Posted by vidyamaana on 2024-06-30 19:50:01 |
ಮಂಗಳೂರು , ಜೂ. 30: ಕುತ್ತಾರು ಮದನಿ ನಗರದಲ್ಲಿ ಇತೀಚೆಗೆ ಪಕ್ಕದ ಮನೆಯ ಗೋಡೆ ಮನೆಯೊಂದರ ಮೇಲೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣದ ಘಟನಾ ಸ್ಥಳಕ್ಕೆ ರವಿವಾರ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ ನೀಡಿ ಪರಿಶೀಲಿಸಿದರು.
ಸಂತ್ರಸ್ತರಿಗೆ ಶೀಘ್ರ ಪರಿಹಾರವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಇದೇ ಸಂದರ್ಭ, ಉಳ್ಳಾಲ- ಸೋಮೇಶ್ವರ ಭಾಗದ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕಡಲ್ಕೊರೆತ ತೀವ್ರಗೊಂಡಿರುವ ಉಚ್ಚಿಲ, ಮೊಗವೀರಪಟ್ನ, ಬಟ್ಟಂಪಾಡಿ, ಸೀಗ್ರೌಂಡ್ ಪ್ರದೇಶಕ್ಕೆ ಭೇಟಿ ನೀಡಿದರು.
ಸಮುದ್ರತೀರದ ಮನೆಗಳಲ್ಲಿ ವಾಸವಾಗಿರುವವರು ಎಚ್ಚರಿಕೆ ವಹಿಸುವಂತೆ ಸೂಚಿಸಿದ ಸಂಸದ ಕ್ಯಾ. ಬ್ರಿಜೇಶ್, ಅಪಾಯದಂಚಿನಲ್ಲಿ ಇರುವ ಮನೆಮಂದಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.
ಉಳ್ಳಾಲ ತಾಲೂಕು ತಹಶಿಲ್ದಾರರಾದ ಪ್ರದೀಪ್ ಕುರುಡೇಕರ್, ಬಂದರು ಇಲಾಖೆಯ ಇಂಜಿನಿಯರ್ ಪ್ರವೀಣ್, ಉಳ್ಳಾಲ ತಾಲೂಕು ಕಂದಾಯ ನಿರೀಕ್ಷಕರು ಪ್ರಮೋದ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಸಂತೋಷ್ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.
Posted by Vidyamaana on 2023-05-23 06:24:47 |
ಪುತ್ತೂರು: ಸ್ವಾರ್ಥರಹಿತವಾದ ಹಿಂದೂ ಪರವಾದ ಮತ್ತು ಹಿಂದೂಗಳ ಹಿತಾಸಕ್ತಿಗೆ ಬದ್ಧವಾಗಿ ನಡೆಸಲ್ಪಡುವ ಸ್ವತಂತ್ರವಾದ ಹಿಂದೂ ಕಾರ್ಯಕರ್ತರನ್ನೊಳಗೊಂಡ ಸಮೂಹವೇ ಪುತ್ತಿಲ ಪರಿವಾರ. ಹೊರತಾಗಿ, ಯಾವುದೇ ಸಂಘಟನೆಗಳಿಗೆ ಪರ್ಯಾಯವಾಗಿ ಹುಟ್ಟಿಕೊಂಡ ಸಂಘಟನೆಯಲ್ಲ ಎಂದು ಪುತ್ತಿಲ ಪರಿವಾರ ಸ್ಪಷ್ಟನೆ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಅಪಪ್ರಚಾರಗಳಿಗೆ ಉತ್ತರವಾಗಿ ಈ ಹೇಳಿಕೆ ಹೊರಬಿದ್ದಿದೆ ಎಂದು ಹೇಳಲಾಗುತ್ತಿದೆ.
ಇದು ಹಿಂದುಗಳಿಗಾಗಿ ಕೆಲಸ ಮಾಡುವ ಸಮೂಹವೇ ಹೊರತು ಯಾವುದೇ ರಾಜಕೀಯ ಸ್ವಹಿತಾಸಕ್ತಿಯಿಂದ ಉದ್ದೇಶಿತಗೊಂಡ ಸಮೂಹವಲ್ಲ.
ಎಲ್ಲರೂ ಗಮನಿಸಬೇಕು ಯಾವುದೇ ರಾಜಕೀಯ ಪಕ್ಷಕ್ಕಾಗಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕಾಗಲಿ ಪರ್ಯಾಯವಾಗಿ ಉದ್ದೇಶಿಸಿದ ಸಮೂಹವಲ್ಲ.
ಹಿಂದೆಯೂ ಹೇಳಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾ.ಜ.ಪಾ.ಕ್ಕೆ ಪ್ರತಿರೋಧವಾಗಿ ಈ ಸಮೂಹ ಕೆಲಸ ಮಾಡುವುದಿಲ್ಲ.
ಮಾತಿನ ಬದ್ಧತೆ, ಮೌಲ್ಯ, ಧರ್ಮ ಮತ್ತು ಸಿದ್ಧಾಂತದ ಪ್ರತಿಪಾದನೆಯ ತಳಹದಿಯಲ್ಲಿ ಜನಸೇವಾ ಕಾರ್ಯಕ್ರಮಗಳನ್ನು ಈ ಸಮೂಹ (ಪರಿವಾರ) ಮಾಡಲಿದೆ.
ಯಾರ್ಯಾರೋ ಕೊಡುವ ಉತ್ಪ್ರೇಕ್ಷೆಯ, ದ್ವೇಷ ಹುಟ್ಟು ಹಾಕುವ ಮಾದರಿಯ ಹೇಳಿಕೆಗಳಾಗಲಿ, ಮಾಧ್ಯಮ ಪ್ರಚಾರಕ್ಕಾಗಲಿ ನಮ್ಮದು ವಿರೋಧವಿದೆ ಮತ್ತು ಅದಕ್ಕೂ ನಮ್ಮ ಪರಿವಾರದ ಉದ್ದೇಶಕ್ಕೂ ಯಾವುದೇ ಸಂಬಂಧವಿರುವುದಿಲ್ಲ.
ಆದುದರಿಂದ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದಿರಿ ಎಂದು ವಿನಮ್ರವಾಗಿ ಪ್ರಾರ್ಥಿಸುತ್ತೇನೆ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.
Posted by Vidyamaana on 2023-10-30 21:25:08 |
ಬಂಟ್ವಾಳ, ಅ.30: ಗಂಡನ ಮನೆಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ನವ ವಿವಾಹಿತ ತರುಣಿ ತಾಯಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಸಜೀಪ ಮೂಡದಲ್ಲಿ ನಡೆದಿದೆ.
ಬಂಟ್ವಾಳ ಸಜೀಪ ಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ನೌಸೀನಾ (22) ಮೃತಪಟ್ಟ ಯುವತಿ. ನೌಸೀನಾ ಅವರು ಉಳ್ಳಾಲದ ಆಜ್ಮಾನ್ ಜೊತೆ ಮೂರು ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಪ್ರೇಮವಿವಾಹ ಆಗಿದ್ದರೂ ವಿವಾಹ ಸಂದರ್ಭದಲ್ಲಿ 18 ಪವನ್ ಚಿನ್ನ ನೀಡಲಾಗಿತ್ತು. ಆದರೆ ಹುಡುಗಿ ಕಡೆಯವರು ನೀಡಿದ ವರದಕ್ಷಿಣೆ ಕಡಿಮೆಯಾಗಿದೆ, ಲವ್ ಮಾಡಿ ಮದುವೆಯಾಗಿದ್ದರಿಂದ ಒಳ್ಳೆ ಹುಡುಗಿ ಸಿಗಲಿಲ್ಲ, ಇಲ್ಲದಿದ್ದರೆ ಒಳ್ಳೆಯ ಹುಡುಗಿ ಸಿಗಬಹುದಿತ್ತು ಎಂದು ಅತ್ತೆ ಝುಬೈದಾ, ಮಗಳು ಅಜ್ಮೀಯಾ ಮತ್ತು ಗಂಡ ಸೇರಿಕೊಂಡು ಹೀಯಾಳಿಸಿ, ಮಾನಸಿಕ ಕಿರುಕುಳ ಕೊಡುತ್ತಿದ್ದರು. ಇದರಿಂದ ಬೇಸತ್ತ ನೌಸೀನ್ ಉಳ್ಳಾಲದ ಗಂಡನ ಮನೆಯಿಂದ ಸಜೀಪ ಗ್ರಾಮದ ತಾಯಿ ಮನೆಗೆ ಬಂದಿದ್ದಳು. ಮಾನಸಿಕವಾಗಿ ನೊಂದಿದ್ದ ನೌಸೀನಾ ಅ.25ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿಯ ಅಣ್ಣ ನಾಸೀರ್ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಲವ್ ಮ್ಯಾರೇಜ್, ಚಿನ್ನಾಭರಣ ಮಾರಿದ್ದ ಗಂಡ
ಸಜೀಪ ಮೂಡ ನಿವಾಸಿ ಕೆ.ಎಮ್ ಬಾವ ಅವರ ಮಗಳು ನೌಸೀನಾ ಉಳ್ಳಾಲ ಮೂಲದ ಯುವಕ ಅಜ್ಮಾನ್ ಎಂಬಾತನಿಗೆ ಇನ್ಸ್ಟಾ ಗ್ರಾಂ ಮೂಲಕ ಪರಿಚಯವಾಗಿದ್ದಳ. ಬಳಿಕ ಇವರು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಆಗಸ್ಟ್ 14 ರಂದು ಮದುವೆಯಾಗಿದ್ದರು. ಆದರೆ ಅಜ್ಮಾನ್ ಮದುವೆಯಾದ ಕೆಲವೇ ದಿನಗಳಲ್ಲಿ ನೌಸೀನ್ ಬಳಿಯಿದ್ದ ಒಡವೆಗಳನ್ನು ಮಾರಿದ್ದಾನೆ. ಜೊತೆಗೆ ಇನ್ನಷ್ಟು ಒಡೆವೆಗಳನ್ನು ತರುವಂತೆ ಪೀಡಿಸುತ್ತಿದ್ದ. ಇದಲ್ಲದೆ ಅತ್ತೆ ಮತ್ತು ನಾದಿನಿಯವರು ಲವ್ ಮ್ಯಾರೇಜ್ ಆಗಿರುವ ಕಾರಣಕ್ಕಾಗಿ ಮಾನಸಿಕವಾಗಿ ಹಿಂಸೆಯನ್ನು ನೀಡುತ್ತಿದ್ದರೆಂದು ತಾಯಿ ಮನೆಯಲ್ಲಿ ಮಗಳು ತಿಳಿಸಿದ್ದಳು.
ಗಂಡನ ಮನೆಯವರ ಕಿರುಕುಳ ತಾಳಲಾರದೆ ನೌಸೀನ್ ಅ.24 ರಂದು ತಾಯಿ ಮನೆಗೆ ಬಂದಿದ್ದಳು. ಮರುದಿನ ಮನೆಯವರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಇವಳು ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
Posted by Vidyamaana on 2024-02-10 16:51:16 |
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 370 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಎನ್ಡಿಎ ಒಕ್ಕೂಟವು 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಚನೆ ಮಾಡುವ ಬಗ್ಗೆ ವಿಶ್ವಾಸ ಇದೆ ಎಂದಿರುವ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಗೆಲುವು ಸಿಗಲಿದೆ ಅನ್ನೋದ್ರ ಬಗ್ಗೆ ಯಾವುದೇ ಸಸ್ಪೆನ್ಸ್ ಆಗಿ ಉಳಿದಿಲ್ಲ. ಕಾಂಗ್ರೆಸ್ಗೆ ಕೂಡ ಅದು ಅರ್ಥ ಆಗಿದೆ. ಲೋಕಸಭೆ ಚುನಾವಣೆ ಒಳಗಾಗಿಯೇ ನಾವು ದೇಶದಾದ್ಯಂತ ಸಿಎಎ (Citizenship Amendment) Act, 2019 ಜಾರಿಗೆ ತರುತ್ತೇವೆ. 2019ರಲ್ಲಿ ಸಿಎಎ (ತಿದ್ದುಪಡಿ) ಮಸೂದೆ ಅಂಗೀಕಾರಗೊಂಡಿದೆ. ಕೊಟ್ಟ ಮಾತಿನಂತೆ ಲೋಕಸಭೆ ಚುನಾವಣೆ ಒಳಗಾಗಿ ಜಾರಿಗೆ ತರುತ್ತೇವೆ.
ಸಿಎಎ ವಿಚಾರದಲ್ಲಿ ನಮ್ಮ ಮುಸ್ಲಿಂ ಸಹೋದರರನ್ನು ಮಿಸ್ ಲೀಡ್ ಮಾಡಲಾಗುತ್ತಿದೆ. ಇದು ಭಾರತದಲ್ಲಿರುವ ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳುವುದಕ್ಕಾಗಿ ನಾವು ಜಾರಿಗೆ ತರುತ್ತಿಲ್ಲ. ಇದರ ಉದ್ದೇಶ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಕಿರುಕುಳಕ್ಕೆ ಒಳಗಾಗಿ ಭಾರತದಲ್ಲಿ ಆಶ್ರಯ ಪಡೆದುಕೊಂಡವರಿಗೆ ನೀಡುತ್ತಿರುವ ಪೌರತ್ವ ಅಷ್ಟೇ. ಇದರಲ್ಲಿ ದೇಶದಲ್ಲಿರುವ ನಾಗರಿಕರ ಪೌರತ್ವವನ್ನು ಕಿತ್ತುಕೊಳ್ಳುತ್ತಿಲ್ಲ ಎಂದು ಭರವಸೆ ನೀಡಿದ್ದಾರೆ.
ಏನಿದು ಪೌರತ್ವ ಕಾಯ್ದೆ..?
ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಪೌರತ್ವ (ತಿದ್ದುಪಡಿ) ಕಾಯ್ದೆ (Citizenship Act, 2019) ಜಾರಿಗೆ ಸಂಬಂಧಿಸಿ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪೌರತ್ವ ತಿದ್ದುಪಡಿ ಮಸೂದೆಯನ್ನು 2019ರಲ್ಲಿ ಸಂಸತ್ ಅಂಗೀಕರಿಸಿದೆ.
ಈ ಮಸೂದೆಯು ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬಂದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಇಲ್ಲಿನ ಪೌರತ್ವ ನೀಡುವುದನ್ನು ಪ್ರತಿಪಾದಿಸುತ್ತದೆ. ಮುಸ್ಲಿಂಮರನ್ನು ಈ ಕಾಯ್ದೆಯಿಂದ ದೂರ ಇಡಲಾಗಿದೆ. 2014 ಡಿಸೆಂಬರ್ 31ರ ಮೊದಲು ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡಲು ಅವಕಾಶ ಮಾಡಿಕೊಡುತ್ತದೆ.
ಮಸೂದೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರ ಆಗುತ್ತಿದ್ದಂತೆಯೇ ದೇಶದಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿವೆ. ಇದೇ ಕಾರಣಕ್ಕೆ ಕಾನೂನಿನ ಅಧಿನಿಯಮವನ್ನು ಇಲ್ಲಿಯವರೆಗೆ ತಿಳಿಸಿಲ್ಲ. ನಿಯಮ ಜಾರಿಗೊಳಿಸುವ ವಿಚಾರದಲ್ಲಿ ಭಾರತ ಸರ್ಕಾರ ಪದೇ ಪದೆ ಮುಂದೂಡಿಕೆ ಮಾಡುತ್ತಿದೆ. ಇದೀಗ ಕೇಂದ್ರ ಸರ್ಕಾರ ಅದಕ್ಕೆ ಅಂತಿಮ ಟಚ್ ನೀಡಲು ನಿರ್ಧರಿಸಿದ್ದು, ಆನ್ಲೈನ್ ಪೋರ್ಟಲ್ ಕೂಡ ತಯಾರಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ಭಾರತ ಪೌರತ್ವ ಪಡೆದುಕೊಳ್ಳೋದು ಸಂಪೂರ್ಣ ಆನ್ಲೈನ್ ಪ್ರಕ್ರಿಯೆ ಆಗಿರಲಿದ್ದು, ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ
Posted by Vidyamaana on 2023-12-26 16:18:43 |
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವವು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಡಿ.27ರಂದು ಪ್ರಾತಃ ಕಾಲ ಗಂಟೆ 6.30ರಿಂದ ಸಾಂಪ್ರದಾಯಿಕವಾಗಿ ನಡೆಯಲಿದೆ.
ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಹವನದ ಬಳಿಕ ಭಜನಾ ಕಾರ್ಯಕ್ರಮ ನಡೆಯಲಿದೆ. ಶ್ರೀ ಅಯ್ಯಪ್ಪ ಗುಡಿಯಲ್ಲಿ ಶ್ರೀ ಅಯ್ಯಪ್ಪ ದೇವರಿಗೆ ವಿವಿಧ ದ್ರವ್ಯ, ಭಸ್ಮ, ಸುವಸ್ತುಗಳಿಂದ ಅಭಿಷೇಕಗಳು ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದಿಂದ ಪಾಲ್ ಕೊಂಬು/ ಪಾಲಶ ಮರದ ಕೊಂಬೆಯ ಭವ್ಯ ಮೆರವಣಿಗೆ ಆರಂಭಗೊಳ್ಳಲಿದೆ. ರಾತ್ರಿ ಶ್ರೀ ಅಯ್ಯಪ್ಪ ಗುಡಿಯಲ್ಲಿ ಮಂಗಳಾರತಿ, ದೀಪಾರಾಧನೆ ನಡೆಯಲಿದೆ. ರಾತ್ರಿ ಗಂಟೆ 10.30 ರಿಂದ ಅಯ್ಯಪ್ಪ ವಳಕ್ಕು
ಕಾರ್ಯಕ್ರಮ, ಅಯ್ಯಪ್ಪ ವಾವರಯುದ್ದ ನಡೆಯಲಿದೆ. ಪಿ. ವೇಣುಗೋಪಾಲ್ ಮತ್ತು
ಬಳಗದವರಿಂದ ಕೇರಳದ ವಿಳಕ್ಕು ಕಾರ್ಯಕ್ರಮ ಮಾಡಲಿದ್ದಾರೆ. ರಾತ್ರಿ ಗಂಟೆ 2ಕ್ಕೆ ಕೆಂಡ ಸೇವೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮತ್ತು ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ತಿಳಿಸಿದ್ದಾರೆ
Posted by Vidyamaana on 2024-03-19 21:24:11 |
ಪುತ್ತೂರು : ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಟ ಸದಸ್ಯರಾದ ಜಯಾನಂದ ಬಂಗೇರ ರವರ ಮನೆ ಅಂಗಳಕ್ಕೆ ಶಾಸಕರ ಬೆಂಬಲಿಗರು ಅಕ್ರಮವಾಗಿ ಪ್ರವೇಶಿಸಿ, ಮನೆಯವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಾನಂದ ಬಂಗೇರ ರವರ ನಿವಾಸಕ್ಕೆ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ರವರು ಭೇಟಿ ನೀಡಿದ್ದು, ಧೈರ್ಯ ತುಂಬಿದರು.
ಬಿಜೆಪಿ ಪ್ರಮುಖರಾದ ಆರ್.ಸಿ. ನಾರಾಯಣ್, ಗೋಪಾಲಕೃಷ್ಣ ಹೇರಳೆ, ನಿತೇಶ್ ಶಾಂತಿವನ,ವಿದ್ಯಾ ಆರ್. ಗೌರಿ, ಸಹಜ್ ರೈ ಬಳಜ್ಜ, ಯುವರಾಜ್ ಪೆರಿಯತ್ತೋಡಿ ಸಹಿತ ಹಲವರು ಉಪಸ್ಥಿತರಿದ್ದರು
Posted by Vidyamaana on 2024-03-20 22:52:34 |
ಪುತ್ತೂರು : ಲೋಕಸಭಾ ಚುನಾವಣೆ ಹಿನ್ನೆಲೆ ಇವಿಎಮ್ ಮೆಷಿನ್ ಮಾ.20ರಂದು ರಾತ್ರಿ ಪುತ್ತೂರಿಗೆ ಆಗಮಿಸಿದ್ದು, ಕಂಟೈನರ್ ಮೂಲಕ ಇವಿಎಮ್ ಮೆಷಿನ್ ಅನ್ನು ತರಲಾಗಿದೆ.ತೆಂಕಿಲದಲ್ಲಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇವಿಎಮ್ ಮೆಷಿನ್ ಗಳನ್ನು ಸ್ಟ್ರಾಂಗ್ ರೂಂ ನಲ್ಲಿ ಭದ್ರವಾಗಿಡಲಾಗಿದೆ, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಸಹಾಯಕ ಆಯುಕ್ತರು, ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಹಾಗೂ ನಗರ ಸಭೆ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.