Posted by vidyamaana on 2024-07-25 09:34:49 |
ಬೆಂಗಳೂರು : ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .
ಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ.
ಪಿಜಿಯ ಸಿಸಿಟಿವಿ ಎಲ್ಲವನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ ಎಂದಿದ್ದಾರೆ
Posted by Vidyamaana on 2023-06-29 06:28:43 |
ಪುತ್ತೂರು : ತಾಲೂಕಿನಲ್ಲಿ ಇಂದು ಮುಂಜಾನೆಯಿಂದಲೇ ಅತ್ಯಂತ ಸಡಗರ, ಸಂಭ್ರಮದಿಂದ ಈದುಲ್ ಅಝಾ (ಬಕ್ರೀದ್ ಹಬ್ಬ) ಆಚರಿಸಲಾಗುತ್ತಿದೆ.
ತಾಲೂಕಿನಲ್ಲಿ ಮುಸ್ಲಿಮರು ಮಸೀದಿ ಗಳಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸಿ, ಈದ್ ಖುತ್ಥಾ ಮತ್ತು ಪ್ರವಚನ ಆಲಿಸಿ, ಈದ್ ಸಂದೇಶ ಸ್ವೀಕರಿಸುವುದು ಮತ್ತು ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುತ್ತಿರುವುದು ಕಂಡು ಬಂತು.
ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಹೊಸ ಬಟ್ಟೆಬರೆ ಧರಿಸಿ, ನಾನಾ ಬಗೆಯ ತಿಂಡಿ- ತಿನಿಸು ತಿಂದು ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಸಂಭ್ರಮಿಸಿದರು.ಪುತ್ತೂರು ತಾಲೂಕಿನ ಬದ್ರಿಯಾ ಮಸ್ಜಿದ್, ಜುಮಾ ಮಸ್ಜಿದ್, ಕೂರ್ನಡ್ಕ ಜುಮಾ ಮಸ್ಜಿದ್, ಬನ್ನೂರು ಹಾನಫಿ ಮಸ್ಜಿದ್, ಸಾಲ್ಮರ ಜುಮಾ ಮಸ್ಜಿದ್,ಪಡೀಲ್ ಜುಮಾ ಮಸ್ಜಿದ್,ಬನ್ನೂರು ಜುಮಾ ಮಸ್ಜಿದ್, ಕಲ್ಲೇಗ ಜುಮಾ ಮಸ್ಜಿದ್, ಬಪ್ಪಲಿಗೆ ಜುಮಾ ಮಸ್ಜಿದ್,ಮುಕ್ವೆ ಜುಮಾ ಮಸ್ಜಿದ್, ಕುಂಬ್ರ ಜುಮಾ ಮಸ್ಜಿದ್, ಕೂರ್ನಡ್ಕ ಹಾನಫಿ ಮಸ್ಜಿದ್ ಗಳಲ್ಲಿ ನಮಾಝ್ ಹಾಗೂ ಖುತ್ವಾ ನೆರವೇರಿಸಲಾಯಿತು.
ಈದ್ ನಮಾಝ್-ಖುತ್ಥಾದ ಬಳಿಕ ದಫನ ಭೂಮಿಗೆ ಅಗಲಿದ ಕುಟುಂಬದ ಸದಸ್ಯರ ಮರತ್ತಾಗಿ ಪ್ರಾರ್ಥಿಸಿದರು. ಬಳಿಕ ಕುಟುಂಬಸ್ಥರು, ಸ್ನೇಹಿತರು, ಸಮೀಪದ ನಿವಾಸಿಗಳ ಮನೆಗೆ ತೆರಳಿ ಇದ್ ಶುಭಾಶಯ ಸಲ್ಲಿಸುತ್ತಿದ್ದಾರೆ.
Posted by Vidyamaana on 2024-07-11 21:48:24 |
ಉಡುಪಿ, ಜುಲೈ 11: ಕುಂದಾಪುರದ ಖ್ಯಾತ ಆಸ್ಪತ್ರೆ ಶ್ರೀಮಾತಾ ಆಸ್ಪತ್ರೆಯ ಪಾಲುದಾರ ಹಾಗೂ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಸತೀಶ್ ಪೂಜಾರಿ (54) ಇಂದು ಹೃದಯಘಾತದಿಂದ ವಿಧಿವಶರಾಗಿದ್ದಾರೆ.ಶ್ರೀಮಾತಾ ಆಸ್ಪತ್ರೆಯ ಮಾಲೀಕರಾಗಿದ್ದ ಡಾ. ಸತೀಶ್ ಪೂಜಾರಿ ಇ.ಎನ್.ಟಿ.ತಜ್ಞ ಕೂಡ ಆಗಿದ್ದರು. ವೈದ್ಯರಾಗಿ ತಮ್ಮ ಸೇವೆ ಹಾಗೂ ಸಂಗೀತಗಾರನಾಗಿ ಕರಾವಳಿ ಭಾಗದಲ್ಲಿ ಜನಪ್ರಿಯತೆ ಪಡೆದಿದ್ದ ಡಾ.ಸತೀಶ ಪೂಜಾರಿ ಇಂದು ಮುಂಜಾನೆ ಕೋಟ ತಟ್ಟುವಿನ ತಮ್ಮ ನಿವಾಸದಲ್ಲಿ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ.
Posted by Vidyamaana on 2024-07-17 17:54:29 |
ಮಂಗಳೂರು: ಮುಂದಿನ ಎರಡು ದಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದ್ದು ಅದರಂತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜು.18 ಮತ್ತು 19 ರಂದು ರೆಡ್ ಅಲರ್ಟ್ ಘೋಷಿಸಿದೆ.
Posted by Vidyamaana on 2023-10-21 04:58:27 |
ಬೆಂಗಳೂರು : ಏನಾದರೊಂದು ಹೇಳುವುದು, ಅದು ಇನ್ನೇನೋ ಆಗಿ ಅರ್ಥೈಸಲ್ಪಡುವುದು, ಬಳಿಕ ಅದಕ್ಕೊಂದು ಸಮಜಾಯಿಷಿ, ಸಮರ್ಥನೆ ಇಲ್ಲವೇ ಸ್ಪಷ್ಟನೆ ಕೊಡುವುದು ರಾಜಕಾರಣದಲ್ಲಿ ಸರ್ವೇಸಾಮಾನ್ಯ. ಅಂಥದ್ದೇ ಒಂದು ಸಂದರ್ಭವನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕೂಡ ಎದುರಿಸುವಂತಾಗಿದೆ.ತಮ್ಮ ಹೇಳಿಕೆಯೊಂದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿರುವ ದೇವೇಗೌಡರು, ಆ ರೀತಿ ನಾನು ಹೇಳಿಲ್ಲ ಎಂಬುದರ ಜತೆಗೆ, ತಾವು ಹೇಳಿದ್ದೇನು ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಕೇರಳದವರಿಗೆ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಆಗಿರುವ ಗೊಂದಲವನ್ನು ನಿವಾರಿಸಲು ಯತ್ನಿಸಿದ್ದಾರೆ.ಸಿಪಿಎಂ ಕುರಿತ ನನ್ನ ಹೇಳಿಕೆಯೊಂದಕ್ಕೆ ಸಂಬಂಧಿಸಿದಂತೆ ಗೊಂದಲವೊಂದು ಉಂಟಾಗಿದೆ. ನಾನು ಯಾವ ಅರ್ಥದಲ್ಲಿ ಮಾತನಾಡಿದ್ದೇನೆ ಎಂಬುದನ್ನು ನನ್ನ ಕಮ್ಯುನಿಷ್ಟ್ ಗೆಳೆಯರು ಅರ್ಥ ಮಾಡಿಕೊಂಡಂತಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಕೇರಳದಲ್ಲಿ ಸಿಪಿಎಂ ಬೆಂಬಲಿಸುತ್ತದೆ ಎಂದು ನಾನು ಹೇಳೇ ಇಲ್ಲ ಎಂದಿದ್ದಾರೆ.
ಬಿಜೆಪಿಯೊಂದಿಗಿನ ನಮ್ಮ ಮೈತ್ರಿ ನಂತರ ಕರ್ನಾಟಕದ ಹೊರಗಿನ ನನ್ನ ಪಕ್ಷದ ಘಟಕಗಳಲ್ಲಿನ ವಿಷಯಗಳು ಇತ್ಯರ್ಥವಾಗದ ಕಾರಣ ಕೇರಳದಲ್ಲಿ ನನ್ನ ಪಕ್ಷದ ಘಟಕವು ಎಲ್ಡಿಎಫ್ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದಷ್ಟೇ ನಾನು ಹೇಳಿದ್ದೇನೆ ಎಂಬುದಾಗಿ ದೇವೇಗೌಡರು ಸ್ಪಷ್ಟನೆ ನೀಡಿದ್ದಾರೆ.
Posted by Vidyamaana on 2023-06-10 14:17:25 |
ಮೈಸೂರು : ತಮ್ಮ ಪ್ರಯಾಣದ ವೇಳೆ ಝೀರೋ ಟ್ರಾಫಿಕ್ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಯಾಕಾಗಿ ಝೀರೋ ಟ್ರಾಫಿಕ್ ಮಾಡಿದ್ದೀರಾ? ಎಂದು ಮೈಸೂರು ಪೊಲೀಸ್ ಆಯುಕ್ತರನ್ನು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.ಸಿಎಂ ಸಿದ್ದರಾಮಯ್ಯ ಮೈಸೂರು ವಿಮಾನ ನಿಲ್ದಾಣದಿಂದ ಜಿಲ್ಲಾ ಪಂಚಾಯತ್ ಕಚೇರಿಗೆ ಆಗಮಿಸಿದ್ದರು.ಈ ವೇಳೆ ಅವರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರಿಂದ ಸಿಟ್ಟಾದ ಸಿದ್ದರಾಮಯ್ಯ ಪೊಲೀಸ್ ಆಯುಕ್ತರನ್ನು ಪ್ರಶ್ನಿಸಿ, ನಿಮಗೆ ಗೊತ್ತಿದೆಯಾ, ನಾನು ಝೀರೋ ಟ್ರಾಫಿಕ್ ಮಾಡಬೇಡಿ ಎಂದು ಹೇಳಿದ್ದೇನೆ. DONT DO THAT ಎಂದು ಹೇಳುತ್ತಾ ಖಡಕ್ ವಾರ್ನಿಂಗ್ ನೀಡಿದ ಘಟನೆ ಜಿ.ಪಂ ಆವರಣದಲ್ಲಿ ನಡೆದಿದೆ.ಸಿದ್ದರಾಮಯ್ಯ ಎರಡನೇ ಬಾರಿಗೆ ಸಿಎಂ ಆಗಿ ಅಧಿಕಾರ ವಹಿಸುತ್ತಿದ್ದಂತೆ ತಮ್ಮ ವಾಹನ ಸಂಚಾರಕ್ಕೆ ನೀಡಲಾಗಿದ್ದ ಝೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂಪಡೆಯುವಂತೆ ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದರು. ಝೀರೋ ಟ್ರಾಪಿಕ್ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದರು.ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ಸಚಿವರಾದ ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಶ್ರೀವತ್ಸ, ರವಿಶಂಕರ್, ಅನಿಲ್ ಚಿಕ್ಕಮಾದು, ಜಿ.ಡಿ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ತಿಮ್ಮಯ್ಯ ಸೇರಿ ಹಲವರು ಭಾಗಿಯಾಗಿದ್ದರು.
Posted by Vidyamaana on 2024-02-25 13:42:08 |
ಮೂಡಬಿದಿರೆ, ಫೆ.25: ಇಲ್ಲಿನ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿದ್ದ ಬೈಂದೂರು ಮೂಲದ ವಿದ್ಯಾರ್ಥಿನಿ ನಾಪತ್ತೆಯಾದ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡುಬಿದ್ರೆ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಪಿಟಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಬೈಂದೂರು ತಾಲೂಕಿನ ಕೊಲ್ಲೂರಿನ ಆದಿರಾ (19) ನಾಪತ್ತೆಯಾದವಳು. ಕಾಲೇಜಿನ ಹಾಸ್ಟೆಲ್ನಲ್ಲಿ ವಾಸವಾಗಿದ್ದ ಈಕೆ ಎಂದಿನಂತೆ ಶುಕ್ರವಾರ ಬೆಳಗ್ಗೆ ಸಹಪಾಠಿಗಳ ಜತೆ ಸ್ವರಾಜ್ಯ ಮೈದಾನದಲ್ಲಿರುವ ಕಾಲೇಜಿಗೆ ವಿದ್ಯಾಸಂಸ್ಥೆಯ ಬಸ್ಸಿನಲ್ಲಿ ಬಂದಿದ್ದು ಕನ್ನಡ ಭವನದ ಬಳಿ ಇಳಿದಿದ್ದಾಳೆಂದು ಜೊತೆಗಿದ್ದವರು ಮಾಹಿತಿ ನೀಡಿದ್ದಾರೆ. ಆನಂತರ ಯುವತಿ ಅಲ್ಲಿಂದ ಕಾಲೇಜಿಗೆ ಅಥವಾ ಮನೆಗೆ ಹೋಗದೆ ಕಾಣೆಯಾಗಿರುವುದಾಗಿ ತಿಳಿದುಬಂದಿದೆ. ಕಾಣೆಯಾಗುವ ಸಂದರ್ಭ ಕಾಲೇಜಿನ ಸಮವಸ್ತ್ರ ಧರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.