Posted by vidyamaana on 2023-08-18 08:29:00 |
ಬೆಳ್ತಂಗಡಿ: ರೋಗಿಯೊಬ್ಬರನ್ನು ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.
ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
Posted by Vidyamaana on 2023-10-26 14:58:20 |
ಪುತ್ತೂರು- ಮಂಗಳೂರು ಪ್ಯಾಸೆಂಜರ್ ರೈಲು ಆರಂಭಮಾಡದೇ ಇದ್ದರೆ ಉಗ್ರ ಪ್ರತಿಭಟನೆ: ಕಾವು ಹೇಮನಾಥ ಶೆಟ್ಟಿ
ಪುತ್ತೂರು: ರೈಲು ಸಂಚಾರಕ್ಕೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ. ೩ ರಂದು ಪುತ್ತೂರಿನಲ್ಲಿ ಪುತ್ತೂರು ರಐಲು ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಲಿದ್ದು ಅದಕ್ಕೆ ಮುಂಚಿತವಾಗಿ ಬೇಡಿಕೆಗಳನ್ನು ಕೇಂದ್ರ ಸರಕರ ತಕ್ಷಣ ಈಡೇರಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಆಗ್ರಹಿಸಿದ್ದಾರೆ.
ವಂದೇಭಾರತ್ ರೈಲು ಕೇವಲ ಕಾಸರಗೋಡು ವರೆಗೆ ಮಾತ್ರ ಸಂಚಾರ ಮಾಡುತ್ತಿದ್ದು ಅದನ್ನು ಮಂಗಳೂರಿಗೂ ವಿಸ್ತರಣೆ ಮಾಡಬೇಕು. ವಂದೇಭಾರತ್ ರೈಲು ಮಂಗಳೂರಿಗೆ ಬಂದಲ್ಲಿ ಶಬರಿಮಲೆ ಸೇರಿದಂತೆ ಕೇರಳಕ್ಕೆ ತೀರ್ಥ ಯಾತ್ರೆಗೆ ಹೋಗುವ ಭಕ್ತರಿಗೆ ಪ್ರಯೋಜನವಾಗಲಿದೆ. ಸಂಸದರು ಕೇಂದ್ರ ರೈಲ್ವೇ ಸಚಿವರ ಜೊತೆ ಮಾತುಕತೆ ನಡೆಸಿ ವಂದೇಭಾರತ್ ರೈಲನ್ನು ಮಂಗಳೂರಿಗೂ ವಿಸ್ತರಣೆ ಮಾಡಬೇಕು. ಕೊರೊನಾ ಸಮಯದಲ್ಲಿ ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ರಿಯಾಯಿತಿ ದರದ ಪಾಸ್ ನೀಡಲಾಗುತ್ತಿತ್ತು ಅದನ್ನು ರೈಲ್ವೇ ಇಲಾಖೆ ಸ್ಥಗಿತಗೊಳಿಸಿದ್ದು ಅದನ್ನು ಮತ್ತೆ ಪ್ರಾರಂಭಿಸಬೇಕು ಮತ್ತು ಪುತ್ತೂರಿನಿಂದ ಮಂಗಳೂರಿಗೆ ಇದ್ದ ಪ್ಯಾಸೆಂಜರ್ ರೈಲು ಕೂಡಾ ಸ್ಥಗಿತಗೊಂಡಿದ್ದು ಅದನ್ನು ಮರು ಆರಂಭಿಸಬೇಕು ಎಂದು ಕಾವು ಹೇಮನಾಥ ಶೆಟ್ಟಿ ಆಗ್ರಹಿಸಿದ್ದಾರೆ. ಸಂಸದರು ತಕ್ಷಣವೇ ಈ ವಿಚಾರವನ್ನು ಕೆಂದ್ರ ರೈಲ್ವೇ ಸಚಿವರಿಗೆ ತಿಳಿಸುವ ಮೂಲಕ ಇಲ್ಲಿನ ರೈಲ್ವೇ ಪ್ರಯಾಣಿಕರ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.
Posted by Vidyamaana on 2023-03-26 02:33:04 |
ಪುತ್ತೂರು: ಪುತ್ತೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯ ನಾಮಕರಣ ಸಮಾರಂಭ ಮಾ.26 ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಕರ್ನಾಟಕ ಸರಕಾರದ ಸಾರಿಗೆ ಸಚಿವ ಬಿ.ಶ್ರೀರಾಮುಲು ನಾಮಫಲಕ ಅನಾವರಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಸಚಿವರಾದ ಎಸ್.ಅಂಗಾರ, ಕೋಟಿ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಮುಂತಾದವರು ಭಾಗವಹಿಸಲಿದ್ದಾರೆ.
ತಾಲೂಕಿನ ಪಡುಮಲೆ ಕೋಟಿ-ಚೆನ್ನಯರ ಹುಟ್ಟೂರು ಆಗಿದ್ದು, ಈ ನಿಟ್ಟಿನಲ್ಲಿ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತ್ ಲ್ ಕ್ಷೇತ್ರದ ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಳ ಸಂಚಲನ ಸಮಿತಿ ಕೋಟಿ-ಚೆನ್ನಯರ ಹೆಸರಿಡಬೇಕು ಎಂದು ಶಾಸಕ ಸಂಜೀವ ಮಠಂದೂರು ಹಾಗೂ ನಗರಸಭೆ ಮೂಲಕ ಸರಕಾರವನ್ನು ಒತ್ತಾಯಿಸಿತ್ತು. ಅದರಂತೆ ನಗರಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಸಾರಿಕೆ ಇಲಾಖೆ ಹಾಗೂ ಕೆಎಸ್ ಆರ್ ಟಿಸಿಗೆ ಸಲ್ಲಿಸಲಾಗಿತ್ತು. ಬಳಿಕ ಸರಕಾರದಿಂದ ಮಂಜೂರಾತಿ ಪಡೆಯಲಾಯಿತು.
Posted by Vidyamaana on 2023-01-25 16:11:33 |
ವರದಿ ಫಲಶ್ರುತಿ
ಪುತ್ತೂರು : ಮುಕ್ರಂಪಾಡಿಯಲ್ಲಿ ಮುಖ್ಯರಸ್ತೆ ಬದಿಯಲ್ಲೇ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳಿಗೆ ಕೊನೆಗೂ ಪರಿಹಾರ ನೀಡುವಲ್ಲಿ ಕೆ.ಎಸ್.ಆರ್.ಟಿ.ಸಿ. ಶಕ್ತವಾಗಿದೆ. ಪುತ್ತೂರು ಸಂಚಾರ ಪೊಲೀಸ್ ಠಾಣೆ ಎಸ್.ಐ. ಉದಯರವಿ ಅವರು ವರದಿ ತಕ್ಷಣ ಸ್ಪಂದಿಸಿದ್ದು, ಕೆ.ಎಸ್.ಆರ್.ಟಿ.ಸಿ. ವಿಭಾಗಕ್ಕೆ ಚುರುಕು ಮುಟ್ಟಿಸಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪ್ರತಿದಿನ ಸಂಜೆ ಹೊತ್ತು ಕೆ.ಎಸ್.ಆರ್.ಟಿ.ಸಿ. ಬಸ್ಸುಗಳನ್ನು ಸಾನ್ತೋಮ್ ಗುರುಮಂದಿರದಿಂದ ಡಿಪೋದವರೆಗೆ ಮುಖ್ಯರಸ್ತೆಯ ಬದಿಯಲ್ಲೇ ನಿಲ್ಲಿಸಲಾಗುತ್ತಿತ್ತು. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು, ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಿಂದ ಮುಕ್ರಂಪಾಡಿ ಕೆ.ಎಸ್.ಆರ್.ಟಿ.ಸಿ. ಡಿಪೋದವರೆಗೆ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಸಂಜೆ ಹೊತ್ತು ಕಚೇರಿಯಿಂದ ಮನೆಗೆ ಹೋಗುವವರ ಸಂಖ್ಯೆಯೂ ಅಧಿಕವಾಗಿರುವ ಕಾರಣದಿಂದ, ವಾಹನ ದಟ್ಟಣೆ ಹೆಚ್ಚಿರುತ್ತದೆ. ಆದರೆ ಇದಾವುದನ್ನು ಲೆಕ್ಕಿಸದ ಕೆ.ಎಸ್.ಆರ್.ಟಿ.ಸಿ. ಸ್ಥಳೀಯ ಪೆಟ್ರೋಲ್ ಬಂಕ್ನಿಂದ ಬಸ್ಸುಗಳಿಗೆ ಡೀಸಿಲ್ ಹಾಕಲು ಹಾಗೂ ನಂತರ ಡಿಪೋದ ಒಳ ಹೋಗಲು ಸರತಿ ಸಾಲಿನಲ್ಲಿ ಬಸ್ಸುಗಳನ್ನು ನಿಲ್ಲಿಸುತ್ತಿತ್ತು.
ಮಂಗಳವಾರ ಸಂಜೆ ಹೊತ್ತು ಸಣ್ಣಗೆ ಮಳೆ ಸುರಿಯುತ್ತಿದ್ದ ಹೊತ್ತಿನಲ್ಲಿ, ವಿಪರೀತ ವಾಹನ ದಟ್ಟಣೆ ಉಂಟಾಗಿತ್ತು. ಇದನ್ನು `ವಿದ್ಯಮಾನ’ ವರದಿ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ತಕ್ಷಣ ಸ್ಪಂದಿಸಿದ ಪುತ್ತೂರು ಸಂಚಾರ ಪೊಲೀಸ್ ಠಾಣೆ ಪಿ.ಎಸ್.ಐ. ಉದಯರವಿ ಅವರು ಕೆ.ಎಸ್.ಆರ್.ಟಿ.ಸಿ. ವಿಭಾಗಕ್ಕೆ ತೆರಳಿ, ಅಧಿಕಾರಗಳ ಜೊತೆ ಮಾತುಕತೆ ನಡೆಸಿದ್ದಾರೆ. ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ಸುಗಳನ್ನು ಮುಖ್ಯರಸ್ತೆ ಬದಿ ನಿಲ್ಲಿಸದಂತೆ ತಿಳಿಸಿದ್ದರು.
ಬುಧವಾರ ಸಂಜೆ ಹೊತ್ತು ಕೆ.ಎಸ್.ಆರ್.ಟಿ.ಸಿ.ಯ ಓರ್ವ ಅಧಿಕಾರಿಗೆ ಜವಾಬ್ದಾರಿ ನೀಡಿದ ಕೆ.ಎಸ್.ಆರ್.ಟಿ.ಸಿ. ಹಿರಿಯ ಅಧಿಕಾರಿಗಳು, ಬಸ್ಸು ಗಳನ್ನು ಸಂಜೆ ಹೊತ್ತು ರಸ್ತೆ ಬದಿ ನಿಲ್ಲಿಸದಂತೆ ಸೂಚನೆ ನೀಡಿದ್ದರು. ಅದರಂತೆ ಅಧಿಕಾರಿಯೋರ್ವರು ಸಂಜೆ ಹೊತ್ತು ರಸ್ತೆ ಬದಿ ನಿಂತು ಬಸ್ಸುಗಳನ್ನು ಮುಖ್ಯರಸ್ತೆಯಲ್ಲಿ ನಿಲ್ಲಲು ಬಿಡದೇ, ನೇರವಾಗಿ ಡಿಪೋಗೆ ಕಳುಹಿಸುತ್ತಿದ್ದ ದೃಶ್ಯ ಕಂಡುಬಂದಿತು.
ಉದಯರವಿ ಕಾರ್ಯಕ್ಕೆ ಮೆಚ್ಚುಗೆ
ಸಂಚಾರ ಪೊಲೀಸ್ ಠಾಣೆಯ ಪಿ.ಎಸ್.ಐ. ಆಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ, ಹಲವು ಸಮಯಗಳಿಂದ ಸಾರ್ವಜನಿಕರಿಗೆ ಎದುರಾಗಿದ್ದ ಸಮಸ್ಯೆಯೊಂದಕ್ಕೆ ಪರಿಹಾರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾನೂನು ಸುವ್ಯವಸ್ಥೆ ವಿಭಾಗದಲ್ಲೂ ಉತ್ತಮ ಅಧಿಕಾರಿ ಎಂದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದ್ದ ಉದಯರವಿ ಅವರು, ಇದೀಗ ಸಂಚಾರ ಪೊಲೀಸ್ ಠಾಣೆಯ ಪಿ.ಎಸ್.ಐ. ಆಗಿಯೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Posted by Vidyamaana on 2024-03-24 04:48:37 |
ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ನ 46 ಅಭ್ಯರ್ಥಿಗಳ ನಾಲ್ಕೆನೇ ಪಟ್ಟಿ ಬಿಡುಗಡೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ತಿರುವಳ್ಳೂರಿನಿಂದ ಸ್ಪರ್ಧಿಸಲಿದ್ದಾರೆ.
ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ವಾರ್ ರೂಂ ನಿರ್ವಹಿಸಿ ಕಾಂಗ್ರೆಸ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಸಸಿಕಾಂತ್ ಸೆಂಥಿಲ್ ಗೆ ತಮಿಳುನಾಡಿನ ತಿರುವಳ್ಳೂರಿನಿಂದ ಟಿಕೆಟ್ ನೀಡಲಾಗಿದೆ.ಅಸ್ಸಾಂ 1, ಅಂಡಮಾನ್ ನಿಕೋಬಾರ್ 1, ಚತ್ತೀಸ್ ಗಡ್ 1, ಜಮ್ಮು ಕಾಶ್ಮೀರ 2, ಮಧ್ಯಪ್ರದೇಶ 12, ಮಹಾರಾಷ್ಟ್ರ 4, ಮಣಿಪುರ 2, ಮಿಜೋರಾಂ 1, ರಾಜಸ್ಥಾನ 3, ತಮಿಳುನಾಡು 7, ಉತ್ತರ ಪ್ರದೇಶ 9, ಉತ್ತರಾಖಂಡ 2, ಪಶ್ಚಿಮ ಬಂಗಾಳದ 1 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗಿದೆ.
Posted by Vidyamaana on 2023-09-17 04:30:01 |
ಬಂಟ್ವಾಳ: ತಾಲೂಕಿನ ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ ಶನಿವಾರ ಅಟೋ ರಿಕ್ಷಾದಲ್ಲಿ ಅಕ್ರಮ ಗಾಂಜಾ ಸಾಗಾಟ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಸಹಿತ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಸುಳ್ಯ ಕಸಬಾ ಗ್ರಾಮದ ನಿವಾಸಿ ಎನ್ ಎಂ ಮಹಮ್ಮದ್ ಕಲಂದರ್ ಶಾ (36) ಎಂದು ಹೆಸರಿಸಲಾಗಿದೆ. ಕಲಂದರ್ ಶಾ ಶನಿವಾರ ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ ತನ್ನ ಕೆಎ21 ಬಿ7248 ನೋಂದಣಿ ಸಂಖ್ಯೆಯ ಅಟೋ ರಿಕ್ಷಾದಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ವರ್ತಮಾನದ ಮೇರೆಗೆ ವಿಟ್ಲ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಕಾರ್ಯಾಚರಣೆ ವೇಳೆ ಅಟೋ ರಿಕ್ಷಾ ಸಹಿತ ರಿಕ್ಷಾದಲ್ಲಿದ್ದ 1.35 ಲಕ್ಷ ರೂಪಾಯಿ ಮೌಲ್ಯದ 6.110 ಕೆ ಜಿ ತೂಕದ ಗಾಂಜಾ, ಮೊಬೈಲ್ ಫೋನ್, 900 ರೂಪಾಯಿ ನಗದು ಹಾಗೂ ರಿಕ್ಷಾ ಚಾಲಕನ ಚಾಲನಾ ಪರವಾನಗಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 2,96,900/- ಎಂದು ಅಂದಾಜಿಸಲಾಗಿದೆ. ಆರೋಪಿ ವಿರುದ್ದ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 162/2023 ಕಲಂ 8(ಸಿ),20(ಬಿ) (3) (ಬಿ) ಎನ್ ಡಿ ಪಿ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
Posted by Vidyamaana on 2023-11-10 09:03:44 |
ಪುತ್ತೂರು: ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ನ.13 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿನಡೆಯಲಿರುವ ವಸ್ತ್ರ ವಿತರಣೆ ಹಾಗೂ ಸಹಭೋಜನ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಸೇರುವ ನಿರೀಕ್ಷೆ ಇದ್ದು ಟ್ರಾಫಿಕ್ ವ್ಯವಸ್ಥೆಯ ಬಗ್ಗೆ ಟ್ರಸ್ಟ್ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿಯವರು ಟ್ರಾಫಿಕ್ ಇನ್ಸ್ ಪೆಕ್ಟರ್ ಉದಯ ರವಿ ಅವರ ಜೊತೆ ಸಮಾಲೋಚನೆ ನಡೆಸಿದರು.
ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಇನ್ಸ್ ಪೆಕ್ಟರ್ ರವರು ಕಾರ್ಯಾಧ್ಯಕ್ಷರಿಂದ ಮಾಹಿತಿ ಪಡೆದುಕೊಂಡರು. 50 ಸಾವಿರಕ್ಕೂಮಿಕ್ಕಿ ಜನರು ಕಾರ್ಯಕ್ರಮದಲ್ಲಿಭಾಗವಹಿಸುವ ಕಾರಣ ನಗರದಲ್ಲಿ ಟ್ರಾಫಿಕ್ ಜಾಮ್ ಆಗುವ ಸಂಭವ ಇದ್ದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಸುದೇಶ್ ಶೆಟ್ಟಿಯವರು ಮನವಿ ಮಾಡಿದರು.