ ಎನ್ನುವುದು ತಿಳಿಯುವುದೇ ಇಲ್ಲ. ಅಂದರೆ ಪೇಟೆಯ ಲೋಪಗಳನ್ನು ತಮ್ಮ ಕೃತ್ಯಕ್ಕೆ ಬಳಸಿಕೊಳ್ಳುವ ತಂಡವಿದು. ಈ ತಂಡ ಕಾರಿನಲ್ಲೇ ತಿರುಗಾಡುತ್ತಾ, ಯಾರಿಗೂ ಸಂದೇಹ ಬಾರದಂತೆ ಕಾರ್ಯಾಚರಿಸುತ್ತದೆ ಎನ್ನುವುದು ಸೋಮವಾರದ ಘಟನೆಯಿಂದ ತಿಳಿದುಬಂದಿದೆ.
Posted by Vidyamaana on 2023-10-29 15:09:40 |
ಪುತ್ತೂರು: ಪರಿಶಿಷ್ಡ ಪಂಗಡದ ಕುಟುಂಬಗಳ ಅಭಿವೃದ್ದಿಗಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ಮಾಹಿತಿ ಕೊರತೆಯ ಕಾರಣಕ್ಕೆ ಹಲವರು ಸೌಲಭ್ಯ ವಂಚಿತರಾಗುತ್ತಿದ್ದಾರೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ಲಾಕ್ ಎಸ್ ಟಿ ಘಟಕದ ಮಾಸಿಕ ಸಭೆಯಲ್ಲಿ ಮಾತನಾಡಿದರು.
ದಲಿತ ಕುಟುಂಬಗಳನ್ನು ಮೇಲಕ್ಕೆತ್ತಲು ಕಾಂಗ್ರೆಸ್ ಸರಕಾರ ಸ್ವಾತಂತ್ರ್ಯ ನಂತರ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತರುವ ಕೆಲಸವನ್ನು ಮಾಡಿದೆ. ಪ್ರತೀಯೊಂದು ಕುಟುಂಬವೂ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು. ಮಾಹಿತಿ ಕೊರತೆ ಇದ್ದವರು ಶಾಸಕರ ಕಚೇರಿಯನ್ನು ಸಂಪರ್ಕಿಸಿ ಸಹಾಯ ಪಡೆದುಕೊಳ್ಳಬಹುದು ಎಂದು ಹೇಳಿದರು.
ಸಭೆಯಲ್ಲಿಮಾತನಾಡಿದ ಎಸ್ ಟಿ ಘಟಕದ ಬ್ಲಾಕ್ ಅಧ್ಯಕ್ಷ ಮಹಾಲಿಂಗ ನಾಯ್ಕರವರು ಮಾತನಾಡಿ ಎಸ್ ಟಿ ಕುಟುಂಬದ ಮತ್ತು ಕನ್ವಶರ್ನ್ ಸಮಸ್ಯೆಯ ಬಗ್ಗೆ ಸಭೆಯಲಿ ವಿವರಿಸಿದರು. ಬ್ಲಾಕ್ ಉಪಾಧ್ಯಕ್ಷರಾದ ಮೌರಿಶ್ ಮಸ್ಕರೇನಸ್ ರವರು ವಾಲ್ಮೀಕಿ ಜಯಂತಿ ಬಗ್ಗೆ ಮಾತನಾಡಿದರು.
.ಕಾರ್ಯಕ್ತಮದಲ್ಲಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಮಲರಾಮಚಂದ್ರ, ಪಾಣಾಜೆ ಗ್ರಾಪಂ ಸದಸ್ಯೆ ವಿಮಲಾ, ಎಸ್ ಟಿ ಘಟಕದ ಉಪಾಧ್ಯಕ್ಷ ಸದಾನಂದ ನಾಯ್ಕ, ರಾಮನಾಯ್ಕ, ಯು ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪ್ರಸಾದ್ ಪಾಣಾಜೆ, ಗ್ರಾಪಂ ಸದಸ್ಯ ಮಹಾಲಿಂಗ ನಾಯ್ಕ, ಸುಬ್ರಾಯ ನಾಯ್ಕ ನಿಡ್ಪಳ್ಳಿ,ಐತಪ್ಪ ನಾಯ್ಕ ನಿಡ್ಪಳ್ಳಿ, ನಾಗೇಶ್ ನಾಯ್ಕ ನಿಡ್ಪಳ್ಳಿ, ಸೀತಾರಾಮ ನಾಯ್ಕ, ಗೋಪಾಲ ನಾಯ್ಕ ಪಡುಮಲೆ, ಮೋಹಿನಿ ನರಿಮೊಗರು, ಕರುಣಾಕರ ಪಾಂಗಲಾಯಿ, ಗೋವಿಂದ ನಾಯ್ಕ ಮೊಟ್ಟೆತ್ತಡ್ಕ, ಸವಿತಾ ದೇವಸ್ಯ,ಚಂದ್ರಾವತಿ ಒಳಮೊಗ್ರು,ಮಾದವ ನಾಯ್ಕ ಬೊಳಿಂಜ, ,ಶಶಿಕಲಾ ಬೊಳಿಂಜ,
ಗಿರಿಧರ್ ಗೌಡ, ಯೋಗೀಶ್ ಸಾಮಾನಿ, ರಾಘವ ಖಂಡಿಗ ಮತ್ತಿತರರು ಉಪಸ್ಥಿತರಿದ್ದರು.
ಸಂತೋಷ್ ಭಂಡಾರಿ ಚಿಲ್ಮೆತ್ತಾರು ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಘಟಕದ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು
Posted by Vidyamaana on 2024-04-07 14:05:49 |
ಪುತ್ತೂರು: ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಯನ್ನು ನಿಮಗೆ ತಲುಪಿಸಿ, ನುಡಿದಂತೆ ನಡೆದು ಇದೀಗ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದೇವೆ ಹರಸಿ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ವಿಟ್ಲ ಮುಡ್ನೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಜನ ನೆಮ್ಮದಿಯಿಂದ ಇರಲು ಸಾಧ್ಯ. ಗೃಹಲಕ್ಣ್ಮಿ ಯೋಜನೆಯ ಎರಡು ಸಾವಿರ ಹಣ ಎಲ್ಲರ ಮನೆ ಬೆಳಗಿಸಿದೆ.ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತೀ ಕುಟುಂಬಕ್ಕೆ ವಾರ್ಷಿಕ ಒಂದು ಲಕ್ಷ ಹಣ ನೀಡಲಿದ್ದೇವೆ ಎಂದು ಹೇಳಿದರು.
Posted by Vidyamaana on 2023-09-21 16:26:05 |
ಪುತ್ತೂರು: ಹೆತ್ತ ತಂದೆ ತಾಯಿಯನ್ನು ಆರೈಕೆ ಮಾಡದೆ , ಅವರನ್ನು ಆಶ್ರಮದಲ್ಲಿ ಹಾಕಿ ಅವರ ಸೇವೆ ಮಾಡುವ ಭಾಗ್ಯವಿಲ್ಲದ ಮಂದಿ ಎಷ್ಟೇ ದೊಡ್ಡ ಪುಣ್ಯದ ಕೆಲಸ ಮಾಡಿದರೂ ಆತನಿಗೆ ದೇವರು ಖಂಡಿತವಾಗಿಯೂ ಒಲಿಯವುದಿಲ್ಲ ಮತ್ತು ಆತನಿಗೆ ದೇವರ ಆಶೀರ್ವಾದ ಪಡೆಯಲು ಸಾಧ್ಯವೇ ಇಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಕುಂಬ್ರ ಶ್ರೀರಾಮ ಭಜನಾಮಂದಿರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.
ಹೊಟ್ಟೆಗೆ ತುತ್ತು ಇಲ್ಲದೇ ಇದ್ದರೂ ನಮ್ಮನ್ನು ಹೆತ್ತು ಸಾಕಿದ, ವಿದ್ಯೆ ಕೊಡಿಸಿದ ತಂದೆ ತಾಯಿಯೇ ನಮಗೆ ನಿಜವಾದ ದೇವರು. ಮನೆಯೊಳಗೆ ಜೀವಂತವಾಗಿರುವ ದೇವರ ಆಶೀರ್ವಾದ ಪಡೆಯದೆ ನಾವು ಎಷ್ಟು ಸಮಾಜ ಸೇವೆ ಮಾಡಿದರೂ ಏನೂ ಫಲವಿಲ್ಲ. ವಿದ್ಯೆ ಕಲಿತು ದೊಡ್ಡ ವ್ಯಕ್ತಿಗಳಾದ ನಾವು ಬಳಿಕ ತಂದೆ ತಾಯಿಯನ್ನು ಮರೆತು ಬಿಡುತ್ತೇವೆ, ಅವರು ನಮಗೆ ಮಾಡಿದ ತ್ಯಾಗವನ್ನು ಗ್ರಹಿಸುವ ಶಕ್ತಿಯೂ ನಮಗೆ ಇರುವುದಿಲ್ಲ. ಮುದಿ ಪ್ರಾಯದಲ್ಲಿ ಅವರನ್ನು ನಾವು ಆಶ್ರಮಕ್ಕೆ ಸೇರಿಸಿ ಸುಖ ಜೀವನ ನಡೆಸುತ್ತಿದ್ದೇವೆ ಇದು ಖಂಡಿತವಾಗಿಯೂ ಯಾವ ದೇವರಿಗೂ ಇಷ್ಟವಾಗುವುದಿಲ್ಲ ಎಂಬುದನ್ನು ನಾವು ಪ್ರತೀಯೊಬ್ಬರೂ ತಿಳಿದುಕೊಳ್ಳಬೇಕು. ತಂದೆ ತಾಯಿಯನ್ನು ದೂರ ಮಾಡುವ ಸಂಸ್ಕಾರ ನಮ್ಮದಲ್ಲ, ಅದು ಭಾರತೀಯ ಸಂಸ್ಕೃತಿಯೂ ಅಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಆಶಾ ಬೆಳ್ಳಾರೆ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುಧಾಕರ ರಾವ್ ಆರ್ಯಾಪು, ಕಬಕ ಸರಕಾರಿ ಶಾಲೆಯ ಮುಖ್ಯ ಗುರು ಬಾಬು, ಕುಂಬ್ರ ದುರ್ಗಾ ಪ್ರಸಾದ್ ರೈ, ಗ್ರಾಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ, ಎಂ ಎಸ್ ಕೇಶವ ಶಾಂತಿವನ, ರಾಮಯ್ಯ ಗೌಡ ಬೊಳ್ಳಾಡಿ, ರಾಜೇಶ್ ರೈ ಪರ್ಪುಂಜ , ಮಾಧವ ರೈ ಕುಂಬ್ರ ಮೊದಲಾದವರು ಉಪಸ್ಥಿತರಿದ್ದರು.
Posted by Vidyamaana on 2023-08-09 05:12:53 |
ಬಜಪೆ: ನಿಲ್ಲಿಸಿದ್ದ ವಾಹನಗಳ ಬ್ಯಾಟರಿ ಕಳವು ಮಾಡುತ್ತಿದ್ದ ಇಬ್ಬರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೂಡುಪೆರಾರ ಗ್ರಾಮದ ಈಶ್ವರಕಟ್ಟೆ ಕೊಲವೇಲಾ ರಾಘವೇಂದ್ರ ಭಜನಾ ಮಂದಿರದ ಸಮೀಪದ ನಿವಾಸಿ ಪ್ರತಾಪ್ (20), ಕಂದಾವರ ಗ್ರಾಮದ ಚರ್ಚ್ ರೋಡ್ ನಿವಾಸಿ ಅನಿಲ್ (23) ಎಂದು ಗುರುತಿಸಲಾಗಿದೆ.ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು, ಕೈಕಂಬ ಮತ್ತು ಗುರುಪುರ ಪರಿಸರಗಳಲ್ಲಿ ನಿಲ್ಲಿಸುತ್ತಿದ್ದ ಟಿಪ್ಪರ್ ಲಾರಿ, ಜೆಸಿಬಿ ಮತ್ತು ಇತರ ವಾಹನಗಳಿಂದ ಬ್ಯಾಟರಿಗಳು ಕಳವಾಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ತನಿಖೆ ನಡೆಸಿದ ಬಜಪೆ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ಹಾಗೂ ಅವರ ತಂಡ ಮಂಗಳವಾರ ಮಂಗಳೂರು ತಾಲ್ಲೂಕಿನ ಬಜಪೆಯ ಒಡ್ಡಿದ ಕಲ ಎಂಬಲ್ಲಿ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಕಾರಿನಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅವರಿಂದ ಸುಮಾರು ₹ 4 ಲಕ್ಷ ಮೌಲ್ಯದ ಒಂದು ಕಾರು, ₹1.50 ಲಕ್ಷ ಮೌಲ್ಯದ 17 ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕ ಗುರಪ್ಪ ಕಾಂತಿ, ರೇವಣ ಸಿದ್ದಪ್ಪ, ಕುಮಾರೇಶನ್, ಲತಾ ಮತ್ತು ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ, ಎಎಸ್ಐ ರಾಮ ಪೂಜಾರಿ, ಸುಜನ್, ರಶೀದ್ ಶೇಖ್, ಬಸವರಾಜ್ ಪಾಟೀಲ್, ಜಗದೀಶ್, ಸಂತೋಷ್, ಪ್ರಕಾಶ, ಕೆಂಚಪ್ಪ, ಕೆಂಚನಗೌಡ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.