Posted by vidyamaana on 2024-06-29 13:06:13 |
ಪುತ್ತೂರು: ಚೆಲ್ಯಡ್ಯ ಮುಳುಗು ಸೇತುವೆ ಮಳೆಗಾಲ ಮುಗಿಯುವವರೆಗೂ ಪೂರ್ಣ ಪ್ರಮಾಣದಲ್ಲಿ ಸಂಚಾರ ಸ್ಥಗಿತಗೊಳ್ಳಲಿದೆ.ಈ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಈ ಬಾರಿಯ ಮಳೆಗೂ ಚೆಲ್ಯಡ್ಕ ಮುಳುಗು ಸೇತುವೆ ನೀರಿನಿಂದ ಮುಳುಗಿ, ಸಂಚಾರ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬದಲಿ ಸಂಚಾರ ಸೂಚಿಸಿ, ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಪುತ್ತೂರಿನಿಂದ ಪಾಣಾಜೆ - ಬೆಟ್ಟಂಪಾಡಿ ಭಾಗಕ್ಕೆ ತೆರಳುವವರು ಸಂಟ್ಯಾರ್ ರಸ್ತೆಯಾಗಿ ತೆರಳಬಹುದು. ದೇವಸ್ಯ ಕಡೆಯಿಂದ ತೆರಳುವವರು ಚೆಲ್ಯಡ್ಕದವರೆಗೆ ಮಾತ್ರ ತೆರಳಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
Posted by Vidyamaana on 2023-04-10 19:31:37 |
ಪುತ್ತೂರು: ಯಾವುದೂ ಅಂದುಕೊಂಡಂತೆ ನಡೆಯುತ್ತಿಲ್ಲ. ಆದ್ದರಿಂದ ಬಿಜೆಪಿ, ಕಾಂಗ್ರೆಸ್ ಪಕ್ಷದೊಳಗಡೆ ಟಿಕೇಟ್ ಪೈಪೋಟಿ ಮುಂದುವರಿದಿದೆ. ವರಿಷ್ಠರಿಗೆ ಕ್ಷೇತ್ರ ಗೆಲ್ಲುವ ಲೆಕ್ಕಾಚಾರವಾದರೆ, ಅಭ್ಯರ್ಥಿಗಳಿಗೆ ಟಿಕೇಟ್ ಪಡೆದುಕೊಳ್ಳುವುದೇ ಪ್ರತಿಷ್ಠೆ ಎಂಬಂತಾಗಿದೆ.
ಪ್ರತಿಸಲ ಚುನಾವಣೆ ಬಂದಾಗಲೂ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವೋ ಗೊಂದಲ. ಆದರೆ ಈ ಬಾರಿ ಆ ಗೊಂದಲ ಬಿಜೆಪಿಗೆ ಶಿಫ್ಟ್!
ಸದ್ಯದ ಬೆಳವಣಿಗೆಗಳನ್ನು ಕಂಡಾಗ, ಬಿಜೆಪಿಯ ಅಭ್ಯರ್ಥಿ ಪಟ್ಟಿಯನ್ನು ಗಮನಿಸಿಕೊಂಡು, ಕಾಂಗ್ರೆಸ್ ಮುಂದೆ ಹೆಜ್ಜೆ ಇಡುವಂತೆ ಕಾಣುತ್ತಿದೆ. ಇದು ಪುತ್ತೂರು ಕ್ಷೇತ್ರಕ್ಕೆ ಹೆಚ್ಚು ಸಮೀಪವರ್ತಿಯಾದ ಹೇಳಿಕೆಯೂ ಹೌದು.
ಸೋಮವಾರ ಸಂಜೆಯ ಹೊತ್ತಿಗೆ ಬಿಜೆಪಿ ಪಟ್ಟಿ ಬಿಡುಗಡೆ ಮಾಡಬೇಕಿತ್ತು. ಆದರೆ ವರಿಷ್ಠರ ನಡುವೆಯೇ ಸ್ಪಷ್ಟ ನಿರ್ಧಾರ ಕೈಗೊಳ್ಳುವುದು ಸಾಧ್ಯವಾಗದ ಹಿನ್ನೆಲೆಯಲ್ಲಿ ಪಟ್ಟಿ ಫೈನಲ್ ಆಗಿಲ್ಲ. ಆದರೆ ಅಂತಿಮ ಪಟ್ಟಿಯಲ್ಲಿ ಪುತ್ತೂರು ಬಿಜೆಪಿ ಅಭ್ಯರ್ಥಿಗಳಾಗಿ ಅರುಣ್ ಕುಮಾರ್ ಪುತ್ತಿಲ ಹಾಗೂ ಕಿಶೋರ್ ಕುಮಾರ್ ಬೊಟ್ಯಾಡಿ ಅವರ ಹೆಸರು ಇದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇದನ್ನು ಆಧರಿಸಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆಯೇ ಎನ್ನುವುದೇ ಕುತೂಹಲ.
ಕಾಂಗ್ರೆಸಿನಲ್ಲಿ ಅಭ್ಯರ್ಥಿಗಳ ಸಂಖ್ಯೆ 14 ಇದ್ದರೂ, ಅಂತಿಮ ಪಟ್ಟಿಯಲ್ಲಿ ಶಕುಂತಳಾ ಶೆಟ್ಟಿ ಹಾಗೂ ಅಶೋಕ್ ಕುಮಾರ್ ರೈ ಅವರ ಹೆಸರು ಇದೆ. ಇವರಿಬ್ಬರ ಪೈಕಿ ಒಬ್ಬರ ಹೆಸರು ಅಂತಿಮಗೊಳ್ಳುವುದು ಬಹುತೇಕ ಪಕ್ಕಾ ಎನ್ನುವುದೇ ಸದ್ಯದ ಮಾಹಿತಿ.
ಬಿಜೆಪಿಗೆ ಎದುರಾದ ವಿಘ್ನ:
ಚುನಾವಣಾ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿ ಇರುವುದರಿಂದ, ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮ ಮಾಡಲು ಹಿಂದೇಟು ಹಾಕುತ್ತಿವೆಯೇ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಪುತ್ತೂರಿನ ಮಟ್ಟಿಗೆ ಹೇಳುವುದಾದರೆ, ಇತ್ತೀಚೆಗಷ್ಟೇ ವೈರಲ್ ಆಗಿರುವ ಫೊಟೋ, ಅಭ್ಯರ್ಥಿ ಅಂತಿಮಕ್ಕೆ ಬಿಸಿ ತುಪ್ಪದಂತಾಗಿದೆ ಎಂದೇ ಹೇಳಬಹುದು. ಅಭಿವೃದ್ದಿಯ ಹರಿಕಾರ ಎಂದೇ ಬಣ್ಣಿಸಿದರೂ, ಕೊನೆ ಕ್ಷಣದಲ್ಲಿ ಎದುರಾದ ವಿಘ್ನವೊಂದು ಹಾಲಿ ಶಾಸಕರ ರಾಜಕೀಯ ಜೀವನಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ದಟ್ಟವಾಗಿದೆ.
ಬಿಜೆಪಿ ಟಿಕೇಟ್ ಸಂಜೀವ ಮಠಂದೂರು ಕೈತಪ್ಪುವುದು ಬಹುತೇಕ ಸ್ಪಷ್ಟ. ಆದ್ದರಿಂದ ಆ ಸ್ಥಾನಕ್ಕೆ ಅರುಣ್ ಕುಮಾರ್ ಪುತ್ತಿಲ ಹಾಗೂ ಕಿಶೋರ್ ಕುಮಾರ್ ಬೊಟ್ಯಾಡಿ ಹೆಸರು ಪಟ್ಟಿಯಲ್ಲಿ ಕಾಣಸಿಕ್ಕಿದೆ ಎನ್ನುತ್ತವೆ ಮೂಲಗಳು. ಇವರಿಬ್ಬರಲ್ಲಿ ಅಂತಿಮ ಯಾರು ಎನ್ನುವುದೇ ಯಕ್ಷಪ್ರಶ್ನೆ.
ಕಾಂಗ್ರೆಸ್ ಲೆಕ್ಕಾಚಾರ:
ಪುತ್ತೂರಿನಲ್ಲಿ ಕಾಂಗ್ರೆಸ್ ನಡೆ ಇನ್ನೂ ನಿರ್ಧಾರವಾದಂತಿಲ್ಲ. ಬಿಜೆಪಿಯ ಅಭ್ಯರ್ಥಿಯನ್ನು ಆಧರಿಸಿ, ಕಾಂಗ್ರೆಸ್ ಪಟ್ಟಿ ಅಂತಿಮಗೊಳಿಸುವ ಸಾಧ್ಯತೆಯೂ ಇದೆ. ಸಂಜೀವ ಮಠಂದೂರು ಅಭ್ಯರ್ಥಿಯಾದರೆ ಶಕುಂತಳಾ ಶೆಟ್ಟಿ ಅವರನ್ನೇ ಅಭ್ಯರ್ಥಿಯಾಗಿಸುವ ಸಾಧ್ಯತೆ ಇದೆ. ಕಾರಣ, ಮಹಿಳಾ ಹೋರಾಟಗಾರ್ತಿಯಾದ ಶಕುಂತಳಾ ಶೆಟ್ಟಿ, ಫೊಟೋ ವೈರಲ್ ಪ್ರಕರಣವನ್ನು ಸಮರ್ಥವಾಗಿ ಪಕ್ಷಕ್ಕೆ ಲಾಭವಾಗುವಂತೆ ತಿರುಗಿಸಬಲ್ಲರು. ಉಳಿದಂತೆ ಪುತ್ತಿಲ ಅಥವಾ ಬೊಟ್ಯಾಡಿ ಅಭ್ಯರ್ಥಿಯಾದರೆ, ಯಂಗ್ ಕ್ಯಾಂಡಿಡೇಟ್ ಅಶೋಕ್ ಕುಮಾರ್ ರೈ ಅಭ್ಯರ್ಥಿಯಾಗಲೂ ಬಹುದು.
ಕಣಕ್ಕೆ ಕಂಕಣ ಯಾವಾಗ?!:
ಒಟ್ಟಿನಲ್ಲಿ ಅಭ್ಯರ್ಥಿ ಆಯ್ಕೆಯ ಕಸರತ್ತು ಮುಗಿಯದೇ, ಚುನಾವಣಾ ಕಣ ರಂಗು ತುಂಬಿಕೊಳ್ಳುತ್ತಿಲ್ಲ. ಕೆಲ ದಿನಗಳ ಹಿಂದಿನವರೆಗೆ ನಡೆಯುತ್ತಿದ್ದ ಪ್ರಚಾರ ಕಾರ್ಯಗಳು, ಇದೀಗ ಮೆಲ್ಲನೆ ವೇಗ ಕುಂಠಿತಗೊಳ್ಳುವಂತೆ ಮಾಡಿದೆ. ಹಾಗೇ ನೋಡಿದರೆ, ಚುನಾವಣೆಯ ದಿನ ದೌಡಾಯಿಸುತ್ತಾ ಬರುತ್ತಿದೆ, ಬೆರಳೆಣಿಕೆಯ ದಿನಗಳಷ್ಟೇ ಬಾಕಿ. ಅಭ್ಯರ್ಥಿಯ ಗೊಂದಲದಲ್ಲೇ ಇರುವ ಕಾರ್ಯಕರ್ತರು, ಮುಖಂಡರು ಪ್ರಚಾರದೆಡೆಗೆ ಗಮನ ನೀಡುವುದು ಯಾವಾಗ? ರಂಗು ತುಂಬಿಕೊಳ್ಳುವುದು ಯಾವಾಗ? ಪಕ್ಷದ ಪರವಾಗಿ ಕಂಕಣ ಕಟ್ಟಿಕೊಳ್ಳುವವರು ಯಾರು?
Posted by Vidyamaana on 2024-02-10 09:59:13 |
ಬಂಟ್ವಾಳ : ಕಲ್ಲಡ್ಕ ಮ್ಯೂಸಿಯಂ ವತಿಯಿಂದ ಜಪಾನಿನಲ್ಲಿ ನಡೆಯಲಿರುವ 17 ರ ವಯೋಮಾನದ ಅಂತಾರಾಷ್ಟ್ರೀಯ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಕ್ರೀಡಾ ಪಟುಗಳಿಗೆ ಸನ್ಮಾನ ಕಾರ್ಯಕ್ರಮ ಕಲ್ಲಡ್ಕ ಮ್ಯೂಸಿಯಂ ಆವರಣದಲ್ಲಿ ನಡೆಯಿತು.
2023-24 ನೇ ಸಾಲಿನಲ್ಲಿ ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆದ ಹ್ಯಾಂಡ್ ಬಾಲ್ ಸ್ಪರ್ಧೆಗಳಲ್ಲಿ ವಿಜೇತರಾಗಿ ಇದೀಗ ಜಪಾನಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಬಂಟ್ವಾಳ ತಾಲೂಕಿನ ಅಮ್ಟೂರು ದೇವ ಮಾತಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಮೊಹಮ್ಮದ್ ಅಝೀಂ ಬಿ., ಮೊಹಮ್ಮದ್ ಮಸ್ಕೂರ್, ಸೃಜನ್, ಲಕ್ಷತ್ ಎಚ್, ಮೊಹಮ್ಮದ್ ಫಾಝ್ ಹಾಗೂ ಇವರಿಗೆ ತರಭೇತು ನೀಡಿದ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸಮಾರಂಭದಲ್ಲಿ ಮುಖ್ಯ ಭಾಷಣಗೈದ ಬಿ.ಮೂಡ ಸರಕಾರಿ ಪ.ಪೂ.ಕಾಲೇಜು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಮಾತನಾಡಿ ಯಾವುದೇ ಸಾಧನೆ ಮಾಡಿದ ಸಾಧಕನಿಗೆ ತನ್ನ ಊರಿನಲ್ಲಿ ಸಿಗುವ ಸನ್ಮಾನ ಆತನಿಗೆ ದೊರಕುವ ಬಹು ದೊಡ್ಡ ಪಾರಿತೋಷಕವಾಗಿದೆ, ಪ್ರತಿಯೊಂದು ಮಕ್ಕಳಲ್ಲೂ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಪೋಷಕರು ಹಾಗೂ ಶಿಕ್ಷಕರಿಂದ ಆಗಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ಮಾತನಾಡಿ ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ವಿಶೇಷ ವಸ್ತು ಸಂಗ್ರಹದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮೂರಿನ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಕಲ್ಲಡ್ಕ ಮ್ಯೂಸಿಯಂ ನ ಸಂಸ್ಥಾಪಕ ಹಾಜಿ ಮುಹಮ್ಮದ್ ಯಾಸಿರ್ ಅವರ ಸಾಧನೆಯ ಬಗ್ಗೆ ಕೊಂಡಾಡಿದರು.
ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಉಸ್ಮಾನ್ ದಾರಿಮಿ, ಕರಿಂಗಾನ ಚರ್ಚ್ ನ ಧರ್ಮಗುರು ರೆ.ಫಾ. ಕಿರಣ್ ಮ್ಯಾಕ್ಸಿಂ ಪಿಂಟೋ, ಬೋಳಂಗಡಿ ಹವ್ವಾ ಜುಮಾ ಮಸೀದಿ ಖತೀಬ್ ಯಹ್ಯಾ ತಂಙಳ್, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಪದ್ಮನಾಭ ರೈ, ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಮಾತನಾಡಿ ಶುಭ ಹಾರೈಸಿದರು.
ಕಲ್ಲಡ್ಕ ಕೆ.ಟಿ.ಹೋಟೇಲ್ ಮಾಲಕ ರಾಜೇಂದ್ರ ಹೊಳ್ಳ, ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯ ಯೂಸುಫ್ ಹೈದರ್, ಹಜಾಜ್ ಸಮೂಹ ಸಂಸ್ಥೆಯ ಇಮ್ತಿಯಾಝ್ ಗೋಳ್ತಮಜಲು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಝಕರಿಯಾ ಕಲ್ಲಡ್ಕ, ಕಲ್ಲಡ್ಕದ ತ್ರಿವರ್ಣ ಸಂಗಮ ಹಾಗೂ ಝಮಾನ್ ಬಾಯ್ಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಶೆಟ್ಟಿ ಹ್ಯಾಂಡ್ ಬಾಲ್ ಕ್ರೀಡೆ ಹಾಗೂ ಕ್ರೀಡಾಪಟುಗಳ ಸಾಧನೆಯ ಬಗ್ಗೆ ವಿವರಿಸಿದರು. ಕಲ್ಲಡ್ಕ ಮ್ಯೂಸಿಯಂ ಸಂಸ್ಥಾಪಕ ಯಾಸಿರ್ ಕಲ್ಲಡ್ಕ ಸ್ವಾಗತಿಸಿ, ವಂದಿಸಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.
Posted by Vidyamaana on 2023-12-02 08:23:14 |
ಬೆಂಗಳೂರು : ಮೈಸೂರು ಜಿಲ್ಲೆಯಲ್ಲಿ ನಡೆದಿದ್ದಂತ ಭ್ರೂಣ ಹತ್ಯೆ ಪ್ರಕರಣ ಸಂಬಂಧ, ಇಬ್ಬರು ಅಧಿಕಾರಿಗಳ ತಲೆದಂಡವಾಗಿದೆ. ಮೈಸೂರು ಜಿಲ್ಲೆಯ ಈ ಹಿಂದಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ರಂದೀಪ್ ಅವರು ಆದೇಶ ಹೊರಡಿಸಿದ್ದು, ಮೈಸೂರು ಜಿಲ್ಲೆಯ ಹಿಂದಿನ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವಿ.ಪಿ ಹಾಗೂ ಹಾಲಿ ಮೈಸೂರು ತಾಲೂಕಿನ ತಾಲೂಕು ಆರೋಗ್ಯ ಅಧಿಕಾರಿ ಡಾ.ರಾಜೇಶ್ವರಿ.ಎಸ್ ಅವರುಗಳ ವಿರುದ್ಧ ಕರ್ತವ್ಯಲೋಪ ಆರೋಪದ ಬಗ್ಗೆ ಶಿಸ್ತುಕ್ರಮ ಬಾಕಿ ಇರಿಸಿ, ಈ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾತನುಗೊಳಿಸಿ ಆದೇಶಿಸಿದ್ದಾರೆ.
ಇನ್ನೂ ಡಾ.ರವಿ. ಪಿ ಹಾಗೂ ಡಾ.ರಾಜೇಶ್ವರಿ.ಪಿ ಇವರುಗಳಿಗೆ ಅಮಾನತ್ತಿನ ಅವಧಿಯಲ್ಲಿ ಜೀವನಾಂಶ ಭತ್ಯೆಯನ್ನು ಪಡೆಯುವ ಸಲುವಾಗಿ ಲೀನ್ ಅನ್ನು ರಾಮನಗ ಜಿಲ್ಲಾ ಆಸ್ಪತ್ರೆ ಇಲ್ಲಿನ ಖಾಲಿ ಇರುವ ಹುದ್ದೆಗೆ ಸ್ಥಳಾಂತರಿಸಲಾಗಿದೆ ಎಂದು ಆದೇಶದಲ್ಲಿ ಹೇಳಿದ್ದಾರೆ. ಈ ಮೂಲಕ ಭ್ರೂಣಹತ್ಯೆ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳ ತಲೆದಂಡವಾಗಿದೆ.
Posted by Vidyamaana on 2024-02-01 20:44:55 |
ಬೆಳ್ತಂಗಡಿ : ಕಾರು ಮತ್ತು ಬೈಕ್ ಅಪಘಾತದಲ್ಲಿ ಬೈಕ್ ಸವಾರ ಬೆಳ್ತಂಗಡಿಯ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ಬಂಟ್ವಾಳ ತಾಲೂಕಿನ ಮಧ್ವದಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ ಅಯ್ಯಪ್ಪ ಸ್ವಾಮಿ ಮಂದಿರದ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ನಡೆದಿದ್ದು. ಇದರಲ್ಲಿ ಬೈಕ್ ಸವಾರ ಬೆಳ್ತಂಗಡಿಯ ರಮೇಶ್ ಶೆಟ್ಟಿ ಮತ್ತು ಪ್ರೇಮ ದಂಪತಿಯ ಎರಡನೇ ಪುತ್ರ ಪ್ರದೀಶ್ ಶೆಟ್ಟಿ(27) ಎಂಬಾತ ಸಾವನ್ನಪ್ಪಿದ ಯುವಕ.
ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ಬೈಕ್ಕಿನಲ್ಲಿ ಬರುತಿದ್ದ ವೇಳೆ ಮಂಗಳೂರು ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ ಕಾವಳಕಟ್ಟೆ ಎಂಬಲ್ಲಿ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಪ್ರದೀಶ್ ಶೆಟ್ಟಿ ಬೆಳ್ತಂಗಡಿಯ ಮುತ್ತೂಟ್ಟು ಫೈನಾನ್ಸ್ ಸಂಸ್ಥೆಯೊಂದರಲ್ಲಿ ನೌಕರಿಯಲ್ಲಿದ್ದು. ಸಂಸ್ಥೆಯ ಕೆಲಸಕ್ಕಾಗಿ ಮಂಗಳೂರಿಗೆ ತೆರಳಿದ್ದ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Posted by Vidyamaana on 2023-10-08 13:16:17 |
ದಾವಣಗೆರೆ:ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ 17 ವರ್ಷದ ಬಾಲಕಿಯೊಬ್ಬಳು ತನ್ನ ಖಾಸಗಿ ವಿಡಿಯೋ ಮೂಲಕ ಇಬ್ಬರು ಹುಡುಗರಿಂದ ಬ್ಲಾಕ್ ಮೇಲ್ ಮಾಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಪಿಯುಸಿ ಓದುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾಳೆ.
ಅಸಿಡಿಟಿಯ ಎದೆ ಉರಿಯನ್ನು ಮತ್ತು ಎದೆ ನೋವಿನ ಉರಿಯನ್ನು ಐಡೆಂಟಿಫೈ ಮಾಡೋದು ತುಂಬಾ ಸುಲಭ: ಡಾ. ಜೆ ಸಿ ಅಡಿಗ
ಆಗಸ್ಟ್ 28 ರಂದು ಈ ಘಟನೆ ನಡೆದಿದ್ದು, ಬುಧವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಆಕೆ ಕಾಲೇಜಿಗೆ ಹೋದಾಗ ಆರೋಪಿಗಳಾದ ಇಬ್ಬರು ಹುಡುಗರು ಆಕೆಯೊಂದಿಗೆ ಸ್ನೇಹ ಬೆಳೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಆಕೆಗೆ ಮಾದಕ ದ್ರವ್ಯ ಬೆರೆಸಿದ ಖಾದ್ಯವನ್ನು ನೀಡಿದ್ದು, ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಆಕೆಯ ಖಾಸಗಿ ವಿಡಿಯೋಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಬಳಿಕ ವಿಡಿಯೋ ವೈರಲ್ ಮಾಡುವುದಾಗಿ ಆಕೆಗೆ ನಿರಂತರವಾಗಿ ಬ್ಲಾಕ್ಮೇಲ್ ಮಾಡಿದ್ದರು. ಬಾಲಕಿಯ ಪೋಷಕರು ಪೊಲೀಸರಿಗೂ ದೂರು ನೀಡಿದ್ದರು. ಆರೋಪಿಗಳು ಆಕೆಯ ಮನೆಯ ಮುಂದೆ ಬಂದು ಸಂತ್ರಸ್ತೆಯನ್ನು ತಮ್ಮೊಂದಿಗೆ ಬರುವಂತೆ ಕೇಳುತ್ತಿದ್ದರು. ಚಿತ್ರಹಿಂಸೆ ತಾಳಲಾರದೆ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸಾವಿಗೂ ಮುನ್ನ ಬಾಲಕಿ ಆಸ್ಪತ್ರೆಯಿಂದ ವಿಡಿಯೋ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಳು,ಅದರಲ್ಲಿ ತನಗಿಂತ ಬೇರೆ ಯಾವ ಹುಡುಗಿಗೂ ಇಂತಹ ಅನ್ಯಾಯ ಆಗಬಾರದು ಎಂದು ಹೇಳಿದ್ದಾಳೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಮನವಿ ಮಾಡಿದರು. ಎಲ್ಲಾ ದುಷ್ಟ ಮನಸ್ಸಿನ ವ್ಯಕ್ತಿಗಳಿಗೆ ಇದೊಂದು ಪಾಠವಾಗಲಿ ಎಂದು ವಿಡಿಯೋದಲ್ಲಿ ಬಾಲಕಿ ಹೇಳಿದ್ದಾಳೆ. ನ್ಯಾಯಕ್ಕಾಗಿ ಬಾಲಕಿ ಕಣ್ಣೀರು ಸುರಿಸುತ್ತಾ ಬೇಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ. ಜಗಳೂರು ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Posted by Vidyamaana on 2023-10-15 20:54:36 |
ಬೆಂಗಳೂರು: ಕರ್ನಾಟಕ ರಾಜ್ಯ ಹೈಕೋರ್ಟ್ಗೆ (Karnataka High court) ಅಕ್ಟೋಬರ್ 16ರಿಂದ 21ರವರೆಗೆ ದಸರಾ ರಜೆ (Dasara Holiday) ಘೋಷಣೆಯಾಗಿದೆ. ಈ ಸಂದರ್ಭದಲ್ಲಿ ಎದುರಾಗುವ ತುರ್ತು ಅರ್ಜಿಗಳ ವಿಚಾರಣೆಗಾಗಿ ರಜಾಕಾಲೀನ ಪೀಠಗಳು (Holiday Benches) ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠದಲ್ಲಿ ಕರ್ತವ್ಯ ನಿರ್ವಹಸಲಿವೆ ಎಂದು ಪ್ರಕಟಣೆ ತಿಳಿಸಿದೆ.
ನ್ಯಾಯಿಕ ರಿಜಿಸ್ಟ್ರಾರ್ ಎಂ ಚಂದ್ರಶೇಖರ್ ರೆಡ್ಡಿ ಅವರು ಈ ವಿಷಯವನ್ನು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಅದರ ಜತೆಗೆ ರಜಾಕಾಲೀನ ಪೀಠಗಳ ವಿವರವನ್ನೂ ಒದಗಿಸಿದ್ದಾರೆ.
ಬೆಂಗಳೂರು ಪೀಠದಲ್ಲಿ ಯಾರು ಇರುತ್ತಾರೆ?
ಬೆಂಗಳೂರು ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್ ಪ್ರಸಾದ್ ಮತ್ತು ಟಿ ವೆಂಕಟೇಶ್ ನಾಯ್ಕ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಲಿದ್ದು, ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇ ಗೌಡ ಅವರ ನೇತೃತ್ವದ ಏಕಸದಸ್ಯ ಪೀಠಗಳು ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿವೆ.
ಧಾರವಾಡ ಪೀಠದ ರಜಾ ಕಾಲೀನ ನ್ಯಾಯಮೂರ್ತಿಗಳು ಇವರು:
ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ಕೆ.ಎಸ್ ಹೇಮಲೇಖಾ ಮತ್ತು ಅನಿಲ್ ಬಿ. ಕಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ಮೊದಲಿಗೆ ವಿಭಾಗೀಯ ಪೀಠದ ಪ್ರಕರಣಗಳನ್ನು ವಿಚಾರಣೆ ನಡೆಸಲಿದೆ. ಆನಂತರ ಉಭಯ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ಏಕಸದಸ್ಯ ಪೀಠದಲ್ಲಿ ಕುಳಿತು ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.
ಕಲಬುರ್ಗಿ ಪೀಠದಲ್ಲಿ ಯಾರಿರುತ್ತಾರೆ?
ಕಲಬುರ್ಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಚ್ ಟಿ ನರೇಂದ್ರ ಪ್ರಸಾದ್ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠವು ಮೊದಲಿಗೆ ವಿಭಾಗೀಯ ಪೀಠದ ಪ್ರಕರಣಗಳ ವಿಚಾರಣೆ ನಡೆಸಲಿದ್ದು, ಆನಂತರ ಏಕಸದಸ್ಯ ಪೀಠಗಳು ಪ್ರತ್ಯೇಕವಾಗಿ ಪ್ರಕರಣಗಳ ವಿಚಾರಣೆ ನಡೆಸಲಿದೆ.
ಯಾವ ಯಾವ ಪ್ರಕರಣಗಳ ವಿಚಾರಣೆ ನಡೆಯುತ್ತದೆ?
ತುರ್ತಾಗಿ ಆಗಬೇಕಾದ ಮಧ್ಯಂತರ ತಡೆಯಾಜ್ಞೆ, ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶದಂಥ ಪ್ರಕರಣಗಳನ್ನು ಮಾತ್ರ ವಿಚಾರಣೆಗೆ ಪರಿಗಣಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೇಲಿನ ಪ್ರಕರಣಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ರಜಾಕಾಲೀನ ಪೀಠದ ವಿಚಾರಣೆಯ ದಿನ ಹೊರತುಪಡಿಸಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ ಸಲ್ಲಿಸಬಹುದಾಗಿದೆ. ರಜಾಕಾಲೀನ ಪೀಠದ ವಿಚಾರಣೆಯ ದಿನದಂದು ಅರ್ಜಿ ಸಲ್ಲಿಕೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 3.30 ರವರೆಗೆ ಅವಕಾಶ ಇರಲಿದೆ. ಇದರೊಂದಿಗೆ ಇ-ಫೈಲಿಂಗ್ ಪೋರ್ಟಲ್ ಮೂಲಕ ಇ-ಫೈಲಿಂಗ್ ಮಾಡಬಹುದಾಗಿದೆ ಎಂದು ರಿಜಿಸ್ಟ್ರಾರ್ ಮತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.